Thursday, December 16, 2010

ಲೈಂಗಿಕಾನುಭವದ ಅಪಾಯಗಳು

ಈ ಘಟನೆ ತುಂಬಾ ಹಳೆಯದಾದರೂ ಆಗಾಗ ಕಾಡುತ್ತಲಿರುತ್ತದೆ. ನಮ್ಮೂರ ಕಡೆ ಬಾಲ್ಯದಲ್ಲಿ ಶಿಕ್ಷಕರು, ಪಾಲಕರು ಲೈಂಗಿಕ ಶಿಕ್ಷಣ ನೀಡಿದ್ದರೆ ಈ ರೀತಿಯ ಅಪಾಯಗಳು ತಪ್ಪುತ್ತಾ ಇದ್ದವೇನೋ ಅನಿಸುತ್ತದೆ.

ಎಂಟನೇ ತರಗತಿಯಲ್ಲಿ ಓದುವಾಗ ಗೆಳೆಯರೆಲ್ಲ ವಯಸ್ಸಿನಲ್ಲಿ ಒಂದೆರಡು ವರ್ಷ ದೊಡ್ಡವರಿದ್ದರು. ಆಗಾಗ ರಹಸ್ಯವಾಗಿ ತಮ್ಮ ಲೈಂಗಿಕಾನುಭವಗಳನ್ನು ರಸವತ್ತಾಗಿ ವರ್ಣಿಸುತ್ತಿದ್ದರು. ಕುತೂಹಲವದ್ದರೂ ಭಯವೆನಿಸುತ್ತಿತ್ತು.

೧೦ನೇ ವರ್ಗದಲ್ಲಿದ್ದ ಗೆಳೆಯನ ಮದುವೆ ಆಗಿತ್ತು. ಮನೆಯಲ್ಲಿ ಅಕ್ಕನ ಮಗಳನ್ನು ಮದುವೆ ಆಗೋ ಅನಿವಾರ್ಯ, ಖರ್ಚಿನಲ್ಲಿ ಖರ್ಚು ಎಂದು ಮದುವೆಯಾಗಿದ್ದ. ಹುಡುಗಿ ತುಂಬಾ ಚಿಕ್ಕವಳು ಆದ್ದರಿಂದ ಆತನ ಮದುವೆಗೆ ವಿಶೇಷತೆಯಿರಲಿಲ್ಲ.

ನನ್ನ ಗೆಳೆಯರು ಅವನ ಮದುವೆಯ ಸಂದರ್ಭದಲ್ಲಿ ಪಡೆದ ಪಾರ್ಟಿ ಕತೆ ಕೇಳಿದರೆ ಖಂಡಿತಾ ನೀವು ಬೆಚ್ಚಿ ಬೀಳುತ್ತೀರಿ.
ನಮ್ಮ ಜಿಲ್ಲೆಯ ಪಕ್ಕದ ಜಿಲ್ಲೆಯ ಒಂದು ಹಳ್ಳಿಯಲಿ ದೇವದಾಸಿ ಪದ್ಧತಿ ಜೀವಂತವಾಗಿತ್ತು. ಅಲ್ಲಿ ಕೆಲವು ಮನೆಗಳಲ್ಲಿ ವಿಚಿತ್ರ ರೀತಿಯ ವೇಶ್ಯಾವಾಟಿಕೆ ನಡೆಯುತ್ತಿತ್ತಂತೆ.

ನಮ್ಮ ನಾಲ್ಕಾರು ಜನ ಗೆಳೆಯರು ಮದುವೆಯಾದ ಹುಡುಗನೊಂದಿಗೆ ಆ ಊರಿಗೆ ಹೋಗುವ ಯೋಜನೆ ರೂಪಿಸಿಕೊಂಡಿದ್ದರು. ವಯಸ್ಸಿನಲ್ಲಿ ಕಿರಿಯನಾದ ನನ್ನನ್ನು ಅಲ್ಲಿಗೆ ಕರೆಯಲಿಲ್ಲ.

ಕಾರಟಗಿಂದ ಹೊಸಪೇಟೆಗೆ ಅಂಬಾಸಡರ್ ಕಾರಿನಲ್ಲಿ ಹೋಗಿ, ಬೀರು, ಕೋಳಿಯ ರುಚಿ ನೋಡಿ, ಅಂದೇ ರಾತ್ರಿ ಹೊಸಪೇಟೆ ದಾಟಿಹೋಗಿ ಆ ಹಳ್ಳಿಯಲ್ಲಿ ರಾತ್ರಿಯ ರತಿಸುಖ ಪಡೆಯುವ ಮೋಜಿನ ಯಾತ್ರೆಯಾಗಿತ್ತು.
ಅಲ್ಲಿರುವ ಕೆಲವು ಮನೆಗಳಲ್ಲಿ ಒಂದೆರಡು ದಿನ ಇದ್ದು ಎಲ್ಲ ರೀತಿಯ ಸುಖ ಅನುಭವಿಸುವ ವ್ಯವಸ್ಥೆ ಇತ್ತಂತೆ. ಆ ಮನೆಯಲ್ಲಿಯೇ ಊಟ ವಸತಿ ಹಾಗೂ ರತಿಸುಖದ ಸಂಪ್ರದಾಯದ ಮನೆಗಳಲ್ಲಿ ಸೆಕ್ಸ ಅನುಭವಿಸುವ ಸಂಭ್ರಮಕ್ಕೆ ಮದುವೆಯಾದ ಹುಡುಗನು ಹೋಗಿದ್ದು ನನ್ನನ್ನು ತಲ್ಲಣಗೊಳಿಸಿತು.
ಕೇವಲ ೧೮ ರ ಪ್ರಾಯದ ಗೆಳೆಯರು ಹೀಗೆ ಸಾಮೂಹಿಕ ಲೈಂಗಿಕ ಸುಖ ಅನುಭವಿಸುವ ಪಾರ್ಟಿಯನ್ನು ಗೆಳೆಯನ ಮದುವೆಯ ನೆಪದಲಿ ಪಡೆದುಕೊಂಡದ್ದು ನನಗೆ ಬೇಸರವಾಯಿತು. ಆ ಪಾರ್ಟಿಗೆ ನನ್ನ ಕ್ಲಾಸಿನ ಇಬ್ಬರು ಗೆಳೆಯರು ಹೋಗಿದ್ದರು.
ಹೊಸ ಅನುಭವದಿಂದ ತತ್ತರಗೊಂಡ, ಗೆಳೆಯರು ಬಿತ್ತರಿಸಿದ ವಿವರ ಇಂದಿಗೂ ನೆನಪಿದೆ. ಅಂದು ರಾತ್ರಿ ಆ ಮನೆಗಳಿಗೆ ತಲುಪಿದ ಮೇಲೆ ಅವರೇ ಸ್ನಾನ ಮಾಡಿಸಿದರಂತೆ, ಏನೋ ಅರಿಯದವರಿಗೆ ಸೆಕ್ಸ್ ಹೇಗೆ ಅನುಭವಿಸಬೇಕು ಎಂದು ವಿವರಿಸುವುದಲ್ಲದೇ, ಗೃಹಿಣಿಯರಂತೆ ಅಪ್ಪಟ ಸುಖಾನುಭವ ನೀಡಿ ಖುಷಿಕೊಟ್ಟರಂತೆ. ೧೬-೧೮ ಪ್ರಾಯದಲ್ಲಿ ಲೈಂಗಿಕಾನುಭವದ ಅಗತ್ಯವಿತ್ತೆ ಎಂಬ ಪ್ರಶ್ನೆ ನನ್ನನ್ನು ಕಾಡಿತು.
ಅಬ್ಬಾ ! ಭಾರಿ ಮಜ ಅನಿಸ್ತಲೆ ಎಂದು ಗೆಳೆಯರು ವರ್ಣಿಸಿದ್ದೇ ವರ್ಣಿಸಿದ್ದು. ಒಂದು ದಿನದ ಹಾಲ್ವನ್ನು ಎರಡು ದಿನಕ್ಕೆ ವಿಸ್ತರಿಸಿ ಮದುವೆಯಾದ ಗೆಳೆಯನಿಗೆ ಪರಸ್ತ್ರೀಯೊಂದಿಗೆ ಸುಖ ಕೊಡಿಸಿದ ಮಹನಿಯರನ್ನು ಅವನು ಕೊಂಡಾಡಿದ.
ಮತ್ತೆ ಅದೇ ಗೆಳೆಯ ಮಹಾಜ್ಞಾನಿಯಂತೆ ವಿವರಿಸಿದ, ನೋಡು ೪೦ ಹನಿ ರಕ್ತ ಸೇರಿ, ಒಂದು ಹನಿ ವಿರ್ರ್‍ಯವಾಗುತ್ತದೆಯಂತೆ, ಆ ವಿರ್ಯವನ್ನು ಸ್ವಪ್ನ ಸ್ಖಲನ ಅಥವಾ ಮ್ಟುಷ್ಟಿ ಮೈಥುನದ ಮೂಲಕ ಹೊರ ಹಾಕಿದರೆ ಮನುಷ್ಯ ಸೊರಗುತ್ತಾನಂತೆ, ಒಣ ಮೀನಿನಂತಾಗುತ್ತಾನಂತೆ. ಅದೇ ಹೆಣ್ಣಿನ ಸಹವಾಸ ಮಾಡಿದರೆ ಜೀವನಕ್ಕೆ ಚೈತನ್ಯ ಸಿಗುತ್ತೇ ಎಂದು ಬುರುಡೆ ಬಿಟ್ಟ. ಅದನ್ನು ನಾನು ಅರೆಹುಚ್ಚನಂತೆ, ಕುತೂಹಲದಿಂದ ಆಲಿಸಿದೆ.

ಆದರೆ ಈ ಘಟನೆ ನನ್ನನ್ನು ತೀವ್ರವಾಗಿ ಕಾಡಿ, ಕಿರಿಕಿರಿ ಎನಿಸಿತು. ಗೆಳೆಯರಿಗೆ ತಿಳಿ ಹೇಳುವ ಅಗತ್ಯವಿರಲಿಲ್ಲ. ಆದರೆ ದಿಢೀರೆಂದು ಲೈಂಗಿಕ ಕುತೂಹಲ ಹೆಚ್ಚಿಸಿತು.
ಕೆಲವು ಸಮಾನ ಮನಸ್ಕ ಗೆಳೆಯರೂ ಕೂಡಾ ಅವನ ಮಾತನ್ನು ಅನುಮೋದಿಸಿದರು. ಆದರೆ ಅವರು ವೇಶ್ಯಯರ ಸಂಗವನ್ನು ಸಮ್ಮತಿಸದೇ ಇದ್ದುದು ನನ್ನ ಪುಣ್ಯ. ಇಲ್ಲ, ಸ್ವಪ್ನ ಸ್ಖಲನ, ಮುಷ್ಟಿಮ್ಯಥು ನ ಅಪಾಯ ಅಲ್ಲ ಎಂದು ತಾವು ಓದಿದ್ದೇವೆ ಎಂದು ಬೇರೆ ಹೇಳಿದರು.
ಹರೆಯದಲ್ಲಿ ಸೆಕ್ಸ್ ಯಾವಾಗ ಜಾಗೃತವಾಗುತ್ತದೆ ಎಂದು ವಿಜ್ಞಾನ ಹೇಳುವುದಕ್ಕಿಂತ ಅವರವರ ಜೀವನಾನುಭವವೇ ಮುಖ್ಯ ಎಂದೆನಿಸಿತು. ಹೀಗಾಗಿ ಗೆಳೆಯರೆಲ್ಲ ಸೇರಿ ಕೇವಲ ೧೪ರ ಪ್ರಾಯದಲಿ ಲೈಂಗಿಕಾನುಭವ ಜಾಗೃತಗೊಳಿಸಿದರು.

ನಾಲ್ವತ್ತು ಹನಿ ರಕ್ತದ ವಿರ್‍ಯಾಣು ಕತೆಯ ಆತಂಕದೊಂದಿಗೆ ಮುಷ್ಟಿ ಮೈಥುನಕೆ ಬಲಿ ಆದದ್ದು ಸಣ್ಣ ಸಂಗತಿ ಅನಿಸಿತು. ಕುಟುಂಬ ವ್ಯವಸ್ಥೆ, ವೈಯಕ್ತಿಕ ಸಾಹಿತ್ಯಾಸಕ್ತಿ, ಪಾಪ ಪುಣ್ಯಗಳ ಭಾವನೆಗಳು ತೀವ್ರವಾಗಿ ಜಾಗೃತಕೊಂಡಿದ್ದರಿಂದ ವೇಶ್ಯಯರ ಸುಖಕ್ಕೆ ನಾವು ಹತ್ತಾರು ಗೆಳೆಯರು ತಲೆ ಹಾಕಲಿಲ್ಲ ಎಂಬುದೇ ಮಹಾನ್ ಸಾಧನೆ ಎನಿಸಿದೆ.

ಅಂದ ಹಾಗೆ ಆ ಪಾರ್ಟಿಯಲಿ ಪಾಲ್ಗೊಂಡು ಇಬ್ಬರು ಗೆಳೆಯರು ಇತ್ತೀಚಿಗೆ ಏಡ್ಸ್ ಕಾಯಿಲೆಯಿಂದ ಸತ್ತಿದ್ದಾರೆಂದು ತಿಳಿದು ವಿಷಾದವೆನಿಸಿತು.

ಓದು ಒಕ್ಕಾಲು, ಬುದ್ದಿ ಮುಕ್ಕಾಲು

ಶಾಲೆ, ಅಂಗಡಿ, ಕಾರಟಗಿ ಬೇಸರವಾದಾಗಲೆಲ್ಲ. ಅಕ್ಷರಗಳು ತಲೆಗೆ ಪ್ರವೇಶಿಸಲು ನಿರಾಕರಿಸಿದಾಗಲೆಲ್ಲ ಓಡಿ ಹೋಗುತ್ತಿದ್ದೆ, ಏನೋ ನೆಪ ಮಾಡಿಕೊಂಡು ಕುಷ್ಟಗಿಗೆ.. .

ಕಾಶಮ್ಮ ಅಮ್ಮ ಸಿದ್ದ ನಿನ್ನ ಸಾಲಿ ಅಂದರೆ ಅಜ್ಜ ಅಷ್ಟೇ ರಾಗವಾಗಿ ಸಿದ್ಧನ ಶಾಲೆ ಪಡಸಾಲಿ ಅನ್ನುತ್ತಿದ್ದ, ನಾನು ಶಾಲೆ ಕಲಿಯುವುದಿಲ್ಲ ಎಂದು ಅಜ್ಜನಿಗೆ ಖಾತ್ರಿ ಆಗಿತ್ತು. ಏನೇ ಆಗಲಿ ಸಿದ್ಧನ ಪಾಲಿಗೆ ಓದು ಒಕ್ಕಾಲು, ಬುದ್ದಿ ಮುಕ್ಕಾಲು ಅಂದರೆ ತಪ್ಪಾಗುವುದಿಲ್ಲ ಎಂದು ಶಹಬ್ಬಾಸಗಿರಿ ನೀಡಿ ಧೈರ್ಯ ತುಂಬಿದ.
ಅಜ್ಜಾ ನೀಟಾಗಿ ಕೋರ್ಟಗೆ ಹೋಗುವಾಗ ಜೊತೆಗೆ ಹೋಗುತ್ತಿದ್ದೆ. ಅಜ್ಜನ ಸಹಾಯಕರು ಬಂದಾಗ ಏನೇನೋ ವಿಚಿತ್ರ ಪ್ರಶ್ನೆ ಕೇಳುತ್ತಿದ್ದೆ. ನನ್ನ ವಾಚಾಳಿತನದಿಂದಾಗಿ ನಾನು ತುಂಬಾ ಜಾಣನಿರಬಹುದೆಂದು ಅವರೆಲ್ಲ ಭಾವಿಸಿದ್ದರು.
ತುಂಬಾ ಗೌರವದಿಂದ ಕೋರ್ಟಗೆ ಬರುವ ನ್ಯಾಯಧೀಶರು ಬಹಳ ದೊಡ್ಡ ವ್ಯಕ್ತಿ ಅನಿಸುತ್ತಿದ್ದರು. ಅಜ್ಜಾ ನಾನು ವಕೀಲ ಆಗಬೇಕಾದ್ರ ಏನು ಮಾಡಬೇಕು. ಪೋಲಿಸರು ಸೆಲ್ಯೂಟ್ ಹೊಡೆಯುವದನ್ನು ನೋಡಿದರೆ ನನಗೂ ಜಡ್ಜ ಆಗಬೇಕು ಅನಿಸುತ್ತೆ ಅಂದೆ.
ಶಾಲೆಗೆ ಹೋಗದೆ, ಕಾಲೇಜು ಶಿಕ್ಷಣ ಪಡೆಯದೇ ಜಡ್ಜ್ ಆಗಲು ಸಾಧ್ಯನಾ ಅಂದೆ, ಭಲೆ ಮಗನೇ ಅಂದ. ಪರೀಕ್ಷೆಯಲ್ಲಿ ಪಾಸಾಗದಿದ್ದರೂ ಬಾಯಿ ಮಾತಿನ ಪ್ರಶ್ನೆ ಕೇಳಿ ನನ್ನನ್ನು ಯಾಕೆ ಪಾಸು ಮಾಡುವುದಿಲ್ಲ ಎಂದು ವಾದಿಸಿದೆ.

ಪರೀಕ್ಷೆಯ ಭಯ ನನ್ನಿಂದ ದೂರಾಗಲೇ ಇಲ್ಲ. ಪರೀಕ್ಷೆ ಬರೆಯದೇ ಪಾಸಾಗಬೇಕು ಎಂದು ಬಯಸಿದೆ.
ಪರೀಕ್ಷೆ ಬಂದರೆ ಸಾಕು ಜ್ವರ ಬರುತ್ತಿತ್ತು. ಜ್ವರದ ನೆಪದಿಂದ ಏನೋ ಗೀಚಿ ಬರುತ್ತಿದ್ದೆ. ಶಿಕ್ಷಕರು ಕರುಣೆ ತೋರಿ ಪಾಸು ಮಾಡುತ್ತಿದ್ದರು. ಏಳನೇ ತರಗತಿಯ ಮುಲ್ಕಿ ಪರೀಕ್ಷೆ ಮೇಷ್ಟ್ರು ಕೃಪೆಯಿಂದ ಪಾಸಾದೆ. ೮,೯ ದಾಟಿದೆ. ಆದರೆ ಹತ್ತರಲ್ಲಿ ನನ್ನ ಆಟ ನಡೆಯಲಿಲ್ಲ.
ಬದುಕಿನ ಯಶಸ್ಸಿನ ಮರ್ಮವೂ ಅರ್ಥ ಆಗಲಿಲ್ಲ. ಗೆಳೆಯರು ಗಂಭೀರವಾಗಿ ಓದಿ, ಪಾಸಾಗುವುದು ನನ್ನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಮನಸು ಶಾಲೆ ಶಿಕ್ಷಣದ ವಿಷಯಕ್ಕೆ ಕಲ್ಲಾಗಿ ಹೋತು. ತುಂಬಾ ವಾಚಾಳಿ ಇದ್ದುದರಿಂದ ಜಾಣ ಎಂದು ಎಲ್ಲರೂ ಹೋಗಳುತ್ತಿದ್ದದು ಕೂಡಾ ನನ್ನ ನೋವನ್ನು ದೂರಾಗಿಸಿತು. ದಡ್ಡನಾದರೂ ಎಲ್ಲರೂ ಪ್ರೀತಿಸುತ್ತಿದ್ದರಿಂದ ಶಾಲೆ ಕಲಿಯುವುದು ಗಂಭೀರ ಎನಿಸಲಿಲ್ಲ.
ಸಾಂಪ್ರಾದಾಕ ಶಿಕ್ಷಣವಿಲ್ಲದೆ ಯಶಸ್ಸು ಸಾಧ್ಯವಿಲ್ಲ ಎಂಬ ಕಿಡಿ ನುಂಗತೊಡಗಿದೆ. ಮುಂದೊಂದು ದಿನ ತೋಂಟದಾರ್ಯ ಮಠದ ಅಜ್ಜರನ್ನು ಕೇಳಿದೆ ಸಾಂಪ್ರದಾಯಿಕ ಶಿಕ್ಷಣವಿಲ್ಲದೆ, ಯಾವುದಾದರೂ ಕ್ಷೇತ್ರದಲ್ಲಿ ನಿರಂತರ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ ಆದರೂ ಪದವಿ ಪಡೆದರೆ ಒಳ್ಳೆಯದು ಅಂದರು ಹಾಗಾದರೆ ಯಾವ ಕ್ಷೇತ್ರ ನನಗೆ ದಕ್ಕಬಹುದು ಎಂದು ಆಲೋಚಿಸಿದೆ. ಉತ್ತರ ಹೊಳೆಯಲಿಲ್ಲ.
ಸರಿ ಈಗ ಕನ್ನಡ ಸಾಹಿತ್ಯ, ಭಾಷೆಯಲ್ಲಿ ಆಸಕ್ತಿ ಇದೆ, ಅದನ್ನೆ ಕಲಿತರಾಯಿತು ಎಂದು ತೀರ್ಮಾನಿಸಿದೆ. ಕುಷ್ಟಗಿಯಯಲ್ಲಿ ದಸ್ತಗೀರಿ ಮಾಷ್ಟ್ರು ಅಂತ ಇದ್ದರು. ಅವರು ಶಿಕ್ಷಕ ವೃತ್ತಿಯೊಂದಿಗೆ ಯಂತ್ರ, ತಂತ್ರಗಳ ವಿದ್ಯೆಯನ್ನು ತಿಳಿದಿದ್ದರು, ಊರ ಹೊರಗೆ ಬಯಲು ಕಡೆ ಹೋಗಿ ಬರುವಾಗ ಅಜ್ಜ ಅವರ ಮನೆಗೆ ಹೋಗಿ ಬರುತ್ತಿದ್ದೆ. ಸಣ್ಣಗೆ ನನ್ನ ವಿಷಯವೂ ಪ್ರಸ್ತಾಪವಾಯಿತು.
ನನಗೆ ಮಂತ್ರಿಸಿ ತಾಯತ ನೀಡಿದರು. ಅಜ್ಜ ಸ್ನಾನ ಮಾಡಿಸಿ ತಾಯತ ಕಟ್ಟಿದ. ಒಟ್ಟಾರೆ ಯಾವುದೇ ಮಂತ್ರವೋ, ತಾಯ್ತವೋ ನನ್ನನ್ನು ಉದ್ದಾರ ಮಾಡಿದರೆ ಸಾಕು ಅಂದುಕೊಂಡೆ. ಎಡಿಯೂರು ಸಿದ್ದಲಿಂಗೇಶನಿಗೆ, ಮನೆ ದೇವ್ರು ಹಳ್ಳದ ಬಸವೇಶ್ವರನಿಗೆ ಮುಡುಪು ಕಟ್ಟಿದರೆ ನಾನು ಪಾಸ್ ಆಗಬಹುದು ಎಂದರು. ಇಬ್ಬರಲ್ಲಿಯೂ ಬೇಡಿಕೊಂಡೆ. ಒಂಟಿಯಾಗಿ ಅಳಲು ಶುರು ಮಾಡಿದೆ.

ಸಾರ್ವಜನಿಕವಾಗಿ ಸದಾ ನಸುನಗುತ್ತಾ, ನಗಿಸುತ್ತಾ ಇರುತ್ತಿದ್ದ ನಾನು ಒಂಟಿತನದಲಿ ನೋವು, ಅಪಮಾನ ಅನುಭವಿಸುತ್ತಿದ್ದೆ. ಎಲ್ಲ ಇದೆ ಆದರೆ ಶಿಕ್ಷಣ ಇಲ್ಲದಿದ್ದರೆ ಹೇಗೆ ಎಂಬ ನಿರಾಶೆ.
ವಿದ್ಯೆಯಿಲ್ಲದವನ ಮುಖ ಹದ್ದಿಗಿಂತಲೂ ಕಡೆ ಎಂಬ ಸರ್ವಜ್ಞನ ಸಾಲುಗಳು ಹಿಂಸೆ ಅನಿಸಿ ಕನ್ನಡಿ ನೋಡಿಕೊಂಡೆ, ಆದರೆ ನಾನು ಹದ್ದಿನಂತೆ ಇಲ್ಲ ಬಿಡು ಎಂದು ಸಮಾಧಾನ ಪಟ್ಟುಕೊಂಡೆ.
ಕವಿತೆ, ಕತೆ, ಸಿನಿಮಾ ಹೀಗೆ ಎಲ್ಲ ಕಡೆ ಬಳಕೆಯಾಗುತ್ತಿದ್ದ ಪದಗಳೊಂದಿಗೆ ನನ್ನನ್ನು ಸಮೀಕರಿಸಿಕೊಂಡು ನೋಡುತ್ತಿದ್ದೆ. ಎಲ್ಲಿಯಾದರೂ ಪರಿಹಾರ ಸಿಗಬಹುದೆಂಬ ಹುಚ್ಚು.
ಕರಿದಾರ, ತಾಯ್ತ, ಮಂತ್ರಗಳು ಫಲಿಸಲಿಲ್ಲ. ದೇವರು, ಧರ್ಮ, ಸಂಪ್ರದಾಯಗಳಿಗೆ ಅರ್ಥವಿಲ್ಲ ಎನಿಸಿತು. ಬರುಬರುತ್ತಾ ಒಳಗೊಳಗೆ ನಾಸ್ತಿಕನಾದೆ ಆಸ್ತಿಕತೆಯ ಸೋಗಿನಲ್ಲಿ. ಎಲ್ಲ ಗುಡಿಗುಂಡಾರಗಳಿಗೂ, ಅಲೆದೆ. ಕೊಳ್ಳದ ಅಮರೇಶ್ವರ, ಯಾಪಲಪರವಿ ಬಸವಣ್ಣ, ಎಡೆಯೂರು ಸಿದ್ಧಲಿಂಗೇಶ ಯಾರಾದರೂ ನನ್ನನ್ನು ಕಾಪಾಡಿದರೆ ಸಾಕು ಎನಿಸುತ್ತಿತ್ತು. ನಿದ್ದೆ ಹತ್ತುವವರೆಗೆ ಎನೇನೋ ಆಲೋಚಿಸುತ್ತಿದ್ದೆ.

