Wednesday, March 31, 2010

ವಿಕಸನ ಮಾಲಿಕೆ







ಗೆಳೆಯರು ನನ್ನ ಭಾವನೆಗಳಿಗೆ ಸ್ಪಂದಿಸಿ ವ್ಯಕ್ತಿತ್ವ ವಿಕಸನ ಮಾಲಿಕೆಗೆ ಪ್ರಶ್ನೆ ಕಳಿಸಿದ್ದಾರೆ.
ವ್ಯಕ್ತಿಯ ದೌರ್ಬಲ್ಯ ಹಾಗೂ ಶಕ್ತಿಯನ್ನು ತಿಳಿಯುವ ಬಗೆ ಹೇಗೆ? ಯಾವುದನ್ನು ನಾವು ದೌರ್ಬಲ್ಯ ಎಂದು ಕರೆಯಬಹುದು?
* ಈ ಪ್ರಶ್ನೆ ನನ್ನನ್ನು ಕಾಡುತ್ತಿದ್ದ ಕಾರಣದಿಂದಲೇ ಬುದ್ಧಿ-ಭಾವಗಳ ಭ್ರಮೆಯಲ್ಲಿ ತೇಲಾಡುತ್ತಿದ್ದೆ. ಒಳಗೊಳಗೆ ಅನೇಕ ಗೊಂದಲಗಳಿದ್ದವು. ನನ್ನಲ್ಲಿಯ ಗೊಂದಲಗಳಿಗೆ ಪರಿಹಾರ ಕಂಡುಹಿಯಲು ಹೆಣಗಾಡಿ ಈಗ ಭಾಗಶ: ಯಶಕಂಡಿದ್ದೇನೆ. ಓದು, ಚರ್ಚೆಯ ಮೂಲಕ ಪರಿಹಾರ ನಿಮಗೂ ಸಿಗುತ್ತದೆ.
ಮನುಷ್ಯನ ದೌರ್ಬಲ್ಯವೆಂದರೆ ಮನದ ಮುಂದಿನ ಆಸೆ ಎನ್ನುತ್ತಾರೆ. ತಾತ್ವಿಕವಾಗಿ ಹೆಣ್ಣಿಗೆ ಗಂಡಿನ, ಗಂಡಿಗೆ ಹೆಣ್ಣಿನ, ಅಂದರೆ ಕಾಮ, ಹಣ - ಬಂಗಾರ ಹಾಗೂ ಆಸ್ತಿ ಭೂಮಿಯ ಮೇಲಿನ ವ್ಯಾಮೋಹವೇ ಮನದ ದೌರ್ಬಲ್ಯ ಎಂದು ಗಂಭೀರವಾಗಿ ಆರೋಪಿಸುತ್ತಾರೆ. ಅಂದರೆ ಹೊನ್ನು,ಮಣ್ಣು, ಹೆಣ್ಣು ಎಂದು ಪುರಾತನರು ವಿಶ್ಲೇಶಿಸಿದ್ದಾರೆ. ಆದರೆ ಮನುಷ್ಯ ಇವುಗಳಿಲ್ಲದೆ ಬದುಕುವುದು ಅಸಾಧ್ಯ. ಇವುಗಳನ್ನೆಲ್ಲ ನಿರಾಕರಿಸಿದವ ಮನುಷ್ಯನಾಗದೇ ಸಂತನಾಗುತ್ತಾನೆ.
ನಾವೆಲ್ಲ ಸಂತರಲ್ಲದ ಕಾರಣಕ್ಕೆ ಈ ಮೂರು ಶಕ್ತಿಗಳಲ್ಲಿ ನಾನು ಹೆಚ್ಚು ಯಾವುದಕ್ಕೆ ಮನಸೋಲುತ್ತೇನೆ, ಯಾಕೆ ಮನಸೋಲುತ್ತೇನೆ ಎಂಬುದನ್ನು ನಾವೇ ಪ್ರಾಮಾಣಿಕವಾಗಿ ವಿಶ್ಲೇಶಿಸಿಕೊಳ್ಳಬೇಕು. ಇದು ಬೇರೆಯವರ ಮುಂದೆ ಜೆ.ಎಚ್. ಪಟೇಲರ ತರಹ ಹೇಳಲಿಕ್ಕೆ ಅಗುವುದಿಲ್ಲ.
ಈ ಮೂರರ ಆಕರ್ಷಣೆಯನ್ನು ಅತೀಯಾಗಿಟ್ಟುಕೊಂಡರೆ ಕಷ್ಟವಾಗುತ್ತದೆ. ಯಾವುದಾದರು ಒಂದು normal ಆಗಿದ್ದರೆ ok. ಅದನ್ನು ನಾವೇ ಸಾರ್ವತ್ರಿಕ ದೌರ್ಬಲ್ಯವಾಗದಂತೆ ನಿಬಾಯಿಸಬೇಕು. ಒಂದು ವೇಳೆ ನಮ್ಮ ದೌರ್ಬಲ್ಯ ಸಾರ್ವತ್ರಿಕಗೊಂಡರೆ, ಚರ್ಚಿತವಾದರೆ ವ್ಯಕ್ತಿತ್ವಕ್ಕೆ ಪೆಟ್ಟು ಬೀಳುತ್ತದೆ. ಹಾಗಂತ ಇಂದಿನ ಕಾಲದಲ್ಲಿ ಅದನ್ನು ಮುಚ್ಚಿಡಲು ಆಗುವುದಿಲ್ಲ. ಇದನ್ನು ಸಮರ್ಥವಾಗಿ manage ಮಾಡುವ ಕಲೆಗಾರಿಕೆ ಬೇಕು.
ಹೀಗಾಗಿ ಖಾಸಗಿ ಸಂಗತಿಗಳ ಗೊಂದಲಗಳನ್ನು ಶಾಂತಚಿತ್ತರಾಗಿ ನಾವೇ ಆಲಿಸಬೇಕು. ನಮ್ಮ ಏರಿಳಿತದ ಭಾವನೆಗಳನ್ನು ಧ್ಯಾನಸ್ಥ ಸ್ಥಿತಿಯಲ್ಲಿ ನಾವೇ ಗಮನಿಸಿದರೆ ಪರಿಹಾರ ಸಿಕ್ಕೇ ಸಿಗುತ್ತದೆ. ಅದು ನಿಯಂತ್ರಣಕ್ಕೂ ಬರುತ್ತದೆ.
"Try to keep at least two persons happy, but one of them must be you" ಎಂಬ ಮಾತೊಂದಿದೆ. ನಮ್ಮನ್ನು ನಾವು ಸಂತೋಷದಲ್ಲಿಟ್ಟುಕೊಳ್ಳುವ ಪ್ರತಿಕ್ರಿಯೆಯಲ್ಲಿ ತೊಡಗಿಸಿದಾಗ ಒಂದು ರೀತಿಯ ಸಮಾಧಾನ ಸಿಗುತ್ತದೆ. ಬೇರೆಯವರನ್ನು ಸಮಾಧಾನಿಸುವ, ಖುಷಿಪಡಿಸುವ ಧಾವಂತದಲ್ಲಿ ನಾವು ನಮ್ಮ ಅಸ್ತಿತ್ವವನ್ನೆ ಕಳೆದುಕೊಳ್ಳುತ್ತೇವೆ.
ಹಾಗಾಗಿ ನಮಗೆ ಹೆಣ್ನು, ಮಣ್ಣು, ಹೊನ್ನು ಬೇಕು ಎಷ್ಟು ಹೇಗೆ ಯಾಕೆ ಬೇಕು ಎಂದು ಕಂಡುಕೊಳ್ಳುವ ಸಾಮರ್ಥ್ಯ ಬಂದರೆ ಸಾಕು. ಅದೇ ವಿಕಸನದ ಮೊದಲ ಹೆಜ್ಜೆ ಆಗುತ್ತದೆ. ಎಲ್ಲ ನಿರಾಕರಣೆ ಮಾಡುತ್ತೇನೆ ಎಂಬ ಬೂಟಾಟಿಕೆಯೂ ಸಲ್ಲದು. ಬೇರೆಯವರ ವಿಷಯಕ್ಕೆ ಇರುವ ಹಿಪೊಕ್ರಸಿ, ನಮ್ಮ ವಿಷಯಕ್ಕೂ ಪ್ರಾರಂಭವಾದರೆ ಕಷ್ಟ!
ಅದನ್ನು ಮೆಟ್ಟಿ ನಿಲ್ಲುವ ಪ್ರಾಮಾಣಿಕ ಪ್ರಯತ್ನ ನಮ್ಮಿಂದ ನಮಗಾಗಿ, ನಮ್ಮ ಸಂತೋಷಕ್ಕಾಗಿ ಪ್ರಾರಂಭವಾಗಬೇಕು. ದಿನದಿಂದ ದಿನಕ್ಕೆ ಮನೋನಿಯಂತ್ರಣದ process ಮನಸ್ಸಿನಲ್ಲಿ ಪ್ರಾರಂಭವಾದಾಗ ಒಂದು ದಿನ ಒಳ್ಳೆ ಪರಿಣಾಮ ಸಿಕ್ಕೆ ಸಿಗುತ್ತದೆ. ಆದ್ದರಿಂದ ನಿಮ್ಮ weakness ಯಾವುದು ಎಂದು ನೀವೇ ಕಂಡುಕೊಂಡು ಯಶಪಡೆಯಿರಿ. ಕೆಲ ದಿನ ಬಿಟ್ಟ ನಂತರ ಈ ಪ್ರಶ್ನೆಗಾಗಿ ಮತ್ತೆ ಚರ್ಚೆಮಾಡೋಣ. But you have to wait for the results.
ಇಂದಿನಿಂದಲೇ ನಿಮ್ಮ ದೌರ್ಬಲ್ಯ ಅರಿಯುವ ಕೆಲಸ ಸಾಂಗವಾಗಿ ಸಾಗಲಿ All the best.

Tuesday, March 30, 2010

ತೇರನೆಳೆಯುತ್ತಾರೆ ತಂಗಿ ನೋಡಲಿಕ್ಕೆ ಹೋಗೋಣ ಬಾರೆ
ತೋಂಟದಾರ್ಯ ಜಾತ್ರೆ


ಸಂತ ಶಿಶುನಾಳ ಶರೀಫರ ಈ ಹಾಡು ನಮ್ಮ ನಾಡಿನ ಹಲವಾರು ಜಾತ್ರೆಗಳಿಗೆ ನಮ್ಮನ್ನು ಕೈ ಮಾಡಿ ಕರೆಯುತ್ತದೆ.
ಜಾತ್ರೆಗಳು ಎಂದರೆ ಗದ್ದಲು, ಜನಸಾಗರ. ಜಾತ್ರೆಯ ಸಾಮರ್ಥ್ಯಕ್ಕನುಗುಣವಾಗಿ ಜನ ಸೇರುತ್ತಾರೆ. ಸಾವಿರ, ಎರೆಡು ಸಾವಿರ, ಹತ್ತಾರು ಸಾವಿರ ಹೀಗೆ ಒಮ್ಮೊಮ್ಮೆ ಲಕ್ಷಾಂತರ ಜನರೂ ಸೇರುತ್ತಾರೆ.
ಜನಸೇರುವ ಈ ನೆಪದಲ್ಲಿ ನೂರಾರು ಪೂರಕ ಚಟುವಟಿಕೆಗಳು ಜರಗುತ್ತವೆ.
ಬಳೆ ವ್ಯಾಪಾರ, ಸಿಹಿ-ತಿಂಡಿ ವ್ಯಾಪಾರ, ಬಟ್ಟೆ-ಬರೆ ಹೀಗೆ ಜಾತ್ರೆಯಲ್ಲಿ ನೂರಾರು ಅಂಗಡಿಗಳು ಝಗಮಗಿಸುತ್ತವೆ. ಖರೀದಿಗಾಗಿ ಜನ ಸೇರುತ್ತಾರೋ, ಜನ ಸೇರಿದ್ದಕ್ಕಾಗಿ ಅಂಗಡಿಗಳು ಇರುತ್ತವೆಯೋ ಎಂಬಂತೆ ಜನ ಮರುಳೋ, ಜಾತ್ರೆ ಮರುಳೋ ಎಂಬ ವ್ಯಂಗ್ಯಾರ್ಥದ ನುಡಿಗಟ್ಟೂ ಇದೆ.
ಜಾಗತಿಕರಣದ ಜಗದಲ್ಲಿ ಈಗ ಜಾತ್ರೆಗಳು ದೇವರು ಧರ್ಮದ ಹೆಸರಿನಲ್ಲಿ ಜೀವಂತವಾಗಿರುವುದು ಏಷಿಯಾದಲ್ಲಿ ಮಾತ್ರ.
ಜಾಗತಿಕ ಧರ್ಮದ ಕ್ರಿಶ್ಚಿಯನ್ ಮುಖ್ಯಸ್ಥ ಪೋಪ್ ಅಧಿಕಾರ ಸ್ವೀಕರಿಸುವಾಗ, ಇಸ್ಲಾಂ ಧಾರ್ಮಿಕ ಕೇಂದ್ರ ಮೆಕ್ಕಾದಲ್ಲಿ ವರ್ಷಕ್ಕೊಮ್ಮೆ ಜನ ಸೇರುವುದು ಸಾಮಾನ್ಯ.
ಆದರೆ ಇಂಡಿಯಾ ದೇಶದಲ್ಲಿ ಪ್ರತಿ ಹಬ್ಬ-ಹುಣ್ಣಿಮೆಗಳಂದು ಲಕ್ಷಗಟ್ಟಲೆ ಜನ ಸೇರುತ್ತಾರೆ. ಜನರನ್ನು ಒಂದೆಡೆ ಸೇರಿಸಲು ಧರ್ಮ-ದೇವರು ಎಂಬ ಒಂದೇ ಅಸ್ತ್ರ ಸಾಕು!
ಕರ್ನಾಟಕದಲ್ಲಿ ಬಾದಾಮಿ, ಮೈಲಾರ, ಅಂಬಾಮಠ, ಕೊಪ್ಪಳ ಗವಿಮಠ, ಸುತ್ತೂರು ಹಾಗೂ ಗದುಗಿನ ಜಗದ್ಗುರು ತೋಂಟದಾರ್ಯ ಮಠಗಳ ಜಾತ್ರೆಗಳಲ್ಲಿ ಇಂದಿಗೂ ಲಕ್ಷಾಂತರ ಜನ ಸಂಭ್ರಮದಿಂದ ಸೇರಿ ಖುಷಿ ಪಡುತ್ತಾರೆ.
ಇಂದು ಸಾಮೂಹಿಕ ಭೋಜನ, ಪ್ರೀತಿ ಭೋಜನ, ಅದರಲ್ಲೂ ವಿಶೇಷವಾಗಿ ಲಕ್ಷಾಂತರ ಜನ ಸಾಮೂಹಿಕವಾಗಿ ಬಟಾ ಬಯಲಿನಲ್ಲಿ ಜಾತಿ ಭೇದ ಮರೆತು ಪ್ರಸಾದ ಸ್ವೀಕರಿಸುವ ಶ್ರೇಷ್ಠ ಪದ್ದತಿ ನಮ್ಮ ಗ್ರಾಮೀಣ ಜಾತ್ರೆಗಳಲ್ಲಿದೆ. ಅದಕ್ಕೆ ಶರೀಫರು ಹಾಡಿದ್ದು "ತೇರನೆಳೆಯುತಾರೆ ತಂಗಿ ತೇರನೆಳೆಯುತಾರೆ, ನೋಡಲಿಕ್ಕೆ ಹೋಗೋಣ ಬಾರೆ ಎಂದು ಹಾಡುತ್ತ ಜನಸೇರುವ ಜಾತ್ರೆಯನ್ನು ಆಧ್ಯಾತ್ಮದೊಂದಿಗೆ ಸಮೀಕರಿಸಿ ಈ ದೇಹವನ್ನು ಜಾತ್ರೆಯ ತೇರಿಗೆ ಹೋಲಿಸಿದ್ದಾರೆ.

