Sunday, November 13, 2011

My New Journey

My journey ... ...- started from big village like Karatagi, many unexpected events, which I never dreamt off. After great failure as a student tried to gain something in the field of education.

How strange ! at last succeeded in K.C.D. But that was not the total success, but never tired to fight with life.

Entering into profession was also different. Struggled all the days. Making of regular job was also an experience.

After eight years fight with department and government found few bills in my hand in the year 1997.

Served almost 21 years as a ‘teacher’ in P.U., degree and P.G. Centre, but what felt to jump somewhere else ? My regular touch with media and literature made me to accept new challenges.

Decided to quit campus of KVSR and jumped into Government that too minister’s office. Way was quite unclear VRS rejected but never felt to go back. Wanted to do something new without any detachment with previous personalities and places.

Now reached here in Bangalore as a PRO to Bangalore University, but before this I had pain with government to get deputation. Those two months were like delivery pain.

I don’t feel that in the days to come are also fruitful; but I am adjusted to fight and pleasure.

Hoping everything positively, trying to find some new lights in the new path.

Saturday, July 30, 2011

ಹೀಗೊಂದು ಸಂಕಷ್ಟ

ನಾವೇ ಕೇಳಿದ್ದು, ಕಂಡದ್ದು ಕೂಡಾ ಎಲ್ಲವೂ ಸತ್ಯವಲ್ಲ ಎಂದು ಒಮ್ಮೊಮ್ಮೆ ಅನಿಸುತ್ತಿತ್ತು ಆದರೆ ಈಗದು ಪರಿಪೂರ್ಣ ನಿಜವೆನಿಸುತ್ತದೆ. ಗಣಿಗಾರಿಕೆ ವಿಷಯದಲ್ಲಿ ಮಾನ್ಯ ಲೋಕಾಯುಕ್ತರು ತಮ್ಮ ವರದಿ ನೀಡಿದ್ದಾರೆ. ಖಂಡಿತಾ ಎಲ್ಲವೂ ನಿಚ್ಚಳವಾಗಿ ಪ್ರಾಮಾಣಿಕವಾಗಿದೆ. ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡವರ ಹೆಸರು ದಾಖಲಾತಿಗಳು ಸ್ಪಷ್ಟವಾಗಿವೆ. ಈ ಪ್ರಕರಣದಲ್ಲಿ ಕೆಲವರು ಅಮಾಯಕರೆನಿಸುತ್ತಾರೆ. ಈ ಮಾತು ವಿಚಿತ್ರವಾದರೂ ಸತ್ಯ.ಗಣಿಗಾರಿಕೆಯ ಗಾಳಿ-ಗಂಧವನರಿಯದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಈ ವರದಿಯಿಂದಾಗಿ ಅಧಿಕಾರ ಕಳೆದುಕೊಳ್ಳುವುದು ಪರಿಸ್ಥಿತಿಯ ವ್ಯಂಗವೇ ಸರಿ !ಸ್ವತಃ ಲೋಕಾಯುಕ್ತರಿಗೆ ಈ ವಿಷಯ ಗೊತ್ತಿದ್ದರೂ, ಗಣಿ ಕಂಪನಿಯ ಪಾಲುದಾರರಾದ ಪಾಪಕ್ಕೆ ಶ್ರೀರಾಮುಲು ಬಲಿಯಾಗಿದ್ದಾರೆ ಎಂಬ ಅರ್ಧ ಸತ್ಯ ಎಲ್ಲರಿಗೂ ಗೊತ್ತಾಗತೊಡಗಿದೆ.ಇಂದು ಮಾಧ್ಯಮ ಸ್ನೇಹಿತರೊಂದಿಗೆ ಮಾತನಾಡಿದ ಶ್ರೀರಾಮುಲು ಅವರು ತುಂಬಾ ಆಪ್ತರಾಗಿ, ಪ್ರಾಮಾಣಿಕವಾಗಿ ಭಾವನೆಗಳನ್ನು ಹಂಚಿಕೊಂಡರು.ಬಾಲ್ಯದಿಂದಲೂ ಬಡತನದಲ್ಲಿ ಬೆಳೆದ ನಾನು ಅನ್ಯಾಯದ ವಿರುದ್ಧ ಹೋರಾಡುತ್ತಲೇ ಬೆಳೆದು ಸ್ವತಃ ಅನ್ಯಾಯಕ್ಕೆ ಒಳಗಾಗಿದ್ದೇನೆ. ಅಂದ ಮಾತುಗಳು ಅರ್ಥಪೂರ್ಣವಾಗಿವೆ.ಅಲ್ಲಿ ಪ್ರಾಮಾಣಿಕತೆಯೂ ಎದ್ದು ಕಾಣುತ್ತಿತ್ತು. ಆದರೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದೇನೆ. ಈಗ ನಾನು ನನ್ನ ಪ್ರಾಮಾಣಿಕತೆಯನ್ನು ಒರೆಗಲ್ಲಿಗೆ ಹಚ್ಚಿಕೊಳ್ಳುವ ಸಂದರ್ಭ ಬಂದಿದೆ. ನನಗೆ ಗೊತ್ತಿರದೆ ಮಾಡಿದ ತಪ್ಪಿಗೆ ಈ ಶಿಕ್ಷೆ ಆಗಿರಬಹುದೇ ? ಎಂಬ ಆತ್ಮಾವಲೋಕನ ಅರ್ಥಪೂರ್ಣ ಆದರೆ ಕಾಲ ಎಲ್ಲವನ್ನೂ ನಿರ್ಧರಿಸುತ್ತದೆ. ನಿರ್ಧರಿಸಲಿ ಕೂಡಾ !