ಸೆಕ್ಸಸ್, ಸೆಕ್ಸಸ್ ನ ಪೇಚು ಇಂಗ್ಲೀಷ ಹಂಬಲ

ಅನೇಕ ಬಾರಿ ಪ್ರಸ್ತಾಪಿಸಿದಂತೆ ಶಾಲೆ ಕಲಿಯುವದೆಂದರೆ ದೂರದ ಊರಿಗೆ ಹೋಗಿ ಹಾಸ್ಟೆಲ್‌ನಲ್ಲಿದ್ದು, ಇಂಗ್ಲೀಷ ಮೀಡಿಯಂ ನಲ್ಲಿ ಕಲಿತರೆ ಮಾತ್ರ ನಿಜವಾದ ಕಲಿಯುವಿಕೆ ಎಂಬ ಕೀಳರಿಮೆ ಬಾಲ್ಯದಲ್ಲಿ ಕಾಡಲು ಶುರು ಆಯ್ತು.

ಊರ ಬಂಧುಗಳಾದ ಜವಳಿ, ಹಿಂದಪೂರ ಕುಟುಂಬದ ಗೆಳೆಯರು ಸಂಡೂರ ಮಹಾರಾಜರು ಪ್ರಾರಂಭಿಸಿದ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಸೋದರತ್ತೆಯ ಮಕ್ಕಳು ರಾಯಚೂರಿನ ಗದ್ವಾಲ ಪರಿವಾರದ ಸಂಗಾತಿಗಳು ಗುಲಬುರ್ಗಾದ ಶರಣಬಸವೇಶ್ವರ ವಸತಿ ಶಾಲೆಯಲ್ಲಿದ್ದರು.

ನಮ್ಮ ಪೂರ್ವಜರು ಸಾಕಷ್ಟು ಶ್ರೀಮಂತರಾಗಿದ್ದರೂ, ಶಾಲೆಗಾಗಿ ಸಾವಿರರು ರೂಪಾಯಿ ಖರ್ಚು ಮಾಡುವುದು ಬೇಡ ಎಂಬ ವಾದವಿತ್ತು. ಬಾಲ್ಯದಲ್ಲಿ ಹೀಗಾಗಿ ನಾವು ನಿಜವಾದ ವಿದ್ಯಾರ್ಥಿಗಳು ಅನಿಸಿಕೊಳ್ಳಲಿಲ್ಲ. ವಿದ್ಯಾರ್ಥಿ ಜೀವನದ ಬಗ್ಗೆ ಅಸಡ್ಡೆ ಶುರು ಆಯಿತು.
ಕಲಿತರೆಷ್ಟು, ಬಿಟ್ಟರೆಷ್ಟು ಎಂಬ ವಿಷಾದ ಬೇರೆ.

ಮುಖ್ಯವಾಗಿ ಇಂಗ್ಲಿಷ್ ಬಾರದ ಕಿರಿ ಕಿರಿ ರಾಯಚೂರು ಅತ್ತೆಯ ಮಕ್ಕಳಾದ ನಾಗರಾಜ, ಶಿವರಾಜ, ಮಲ್ಲಿಗೆ ಚೆನ್ನಾಗಿ ಇಂಗ್ಲಿಷ್ ಬರ್ತಾ ಇತ್ತು.
ಯಾವುದೇ ಒಂದು ಸಂದರ್ಭದಲ್ಲಿ ಇಂಗ್ಲಿಷ್ ಪದಗಳನ್ನು ಬಳಸುವ ಪ್ರಸಂಗ ಬಂತು. ಅದು ತುಂಬಾ ಸೆಕ್ಸಸ್ ಆಗಿದೆ ಅಂದೆ. ಆಗ ಶಿವರಾಜ ಲೇ ಮಗನೆ ಅದು ಸೆಕ್ಸಸ್ ಅಲ್ಲಲೆ ಸಕ್ಸೆಸ್ ಲೇ ಅಂದಾಗ ಪೆಚ್ಚಾಗಿ ಹೋದೆ.
ಈ ಇಂಗ್ಲಿಷ್ ಅಪಮಾನವನ್ನು ಆ ಕ್ಷಣಕ್ಕೆ ಸ್ಪೋಟ್ವ್ರಿವ್ ಆಗಿ ತಗೋಂಡೆ. ಆದರೆ ರಜೆ ಮುಗಿಸಿ ಅತ್ತೆ ಮಕ್ಕಳು ಊರಿಗೆ ಹೋದಾಗ ಅಪಮಾನವನ್ನು ನಿರಂತರವಾಗಿ ಮೆಲುಕು ಹಾಕಿದೆ.

ದೂರದ ಊರ ಹೊರಗೆ ಲ್ಯಾಟ್ರಿನ್ ಹೋಗಿ ಹಿಂಸೆ ಅನುಭವಿಸಿ ಬರುವ ಸಂದರ್ಭದಲ್ಲಿ ಒಂಟಿಯಾಗಿ ಇಂಗ್ಲಿಷ್ ಅಪಮಾನವನ್ನು ಮೆಲುಕು ಹಾಕಿದೆ. ಸರಕಾರಿ ಶಾಲೆಗೆ ಹೋಗುವುದರಲ್ಲಿ ಅರ್ಥವೇ ಇಲ್ಲ ಅನಿಸಿತು. ನಾವು ಈ ಜನ್ಮದಲ್ಲಿ ಇಂಗ್ಲೀಷ್ ಕಲಿಯಲು ಅಸಾಧ್ಯ. ಹೀಗಿದ್ದಾಗ ಶಾಲೆಗೆ ಯಾಕೆ ಹೋಗಬೇಕು ಎಂದು ಪ್ರಶ್ನಿಸಿಕೊಂಡೆ.
ಶಾಲೆಯ ಬಗ್ಗೆ ನಿರಾಸಕ್ತಿ ಬೆಳೆಯಿತು. ಬೇಕಾದಾಗ ಹೋಗುತ್ತಿದ್ದೆ. ಬೇಡವಾದಾಗ ಬಿಡುತ್ತಿದ್ದೆ. ಇಂಗ್ಲಿಷ್ ಶಾಲೆಯ ಮಹತ್ವ ಅರಿತಿದ್ದ ಅಪ್ಪ, ತಮ್ಮ ಜಗದೀಶನನ್ನು ಇಂಗ್ಲೀಷ್ ಶಾಲೆಗೆ ಪ್ರವೇಶ ಕೊಡಿಸಿದ.
ಜವಳಿಯವರ ಹುಡುಗರೊಂದಿಗೆ ೨೫ ಕಿಲೋ ಮೀಟರ್ ದೂರದ ಮರಳಿಯ ಪ್ರಗತಿ ನಗರ ಶಾಲೆಗೆ ಜಗದೀಶ್ ಹೋಗುತ್ತಿದ್ದ, ದಿನಾ ಅವರನ್ನು ಶಾಲೆಗೆ ಕಳಿಸಲು ವ್ಯಾನ್ ಹೋಗುತ್ತಿತ್ತು. ಒಳಗೊಳಗೆ ಅಪಮಾನಿತನಾದೆ. ಅನಗತ್ಯ ಹೋಲಿಕೆಯಿಂದಾಗಿ ಕುಗ್ಗಿ ಹೋದೆ.
ನನಗೆ ಕಿರಾಣಿ ಅಂಗಡಿಯೇ ಗತಿ ಎನಿಸಿತು. ಆದರೂ ಎಲ್ಲೋ ಒಂದು ಕಡೆ ಇಂಗ್ಲಿಷ್ ಕಲಿಯಬೇಕೆಂಬ ಛಲ ಬೆಳೆಯಿತು. ರಾಪಿಡೆಕ್ಸ್ ಖರೀದಿಸಿದೆ. ಪ್ರಯೋಜನವಾಗಲಿಲ್ಲ.
ಎಲ್ಲೋ ಒಂದು ಕಡೆ ಇಂಗ್ಲಿಷ್ ಕಲಿಯಬೇಕೆಂಬ ಬೀಜ ಬಿತ್ತಿದೆ. ಮುಂದೊಂದು ದಿನ ಆ ಬೀಜ ಹೆಮ್ಮರವಾಗಬಹುದೆಂದು ಅಂದುಕೊಂಡಿರಲಿಲ್ಲ.
ಇಂಗ್ಲಿಷ್ ಮೀಡಿಯಂ ಕಲಿತವರು ಮಾತ್ರ ಇಂಗ್ಲೀಷನಲ್ಲಿ ಮಾತನಾಡಬಹುದು ಎಂಬ ಆತಂಕವನ್ನು ದೂರ ಮಾಡಲು ಪಣ ತೊಟ್ಟೆ ಆದರೆ ಅಂದು ನನ್ನ ಕೆಲಸವನ್ನು ಯಾರಿಗಾದರೂ ಹೇಳಿದ್ದರೆ ಅಪಹಾಸ್ಯ ಮಾಡುತ್ತಿದ್ದರು.

ಜಗದೀಶನ ಶಾಲೆ ಮರಳಿಯಿಂದ, ಕಾರಟಗಿ, ಇಲಕಲ್ಲು ಸಿಂಧನೂರು ಅಂತ ಪಯಣ ಶುರು ಆಯಿತು. ನಾನು ಕಾರಟಗಿಯ ಸರಕಾರ ಶಾಲೆಯಲ್ಲಿಯೇ ಕನಸು ಕಟ್ಟಲು ಆರಂಭಿಸಿದೆ. ಹೈಸ್ಕೂಲಿನಲ್ಲಿಯೂ ಅಷ್ಟೇ, ಎಷ್ಟೇ ಪ್ರಯತ್ನಿಸಿದರೂ ಇಂಗ್ಲಿಷ್ ತಲೆಗೆ ಹೋಗಲೇ ಇಲ್ಲ.
ನನ್ನ ಸಮಸ್ಯೆಯನ್ನು ಶಿಕ್ಷಕರಿಗೆ ವಿಷಾದದಿಂದ ವಿವರಿಸಿದೆ. ಹಾಗೇನಿಲ್ಲ ಕನ್ನಡ ಮೀಡಿಯಂನಲ್ಲಿ ಓದಿ ಜಾಣರಾಗಬಹುದು, ನಾವೆಲ್ಲ ಓದಿದ್ದು ಸರಕಾರಿ ಕನ್ನಡ ಶಾಲೆಗಳಲ್ಲಿಯೇ ಎಂಬ ಶಿಕ್ಷಕರ ಮಾತುಗಳು ಭರವಸೆ ಮೂಡಿಸಿದವು.

ಯಾಪಲಪರವಿ ಮನೆತನದ ಮೂರನೇ ತಲೆಮಾರಿನ ಮಕ್ಕಳು ಇಂಗ್ಲೀಷ್ ಶಾಲೆಗೆ ಹೋಗುತ್ತಿದ್ದರು. ನಾನು ಚನ್ನಪ್ಪ ಕಕ್ಕ ಸರಕಾರಿ ಶಾಲೆಗೆ ಫಿಕ್ಸ್ ಆದೆವು.
ಕೇವಲ ಕನ್ನಡ ಸಾಹಿತ್ಯವನ್ನು ಮಾತ್ರ ಪಟ್ಟಾಗಿ ಹಿಡಿದುಕೊಂಡೆ. ಕನ್ನಡ ಭಾಷೆಯಲ್ಲಿ ಹಿಡಿತ ಸಾಧಿಸಿದೆ. ಕಾಡಬಸಪ್ಪ ಗುರುಗಳು ಮಾರ್ಗದರ್ಶನ ಮಾಡಿದರು. ಉತ್ತಮ ಚರ್ಚಾ ಪಟುವಾದೆ. ನಿಧಾನ ಆತ್ಮವಿಶ್ವಾಸ ಹೆಚ್ಚಾಯಿತು. ವಿಜ್ಞಾನ, ಗಣಿತದ ಚಿಂತೆ ಬಿಟ್ಟೆ.

ಅಜ್ಜ ಬರಿಸಿಟ್ಟ ಜಾತಕ ಓದಿದೆ. ಅದರಲ್ಲೂ ಹಾಗೆ ಇತ್ತು. ನನಗೆ ಶಿಕ್ಷಣ ಹತ್ತುವುದಿಲ್ಲ ಎಂದು ಬರೆದಿತ್ತು ಜಾತಕ ಸುಳ್ಳು ಮಾಡುವ ಹಟ ಶುರು ಆಯ್ತು. ದೇವರು, ಧರ್ಮಗಳಲ್ಲಿ ನಂಬಿಕೆ ಕಡಿಮೆ ಆಯಿತು. ಇಷ್ಟೆಲ್ಲ ಪೂಜೆ ಮಾಡಿದರೂ, ವ್ಯಾಪಾರ ಏಕೆ ಲಾಸ್ ಆಯ್ತು, ನನಗೆ ಯಾಕೆ ಶಿಕ್ಷಣ ಹತ್ತಲಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ತಾಕಲಾಟಕ್ಕೆ ಬಿದ್ದೆ, ಏನೋ, ಅರ್ಥವಾಗದ ವಯಸ್ಸು. ಆದರೂ ದೀರ್ಘ ಚಿಂತನೆಗೆ ತೊಡಗಿದೆ. ನೋಡೋಣ ಎಂದು ದೇವರನು ಒಲಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಇಂಗ್ಲಿಷ್ ಕಲಿಯಲು ದೇವರು ಒಲಿಯಲಿಲ್ಲ.

Monday, December 13, 2010

ನೆನಪಿಗೆ ಬಾರದ ನೆನಪಿರದ ಗಳಿಗೆ


ಅಂದು ಏಪ್ರಿಲ್ ೧೨ ರ ಸೋಮವಾರ ಕುಷ್ಟಗಿಯ ಪಟ್ಟಣಶೆಟ್ಟರ ಗುರುಸಿದ್ದಪ್ಪ ವಕೀಲರ ಮನೆಯಲಿ ಸಂಭ್ರಮದ ಆತಂಕ. ರಾಯಚೂರ ಜಿಲ್ಲೆಯ ಮೂಲೆಯಲ್ಲಿನ ದೊಡ್ಡ ಹಳ್ಳಿಯಂತಹ ತಾಲೂಕ ಕೇಂದ್ರ ಕುಷ್ಟಗಿ ಬರದ ನಾಡೆಂದನಿಸಿದರೂ, ಜಿಲ್ಲೆಯ ಊಟಿ ಅನಿಸಿಕೊಂಡಿದ್ದು ತಂಪಾದ ಹವಾಮಾನಕ್ಕಾಗಿ.
ಗುರುಸಿದ್ದಪ್ಪ ಪಟ್ಟಣಶೆಟ್ಟರು ಹಾಗೂ ಕಾಶಮ್ಮ ದಂಪತಿಗಳಿಗೆ ನಾಲ್ಕು ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗ. ಎರಡನೇ ಮಗಳು ಸುಶೀಲ ಹೆರಿಗೆಗೆ ಬಂದಿದ್ದಳು. ಹೆಂಗರಳಿನ ವಕೀಲರಿಗೆ ಎಲ್ಲಿಲ್ಲದ ಆತಂಕ. ಎರಡನೇ ಮಗಳು ಸುಶೀಲಾಗೆ ಕೇವಲ ೧೭ ವರ್ಷ. ಚೊಚ್ಚಲು ಹೆರಿಗೆ ನೋವಿಗೆ ಸಣ್ಣ ವಿರಾಮ ಸಿಕ್ಕದ್ದು ಮಧ್ಯಾಹ್ನ ೩.೨೦ ಕ್ಕೆ. ಸೂಲಗಿತ್ತಿಯ ಪ್ರಯತ್ನದಿಂದ ಆದ ಸಹಜ ಹೆರಿಗೆಗೆ ಎಲ್ಲಿಲ್ಲದ ಸಂಭ್ರಮ.
ಹುಟ್ಟಿದ್ದು ಗಂಡು ಮಗು ಬೇರೆ ! ಮೇಲಿಂದ ಮೇಲೆ ನಾಲ್ಕು ಹೆಣ್ಣು ಹಡೆದ ವಕೀಲರಿಗೆ ತಮ್ಮ ಮಕ್ಕಳು ಗಂಡು ಹಡೆಯಲಿ ಎಂಬ ಹಿರಿದಾಸೆ ಬೇರೆ, ಅಂತೆಯೇ ಸುರಕ್ಷಿತ ಹೆರಿಗೆ, ದುಂಡಾದ ಮುದ್ದು ಗಂಡು ಮಗುವಿನೊಂದಿಗೆ.
ಫೋನು, ಮೊಬೈಲು ಇಲ್ಲದ ದಿನಗಳಲ್ಲಿ ಮಗಳ ಗಂಡನ ಮನೆ ಕಾರಟಗಿಗೆ ಪತ್ರ ರವಾನೆ
ಕಾರಟಗಿಯ ವ್ಯಾಪಾರಿ ಮನೆತನ ಯಾಪಲಪರವಿ ಬಸವರಾಜಪ್ಪ ಕೇವಲ ಇಪ್ಪತ್ತರ ಪ್ರಾಯದಲಿ ಗಂಡು ಮಗುವಿನ ತಂದೆಯಾದ ಸಂದೇಶ ರವಾನೆ. ಮೂರನೆ ಮಗಳು ನಿರ್ಮಲಾ ಹಾಗೂ ಬೇಬಿಯವರಿಗೆ ಎಲ್ಲಿಲ್ಲದ ಖುಷಿ. ದುಂಡಾದ ರಬ್ಬರ್ ಚಂಡಿನಂತಹ ಮಗುವಿನೊಂದಿಗೆ ಆಟ ಆಡಲು ಸಂತಸವೇ ಸಂತಸ.
ಶ್ರೀಮತಿ ಪಾರಮ್ಮ ಉರ್ಫ್ ಸುಶೀಲಮ್ಮ ಹಾಗೂ ಬಸವರಾಜಪ್ಪ ಯಾಪಲಪರವಿ ದಂಪತಿಗಳಿಗೆ ಅಷ್ಟೇ ಖುಷಿ !
ಹೈದ್ರಾಬಾದ್ ಕರ್ನಾಟಕದಲಿ ಪ್ರತಿಯೊಬ್ಬರು ಗಂಡು ಹುಟ್ಟಲೆಂದೇ ಬಯಸುವ ಕಾಲ. ಹೆಣ್ಣು ಹುಟ್ಟಿದರೆ ಹೇಗೆ ಎಂಬ ಆತಂಕ ಸಹಜವಾಗಿತ್ತು. ಆ ನಿರಾಸೆ ಎಲ್ಲರಿಂದ ಮಾಯವಾಗಿತ್ತು.
ಮಗು ಹುಟ್ಟಿದ ಹದಿನಾರು ದಿನಕ್ಕೆ ನಾಮಕರಣದ ಅದ್ದೂರಿ ಸಮಾರಂಭ. ಕುಷ್ಟಗಿ ಮನೆತನದ ದೇವರು ಎಡೆಯೂರ ಸಿದ್ದಲಿಂಗೇಶನ ಕಾರಟಗಿಯ ಮನೆ ದೇವರು ಹಳ್ಳದ ಬಸವೇಶ್ವರ ಎರಡರ ಸಮಾಗಮವೇ ಸಿದ್ಧಬಸವ ಎಂಬ ತಾರ್ಕಿಕ ನಾಮಕರಣ. ಇಲ್ಲಿ ವಕೀಲರ ಜಾಣತನ, ವ್ಯಾಪಾರಿಗಳ ಸಮೀಕರಣ ಇತ್ತಲ್ಲವೇ?

ಒಂದೂವರೆ ವರ್ಷದವರೆಗೆ ಬಾಲಕ ಸಿದ್ದಬಸವ ಬೆಳೆದದ್ದು ಕುಷ್ಟಗಿಯಲ್ಲಿಯೇ, ಯಾಕೆಂದರೆ ಒಂದೂವರೆ ವರ್ಷಕ್ಕೆ ಮತ್ತೆ ಸುಶೀಲಮ್ಮ ಎರಡನೇ ಹೆರಿಗೆಗೆ ಹಾಜರ್ ಅಂದಿನ ದಿನಗಳೇ ಹಾಗೆ ಹತ್ತಾರು ವರ್ಷ ಹಡೆಯುವ ಕಾಲ !
ಆದ್ದರಿಂದ ಅಜ್ಜ, ಅಮ್ಮ, ಕಕ್ಕಿಯರ ಕೈಯಲ್ಲಿಯೇ ಕಳೆದ ಸುಂದರ ಬಾಲ್ಯ. ಅದರಲ್ಲೂ ವಿಶೇಷವಾಗಿ ಸಣ್ಣ ಕಕ್ಕಿ, ಬೇಬಿ ಕಕ್ಕಿಯ ಅಕ್ಕರೆಯ ಮಡಿಲಲಿ ಬೆಳೆದ ಹರುಷ. ತಲೆ ತುಂಬಾ ಬೆಳೆದ ದಟ್ಟ ಕೂದಲು, ಅದರ ಮೇಲೊಂದು ಜುಟ್ಟು, ಆ ಜುಟ್ಟಿನ ತುಂಬಾ ಹೂಗಳ ಸುತ್ತು. ಮೈತುಂಬಾ ಧರಿಸಿದ ಆಭರಣಗಳ ದಾಖಲೆ ಇರಲಿ ಎಂಬ ಕಾರಣಕ್ಕೆ ಫೋಟೋ ತೆಗೆಸುವ ಆಸೆ. ಕುಷ್ಟಗಿಯಲ್ಲಿ ಸ್ಟುಡಿಯೋ ಇರಲಿಲ್ಲ. ಎಂಟು ತಿಂಗಳ ಮಗುವನ್ನು ಸಿಂಗರಿಸಿಕೊಂಡು ಇಲಕಲ್ಲಿಗೆ ಪಯಣ.
ಅಲ್ಲಿ ಸ್ಟುಡಿಯೋದಲ್ಲಿ ಕ್ಲಿಕ್ಕಿಸಿದ ಕ್ಯಾಮರಾಕ್ಕೆ ನೀಡಿದ ಮುಗ್ಧ ಫೋಟೋ ಇತಿಹಾಸದಲ್ಲಿ ದಾಖಲಾದ ಮಗುವಿನ ಮೊದಲ ಫೋಟೋ ಎಂಬ ಸಂಭ್ರಮ ಬೇರೆ.

ಮೂರು ವರ್ಷದಲ್ಲಿ ಹುಟ್ಟಿದ ನಂತರ ಮಕ್ಕಳು ಯಾಕೋ ದಕ್ಕಲಿಲ್ಲ. ಎಲ್ಲರಿಗೆ ಆತಂಕ, ಮಗುವನ್ನು ಹೊಸಿಲು ಮೇಲೆ ಕೂರಿಸಿ, ಬೆನ್ನಿಗೆ ಸುಡಿಸಿದರೆ, ಅಚ್ಚೆ ಹಾಕಿಸಿದರೆ ಬೆನ್ನ ಮೇಲೆ ಹುಟ್ಟುವ ಮಕ್ಕಳು ಸಾಯುವದಿಲ್ಲ ಎಂಬ ನಂಬಿಕೆ.
ಹುಟ್ಟಿದ ಮೂರೇ ವರ್ಷಕ್ಕೆ ಬೆನ್ನಿಗೆ ಬರೆ ಹಾಕಿಸಿಕೊಳ್ಳುವ ಶಿಕ್ಷೆ. ಒಡಹುಟ್ಟಿದವರು ಉಳಿಯಲಿ ಎಂಬ ಕಾರಣಕ್ಕೆ ಬಾಲ್ಯದಲ್ಲಿಯೇ ಹಿರಿಯ ಮಗನಿಗೆ ಶಿಕ್ಷೆ.
ಬೆನ್ನಿನ ಮಚ್ಚೆ ನಿಜ ಆಯ್ತು ನಂತರ ಹುಟ್ಟಿದ ಮಗಳು ನಾಗರತ್ನ ಆರಾಮಾಗಿ ಉಳಿದಳು. ಮುಂದೆ ನಾಲ್ಕುಮಕ್ಕಳು ಸತ್ತರೂ ಅಂತಿಮವಾಗಿ ಉಳಿದದ್ದು ನಾಲ್ಕು ಜನ. ಸಿದ್ಧಬಸವನಿಗೆ ಬಾಲ್ಯದಲ್ಲಿ ಹಾಕಿಸಿಕೊಂಡ ಬರೆ ನೆನಪಿನಲ್ಲಿ ಉಳಿದಿಲ್ಲವಾದರೂ ಎಲ್ಲೋ ಒಂದು ಅಭಿಮಾನವಿದೆ. ಹೀಗೇ ನಾಲ್ಕು ವರ್ಷದವರಗೆ ನೆನಪಾಗದ ಬಾಲ್ಯಕ್ಕೆ , ನೆನಪಾಗದ ಬಾಲ್ಯವನ್ನು ಕೆದಕುವ ಕುತೂಹಲ ಬೇರೆ. ನೆನಪಾಗದ, ನೆನಪಿರದ ಘಟನೆಗಳ ಬೇರುಗಳ ಹಿಡಿದಲ್ಲವೆ ಮುಂದೆ ಇಷ್ಟುದ್ದ ಬೆಳೆದದ್ದು . . .