ಪ್ರಗತಿಪರ ಆಲೋಚನೆ ಹೊಂದಿದ ಸ್ವಾಮಿಗಳು ಈ ಜಾತ್ರೆಗಳಿಗೆ ಸಾಂಸ್ಕೃತಿಕ ಸ್ವರೂಪ ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಗದುಗಿನ ತೋಂಟದಾರ್ಯ ಮಠದ ಇಂದಿನ ಪೀಠಾಧಿಪತಿಗಳಾದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು 1975 ರಿಂದ ಶ್ರೀಮಠದ ಜಾತ್ರೆಯನ್ನು ಸಾಂಸ್ಕೃತಿಕ ಯಾತ್ರೆಯನ್ನಾಗಿಸಿದ್ದಾರೆ.
ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ಮಾಡಿಸಿಕೊಳ್ಳುವುದನ್ನು, ತೇರಿನ ಗಾಲಿಗೆ ಅನ್ನ ಹಾಕುವುದನ್ನು ನಿಲ್ಲಿಸಿದ್ದಾರೆ. ಪರಮ ಪೂಜ್ಯರ ಈ ಪ್ರಗತಿಪರ ನಿಲುವು ಆರಂಭದಲ್ಲಿ ಕಂದಾಚಾರಿಗಳಿಗೆ shock ನೀಡಿತು. ಈಗ ಎಲ್ಲವೂ ಸರಳ. ವಿನೂತನ ಆಚರಣೆಯ ಗದುಗಿನ ತೋಂಟದಾರ್ಯಮಠದ ಜಾತ್ರೆಗೆ ಈಗ ಮೂವೈತ್ತದರ ಸಂಭ್ರಮ. ಪ್ರತಿ ವರ್ಷ ಜಾತ್ರೆಯ ನೆಪದಲಿ ಹತ್ತಾರು ಪುಸ್ತಕಗಳ ಬಿಡುಗಡೆ, ಗಣ್ಯ ಮಹನೀಯರಿಗೆ ಸಂಮಾನ, ಕೃಷಿಮೇಳ, ಹಾಲುಕರೆಯುವ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಸಾಹಿತ್ಯಾಸಕ್ತರು, ಸಾಂಸ್ಕೃತಿಕ ಪ್ರೇಮಿಗಳು ಸಾವಿರ ಸಂಖ್ಯೆಯಲಿ ನಿಶ್ಯಬ್ದವಾಗಿ ಕುಳಿತು ಮಠದ ಆವರಣದಲ್ಲಿ ಹಾಕಿರುವ ಭವ್ಯ ಮಂಟಪದಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಾರೆ. ಹೊರಗಡೆ ಜನಸಾಮಾನ್ಯರು ಸಂಭ್ರಮದಿಂದ ಓಡಾಡುತ್ತ, ಮಿರ್ಚಿ, ಭಜಿ ತಿನ್ನುತ್ತಾ ಮುಂಬೈ ಮೂಲದ ಸಂಸ್ಥೆ ಹಾಕಿರುವ ಪ್ರದರ್ಶನ ವೀಕ್ಷಿಸುತ್ತಾ ಆಟ ಆಡುತ್ತಾರೆ. ಹೀಗೆ ಜನಸಾಮಾನ್ಯರನ್ನು ಹಾಗೂ ಪ್ರಜ್ಞಾವಂತರನ್ನು ಏಕಕಾಲಕ್ಕೆ ತಣಿಸುವ ಜಾತ್ರೆಯಲ್ಲಿ ಈ ವರ್ಷವೂ ಅನೇಕಾನೇಕ ಕಾರ್ಯಕ್ರಮಗಳಿವೆ.
ಇಂದು ನಡೆಯುವ ಸಾಮೂಹಿಕ ವಿವಾಹದಲ್ಲಿ ನಾಡಿನ ಹರ-ಗುರು-ಚರ-ಮೂರ್ತಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ.
ಒಂದುವಾರ ಸಾಮೂಹಿಕ ರುಚಿಕಟ್ಟಾದ ಭೋಜನ ವ್ಯವಸ್ಥೆಯೂ ಇದೆ. ಹೀಗೆ ಎಲ್ಲರೀತಿಯಲ್ಲಿಯೂ ಗದುಗಿನ ಜಾತ್ರೆ ಜನಪರ, ಸಾಮೂಹಿಕ, ಸಾಂಸ್ಕೃತಿಕ, ಸಾಹಿತ್ಯದ ಯಾತ್ರೆಯಾಗಿದೆ.
ನಾನು ವಿವರಿಸಿದ ಮಾತುಗಳನ್ನು ಸ್ವತ: ಅನುಭವಿಸಲು ದಯವಿಟ್ಟು ಇಂದೇ ಗದುಗಿನ ಜಾತ್ರೆಗೆ ಬನ್ನಿರಿ
.

