Monday, October 17, 2016

ಹಳವಂಡ ಸುಮ್ಮನೇ ಆಗುವುದಿಲ್ಲ

ಹಳವಂಡ ಸುಮ್ಮನೇ ಆಗುವುದಿಲ್ಲ
ನಾವೇ ಕೆರೆದು ಗಾಯ ಮಾಡಿಕೊಳ್ಳುತ್ತೇವೆ
ಕೆರೆದೆರೆ ಗಾಯ ಎಂಬ ಸತ್ಯದ ಅರಿವು
ಸವಿಸುಖವಲ್ಲ ಆದರೂ ಕರೆಯದೇ ಕೆರೆದು
ಗಾಯದ ಹಿತ ಅನುಭವಿಸಲು
ಚಡಪಡಿಸುತ್ತೇವೆ.

ಮನಸೆಂಬ ಮಾಯಾಜಾಲದ ಸುಳಿಯಲಿ
ಮೋಹದಾಟದಲಿ ಮೈಮರೆತು ಪುಳಕ
ಗೊಳ್ಳುವ ಚಪಲ
ನನ್ನದಲ್ಲದ , ನನಗೆ ದಕ್ಕದ ಮಾಯಾವಿಯ
ಕಿಲ ಕಿಲ ನಗುವಿನ ತುಟಿಗೆ
ಗುಳಿ ಕೆನ್ನೆಯ ತಿರುವಿನಲಿಯೇ ಗರ ಗರ
ಗಿರಕಿಯ ತಿರುಗುಣಿಯಲಿ ತಿರುಗಿ ಎತ್ತಿ
ಒಗೆದಾಗ ವಾಸ್ತವದರಿವು.

ದೇಹ-ಮನಸು ಹಿಂಡಿ ಹಿಪ್ಪೆಯಾದ
ಸಿಪ್ಪೆಗಳಲಿ ಕಳಕೊಂಡ ಕಾರಣ ಹುಡುಕುವ
ಧ್ಯಾನಸ್ಥ ಸ್ಥಿತಿಯಲಿ ಮರುಕಳಿಸುವ
ಅನರ್ಥ ವ್ಯಥೆ.

ಈ ಭಾವನಾತ್ಮಕ ಶೋಷಣೆಗೆ ಸ್ವಯಂ
ಬಲಿಪಶು
ಮನದ ಈ ಕಳ್ಳ-ಮಳ್ಳಾಟಕೆ ಯಾರಿಲ್ಲ
ಸಾಕ್ಷಿ ಮನಸಾಕ್ಷಿಯ ಮುಂದೆ ನಾ
ಯಾವಾಗಲೂ ಹಿಂದೆ.

ಹೀಗೆ ಆಗಾಗ ಅರಿವಿದ್ದೂ ಬೀಳುವೆ
ಮಾಯಾಜಾಲದ ಸುಳಿಯಲಿ
ಎತ್ತಿ ಕೊಳ್ಳಪಟ್ಟಿ ಹಿಡಿದು ಚಟಾರನೇ
ಬಾರಿಸಿದಂತೆ ಭಾಸವಾದಾದಾಗ
ಹೌಹಾರಿ ಎಚ್ಚರಾಗಿ ದುಃಖಿಸುತ
ನನ್ನ ಮೈಮನಗಳ ನಾನೇ ದಡವಿ
ಸಮಾಧಾನಿಸುತ್ತೇನೆ ಸಾಕೀ ಮಳ್ಳಾಟ
ಮಲಗು ಮನವೇ ಎಂದು
ಎಚ್ಚರಿಕೆಯಲಿ ಮುಲುಗದೇ
ತಣ್ಣಗೆ ಮಗುವಾಗಿ ಮಲಗುತ್ತೇನೆ.