Monday, November 22, 2010

ಶಿಕ್ಷಕರ ಕಾಳಜಿ - ಸ್ನೇಹಿತರ ಪ್ರೀತಿ



ಹೈಸ್ಕೂಲಿನ ದಿನಗಳು ಗೆಳೆಯರಿಂದ ಕೂಡಿದ್ದರೂ, ಎಲ್ಲರೂ ಶಾಶ್ವತ ಸ್ನೇಹಿತರಾಗಿ ಉಳಿಯಲಿಲ್ಲ. ಪ್ರತಿ ದಶಕಗಳಿಗೊಮ್ಮೆ ಬದುಕು ಬದಲಾಗುತ್ತಾ, ವ್ಯಕ್ತಿಗಳೂ ಬದಲಾಗುತ್ತಾರೆ. ಬೆಳೆದಂತೆಲ್ಲ ತಂಡವೂ ಬದಲಾಗುತ್ತದೆ.
ಆದರೆ ಬದುಕಿನ ಬ್ಯಾಲೆನ್ಸ್ ಶೀಟ್‌ನಲ್ಲಿ ಹಳೆ ಗೆಳೆಯರು ನೆನಪಾಗಿ ಉಳಿಯುತ್ತಾರೆ. ಹೈಸ್ಕೂಲು ದಿನಗಳಲ್ಲಿ ಶಾಲೆಗೆ ಬೈಕುಗಳಿರಲಿಲ್ಲ. ಅಡ್ಡ ದಾರಿ ಹಿಡಿದು ಕೆರೆ ಮೇಲೆ ನಡೆದುಹೋದರೆ ಶಾಲೆ ಸಮೀಪವಾಗುತ್ತಿತ್ತು.



ದಿದ್ದಗಿ ಸುರೇಶ್, ನಾಗರಾಜ ಕಾಗಲ್‌ಕರ್ ನನ್ನನ್ನು ದಿನಾ ಶಾಲೆಗೆ ಕರೆಯಲು ಮನೆಗೆ ಬರುತ್ತಿದ್ದರು. ಬಾಗಿಲಲ್ಲಿ ನಿಂತು ಸಿದ್ಧಿ ಬಾರಲೇ ಎಂದು ಕೂಗಿದಾಗ ಜಿಂಕೆಯಂತೆ ಓಡಿ ಬರುತ್ತಿದ್ದೆ, ಶಾಲೆಗೆ ಹೋಗುವಾಗ ನಿತ್ಯ ಜತೆಯಾಗುತ್ತಿದ್ದ ಗೆಳೆಯರು ಈಗ ಕೇವಲ ಮನದ ಮೂಲೆಯಲ್ಲಿ ಅಡಗಿದ್ದಾರೆ. ನಾಗರಾಜ ಗಂಗಾವತಿಯಲ್ಲಿ ಬಂಗಾರದ ವ್ಯಾಪಾರಿ, ಸುರೇಶ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾನೆ.
ಹೈಸ್ಕೂಲು ಸಂಗಾತಿಗಳು ಈಗ ಎಲ್ಲಿಯಾದರೂ ಭೇಟಿ ಆದರೆ ಅಚ್ಛರಿಂದ ನೋಡುತ್ತಾರೆ. ಗುರುತು ಹಿಡಿದಾಗ ಬೆರಗುಗೊಳ್ಳುತ್ತಾರೆ. ಗೆಳತಿಯರಾರು ಸಿಗುವ ಪ್ರಶ್ನೆ ಇಲ್ಲ ಅವರೆಲ್ಲ ಈಗ ಅಜ್ಜಿಯರಾಗಿದ್ದಾರೆ.



ಗದ್ದಿ ಪಂಪ, ಅಂಗಡಿ ಮಲ್ಲಿ ಮ್ಯಾಗೇರಿ ವಿರೇಶ, ಜಿ. ಬಸವರಾಜ, ಸೋಮಲಿಂಗ, ಶಾಂತಮೂರ್ತಿ, ಗಾಣಿಗೇರ ಪಂಪ ಅಲ್ಲಲ್ಲಿ ಸಿಗುತ್ತಾರೆ. ಅವರ ಮಕ್ಕಳೀಗ ಕಾಲೇಜು ವ್ಯಾಸಂಗ ಮುಗಿಸಿ ಮದುವೆಯಾಗಿದ್ದಾರೆ. ನನ್ನ ಬಹುಪಾಲು ಗೆಳೆಯರು ಹೈಸ್ಕೂಲು ಮುಗಿಸಿದಾಗಲೇ ಮದುವೆಯಾಗಿ ಹಿರಿಯರಾದರು. ಕಾಲೇಜು, ನೌಕರಿ ಅಂತ ಅಲೆದಲೆದು ತಡವಾಗಿ ಮದುವೆಯಾದ ನನ್ನಂತವರು ಅವರೆದುರು ನಿಂತಾಗ ಸಣ್ಣವರೆನಿಸುತ್ತೇವೆ.
ಈಗ ಬಾಲ್ಯದ ಗೆಳೆಯರನ್ನು ಯಾವುದಾದರೂ ಸಂಧರ್ಭದಲ್ಲಿ ಒಟ್ಟಾಗಿ ಸೇರಿಸಬೇಕೆನಿಸುತ್ತದೆ. ಆದರೆ ಸಂಸಾರದ ಜವಾಬ್ದಾರಿಯಲ್ಹುಲಿ ಉಡುಗೆ ಹೋದವರನು ಹೊರ ತೆಗೆಯುವುದು ಹೇಗೆ ಎಂಬುದೇ ಮುಂದಿರುವ ಪ್ರಶ್ನೆ.
ಇಂಗ್ಲೆಂಡ್ ಪ್ರವಾಸ ಕಥನ ಓದಿ ಫೋನಾಸಿದ ರಾಯಚೂರಿನಲ್ಲಿರುವ ಮಲ್ಲಿ, ಪ್ರಾಣೇಶ ನನ್ನ ಬೆಳವಣಿಗೆಗಾಗಿ ಬೆರಗು ಪಟ್ಟರು. ಹೈಸ್ಕೂಲಿನಲ್ಲಿ ನನ್ನ ಯೋಗ್ಯತೆ ಗೊತ್ತಿದ್ದವರು ಈಗಿನ ವರ್ತಮಾನವನ್ನು ಬೆರಗಿನಿಂದ ನೋಡುತ್ತಾನೆ. ಅಬ್ಬಾ ! ಎನ್ನುತ್ತಾರೆ. ಅಲ್ಲಿ ಅಭಿಮಾನ, ಅಚ್ಚರಿ, ಪ್ರೀತಿ, ಗೌರವವಿದೆ.
ಹೈಸ್ಕೂಲಿನಲ್ಲಿ ಚುನಾವಣೆ ಬಂದಾಗ ನಾನು ಗೆದ್ದು ಮಂತ್ರಿಯಾದದ್ದು ಅನುಕಂಪದ ಮೇಲೆ, ಪಾಪ ಸಿದ್ದಿ ದಡ್ಡ ಕೊನೆ ಪಕ್ಷ ಇಂತಹ ಚಟುವಟಿಕೆಗಳನ್ನಾದರೂ ಮಾಡಲಿ ಎಂಬ ಪ್ರೋತ್ಸಾಹ.
ಅಚ್ಚರಿ ಮೂಡಿಸುತ್ತಿದ್ದ ಪಾಠಗಳು ಅರ್ಥವಾಗುತ್ತಿರಲಿಲ್ಲ. ಜೀವನೋತ್ಸಾಹ ಕಳೆದುಕೊಳ್ಳದೆ ಕಲಿತೆ. ಗೆಲ್ಲಬೇಕೆಂದು ಪ್ರಯತ್ನಿಸಿದೆ.
ಸಾಹಿತ್ಯ ಕಲಿಸುತ್ತಿದ್ದ ಆರಾಳಗೌಡರು, ಇಂಗ್ಲೀಷ ಕಲಿಸುತ್ತಿದ್ದ ಬಿ.ಎಂ. ಪಾಟೀಲರ ಪಾಠಗಳನ್ನು ಆಸ್ಥೆಂಯಿಂದ ಆಲಿಸುತ್ತಿದ್ದೆ. ಗಣಿತ, ವಿಜ್ಞಾನ ಕ್ಲಾಸುಗಳಲ್ಲಿ ದೈಹಿಕವಾಗಿ ಹಾಜರಿದ್ದು ಮನಸ್ಸನ್ನು ಎಲ್ಲಿಯೋ ಹರಿಬಿಡುತ್ತಿದ್ದೆ. ಅಯ್ಯೋ ತಿಳಿಯದ ವಿಷಯಗಳ ಬಗ್ಗೆ ಪ್ರಯತ್ನ ಯಾಕೆ ಎಂಬ ಅಸಡ್ಡೆ ಬೇರೆ, ಹೀಗಾಗಿ ಗಣಿತ, ವಿಜ್ಞಾನ ತಲೆಗೆ ಹೋಗಲೇ ಇಲ್ಲ.
ನಾನದಕ್ಕೆ ಪ್ರಯತ್ನಿಸಲೂ ಇಲ್ಲ. ಬಯಲಿಗಿಳಿದು ಎಂದೂ ಆಟವಾಡದ ನಾನು, ಸಾಹಿತ್ಯ ಸಂಸ್ಕೃತಿಯ ಕೆಲಸಗಳನ್ನು ಶೃದ್ಧೆಂಯಿದ ಮಾಡಿದೆ. ಒಂಬತ್ತನೇ ಕ್ಲಾಸಿನಲ್ಲಿ ಸ್ತ್ರೀ ಪಾತ್ರ ಮಾಡಿ ಅಭಿನಯಿಸಿದೆ. ವೇದಿಕೆ ಮುಂದೆ ತೆಗ್ಗು ತೆಗೆದು ಹಾರ್ಮೋನಿಯಂ ಹೂತಿಟ್ಟು ಕಾಲಿನಿಂದ ಹಾರ್ಮೋನಿಯಂ ನುಡಿಸುತ್ತಿದ್ದ ನಾಟಕದ ಮೇಷ್ಟ್ರು ಹಾಡಿಗೆ ತಾಳ ಹಾಕಿದ್ದರು. ಹಾಗಂತ ನಾನೇನು ಸಂಗೀತಗಾರನಾಗಿ ಬೆಳೆಯಲಿಲ್ಲ.
ಆ ದಿನಗಳಲ್ಲಿ ಮನೆಯಲ್ಲಿ ಯಾರೂ ಮಾರ್ಗದರ್ಶನ ಮಾಡುತ್ತಿರಲಿಲ್ಲ.ಆದರೆ ಹೈಸ್ಕೂಲಿನ ಶಿಕ್ಷಕರು ತುಂಬಾ ಪರಿಶ್ರಮದಿಂದ ಕಲಿಸುತ್ತಿದ್ದರು. ಅವರ ಸ್ನೇಹಮಯ ವರ್ತನೆ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ನಾನು ಅಕ್ಯಾಡೆಮಿಕ್ ಆಗಿ ಬೆಳೆಯಲಿಲ್ಲ ಎಂಬ ನಿರಾಶೆ ಅವರಲ್ಲಿತ್ತು.
ಗಣಿತದ ಚನ್ನಯ್ಯ ಮೇಷ್ಟ್ರು, ವಿಜ್ಞಾನದ ಬಿ.ಜಿ.ಸಾಲಿಮಠ, ಹಿಂದಿಯ ಗುರುಸಿದ್ದಪ್ಪ, ಸಮಾಜಶಾಸ್ತ್ರದ ಮಲ್ಲಿಕಾರ್ಜುನ ತಿಮ್ಮಾಪೂರ, ಆಟದ ಮೇಷ್ಟ್ರು ಸಂಗಪ್ಪ ತೆಗ್ಗಿನಮನಿ, ಡ್ರಾಯಿಂಗನ ವೀರಭದ್ರಪ್ಪ ಬಂಡೋರಳ್ಳಿ ಹೀಗೆ ಎಲ್ಲ ಶಿಕ್ಷಕರು ಮನದಾಳದಲಿ ಉಳಿದಿದ್ದಾರೆ.
ಆದರೆ ಎಲ್ಲರ ಪರಿಶ್ರಮ ನನಗೆ ಉಪಯೋಗವಾಗಲಿಲ್ಲ ಎಂಬ ಅವರ ವಿಷಾದಕ್ಕೆ ಕಾರಣನಾದೆ.
ಎಂಟು, ಒಂಬತ್ತು ಹೇಗೋ ಪಾಸ್ ಆದೆ, ನಮ್ಮ ಶಾಲೆಯ ಕಟ್ಟಡವಿಲ್ಲದೆ ಗುಡಿಸಲಿನಲ್ಲಿ ವರ್ಗಗಳು ನಡೆಯುತ್ತಾ ಇದ್ದುದು ಮನಸಿಗೆ ಕಿರಿ ಕಿರಿ ಎನಿಸಿತು. ಮೌಲ್ಯ ಹೆಚ್ಚಿಸುವ ಶಿಕ್ಷಕರಿದ್ದರು, ಶಾಲೆಗೆ ಕಟ್ಟಡ ಬೇಕಿಲ್ಲ ಎಂಬ ಶಾಶ್ವತ ಸತ್ಯವನ್ನು ನಮ್ಮ ಪ್ರಾಮಾಣಿಕ ಶಿಕ್ಷಕರು ಸಾರಿದರು.ತುಂಬಾ ಪ್ರಯಾಸಪಟ್ಟರೂ ಹತ್ತನೇ ವರ್ಗದಲಿ ಕೇವಲ ನಾಲ್ಕು ವಿಷಯ ಪಾಸಾದೆ. ಇಂಗ್ಲೀಷ್ ಹಾಗೂ ವಿಜ್ಞಾನ ವಿಷಯಗಳಲ್ಲಿ ಫೇಲ್ ಆಗಿದ್ದೆ. ಗಣಿತದಲ್ಲಿ ಪವಾಡ ನಡೆದಿತ್ತು. ಕಹಿ-ಸಿಹಿಯ ಹೈಸ್ಕೂಲ್ ಶಿಕ್ಷಣದ ನೆನಪು..

Saturday, November 20, 2010

ಸಾಂಸ್ಕೃತಿಕ ಭಿನ್ನತೆಯ ವಿಚಿತ್ರಾನುಭವ

ಸಂಸ್ಕೃತಿಯ ಭಿನ್ನತೆಯನ್ನು ಬಾಲ್ಯದಿಂದ ಎದುರಿಸಿ, ಅನುಭವಿಸಿದ್ದೇನೆ. ಭಾರತದಂತಹ ಬೃಹತ್ ರಾಷ್ಟ್ರವನ್ನು ವಿವಿಧತೆಯಲಿ ಏಕತೆ ಎಂದು ಹೊಗಳುತ್ತೇವೆ. ಇದು ಪರಿಪೂರ್ಣ ಸತ್ಯ !
ಭಾಷೆ, ಉಡುಗೆ, ಅಡುಗೆ, ವಿನ್ಯಾಸ, ಧರ್ಮ, ಜಾತಿ, ಸಂಪ್ರದಾಯ, ಲೈಂಗಿಕ ಬದುಕು, ಸಾಮಾಜಿಕ ಆಯಾಮಗಳಲಿ ತೀವ್ರವಾದ ಭಿನ್ನತೆಯನ್ನು ಇಲ್ಲಿ ಇಂಡಿಯಾದಲಿ ಮಾತ್ರ ಕಾಣಲು ಸಾಧ್ಯ,
ಇದು ಪ್ರತಿ ಹತ್ತು ಕಿಲೋ ಮೀಟರಗಳ ಅಂತರದಲ್ಲಿ ಬದಲಾಗುತ್ತಾ ಹೋಗುತ್ತದೆ. ಇಂಗ್ಲೆಂಡಿನಂತಹ ಅಂಗೈಯಗಲದ ದೇಶದಲ್ಲಿಯೂ ಇದನ್ನು ಅನುಭವಿಸಿದೆ. ಈ ಎಲ್ಲ ತಲ್ಲಣಗಳನ್ನು ನನ್ನ ಇಂಗ್ಲೆಂಡ್ ಪ್ರವಾಸ ಕಥನ ಎತ್ತಣ ಮಾಮರದಲಿ ವಿವರಿಸಿದ್ದೇನೆ.
ಬಾಲ್ಯದಲ್ಲಿ ಕಾರಟಗಿಯಲ್ಲಿ ಹುಟ್ಟಿದೆ. ಕುಷ್ಟಗಿಯಲ್ಲಿ ಅರ್ಧ ಕಾಲ ಕಳೆದೆ. ಮುಂದೆ ಕಾಲೇಜು ಅಧ್ಯಯನಕ್ಕಾಗಿ ಧಾರವಾಡಕ್ಕೆ ಬಂದೆ, ಎಂ.ಎ. ಓದಲು ಮಹಾರಾಷ್ಟ್ರದ ಸಾಂಗ್ಲಿಗೆ ಹೋದೆ. ಕಾಲೇಜು ಕೆಲಸಗಳಿಗಾಗಿ ಬೃಹತ್ ಬೆಂಗಳೂರಿನಲ್ಲಿ ಓಡಾಡಿದೆ. ಪ್ರತಿ ತಿರುಗುವಿಕೆಯಲ್ಲೂ ವಿವಿಧತೆಯನ್ನು ಗಾಢವಾಗಿ ಅನುಭವಿಸಿದ್ದೇನೆ.

ಅಮ್ಮ ಸಣ್ಣವನಿದ್ದಾಗ ಪದೇ, ಪದೇ ಹೇಳುತ್ತಿದ್ದಳು, ಸಿದ್ದಪ್ಪ ನಿನ್ನ ಕಾಲಲಿ ನಾಯಿಗೆರೆ ಇವೆ ಅಂತ. ಹೀಗಿದ್ದವರು ಬರೀ ತಿರುಗುತ್ತಾರಂತೆ, ಸರಿಸುಮಾರು ಲಕ್ಷಾಂತರ ಕಿಲೋಮೀಟರ್ ಅಲೆದಾಡಿದ ಲೆಕ್ಕ ನನ್ನಲ್ಲಿದೆ. ದೇಶಸುತ್ತಿ, ಕೋಶವನ್ನು ಓದಿದ್ದೇನೆ. ಆದರೆ ಗಳಿಸಬೇಕಾದ ಜ್ಞಾನ ಸಂಪತ್ತನ್ನು ಗಳಿಸಿದ್ದೇನೋ ಇಲ್ಲವೋ ಗೊತ್ತಾಗುತ್ತಿಲ್ಲ.

ನವಾಬರ ಆಡಳಿತದ ಪ್ರಭಾವದಿಂದ ಹೈದ್ರಾಬಾದ ಕರ್ನಾಟಕ ಅಷ್ಟೊಂದು ಮುಂದುವರೆದ ಪ್ರದೇಶವಾಗಿರಲಿಲ್ಲ. ಈ ಪ್ರದೇಶಕ್ಕೆ ಸೇರಿಕೊಂಡ ಬಳ್ಳಾರಿ ಮಾತ್ರ ಮುಂದುವರೆದ ಪ್ರದೇಶವಾಗಲು ಕಾರಣ ಅದು ಮದ್ರಾಸ್ ಆಡಳಿತಕ್ಕೆ ಒಳಪಟ್ಟಿತ್ತು. ಆದರೆ ಮುಂದೆ ಎಂ.ಪಿ.ಪ್ರಕಾಶ ಅವರು ಅಧಿಕಾರದಲ್ಲಿದ್ದಾಗ ಬಳ್ಳಾರಿಯನ್ನು ಅಧಿಕಾರಯುತವಾಗಿ, ಆರ್ಥಿಕ ಲಾಭಕ್ಕಾಗಿ ಹೈದ್ರಾಬಾದ್ ಕರ್ನಾಟಕದ ವ್ಯಾಪ್ತಿಗೆ ಬಳ್ಳಾರಿಯನ್ನು ಸೇರಿಸಿದರು.

ಬಳ್ಳಾರಿಗೆ ಬೆಂಗಳೂರು ಸಂಸ್ಕೃತಿ ಇತ್ತು, ಇಂಗ್ಲೀಷ ಮೀಡಿಯಂ ಶಾಲೆಗಳಿದ್ದವು ರಾಯಚೂರು ಹಾಗೂ ಬೀದರ್ ಜಿಲ್ಲೆಗಳೂ ತೀರಾ ಹಿಂದುಳಿದ ಪ್ರದೇಶಗಳಾಗಿದ್ದವು. ಆದರೆ ಅದೇ ರಾಯಚೂರು ಜಿಲ್ಲೆಯ ಕೊಪ್ಪಳ, ಕುಷ್ಟಗಿ ಹಾಗೂ ಯಲಬುರ್ಗಾ ತಾಲುಕುಗಳು ಧಾರವಾಡ ಜಿಲ್ಲೆಯ ಗದುಗಿನ ಪ್ರಭಾವಕ್ಕೆ ಒಳಗಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದರೂ, ಆರ್ಥಿಕವಾಗಿ ಹಿಂದುಳಿದಿದ್ದವು.
ಅಂದಿನ ರಾಯಚೂರು ಜಿಲ್ಲೆಯ ಗಂಗಾವತಿ, ಸಿಂಧನೂರು, ಮಾನ್ವಿ ತಾಲೂಕುಗಳು ತುಂಗಭದ್ರಾ ನೀರಾವರಿ ಯೋಜನೆಯಿಂದಾಗಿ ಆರ್ಥಿಕವಾಗಿ ಚೇತರಿಸಿಕೊಂಡಿದ್ದರು. ಶೈಕ್ಷಣಿಕವಾಗಿ ಬೆಳೆದಿರಲಿಲ್ಲ.
೮೦ರ ದಶಕದಲ್ಲಿ ಕಾರಟಗಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಗದುಗಿನ ಜಗದ್ಗುರುಗಳು ಈ ಊರು ಪಂಜಾಬಿನಷ್ಟು ಶ್ರೀಮಂತವಾಗಿದೆ, ಆದರೆ ವಿದ್ಯೆಯಲ್ಲಿ ಬಿಹಾರನಂತೆ ಹಿಂದುಳಿದಿದೆ, ಎಂಬ ಮಾತುಗಳು ನನ್ನನ್ನು ತೀವ್ರವಾಗಿ ಅಪಮಾನಿಸಿದವು. ಅದು ದಿವ್ಯ ಸತ್ಯವಾಗಿತ್ತು.

ಕಾರಟಗಿಯ ಉರಿ ಬಿಸಿಲು, ಅರೆಬರೆ ಶಿಕ್ಷಣವನ್ನು ಸಣ್ಣವನಿದ್ದಾಗ ಎದುರಿಸಿದೆ. ಅವ್ವನ ತವರುಮನೆ ಕುಷ್ಟಗಿಗೆ ಹೋದಾಗ ಅದು ಸತ್ಯವೆನಿಸುತ್ತಿತ್ತು. ಕುಷ್ಟಗಿಗೆ ಗದುಗಿನ ಪ್ರಭಾವವಿತ್ತು. ಹೀಗಾಗಿ ಕುಷ್ಟಗಿಯ ಜನರನ್ನು ನಮ್ಮೂರಿನಲ್ಲಿ ಮ್ಯಾಗಡೆಯವರು ಎಂದು ಕರೆಯುತ್ತಿದ್ದರು.

ಪಾಪ ಮ್ಯಾಗಡೆಯವರು ಬಡವರು, ಶ್ಯಾಣ್ಯಾರು, ದುಡಿಯಾಕ ಬರ್ತಾರೆ ಹೀಗೆ ಹತ್ತು ಹಲವು ರೀತಿಯಲ್ಲಿ ವಿಷ್ಲೇಷಿಸುತ್ತಿ ದ್ದರು ಇದು ಟೀಕೆಯೋ, ಹೊಗಳಿಕೆಯೋ ನನಗೆ ಅರ್ಥವಾಗುತ್ತಿರಲಿಲ್ಲ.

ಈ ಸುಂಸ್ಕೃತಿಯ ಪಲ್ಲಟವನ್ನು ನಾನು ಕಾರಟಗಿಂದ ಕುಷ್ಟಗಿಗೆ ಬಂದಾಗಲೆಲ್ಲಾ ಅನುಭವಿಸುತ್ತಿದ್ದೆ. ಆಗ ಸಂಸ್ಕೃತಿ ಹಾಗೂ ಕುಟುಂಬದ ನಿರ್ವಹಣೆಯಲ್ಲಿ ವ್ಯತ್ಯಾಸವನ್ನು ಗ್ರಹಿಸಿದೆ.
ಅಮರಣ್ಣ ತಾತಾ, ಅವ್ವನ ಅಪ್ಪ ಗುರುಸಿದ್ದಪ್ಪ ಅಜ್ಜಾ ಅವರಲ್ಲಿನ ವ್ಯತ್ಯಾಸವನ್ನು ಗುರುತಿಸಿದೆ. ಕಾರಟಗಿಯಲ್ಲಿ ತಾತ ಎಂದರೆ, ಕುಷ್ಟಗಿಯಲ್ಲಿ ಅಜ್ಜ ಅನ್ನುತ್ತಿದ್ದೆ, ಇದೊಂದು ಭಾಷಾಭಿನ್ನತೆಗೆ ಸಾಕ್ಷಿ.
ಆಹಾರದ ವಿಷಯದಲ್ಲೂ ಅಷ್ಟೇ, ಊರಲ್ಲಿ ಸಿಹಿ, ಅನ್ನ ಹಾಲು, ಬ್ಯಾಳಿ ತಿಂದರೆ, ಕುಷ್ಟಗಿಯಲ್ಲಿ ಚಪಾತಿ, ರೊಟ್ಟಿ ತಿನ್ನುತ್ತಿದ್ದೆ. ಅನ್ನ ಮಾಡು ಎಂದು ಹಟ ಮಾಡಿದಾಗಲೆಲ್ಲ, ಕುಷ್ಟಗಿಯ ಕಾಶಮ್ಮಸುಮ್ಮನೆ ಕೊಟ್ಟಿದ್ದನ್ನು ತಿಂದು ಬೀಳು ಅನ್ನುತ್ತಿದ್ದಳು.
ಇದು ಬರಗಾಲದ ಊರು ಅಕ್ಕಿ ಸಿಗೋದಿಲ್ಲ ಭಾಡ್ಯಾ ಎಂದು ಜಬರಿಸಿದಾಗ ಸುಮ್ಮನಾಗುತ್ತಿದ್ದೆ.
ಅಡ್ಡಿ ಇಲ್ಲ ಬಿಡು ಬರಗಾಲದಲ್ಲೂ ಬಿಸಿ ಚಪಾತಿ ಮಾಡ್ತೀರಿ. ನಿಮ್ಮೂರಲ್ಲಿ ಸದಾ ಬರಗಾಲ ಇರ್ಲಿ ಅಂತಿದ್ದೆ, ಬರಗಾಲ ಅಂದರೆ ಬಡತನ ಅಲ್ಲ, ಬಿಸಿ ಚಪಾತಿ ಅಂತ ತಿಳಿದುಕೊಂಡಿದ್ದು ಬಾಲ್ಯದ ವಿಸ್ಮಯ ಮುಗ್ಧತೆಗೆ ಸಾಕ್ಷಿ.