Monday, March 29, 2010


ಮತ್ತೆ ಆರಂಭವಾದ ಕಿರುತೆರೆ ನಂಟು

ಕಳೆದೆರೆಡು ದಶಕಗಳ ಉಪನ್ಯಾಸಕ ವೃತ್ತಿಯೊಂದಿಗೆ ಅನೇಕ ಊರು ಉಸಾಬರಿ ಯೋಜನೆಗಳಲ್ಲಿ ತೊಡಗಿರುವುದನ್ನು ನೀವು ನೋಡಿದ್ದೀರಿ.
1996 ರಲ್ಲಿ ಸ್ಥಾನಿಕ ಸಿಟಿ ಕೇಬಲ್ ಗೆಳೆಯರಾದ ಸುನಿಲ್ ತೆಂಬದಮನಿ, ಮಹಾದೇವ ಕಲಬುರ್ಗಿ, ಹಿರಿಯ ತಂತ್ರಜ್ಞ ಫಡ್ನೀಸ್ ಅವರ ನೆರವಿನೊಂದಿಗೆ ಇರುವ ಪರಿಮಿತಿಯ ತಂತ್ರಜ್ಞಾನ ಬಳಸಿಕೊಂಡು ಸಿಟಿ ಕೇಬಲ್ ವೀಕ್ಷಕರಿಗಾಗಿ ಅಕರ್ಷಕ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ.
ಅನೇಕ ರಾಜಕೀಯ ದಿಗ್ಗಜರ ನೇರ ಸಂದರ್ಶನ ಪ್ರಸಾರ ಮಾಡಿದ್ದು ಈಗ ಇತಿಹಾಸ.
ನನ್ನ ಸಂದರ್ಶನ ಕಾರ್ಯಕ್ರಮ yapal's show time ನಲ್ಲಿ ನಾಡಿನ ಎಲ್ಲರ ಸದರ್ಶನ ಮಾಡಿದ್ದೇನೆ. ಈಗ ಅವುಗಳ ದಾಖಲೆ ಉಳಿದಿಲ್ಲ ಎನ್ನುವುದು ಅಷ್ಟೇ ವಿಷಾದದ ಸಂಗತಿ. ಮಾಜಿ ಪ್ರಧಾನಿ ದೇವೆಗೌಡರು, ಕೇಂದ್ರ ಸಚಿವರಾಗಿದ್ದ ಎಂ.ವಿ. ರಾಜಶೇಖರನ್, ಎಂ.ಪಿ. ಪ್ರಕಾಶ್ ಅಲ್ಲದೆ ಅನೇಕ ಮಠಾಧೀಶರ ಸಂದರ್ಶನಗಳು ಪ್ರಸಾರಗೊಂಡು ನಾನು ಸ್ಥಾನಿಕ ಕೇಬಲ್ ನ ಶೋ ಮ್ಯಾನ್ ಅನಿಸಿಕೊಂಡೆ. ನಂತರ ಬೇರೆ ಬೇರೆ ಕಾರಣಗಳಿಂದ Ten TV ಸ್ಥಗಿತಗೊಂಡು ನನ್ನ ಕಾರ್ಯಕ್ರಮಗಳಿಗೂ ತಾತ್ಕಾಲಿಕ ತೆರೆಬಿತ್ತು. Yapal's show time ನ್ನು 1999 ರ ಸಾರ್ವಜನಿಕ ಚುನಾವಣೆಯಲ್ಲಿಯೂ ಸಮರ್ಥವಾಗಿ ಬಳಸಿಕೊಂಡ ಹೆಗ್ಗಳಿಕೆ ನಮ್ಮದು.
ನಂತರ ವಾರ್ತಾ ಇಲಾಖೆ ಹಾಗೂ ಬೆಂಗಳೂರು ದೂರದರ್ಶನಕ್ಕಾಗಿ ಮೂರು ಸಾಕ್ಷ್ಯ ಚಿತ್ರಗಳನ್ನು ನಿರ್ಧೇಶಿಸಿದ ಅನುಭವ ನನ್ನ ಮನದ ಮೂಲೆಯಲ್ಲಿ ಅಡಗಿ ಕುಳಿತಿದೆ.
ನಂತರ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿ-ನಿರ್ದೇಶಿಸುವ ಅವಕಾಶ ಬಂದರೂ ಕಾಲೇಜು ಕೆಲಸದ ಒತ್ತಡದ ಮಧ್ಯ ಪೂರೈಸಲಾಗಲಿಲ್ಲ ಎಂಬ ಬೇಸರ.
Jack of all master of none ಆಗದಂತೆ ಎಚ್ಚರವಹಿಸಿಕೊಂಡು ಸುಮ್ಮನಿದ್ದೇನೆ. ಅರ್ಧದಶಕದ ನಂತರ ಜನಪ್ರಿಯ ವಾಹಿನಿ ಈ ಟಿವಿಯಲ್ಲಿ ಮಧ್ಯಾನ್ಹ ಪ್ರಸಾರವಾಗುವ 'ಸುಕನ್ಯಾ' ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶವನ್ನು ಗೆಳೆಯ ಸಹ ನಿರ್ದೇಶಕ ಮಂಜುನಾಥ ಪಾಂಡವಪುರ ಒದಗಿಸಿಕೊಟ್ಟರು.
ಡಿಸೆಂಬರ 1 ರಂದು ಎರೆಡು ಸನ್ನಿವೇಶಗಳಿಗಾಗಿ ಅಭಿನಯಿಸಿ ಬಂದೆ. ನಿರ್ದೇಶಕರಾದ ರವಿಕಿರಣ, ಶಶಿಕಿರಣ ಅಭಿನಯವನ್ನು ಮೆಚ್ಚಿಕೊಂಡದ್ದು, ಹಿರಿಯ ಅನುಭವಿ ಕಲಾವಿದರಾದ ಅನಂತವೇಲು, ಶ್ವೇತಾ ಚಂಗಪ್ಪ, ನಿನಾಸಂ ಸಂದಿಪ್ ರೊಂದಿಗೆ ಅಭಿನಯಿಸಿದ್ದು ಅವಿಸ್ಮರಣೀಯ ಅಂದುಕೊಳ್ಳಬಹುದಲ್ಲ.
ಸದರಿ ದೃಶ್ಯಗಳು 27-12-2009 ರಂದು ಹಾಗೂ 7-1-2010 ರಂದು ಪ್ರಸಾರಗೊಂಡವು. ಅದಕ್ಕೆ ಬೇಕಾದಷ್ಟು ಪ್ರಚಾರ ನೀಡದೆ ಕೇವಲ ಸ್ನೇಹಿತರಿಗೆ ಮಾತ್ರ ವಿಷಯ ತಿಳಿಸಿದೆ.
ನನ್ನ ಮೊದಲ ಆದ್ಯತೆ ಓದು, ಬರಹ ಹಾಗೂ ಉಪನ್ಯಾಸವಾದ್ದರಿಂದ ಅವಕಾಶ ಸಿಕ್ಕಾಗ ಮಾತ್ರ ಕಿರುತೆರೆಯನ್ನು ಬಳಸಿಕೊಳ್ಳುವುದು ಒಳಿತು ಅನಿಸಿದೆ.
ನಮಗಿರುವ ಸೀಮಿತ ಕಾಲಮಿತಿಯನ್ನು ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುವ ಇರಾದೆ ಇದೆ. ಆದರೆ ಅದಕ್ಕಾಗಿ ಹೆಚ್ಚು ದಣಿದುಕೊಳ್ಳಬೇಕು ಎಂಬುದು ಅಷ್ಟೇ ಸತ್ಯ!.
ವ್ಯಕ್ತಿತ್ವ ವಿಕಸನ
ಪ್ರಶ್ನೋತ್ತರ ಮಾಲಿಕೆ -ಮಾನಸೋಲ್ಲಾಸ
ಕಳೆದ ಹತ್ತು ವರ್ಷಗಳಿಂದ ನನ್ನ ಶಿಕ್ಷಕ ವೃತ್ತಿಯೊಂದಿಗೆ ಹೆಚ್ಚುವರಿಯಾಗಿ ರೂಢಿಸಿಕೊಂಡ ಹವ್ಯಾಸ ವ್ಯಕ್ತಿತ್ವ ವಿಕಸನ ತರಬೇತಿ.
2004 ರಲ್ಲಿ ಆತ್ಮೀಯ ಸ್ನೇಹಿತ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಪುತ್ರ ಶ್ರೀಮಹಿಮಾ ಪಟೇಲ land mark ಸಂಸ್ಥೆಯಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಪಡೆಯಲು ಒತ್ತಾಯಿಸಿ, ಮೂರು ದಿನಗಳ ತರಬೇತಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಒದಗಿಸಿದರು. ಅಲ್ಲಿಯವರೆಗೆ ನನಗೆ ವ್ಯಕ್ತಿತ್ವ ವಿಕಸನ ತರಬೇತಿಯ ಸ್ವರೂಪದ ಬಗ್ಗೆ ಪೂರ್ಣ ಮಾಹಿತಿ ಇರಲಿಲ್ಲ. Land mark Forum ನ ತರಬೇತುದಾರ ಗೋಪಾಲರ ಅಸ್ಖಲಿತ ಪ್ರತಿದಿನ 10 ತಾಸುಗಳವರೆಗಿನ ಮಾತುಗಳು ಅಚ್ಚರಿ ಎನಿಸಿದವು.
ವ್ಯಕ್ತಿತ್ವ ಪರಿವರ್ತನೆಯ ಸೂತ್ರಗಳನ್ನು ಮನದಾಳಕ್ಕೆ ಇಳಿಯುವಂತೆ ವಿವರಿಸುವ ಬಗೆ ಭಿನ್ನವೆನಿಸಿತು. ಹಲವಾರು ಉಪಯುಕ್ತ ಪುಸ್ತಕಗಳ ಅಧ್ಯಯನದ ನಂತರ, ಮಹಿಮಾ ಪಟೇಲರ ಸಲಹೆಯಂತೆ ನಾನೇ ತರಬೇತಿಯನ್ನು ಪ್ರಾರಂಭಿಸಿದೆ.
ಇಲ್ಲಿಯವರೆಗೆ ಹತ್ತು ಸಾವಿರ ವಿದ್ಯಾರ್ಥಿಗಳಿಗೆ, ಎರೆಡು ಸಾವಿರ ವಿವಿಧ ಸಂಸ್ಥೆಗಳ ಶಿಕ್ಷಕರಿಗೆ, ವೈದ್ಯರುಗಳಿಗೆ, ಕಾರ್ಪೋರೇಟ್ ಜಗತ್ತಿನ ಯುವಕರಿಗೆ ಯಶಸ್ವಿಯಾಗಿ ತರಬೇತಿ ನೀಡಿದ ಆತ್ಮವಿಶ್ವಾಸ ನನ್ನ ಪಾಲಿಗಿದೆ.
ಒಂದು ದಿನ, ಎರೆಡು ಹಾಗೂ ಮೂರು ದಿನಗಳ ತರಬೇತಿಗೆ ಬೇಕಾಗುವಷ್ಟು ಅಂಶಗಳನ್ನು ವೈಯಕ್ತಿಕವಾಗಿ ಅಭಿವೃದ್ಧಿ ಪಡಿಸಿಕೊಂಡಿದ್ದೇನೆ. power point ಮೂಲಕ ಸಂಗೀತ ಸಾಧನಗಳನ್ನು ಬಳಸಿ ಬೇಸರವಾಗುವಂತೆ ನೀಡುವ ತರಬೇತಿಗೆ ಈಗ ಬೇಡಿಕೆ ಹೆಚ್ಚಿದೆ.
ವೃತ್ತಿಯಲ್ಲಿ ಬಿಡುವು ಸಿಕ್ಕಾಗ ಅವಕಾಶ ಮಾಡಿಕೊಂಡು ತರಬೇತಿ ನೀಡಲು ಹೋಗುತ್ತೇನೆ. ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಾಗದಕ್ಕೆ ಬೇಸರವಿದೆ.
ಈಗ ಅನೇಕರು ನನ್ನ mail ID ಗೆ ಪ್ರಶ್ನೆ ಕಳಿಸುತ್ತಾರಂತೆ, ನನ್ನ ಬ್ಲಾಗ್ ನಲ್ಲಿ ಅವುಗಳಿಗೆ ಉತ್ತರ ಪಡೆಯುವ ಸಲಹೆಯನ್ನು ನೀಡಿದ್ದಾರೆ. ಇದು ಪ್ರಶ್ನೆ ಕೇಳಿದವರೊಂದಿಗೆ, ಇತರ ಓದುಗರಿಗೂ ತಲುಪಬಹುದೆಂಬ ಸದಾಶಯದ ಸೂಚನೆಯನ್ನು ಒಪ್ಪಿಕೊಂಡಿದ್ದೇನೆ. ಈ ಪ್ರಶ್ನೋತ್ತರ ಮಾಲಿಕೆಯ Tittle ಮಾನಸೋಲ್ಲಾಸ.
ಮಾನಸೋಲ್ಲಾಸದ ಮೂಲಕ ವೈಯಕ್ತಿಕ ಸಮಸ್ಯಗಳಿಗೆ ಸಲಹೆ-ಚರ್ಚೆ ಬಯಸುವವರು ನನ್ನ mail ID - Siddu. Yapal @ gmail.com ಗೆ ಪ್ರಶ್ನೆ ಕಳಿಸಿರಿ, ಬ್ಲಾಗ್ ಮೂಲಕ ಉತ್ತರ ನೀಡುತ್ತೇನೆ.
ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ.
ನಾಳೆಯಿಂದ 'ಮಾನಸೋಲ್ಲಾಸ' ಪ್ರಾರಂಭವಾಗಲಿದೆ.
Let us share our feelings.
ಈ ಸಮಯದಲ್ಲಿ ಹಿಟ್ಲರ್ ನ ಆತ್ಮವಿಶ್ವಾಸದ ಮಾತುಗಳನ್ನು ಅಲಿಸೋಣ.
"Never try or beg for support from others.........
Stand alone and face the life as a race, then every thing will follow you".
Have a nice day.

Saturday, March 27, 2010



'ಕಾಲ'ನ ಮಹಿಮೆಯಲ್ಲಿ ನಾವು-ನೀವು
'ಸಿದ್ದು ಕಾಲ'ಕ್ಕೆ ಬೇಡಿಕೆ ಶುರು ಆಗಿದೆ ಎಂಬ ಖುಷಿ. ಕಮೆಂಟ್ಸ ಕಾಲಂನ್ನು ಸದಾ ಸೊನ್ನೆಗಿಟ್ಟಿರುವ ಬಿಜಿ ಓದುಗರು ಫೋನಾಯಿಸಿ ನೇರವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಿರುವುದು ತಂತ್ರಜ್ಞಾನಕ್ಕೊಂದು ನಿದರ್ಶನ. ಎಲ್ಲವೂ fast ಆಗಬೇಕು. ಅನಿಸಿದ್ದನ್ನು ತಕ್ಷಣ ತಿಳಿಸಬೇಕೆನ್ನುವ ಧಾವಂತದಿಂದ ಫೋನಾಯಿಸುವ ಹವ್ಯಾಸ ಪ್ರಾರಂಭವಾಗಿದೆ.
'ಕಾಲ' ಎಂದರೇನು ಎಂಬುದು ಎಲ್ಲರ ಸಹಜ ಪ್ರಶ್ನೆ. ನಮ್ಮ ಮಾತು, ವಿಚಾರಗಳಲ್ಲಿ ಸಹಜವಾಗಿ ನುಸುಳುವ ಪದ 'ಕಾಲ'. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ, ಯಾರಾದರು ಬಹಳ ಅಟ್ಟಹಾಸದಿಂದ ಮೆರೆದರೆ ಅಯ್ಯೋ ಬಿಡ್ರಿ ಅವರದೊಂದು ಕಾಲ ಉರಿತಾರೆ ಅಂತ ಲೇವಡಿ ಮಾಡುತ್ತೇವೆ.
ತೀರಾ ನೋವಿನಲ್ಲಿದ್ದಾಗ ಅಯ್ಯೋ ನಮಗೊಂದು ಕಾಲ ಬರಬಹುದು ಎಂದು ಸಮಾಧಾನಿಸಿಕೊಳ್ಳುತ್ತೇವೆ. ಏನಾದರು ಕಾಂಟ್ರೊವರ್ಸಿಯಲ್ ಘಟನೆ ನಡೆದಾಗ ಎಲ್ಲ ವನ್ನು ಕಾಲ ನಿರ್ಧರಿಸುತ್ತದೆ ಎನ್ನುತ್ತಾ ನಿರ್ಣಯವನ್ನು ಕಾಲನ ಅಣತೆಗೆ ಬಿಡುತ್ತೇವೆ.
ಹೀಗೆ, ಎಲ್ಲ ವಿಚಾರಲಹರಿಗಳಲ್ಲಿ ನುಗ್ಗುವ 'ಹಿತಕರ' ಪದ 'ಕಾಲ'ವನ್ನು ನನ್ನ ಬ್ಲಾಗ್ ಗೆ tittle ಕೇಳಿದಾಗ ತಕ್ಷಣ 'ಸಿದ್ದು ಕಾಲ' ಇರಲಿ ಎಂದೆ.
ಈಗ ನನಗೆ ಒಂದು ರೀತಿಯ ಸಕಾರಾತ್ಮಕ ನೆಮ್ಮದಿ, ನನ್ನ ನಿತ್ಯದ ಬವಣೆಗಳನ್ನು ಹಂಚಿಕೊಳ್ಳುವ 'ಕಾಲ' ಕೂಡಿಬಂತಲ್ಲ ಎಂದು. ಅನೇಕ ಬೇಗುದಿಗಳನ್ನು ಅನಿವಾರ್ಯ ವಾಗಿ ಸಹಿಸಿಕೊಂಡು ವಿಲಿ,ವಿಲಿ ಒದ್ದಾಡುತ್ತೇವೆ. ಹಂಚಿಕೊಳ್ಳಲು ಮನಸ್ಸಾಗುವುದಿಲ್ಲ ಅನ್ನುವುದಕ್ಕೆ, ಹಂಚಿಕೊಳ್ಳುವಷ್ಟು ಆತ್ಮೀಯರು ಸಿಗುವುದಿಲ್ಲ, ಸಿಕ್ಕರೂ 'ಏನ್ರಿ ನಿಮ್ಮದು, ನಿಮ್ಮದು ಬರೀ ಗೊಣಗಾಟ, ಗೋಳಾಟವಾಯಿತು' ಎಂದು ಮಾರುದ್ದ ದೂರ ಸರಿಯುತ್ತಾರೆ. ಹಾಗಂತ ಎಲ್ಲ ವಿಷಯಗಳನ್ನು ಸಹಿಸಿಕೊಳ್ಳಲು ನಾವು ನಂಜುಂಡರಲ್ಲವಲ್ಲ. ಕಾರಿಕೊಂಡರೆ ಬೇರೆಯವರು ಸಹಿಸಿಕೊಳ್ಳಬೇಕಲ್ಲ? ನುಂಗದ ಕಾರದ ಈ ತೊಳಲಾಟಕ್ಕೆ ಪರಿಹಾರ ನನಗೆ ಬ್ಲಾಗ್ ನಲ್ಲಿ ಸಿಕ್ಕಿತು ಎಂಬ ಸಂಭ್ರಮಕ್ಕಾಗಿ ನನ್ನ ಬ್ಲಾಗ್ ಗೆ ಕಾಲ ಎಂದು ಕರೆದೆ. ಆದರಿದು ಅಹಂಕಾರದ, ಮೆರೆಯುವ ಕಾಲವಂತೂ ಅಲ್ಲ, ಎಲ್ಲವನ್ನು ಪ್ರಾಂಜಲವಾಗಿ ತೋಡಿಕೊಳ್ಳುವ ಕಾಲ ಎಂಬ ನೆಮ್ಮದಿ.
ಪ್ರತಿ ದಿನ ಕನಿಷ್ಠ ಹತ್ತಾರು ಮನಸ್ಸುಗಳು ನನ್ನ ಮಾತುಗಳನ್ನು ಗಂಭಿರವಾಗಿ ಆಲಿಸುತ್ತವೆ, ನಂತರ ಸ್ಪಂದಿಸುತ್ತಾರೆ ಎಂಬ ನಿರಾಳ ಭಾವ. ಮನುಷ್ಯರ ಮಧ್ಯ ಒಂದು unseen ಪ್ರವಾಹವಿರುತ್ತದೆ. ಅದನ್ನು ಅರಿಯಲು ಪರಸ್ಪರ ಮಾತಾಡಬೇಕು, ಸಂಪರ್ಕದಲ್ಲಿರಬೇಕು ಎಂಬ condition ಇಲ್ಲ. ಅದು ತನ್ನಿಂದ ತಾನೆ under current ತರಹ ಹರಿದಾಡುತ್ತದೆ. ಆ ಹರಿದಾಟ ನಮಗೆ ಅರಿವಿಲ್ಲದಂತೆ ಸಮಾಧಾನ ನೀಡುತ್ತದೆ. ಕೆಲವರು ಆಗಾಗ ಹೆಳುತ್ತಾರೆ ನೀವು ಹೇಳುವ ಮಾತುಗಳು ನಮ್ಮ ಅನುಭವಕ್ಕೂ ಬಂದಿವೆ ಆದರೆ ಹೇಳಲಾಗಿರಲಿಲ್ಲ. ನೀವು ಬರೆದದ್ದನ್ನು ಓದಿದ ಮೇಲೆ ಸಮಾಧಾನವಾಯಿತು ಎಂದಾಗ ನಮಗೂ ಸಮಾಧಾನವಾಗುತ್ತದೆ.
ಈಗಿರುವ ನನ್ನ 'ಕಾಲ'ದಲ್ಲಿ ಅತೀಯಾದ ಆತ್ಮಪ್ರಶಂಶೆ, ಆತ್ಮರತಿ ಇರದ ಹಾಗೆ ಎಚ್ಚರವಹಿಸುವ ಜವಾಬ್ದಾರಿ ಇದೆ. ವೈಯಕ್ತಿಕ ದ್ವೇಷಾಸೂಯೆಗಳನ್ನು ಕಾರಿಕೊಳ್ಳುವುದು ಅಷ್ಟೇನು positive ಅಲ್ಲ. ನೋಯಿಸಿದವರ ಹೆಸರನ್ನು ಪ್ರಸ್ತಾಪಿಸಿದೆ, ಯಾರನ್ನು ಅನಗತ್ಯ ಪೂರ್ವಾಗ್ರಹ ಭಾವನೆಯಿಂದ target ಮಾಡಬಾರದು ಎಂಬ ಎಚ್ಚರ ಇಟ್ಟುಕೊಂಡೇ ಸಂಯಮದಿಂದ ನೀವು ಕೊಟ್ಟ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು ಹಗುರವಾಗುತ್ತೇನೆ.
ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬಿಂದಾಸ್ ಆಗಿ share ಮಾಡಿಕೊಳ್ಳಿ. ಕಮೆಂಟ್ಸ್ ಕಾಲ '0' ಇಡಬೇಡಿ. ದುಬೈ, ಅಮೇರಿಕಾ, ಇಂಗ್ಲೆಂಡಿನಿಂದ ಫೋನಾಯಿಸಿ ಭಾವನೆಗಳನ್ನು ಹಂಚಿಕೊಂಡ ಆತ್ಮೀಯರಿಗೆ ಕೃತಜ್ಞನಾಗಿದ್ದೇನೆ. ಇಂಗ್ಲೆಂಡಿನ ಲಿವರ್ ಪೂಲ್ ನಲ್ಲಿರುವ ಸೋದರ ರಾಜು, ಸವಿತಾ ಬ್ಲಾಗ್ ಓದಿ ಖುಷಿ ಆಗಿದ್ದಾರೆ. ಜಗತ್ತಿನಲ್ಲಿರುವ ಎಲ್ಲ ಕನ್ನಡಿಗರನ್ನು ತಲುಪುವ ಸಂಭ್ರಮಕ್ಕೆ ಮತ್ತೊಮ್ಮೆ ಋಣಿಯಾಗಿದ್ದೇನೆ. Have a nice day.

