Monday, August 6, 2018

ಸಹನೆಯ ಮೇಲೆ ಒಲವಿನ ಸವಾರಿ

ಸಹನೆಯ ಮೇಲೆ ಒಲವಿನ ಸವಾರಿ

ಹೀಗೊಂದು ಸವಾಲು ನನಗೆ ಅನಿರೀಕ್ಷಿತ ಅಲ್ಲ. ಸಹನೆಗಿರುವ ಬೆಲೆಯ ಬೆಲ್ಲ ಸವಿಯುತ್ತಲೇ ಕಹಿ ನುಂಗಿದ್ದೇನೆ. ಮುಂದೆಯೂ ನುಂಗುತ್ತೇನೆ.

ನಮ್ಮಿಬ್ಬರ ಏಕಾಂತದಲಿ ಆರಾಧಿಸುವ ಮಿಲನಮಹೋತ್ಸವ ಊಹಾತೀತ. ಅನುಪಮ‌, ಅವರ್ಣನೀಯ. ಕೇವಲ ಅನುಭವಿಸಬೇಕಷ್ಟೇ! ಬೇರೆ ಯಾರೂ ಅನುಭವಿಸಿರಲಾರರೆಂಬ ಭಾವದಬ್ಬರ.

*ಸಮಯ-ವ್ಯಕ್ತಿ-ಸಾಮಿಪ್ಯ* ಸಿಕ್ಕಾಗ ಅನುಭವಿಸಬೇಕು. ನಂತರ ವಿಲಿ ವಿಲಿ ಒದ್ದಾಡಿದರೂ ತಿರುಗಿ ಬರಲಾಗದು. ಆದರೆ ನಾವು ಮುಠ್ಠಾಳರು, ಸಿಕ್ಕ ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಅವಿವೇಕಿಗಳು.
ನಮ್ಮ ಬದುಕಿನಿಂದ ತುಂಬ ಬೇಕಾದವರು ದೂರಾದಾಗ ಹಲುಬುತ್ತೇವೆ.

ಹಾಗೆ ಹಲುಬುವ ಸ್ಥಿತಿ ಬರದ ಹಾಗೆ ವರ್ತಮಾನವನ್ನು ಅರ್ಥಪೂರ್ಣವಾಗಿ ತೀವ್ರತೆಯಿಂದ ಅನುಭವಿಸುವ ಪರಿಜ್ಞಾನ ಅನಿವಾರ್ಯ.

ಸಮಯ ತುಂಬಾ ಕಡಿಮೆ ಇರುವಾಗ, ಮುಪ್ಪೆಂಬ ಮಾಯೆ, ಸಾವೆಂಬ ಸಾಗರ ಅಪ್ಪಳಿಸುವ ಮುನ್ನ ಎಚ್ಚರಗೊಳಲೇಬೇಕು.

*ಪರಸ್ಪರ ಬಿಗಿದಪ್ಪಿ, ಅಂಟಿಕೊಂಡು, ಮೈಮನಗಳ ಬಯಲಾಗಿಸಿ, ಬಯಲಲಿ ಬಯಲಾಗಿ ಗೊತ್ತಿರುವ ನಮಗೆ ಸಜ್ಜನಿಕೆ ಹಾಗೂ ಲಜ್ಜೆ ಅಸಹ್ಯವಾಗಿ ಕಾಣುತ್ತೆ. ಮೈಮೇಲೆ ಬಟ್ಟೆ ಇದ್ದಾಗ ನಾವು ನಿಜ ಅನಾಗರಿಕರು*.

ಬಟ್ಟೆ ಬಯಲಾದ ಮೇಲೆಯೇ ನಿಜ ನಾಗಿರಿಕತೆ ನಮ್ಮದು.
ಭಾವ ಪ್ರಪಂಚದ ವಾರಸುದಾರರಿಗೆ ವಾಸ್ತವದ ಹಂಗು ಹರಿದು ಹೋಗಿರುತ್ತೆ.