Wednesday, November 17, 2010

ಬೆಳೆದ ಬೆಳಗೆರೆಯ ರವಿ ಕಿರಣಗಳು


ಬಾನೆತ್ತರಕೆ ಬೆಳೆದವರೊಂದಗಿನ ಸ್ನೇಹ ಎಂದು ಹೇಳಿಕೊಳ್ಳುವುದು ಫ್ಯಾಷನ್ ಆಗುತ್ತದೆ. ಆದರೆ ಜೊತೆಗಿದ್ದವರು ಬೆಳೆದಾಗ ಅಭಿಮಾನವೆನಿಸುವುದು ಸಹಜ !
ಬಳ್ಳಾರಿಯ ಸತ್ಯನಾರಾಯಣ ಪೇಟೆಯ, ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಪದವೀಧರ, ಖಾಸಗಿ ಕಾಲೇಜಿನ ಉಪನ್ಯಾಸಕ, ಪತ್ರಕರ್ತ, ಹಾಯ್ ಮೂಲಕ ಕೋಟ್ಯಾಂತರ ಕನ್ನಡಿಗರ ಮನೆ-ಮನೆ ಸೇರಿದ ರವಿ ಬೆಳಗೆರೆ ಯಾರಿಗೆ ಗೊತ್ತಿಲ್ಲ.
ತುಂಬಾ ದಿನದಿಂದ ನನಗೆ ಗೊತ್ತು ಎಂದು ಹೇಳಿಕೊಳ್ಳುವ ಅನಿವಾರ್ಯತೆ ಇದೆ. ೧೯೮೬ ರಲ್ಲಿ ಬಿ.ಎ. ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದೆ. ಅಪರಾಧ ಶಾಸ್ತ್ರ, ನನ್ನ ಮೈನರ್ ವಿಷಯ.
ಜೈಲುಗಳ ಕುರಿತು ಅಧ್ಯಯನ ಮಾಡಲು ಬಳ್ಳಾರಿಗೆ ಹೋದೆ.
ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಸರ್, ಜಾಗರಕಲ್ ಎಂಬ ಅವರ ಪರಿಚಿತ ಪೋಲಿಸ್ ಅಧಿಕಾರಿಯನ್ನು ಪರಿಚಯಿಸಿದರು. ಜೈಲಿನ ಸುತ್ತಾಟ ಮುಗಿದ ಮೇಲೆ, ಮೇಜರ್ ವಿಷಯದ ಸಾಹಿತ್ಯ ನೆನಪಾತು.
ಜಾಗರಕಲ್ ಅವರಿಗೆ ಸಾಹಿತಿಗಳನ್ನು ಪರಿಚಯಿಸಲು ಹೇಳಿದೆ. ಅವರು ತಕ್ಷಣ ನನ್ನನ್ನು ಸತ್ಯನಾರಾಯಣ ಪೇಟೆಗೆ ಕರೆದುಕೊಂಡು ಹೋಗಿ ಕರ್ನಾಟಕ ಕ್ರೈಮ್ ಪತ್ರಿಕೆಯ ಸಂಪಾದಕರನ್ನು ಪರಿಚಯಿಸಿ, ಇವರು ಸಾಹಿತಿಗಳು ಸರ್ ಅಂದರು. ಪತ್ರಕರ್ತರು ಸಾಹಿತಿಗಳಿರಬಹುದು ಎಂದು ಲೆಕ್ಕ ಹಾಕುತ್ತ ಪರಿಚಯಿಸಿಕೊಂಡೆ.
ಕರಿ ಸಿಲ್ಕ್ ಜುಬ್ಬಾ, ಲುಂಗಿ ಉಟ್ಟುಕೊಂಡು, ಸಿಗರೇಟ್ ಸೇದುತ್ತಾ ವ್ಯಸ್ತಿ ಪರಿಚಯಿಸಿಕೊಂಡು ಕೊಡಲು ಹೇಳಿದರು.
ಮನೆಯ ಒಳಗಡೆ ಅಮ್ಮಾ ಮಲಗಿದ್ದಾರೆ ಅವರಿಗೆ ಡಿಸ್ಟರ್ಬ್ ಆಗುವುದು ಬೇಡ ಇಲ್ಲಿಯೇ ಹೊರಗೆ ಕೊಡೋಣ ಎಂದರು. ಆಯ್ತು ಎಂದೆ ನನ್ನ ಅಭ್ಯಾಸ ಸಾಹಿತ್ಯದ ಆಸಕ್ತಿ ಇತ್ಯಾದಿಗಳನ್ನು ಅತ್ಯಂತ ಪರಿಚಿತ ಹಿರಿಯಣ್ಣನಂತೆ ವಿಚಾರಿಸಿಕೊಂಡು.
". ಸಿದ್ದು ನೀವು ಚಿಕನ್ ತಿಂತೀರಿ ತಾನೇ ಎಂದರು. ಆಗಬಹುದು ಎಂದೆ. ಒಂದು ದೊಡ್ಡ ತಟ್ಟೆ ತುಂಬಾ ಮಿರಿ ಮಿರಿ ಮಿಂಚುವ ಖಾರದ ಚಿಕನ್ ನೋಡಿದಾಗ ಆಶ್ಚರ್ಯವಾಯಿತು. ಬಳ್ಳಾರಿಯ ಬ್ರಾಹ್ಮಣರ ಮನೆಯ ಆವರಣದಲ್ಲಿ, ಮಟ ಮಟ ಮಧ್ಯಾಹ್ನದಲ್ಲಿ, ಬಟಾಬಯಲಿನಲ್ಲಿ ಅಬ್ಬಾ ! ಚಿಕನ್ ತಿನ್ನೋದಾ ಎಂದು ಕೊಂಚ ಸಂಕೋಚ ಪಟ್ಟುಕೊಂಡೆ, ಬಾಯಲ್ಲಿ ನೀರೂರಿದ್ದನ್ನು ಸಹಿಸಿಕೊಳ್ಳಲಾಗದೇ ತಿನ್ನಲು ಶುರು ಮಾಡಿದೆ.

ಅದರವನ್ನು ಉರಿಸಿದ ಚಿಕ್ಕನ್, ಉದರಕ್ಕೆ ಹಿತವೆನಿಸಿತು. ಅಂತಹ ರುಚಿಕಟ್ಟಾದ ಚಿಕ್ಕನ್ನನ್ನು ಧಾರವಾಡದಲ್ಲಿ ತಿಂದಿರಲಿಲ್ಲ. ಏನಾದರೂ ಬರೀತಿಯಾ ಸಿದ್ದು ಎಂದರು. ಇಲ್ಲ ಸರ್ ಎಂದೆ ಸಂಕೋಚದಿಂದ. ನಾವು ಮೊದಲೇ ಹಿಂದುಳಿದ ಪ್ರದೇಶದಿಂದ ಬಂದವನು ಬಗ್ಗಲೇಬೇಕಲ್ಲ ಎಂದೆ. ಇಲ್ಲ, ಇಲ್ಲ ಅನಿಸಿದ್ದನ್ನು ಗೀಚುತ್ತಾ ಹೋಗು. ಮುಂದೊಂದು ದಿನ ಪರಿಶ್ರಮ ಪಟ್ಟರೆ ಬರಹ ಕೈ ಹಿಡಿಯುತ್ತೆ ಎಂಬ ಉಪದೇಶ ಬೇರೆ.

ಕಾರಟಗಿ ಕಡೆ ಎಂತಹ ಹಿರಿಯರನ್ನು ಬಹುವಚನದಿಂದ ಮಾತನಾಡಿಸುವುದಿಲ್ಲ. ಅಣ್ಣಾ, ಮಾಮ ಅಂತ ಮಾತನಾಡಿಸುವುದು ರೂಢಿ. ನಾನು ಹಂಗರೀ ಹಿಂಗರೀ ಅಂತ ಮಾತನಾಡುವುದನ್ನು ತುಂಡರಿಸಿ ಅಯ್ಯೋ ಏಕವಚನದಲ್ಲಿ ಮಾತಾಡು ಮಾರಾಯ ಅಂದರು.

ನನಗೂ ಧಾರವಾಡದ ಪರಿಸರದಲ್ಲಿ ಬಹುವಚನ ಮಾತನಾಡಿಸಬೇಕಾಗಿತ್ತು. ಆಯ್ತಣ್ಣ ಅಂದೆ. ಅಂದಿನಿಂದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ನನ್ನ ಪಾಲಿನ ರವಿ ಅಣ್ಣ ಆದ. ನನಗಿಂತ ಎಂಟು ವರ್ಷ ಹಿರಿಯನಾದ ರವಿಯೊಂದಿಗಿನ ಆಪ್ತತೆ ಹಾಗೆ ಮುಂದುವರೆತು.

ಮುಂದೆ ರವಿ ಬಳ್ಳಾರಿ ಬಿಟ್ಟು ಹುಬ್ಬಳ್ಳಿ ಆಫೀಸಿಗೆ ಬರೋ ಹೊತ್ತಿಗೆ ನಾನು ಉಪನ್ಯಾಸಕನಾಗಿ ಗದಗ ಸೇರಿದ್ದೆ. ಹುಬ್ಬಳ್ಳಿ ಸಂಯುಕ್ತ ಕಚೇರಿಗೆ ಹೋಗಿ ನನ್ನ ಬರಹ ತೋರಿಸಿಬಂದಿದ್ದೆ. ನಾಡಿನ ಯಾವುದೇ ಪತ್ರಿಕೆಗಳನ್ನು ಅಲ್ಲಿಯವರೆಗೆ ನನ್ನ ಲೇಖನಗಳನ್ನ ಪ್ರಕಟಿಸಿರಲಿಲ್ಲ. ರವಿ ಕರ್ಮವೀರದಲ್ಲಿ ಪದ್ಯ ಪ್ರಕಟನೆ ನನ್ನನ್ನು ಕವಿಯಾಗಿಸಿದ.
ಬೆಂಗಳೂರು ಸೇರಿ ಕನ್ನಡ ಪ್ರಭ ಆಫೀಸಿನಲ್ಲಿದ್ದಾಗ ವೈ.ಎನ್.ಕೆ ಅವರನ್ನು ಕಂಡು ತಾತ್ಕಾಲಿಕವಾಗಿ ಕನ್ನಡ ಪ್ರಭ ವರದಿಗಾರನಾಗಿ ಬರುವಾಗ ರವಿಯನ್ನು ಕಂಡು ಬಂದೆ. ಮುಂದೆ ರವಿ ಹಾಯ್ ಪ್ರಾರಂಭಿಸುವ ಯೋಜನೆ ಪ್ರಕಟಿಸಿದಾಗ ಬೆಂಗಳೂರಿಗೆ ಹೋಗಿ ಏಜನ್ಸಿ ಪಡೆದುಕೊಂಡೆ.
ಅತಂತ್ರ ನೌಕರರಿಗೆ ಅನುದಾನ ಸಿಕ್ಕಿರಲಿಲ್ಲ. ಹೊಟ್ಟೆಪಾಡಿಗೆ ಏನಾದರೂ ಮಾಡಬೇಕಿತ್ತು. ಏಜನ್ಸಿ ಪಡೆದುಕೊಂಡರೆ ಆರ್ಥಿಕವಾಗಿ ಅನುಕೂಲವಾಗಬಹುದೆಂದು ಭಾವಿಸಿ ಏಜನ್ಸಿ ಹಿಡಿದೆ.

ಪತ್ರಿಕೆ ಪಾಪ್ಯೂಲರ್ ಆಯಿತು. ನೂರು ಕಾಪಿಗಳು ಗದುಗಿನಲ್ಲಿ ಸೇಲ್ ಆದವು. ಆದರೆ ಪತ್ರಿಕೆ ಮಾರುವ ಹುಡುಗರು ಸರಿಯಾಗಿ ಹಣ ಕೊಡಲಿಲ್ಲ. ಕೈಯಿಂದ ತುಂಬುವುದು ಸಾಕಾಗಿ ಏಜನ್ಸಿ ನಿಲ್ಲಿಸಿ ಬಿಟ್ಟೆ.
ಈ ಮಧ್ಯೆ ಗದುಗಿಗೆ ಸಂಬಂಧಿಸಿದ ವರದಿಯೊಂದು ಪ್ರಕಟವಾಯ್ತು. ಅದನ್ನು ನಾನೇ ಬರೆದಿರಬಹುದೆಂದು ಜನ ಸಂಶಯದಿಂದ ನೋಡಲು ಪ್ರಾರಂಭಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಯು ನೌಕರಿ ನನ್ನ ಧೈರ್ಯವನ್ನು ಕಿತ್ತುಕೊಂಡಿತ್ತು.
ಅನುದಾನ ಬೇರೆ ಸಿಕ್ಕಿರಲಿಲ್ಲ ತುಂಬಾ ಹೆದರಿಬಿಟ್ಟು ಏಜನ್ಸಿಯನ್ನು ಕೈಬಿಟ್ಟೆ.
ಹಾಯ್ ಪ್ರಸಾರ ಹೆಚ್ಚಾಯಿತು. ಏಜನ್ಸಿ ಬಿಟ್ಟದಕ್ಕೆ ರವಿ ಬೇಸರ ಮಾಡಿಕೊಳ್ಳಲಿಲ್ಲ. ಆಗಾಗ ನಿವೇದಿತಾ ಪೋನ್ ಮಾಡಿ ಉಳಿದಿರುವ ಎರಡು ಸಾವಿರ ಬಾಕಿ ಕಳಿಸಲು ಹೇಳಿದರು. ಸಾಧ್ಯವಾಗಲಿಲ್ಲ. ಮೊದಲನೇ ವಾರ್ಷಿಕೋತ್ಸವಕ್ಕೆ ಬೆಂಗಳೂರಿಗೆ ಬರುವ ಆಹ್ವಾನ ಬಂತು ಕೈಯಲ್ಲಿ ಹಣ ಇರಲಿಲ್ಲ. ಸಾಹಿತ್ಯ ಸಂಗಾತಿಗಳೊಬ್ಬರಿಂದ ಹಣ ಪಡೆದು, ರೆಕಾರ್ಡರ್ ತಗೊಂಡು ಬೆಂಗಳೂರಿಗೆ ಹೋದೆ.

ರವಿ ಖುಷವಂತಸಿಂಗ್ರನ್ನು ಪರಿಚಸಿದರು. ಅವರೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದೆ. ಸಂಜೆ ಕಾರ್ಯಕ್ರಮದಲ್ಲಿ ರವಿ, ನಾಗತಿಹಳ್ಳಿ, ಖು ಷ್ವಂತ ಅಜ್ಜನ ಭಾಷಣ ಕೇಳಿ ಗದುಗಿಗೆ ಬಂದೆ.
ರವಿ ಎಷ್ಟೇ ಒತ್ತಾಸಿದರು. ಹಾಯ್ ಗೆ ಬರೆಯುವ ಧೈರ್ಯವಾಗಲೇ ಇಲ್ಲ. ರವಿಯೊಂದಿಗೆ ಸಂಪರ್ಕ, ಆತ್ಮೀಯತೆ ಸಾಧ್ಯವಾಗಲೇ ಇಲ್ಲ. ಮುಂದೆ ಅನುದಾನಕ್ಕಾಗಿ ಬೆಂಗಳೂರು ಅಲೆದಾಡಿ ಸಂಪೂರ್ಣ ಸಾಹಿತ್ಸ ಸಂಪರ್ಕ ಕಳೆದುಕೊಂಡೆ. ಆದರೆ ಈ ನೆಪದಿಂದ ಬೆಂಗಳೂರು ಓಡಾಟ ಹೆಚ್ಚಾಯಿತು.

ಹೋದಾಗಲೆಲ್ಲ ರವಿಯಣ್ಣನನ್ನು ಕಂಡು ಮಾತನಾಡಿ ಸಂಭ್ರಮಿಸುತ್ತಿದ್ದೆ. ಎಂದೂ ನನ್ನ ಕಷ್ಟ ಹೇಳಿಕೊಳ್ಳುವ ಮನಸ್ಸಾಗಲಿಲ್ಲ. ಮುಂದೆ ೧೯೯೭ ರಲ್ಲಿ ಅನುದಾನ ಸಿಕ್ಕಿತು. ಬರಹ ಓದಿಗೆ ಜೀವ ಬಂತು. ನಿವೇದಿತಾರ ಬಳಿ ರವಿಯ ಎಲ್ಲ ಪುಸ್ತಕ ಪಡೆದುಕೊಂಡು ಪಟ್ಟಾಗಿ ಓದಿದೆ. ಅಬ್ಬಾ ! ! ! ಅನಿಸಿತು. ರವಿ ಆಕಾಶಕ್ಕೇರಿದ್ದ, ನಾನು ಇಲ್ಲೇ ಆಳದಲಿ, ಪಾತಾಳದಲ್ಲಿದ್ದೇನೆ ಎನಿಸಿತು. ಬರೆಯುವ ಚೇತನ ಹೆಚ್ಚಾತು. ರವಿ ಬೆಳಗೆರೆಯ ಬರಹದಲ್ಲಿ ಅಪಾರ ಆಕರ್ಷಣೆಯಿದೆ. ಲಂಕೇಶದ ನಂತರ ಪಟ್ಟಾಗಿ ಕುಳಿತು ಬರೆಯುವ ತಾಕತ್ತು ರವಿಗಿದೆ.
ಪತ್ರಿಕೆಯ ಇಂಟಿಗ್ರಿಟಿ ಉಳಿದಿರುವುದು ರವಿಯ ಖಾಸ್ ಬಾತ್ ನಿಂದಾಗಿ ಸಿನಿಮಾ, ಧಾರವಾಹಿಗೆ ಶಾಲೆ ಹೀಗೆ ಅಲೆದ ಎಲ್ಲ ಕ್ಷೇತ್ರಗಳಲ್ಲೂ ರವಿ ಯಶಸ್ಸನ್ನು ಸಾಧಿಸಿದ. ಆದರೆ ನನಗೆ ಬರಹಗಾರನಾಗಿ ಮಾತ್ರ ಉಳಿದ. ಆತನ ಸೆಕ್ಸಿ ಬರಹದಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ.
ಮುಂದೆ ನಾನು ಅಚಾನಕಾಗಿ ರವೀದ್ರ ರೇಷ್ಮೇಯವರ ವಿಕ್ರಾಂತದಲ್ಲಿ ರೆಗ್ಯೂಲರ್ ಆಗಿ ಬರೆಯಲು ಶುರು ಮಾಡಿ ಬರಹಕ್ಕೆ ಜೀವ ತುಂಬಿದೆ. ಇಂಗ್ಲೆಂಡಿಗೆ ಹೋದಾಗ ರವಿಯ ಮಗನ ಸಲುವಾಗಿ ಹುಡುಕಾಡಿದೆ. ಅಕ್ಕನ ಮದುವೆಗಾಗಿ ಆತ ಬೆಂಗಳೂರಿಗೆ ಬಂದಿದ್ದಾನೆ ಎಂದು ತಿಳಿದು ನಿರಾಶೆಯಾಯಿತು. ಮುಂದೆ ಆಗಾಗ ಫೋನಾಯಿಸಿದೆ, ರವಿಯನ್ನು ಹೆಚ್ಚು ಭೇಟಿ ಆಗುವ ಸ್ಥಿತಿಯನ್ನು ಆತ ದಾಟಿ ದೊಡ್ಡವನಾಗಿ ಹೋಗಿದ್ದ.

ಮುಂದೆ ನನ್ನ ಪ್ರವಾಸಕಥನ ಕಳಿಸಿ ಅಭಿಪ್ರಾಯ ಪಡೆದುಕೊಂಡೆ. ತುಂಬಾ ಚೆನ್ನಾಗಿ ಬರೆದಿದ್ದಿಯಾ ಅಂದಾಗ ಏನೋ ಕಳೆದುಕೊಂಡದ್ದನ್ನು ಪಡೆದ ಅನುಭವ ಆಯ್ತು.
ಈಗ ನನ್ನ ಬರಹ ರೆಗ್ಯೂಲರ್ ಆದ ಮೇಲೆ ರವಿ ಮೇಲಿಂದ ಮೇಲೆ ನೆನಪಾಗುತ್ತಾನೆ. ಪರೋಕ್ಷವಾಗಿ ರವಿ ಬರಹ ನನ್ನ ಮೇಲೆ ತೀವ್ರ ಪ್ರಭಾವ ಬೀರಿದೆ. ರವಿ ನಿತ್ಯ ಪೆನ್ನು ಹಿಡಿದಾಗಲೆಲ್ಲ ಕಾಡುತ್ತಾನೆ. ನಾನು ಬರೆಯುತ್ತಿರುವ ಬಾಲ್ಯದಾನುಭವಗಳಲ್ಲಿ ರವಿ ದಾಖಲಾಗಬೇಕು ಎಂಬ ಆಸೆಯಾತು. ಸಾಧ್ಯವಾದರೆ ಆ ಪುಸ್ತಕಕ್ಕೆ ರವಿಯಣ್ಣ ನಾಲ್ಕು ಮಾತು ಬರೆಯಲಿ ಎಂಬ ಆಸೆಯೂ ಇದೆ.
ಅಂದಿನಿಂದ ಇಂದಿನವರೆಗೆ ಸ್ನೇಹದ ನೆನಪುಗಳು ಹಚ್ಚಹಸುರಾಗಿವೆ. ಪಾಟೀಲ ಪುಟ್ಟಪ್ಪ, ಲಂಕೇಶ, ರವಿ ಬೆಳಗೆರೆ, ರವೀಂದ್ರ ರೇಷ್ಮೇ ಹಾಗೂ ವಿಶ್ವೇಶ್ವರ ಭಟ್‌ರಂತಹ ಸಮಕಾಲಿನ ಹಿರಿಯರ ಪ್ರೇರಣೆ ಬರೆಯುವ ಚೈತನ್ಯ ಹೆಚ್ಚಿಸುತ್ತದೆ.
ಈಗ ಮುಕ್ತವಾಗಿ ಬರೆಯುವ ಬ್ಲಾಗ್ ಜಗತ್ತು ಬರಹದ ಹರವನ್ನು ವಿಸ್ತರಿಸಿದೆ. ನನ್ನನ್ನು ತೀವ್ರವಾಗಿ ಕಾಡಿದ, ಪ್ರಭಾವಿಸಿದ ಹಲವರನ್ನು ಅಕ್ಷರಗಳಲ್ಲಿ ಹಿಡಿದಿಟ್ಟು ಸಂಭ್ರಮಿಸಬೇಕೆನಿಸಿದೆ.

Monday, November 15, 2010

ಡಂಬಳಕೆ ಪಾದಯಾತ್ರೆ : ಪೂಜ್ಯರ ಸಂಪರ್ಕ

ಪರಮಪೂಜ್ಯ ಗದುಗಿನ ತೋಂಟದಾರ್ಯ ಶ್ರೀಗಳು ಜನಪರ ಅಭಿವೃದ್ಧಿಯ ಆಶಯ, ಮಠದ ಬೆಳವಣಿಗೆಯೊಂದಿಗೆ ಭಕ್ತರನ್ನು ಸಂಘಟಿಸಬೇಕೆಂಬ ಕಾರಣದಿಂದ ತಮ್ಮ ಮೂಲ ಪೀಠವಾದ ಡಂಬಳಕ್ಕೆ ಪ್ರತಿ ಅಮವಾಸ್ಯೆಯಂದು ಪಾದಯಾತ್ರೆಯ ಯೋಜನೆಯನ್ನು ಪ್ರಾರಂಭಿಸಿದರು.
ರಾತ್ರಿ ೧೨ ಗಂಟೆಯ ನಂತರ ನೂರಾರು ಭಕ್ತರೊಂದಿಗೆ, ಭಜನೆ ಹಾಡುಗಳ ಮೂಲಕ ಡಂಬಳಕ್ಕೆ ಪಾದಯಾತ್ರೆಯ ಯೋಜನೆ ಮಠದ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರವಹಿಸಿತು. ದಾರಿಯುದ್ದಕ್ಕೂ ಎಲ್ಲ ಜನಾಂಗದ ಜನ ನಡು ರಾತ್ರಿಯಲ್ಲಿ ಪೂಜ್ಯರನ್ನು ಆರತಿ ಬೆಳಗಿ ಸ್ವಾಗತಿಸುವ ದೃಶ್ಯ ಅನೇಕ ಪ್ರಗತಿಪರ ಬೆಳವಣಿಗೆಗೆ ನಾಂದಿಯಾತು.

ಲಂಬಾಣಿ ಸಮಾಜದ ಡೋಣಿ ತಾಂಡಾದ ಯುವಕರು ಈ ಕಾರಣದಿಂದಾಗಿಯೇ ಡಂಬಳ ಮಠಕ್ಕೆ ಆಪ್ತರಾಗಿ ಶ್ರೀಮಠದ ಜಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿದರು. ಲಿಂಗಾಯತ ಧರ್ಮದ ನಿಜಾದರ್ಶನಗಳನ್ನು ಜನ ಅರ್ಥೈಸಿಕೊಳ್ಳುವಂತೆ ಪೂಜ್ಯರು ವಿವರಣೆ ನೀಡಿದ್ದು ಹೆಚ್ಚು ಅರ್ಥಪೂರ್ಣವಾಗಿತ್ತು.

ಅಂದು ಪೂಜ್ಯರು ಬಿತ್ತಿದ ಜಾತ್ಯಾತೀತ ಮೌಲ್ಯದ ಬೀಜ ಇಂದು ನನ್ನಲ್ಲಿ ಹೆಮ್ಮರವಾಗಿ ಬೆಳೆದಿದೆ.ಹಿಂದುಳಿದ, ದಲಿತರ, ಶೋಷಿತರ ಪರವಾಗಿರುವ ಶ್ರೀಗಳ ನಿಲುವು ನನಗೆ ಹೆಚ್ಚು ಸಮಂಜಸವೆನಿಸಿತು.