Friday, March 26, 2010


ಅಚ್ಚುಕಟ್ಟು ನಿರೂಪಣೆಯ ಯಶಸ್ಸು ತಂದ ಕುತ್ತು


76ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿನ ನನ್ನ ಪಾಲ್ಗೊಳ್ಳುವಿಕೆಯನ್ನು ಈ ಹಿಂದೆ ವಿವರಿಸಿದ್ದೇನೆ. ಸಮ್ಮೇಳನವನ್ನು ಕಾಡಿಬೇಡಿ ತರುವಲ್ಲಿ ಯಶಸ್ವಿಯಾದವರಲ್ಲಿ ನಾನು ಒಬ್ಬ. ಆದರೆ ನಂತರದ ಬೆಳವಣಿಗೆಗಳು ಬೇಸರವನ್ನುಂಟು ಮಾಡಿದ್ದರೂ ಸಕಾರಾತ್ಮಕವಾಗಿ ಕನಸು ಕಾಣುವ ನಮಗೆ ಪ್ರತಿಫಲ ಸಿಕ್ಕಿದೆ.
ಆ ಮಾತು ಬೇರೆ.
ಕಾರ್ಯಕ್ರಮಗಳ ರೂಪರೇಷೆ, ಗಣ್ಯ ಮಹನೀಯರಿಗೆ ವಸತಿ ವ್ಯವಸ್ಥೆ, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸಾಹಿತಿಗಳೊಂದಿಗಿನ ಸಾಮರಸ್ಯದ ಜವಾಬ್ದಾರಿಯೊಂದಿಗೆ ಆರಂಭದ ಹಾಗೂ ಸಮಾರೋಪದ ನಿರೂಪಣೆಯೂ ನನ್ನ ಪಾಲಿಗೆ ಲಭ್ಯವಾದದ್ದು ಅನಿರೀಕ್ಷಿತ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ನಿರ್ವಹಿಸಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದು ವೈಯಕ್ತಿಕವಾಗಿ ಖುಷಿ ತಂದದ್ದು ಸಹಜ ಅಲ್ಲವೆ?
ಸಮ್ಮೇಳನಕ್ಕೆ ಒಂದು ವಾರ ಮೊದಲು ಇಬ್ಬರು ಮಹನೀಯರು ನಾಲ್ಕಾರು ಜನರನ್ನು ಕಟ್ಟಿಕೊಂಡು ಬಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಶಾಸಕ ಬಿದರೂರ ಹಾಗೂ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರೊ.ಎ.ಬಿ. ಹಿರೇಮಠ ಅವರನ್ನು ಭೇಟಿ ಆಗಿ ಯಾವುದೇ ಕಾರಣಕ್ಕೂ ಸಿದ್ದು ಯಾಪಲಪರವಿ ಅವರಿಗೆ ನಿರೂಪಣೆ ಮಾಡಲು ಅವಕಾಶ ನೀಡಬಾರದು ಎಂಬ ಹುಸಿ ಬಾಂಬ್ ಹಾಕಿದ ಸುದ್ದಿ ನನಗೆ ತಲುಪಿತ್ತು. ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ತುಂಬಾ ಎಚ್ಚರಿಕೆಯಿಂದ ಎಲ್ಲರೂ ಮೆಚ್ಚುವ ಹಾಗೆ ನಿರೂಪಣೆ ಮಾಡಿ ಅವರ ಹುಸಿ ಬಾಂಬನ್ನು ಎದುರಿಸಿದ್ದು ನನ್ನ ಹೆಗ್ಗಳಿಕೆ. ಅನೇಕ ಗೆಳೆಯರು ಒತ್ತಾಯಿಸಿದರೂ ನಾನವರನ್ನು ಇಲ್ಲಿಯವರೆಗೆ ಅವರ ವಿರೋಧಕ್ಕೆ ಕಾರಣ ಏನೆಂದು ಕೇಳಿಲ್ಲ, ಕೇಳುವುದು ಇಲ್ಲಾ!. ಅದನ್ನು ಆ ಮಹನೀಯರೆ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರಿಗೆ ಬೇಡ ಎನ್ನಲು ನೂರು ಕಾರಣಗಳಿದ್ದರೆ, ನನಗೆ ನಿರೂಪಣೆಯನ್ನು ಅರ್ಥಪೂರ್ಣವಾಗಿ ಮಾಡಲು ಸಾವಿರ ಕಾರಣಗಳಿವೆ. ನಂತರ ಕೊನೆ ದಿನ ಮುಖ್ಯ ಮಂತ್ರಿಗಳು ಭಾಗವಹಿಸಿದ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ನನ್ನ ಹೆಗಲಿಗೆ ಬಿದ್ದಾಗ ಕೊಂಚ ದಿಗಿಲುಕೊಂಡೆ. ಲಕ್ಷಾಂತರ ಜನ ಸಾಗರದ ಮಧ್ಯ, ಅನೇಕ ಗಣ್ಯ ಮಹನೀಯರೆದುರು ಐತಿಹಾಸಿಕ ಸಾಹಿತ್ಯ ಸಮ್ಮೇಳನದಲ್ಲಿ ಮತ್ತೊಮ್ಮೆ ನಿರೂಪಣೆಯಂತಹ ಕ್ಲಿಷ್ಟ ಜವಾಬ್ದಾರಿ ಹೊರುವುದೊಂದು ಸವಾಲೆಂದು ಸ್ವೀಕರಿಸಿ ಎರಡನೇ ಇನ್ನಿಂಗ್ಸ ಹೊಡೆದು ಎಲ್ಲರ ಮೆಚ್ಚುಗೆ ಗಳಿಸಿದೆ. ಪತ್ರಿಕೆಯವರು, ಸ್ಥಾನಿಕ ಸಿಟಿ ಕೇಬಲ್ ಗೆಳೆಯರು, ಸುವರ್ಣ ಹಾಗೂ ವಿವಿಧ ಚಾನೆಲ್ಲುಗಳ ಸ್ನೇಹಿತರು ನಂತರ ಖುದ್ದಾಗಿ ಅಭಿನಂದಿಸಿದಾಗ ಖುಷಿ ಅಗದಿರಲು ಸಾಧ್ಯವೇ?
ಆದರೆ ನನ್ನ ಅಚ್ಚುಕಟ್ಟು ನಿರೂಪಣೆ ಕೆಲವರಿಗೆ ವಿಪರೀತ ಕಿರಿ-ಕಿರಿ ಎನಿಸಿದೆ ಅಂತ ನಂತರ ಅವರು ಕೆಂಡ ಕಾರಿದಾಗಲೇ ತಿಳಿಯಿತು. ತುಂಬಾ ಸಹನೆಯಿಂದ ಅವರ ಅಟ್ಯಾಕನ್ನು ಎದುರಿಸಿದೆ. ಆದರೆ ಮನಸ್ಸಿಗೆ ತುಂಬಾ ಬೇಸರವಾಯಿತು. ಸಣ್ಣ ಪುಟ್ಟ ದೋಷಗಳನ್ನು ದೊಡ್ಡದು ಮಾಡುವವರ ಸಣ್ಣತನಕ್ಕೆ ಹೇಸಿಗೆಯೆನಿಸಿತು. ಸಾಕಪ್ಪ ಈ ಸಾರ್ವಜನಿಕ ಬದುಕು ಅನಿಸಿದರೂ, ಅದು ಕೇವಲ ಸ್ಮಶಾನ ವೈರಾಗ್ಯ ಎಂದು ಗೊತ್ತಲ್ಲವೆ?
ಕೆಲವರು ಶಾಸಕರನ್ನು ಓಲೈಸಲೆಂದೇ, ಅವರ ಎದುರಿಗೆ ನನ್ನನ್ನು ಟೀಕಿಸಿದಾಗ ಸುಮ್ಮನೆ ಸಹಿಸಿಕೊಂಡು ನಿರ್ಣಯ ಅವರಿಗೆ ಬಿಟ್ಟು ಬಿಟ್ಟೆ. ರಾಜಕೀಯ ಹಿಂಬಾಲಕರ ನಿರೀಕ್ಷೆಗಳು ವಿಚಿತ್ರವಾಗಿರುತ್ತವೆ. ಪ್ರತಿಯೊಬ್ಬರೂ ತಮ್ಮ ನಾಯಕರನ್ನೇ ಹೊಗಳಲಿ ಎಂದರೆ ಹೇಗೆ ಸಾಧ್ಯ? ನಿರೂಪಕರಿಗೂ ಕೆಲವೊಂದು ಮಿತಿಗಳು, ಅನಿವಾರ್ಯತೆಗಳು ಇರುತ್ತವೆ ಎಂಬ ಸೌಜನ್ಯ ಗೊತ್ತಿರದವರಿಗೆ ಏನು ಮಾಡಲು ಸಾಧ್ಯ. ಇಂತಹ ಕಹಿ ಅನುಭವಗಳಿಂದ ಪಾಠ ಕಲಿಯಬೇಕಾಗುತ್ತದೆ. ರಾಜಕೀಯ ಹಿಂಬಾಲಕರಿಂದ ಭಾಷೆ ಕಲಿಯುವ ದುಸ್ಥಿತಿಗಾಗಿ ನನ್ನ ಬಗ್ಗೆ ನನಗೆ ಮರುಕ ಉಂಟಾಯಿತು. ಇದು ಸಾರ್ವಜನಿಕ ವ್ಯಂಗ್ಯ ಕೂಡಾ! ನಂತರ ಸಾವಿರಾರು ಜನ ಮುಕ್ತ ಕಂಠದಿಂದ ಅಭಿನಂದಿಸಿದಾಗ ನೂರಾರು ಜನ ಫೋನ್ ಮೂಲಕ ಹೊಗಳಿದಾಗ ಈ ಕಹಿ ಈಗ ಮಾಯವಾಗಿದೆ. 'ನಗಬೇಕು, ಅಳಬೇಕು ಸಮತೆಯ ಶಮದಲಿ ಎಂಬ ಕವಿವಾಣಿ ನೆನಪಾಗಿ ನನ್ನನ್ನು ನಾನೇ ಸಮಾಧಾನಿಸಿಕೊಂಡೆ.