----ಸಿದ್ದು ಯಾಪಲಪರವಿ

Sunday, October 9, 2016

ಕನಸುಗಳು

ಕನಸುಗಳೇ  ವಿಚಿತ್ರ

ನಿದ್ರೆಯಲಿ ಒಮ್ಮೊಮ್ಮೆ ತೀವ್ರವಾಗಿ ಕಾಡುವ ಕನಸುಗಳಿಗೆ ಬೆಚ್ಚಿ ಬೀಳುವಂತಾಗುತ್ತದೆ. ತರ್ಕಾತೀತವಾಗಿರುವ ಕನಸುಗಳು ಯಾಕೆ ಬೀಳುತ್ತವೆಯೋ ಅರ್ಥವಾಗುವುದಿಲ್ಲ . ಮನೋವಿಜ್ಞಾನಿಗಳ ಅಭಿಪ್ರಾಯಗಳು ಕೂಡಾ ಒಮ್ಮತವಾಗಿಲ್ಲ.
ಭಯಾನಕವೆನಿಸುವ ಕನಸುಗಳು ನಮ್ಮನ್ನು ಬೆಚ್ಚಿಬೀಳಿಸಿ ಎಚ್ಚರಗೊಳಿಸಿಬಿಡುತ್ತವೆ ಹಾಗೆ ಎಚ್ಚರವಾದಾಗೆಲ್ಲ ಕನಸುಗಳ ಕಾರಣ ಹುಡುಕುತ್ತಲೇ ಇದ್ದೇನೆ.
ನನಗೆ ಬೀಳುವ ಕನಸುಗಳು ಸುದೀರ್ಘವಾಗಿರಲು ಗಾಢ ನಿದ್ರೆ ಕಾರಣವಿರಬಹುದು ಎನಿಸುತ್ತದೆ. ಎಷ್ಟೋ ಬಾರಿ ಮತ್ತೆ ಮಲಗಿದಾಗ ಅದೇ ಕನಸು ಮುಂದುವರೆದು ಬೆರಗುಂಟಾಗಿದೆ.
ಎಚ್ಚರಗೊಂಡ ನಂತರ ಅವುಗಳನ್ನು ಪರಾಮರ್ಶೆ ಮಾಡಿದ್ದೇನೆ ಆದರೆ ಉತ್ತರ ಸಿಗುತ್ತಲೇ ಇಲ್ಲ.
ಅಲ್ಲಿ ಬರುವ ವ್ಯಕ್ತಿಗಳು , ಸ್ಥಳಗಳು , ಘಟನೆಗಳು ವಿಚಿತ್ರ ಹಾಗೂ ಅಪರಿಚಿತವಾಗಿರುತ್ತವೆ.
Link less ಆಗಿ ಏನೇನೋ ಸಂಭವಿಸಿಬಿಡುತ್ತದೆ. ಕನಸಲಿ ಸತ್ತರೆ ಒಳ್ಳೆಯದು , ಹಬ್ಬದೂಟ ಮಾಡಬಾರದು ಇತ್ಯಾದಿ ಇತ್ಯಾದಿ ನಂಬಿಕೆಗಳಿವೆ.
ಶೇಕ್ಷಪಿಯರ್ ನಂತಹ ಮೇಧಾವಿ ಕನಸುಗಳ ಮಹತ್ವವನ್ನು ತನ್ನ ಕೃತಿಗಳಲ್ಲಿ ಬಳಸಿ ನನ್ನ ಕುತೂಹಲ ಹೆಚ್ಚಿಸಿದ್ದಾನೆ.
ಸ್ವಪ್ನಸ್ಖಲನದ ದಾಳಿಗೆ ತುತ್ತಾದಾಗ ಮನಸು ಕಸಿವಿಸಿಗೊಳ್ಳುವುದುಂಟು.
ಕನಸು ಬಿದ್ದು ಹೋಗುವ ಗಂಭೀರ ಸಂಗತಿ ಅಲ್ಲವಾದರೂ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ...

----ಸಿದ್ದು ಯಾಪಲಪರವಿ