ಬಾಲ್ಯದಲ್ಲಿನ ಈ ಮೌಲ್ಯಗಳು ಹೇಗೆ ಶಾಶ್ವತವಾಗಿ ಉಳಿಯುತ್ತವೆ ಎಂಬುದಕ್ಕೆ ಪೂಜ್ಯರ ದಿವ್ಯ ಪ್ರಖರತೆ ಕಾರಣವೆನಿಸುತ್ತದೆ.

ಒಂಬತ್ತನೇ ತರಗತಿಯಲ್ಲಿ ಓದುತ್ತಿರುವಾಗ ನಾನು ಡಂಬಳ ಪಾದಯಾತ್ರೆಗೆ ಹೋಗಲು ನಿರ್ಧರಿಸಿ, ಪ್ರತಿ ಅಮವಾಸ್ಯೆಯ ಹಿಂದಿನ ರಾತ್ರಿಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳು ವ ಆಸೆಯನ್ನು ಪೂಜ್ಯರಿಗೆ ಒಪ್ಪಿಸಿದೆ.
ಮೊದಲ ಪಾದಯಾತ್ರೆಗೆ ಶರಣು ಕೂಡಾ ಒಪ್ಪಿದ ಗಂಗಾವತಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಅರಳಿ ನಾಗರಾಜ ಮಾಮಾ ಹಾಗೂ ಶಶಿಕಲಾ ಅಕ್ಕಾ ಪಾದಯಾತ್ರೆಗೆ ಬರುವುದು ತಿಳಿಸಿದಾಗ ಹೆಚ್ಚಿನ ಸಂಭ್ರಮವೆನಿಸಿತು. ಮೊದಲ ಅಮವಾಸೆಯ ಹಿಂದಿನ ರಾತ್ರಿ ಗದುಗಿನ ಜೋಳದ ಅಜ್ಜಾ ಅವರ ಮನೆಯಲ್ಲಿ ಸ್ನಾನ ಮಾಡಿ ಎಲ್ಲರೂ ಶ್ರದ್ಧೆಯಿಂದ ತಯಾರಾದೆವು.
ನೀವು ಸಣ್ಣ ಹುಡುಗರು ನಿಮಗೆ ತೊಂದರೆ ಆಗಬಹುದು. ಹಾಗೇನಾದರೂ ತೊಂದರೆಯಾದರೆ ನಿಧಾನವಾಗಿ ಬನ್ನಿರಿ ಎಂದು ಹೇಳಿ ಅಜ್ಜಾ ಅವರು ಆಶೀರ್ವದಿಸಿದರು.
ನಡುರಾತ್ರಿಯ ಕತ್ತಲೆಯ ತಂಪಿನಲ್ಲಿ ನಡೆಯುವದರಲಿ ಎಂತಹ ಅರ್ಥ ಅಡಗಿದೆ. ಗಾಂಧೀಜಿಯ ಪಾದಯಾತ್ರೆ ಸದುದ್ದೇಶವನ್ನು ಪೂಜ್ಯ ಅಜ್ಜಾ ಅವರು. ಡಂಬಳ ಪಾದಯಾತ್ರೆ ಮೂಲಕ ಪ್ರತಿಪಾದಿಸಿದರು.
ಈ ಪಾದಯಾತ್ರೆ ಮೂಲಕ ನಾನು ಅಜ್ಜಾರಿಗೆ ಹೆಚ್ಚು ಹತ್ತಿರವಾದೆ. ನನ್ನ ಎಲ್ಲ ರೀತಿಯ ವಿತಂಡ ಪ್ರಶ್ನೆಗಳಿಗೆ ಪೂಜ್ಯರು ನಸುನಗುತ್ತಾ ಉತ್ತರಿಸುತ್ತಿದ್ದರು. ಡಂಬಳ ಹತ್ತಿರ ವಾದಂತೆಲ್ಲ ಜನರ ಸಂಖ್ಯೆ ಕರಗುತ್ತಿತ್ತು. ಅಜ್ಜಾದೊಂದಿಗೆ ವಿಶ್ವನಾಥ ಬುಳ್ಳಾ ಅವರು, ನಾಗರಾಳ ಮಾಮಾ ಇನ್ನು ಕೆಲವರು, ಉಳಿಯುತ್ತಿದ್ದರು. ಬಿರುಸಾಗಿ ನಡೆದು ಇದೇ ಗುಂಪಲ್ಲಿ ನಾನು ಉಳಿದುಕೊಂಡೆ. ಧೈರ್ಯ, ಕುತೂಹಲದಿಂದ ನನ್ನ ಪ್ರಶ್ನೆಗಳಿಗೆ ಹಲವರು ತಕರಾರು ಎತ್ತುತ್ತಿದ್ದರು. ಅಜ್ಜಾ ಅವರಂತಹ ಹಿರಿಯರಿಗೆ ಇಂತಹ ಪ್ರಶ್ನೆಗಳನ್ನು ಕೇಳಬಾರದಪ್ಪ ತಮ್ಮಾ ಎಂದು ತಕರಾರು ಒಡ್ಡುತ್ತಿದ್ದರೂ ಅದನ್ನು ಲೆಕ್ಕಿಸದೇ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೆ.

ಲಿಂಗಾಯತ ಧರ್ಮದ ಸೂಕ್ತ ಪರಿಕಲ್ಪನೆಗಳನ್ನು, ಬಸವಾದಿ ಶರಣರ ಮೌಲ್ಯಗಳನ್ನು ಪೂಜ್ಯರು ಸಮಗ್ರವಾಗಿ ವಿರಿಸುತ್ತಿದ್ದರು. ಅದನ್ನು ನೆನಪಿಸಿಕೊಂಡರೆ ಶ್ರೀಗಳ ವ್ಯಕ್ತಿತ್ವದ ಬಗ್ಗೆ ಅಚ್ಚರಿ. ೧೩-೧೪ ರ ವಯಸ್ಸಿನ ಬಾಲಕನ ಪ್ರಶ್ನೆಗಳಿಗೆ ಉತ್ತರಿಸುವ ಅವರ ಘನತೆ, ಹೃದಯ ವೈಷಾಲ್ಯ, ಯುವಕರಲ್ಲಿನ ನಂಬಿಕೆ ಅನನ್ಯವಾದುದು. ಆ ವಯಸ್ಸಿನಲ್ಲಿ ಅವರು ಬಿತ್ತಿದ ವಿಚಾರಧಾರೆಗಳು ಇಂದಿಗೂ ಹಚ್ಚಹಸಿರಾಗಿವೆ.
ಸಾಹಿತ್ಯ, ಧರ್ಮ, ಶಿಕ್ಷಣಗಳ ವಿಷಯವಾಗಿ ಇಂದು ಗಂಟೆಗಟ್ಟಲೆ ಮಾತನಾಡಿ ಶಾಬಾಷ್‌ಗಿರಿ ಗಳಿಸಲು ಪೂಜ್ಯರೇ ಕಾರಣ ಎಂದು ಹೇಳಲು ಅಭಿಮಾನವೆನಿಸುತ್ತದೆ. ಮುಂದಿನ ನನ್ನ ಭಾಷಣಗಳ ಮೇಲೆ ಪೂಜ್ಯರ ಶೈಲಿಯ ಪ್ರಭಾವವಾಯಿತು. ಎಂ.ಎ. ಮುಗಿಸಿ ಕಾಲೇಜು ಉಪನ್ಯಾಸಕನಾದಾಗಲೂ ಪೂಜ್ಯರ ಸಲಹೆ-ಮಾರ್ಗದರ್ಶನ ಪಡೆಯುವದನ್ನು ಮುಂದುವರೆಸಿದೆ.
ಡಂಬಳದ ಪಾದಯಾತ್ರೆಯನ್ನು ಮೂರು-ನಾಲ್ಕು ವರ್ಷ ಮುಂದುವರೆಸಿದೆ.ಅವರು ಜ್ಞಾನ ಸಂಪತ್ತನ್ನು ಹೆಚ್ಚಿಸಿದರು.
ಮುಂಜಾನೆ ಡಂಬಳಕೆ ತಲುಪಿದ ಮೇಲೆ ಸ್ನಾನ ಮಾಡಿ ಪೂಜ್ಯರೊಂದಿಗೆ ಪ್ರಸಾದ ಸ್ವೀಕರಿಸುವ ಯೋಗ ನಮ್ಮದಾಗಿತ್ತು. ಆದರೂ ಸ್ನಾನ ಮಾಡುವ ಮೊದಲು ಮಠದ ಎದುರಿಗಿನ ಚಾಹದ ಅಂಗಡಿಯಲ್ಲಿ ಪೂರಿ, ಚಟ್ನಿ ತಿನ್ನುತ್ತಿದ್ದೆ. ಉಳಿದವರು ಇದನ್ನು ರಹಸ್ಯವಾಗಿಟ್ಟರೂ ನಾನೊಮ್ಮೆ ಪೂರಿ ತಿನ್ನುವ ವಿಷಯವನ್ನು ಅಜ್ಜಾರ ಮುಂದೆ ಬಯಲು ಮಾಡಿದಾಗ ಹೊಟ್ಟೆ ತುಂಬಾ ನಕ್ಕರು. ನಿನ್ನ ಮುಂದ ಸಿಕ್ರೇಟ್ ವಿಷಯ ಹೇಳೋದೇ ಕಷ್ಟ ಅಂದರು. ಅ ನೇರವಂತಿಕೆ ಇಂದಿಗೂ ಉಳಿದು ಅನೇಕ ಅಪಾಯಗಳಿಗೆ ಕಾರಣವಾಗಿದೆ.
ಒಮ್ಮೊಮ್ಮೆ ಈ ರೀತಿಯ ಪಾರದರ್ಶಕ ನೇರ ಮಾತುಗಾರಿಕೆ, ಅನೇಕರನ್ನು ದೂರ ಮಾಡಿದೆ ಎಂಬ ವಿಷಾದವಿದ್ದರೂ ಅಭಿಮಾನವಿದೆ. ನೇರವಂತಿಕೆ ಪಾಠ ಹೇಳಿದ ಪರಮಪೂಜ್ಯ ಜಗದ್ಗುರುಗಳು ಅದೇ ಮೌಲ್ಯಗಳನ್ನು ಉಳಿಸಿಕೊಂಡಿದ್ದಾರೆ. ಅವರ ಆಶೀರ್ವಚನವೆಂದರೆ ತೆರೆದ ಪುಸ್ತಕವಿದ್ದಂತೆ ಅಜ್ಜಾ ಅವರು ಏನೂ ಮುಚ್ಚಿಡದೇ ಸಭೆಯಲ್ಲಿ ಹೇಳಿಬಿಡುತ್ತಾರೆ ಎಂಬ ಆತಂಕ ಕೆಲವರಲ್ಲಿ. ಆದರೆ ನನಗೆ ಮಾತ್ರ ಇದು ಸಮಂಜಸವೆನಿಸುತ್ತದೆ. ಡಂಬಳದ ಪಾದಯಾತ್ರೆ ಹೊಸ ಬದಲಾವಣೆ ನಾಂದಿ ಆದದ್ದನ್ನು ಮರೆಯಲ ಸಾದ್ಯ.

ತೋಂಟದಾರ್ಯ ಜಾತ್ರೆ ಗದುಗಿನ ಅಜ್ಜಾ ಅವರು

ಹೈಸ್ಕೂಲು ವ್ಯಾಸಂಗದ ಸಾಹಿತ್ಯದ ಅಧ್ಯಯನ ವ್ಯಕ್ತಿತ್ವದಲ್ಲಿ ಬದಲಾವಣೆ ತಂದಿತ್ತು. ಸಮರ್ಪಕ ಮಾರ್ಗದರ್ಶಕರಿಗಾಗಿ ಮನಸು ಹಾತೊರೆಯುತ್ತಿತ್ತು. ಸಣ್ಣ ಹುಡುಗನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನ ನಮ್ಮವರಿಗೆ ಇರಲಿಲ್ಲ. ಆಂತರಿಕವಾಗಿ ಅರಳಿದ್ದೆ, ಅಕ್ಯಾಡೆಮಿಕ್ ಆಗಿ ವಿಫಲನಾಗಿದ್ದೆ.

ಈ ಕುರಿತು ವಿಷಾದವಿರಲಿಲ್ಲ. ಗೆಲ್ಲುತ್ತೇನೆ ಎಂಬ ಆಸೆಯೂ ಇತ್ತು. ೧೯೭೬ ರಲ್ಲಿ ಗದುಗಿನ ತೋಂಟದಾರ್ಯ ಮಠದ ಜಾತ್ರೆಗೆ ಬಂದಿದ್ದೆ. ಜಾತ್ರೆಯೆಂದರೆ ಗದ್ದಲ, ಉತ್ತತ್ತಿಗಳ ಹಾರಾಟ ಅಂದುಕೊಂಡಿದ್ದೆ.
ಉಪನ್ಯಾಸ, ಸಾಹಿತ್ಯ ಚರ್ಚೆ, ಪುಸ್ತಕ ಬಿಡುಗಡೆ, ಸಾಧಕರಿಗೆ ಸನ್ಮಾನದಂತಹ ಕಾರ್ಯಕ್ರಮಗಳು ಜಾತ್ರೆಯ ಗದ್ದಲದಲ್ಲಿ ನಡೆಯಬಹುದು ಎಂದು ಊಹಿಸದ ವಯಸ್ಸು. ಒಮ್ಮೆ ಕಾರಟಗಿಯಲ್ಲಿ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಭಾಷಣ ಕೇಳಿ, ಪ್ರಭಾವಿತನಾಗಿದ್ದೆ. ಅವರು ಹೇಳಿದ ಜೋಳದ ಹಿಟ್ಟು, ರೊಟ್ಟಿಯಾದ ರಸವತ್ತಾದ ಕತೆಯನ್ನು ಆಸ್ವಾಧಿಸಿದ್ದೆ.

ಆಕರ್ಷಣೀಯವೆನಿಸಿದ ನನ್ನನ್ನು ಜಾತ್ರೆಗೆ ಕರೆದರು. ಆ ಆಹ್ವಾನದ ಎಳೆ ಹಿಡಿದು ಸಿದ್ದಲಿಂಗಣ್ಣ, ಶರಣುನೊಂದಿಗೆ ಜಾತ್ರೆಗೆ ಹೋಗಿದ್ದೆ. ಜಾತ್ರೆಯ ಗದ್ದಲದ ಮಧ್ಯ ತೂರಿಹೋಗುವ ಮೌಲ್ಯಗಳನ್ನು ಶ್ರೀಗಳು ಟೀಕಿಸಿ ಹೊಸ ಕ್ರಾಂತಿಕಾರಿ ನಿರ್ಣಯದ ಮೂಲಕ ಪಲ್ಲಕ್ಕಿಯನ್ನು , ತೇರಿನ ಗಾಲಿಗೆ ಅನ್ನ ಹಾಕುವ ಸಂಪ್ರದಾಯವನ್ನು ನಿರಾಕರಿಸಿ ಹೊಸ ಕ್ರಾಂತಿಗೆ ನಾಂದಿ ಹಾಡಿದ ಅಪರೂಪದ ಕ್ಷಣದಲಿ ಭಾಗವಹಿಸಿದೆ ಎಂಬ ಅಭಿಮಾನ ನನ್ನದಾಯಿತು.

ಅಂದು ಯಾರ್ಯಾರು ಭಾಷಣ ಮಾಡಿದರು ನನಗದು ನೆನಪಿಲ್ಲ. ಕೊನೆಯಲ್ಲಿ ಶ್ರೀಗಳು ಮಾಡಿದ ಆಶೀರ್ವಚನ ಅದ್ಭುತವಾಗಿತ್ತು. ಎಳೆಯ ಬಾಲಕರಿಂದ ಹಿರಿಯ ಸಾಹಿತಿಗಳಿಗೂ ತಿಳಿಯುವಂತೆ ಸರಿಸುಮಾರು ಎರಡು ತಾಸು ಶ್ರೀಗಳು ಪರಂಪರೆ ಹಾಗೂ ಲಿಂಗಾಯತ ಮೌಲ್ಯಗಳನ್ನು ಪ್ರತಿಪಾದಿಸಿ, ತಾವು ತೆಗೆದುಕೊಂಡ ಕ್ರಾಂತಿಕಾರಿ ನಿರ್ಣಯಕ್ಕೆ ಸಮರ್ಥನೆ ನೀಡಿ ಭಕ್ತರಿಗೆ ಸಾಂತ್ವನ ಹೇಳಿದರು.
ಬದಲಾವಣೆಗಳನ್ನು ಸಮಾಜ ಮುಕ್ತವಾಗಿ ಸ್ವೀಕರಿಸುವುದಿಲ್ಲ. ಆದರೆ ತಿಳಿಹೇಳಿದಾಗ ಒಪ್ಪಿಕೊಳ್ಳುತ್ತಾರೆ. ತಿಳಿಹೇಳುವ ಕಾರ್ಯವನ್ನು ಶ್ರೀಗಳು ಅರ್ಥಪೂರ್ಣವಾಗಿ ಮಾಡಿದ್ದರು. ಪರಿಣಾಮಕಾರಿ ಮಾತುಗಾರಿಕೆ ಅದ್ಭುತ ಪರಿಚಯ. ಎಳೆಯ ಪ್ರಾಯದಲ್ಲಿ ಆಯಿತು. ನನಗೆ ಕೇವಲ ಹನ್ನೊಂದು ವರ್ಷ ಭಾಷಣದ ತೀವ್ರತೆ ಹಾಗೂ ಪರಿಣಾಮವನ್ನು ಗ್ರಹಿಸಿಕೊಂಡು, ಉತ್ತಮ ಮಾತುಗಾರನಾಗಬೇಕೆಂದು ಸಂಕಲ್ಪಿಸಿಕೊಂಡೆ. ನನ್ನ ಸಂಕಲ್ಪವನ್ನು ಯಾರಿಗಾದರೂ ಹೇಳಿದ್ದರೆ ಅಪಹಾಸ್ಯ ಮಾಡಬಾರದು ಎಂದು ಸುಮ್ಮನಿದ್ದೆ, ಆದರೆ ಮರುದಿನ ಸಂಜೆ ಅಂತಹ ಗದ್ದಲದಲ್ಲಿಯೂ ಶ್ರೀಗಳನ್ನು ಭೇಟಿ ಆದೆ.

ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಒಂದು ಸಮಾಜದ ಮಠಾಧೀಶರೊಬ್ಬರು ಹೀಗೆ ಸಣ್ಣ ಹುಡುಗನೊಂದಿಗೆ ಚರ್ಚೆ ಮಾಡಬಹುದು ಎಂದು ಊಹಿಸಿರಲಿಲ್ಲ. ದೊಡ್ಡವರು ಎನ್ನುವದು ಇದೇ ಕಾರಣಕ್ಕಲ್ಲವೇ? ನಿನ್ನೆಯ ನನ್ನ ಭಾಷಣ ತಿಳಿತೇನು ? ಅಂದರು. ನಾನು ಗ್ರಹಿಸಿದ ರೀತಿಯನ್ನು ಧೈರ್ಯದಿಂದ ವಿವರಿಸಿದೆ. ಭೇಷ್, ಭೇಷ್ ಎಂದರು. ಅಡ್ಡಿಯಿಲ್ಲ ಇಷ್ಟೊಂದು ಸಣ್ಣ ವಯಸ್ಸಿನಲ್ಲಿ ಅಪಾರ ಕುತೂಹಲ ಇಟ್ಟುಕೊಂಡಿದ್ದೀಯಾ. ನೀನು ಮನಸ್ಸು ಮಾಡಿದರೆ ಸಾಹಿತ್ಯ ವಿದ್ಯಾರ್ಥಿ ಆಗ್ತಿ. ಛಲೋತನ್ಯಾಗ ಅಭ್ಯಾಸ ಮಾಡು ಎಂದು ಆಶೀರ್ವದಿಸಿ ಒಂದೆರೆಡು ಪುಸ್ತಕಗಳನ್ನು ಕೊಟ್ಟರು. ಇನ್ನಷ್ಟು ಉತ್ತೇಜಿತನಾಗಿ ಧೈರ್ಯ ತಂದುಕೊಂಡು ಅಭ್ಯಾಸದ ನಿರಾಸಕ್ತಿಯನ್ನು ಹೇಳಿದೆ. ಧೈರ್ಯ ತುಂಬಿದರು.
ಇಲ್ಲಿ ನೀನು ಯಶಸ್ಸು ಆಗ್ತೀ. ಹೆದರಬೇಡ ಫೇಲ್ ಆದರೂ ಚಿಂತೆಯಿಲ್ಲ, ಓದುವದನ್ನು ಬಿಡಬೇಡ ಎಂದರು. ಓದಿದಾಗ ಕಣ್ಣೀರು ಬರುತ್ತೆ, ಅಧ್ಯಯನ ಏಕಾಗ್ರತೆಯ ಕೊರತೆಯನ್ನು ವಿವರಿಸಿದೆ. ಕತ್ತಲಿನಲ್ಲಿ ಮುಂಬತ್ತಿ ಹಚ್ಚಿ ಗೋಡೆಯ ಮೇಲಿನ ಚುಕ್ಕೆಯನ್ನು ಒಂದೆರಡು ನಿಮಿಷ ಗಮನಿಸುವ ದೃಷ್ಟಿಯೋಗ ಹೇಳಿಕೊಟ್ಟರು.

ಕಳೆದುಕೊಂಡ ಶ್ರೀಮಂತಿಕೆ, ಮನದ ದುಗುಡವನ್ನು ವಿವರಿಸಿದೆ. ಲಕ್ಷ್ಮೀ ದೂರಾದರೂ ಚಿಂತೆಯಿಲ್ಲ. ನಿನಗೆ ಸರಸ್ವತಿ ಒಲಿಯುತ್ತಾಳೆ ಎಂದು ಆಶೀರ್ವಾದ ಮಾಡಿದರು. ಈಗ ಪೂಜ್ಯರ ಅಂದಿನ ಆಶೀರ್ವಾದದ ಫಲದಂತೆ ಸರಸ್ವತಿ ಒಲಿದಿದ್ದಾಳೆ. ಎಂಟನೇ ತರಗತಿ ಪಾಸಾಗದ ಯೋಗ್ಯತೆ ಇಲ್ಲದ ನಾನು ಇಂದು ಎಂ.ಎ., ಪಿಎಚ್.ಡಿ. ಮಾಡಿದ್ದೇನೆ ಎಂಬುದೇ ಒಂದು ಪವಾಡವಲ್ಲವೇ ?
ಆತ್ಮ ವಿಶ್ವಾಸ ತುಂಬುವ ಇಂತಹ ಗೌರವಾನ್ವಿತ ಹಿರಿಯರನ್ನು ಪವಾಡ ಪುರುಷರು ಎಂದು ಕರೆಯುವುದು ಎನಿಸುತ್ತದೆ.
ಬಾಲ್ಯದ ಈ ಘಟನೆಂದಾಗಿ ಪರಮ ಪೂಜ್ಯರು ಇಂದಿಗೂ ನನಗೆ ಪವಾಡ ಪುರುಷರೆನಿಸಿದ್ದಾರೆ. ಅಂದು ಅವರು ಅಂತಹ ಸ್ಪಂದನಾತ್ಮಕ ಮಾತುಗಳನ್ನು ಆಡದಿದ್ದರೆ ನಾನು ಕಿರಾಣಿ ಅಂಗಡಿ ಗಲ್ಲೆ ಬಿಟ್ಟು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರಲಿಲ್ಲ. ಬಾಲ್ಯದಲ್ಲಿ ಅನೇಕ ದುರ್ಘಟನೆಗಳು ನಡೆದಾಗ ಪೂಜ್ಯ ಅಜ್ಜಾ ಅವರು ಧೈರ್ಯ ತುಂಬಿ ಆಶೀರ್ವದಿಸಿದರು. ತಾಯಯನ್ನು ಭೇಟಿ ಆಗುವ ಕರುವಿನ ಹಾಗೆ ದುಃಖವಾದಾಗಲೆಲ್ಲ ಗದುಗಿಗೆ ಓಡಿ ಬಂದು ಅಜ್ಜಾರೊಂದಿಗೆ ಒಂದೆರಡು ದಿನ ಇದ್ದು ಹೋಗುತ್ತಿದ್ದೆ.
ಅನೇಕ ಸಾಹಿತ್ಯ ಕೃತಿಗಳನ್ನು ಶ್ರೀಗಳು ಬಾಲ್ಯದಲ್ಲಿ ಓದಿಸಿ, ವಿವರಿಸಿದರು. ಆಗ ಭೈರಪ್ಪನನ ಕಾದಂಬರಿಯನ್ನು ಓದಿದೆ, ಅರ್ಥ ಮಾಡಿಕೊಂಡೆ ಎಂಬ ಅಭಿಮಾನ ನನ್ನದು. ಹೈಸ್ಕೂಲು ವ್ಯಾಸಂಗದ ಸಾಹಿತ್ಯಾಸಕ್ತಿಗೆ ದಿವ್ಯ ಅಜ್ಜಾ ಅವರು ಪ್ರೇರಣೆಯಾದರು. ಗಣಿತ, ವಿಜ್ಞಾನ ತಲೆಗೆ ಹೋಗಲೇ ಇಲ್ಲ. ಆದರೂ ಧೈರ್ಯ ತಂದುಕೊಂಡು ಹೈಸ್ಕೂಲಿನಲ್ಲಿ ಕೇವಲ ಸಾಹಿತ್ಯ ಓದಿದೆ. ಉಳಿದ ವಿಷಯಗಳ ನಿರಾಸಕ್ತಿಯನ್ನು ಲೆಕ್ಕಿಸಲಿಲ್ಲ. ಅಂದು ಬಾಲಕನಾಗಿ ಜಾತ್ರೆಯಲ್ಲಿ ಪ್ರೇಕ್ಷಕನಾಗಿ ಭಾಗವಹಿಸಿದ್ದೆ.
ಆದರೆ..... ಈಗ ಕಳೆದ ಇಪ್ಪತ್ತು ವರ್ಷಗಳಿಂದ ಅದೇ ಜಾತ್ರೆಯ ಪದಾಧಿಕಾರಿಯಾಗಿ, ಕಾರ್ಯಕ್ರಮ ನಿರೂಪಿಸಿ ಜಾತ್ರೆ ಯ ಭಾಗವಾಗಿದ್ದೇನೆ . ಇದೇ ಅಲ್ಲದೆ ಬೆಳೆಯುವ, ಬೆರೆಯುವ ಅಚ್ಚರಿ. ಇದನ್ನೆ ಆಧುನಿಕ ವಿಕಸನದ ಪವಾಡ ಅನ್ನುವುದು. ಗದುಗಿನ ಶ್ರೀಗಳು ಇಂದಿಗೂ ನನ್ನೊಂದಿಗಿದ್ದಾರೆ. ದಿವ್ಯ ಚೇತನವಾಗಿ.