Thursday, March 25, 2010


76 ನೆಯ ಸಾಹಿತ್ಯ ಸಮ್ಮೇಳನದ ನೆನಪ ಹನಿಗಳು
ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು'ರ ಆಪ್ತ ಮಾತುಗಳು

ನಿನ್ನೆ ಸಂಜೆ ಯಶಸ್ವಿ 76 ನೆಯ ಸಾಹಿತ್ಯ ಸಮ್ಮೇಳನದ ಸವಿನೆನಪಿನ ಕ್ಷಣಗಳನ್ನು ಮೆಲಕು ಹಾಕಿ ಯಶಸ್ವಿಗಾಗಿ ದುಡಿದ ಕನ್ನಡಾಭಿಮಾನಿಗಳಿಗೆ ಅಭಿನಂದಿಸುವ ಸಮಾರಂಭ. ಸರಳವಾಗಿ ಆಚರಿಸಿದ ಸಮಾರಂಭದಲ್ಲಿ ಖ್ಯಾತ ಗಾಯಕ ಬಸವಲಿಂಗಯ್ಯ ಹಿರೇಮಠ ಅವರ ಸುಮಧುರ ಗಾಯನ ಶಾಸಕ ಹಾಗೂ ಮಂತ್ರಿಗಳ ಅಭಿನಂದನಾಪರ ಮಾತುಗಳೊಂದಿಗೆ ರುಚಿಕಟ್ಟಾದ ಭೋಜನವೂ ಇತ್ತು. ಅಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ರುಚಿಯಾದ ಊಟ, ಸುಮಧುರ ಸಂಗೀತದಷ್ಟೇ ಶ್ರೀರಾಮುಲು ಭಾಷಣದ ಆಪ್ತ ಮಾತುಗಳು ಅಷ್ಟೇ ಸವಿಯೆನಿಸಿದವು.
ಸಮ್ಮೇಳನ ಘೋಷಣೆಯಾದಾಗಿನಿಂದಲೂ ಅನೇಕ ಗೊಂದಲ, ಅನಾನುಕೂಲಗಳು ಆರಂಭವಾಗಿದ್ದವು. ಗದಗ ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪ, ರಾಜಕೀಯದಲ್ಲಿ ದಿಢೀರನೆ ಎದ್ದ ಬಿರುಗಾಳಿ ಸಮ್ಮೇಳನ ಆಚರಣೆಗೆ ವಿಳಂಬ ತಂದಿತ್ತು. ಅನೇಕ ಕಾರಣಗಳಿಂದ ಸಮ್ಮೇಳನ ಯಶಸ್ವಿಯಾಗಬಹುದೆಂಬ ವಿಶ್ವಾಸ ಸ್ವಾಗತ ಸಮಿತಿಯ ಅಧ್ಯಕ್ಷರಾದ , ಸಚಿವ ಶ್ರೀರಾಮುಲು ಅವರಿಗಿರಲಿಲ್ಲ. ಚಿತ್ರದುರ್ಗ ಸಮ್ಮೇಳನದ ಅವಾಂತರಗಳು, ಸಾಹಿತಿಗಳ ನಿಷ್ಠುರತೆ ಸಚಿವರಿಗೆ ಕಿರಿಕಿರಿಯೆನಿಸಿತ್ತು. ಅವರೊಂದಿಗೆ ವೈಯಕ್ತಿಕ ಸ್ನೇಹ ಹೊಂದಿದ್ದ ನಾನು ಅನೇಕ ಸಲ ಸಚಿವರಿಗೆ ಒತ್ತಾಯಿಸಿದರೂ, ಸಮ್ಮೇಳನ ಆಚರಣೆಯ ಭರವಸೆ ಉಂಟಾಗಲಿಲ್ಲ. ಬರಬಹುದಾದ ಪಂಚಾಯತ್ ಚುನಾವಣೆಗಳು, ಆಗಬಹುದಾದ ಅನಾನುಕೂಲಗಳನ್ನು ಊಹಿಸಿ ಸಮ್ಮೇಳನ ಮುಂದೂಡಲು ಸೂಚಿಸಿದರು. ನಾನೊಮ್ಮೆ ಅವರಿಗೆ ನಿಷ್ಠುರವಾಗಿ ಹೇಳಿದೆ ಇಲ್ಲ ಯಾವುದೇ ಕಾರಣಕ್ಕೂ ಸಮ್ಮೇಳನ ಮುಂದೂಡುವುದು ಬೇಡ, ಅರ್ಧ ಶತಮಾನದ ನಂತರ ಗದುಗಿಗೆ ಸಮ್ಮೇಳನ ಸಿಕ್ಕಿದೆ ಇಂತಹ ಅವಕಾಶ ಕಳೆದುಕೊಳ್ಳುವುದು ಬೇಡ ಎಂದಾಗ ಸ್ವಲ್ಪ ಮನಸ್ಸು ಬದಲಾಯಿಸಿದರೂ, ಪೂರ್ಣಪ್ರಮಾಣದ ಸಮ್ಮತಿ ಸಿಕ್ಕಲಿಲ್ಲ. ನಂತರ ರಾಜ್ಯ ಕ.ಸಾ.ಪ ಅಧ್ಯಕ್ಷರಾದ ಡಾ. ನಲ್ಲೂರ ಪ್ರಸಾದ್ , ಗದಗ ಶಾಸಕರಾದ ಶ್ರೀಶೈಲಪ್ಪ ಬಿದರೂರ ಸಮ್ಮೇಳನ ಆಚರಿಸಲು ಪಟ್ಟು ಹಿಡಿದಾಗ ಮಂತ್ರಿಗಳು ತಮ್ಮ ಪಟ್ಟನ್ನು ಸಡಿಲಿಸಿ, ಪೂರ್ವಭಾವಿ ಸಭೆಗೆ ಹಾಜರಾದರು. ನಿಧಾನವಾಗಿ ತಮ್ಮನ್ನು ತೊಡಗಿಸಿಕೊಂಡರು. ಇದೆಲ್ಲ ಈಗ ಇತಿಹಾಸ........ ಅನೇಕ ಗೊಂದಲಮಯ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದ ಸಚಿವರು, ಸಮ್ಮೇಳನ ಯಶಸ್ವಿಯಾದದ್ದನ್ನು, ಅಲ್ಲಿ ನೆರೆದಿದ್ದ ಲಕ್ಷಾಂತರ ಸಾಹಿತ್ಯಾಭಿಮಾನಿಗಳನ್ನು ಕಂಡು ಅವಾಕ್ಕಾದರು. ಸಮ್ಮೇಳನದ ವಿಶಾಲತೆ ಅವರ ಊಹೆಗೂ ಮೀರಿದ್ದು ಅನಿಸಿತು. ಸಮ್ಮೇಳನ ಉದ್ಘಾಟನೆಯ ಹಿಂದಿನ ರಾತ್ರಿ ಆಪ್ತವಾಗಿ ಮಾತನಾಡುತ್ತ ತಮ್ಮ ತಪ್ಪನ್ನು ಮುಗ್ಧವಾಗಿ ಒಪ್ಪಿಕೊಂಡು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಕೊಟ್ಟ ಮಾತನ್ನು ಉಳಿಸಿಕೊಂಡು ನಾಲ್ಕುದಿನ ನಮ್ಮೊಂದಿಗಿದ್ದು ಸಮ್ಮೇಳನ ಸಂಭ್ರಮ ಸವಿದರು. ಅವರ ಮನಸ್ಸಿನಲ್ಲಿನ ಗೊಂದಲ ತಾಕಲಾಟಗಳನ್ನು ಅವರೆಂದು ಸಾರ್ವಜನಿಕವಾಗಿ ಹಂಚಿಕೊಂಡಿರಲಿಲ್ಲ.
ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಕ್ಷಾಂತರ ಜನರನ್ನು ಕಂಡು ಪುಳಕಿತರಾದರು. ಅನಿರೀಕ್ಷಿತ ಯಶಸ್ಸನ್ನು ಕಂಡ ಮುಖ್ಯಮಂತ್ರಿಗಳು ಜಿಲ್ಲಾಭವನ ನಿರ್ಮಾಣಕ್ಕೆ 3 ಕೋಟಿ ಹಣವನ್ನು ನೀಡುವುದಾಗಿ ಘೋಷಿಸುವುದಲ್ಲದೆ, ನಂತರ ಅದನ್ನು ಬಜೆಟ್ ನಲ್ಲಿ ಸೇರಿಸಿದ್ದು ಸಮ್ಮೇಳನದ ಯಶಸ್ಸಿಗೆ ಸಾಕ್ಷಿಯಾಯಿತು. ಈ ಎಲ್ಲಾ ಅಪರೂಪದ ಸಂಗತಿಗಳನ್ನು ಮನದಲ್ಲಿಯೇ ಮೆಲಕು ಹಾಕುತ್ತಿದ್ದ ಸಚಿವ ಶ್ರೀರಾಮುಲು ನಿನ್ನೆಯ ಅಭಿನಂದನಾ ಸಮಾರಂಭದಲ್ಲಿ ಮನಬಿಚ್ಚಿ ಮಾತನಾಡಿದರು.
ಸಮ್ಮೇಳನ ಆಚರಣೆಗೆ ಮುಂಚೆ ತಮ್ಮ ಮನಸ್ಸಿನಲ್ಲಿದ್ದ ಎಲ್ಲ ಗೊಂದಲಗಳನ್ನು ಮುಕ್ತವಾಗಿ ತೊಡಿಕೊಂಡು, ಯಶಸ್ವಿಗಾಗಿ ಶ್ರಮಿಸಿದ ಎಲ್ಲರನ್ನು ಮನಸಾರೆ ಅಭಿನಂದಿಸಿದರು. ಅವರ ಮಾತುಗಳಲ್ಲಿನ ಪ್ರಾಂಜಲತೆ, ಮುಗ್ಧತೆ ನೆರೆದದ್ದವರಿಗೆ ಶ್ರೀರಾಮುಲು ಅವರ ಇನ್ನೊಂದು ಮುಖವನ್ನು ಪರಿಚಯಿಸಿತು. ನಮ್ಮ ರಾಜಕೀಯ ನಾಯಕರುಗಳು, ಅಧಿಕಾರಸ್ಥ ಜನ ಮಾಡಿದ ತಪ್ಪನ್ನು ಒಪ್ಪಿಕೊಂಡಾಗ ಅದೆಂತಹ ಧನ್ಯತೆ ಇರುತ್ತದೆ ಎಂಬುದಕ್ಕೆ ನಿನ್ನೆಯ ಅವರ ಮಾತುಗಳೇ ಸಾಕ್ಷಿ. ಮುಕ್ತವಾಗಿ ಮಾತನಾಡಿ ಮಂತ್ರಿಗಳ ಮನಸ್ಸು ಹಗುರವಾಗಿ, ಕೇಳುಗರ ಹೃದಯ ತುಂಬಿತು. ನವಿರು ಹಾಸ್ಯದೊಂದಿಗೆ, ಒಂದಿಷ್ಟು ಸಿಹಿ-ಕಹಿ ಬೆರೆಸಿ ಸಮ್ಮೇಳನದ ಕುರಿತು ತಮ್ಮ ಅನುಭವ ಹಂಚಿಕೊಳ್ಳುತ್ತಾ, ಸಮ್ಮೇಳನದ ಯಶಸ್ವಿ ಆಚರಣೆ ಕುರಿತು ಇದ್ದ ತಪ್ಪು ಅಭಿಪ್ರಾಯ ಬದಲಿಸಿದ್ದಲ್ಲದೆ, ಸಾರ್ವಜನಿಕವಾಗಿ ಹೊಸ ಇಮೇಜನ್ನು ತಂದುಕೊಟ್ಟಿದೆ ಎಂದರು. ಮೊನ್ನೆ ನಡೆದ ವಿಧಾನಾ ಸಭಾ ಅಧಿವೇಶನದಲ್ಲಿ ಶಾಸಕ ಮಿತ್ರರು ಮಂತ್ರಿಗಳು ಅಭಿನಂದಿಸಿದ್ದನ್ನು ಮೆಲಕು ಹಾಕಿ ಖುಷಿ ಪಟ್ಟರು.
ಗದುಗಿನ ನೆಲದ ಸಾಧು-ಸಂತರ ಪುಣ್ಯವೋ, ಜನರ ಸದ್ಧಿಚ್ಛೆಯೋ ಏನೋ ಎಂಬಂತೆ ಪವಾಡ ಸದೃಶ ವೆಂಬಂತೆ ಸಮ್ಮೇಳನ ಅತ್ಯಂತ ಯಶಸ್ವಿಯಾಗಿದ್ದು ಎಲ್ಲರಂತೆ ಸ್ವತ: ಸ್ವಾಗತ ಸಮಿತಿಯ ಅಧ್ಯಕ್ಷರಿಗೂ ಅಚ್ಚರಿಯುಂಟು ಮಾಡಿದೆ. ಅದನ್ನವರು ಪವಾಡವೆಂದು ಬಣ್ಣಿಸಿದರು.
ಈ ದೇಶದ ಅಧಿಕಾರಸ್ಥ ಸ್ವಯಂ ಪೋಷಿತ ಪ್ರಭುಗಳೆನಿಸಿಕೊಂಡಿರುವ ರಾಜಕಾರಣಿಗಳು ಹೆಚ್ಚು ಹೆಚ್ಚು ಮುಕ್ತರಾಗಬೆಕು. ಜನರನ್ನು ರಂಜಿಸುವ, ವಂಚಿಸುವ ಮಾತುಗಳನ್ನಾಡಬಾರದು ಎಂದು ಶ್ರೀರಾಮುಲು ಅವರ ಮುಗ್ಧ ಭಾಷಣ ಕೇಳಿದ ನಂತರ ಅನಿಸಿತು. ಅಂದ ಹಾಗೆ ಖಂಡಿತಾ ಇದು ಶ್ರೀರಾಮುಲು ಅವರ ಎಲ್ಲ ವಿಷಯಗಳಿಗೂ ಅನ್ವಯವಾಗುವ ಶಹಬ್ಬಾಸಗಿರಿ ಅಂತ ತಪ್ಪಾಗಿ ಭಾವಿಸುವ ಅಗತ್ಯವಿಲ್ಲ ಎಂದು ನಮ್ರವಾಗಿ ನಿವೇದಿಸುತ್ತೇನೆ.

