ಕೈಹಿಡಿದು ಸನ್ಮಾರ್ಗವ ತೋರಿ ದಡ
ಸೇರಿಸಿದ ಗುರುವಿಗೆ ಗುಲಾಮನಾಗಿರುವೆ
ಜೀರ್ಣಿಸಿಕೊಂಡು ಬದುಕಿನ ಬೆಲೆಯ ಅಳೆದು
ತೂಗಿದ ಹೆತ್ತೊಡಲ ಋಣವ ತೀರಿಸಲಾರೆ
ರಮಿಸಿ ಸುಖದ ಸೋಪಾನದಲಿ ತೇಲಿಸಿ
ವಾಸ್ತವದಲೆ ಅಪ್ಪಳಿಸಿದಾಗ ತೇಲಿ ಹೋದ
ಸಂಗಾತಿಗಳ ಸಂಗತಿಗಳ ಮರೆಯಲಾರೆ
ನೀರೆರೆದ ಕೈಗಳಿಗೆ ನಮಿಸದಿರಲಾರೆ
ಎಂದು ಪಾಠ-ಪ್ರವಚನಗಳ ಮಂತ್ರ ಮುಗ್ಧರಾಗಿ
ಆಲಿಸಿದ ಕಿವಿಗಳ ರಿಂಗಣವ ನಿಲ್ಲಿಸಲಾರೆ
ಅಪ್ಪುಗೆಯ ಆಲಿಂಗನದಲಿ ನನ್ನ ನಾ
ಮರೆಯುವಂತೆ ಮಾಡಿದ ಮಕ್ಕಳ
ಬಿಸಿಯಪ್ಪುಗೆಯ ಪ್ರೀತಿಯುಸಿರ
ಹಿತವ ಆರಲು ಬಿಡಲಾರೆ
ಪರಿಚಯವಾದ ಅಪರಿಚಿತರು ಚಿತ್ತವಲುಗಾಡಿಸಿ
ಹೊಸ ಚಿತ್ರ ಬಿಡಿಸಿ ನನ್ನೆದೆಯ ಬಗೆದು ಒಳ
ಹೊಕ್ಕು ಹಿತವಾಗಿ ಗೀಚಿ ಗಾಯ ಮಾಡಿ
ಕೆರಳಿಸಿ ಕೆರೆಯುವಂತೆ ಮಾಡಿ ಉಗುರು
ಸಂದಿಯ ನೆತ್ತರು ಕಲೆಗಳ ಚೀಪಿದಾಗ
ನೆನಪಾಗಿ ನನ್ನ ನಾ ಪರಚಿಕೊಳಲು
ಪ್ರೇರೇಪಿಸುವ ಚಲುವೆಯರ ಮಧುರತೆಯ
ಮೀಟದಿರಲಾರೆ
ಒಂಟಿಯಾಗಿ ಅಳುತ ನಿಂತಿರುವಾಗ ಓಡಿ ಬಂದು
ಧೈರ್ಯ ಹೇಳಿ ಮತ್ತೆ ಆಟ ಆಡಲು ಉತ್ತೇಜಿಸಿ
ಗೆದ್ದಾಗ ದೂರದ ಮೂಲೆಯಲಿ ನಿಂತು ಚಪ್ಪಾಳೆ
ತಟ್ಟಿ ಸಂಭ್ರಮಿಸುವ ನಿಷ್ಪ್ರಹ ಕೆಲವೇ ಕೆಲವು
ಗೆಳೆಯರ ಕೈ ಬಿಡಲಾರೆ
ಕೈ ಕೊಟ್ಟು ಕೇಕೆ ಹಾಕಿ ಹೊಸ ಪಾಠಗಳನು
ದಯಪಾಲಿಸಿದವರನು ಹಿತಶತ್ರುಗಳು ಎಂದು
ಜರಿಯಲಾರೆ ದಟ್ಟ ಕತ್ತಲಲಿ ಕೈಬಿಟ್ಟು
ಚೀರಾಡಿಸಿ ಬೆಳಕಿನ ಮಹಿಮೆಯ ಸಾರಿದವರ
ಮರೆಯಲಾದೀತೇ ?
ಎಲ್ಲರೂ ಭಿನ್ನ ವಿಭಿನ್ನ ಅಂತವರನು ದಕ್ಕಿಸಿಕೊಂಡ
ನಾ ನಿಜವಾಗಲೂ ಧನ್ಯ ಧನ್ಯ...