Friday, November 12, 2010

ನಗುಮೊಗದ ತ್ಯಾಗಮೂರ್ತಿ ಅಮರಮ್ಮ ಅಮ್ಮ

ಅವಿಭಕ್ತ ಕುಟುಂಬ ವ್ಯವಸ್ಥೆಯಲಿ ಅನೇಕರ ತ್ಯಾಗ, ನಿಸ್ವಾರ್ಥ ಮನೆತನದ ಘನತೆಯನ್ನು ಹೆಚ್ಚಿಸುತ್ತವೆ.
ಈ ಹಿನ್ನೆಲೆಯಲ್ಲಿ ಅಪ್ಪನ ತಾಯಿ ಅಮರಮ್ಮ ಅಮ್ಮನ ತ್ಯಾಗ ನನಗೆ ಆದರ್ಶವೆನಿಸುತ್ತದೆ. ಅಪ್ಪಾ ಹುಟ್ಟಿದ ಕೆಲ ದಿನಗಳ ನಂತರ ಅಜ್ಜನನ್ನು ಕಳೆದುಕೊಂಡ ತಮ್ಮ ಮಗನ ಭವಿಷ್ಯ ಗಮನದಲ್ಲಿಟ್ಟುಕೊಂಡು ಪರಿಶ್ರಮದಿಂದ ಬಾಳಿದಳು. ನೂರಾರು ಜನರಿರುವ ಕುಟುಂಬ ವ್ಯವಸ್ಥೆಯಲಿ ಬೇರೆಯವರ ಸಮೃದ್ಧ, ಸಾಂಸಾರಿಕ ಬದುಕಿನ ಮಧ್ಯ ವಿಧವೆ ಒಂಟಿತನ ಹಿಂಸಾತ್ಮಕವಾದರೂ, ತ್ಯಾಗದಿಂದಾಗಿ ಎಲ್ಲವನ್ನು ಸಹಿಸುವ ಅನಿವಾರ್ಯತೆ ಇರುತ್ತದೆ.

ಪ್ರಾಯದಲ್ಲಿ ವಿಧವೆಯಾದ ಅಮರಮ್ಮ ಅಮ್ಮ ಅಪ್ಪನನ್ನು ಅಕ್ಕರೆಂಯಿದ ಬೆಳೆಸುವುದರೊಂದಿಗೆ, ಅಮರಣ್ಣ ತಾತ (ಅಂದರೆ ಅಮ್ಮನ ಭಾವ) ನ ಮಕ್ಕಳನ್ನು ತನ್ನ ಮಕ್ಕಳಂತೆ ಜೋಪಾನ ಮಾಡಿದರು.
ತಾತನ ಅಗಲಿಕೆಯ ನಂದತರ ಅಮ್ಮ ತವರುಮನೆ ಬಪ್ಪುರವನ್ನು ಸೇರಿಕೊಂಡಿದ್ದರೆ ನಾವಿಂದು ಈ ಸುಸ್ಥಿತಿಯಲ್ಲಿ ಇರುತ್ತಿರಲಿಲ್ಲ. ವರ್ತಮಾನ ಸುಖದಲ್ಲಿ ನಮಗರಿವಿಲ್ಲದಂತೆ ಅನೇಕರ ತ್ಯಾಗವಿರುತ್ತದೆ. ಅಮ್ಮ ತುಂಬು ಸಂಸಾರದಲ್ಲಿ ಎಲ್ಲ ಕಷ್ಟಗಳನ್ನು ಆನುಭವಿಸಿ ಬಾಳಿದ್ದರಿಂದ, ಅಮರಣ್ಣ ತಾತ ನಮ್ಮ ಅಪ್ಪನನ್ನು ಅಕ್ಕರೆಯಿಂದ ಬೆಳೆಸಿ, ಬೆಲೆ ಬಾಳುವ ಆಸ್ತಿ ನೀಡಿದ.

ಜನವರಿ ೨೬, ೨೦೦೪ ರಂದು ನಿಧನರಾದ ಅಮ್ಮ ತುಂಬು ಜೀವನ ನಡೆಸಿದರು. ಸರಿಸುಮಾರು ನೂರು ವಷ ಅಮ್ಮ ಸಾಯುವವರೆಗೆ ಆರೋಗ್ಯವಾಗಿದ್ದರು. ನಮ್ಮ ತಾಯಿಗೆ ಹತ್ತು ಮಕ್ಕಳು, ಅವರೆಲ್ಲರ ಹೆರಿಗೆ ಬಾಣಂತನಕ್ಕೆ ಅವ್ವ ಕುಷ್ಟಗಿ ಹಾಗೂ ಗದುಗಿಗೆ ಹೋಗುತ್ತಿದ್ದಳು. ಅಂತಹ ಸಮಯದಲ್ಲಿ ಅಮ್ಮನೇ ನಮ್ಮನ್ನು ಪಾಲನೆ ಮಾಡಿದಳು.
ಆರೋಗ್ಯ ವಿಷಯದಲ್ಲಿ ಅಮ್ಮ ಕಟ್ಟು ನಿಟ್ಟು ಊಟವಾದ ಮೇಲೆ ನೂರು ಹೆಜ್ಜೆ ನಡೆಯಬೇಕು ಎಂಬ ಅಮ್ಮನ ಮಾತುಗಳು ಇಂದಿಗೂ ನೆನಪಾಗುತ್ತವೆ. ತುಂಬಾ ರುಚಿಕಟ್ಟಾಗಿ ಹೋಳಿಗೆ ಮಾಡುತ್ತಿದ್ದ ಅಮ್ಮ ವಿಪರೀತ ಸಿಹಿ ತಿನ್ನುವ ಹವ್ಯಾಸ ಬೆಳೆಸಿದಳು. ಒಬ್ಬನೇ ಮಗ ಅಪ್ಪನ ಮೇಲೆ ಹಾಗೂ ಸೋದರತ್ತೆ ಶಂಭಮ್ಮ ಅತ್ತೆಮ್ಮನ ಮೇಲೂ ಅಷ್ಟೇ ಅಕ್ಕರೆ.
ಕಷ್ಟದಲ್ಲಿದ್ದ ಶಂಭಮ್ಮ ಅತ್ತೆ ಮೇಲೆ ವಿಶೇಷ ಕಾಳಜಿ ಇತ್ತು. ಅತ್ತೆಮ್ಮಳ ಒಳ್ಳೆಯತನಕ್ಕೆ ತಕ್ನಂತೆ ಮನೆತನ ಸಿಗಲಿಲ್ಲ ಎಂಬ ಕೊರಗು ಬೇರೆ. ಆಕೆಯ ಮಕ್ಕಳಾದ ಚಂದ್ರು, ನಾಗರಾಜ ರ ಮೇಲೆ ಪ್ರೀತಿ ತೋರುತ್ತಿದ್ದ ಬಗೆಗೆ ನನಗೇನು ಬೇಸರ ಆಗುತ್ತಿರಲಿಲ್ಲ. ಹೆಣ್ಣು ಮೊಮ್ಮಕ್ಕಳ ಮೇಲಿನ ಮಮಕಾರ ನಮ್ಮಲ್ಲಿ ಸಹಜ ಕಾಣುತ್ತದೆ. ಸರಿಸುಮಾರು ಏಳು ದಶಕಗಳ ಕಾಲ ವಿಧವೆಯೂಗಿ ಬಾಳಿದ ಅಮ್ಮ ಯಾರಿಗೂ ಕಿರಿ-ಕಿರಿ ಅನಿಸಿ ಹೊರೆಯಾಗಲಿಲ್ಲ.

ಅಮರಣ್ಣ ತಾತ, ಕೊಟ್ರಮ್ಮ ಅಮ್ಮ ಹಾಗೂ ಅವರೆಲ್ಲ ಮಕ್ಕಳಿಗೆ ಅಮ್ಮ ಇಷ್ಟವಾಗುತ್ತಿದ್ದಳು. ನಾವು ೧೯೭೨ರಲ್ಲಿ ಬೇರೆ ಆದ ನಂತರವೂ, ಅವ್ವನ ಅನಾರೋಗ್ಯದಿಂದಾಗಿ ಅಮ್ಮ ನಮ್ಮನ್ನು ಜೋಪಾನ ಮಾಡಿದಳು. ಒಮ್ಮೊಮ್ಮೆ ಮುಗ್ಧೆಯಂತೆ, ಮತ್ತೊಮ್ಮೆ ಜಾಣೆಯಂತೆ ಕಾಣುತ್ತಿದ್ದ ಅಮ್ಮ ಹಲವು ವಿಸ್ಮಯಗಳನ್ನು ಮೂಡಿಸಿದಳು.
ಮೈ ತುಂಬಾ ಎಣ್ಣೆ ಹಚ್ಚಿ, ಹಂಡೆ ನೀರು ಕಾಸಿ ಮೈ ಹಗುರವಾಗುವಂತೆ ಅಮ್ಮ ಮಾಡಿಸುತ್ತಿದ್ದ ತಲೆ ಸ್ನಾನ, ಹರಪ್ಪ, ಮೊಹಂಜೋರ ಕಾಲದ ಗ್ರೇಟ್ ಬಾತ್‌ನ್ನು ನೆನಪಿಸುತ್ತಿತ್ತು. ವಿಶಾಲವಾದ ಬಚ್ಚಲು, ಹಂಡೆ ನೀರು ಈಗ ಮಾಯವಾಗಿ ಸಣ್ಣಗೆ ನೀರು ಸುರಿಯುವ ಗೀಜರುಗಳು ಸ್ನಾನದ ಸಂಭ್ರಮವನ್ನು ದೂರ ಮಾಡಿವೆ.

ಬಾಲ್ಯದಲ್ಲಿ ಸ್ನಾನ ಮಾಡುವದೆಂದರೆ ಎಲ್ಲಿಲ್ಲದ ಖುಷಿ, ಈಗ ಸ್ಟಾರ್ ಹೋಟೆಲ್ಲುಗಳು ಬಾತ್ ರೂಂಗೆ ಹೋದರೆ ಬೇಸರವಾಗುತ್ತದೆ. ಸ್ನಾನ, ಧ್ಯಾನ, ಕಾಮ ಮುಕ್ತವಾಗಿದ್ದರೆ ಚಂದ ಅಲ್ಲವೇ ? ಆದರೆ ಈಗ ಎಲ್ಲಿಯೂ ಆ ಮುಕ್ತತೆ ಸಿಗುವುದಿಲ್ಲ ಅನಿಸಿದೆ.
ಈಗ ಮನಃಪೂರ್ತಿ ಸ್ನಾನ ಮಾಡುವ, ಹೊಟ್ಟೆ ತುಂಬಾ ಊಟಮಾಡುವುದನ್ನೇ ಮರೆತಂತಾಗಿದೆ. ಬೆನ್ನು ಪರದೇಶಿ ಅದನ್ನು ನಾನೇ ಸ್ವಚ್ಛಗೊಳಿಸುತ್ತೇನೆ ಎಂದು ಅಮ್ಮ ಹೇಳುತ್ತಿದ್ದಳು.
ನಾನು ಬಾಲ್ಯದಲ್ಲಿ ಅಪ್ಪ-ಅಮ್ಮನ ಜೊತೆ ಜಗಳ ತೆಗೆದರೆ ಅಮ್ಮ ನನ್ನ ಪರವಹಿಸುತ್ತಿದ್ದಳು. ಕಾಲೇಜು ವ್ಯಾಸಂಗದಲ್ಲಿಯೂ ಅಮ್ಮ ನನ್ನನ್ನು ಅಷ್ಟೇ ಪ್ರೀತಿಸಿದಳು. ಆಕೆಯು ಮುದ್ದು ಹೆಣ್ನುಮೊಮ್ಮಕ್ಕಳಾದ ಚಂದ್ರು, ನಾಗರಾಜ ಸಣ್ಣ ಪ್ರಾಯದಲ್ಲಿ ತೀರಿಕೊಂಡಾಗ ತುಂಬಾ ನೊಂದುಕೊಂಡರು.
ಒಂದು ವೇಳೆ ಚಂದ್ರು, ನಾಗರಾಜ ಸಾಯದಿದ್ದರೆ ಅಮ್ಮ ಇನ್ನೂ ಬದುಕುತ್ತಿದ್ದಳು. ಅಮ್ಮನ ಅನೇಕ ಆಸೆಗಳನ್ನು ನಮಗೆ ಪೂರೈಸಲಾಗಲಿಲ್ಲ. ಅತ್ತೆಯ ಮಕ್ಕಳೊಂದಿಗೆ ಮದುವೆ ಸಂಬಂಧ ಬೆಳೆಯಲಿಲ್ಲ ಎಂಬ ವಿಷಾಧವಿತ್ತು. ವಿದ್ಯಾವಂತನಾದ ನನಗೆ ರಕ್ತ ಸಂಬಂಧದಲ್ಲಿ ನಂಬಿಕೆ ಇರಲಿಲ್ಲ.
ಈಗಲೂ ಅಷ್ಟೇ ದೀಪಾವಳಿಗೆ ಊರಿಗೆ ಹೋಗಿ, ಸಣ್ಣ ಬಾತ್ ರೂಂನಲ್ಲಿ ಮುಕ್ತವಾಗಿ ಸ್ನಾನ ಮಾಡುವಾಗಲೆಲ್ಲ ಅಮ್ಮ ನೆನಪಾಗುತ್ತಾಳೆ. ಬಿಸಿ ಹೋಳಿಗೆ ತುಪ್ಪದ ಸವಿಯಲ್ಲಿ ಅಮರಮ್ಮ ಅಮ್ಮ ಜೀವಂತವಾಗಿದ್ದಾಳೆ. ಆಕೆಯ ತ್ಯಾಗದ ಫಲ ನಾವು ಅನುಭವಿಸುತ್ತೇವೆ ಎಂಬ ಸಂಭ್ರಮದಲ್ಲಿ ಆಕೆ ಜೀವಂತವಾಗಿದ್ದಾಳೆ.

Thursday, November 11, 2010

ಶೌಚಾಲಯದ ಹಿಂಸೆ

ನೆನಪಿನಾಳದಲ್ಲಿ ಬಾಲ್ಯದ ಘಟನೆಗಳು ಇಷ್ಟೊಂದು ಸ್ಪಷ್ಟವಾಗಿ ನೆನಪಿರಲು ಕಾರಣಗಳೇನು? ಎಂದು ಸದಾ ಆಲೋಚಿಸುತ್ತೇನೆ. ನಾಲ್ಕಾರು ವರ್ಷದ ಹಿಂದಿನ ಸಂಗತಿಗಳು ಅಸ್ಪಷ್ಟವಾಗಿ ಬಿಡುತ್ತವೆ. ಹಾಗೆ ವ್ಯಕ್ತಿಗಳು ಕೂಡಾ. ಆದರೆ ಬಾಲ್ಯದ ಘಟನೆಗಳು ಸ್ಮೃತಿ ಪಟಲದ ಮೇಲೆ ಸಿನಿಮಾದಂತೆ ಚಲಿಸುತ್ತಾ ಸಾಗುತ್ತವೆ. ವ್ಯಕ್ತಿ ಬೆಳೆದು ದೊಡ್ಡವನಾಗಿ ಉನ್ನತ ಸ್ಥಾನಕ್ಕೇರಿದರೂ ಬೆಂಬಿಡದ ಭೂತದಂತೆ ಆರದ ಗಾಯದಂತೆ ಬಾಲ್ಯದ ಆಘಾತಗಳು ಉಳಿದುಕೊಂಡು ಬಿಡುತ್ತವೆ. ಅವುಗಳನ್ನೇ ಚೈಲ್ಡಹುಡ್ ಟ್ರಾಮಾಸ್ ಎನ್ನುತ್ತಾರೆ.

ಇಂದು ಎಲ್ಲ ಐಷಾರಾಮಿ ಜೀವನದ ಹೊಸ್ತಿಲಲಿದ್ದರೂ ಅವುಗಳನ್ನು ಎಂಜಾಯ ಮಾಡಲು ಬಾಲ್ಯದ ಆಘಾತಗಳು ಅಡ್ಡಿಪಡಿಸುತ್ತವೆ. ಸ್ಟಾರ್ ಹೋಟೆಲಗಳಲ್ಲಿ ಬಾತರೂಮ್ ಬಳಸುವಾಗ, ರಸ್ತೆ ಬದಿಯಲ್ಲಿ ಕತ್ತಲೆ ರಾತ್ರಿಯಲಿ ವಿಸರ್ಜನೆಗೆ ಒದ್ದಾಡುವ, ದೀಪದ ಬೆಳಕು, ಬಿದ್ದ ಕೂಡಲೇ ಅಸಹಾಯಕರಾಗಿ ಎದ್ದು ನಿಲ್ಲುವ ಗ್ರಾಮಿಣ ಮಹಿಳೆಯರನ್ನು ಕಂಡಾಗ ಆಘಾತವಾಗುತ್ತದೆ.

ಬಯಲು ಶೌಚಾಲಯದ ಯಾತನೆಯನ್ನು ಬಾಲ್ಯದಲ್ಲಿ ವಿಪರೀತ ಅನುಭವಿಸಿದ್ದೇನೆ. ನಾವು ತುಂಬಾ ಶ್ರೀಮಂತರು, ಆದರೆ ಮನೆಯಲ್ಲಿ ಶೌಚಾಲಯ ಕಟ್ಟುವಂತಿಲ್ಲ. ಅದು ಮೈಲಿಗೆ ಎಂಬ ಭಾವನೆ. ಹೀಗಾಗಿ ಎಲ್ಲರೂ ಹೊರಗಡೆ ಬಯಲು ಜಾಗೆಯನ್ನು ಹುಡುಕಿಕೊಂಡು ಹೋಗಬೇಕು. ಮಹಿಳೆಯರಿಗೆ ನಮ್ಮ ಮನೆಯ ಹಿಂದಿದ್ದ ಪ್ರದೇಶದಲ್ಲಿ ಹೋಗುವ ಯಮಯಾತನೆ ನೆನಸಿಕೊಂಡರೆ ಭಯವಾಗುತ್ತದೆ.
ಆದ್ದರಿಂದ ನಮ್ಮ ಮನೆಯ ಹೆಣ್ಣು ಮಕ್ಕಳು ನಸುಕಿನಲ್ಲಿ, ಇಲ್ಲವೇ ರಾತ್ರಿ ಆಗುವವರೆಗೆ, ಉಸಿರು ಬಿಗಿಹಿಡಿದುಕೊಂಡು ಬಯಲಿಗೆ ಹೋಗಲು ಚಡಪಡಿಸುತ್ತಿದ್ದರು. ಏನೇ ಮೃಷ್ಠಾನ್ನ ಸೇವಿಸಿದರೂ ಏನೂ ಪ್ರಯೋಜನ. ವಿಸರ್ಜನೆಗೆ ಅನುಭವಿಸುವ ನರಕ ಯಾತನೆ ಮುಂದೆ ವೈಭವ ಯುವ ಲೆಕ್ಕ.
ಮಹಿಳೆಯರದು ಈ ದುಸ್ಥಿತಿಯಾದರೆ, ಗಂಡಸರ ಪಾಡಂತೂ ಇನ್ನೂ ವಿಪರೀತ. ಊರ ಹೊರಗೆ, ಬಯಲು ಜಾಗೆಯನ್ನು ಹುಡುಕಿಕೊಂಡು ಹೋಗಬೇಕು. ಈ ರೀತಿ ಚರಗಿ ಹಿಡಿದುಕೊಂಡು, ಉಸಿರು ಬಿಗಿದ ಹಿಡಿದುಕೊಂಡು ಮೈಲುಗಟ್ಟಲೆ ನೆಡೆಯುವ ಹಿಂಸೆ ನೆನಪಾದರೆ ಇಂದಿಗೂ ಬೇಸರವಾಗುತ್ತದೆ. ಬಾಲ್ಯದಲ್ಲಿ ಹೇಗೋ ಅನುಭವಿಸಿದೆವು ಮುಂದೆ ಊರು ಬೆಳೆದಂತೆಲ್ಲ ತೊಂದರೆಯಾತು.
ನಾವು ಹೋಗುತ್ತಿದ್ದ ಖಾಸಗಿ ಒಡೆತನದ ಜಾಗೆಯಲ್ಲಿ ಆಗ ಜಾಗೆಯ ಮಾಲಕರು ಕಟ್ಟಡ ಕಟ್ಟಲು ಪ್ರಾರಂಭಿಸಿ. ಬೆಳಗಿನ ವೇಳೆ ಅಲ್ಲಿ ಕುಳಿತುಕೊಂಡು ಯಾರೂ ಹೋಗದಂತೆ ಕಾಯಲು ಪ್ರಾರಂಭಿಸಿದರು. ಅವರಿಗೆ ಹೆದರಿದ ಜನ ಅಯ್ಯೋ ಧಣಿ ಕುಂತಾನಪ್ಪೋ ಎಂದು ಬೇರೆ ಮುಂದಿನ ಜಾಗ ಹುಡುಕುತ್ತಾ ಬೈದುಕೊಳ್ಳುತ್ತಾ ಸಾಗುತ್ತಿದ್ದರು.
ಆದರೆ ನಾನು ತುಂಬಾ ಹಟಮಾರಿ. ಆ ಬಯಲಲ್ಲಿ ಹೋಗುವುದು ನನ್ನ ಹಕ್ಕು ಎಂದು ತಿಳಿದಿದ್ದೆ. ಧಣಿ ಅಲ್ಲಿ ಕುಳಿತದ್ದನ್ನು ಲೆಕ್ಕಿಸದೇ ಹೊರಟೆ,ಅದನ್ನು ಕಂಡ ಅವರು, ಲೇ ತಮ್ಮಾ ಇಲ್ಲಿ ಎದುಕ ಕುಂತಿನೀ ಅಂತ ಮೂಡಿ ಅಂದರು, ನೀವು ಎದಕರ ಕುಂದರ್ರಿ ನಾ ಚರಗಿ ತಗೊಂಡ ಹೋಗಬೇಕು ಅಂದೆ.
ಅಲ್ಲೋ ನಾನು ಕಲ್ಲು ಕುಂತಂಗ ಕುಂತು ಬ್ಯಾಡ ಅಂತೀನಿ ಎಷ್ಟು ಸೊಕ್ಕು ನಿಂದು ಅಂದರು. ಅಲ್ಲ ನೀವಾದರ ಈಗ ಇದ ಬಯಲಾಗ ಹೋಗಿ ಬಂದೀರಿ, ನಾಯಾಕ ಹೋಗಬಾರದು ಎಂದಾಗ ಮಾಲಿಕರಿಗೆ ಹೇಗಾಗಿರಬೇಡ? ಹೋಗಿಯೇ ಹೋಗುತ್ತೇನೆ ಎಂದು ಹಕ್ಕು ಚಲಾಸಿದಾಗ ಅವರಿಗೆ ಎಲ್ಲಿಲ್ಲದ ಸಿಟ್ಟು ಬಂದು, ನನ್ನ ಚರಗಿ ಕಸಿದು ನೀರು ಚಲ್ಲಿಬಿಟ್ಟರು. ಸಿಟ್ಟಿಗೆದ್ದು ಅಪಮಾನದಿಂದ ಕುದ್ದು ಹೋದೆ. ವಿಸರ್ಜನೆಯ ನೋವಿನಲ್ಲಿಯೂ ಅಳುತ್ತಾ ಜಗಳ ತೆಗೆದೆ. ಅಲ್ಲಿದ್ದ ಆಳುಗಳು ನನ್ನನ್ನು ಸಮಧಾನಿಸಿದರು.
ಅಲ್ಲಪಾ ಧಣಿ, ಧಣೇರು ಕುಂತಾಗ ಹಿಂಗ ಹಟ ಮಾಡಬಾರದು ಎಂದು ತಿಳಿಹೇಳಿ ಚರಗಿ ನೀರು ತುಂಬಿ ಕೊಟ್ಟು ಮುಂದೆ ಸಾಗು ಹಾಕಿದರು.
ಈ ಘಟನೆಯನ್ನು ಅವರು ಊರೆಲ್ಲ ಹೇಳಿ ನಕ್ಕದ್ದು ಆಮೇಲೆ ಗೊತ್ತಾ ಯಿತು. ಅಬಾಬಾ ಸಿದ್ದಪ್ಪ ಧಣಿ ಏನೂ ಬೆರಕೆಪ್ಪೊ ಜಾಗದ ಧಣಿರೊಂದಿಗೆ ಜಗಳ ಆಡಿದ ಎಂದು ಹೆಮ್ಮೆಯಿಂದ ತಮಾಷೆಯಿಂದ ಸುದ್ದಿ ಹಬ್ಬಿಸಿ ನನ್ನನ್ನು ಹೀರೋ ಮಾಡಿದರು.
ಅವರು ಊರಿಗೆ ಶ್ರೀಮಂತರು ಆವರೆದುರು ನಿಂತು ಮರು ಮಾತನಾಡುತ್ತಿದ್ದಿಲ್ಲ. ಆದರೆ ಶೌಚಾಲಯದ ಹಕ್ಕು ಪ್ರತಿಪಾದಿಸಿ ತಪ್ಪು ಬಂಡಾಯ ಎದ್ದಿದ್ದೆ. ಅವರ ಜಾಗೆಯಲ್ಲಿ ಹೋಗುವುದು ತಪ್ಪೆಂದು ಆಗ ಅನಿಸಲಿಲ್ಲ. ಅಂದು ನಾನು ಅಪಮಾನಗೊಂಡದ್ದು ನನ್ನಲ್ಲಿ ಕೊನೆ ತನಕ ಶೌಚಾಲಯದ ಬ್ರಾಮಾ ಆಗಿ ಉಳಿಯಿತು. ಮುಂದಿನ ದಿನಗಳಲ್ಲಿ ಅದಕ್ಕಿಂತಲೂ ದೂರ ಜಾಗೆ ಹುಡುಕಿ ಹೋಗುವ ಹಿಂಸೆ ಆರಂಭವಾತು. ಲ್ಯಾಟ್ರಿನ ಹೋಗುವ ಹಿಂಸೆ ನೆನಪಾಗಿ ಹೊಟ್ಟೆ ತುಂಬಾ ಊಟಮಾಡಲು ಭಯವಾಗುತ್ತಿತ್ತು. ಈಗ ಆ ಗಲೀಜನ್ನು ,ಹಿಂಸೆಯನ್ನು ನೆನಸಿಕೊಂಡರೆ ಲ್ಯಾಟ್ರಿನ್ ಹೇಗೆ ನಾಗರಿಕತೆಯ ಒಂದು ಭಾಗ ಎಂಬುದು ಅರ್ಥವಾಗಿದೆ.