Tuesday, March 23, 2010



ಉರಿಬಿಸಿಲಿನಲಿ ತಂಪ ಕೊಡುವ ಇಂಗ್ಲೆಂಡ್ ಪ್ರವಾಸ ನೆನಪು

ಬರುವ ಮೇ ತಿಂಗಳಿಗೆ ಇಂಗ್ಲೆಂಡ್ ಪ್ರವಾಸ ಮುಗಿಸಿ 2 ವರ್ಷಗಳಾದವು. ದಿನಗಳು ಉರುಳುತ್ತವೆ, ನೆನಪು ಮಸುಕಾಗುತ್ತವೆ. ಮರೆವು ಒಮ್ಮೊಮ್ಮೆ ವರದಂತೆ ಮತ್ತೊಮ್ಮೆ ಶಾಪದಂತೆ ಗೋಚರವಾಗುತ್ತದೆ.
ಮರೆಯಲಾರದ , ಮರೆಯಬಾರದ ಸಂಗತಿಗಳನ್ನು ಅಕ್ಷರ ರೂಪದಲ್ಲಿ ದಾಖಲಿಸುವುದು ಅನಿವಾರ್ಯ. ವೈಯಕ್ತಿಕ ತೀರಾ ಲೇಜಿಯಾಗಿರುವ ನನಗೆ ಅಂತಹ ಆತ್ಮವಿಶ್ವಾಸವಿರಲಿಲ್ಲ. ಒಂದು ತಿಂಗಳ ಇಂಗ್ಲೆಂಡ್ ಪ್ರವಾಸವನ್ನು ಕರಾರುವಕ್ಕಾಗಿ ದಾಖಲಿಸುವ, ಪ್ರವಾಸ ಕಥನ ಪ್ರಕಟಿಸುವ ಇರಾದೆ ಇತ್ತು. ವಾಪಾಸಾದ ಒಂದೆರೆಡು ತಿಂಗಳಲ್ಲಿ ಅಂತಹ ಎಲ್ಲ ಲಕ್ಷಣಗಳು ಮಾಯವಾದವು. ಮನಸ್ಸಿಗೆ ಕಿರಿ,ಕಿರಿಯೆನಿಸಿತು.
ವಿಕ್ರಾಂತ ಕರ್ನಾಟಕ ಗೌರವ ಸಂಪಾದಕ ಪ್ರೊ.ರವೀಂದ್ರ ರೇಷ್ಮೆ ವಿಕ್ರಾಂತಕ್ಕೆ ಅನುಭವ ಹಂಚಿಕೊಳ್ಳಲು ಒತ್ತಾಯಿಸಿದರು. ನಾಲ್ಕಾರು ವಾರ ಬರೆದರಾಯಿತು ಅಂದುಕೊಂಡು ಪ್ರಾರಂಭಿಸಿದೆ.
ರೆಗ್ಯೂಲಾರಿಟಿ ವಿಷಯಕ್ಕೆ ಹೊಂದಿಕೊಳ್ಳದ ನನಗೆ ನಾಲ್ಕಾರು ವಾರಕ್ಕೆ ಸುಸ್ತಾಗಿ ಹೋಯಿತು. ರೇಷ್ಮೆಯವರು ಮುಂದುವರೆಸಲು ಒತ್ತಾಯಿಸಿದ್ದರಿಂದ ಹುಮ್ಮಸ್ಸಿನಿಂದ ಬರೆಯಲಾರಂಭಿಸಿದೆ. ಅಚ್ಚರಿ ಎನಿಸುವಂತೆ 35 ವಾರಗಳವರೆಗೆ ನಿರಾತಂಕವಾಗಿ ಬರೆದು ಹಗುರಾದೆ. ಹೊಸತನ, ತಾಜಾತನದೊಂದಿಗೆ ತುಂಬಾ ಪ್ರಾಮಾಣಿಕವಾಗಿ ಬರೆದಿದ್ದರಿಂದ ಅಂಕಣ ಹೆಚ್ಚು ಜನಪ್ರಿಯವಾಯಿತು.
ಸುಂದರವಾಗಿ ಸಂಪಾದಿಸಿ, ಫೋಟೊ ಸಮೇತ ಪುಸ್ತಕ ಪ್ರಕಟಿಸಲು ನಿರ್ಧರಿಸಿದೆ. ಹತ್ತಾರು ಪ್ರಕಾಶಕರು ಕೇಳಿದರೂ ಕೊಡುವ ಮನಸ್ಸಾಗಲಿಲ್ಲ. ನಾನೇ ಪ್ರಕಟಿಸಲು ನಿರ್ಧರಿಸಿದೆ. ಬಸವರಾಜು, ಮುರಳೀಧರ ರಾಠೋಡ ನೆರವು-ಮಾರ್ಗದರ್ಶನ ನೀಡಿದ ಪ್ರತಿಫಲ 'ಸಾಂಗತ್ಯ' ಪ್ರಕಾಶನ ಪ್ರಾರಂಭವಾಯಿತು. ಅಚ್ಚುಕಟ್ಟಾಗಿ 'ಎತ್ತಣ ಮಾಮರ,ಎತ್ತಣ ಕೋಗಿಲೆ' ಪ್ರವಾಸ ಕಥನ ಮುದ್ರಣಗೊಂಡಿತು.
ವಿಕ್ರಾಂತದ ಬಸವರಾಜು ಕಾಳಜಿ ವಹಿಸಿ ಅಚ್ಚುಹಾಕಿಸಿದರು. ಅವಸರದಲ್ಲಿ ಪುಸ್ತಕ ಶ್ರೀಮಠದ ಶಿವಾನುಭವದಲ್ಲಿ ಡಾ. ಗಿರೆಡ್ಡಿ ಅವರಿಂದ ಲೋಕಾರ್ಪಣೆ ಆಯಿತು. ಹಿರಿಯ ಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ ಪುಸ್ತಕ ಕಳಿಸಿ, ಖುಷಿ ಅನ್ನಿಸುವ ಪ್ರತಿಕ್ರಿಯೆ ಗಳಿಸಿಕೊಂಡೆ.
ಬೆಳಗಾವಿ ಜಿಲ್ಲೆಯ ಹಾರೋಗೆರಿಯ ಆಜೂರಪ್ರತಿಷ್ಠಾನ 2009 ರ ಶ್ರೇಷ್ಠ ಪುಸ್ತಕ ಪ್ರಶಸ್ತಿಯನ್ನು ನೀಡಿದೆ. ಇಂಗ್ಲೆಂಡ್ ಪ್ರವಾಸ ಕಥನ ಅನೇಕರಿಗೆ ನನ್ನ ಬರಹವನ್ನು ಪರಿಚಯಿಸಿತು. ಸಾಂಗತ್ಯ ಪ್ರಕಾಶನ ನಿಧಾನವಾಗಿ ಬೆಳೆಯಲಾರಂಭಿಸಿದೆ. ವೀಣಾ ಕುಲಕರ್ಣಿಯವರ 'ಕನ್ಯಾದಾನ ನಾಟಕ', ಚಿದಾನಂದ ಕಮ್ಮಾರವರ 'ಒಲವ ಋಣ ಭಾರ ಹೊತ್ತು' ಕವನ ಸಂಕಲನವನ್ನು ಈಗ ಸಾಂಗತ್ಯ ಪ್ರಕಾಶಿಸಿದೆ. ಪ್ರತಿ ವರ್ಷ ಕನಿಷ್ಠ 5 ಪುಸ್ತಕಗಳನ್ನು ಪ್ರಕಟಿಸುವುದರೊಂದಿಗೆ,
ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಪುರಸ್ಕಾರವನ್ನು ನೀಡಲು ನಿರ್ಧರಿಸಲಾಗಿದೆ.
ಒಂದು ಶಕ್ತಿಶಾಲಿ ಬೀಜ ಉತ್ತಮ ನೆಲದಲ್ಲಿ ಬಿತ್ತಿದರೆ ಅದು ಚಿಗುರಿ ಬೆಳೆಯುವ ಸಂಭ್ರಮ ಅಚ್ಚರಿ ಎನಿಸುತ್ತದೆ. ಸಾಂಗತ್ಯ ಬೆಳೆಸುವ ಅದರೊಟ್ಟಿಗೆ ಬೆಳೆಯುವ ಕನಸು ನನ್ನದು. ಸಿದ್ಧಲಿಂಗ ಪಟ್ಟಣಶೆಟ್ಟಿ ಕಾವ್ಯ ಪುರಸ್ಕಾರಕ್ಕೆ ಸುಮಾರು 50 ಕವನ ಸಂಕಲನಗಳು ಬಂದಿವೆ. ಮೇ 26 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ನನ್ನ ಪುಸ್ತಕಗಳು ಪ್ರಕಟಗೊಳ್ಳಲು ಸಾಂಗತ್ಯ ಉತ್ತೇಜನ ನೀಡುತ್ತದೆ. ಸಾಂಗತ್ಯ ಪ್ರಕಾಶನಕ್ಕೆ ನಿ,ಮ್ಮ ಮಾರ್ಗದರ್ಸನ ಸಲಹೆ ಬಯಸುತ್ತೇನೆ. ಪ್ರವಾಸ ಕಥನದ ಲೇಖನಗಳನ್ನು ಸುಂದರ ಫೋಟೊಗಳನ್ನು ನಿಮ್ಮ ಖುಷಿಗಾಗಿ ಬ್ಲಾಗ್ ನಲ್ಲಿ ಪ್ರಕಟಿಸುತ್ತೇನೆ. ದಯವಿಟ್ಟು ಸ್ಪಂದಿಸಿ ರವಾನಿಸಿರಿ.