ಹೀಗೆ ಸದಾ ಅಂಟಿಕೊಂಡಿರುವ ನಮಗೆ ಮೈತುಂಬ ಲಜ್ಜೆ, ಸೌಜನ್ಯ ,ಶಿಷ್ಟಾಚಾರ ಇಟ್ಟುಕೊಂಡು ದೂರವಿರಬಹುದಾದ ಸಂದರ್ಭ ಬರಬಹುದೆನಿಸಿರಲಿಲ್ಲ.

ಒಮ್ಮೊಮ್ಮೆ ಅಂತಹ ವಾಸ್ತವದ ಸಾರ್ವಜನಿಕ ಸಭ್ಯತೆಗೆ ಶರಣಾಗಬೇಕು, ಇಲ್ಲದಿರೆ ನೋಡಿದವರು ಜೀವ ಬಿಟ್ಟಾರು, ಇಲ್ಲವೇ ಜೀವ ತೆಗೆದುಕೊಂಡಾರೂ !

ಅದನ್ನು ನಾನಂತು ಒಲವ ಮೇಲೆ ಭಾರ ಹಾಕಿ ಸಂಪೂರ್ಣ ಸಹಿಸಿಕೊಂಡು, ನನ್ನೊಳಗಿರುವ ತೀವ್ರತೆಯ ದಹಿಸಿಕೊಂಡೆ. ನಾಗರಿಕ ಸಮಾಜದಲ್ಲಿ ಬದುಕುವ ನಾವು, ಒಮ್ಮೊಮ್ಮೆ ಹೀಗೆಯೇ ಬದುಕಬೇಕು.

*ನಮಗೆ ಗೊತ್ತು ಇಲ್ಲಿ ನಾವು ಸಮಯ-ವ್ಯಕ್ತಿ-ಸಾಮಿಪ್ಯ ಎಂದು ಹಲುಬಬಾರದು*.

ಈಗ ನಾವು ಈ ಅಗ್ನಿ ಪರೀಕ್ಷೆಯಲೂ ಗೆದ್ದು ಬಿಟ್ಟಿದ್ದೇವೆ. ಮುಂದೆಯೂ ಇಂತಹ ಸಾವಿರಾರು ಪರೀಕ್ಷೆಗಳಲಿ ಗೆಲ್ಲಬೇಕು.
ನಮ್ಮ ಮುಂದೆ ಸಾವಿರದ ಸವಾಲುಗಳು, ಆತಂಕಗಳು. ಆದರೆ ನಾವು ಅವುಗಳನ್ನೆಲ್ಲ ಮೆಟ್ಟಿ ಹೊಸ ಇತಿಹಾಸ ಬರೆಯಬೇಕು.

ಪ್ರೀತಿಯೆಂಬ ಅಮೃತ ವಿಷವಾಗಿ ಕೊಂದು ಹಾಕಬಾರದು. ನಾವೂ ಸಾಯಲೂಬಾರದು. ಸಾಯುವ ಸ್ಥಿತಿ ತಲುಪಲೂ ಬಾರದು.

ಹಳೆಯ ಹಂಗು ಹರಿದು ಹೊಸ ಹಾದಿ ಹಿಡಿದಾಗ ಮತ್ತೆ ಹಳೆಯ ಹಾದಿಯೇ ಗತಿ ಎಂಬ ಹಳೇ ಗಾದೆ ಮಾತು ಸಹ್ಯವಲ್ಲ.

ಕೆಲವು ಶಕ್ತಿಗಳು ನಮಗರಿವಿಲ್ಲದಂತೆ ಆವರಿಸಿಕೊಂಡು ಜೀವ ಹಿಂಡುತ್ತವೆ. ಆದರೆ ರೋಸಿ ಹೋಗದಂತೆ ಭಾವ ತೀವ್ರತೆಯ ಎದೆಯ ಗೂಡಲಿ ಕಾಪಿಟ್ಟುಕೊಳ್ಳಲೇಬೇಕು‌. ನಾವೂ ಹಾಗೆ *ಇಟ್ಟು-ಕೊಳ್ಳೋಣ*.

    *ಸಿದ್ದು ಯಾಪಲಪರವಿ*

No comments:

Post a Comment