ಒಬಾಮಾಗಳಿಗಾಗಿ ಇಲ್ಲಿ ಹುಡುಕಾಟ

ಮೂರು ದಿನಗಳ ಕಾಲ ಟಿ.ವಿ. ಬಿಟ್ಟು ಕದಲದಂತೆ ಹಿಡಿದು ಹಾಕಿದ ಅಮೇರಿಕಾ ಅಧ್ಯಕ್ಷ ಬರಾಕ್ ಹುಸೇನ್ ಒಬಾಮಾ ಮಾಧ್ಯಮಗಳ ಸ್ನೇಹಿಯಾದರು. ಅವರ ಮಾತು ನಡೆ, ವಿವಾದವಿಲ್ಲದ ಹೇಳಿಕೆಗಳು. ಸಕಾರಾತ್ಮಕ ನಿಲುವು ಅಸ್ಖರಿತ ನಿರೂಪಣೆ ಹೀಗೆ ಎಲ್ಲದರಲ್ಲೂ ದೊಡ್ಡಣ್ಣ ಮಿಂಚಿದ.
ಒಂದು ಬೃಹತ್ ರಾಷ್ಟ್ರದ ಅಧ್ಯಕ್ಷರಾಗಿ ರಾಜಕಾರಣದ ನಿಲುವಷ್ಟೇ ಅಲ್ಲದೆ ವಿವಿಧ ವಿಷಯಗಳ ಮೇಲೆ ಹೊಂದಿದ ಪ್ರಭುತ್ವ ಅಚ್ಚರಿ ಮೂಡಿಸಿತು.
ನಾಯಕರುಗಳು ಬೇರೆ ದೇಶಗಳಿಗೆ ಹೋದಾಗ ಸಿದ್ಧ ಭಾಷಣಗಳನ್ನು ಸಮರ್ಥಕವಾಗಿ ಓದಿ ಮೆಚ್ಚುಗೆ ಗಳಿಸುತ್ತಾರೆ. ಆದರೆ ಒಬಾಮಾ ಸಂವಾಹದ ಮೂಲಕ ಜಗತ್ತಿನ ಗಮನ ಸೆಳೆದರು. ಅದು ಅವರಲ್ಲಿದ್ದ ಆತ್ಮವಿಶ್ವಾಸಕ್ಕೆ ಸಾಕ್ಷಿಯಾತು.
ಭಾಷಣಕ್ಕೆ ಪೂರ್ವಸಿದ್ಧತೆ ಇದ್ದರೆ ಸಾಕು. ಆದರೆ ಸಂವಾದಕ್ಕೆ ಖಾಸಗಿ ವೈಯಕ್ತಿಕ ಬಂಡವಾಳ ಬೇಕಾಗುತ್ತದೆ. ಭಾರತೀಯ ಯುವಕರ ಶಕ್ತಿ ಸಾಮರ್ಥ್ಯ ಕೇಳಿ ತಿಳಿದಿದ್ದ ಒಬಾಮಾ, ವಿದ್ಯಾರ್ಥಿಗಳ ಸಂವಾಹದ ಮೂಲಕ ಸ್ವತಃ ಅನುಭವಿಸಿದರು.
ವಯಸ್ಸಿಗೂ ಮೀರಿದ ಪ್ರಭುದ್ಧ ಪ್ರಶ್ನೆಗಳಿಗೆ ವಿಚಲಿತರಾಗದೇ ಶಾಂತವಾಗಿ ತೂಕಬದ್ಧ ಉತ್ತರ ನೀಡಿದರು. ಪಾಕಿಸ್ತಾನದ ವಿಷಯ ಬಂದಾಗ ಮಕ್ಕಳನ್ನು ತೃಪ್ತಿ ಪಡಿಸುವ, ಕೆರಳಿಸುವ ಗೋಜಿಗೆ ಹೋಗಲಿಲ್ಲ. ಮಕ್ಕಳಿಗೆ ಎಷ್ಟು ಬೇಕೋ ಅಷ್ಟೇ ಉತ್ತರಿಸಿದರು.
ಅದೇ ಪಾಕಿಸ್ತಾನದ ವಿಷಯವನ್ನು ಪತ್ರಿಕಾಗ್ಟೋಗಳಲ್ಲಿ, ಸಂಸತ್ತಿನಲ್ಲಿ ಭಿನ್ನವಾಗಿ, ಖಾರವಾಗಿ ಪ್ರತಿಕ್ರಿಸಿದರು. ಈ ರೀತಿಯ ರೆಲೆವೆನ್ಸುಗಳನ್ನು ಬ್ಯಾಲೆನ್ಸ್ ಮಾಡಲು ತುಂಬಾ ಸಹನೆ ಬೇಕಾಗುತ್ತದೆ. ಮೂರು ದಿನಗಳ ಕಾಲ ಮೈ ತುಂಬಾ ಕಣ್ಣು, ಕಿವಿ ಇಟ್ಟುಕೊಂಡೆ ನಡೆದಾಡಿದರು. ಎಲ್ಲಿಯೂ ವಿವಾದಗಳ ಹುತ್ತಿಗೆ ಕೈ ಹಾಕದ ಜವಾಬ್ದಾರಿ ಪ್ರದರ್ಶಿಸಿದರು.
ಅಮೇರಿಕಾದ ವ್ಯಾಪಾರೀಕರಣ, ಜಾಗತೀಕರಣ, ಮಾರುಕಟ್ಟೆಯ ದುರುದ್ದೇಶಗಳನ್ನು ದೂರವಿಟ್ಟು ಆಲೋಚಿಸುವಂತೆ ಮಾಡಿದ ಹೆಗ್ಗಳಿಗೆ ಒಬಾಮಾ ಅವರದು. ಅಮೇರಿಕಾ ಎಂದರೆ ಕುತಂತ್ರ ವ್ಯಾಪಾರ ಎಂಬ ಭಾವ ಜಗತ್ತಿನಲ್ಲಿ ಬೆಳೆದಿತ್ತು. ಅದರ ಬದಲಾವಣೆಗೆ ಹಾಲಿ ಅಧ್ಯಕ್ಷ ಬಯಸುತ್ತಾರೆ ಎಂಬ ಆಶಯ ಗೊತ್ತಾತು. ಜವಾಬ್ದಾರಿ ಸ್ಥಾನದಲ್ಲಿರುವವರ ಹೇಳಿಕೆಗಳು ಅತ್ಯಂತ ಜವಾಬ್ದಾರಿಂದ ಕೂಡಿರಬೇಕು. ಅವರು ಏನಾದರೂ ಹೇಳಿದರೆ ಇಡೀ ದೇಶವೇ ಹೇಳಿದಂತೆ ಎಂದರ್ಥ. ಅಲ್ಲಿ ಮಾತನಾಡುವುದು ಕೇವಲ ಅವರ ನಾಲಿಗೆಯಲ್ಲ. ಅವರ ಜವಾಬ್ದಾರಿಯುತ ಸ್ಥಾನ, ಅಧಿಕಾರ ಈ ಎಚ್ಚರ ಪ್ರಜ್ಞೆ ಒಬಾಮಾರಲ್ಲಿದೆ.
ಎಷ್ಟೇ ತಾಕತ್ತು, ಅಧಿಕಾರ ದೇಶ ನೀಡಿದ್ದರೂ, ಅನಗತ್ಯ ಆಶ್ವಾಸನೆಗೆ ಮುಂದಾಗಲಿಲ್ಲ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಕಲ್ಪಿಸುವ ವಿಷಯದಲ್ಲಿಯೂ ಅದೇ ನಿಲುವು. ಚಪ್ಪಾಳೆ ಗಿಟ್ಟಿಸುವ ಧಿವಂತ ಇರಲಿಲ್ಲ.
ನಮ್ಮ ದೇಶದ ಎಷ್ಟು ರಾಜಕೀಯ ನಾಯಕರುಗಳಿಗೆ ಈ ಧೀಮಂತಿಕೆ ಇದೆ ? ಎಂಬುದು ನಮ್ಮನ್ನು ಕಾಡುತ್ತದೆ. ಕೇವಲ ಅಬ್ದುಲ್ ಕಲಾಂ ಮಕ್ಕಳೊಂದಿಗೆ ಮುಕ್ತ ಸಂವಾದ ಮಾಡುವ ಆತ್ಮವಿಶ್ವಾಸ ಹೊಂದಿದ್ದಾರೆ. ಆದರೆ ಅವರು ಅಲಂಕಾರಿಕ ಹುದ್ದೆಯಲ್ಲಿದ್ದು ಆ ಕೆಲಸ ಮಾಡಿದರು. ಆದರೆ ಶಾಸಕಾಂಗದ ಮುಖ್ಯಸ್ಥರಾದ ಪ್ರಧಾನಿಗಳಾಗಲಿ, ಮುಖ್ಯಮಂತ್ರಿಗಳಾಗಲಿ ಈ ಕಾರ್ಯಕ್ಕೆ ಕೈ ಹಾಕದಿರುವುದಕ್ಕೆ ಅವರ ಆತ್ಮ "ಶ್ವಾಸದ ಕೊರತೆ ಅಲ್ಲವೇ?
ಆರ್ಥಿಕ ತಜ್ಞ, ಹಿರಿಯ ಚಿಂತಕ, ಸ್ನೇಹ ಜೀವಿ, ಪ್ರಾಮಾಣಿಕ ಹೀಗೆ ಹತ್ತು ಹಲವು ಹೆಗ್ಗಳಿಕೆಗಳಿಗೆ ಪಾತ್ರವಾಗಿರುವ ನಮ್ಮ ಸಭ್ಯ ಪ್ರಧಾನಿಗಳಾದ ಮನಮೋಹನ ಸಂಘಜಿ ಕೂಡಾ ಎಲ್ಲೋ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ ಎನಿಸುತ್ತದೆ.
ಅವರು ಕಳೆದುಕೊಂಡಿರುವ ಸ್ವಾತಂತ್ರ್ಯವನ್ನು ೧೦ ಜನಪಥ್ ನಲ್ಲಿ ಯಾರೂ ಹುಡುಕುವ ಸಾಹಸವನ್ನು ಮಾಡುತ್ತಿಲ್ಲ. ಪ್ರಧಾನಿಗಳ ಕುರಿತು ಆಡುವ ಸದಭಿಪ್ರಾಯಗಳು ಎಲ್ಲಿಯೋ ಒಂದು ಕಡೆ ನಿಂತು ಬಿಡುತ್ತವೆ.
ಹೀಗೆ ಒಬಾಮಾ ತರಹ ಮಾತನಾಡುವುದು ಬೇಡ, ಕನಿಷ್ಠ ಆಲೋಚನೆಯನ್ನಾದರೂ ಮಾಡಲಿ ಎಂದು ಮನಸ್ಸು ಬಯಸುವುದೇ ತಪ್ಪೇ ಮಾಡದೆ ನಮ್ಮ ದೇಶದ ದರಿದ್ರ ರಾಜಕಾರಣಿಗಳಿಗೆ ಎಂದು ಬೈಯಬೇಕೆನಿಸಿದರೂ ಮನಸ್ಸು ತಡೆಯುತ್ತದೆ.
ಶಕ್ತಿಶಾಲಿ ಕೇಂದ್ರ ಕ್ಯಾಬಿನೆಟ್ ಸಚಿವರನ್ನು ಒಮ್ಮೆ ನೆನಪಿಸಿಕೊಂಡಾಗ ಹೌದು ಈ ದೇಶದಲ್ಲಿ ಪ್ರಜಾಪ್ರಭುತ್ವ ಎಳೆದಿದೆ ಎಂಬ ಆಶಾಕಿರಣ. ಪಿ.ಚಿದಂಬರಮ್, ಪ್ರಣವ್ ಮುಖರ್ಜಿ, ಕಪಿಲ್ ಸಿಬಾಲ್, ಎ.ಕೆ.ಅಂಟನಿ ಅಂತಹ ಮುತ್ಸದ್ದಿಗಳು ಕಣ್ಮುಂದ ಬಂದಾಗ ಸ್ವಲ್ಪ ಸಮಾಧಾನವಾದರೂ, ಅವರ್‍ಯಾರೂ ಸ್ವತಂತ್ರರಲ್ಲ ಎಂಬ ಕಾಂಗ್ರೆಸ್ ಬಂಧನ ಅಡ್ಡ ಬರುತ್ತದೆ.
ದೇಶದ ಯುವಕರೇ ನಿಜವಾದ ಭರವಸೆ ಎಂಬ ನಂಬಿಕೆ ಇಟ್ಟುಕೊಂಡು, ಅವರ ಖಾತೆಗಳ ಮೇಲೆ ಅಧ್ಯಯನ ಮಾಡಿ ನಾಡಿನ ಜನರೊಂದಿಗೆ ಮುಕ್ತ ಸಂವಾದ ಅನೇಕ ಸತ್ಯ ಸಂಗತಿಗಳನ್ನು ಬಯಲಿಗೆಳೆಯುವವರೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯುವಕರಲ್ಲಿಯ ಈ ದೇಶದ ಬಗ್ಗೆ ನಂಬಿಕೆ ವಿಶ್ವಾಸ ಹೆಚ್ಚುತ್ತದೆ.
ಹೂರಣವಿಲ್ಲದೆ ಹೋಳಿಗೆ ಮಾಡುವುದನ್ನು ನಮ್ಮ ರಾಜಕಾರಣಿಗಳು ನಿಲ್ಲಿಸಲಿ. ಜವಾಬ್ದಾರಿ ಸ್ಥಾನದಲ್ಲಿರುವುವರು ವ್ಯಕ್ತಿಯಾಗಿ ಉಳಿದಿರುವುದಿಲ್ಲ. ಈ ದೇಶದ ಶಕ್ತಿ ಯಾಗಿರುತ್ತಾರೆ. ಅಲ್ಲಿ ಅವರು ಮಾತನಾಡುವುದಿಲ್ಲ ಅವರ ಸ್ಥಾನ ಮಾತನಾಡುತ್ತದೆ ಎಂಬ ಭರವಸೆಂದ ಇಲ್ಲಿಯ ಸ್ಥಾನ ಮಾತನಾಡುತ್ತದೆ ಎಂಬ ಭರವಸೆಯಿಂದ ಇಲ್ಲಿಯೂ ಒಬಾಮಾಗಳಿಗಾಗಿ ಹುಡುಕೋಣ.

Wednesday, November 10, 2010

ಹೈಸ್ಕೂಲು ವ್ಯಾಸಂಗದ ವಿವಿಧ ಮುಖಗಳು

ಹೈಸ್ಕೂಲು ಕಟ್ಟೆ ಏರುವುದರೊಳಗೆ ಮನೆತನದ ಸ್ಥಿತಿ ಇಳಿದುಹೋಗಿತ್ತು. ಗಂಭೀರವಾಗಿ ಓದಬೇಕು ಎಂಬ ಜವಾಬ್ದಾರಿಯೇನೋ ಹೆಚ್ಚಾಯಿತು. ಆದರೆ ಕಾಲ ಮಿಂಚಿ ಹೋಗಿತ್ತು.
ಅಡಿಪಾಯವಿಲ್ಲದೇ ಕಟ್ಟಿದ ಕಟ್ಟಡದಂತಾಗಿತ್ತು ನನ್ನ ಶಿಕ್ಷಣದ ಪರಿಸ್ಥಿತಿ. ಬಾಲ್ಯದ ಪ್ರಾಥಮಿಕ ಶಿಕ್ಷಣ ಸರಿಯಾಗಿ ಸಿಕ್ಕರೆ, ದಕ್ಕಿದರೆ ಮಾತ್ರ ಹೆಚ್ಚಿನ ವ್ಯಾಸಂಗ ಸಾಧ್ಯ ಎಂದು ಗೊತ್ತಿದ್ದರೂ, ಬಾಲ್ಯದಲ್ಲಿನ ಅಲಕ್ಷ ಮುಂದೆ ತೊಂದರೆಯನ್ನುಂಟು ಮಾಡಿತು.
ಹೈಸ್ಕೂಲು ವಿಭಾಗದಲ್ಲಿ ಕನ್ನಡ, ಸಮಾಜ ವಿಷಯಗಳು ಮಾತ್ರ ತಲೆಗೆ ಹೋದವು. ಗಣಿತ-ವಿಜ್ಞಾನ ಗ್ರಹಿಸಲಾಗಲೇ ಇಲ್ಲ. ಹಾಗಂತ ಬಿಡಲು ಸಾಧ್ಯವೇ? ಓದಲೇಬೇಕಲ್ಲ.
ಅಲ್ಲಿಂದ ನನ್ನ ನಿಜವಾದ ಕಲಿಕೆ ಪ್ರಾರಂಭವಾಯಿತು. ಆದರೆ ಒಮ್ಮೆಲೆ ಕಠಿಣವೆನಿಸಿ ಗ್ರಹಿಸಿದ್ದನ್ನು ಮಾತ್ರ ಕಲಿಯಲು ಪ್ರಾರಂಭಿಸಿದೆ.
ಕನ್ನಡದ ಕಾಡಬಸಪ್ಪ ಆರಾಳಗೌಡರ, ಹೊಸ ಬೆಳಕನ್ನೇ ತೋರಿ, ಭಾಷೆಯನ್ನು ಅಚ್ಚುಕಟ್ಟಾಗಿ ಕಲಿಸಿದರು.
ಇಂದಿಗೂ ಅವರು ಕಲಿಸಿದ ರೀತಿ ಅಚ್ಚಳಿಯದೇ ಹಸುರಾಗಿ ಉಳಿದಿದೆ. ಗಣಿತ ಕಲಿಸುತ್ತಿದ್ದು ಗುರುಗಳು ಆರ್.ಎಂ.ಚನ್ನಯ್ಯ ಸರ್ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿದರು. ಆದರೆ ಅವರು ಕಲಿಸಿದ ಗಣಿತ ತಲೆಗೆ ಹೋಗಲಿಲ್ಲವಾದರೂ,
'ಸೊನ್ನೆ ಸೂಕ್ಷ್ಮವ ಸೇರಲಿ, ಭಿನ್ನ ಭೇಧಗಳು ಅಳಿಯಲಿ' ಎಂಬ ಪದ್ಯದ ಸಾಲುಗಳು ನನಗಿನ್ನು ನೆನಪಿವೆ. ಅವರು ಅಂದು ಬಿತ್ತಿದ ಕಾವ್ಯದ ಬೀಜ ಇಂದು ಸಸಿಯಾಗಿ ಬೆಳೆದಿದೆ. ಭಾಷಾ ಸೌಂದರ್ಯ ಮತ್ತು ಶುದ್ಧತೆ ಬಗ್ಗೆ ಕಾಡ ಬಸಪ್ಪ ಸರ್, ಇಂಗ್ಲೀಷ ಕಲಿಸುತ್ತಿದ್ದ ಬಿ.ಎಂ.ಪಾಟೀಲ್ ಸರ್ ಅವರು ನಿರಂತರ ಪರಿಶ್ರಮದಿಂದ ಬೋಧಿಸಿದರು.

ವಿಜ್ಞಾನ ಕಲಿಸುತ್ತಿದ್ದ ಬೆಳಗಾವಿಯ ಅಥಣಿಯ ಬಿ.ಜಿ.ಸಾಲಿಮಠ ಸರ್ ಅವರ ಶಿಸ್ತು ಮತ್ತು ದಕ್ಷತೆಂದಾಗಿ ಆಕರ್ಷಣೀಯ ಎನಿಸಿದ್ದರು. ನಮ್ಮೂರ ಪಕ್ಕದ ತಿಮ್ಮಾಪೂರದ ಮಲ್ಲಿಕಾರ್ಜುನ ಸರ್ ಸಮಾಜ ಬೋಧಿಸಿದರು. ಗುರುಸಿದ್ಧಪ್ಪ ಶೆಟ್ಟರ್ ಅವರು ಕಲಿಸಿದ ಹಿಂದಿ ಪ್ರಾಥಮಿಕ ಹಂತಕ್ಕೆ ನಿಂತಿತು.
ಹೀಗೆ ಹೈಸ್ಕೂಲ್ ವ್ಯಾಸಂಗದ ಶಿಕ್ಷಕರು ಅತ್ಯಂತ ಪರಿಶ್ರಮದಿಂದ ಪಾಠ ಮಾಡುತ್ತಿದ್ದರು. ನನಗೆ ಕಲಿಯುವ ಉತ್ಸಾಹವಿತ್ತು. ಆದರೆ ಸಾಮರ್ಥ್ಯ ಇರಲಿಲ್ಲ. ನನ್ನ ಸಹಪಾಠಿಗಳಾ ಶಾಂತಮೂರ್ತಿ, ಸೋಮಲಿಂಗಪ್ಪ ಚನ್ನಾಗಿ ಅಂಕ ಗಳಿಸಿದರು. ಎಂಟನೇ ತರಗತಿಯಲ್ಲಿ ಪಾಠಕ್ಕಿಂತಲೂ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸತೊಡಗಿದೆ.

ಅಲ್ಲಿನ ಆಸಕ್ತಿ ನನ್ನ ಬೇಸರವನ್ನು ಮರೆಸಿತು. ಹೈಸ್ಕೂಲಿನ ಮೂರು ವರ್ಷ ಚರ್ಚೆಯಲ್ಲಿ ನಾನೇ ಮೊದಲ ಸ್ಥಾನದಲ್ಲಿದ್ದೆ. ಅದೇ ನನ್ನ ಮುಂದಿನ ಯಶಸ್ಸಿಗೆ ಕಾರಣವಾಯಿತು ಎನ್ನಬಹುದು. ನನ್ನೊಂದಿಗೆ ಶಾಂತಮೂರ್ತಿ, ಬಸವರಾಜ ಸದಾ ಪೈಪೋಟಿಯಲ್ಲಿರುತ್ತಿದ್ದರು. ಹೈಸ್ಕೂಲಿನಲ್ಲಿ ಚುನಾವಣೆಗೆ ನಿಂತು, ಆರಿಸಿಬಂದು ಸಂಸ್ಕೃತಿ ಮಂತ್ರಿಯಾದೆ. ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆದರೆ ಅಕ್ಯಾಡೆಮಿಕ್ಆಗಿ ಬೆಳೆಯಲು ಸಾಧ್ಯವಿಲ್ಲ ಎಂಬ ನಿರಾಶೆ ನಿತ್ಯ ಕಾಡುತ್ತಲೇ ಇತ್ತು.

Thursday, November 4, 2010

ಈಗ ನಿತ್ಯವೂ ದೀಪಾವಳಿ-ಒಮ್ಮೊಮ್ಮೆ ಹೋಳಿ

ಇಡೀ ದೇಶ ಸುತ್ತಿ ಹತ್ತಾರು ಹಬ್ಬಗಳನ್ನು, ಉತ್ಸವಗಳನ್ನು ನೋಡಿದ್ದೇನೆ. ಇತ್ತೀಚಿಗೆ ಆಚರಿಸಿದ ಅಖಿಲಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಂಘಟಕನಾಗಿ ದೊಡ್ಡ ಹಬ್ಬ ಆಚರಿಸಿದ್ದೆ.

ಆದರೆ ಯಾವುದೇ ಹಬ್ಬಗಳು ಬಾಲ್ಯದಲ್ಲಿ ಕಾರಟಗಿಯಲ್ಲಿ ಆಚರಿಸಿದ ದೀಪಾವಳಿ ಹಬ್ಬಕ್ಕೆ ಸರಿಸಮಾನವಾಗಿ ನಿಲ್ಲುತ್ತಿಲ್ಲ.
ಪ್ರತಿ ವರ್ಷ ದೀಪಾವಳಿ ಸಂದಂರ್ಭದಲ್ಲಿ ನಮ್ಮ ಎಲ್ಲ ವಾಹನಗಳನ್ನು ಒಟ್ಟಿಗೆ ನಿಲ್ಲಿಸಿ ಫೋಟೋ ತೆಗೆಯುತ್ತಿದ್ದರು. ಲಾರಿ, ಜೀಪು, ಸ್ಕೂಟರ್ ಹಾಗೂ ಸೈಕಲ್ಲು ಗಳನ್ನು ಸಾಲಾಗಿ ಜೋಡಿಸಿ ಪೂಜೆ ಮಾಡುತ್ತಿದ್ದರು.