Thursday, March 11, 2010

ಪ್ರೀತಿ-ಪ್ರಣಯದ ಪಿಸುಮಾತಿನ ಧ್ಯಾನ


ನನಗೀಗ ವಯಸ್ಸಾಯ್ತಾ ಹೇಗೊ? ಎಂಬ ಅನುಮಾನ ಶುರು ಆಗಿದೆ. ಬ್ಲಾಗನಲ್ಲಿ ನೀಟಾಗಿ ಪರಿಚಯ ಕೊಟ್ಟ ಮೇಲೆ ಗೊತ್ತಾಗಿರಬೇಕಲ್ಲ? ಮುಂದಿನ ತಿಂಗಳು 12ಕ್ಕೆ 45ರ ಹರೆಯ.
ಪ್ರೀತಿಯ ಅಲೆಗಳು ತಣ್ಣಗಾದವೇನೊ ಎಂದು ಆಲೋಚಿಸುವಂತಾಗುತ್ತದೆ.
ನೆರೆ ಕೂದಲು, ಊದಿಕೊಂಡ ದೇಹ, ಒತ್ತಡದ ಸ್ಥಿತಿಯಲ್ಲಿಯೂ ಪ್ರೀತಿಗೆ ಜೀವನೊತ್ಶಾಹ ತುಂಬಿ ಕೊಡುವ ಶಕ್ತಿಯಿದೆ ಎನ್ನುವದನ್ನು ಅಲ್ಲಗಳೆಯಲಾಗುವದಿಲ್ಲ. ಹಳೆಯ ನೆನಪುಗಳು, ಮಧುರವಾಗಿ ಕಳೆದ ಕ್ಷಣಗಳನ್ನು ಮೆಲಕು ಹಾಕುವ ಅವಕಾಶ ಸಿಕ್ಕಾಗ ಜೀವನೊತ್ಸಾಹ ಚಿಮ್ಮುತ್ತದೆ .
ಹೀಗೊಂದು ಖುಷಿಗೆ ಕಾರಣವಾದದ್ದು ಗೆಳತಿಯೊಂದಿಗಿನ ಸಣ್ಣ ಭೇಟಿ. ಅನಿರೀಕ್ಷಿತವಾಗಿ ಒಂದೆಡೆ ಸಿಕ್ಕ ಗೆಳತಿಯ ಕೆನ್ನೆಯ ಮೇಲಿನ ನಗುವಿನ ಮಧ್ಯ ಕಾಣಿಸಿಕೊಂಡ ಡಿಂಪಲ್ ನನ್ನ ಜೀವನೊತ್ಸಹವನ್ನು ಹೆಚ್ಚಿಸಿತು. ಹರೆಯದ ದಿನಗಳು ಧುಮಿಕಿದಂತಾಯಿತು. ಆಗ ಮನಸ್ಸಿನ ಶಕ್ತಿಯ ಅರಿವಾಯಿತು. ಅಲ್ಲಲ್ಲಿ ನೆರೆತು ಹೋದ ಕೂದಲುಗಳ ಮೇಲೆ ಆವರಿಸಿದ ಮೇಹಂದಿ ಡೈ ನನ್ನ ಕಣ್ಣಿಗೆ ರಾಚದೆ ಹಳೆ ದಿನಗಳ ಅಕೆಯ ಸೌಂದರ್ಯವೇ ಗೋಚರವಾದದ್ದು ಅಚ್ಚರಿಯೆನಿಸಿತು.
ಬಾಲ್ಯದ ಹರೆಯದ ಗೆಳೆಯರನ್ನು ವಸ್ಸಾದವರಂತೆ ಯಾಕೆ ಕಲ್ಪಿಸಲಾಗುವುದಿಲ್ಲ, ಸ್ವಿಕರಿಸಲಾಗುವುದಿಲ್ಲ ಎಂಬ ಅಚ್ಚರಿ ಕಾಡಿತು.
ಸಾಧನೆಗಳ ಹೊರೆ ಹೊತ್ತು ನಿಂತ ಗೆಳತಿಗೆ ಅಭಿನಂದಿಸುವಾಗ ಸಲಿಗೆಯ ಸೌಜನ್ಯವಿತ್ತೇ ವಿನಹ ಅನಗತ್ಯ ಗೌರವ ಭಾವ ಇರಲಿಲ್ಲ. ಆದರೂ ಆಗಾಗ ಇಣುಕುತ್ತಿದ್ದ ಮಡಿವಂತಿಕೆಯ ಅಂತರದ ಗೋಡೆ ಅಡ್ಡಿಯಾಗಲಿಲ್ಲ. ಗಂಟೆಗಟ್ಟಲೆ ಚರ್ಚಿಸಿ ಖುಷಿಯಿಂದ ಹೊರಬರುವಾಗ ಅರೆ ನನಗಿನ್ನು ವಯಸ್ಸಾಗಿಲ್ಲ!. ಜೀವನೊತ್ಸಾಹವೆನ್ನುವುದು ದೇಹದಲ್ಲಿಲ್ಲ ಮನಸ್ಸಿನಲ್ಲಿದೆ ಎಂಬ ಸತ್ಯ ನಿಚ್ಚಳವಾಯಿತು.
ಇನ್ನು ಮುಂದೆ ನನಗೆ ವಯಸ್ಸಾಗಿದೆ ಎಂದು ಆರೋಪಿಸಿಕೊಳ್ಳುವುದಿಲ್ಲ. ಜೀವನೊತ್ಸಾಹ ರಿಚಾರ್ಜ ಮಾಡಿಕೊಳ್ಳಲು ಹರೆಯದ ಗೆಳೆಯರನ್ನು ಹುಡುಕಿಕೊಂಡು ಹೋಗಲು ನಿರ್ಧರಿಸಿದ್ದೇನೆ. ನೀವು ಬರುವಿರಾ?

Tuesday, March 9, 2010


76 ನೇಯ ಸಾಹಿತ್ಯ ಸಮ್ಮೇಳನದ ಸಾವಿರದ ನೆನಪ ಹನಿಗಳು.
ಅಂದುಕೊಂಡದ್ದಕ್ಕಿಂತಲೂ ಸಮ್ಮೇಳನ ಯಶಸ್ವಿಯಾಗಿದೆ. ಸೋತಿದ್ದರೆ ನೂರಾರು ಕಾರಣ ಕೊಡಬಹುದಿತ್ತು. ಆದರೆ ಈಗ ಗೆದ್ದುಬಿಟ್ಟಿದ್ದೇವೆ. ಹೀಗಾಗಿ ಖುಷಿ ಪಡುವುದೊಂದೆ ನಮ್ಮ ಕೆಲಸ. ಯಶಸ್ಸನ್ನು ನಿಧಾನವಾಗಿ ಸಂಭ್ರಮಿಸುತ್ತಿದ್ದೇವೆ.
ಅನೇಕರು ಕೇಳುತ್ತಲೇ ಇದ್ದಾರೆ------- ಇಷ್ಟೊಂದು ಯಶಸ್ಸಿಗೆ ಕಾರಣ ಏನಿರಬಹುದು ಎಂದು?
ನಮ್ಮ ಪೂರ್ವಯೋಜನೆ, ಪೂರ್ವ ತಯಾರಿ ಬಗ್ಗೆ ಯಾರಾದರು ಕೇಳಿದರೆ ಸಂಕೋಚವಾಗುತ್ತದೆ. ಪೂರ್ವತಯಾರಿ ಆಗಬೇಕಾದಷ್ಟು ಆಗಿರಲಿಲ್ಲ ಎಂಬುದು ಅಷ್ಟೇ ಸತ್ಯ. ಆದರೆ ನೀರಿಕ್ಷೆ ಮೀರಿದ ಯಶಸ್ಸು ಸಿಕ್ಕಿದ್ದು ನಮ್ಮ ಸುದೈವ!
ಮಾಧ್ಯಮ ಮಿತ್ರರಿಗೆ, ಸಾಹಿತ್ಯಾಸಕ್ತರಿಗೆ ತಮಾಷೆಯಾಗಿ ಹೇಳಿದೆ---- ನೋಡಿ ಇದು ಒಬ್ಬ ಪ್ರತಿಭಾವಂತ ವಿದ್ಯಾಥಿð ಸರಿಯಾಗಿ ಅಭ್ಯಾಸ ಮಾಡದೇ Rank ಬಂದ ಹಾಗೆ ಆಗಿದೆ. ಪರೀಕ್ಷೆ ಚೆನ್ನಾಗಿ ಬರೆಯುವ ಮನಸ್ಸೇನೊ ಇತ್ತು ಆದರೆ ಓದಲು ಸಮಯ ಸಿಗಲಿಲ್ಲ. ಸುದೈವದಿಂದ ಪ್ರಶ್ನೆ ಪತ್ರಿಕೆ ಸರಳವಾಗಿತ್ತು. ಸಮಥðವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿ Rank ಬಂತು ಎಂಬಂತಾಗಿದೆ ನಮ್ಮ ಪಾಡು. ಏನೇ ಆಗಲಿ ಈಗ ಗೆಲುವು ನಮ್ಮದು.
ಈ ಗೆಲುವಿಗೆ ಅನೇಕರು ಪ್ರಾಮಾಣಿಕವಾಗಿ, ಆಸ್ಥೆಯಿಂದ ದುಡಿದಿದ್ದಾರೆ. ಪ್ರವಾಹ ಸಂಕಷ್ಟದಿಂದ ಸಮ್ಮೇಳನ ಮುಂದೂಡಿದಾಗ ಎಲ್ಲರಿಗೂ ಆತಂಕ. ಹೇಗಾದರೂ ಆಗಲಿ ಎಂಬ ನಿಲುವು. ಕೇವಲ 15 ದಿನಗಳಲ್ಲಿ ಸರಕಾರಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶ್ರಮಿಸಿದರೆ, ನಾಗರಿಕರು, ಸಾಹಿತ್ಯಾಸಕ್ತರು ಶಾಸಕ ಮಿತ್ರರಾದ ಶ್ರೀಶೈಲಪ್ಪ ಬಿದರೂರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಅವರ ಮುಂಚುಣಿಯಲ್ಲಿ ಶ್ರಮಿಸಿದರು. ಊಟದ ಉಸ್ತುವಾರಿ ನಿರ್ವಹಿಸಿದ ವ್ಯಾಪಾರೋದ್ಯಮಿ ಸ್ನೇಹಿತರ ಕಾರ್ಯ ಅಭಿನಂದನೀಯ. ಪ್ರತಿದಿನ ಒಂದು ಲಕ್ಷ ಜನರಿಗೆ ಊಟ, ಶುದ್ಧವಾದ ಕುಡಿಯುವ ನೀರನ್ನು ನಿರಾಂತಕವಾಗಿ ಪೂರೈಸಿದ್ದರಿಂದಲೇ ಸಮ್ಮೇಳನ ಯಶಸ್ವಿಯಾಗಿದೆ.
ವಸತಿ ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು. ಎಲ್ಲದಕ್ಕಿಂತಲೂ ಮುಖ್ಯವಾಗಿ ಮಾಧ್ಯಮ ಸ್ನೇಹಿತರ ಸಹಕಾರಕ್ಕೆ ನಾವು ಋಣಿಯಾಗಿದ್ದೇವೆ.
ಆದ ಸಣ್ಣ - ಪುಟ್ಟ ದೋಷಗಳನ್ನು ಲೆಕ್ಕಿಸದೇ ಸಕಾರಾತ್ಮಕ ಸಂಗತಿಗಳನ್ನು ಬಿಂಬಿಸಿದ್ದಕ್ಕಾಗಿ, ಜನ ಹೆಚ್ಚು ಸೇರಲು ಕಾರಣವಾಯಿತು. ಎಲ್ಲರೂ ಪತ್ರಿಕೆಗಳ ಅಭಿಪ್ರಾಯಕ್ಕೆ ಕಾಯುತ್ತಾಇದ್ದರು. ಎರಡು ಹಾಗೂ ಮೂರನೇ ದಿನ ಹೆಚ್ಚು ಜನ ಪ್ರವಾಹ ಹರಿದು ಬರಲು ಮಾಧ್ಯಮ ವರದಿಗಳೇ ಕಾರಣ.
ಈ ಬಾರಿ ಬ್ಲಾಗ್ ಮೂಲಕವು ಅನೇಕ ಮಿತ್ರರು ಸಮ್ಮೇಳನವನ್ನು ಕಾಲಕಾಲಕ್ಕೆ ವರದಿ ಮಾಡಿದ್ದಾರೆ.
ನಲ್ವತ್ತಕ್ಕೂ ಹೆಚ್ಚು ಉಪಸಮಿತಿಗಳು, ಇಪ್ಪತ್ತೆರೆಡು ಸರಕಾರಿ ಇಲಾಖೆಯವರ ಸಮಿತಿಗಳು ತುಂಬಾ ಪರಿಶ್ರಮ ಪಟ್ಟಿದ್ದಾರೆ.
ಈಗ ಒಂದು ವಾರದ ನಂತರ ನಮ್ಮ ನಾಡಿನ ಹಿರಿಯ ಸಂಪಾದಕರು ಒಂದೆರಡು ತಕರಾರುಗಳನ್ನು ಎತ್ತಿದ್ದಾರೆ. ಅವು ಸಮಂಜಸವೆನಿಸಿದರೂ ಉತ್ತರ ಕೊಡುವುದು ಅನಿವಾರ್ಯವೆನಿಸುತ್ತದೆ. ನನ್ನ ನಂತರದ ಲೇಖನಗಳಲ್ಲಿ ನಮ್ರವಾಗಿ ಪ್ರತಿಕ್ರಿಯಿಸುತ್ತೇನೆ. ಸಮ್ಮೇಳನಾಧ್ಯಕ್ಷರಿಗೆ ಸಲ್ಲಿಸಿದ 11,11,111 (ಹನ್ನೊಂದು ಲಕ್ಷ ಹನ್ನೊಂದು ಸಾವಿರ ನೂರ ಹನ್ನೊಂದು ರೂಪಾಯಿಗಳು) ಕಾಣಿಕೆ ಬಗ್ಗೆ ಸಣ್ಣ ಚರ್ಚೆ ನಡೆದಿದೆ.
ನಾವು ಕೆಲವು ಸ್ನೇಹಿತರು ತುಂಬಾ ಚರ್ಚಿಸಿ ಅನಿವಾರ್ಯವೆನಿಸಿದ್ದರಿಂದ ಹೆಚ್ಚು ಎನಿಸಬಹುದಾದ ಮೊತ್ತವನ್ನು ನೀಡಿದ್ದೇವೆ. ಈಗ ಅದನ್ನು ಸ್ವಿಕರಿಸಿದವರಿಗೆ ಕಿರಿ,ಕಿರಿ ಅನಿಸುವ ಮಾತುಗಳನ್ನು ಆಡುವುದು, ಯಾಕೋ ಸರಿ ಅನಿಸುತ್ತಿಲ್ಲ. ಈ ಕುರಿತು ಶ್ರೀಮತಿ ಗೀತಕ್ಕ ಅವರು ನೊಂದುಕೊಳ್ಳುವುದು
ಬೇಡ. ನಮಗೆ ಅಗತ್ಯವೆನಿಸಿದ್ದನ್ನು ನಾವು ಪಡೆದುಕೊಂಡಾಗ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಅಧ್ಯಕ್ಷರಿಗೆ ಇದೇ ಮೊತ್ತದ ಹಣ ಕೊಡಬೇಕಾದ ಅನಿವಾರ್ಯತೆ ಬರಲಿಕ್ಕಿಲ್ಲ. ಅದರ ಅಗತ್ಯವೂ ಇಲ್ಲ. ಕೊಡುವುದನ್ನು ನಾವು ಪ್ರೀತಿಯಿಂದ ಕೊಟ್ಟಿದ್ದೇವೆ. ಅದು ಸದ್ಭಳಕೆಯಾಗಲಿ ಎಂಬ ಆಶಯ ನಮ್ಮದು.

76 ನೇ ಸಾಹಿತ್ಯ ಸಮ್ಮೆಳನ ಒಂದು ನೆನಪು




ಹೌದು ಇವರಿಲ್ಲದಿದ್ದರೆ ನಮ್ಮ ಆಲೆಮನೆ ತಂಡ ಗದುಗಿನಲ್ಲಿ ಪಡಬಾರದ ಕಷ್ಟ ಪಡಬೇಕಿತ್ತು. ಇವರ ಹೆಸರು ಸಿದ್ದು ಯಾಪಲಪರವಿ. ಗದುಗಿನಲ್ಲಿ ಇಂಗ್ಲೀಷ್ ಪ್ರೊಫೆಸ್ಸರ್. ಆದರೆ ಸಾಹಿತ್ಯ ಕೃಷಿ ಕನ್ನಡದಲ್ಲಿ. ನಾನು ವಿಕ್ರಾಂತ ಕರ್ನಾಟಕಕ್ಕೆ ಬರೆಯುತ್ತಿದ್ದ ಕಾಲಕ್ಕೆ ಸಣ್ಣ ಪರಿಚಯವಾಗಿದ್ದ ನಮ್ಮಿಬ್ಬರ ಸ್ನೇಹ ಗದುಗಿನ ಟ್ರಿಪ್ ಆದಮೇಲೆ ಆತ್ಮೀಯತೆಗೆ ಬೆಳೆದಿದೆ. ನಾವು ಹೋಗುವಷ್ಟರಲ್ಲಿ ನಮ್ಮ ತಂಡಕ್ಕೆ, ಎರಡು ರೂಮು, ಓಡಾಡಲಿಕ್ಕೆ ಒಂದು ಗಾಡಿ, ಊಟ, ಮಾಧ್ಯಮ ಕೇಂದ್ರದ ವ್ಯವಸ್ಥೆ ಎಲ್ಲವನ್ನೂ ಮಾಡಿಕೊಟ್ಟು ಮನೆಯ ಅಥಿತಿಗಳಂತೆ ನಮ್ಮನ್ನು ನೋಡಿಕೊಂಡ ಗದುಗಿನ ನಮ್ಮ ಗಾಡ್ ಫಾದರ್ - ಸಿದ್ದು ಯಾಪಲಪರವಿ ಸಾಹೇಬರು!
ತುಂಬಾನೇ ಥ್ಯಾಂಕ್ಸು ಸಾರ್!
ಸಮ್ಮೇಳನದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಮನೆಯ ಹಬ್ಬದಂತೆ ಪಾಲ್ಗೊಂಡವರು ಸಿದ್ದು ಯಾಪಲಪರವಿ ಅವರು. ಸಮ್ಮೇಳನದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳ ನಿರೂಪಣೆ ಸಿದ್ದು ಅವರದೇ. ಎಲ್ಲೂ ಬೋರಾಗದಂತೆ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರುವಂತೆ ನಡೆಸಿಕೊಟ್ಟಿದಕ್ಕೆ ಅಭಿನಂದನೆಗಳು.
- ಆದಿತ್ಯ
76 ನೇಯ ಸಾಹಿತ್ಯ ಸಮ್ಮೇಳನದ ಸಾವಿರದ ನೆನಪ ಹನಿಗಳು.
ಅಂದುಕೊಂಡದ್ದಕ್ಕಿಂತಲೂ ಸಮ್ಮೇಳನ ಯಶಸ್ವಿಯಾಗಿದೆ. ಸೋತಿದ್ದರೆ ನೂರಾರು ಕಾರಣ ಕೊಡಬಹುದಿತ್ತು. ಆದರೆ ಈಗ ಗೆದ್ದುಬಿಟ್ಟಿದ್ದೇವೆ. ಹೀಗಾಗಿ ಖುಷಿ ಪಡುವುದೊಂದೆ ನಮ್ಮ ಕೆಲಸ. ಯಶಸ್ಸನ್ನು ನಿಧಾನವಾಗಿ ಸಂಭ್ರಮಿಸುತ್ತಿದ್ದೇವೆ.
ಅನೇಕರು ಕೇಳುತ್ತಲೇ ಇದ್ದಾರೆ------- ಇಷ್ಟೊಂದು ಯಶಸ್ಸಿಗೆ ಕಾರಣ ಏನಿರಬಹುದು ಎಂದು?
ನಮ್ಮ ಪೂರ್ವಯೋಜನೆ, ಪೂರ್ವ ತಯಾರಿ ಬಗ್ಗೆ ಯಾರಾದರು ಕೇಳಿದರೆ ಸಂಕೋಚವಾಗುತ್ತದೆ. ಪೂರ್ವತಯಾರಿ ಆಗಬೇಕಾದಷ್ಟು ಆಗಿರಲಿಲ್ಲ ಎಂಬುದು ಅಷ್ಟೇ ಸತ್ಯ. ಆದರೆ ನೀರಿಕ್ಷೆ ಮೀರಿದ ಯಶಸ್ಸು ಸಿಕ್ಕಿದ್ದು ನಮ್ಮ ಸುದೈವ!
ಮಾಧ್ಯಮ ಮಿತ್ರರಿಗೆ, ಸಾಹಿತ್ಯಾಸಕ್ತರಿಗೆ ತಮಾಷೆಯಾಗಿ ಹೇಳಿದೆ---- ನೋಡಿ ಇದು ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಸರಿಯಾಗಿ ಅಭ್ಯಾಸ ಮಾಡದೇ ಬಂದ ಹಾಗೆ ಆಗಿದೆ. ಪರೀಕ್ಷೆ ಚೆನ್ನಾಗಿ ಬರೆಯುವ ಮನಸ್ಸೇನೊ ಇತ್ತು ಆದರೆ ಓದಲು ಸಮಯ ಸಿಗಲಿಲ್ಲ. ಸುದೈವದಿಂದ ಪ್ರಶ್ನೆ ಪತ್ರಿಕೆ ಸರಳವಾಗಿತ್ತು. ಸಮಥðವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿ gÁåAಕ ಬಂತು ಎಂಬಂತಾಗಿದೆ ನಮ್ಮ ಪಾಡು. ಏನೇ ಆಗಲಿ ಈಗ ಗೆಲುವು ನಮ್ಮದು.
ಈ ಗೆಲುವಿಗೆ ಅನೇಕರು ಪ್ರಾಮಾಣಿಕವಾಗಿ, ಆಸ್ಥೆಯಿಂದ ದುಡಿದಿದ್ದಾರೆ. ಪ್ರವಾಹ ಸಂಕಷ್ಟದಿಂದ ಸಮ್ಮೇಳನ ಮುಂದೂಡಿದಾಗ ಎಲ್ಲರಿಗೂ ಆತಂಕ. ಹೇಗಾದರೂ ಆಗಲಿ ಎಂಬ ನಿಲುವು. ಕೇವಲ 15 ದಿನಗಳಲ್ಲಿ ಸರಕಾರಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶ್ರಮಿಸಿದರೆ, ನಾಗರಿಕರು, ಸಾಹಿತ್ಯಾಸಕ್ತರು ಶಾಸಕ ಮಿತ್ರರಾದ ಶ್ರೀಶೈಲಪ್ಪ ಬಿದರೂರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಅವರ ಮುಂಚುಣಿಯಲ್ಲಿ ಶ್ರಮಿಸಿದರು. ಊಟದ ಉಸ್ತುವಾರಿ ನಿರ್ವಹಿಸಿದ ವ್ಯಾಪಾರೋದ್ಯಮಿ ಸ್ನೇಹಿತರ ಕಾರ್ಯ ಅಭಿನಂದನೀಯ. ಪ್ರತಿದಿನ ಒಂದು ಲಕ್ಷ ಜನರಿಗೆ ಊಟ, ಶುದ್ಧವಾದ ಕುಡಿಯುವ ನೀರನ್ನು ನಿರಾಂತಕವಾಗಿ ಪೂರೈಸಿದ್ದರಿಂದಲೇ ಸಮ್ಮೇಳನ ಯಶಸ್ವಿಯಾಗಿದೆ.
ವಸತಿ ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು. ಎಲ್ಲದಕ್ಕಿಂತಲೂ ಮುಖ್ಯವಾಗಿ ಮಾಧ್ಯಮ ಸ್ನೇಹಿತರ ಸಹಕಾರಕ್ಕೆ ನಾವು ಋಣಿಯಾಗಿದ್ದೇವೆ.
ಆದ ಸಣ್ಣ - ಪುಟ್ಟ ದೋಷಗಳನ್ನು ಲೆಕ್ಕಿಸದೇ ಸಕಾರಾತ್ಮಕ ಸಂಗತಿಗಳನ್ನು ಬಿಂಬಿಸಿದ್ದಕ್ಕಾಗಿ, ಜನ ಹೆಚ್ಚು ಸೇರಲು ಕಾರಣವಾಯಿತು. ಎಲ್ಲರೂ ಪತ್ರಿಕೆಗಳ ಅಭಿಪ್ರಾಯಕ್ಕೆ ಕಾಯುತ್ತಾಇದ್ದರು. ಎರಡು ಹಾಗೂ ಮೂರನೇ ದಿನ ಹೆಚ್ಚು ಜನ ಪ್ರವಾಹ ಹರಿದು ಬರಲು ಮಾಧ್ಯಮ ವರದಿಗಳೇ ಕಾರಣ.
ಈ ಬಾರಿ ಬ್ಲಾಗ್ ಮೂಲಕವು ಅನೇಕ ಮಿತ್ರರು ಸಮ್ಮೇಳನವನ್ನು ಕಾಲಕಾಲಕ್ಕೆ ವರದಿ ಮಾಡಿದ್ದಾರೆ.
ನಲ್ವತ್ತಕ್ಕೂ ಹೆಚ್ಚು ಉಪಸಮಿತಿಗಳು, ಇಪ್ಪತ್ತೆರೆಡು ಸರಕಾರಿ ಇಲಾಖೆಯವರ ಸಮಿತಿಗಳು ತುಂಬಾ ಪರಿಶ್ರಮ ಪಟ್ಟಿದ್ದಾರೆ.
ಈಗ ಒಂದು ವಾರದ ನಂತರ ನಮ್ಮ ನಾಡಿನ ಹಿರಿಯ ಸಂಪಾದಕರು ಒಂದೆರಡು ತಕರಾರುಗಳನ್ನು ಎತ್ತಿದ್ದಾರೆ. ಅವು ಸಮಂಜಸವೆನಿಸಿದರೂ ಉತ್ತರ ಕೊಡುವುದು ಅನಿವಾರ್ಯವೆನಿಸುತ್ತದೆ. ನನ್ನ ನಂತರದ ಲೇಖನಗಳಲ್ಲಿ ನಮ್ರವಾಗಿ ಪ್ರತಿಕ್ರಿಯಿಸುತ್ತೇನೆ. ಸಮ್ಮೇಳನಾಧ್ಯಕ್ಷರಿಗೆ ಸಲ್ಲಿಸಿದ 11,11,111 (ಹನ್ನೊಂದು ಲಕ್ಷ ಹನ್ನೊಂದು ಸಾವಿರ ನೂರ ಹನ್ನೊಂದು ರೂಪಾಯಿಗಳು) ಕಾಣಿಕೆ ಬಗ್ಗೆ ಸಣ್ಣ ಚರ್ಚೆ ನಡೆದಿದೆ.
ನಾವು ಕೆಲವು ಸ್ನೇಹಿತರು ತುಂಬಾ ಚರ್ಚಿಸಿ ಅನಿವಾರ್ಯವೆನಿಸಿದ್ದರಿಂದ ಹೆಚ್ಚು ಎನಿಸಬಹುದಾದ ಮೊತ್ತವನ್ನು ನೀಡಿದ್ದೇವೆ. ಈಗ ಅದನ್ನು ಸ್ವಿಕರಿಸಿದವರಿಗೆ ಕಿರಿ,ಕಿರಿ ಅನಿಸುವ ಮಾತುಗಳನ್ನು ಆಡುವುದು, ಯಾಕೋ ಸರಿ ಅನಿಸುತ್ತಿಲ್ಲ. ಈ ಕುರಿತು ಶ್ರೀಮತಿ ಗೀತಕ್ಕ ಅವರು ನೊಂದುಕೊಳ್ಳುವುದು
ಬೇಡ. ನಮಗೆ ಅಗತ್ಯವೆನಿಸಿದ್ದನ್ನು ನಾವು ಪಡೆದುಕೊಂಡಾಗ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಅಧ್ಯಕ್ಷರಿಗೆ ಇದೇ ಮೊತ್ತದ ಹಣ ಕೊಡಬೇಕಾದ ಅನಿವಾರ್ಯತೆ ಬರಲಿಕ್ಕಿಲ್ಲ. ಅದರ ಅಗತ್ಯವೂ ಇಲ್ಲ. ಕೊಡುವುದನ್ನು ನಾವು ಪ್ರೀತಿಯಿಂದ ಕೊಟ್ಟಿದ್ದೇವೆ. ಅದು ಸದ್ಭಳಕೆಯಾಗಲಿ ಎಂಬ ಆಶಯ ನಮ್ಮದು.