ಹಲಗೆಗಳಿಂದ ಜೋಡಿಸಿದ ಪಾವಟೆಗಳ ಸದರಿನ ಮೇಲೆ ಹಣ್ಣು, ದವಸ ಧಾನ್ಯಗಳನ್ನು ಇಟ್ಟು ಲಕ್ಞ್ಮಿಯನ್ನು ಸಂಭ್ರಮದಿಂದ ಮನೆಯಲ್ಲಿ ಅಡಗಿಸಿಟ್ಟಿದ್ದ ಇಲ್ಲ ಆಭರಣಗಳನ್ನು ಹಾಕಿ ಝಗಮಗಿಗಿಸುವ ಹಾಗೆ ಪೂಜೆ ಮಾಡುತ್ತಿದ್ದರು.

ದೀಪಾವಳಿಯ ಲಕ್ಷ್ಮಿಯನ್ನು ಹಗಲು-ರಾತ್ರಿ ಕಾಯುವ ನೆಪದಲ್ಲಿ ಇಸ್ಪೀಟ್ ಆಡಲು ಮುಕ್ತ ಅವಕಾಶವಿರುತ್ತಿತ್ತು.

ಕಾರಟಗಿಯಲ್ಲಿ ಆಚರಿಸುವಂತಹ ದೀಪಾವಳಿ ಬೇರೆ ಎಲ್ಲಿ ಆಚರಿಸುವುದಿಲ್ಲ ಎಂಬ ಪ್ರತೀತಿ ಇತ್ತು. ದೀಪಗಳ ಸಾಲಿನ ಸಂಭ್ರಮವಲ್ಲದೆ. ಇಸ್ಪೀಟ್ ಆಟಕ್ಕೂ ನಮ್ಮೂರು ಪ್ರಸಿದ್ಧಿ ಪಡೆದಿತ್ತು.

ರಸ್ತೆ ಬದಿಯಲ್ಲಿ ಇಸ್ಪೀಟ್ ಅಡ್ಡ ಹಾಕಲಾಗಿತ್ತು. ಜಿಲ್ಲೆಯ ಬೇರೆ ಊರುಗಳಿಂದ ಜನ ಲಕ್ಷಾಂತರ ರೂಪಾಯಿ ಕಟ್ಟಿಕೊಂಡು ಇಸ್ಪೀಟ್ ಆಡಲು ಬರುತ್ತಿದ್ದರು. ಅವರು ಲಕ್ಷ ಗೆದ್ದರಂತೆ, ಇವರು ಲಕ್ಷ ಸೋತರಂತೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದವು.

ನಮಗೂ ಇಸ್ಪೀಟ್ ಆಡಲು ಅನುಮತಿ ಇರುತ್ತಿತ್ತು. ಕೂಡಿಸುವ ಹಾಗೂ ಅಂದರ್ - ಬಾಹರ್ ಇಸ್ಪೀಟ್ ಆಟವನ್ನು ದೀಪಾವಳಿ ಸಮಯದಲ್ಲಿಯೇ ಕಲಿತೆ. ಹಗಲು-ರಾತ್ರಿ ಲಕ್ಷ್ಮಿಯನ್ನು ಕಾಯುವ ನೆಪದಲಿ ಇಸ್ಪೀಟ್ ಆಡುವುದನ್ನು ಸಂಭ್ರಮಿಸುತ್ತಿದ್ದೆ.
ದೀಪಾವಳಿ ಎಲ್ಲಿಲ್ಲದ ಖುಷಿ ತರುತ್ತಿತ್ತು. ಟೇಲರ್ ರಾಮಣ್ಣ ಹೊಸ ಬಟ್ಟೆಗಳನ್ನು ಕೊಡುತ್ತಿದ್ದ, ಒಮ್ಮೊಮ್ಮೆ ಧೋತ್ರ ಉಟ್ಟು ಸಂಭ್ರಮಿಸಿದ್ದೇನೆ.

ಎಲ್ಲರ ಅಂಗಡಿ ಪೂಜೆಗೆ ಹೋದರೆ ಬಾಳೆಹಣ್ಣು ಎಲೆ ಅಡಿಕೆ ನೀಡುತ್ತಿದ್ದರು. ಅಂಗಡಿಯಲ್ಲಿ ಕೆಲಸ ಮಾಡುವ ಜನ 'ಹಬ್ಬದ ಖುಷಿ' ಕೇಳಿ ಪಡೆಯುತ್ತಿದ್ದರು. ಹಣ-ಬಟ್ಟೆ ಒಡವೆ ವಸ್ತ್ರಗಳನ್ನು 'ಹಬ್ಬದ ಖುಷಿ' ಯಾಗಿ ಪಡೆಯುತ್ತಿದ್ದರು.
ರಂಗು-ರಂಗಿನ ದೀಪಾವಳಿ ಮುಗಿದ ಕೂಡಲೆ ಬೇಸರವಾಗುತ್ತಿತ್ತು.

ಮುಂದೆ ವ್ಯಾಪಾರ ಹಾನಿಯಾಗಿ ಅಂಗಡಿಗಳು ಬಂದಾದಾಗಲೂ ದೀಪಾವಳಿ ಆಚರಣೆ ನಿಲ್ಲಲಿಲ್ಲ. ಮನೆಯಲ್ಲಿಯೇ ಲಕ್ಷ್ಮಿ ಪೂಜೆ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ತಿಜೂರಿಯಲ್ಲಿ ಅಡಗಿ ಕುಳಿತಿದ್ದ ಆಭರಣಗಳನ್ನು ಹೊರ ತೆಗೆದು ಲಕ್ಷ್ಮಿ ಮೈಮೇಲೆ ಹಾಕುವ ಸಂಭ್ರಮವೇ ದೀಪಾವಳಿ.

ಕಾಲೇಜು ವಿದ್ಯಾರ್ಥಿಯಾದ ಮೇಲೂ ರಜೆಗೆ ಊರಿಗೆ ಹೋಗುತ್ತಿದ್ದೆ. ಈಗಲೂ ಅಷ್ಟೇ ನನ್ನ ಹಾಗೆ ನನ್ನ ಮಕ್ಕಳು ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಲು ಇಷ್ಟ ಪಡುತ್ತಾರೆ.

ಈಗ ಊರಲ್ಲಿ ದೀಪಾವಳಿ ತನ್ನ ಸ್ವರೂಪವನ್ನು ಉಳಿಸಿಕೊಂಡು ಬೃಹದಾಕಾರವಾಗಿ ಬೆಳೆದಿದೆ. ಹತ್ತಾರು ಸಂಖ್ಯೆಯಲ್ಲಿದ್ದ ಅಂಗಡಿಗಳು, ನೂರರ ಸಂಖ್ಯೆಯಲ್ಲಿವೆ. ಸರಿಸುಮಾರು ಎರಡು ನೂರು ಮಿಲ್ಲುಗಳಿವೆ.
ಕಾರಟಗಿ ಈಗ ಅಂತರಾಷ್ಟ್ರೀಯ ಖ್ಯಾತಿ ಪಡೆದಿದೆ.
ಊರಲ್ಲಿನ ನಮ್ಮ ಧಣಿತನ ಮಾಯವಾದರೂ, ಪ್ರತಿ ದೀಪಾವಳಿ ಕಳೆದು ಹೋದ ಸಿರಿ-ಸಂಭ್ರಮವನ್ನು ನೆನಪಿಸುತ್ತದೆ.
ಈಗ ಹಬ್ಬಗಳು ನನ್ನ ಪಾಲಿಗೆ ವಿಶೇಷ ಎನಿಸುವುದಿಲ್ಲ. ಹೊಸ ಬಟ್ಟೆ ಖುಷಿ ಎನಿಸಿದಾಗ ಧರಿಸುತ್ತೇನೆ. ಊರಿಗೆ ಹೋದಾಗ ಹಬ್ಬದ ನೆಪಕ್ಕೆ ಹೊಸ ಬನಿಯನ್ ಲುಂಗಿ ಖರೀದಿಸುತ್ತೇನೆ.

'ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯ' ಎಂಬ ವಚನದ ಸಾಲು ತಿಳಿದ ಮೇಲೆ ಆಚರಣೆಗಳು ಅಥ ಕಳೆದುಕೊಂಡಿವೆ. ಸಂಭ್ರಮ ಎನ್ನುವುದು ನಮ್ಮ ಬದುಕಿನ ಪ್ರತಿ ಕ್ಷಣದಲ್ಲಿಯೂ ಇರಬೇಕು.
ಪ್ರತಿ ಕ್ಷಣವನ್ನೂ ವರ್ತಮಾನದಲ್ಲಿ ಹರ್ಷದಿಂದ ಕಳೆಯಬೇಕು ಎಂಬ ಸೂತ್ರ ಗೊತ್ತಾದ ಮೇಲೆ ನಿತ್ಯವೂ, ನೋವಿನಲ್ಲಿಯೂ ಹಬ್ಬದಾಚರಣೆ ಹೇಗೆ ಎಂಬುದು ಗೊತ್ತಾಗಿದೆ.
ಅದಕ್ಕೆ ದೀಪಾವಳಿಯೂ ಅಷ್ಟೆ ,ಹೋಳಿಯೂ ಅಷ್ಡೆ.
ದೀಪಾವಳಿ ಹಬ್ಬದ ನೆಪದಲಿ ಮನಸು ದಶಕಗಳ ಹಿಂದೆ ಓಡಿತು. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಅಮರಣ್ಣ ತಾತ - ಹಂಚಿಹೋದ ಶ್ರೀಮಂತಿಕೆ


ನನ್ನ ಬಾಲ್ಯದಲ್ಲಿ ಇಬ್ಬರು ಅಜ್ಜಂದಿರು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿದರು. ಅಪ್ಪನ ದೊಡ್ಡಪ್ಪ ಅಮರಣ್ಣ ತಾತ ತಮ್ಮ ಚಾಣಾಕ್ಷತನ, ವ್ಯಾಪಾರಿ ಬುದ್ಧಿ, ಕೌಟುಂಬಿಕ ವಿಶಾಲತೆಯಿಂದಾಗಿ ನನ್ನ ನೆನಪಲಿ ಅಚ್ಚಳಿಯದೇ ಉಳಿದಿದ್ದಾರೆ.
ಯಾಪಲಪರವಿ ತಲೆಮಾರಿನ ಹಿರಿಯ ವ್ಯಕ್ತಿ.
ನಮ್ಮ ತಂದೆಯ ತಂದೆ, ಅಪ್ಪನ ಬಾಲ್ಯದಲ್ಲಿಯೇ ನಿಧನರಾಗಿದ್ದರು. ಅಪ್ಪ ಹಾಗೂ ಅತ್ತೆಮ್ಮರನ್ನು ಸಾಕಿ ಬೆಳೆಸುವ ಜವಾಬ್ದಾರಿಯೂ ಅಮರಣ್ಣ ತಾತನ ಮೇಲೆಯೇ ಇತ್ತು. ಅಂದಿನ ಕುಟುಂಬ ವ್ಯವಸ್ಥೆಯಲ್ಲಿ joint family system ಗೆ ವಿಶೇಷ ಮಹತ್ವವಿತ್ತು. ಗುರುಪಾದಪ್ಪ ಯಾಪಲಪರವಿ ಅವರಿಗೆ ಮೂರು ಜನ ಗಂಡುಮಕ್ಕಳು ಮೊದಲನೆಯವರು, ಅಮರಣ್ಣ, ಎರಡನೆಯವರು ಗುಂಡಪ್ಪ, ಮೂರನೆಯವರು ನಮ್ಮ ತಾತ (ಅಪ್ಪನ ಅಪ್ಪ) ಬಸಣ್ಣ.
ಇಬ್ಬರು ತಮ್ಮಂದಿರು ಅಕಾಲಿವಾಗಿ ನಿಧನರಾದಾಗ ಅಮರಣ್ಣ ತಾತ ಒಬ್ಬರೇ ಇಡೀ ಯಾಪಲಪರವಿ ಪರಿವಾರದ ಜವಾಬ್ದಾರಿಯನ್ನು ನಿರ್ವಹಿಸಿದ್ದು ಸಣ್ಣ ತ್ಯಾಗವೇನಲ್ಲ.
ತಮ್ಮ ಮೂರು ಜನ ಗಂಡು ಮಕ್ಕಳೊಂದಿಗೆ, ತಮ್ಮಂದಿರ ಮಕ್ಕಳನ್ನು ಅಷ್ಟೇ ಪ್ರೀತಿಯಿಂದ ಬೆಳೆಸಿದರು.
ನಮ್ಮ ಅಪ್ಪ ಹಾಗೂ ಅಮರಣ್ಣ ತಾತನ ಮಕ್ಕಳು 1972 ರವರೆಗೆ ಒಂದೆ ಸೂರಿನಡಿಯಲ್ಲಿ ಬಾಳಿದರು.

ಸರಿ ಸುಮಾರು - 80 ವರ್ಷ ಬಾಳಿದ ಅಮರಣ್ಣ ತಾತನದು ಬಹಳ ದೊಡ್ಡ ಕುಟುಂಬ, ತಮ್ಮ ಏಳು ಜನ ಮಕ್ಕಳಲ್ಲದೆ, ಅಪ್ಪ ಹಾಗೂ ಶಂಬಮ್ಮ ಅತ್ತೆಮ್ಮ ನನ್ನು, ಗುಂಡಪ್ಪ ತಾತನ ನಾಲ್ಕು ಜನ ಮಕ್ಕಳನ್ನು ಬೆಳೆಸಿ ಜೋಪಾನ ಮಾಡಿದ್ದು ರೋಚಕ ಕತೆಯೇ ಆಗಿದೆ.

ನಾನು ಸಣ್ಣವನಿದ್ದಾಗ ಬೆಳೆದ ಮನೆಯಲ್ಲಿ ನೂರಾರು ಜನರಿದ್ದೇವು. ಅಪ್ಪ, ಅತ್ತೆಮ್ಮ ನಮ್ಮ ಪರಿವಾರವಲ್ಲದೇ, ಅಮರಣ್ಣ ತಾತನ ಎಲ್ಲ ಮೊಮ್ಮಕ್ಕಳು ಒಟ್ಟಿಗೆ ಬೆಳೆದವು. ತುಂಬಾ ದೊಡ್ಡ ವ್ಯಾಪಾರವಿದ್ದುದರಿಂದ ಮನೆತನದ ನಿರ್ವಹಣೆ ಅವರಿಗೆ ಸಮಸ್ಯೆಯಾಗಲಿಲ್ಲ. ಪರಸ್ಪರ ಒಗ್ಗಟ್ಟಿನಿಂದ ದುಡಿಯುತ್ತಿದ್ದರು. ಸಂಪೂರ್ಣ ನಿಯಂತ್ರಣ ಅಮರಣ್ಣ ತಾತನ ಕೈಯಲ್ಲಿತ್ತು.

ಕೌಟುಂಬಿಕ ಸಾಮರಸ್ಯವನ್ನು ಅಂದಿನ ಕಾಲದಲ್ಲಿ ಅರ್ಥಪೂರ್ಣವಾಗಿ ನಿಸ್ವಾರ್ಥದಿಂದ ನಿರ್ವಹಿಸುವ ವಿಶಾಲತೆ ಇತ್ತು.
ಕಿರಾಣಿ ಅಂಗಡಿ ಅಮರಣ್ಣ ತಾತನ ಕಾಲದಲ್ಲಿ ಭರ್ಜರಿಯಾಗಿತ್ತು. ಅಪ್ಪ ಅಮರಣ್ಣ ತಾತ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರೆ. ಅಮರಣ್ಣ ತಾತನ ದೊಡ್ಡ ಮಗ ಬಸಣ್ಣ ದೊಡ್ಡಪ್ಪ ಖರೀದಿಗಾಗಿ ಅಡ್ಡಾಡುತ್ತಿದ್ದ. ಉಳಿದ ಇಬ್ಬರು ಚಿಕ್ಕಪ್ಪನವರು ನಮ್ಮ ಸಮಕಾಲೀನರಾಗಿ ಬೆಳೆದರು.
ಒಂದುವೇಳೆ 1972 ರಲ್ಲಿ ನಮ್ಮ ಕುಟುಂಬ ವಿಭಜನೆಯಾಗದಿದ್ದಲ್ಲಿ ಅದೇ ಗತವೈಭವ ಇರುತ್ತಿತ್ತು.
" ಸಾವಿರ ವರ್ಷ ಬಾಳಿದರೂ ಸಾಯುವುದು ತಪ್ಪಲಿಲ್ಲ. ನೂರು ವರ್ಷ ಕೂಡಿದ್ದರೂ ಬೇರೆ ಆಗುವುದು ತಪ್ಪಲಿಲ್ಲ" ಎಂಬ ಗಾದೆಯಂತೆ ನಾವು ಬೇರೆ ಯಾಗುವುದು ತಪ್ಪಲಿಲ್ಲ. ಆಗಲೇ ಗುಂಡಪ್ಪ ತಾತನ ಮಗ ಬಸವಲಿಂಗಪ್ಪ ದೊಡ್ಡಪ್ಪ ಬೇರೆ ಆಗಿದ್ದ ನಮ್ಮ ಎರಡು ಪರಿವಾರಗಳು ಒಟ್ಟಾಗಿದ್ದವು.

ಅಪ್ಪನಿಗೂ ಬೇರೆ ಆಗುವ ಮನಸ್ಸಿರಲಿಲ್ಲ. ಅಮರಣ್ಣ ತಾತನಿಗೂ ಬೇರೆ ಹಾಕುವ ಮನಸ್ಸಿರಲಿಲ್ಲ.
ಆದರೆ ಕುಟುಂಬದ ಸ್ವಾರ್ಥದಲ್ಲಿ ಸುಸುಳಿದ ಕಹಿಭಾವನೆಗಳು ಅಪ್ಪನನ್ನು ಹೊರಗೆ ಹಾಕಲು ಪ್ರಚೋದಿಸಿದವು.
ಅಪ್ಪನನ್ನು ಹೊರಗೆ ಹಾಕಿದರೆ, ಕೇವಲ ಅಮರಣ್ಣ ತಾತನ 3 ಜನ ಮಕ್ಕಳು - ತಾತ ಒಟ್ಟಿಗೆ ಇರಬಹುದಿತ್ತು. ಹೆಚ್ಚು ಹಣ ಗಳಿಸಬಹುದು, ಅನಗತ್ಯ ಸೋದರ ಸಂಬಂಧಿಗಳಿಗೆ ಯಾಕೆ ಹೆಚ್ಚಿನ ಆಸ್ತಿ ಎಂಬ ಜಿಜ್ಞಾಸೆ ಉಂಟಾಗಿರಬೇಕು.

ಇಪ್ಪತ್ತೇಳು ವರ್ಷ ತನ್ನೊಂದಿಗೆ ಬೆಳೆದ ತಮ್ಮನ ಮಗ ಅಂದರೆ ನಮ್ಮ ಅಪ್ಪನನ್ನು ಹೊರಹಾಕುವ ಮನಸ್ಸಿರಲಿಲ್ಲ. ಆದರೆ ಕುಟುಂಬದ ಒತ್ತಡದಿಂದ ಅನಿವಾರ್ಯವಾಗಿ 1972 ರಲ್ಲಿ ಅಪ್ಪನನ್ನು ಹೊರಹಾಕಿದರು.
ಬೇರೆ ಆಗುವ ಸಂದಂರ್ಭದಲ್ಲಿ ನಡೆದ ಆಸ್ತಿ ವಿಭಜನೆಯ ವಿಚಿತ್ರ ಘಟನೆಗಳನ್ನು ಮತ್ತೆ ವಿವರಿಸಿವೆ.
ಎಂಬತ್ತರ ಹರೆಯದ ಅಂಚಿನಲ್ಲಿದ್ದ ಅಮರಣ್ಣ ತಾತ ನನಗೆ ಇಂದಿಗೂ ಆದರ್ಶಪ್ರಾಯ.

ಕಿರಾಣಿ ವ್ಯಾಪಾರದ ಸಂಭ್ರಮ ನೆನದರೆ ಅಚ್ಚರಿಯೆನಿಸುತ್ತದೆ. ಅಂದಿನ ಕಾಲದಲ್ಲಿ ದಿನಕ್ಕೆ 30 ರಿಂದ 40 ಸಾವಿರ ರೂಪಾಯಿ ವ್ಯಾಪಾರ ವಾಗುತ್ತಿತ್ತು. ಹತ್ತಾರು ಹಳ್ಳಿಗಳಲ್ಲಿ ಜನ ನಮ್ಮ ಅಂಗಡಿಯನ್ನೆ ಅವಲಂಬಿಸಿದ್ದರು.

ಬಂಗಾರದ ಆಭರಣಗಳನ್ನು ಒತ್ತೆ(ಗಿರವಿ) ಇಟ್ಟುಕೊಂಡು ಸಾಲ ಕೊಡುತ್ತಿದ್ದ ಬಹುದೊಡ್ಡ ಬಡ್ಡಿವ್ಯಾಪಾರಿಯಾಗಿದ್ದರು.
ಹತ್ತಾರು ಆಳುಗಳನ್ನು, ನೂರಾರು ಕೂಲಿ ಕೆಲಸಗಾರರನ್ನು ನಿಭಾಯಿಸುತ್ತಿದ್ದರು. ಎಲ್ಲರಿಗೂ ನಮ್ಮ ಮನೆಯಲ್ಲಿ ಊಟದ ವ್ಯವಸ್ಥೆ ಇರುತ್ತಿತ್ತು.
ಎಲ್ಲ ಅತ್ತೆಯಂದಿರು ಮದುವೆಯಾಗಿ ಹೋಗಿದ್ದರು. ರಜೆಯಲ್ಲಿ ಅವರ ಮಕ್ಕಳು ಕಾರಟಗಿಗೆ ಬರುತ್ತಿದ್ದರು.
ಎಲ್ಲರೂ ಸೇರಿದರೆ ಸಂಖ್ಯೆ ನೂರಕ್ಕೆ ಏರುತ್ತಿತ್ತು. ಎಲ್ಲ ಮೊಮ್ಮಕ್ಕಳನ್ನು ತಾತ ಸಮಾನವಾಗಿ ಕಾಣುತ್ತಿದ್ದರು.
ಒಂದು ರೂಮಿನಲ್ಲಿ ಒತ್ತೆ ಇಟ್ಟುಕೊಂಡ ಬಂಗಾರವನ್ನು ಚೀಲದಲ್ಲಿ ಸಂಗ್ರಹಿಸಿ ಇಟ್ಟಿರುತ್ತಿದ್ದರು. ಲಕ್ಷಾಂತರ ರೂಪಾಯಿ ವ್ಯವಹಾರವನ್ನು ಅಮತಣ್ಣ ತಾತ ನೆನಪಿಟ್ಟುಕೊಂಡಿರುತ್ತಿದ್ದರು.

ನನ್ನ ಎಳೆಯ ಪ್ರಾಯದಲ್ಲಿ ನಾನು ತಾತನೊಂದಿಗೆ ಮುಕ್ತವಾಗಿ ಚರ್ಚಿಸಿದ ನೆನಪು. ತಾತ ಎಂದಿಗೂ ಸಿಟ್ಟಿಗೇಳುತ್ತಿರಲಿಲ್ಲ.
ನಾನು ಏಳು ವರ್ಷದವನಿದ್ದಾಗ ಕುಟುಂಬ ವಿಭಜನೆಯಾಯಿತು.
ನಾವೊಂದು ಬೇರೆ ಅಂಗಡಿ ಮಾಡಿದೆವು. ಎರಡು ಅಂಗಡಿಗಳ ಪೈಪೋಟಿಯ ಮಧ್ಯೆ ವ್ಯಾಪಾರ ವಿಫಲವಾಯಿತು.
ಬೇರೆ ಆಗುವ ಸಂದರ್ಭದಲ್ಲಿ ಉಂಟಾದ ಜಗಳ ತಾತನಿಗೆ ಬೇಸರ ಉಂಟುಮಾಡಿತು. ಕೇವಲ ಒಂದೆರಡು ವರ್ಷದಲ್ಲಿ ವ್ಯಾಪಾರ ಇಳಿಮುಖವಾಯಿತು.
ಆಳುಗಳು ಗುಂಪು ಗುಂಪಾದರು. ಕೆಲವೊಬ್ಬರು ಅಪ್ಪನ ಜೊತೆಗೆ ಬಂದು, ಕೆಲವರು ತಾತನ ಜೊತೆಗೆ ಉಳಿದರು. ಕುಟುಂಬದ ಸಾಮರಸ್ಯ ಹಾಳಾಗಿದ್ದಕ್ಕೆ ತಾತ ವಿಚಲಿತರಾದರು.
ಆಗಿನ ಕಾಲದಲ್ಲಿ ಉಪಪತ್ನಿಯರು ಸಂಬಂಧ ಜಗಜ್ಞಾಹಿರ ವಾಗಿರುತ್ತಿತ್ತು. ತಾತ ತನ್ನ ಉಪಪತ್ನಿಯ ಮಕ್ಕಳಿಗೂ ಆಸ್ತಿ, ಹಣ ನೀಡಿದ. ಅವರ ಏಳ್ಗೆಯನ್ನು ಬಯಸಿದ. ತಾತನ ಉಪಪತ್ನಿ ಈರಾಸಾನಿಗೂ, ಅಜ್ಜಿಗೂ ಸಾಮರಸ್ಯವಿದ್ದು, ಯಾವುದೇ ರೀತಿಯ ಜಗಳವಿರುತ್ತಿರಲಿಲ್ಲ.
ಅದಕ್ಕೆ ತಾತನ ಚಾಣಾಕ್ಷತನವೂ ಕಾರಣವಿರಬಹುದು.
ಈ ರಾಸಾನಿಯ ಮಕ್ಕಳನ್ನು ನಾವು ಅತ್ತೆಯಂದು ಕರೆಯುತ್ತಿದ್ದೆವು. ಕುಟುಂಬ ವಿಭಜನೆ ತಾತನಿಗೆ ಬೇಸರವಾಗಿ ಅದೇ ಬೇಸರದಲ್ಲಿ ನಾಲ್ಕೇ ವರ್ಷದ ನಂತರ ಅವರು ನಿಧನರಾದರು. ಕುಟುಂಬ ವಿಭಜನೆಯೇ ಅದಕ್ಕೆ ಕಾರಣ ಎಂದು ನನಗೆ ಈಗಲೂ ಅನಿಸುತ್ತದೆ.