ಈಗಿನ ಲೋಕದಲಿ ಹೀಗಿರುತ್ತಾರಾ !ಆರ್.ರಾಮಪ್ರಿಯ

ಕಳೆದ ವರ್ಷದಿಂದ ವಿಧಾನ ಸೌಧವನ್ನು ತುಂಬಾ ಹತ್ತಿರದಿಂದ ನೋಡುವ ದುರಾದೃಷ್ಟ ನನ್ನದು.
ಈ ಹಿಂದೆ ನೌಕರಿ ಖಾತರಿಗಾಗಿ, ಎಂ.ಪಿ.ಪ್ರಕಾಶ ಅವರ ಸಾಂಸ್ಕೃತಿಕ ಸಂಬಂಧದಿಂದಾಗಿ ಬಾಪು ಹೆದ್ದೂರ ಶೆಟ್ಟಿ ಅವರ ನಿತಂತ ಸ್ನೇಹದಲ್ಲಿ ವಿಧಾನ ಸೌಧದ ಸಖ್ಯ ಇತ್ತು.ಗದುಗಿನ ಕಾಲೇಜು, ಸಾಂಸ್ಕೃತಿಕ ಜಂಜಾಟದಲಿ ಸ್ವಲ್ಪ ದೂರವಿದ್ದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಬೌದ್ಧಿಕ ದಿವಾಳಿತನದ ಮಧ್ಯೆ ಈಗ ವಿಧಾನ ಸೌಧ ತುಂಬಾ ಭಿನ್ನವೂ, ಖಿನ್ನವೂ ಆಗಿದೆ.ಆದರೂ ಅಚ್ಚರಿಯೆಂಬಂತೆ, ಹೀಗೂ ಉಂಟೆ ಎಂಬಂತೆ, ಪ್ರಾಮಾಣಿಕರು, ದಕ್ಷರೂ ಇದ್ದಾರೆ ಎಂದರೆ ಏನರ್ಥ ?
ಈಗ ನಾ ಹೇಳಬಯಸುವದು ದಕ್ಷ, ಪ್ರಾಮಾಣಿಕ ಅಧಿಕಾರಿ, ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿಗಳಾದ ಶ್ರೀರಾಮನಾಥಪುರ ರಾಮಪ್ರಿಯಾ ಅವರ ಬಗ್ಗೆ. ತೆಳಗಿನ, ಸರಳ ಉಡುಪಿನ ರಾಮಪ್ರಿಯರನ್ನು ಮೊದಲು ಕಂಡದ್ದು ಗದುಗಿನ ಕಾರ್ಯಕ್ರಮವೊಂದರಲ್ಲಿ. ಅರೆ ! ಪಿ.ಎಸ್. ಇಷ್ಟೊಂದು ಸರಳರಾಗಿರುತ್ತಾರೆ ಎಂದು ಬೆರಗಾಗಿದ್ದೆ
.ಕಳೆದ ವರ್ಷ ಅಪಘಾತಕ್ಕೆ ಒಳಗಾಗಿ ಕೈಮುರಿದುಕೊಂಡು ಜಯನಗರ ಆಸ್ಪತ್ರೆಯಲ್ಲಿದ್ದಾಗ ಪಿ.ಎಸ್. ಅವರು ತೋರಿದ ಪ್ರೀತಿ, ವಿಶ್ವಾಸ ಅವರನ್ನು ಹತ್ತಿರವಾಗಿಸಿತು.ಅವರು ಅಧಿಕಾರಿಯಾಗಿ ಹೇಗೆ ಎಂದು ಗೊತ್ತಿರಲಿಲ್ಲ.
ಮನುಷ್ಯನಿಗೆ ಹತ್ತಲ್ಲ ನೂರಾರು ಮುಖಗಳಿರುತ್ತವೆ. ಸಾಲದ್ದಕ್ಕೆ ಮುಖವಾಡಗಳು !!ಸರಳತೆ, ಪ್ರಾಮಾಣಿಕತೆ, ಇಂಟಿಗ್ರೇಟೆಡ್ ವ್ಯಕ್ತಿತ್ವ ಎಂಬ ಪದಗಳು ಡಿಕ್ಷನರಿಯಲ್ಲಿ ಕೊಳೆತು ನಾರಲು ಕಾರಣ ನಮ್ಮ ಹಿಪೋಕ್ರೇಟ್ ಬದುಕೇ ಅಲ್ಲವೇ ?
ನಾನು ಆರಂಭದಲ್ಲಿ ಅಂದುಕೊಂಡದ್ದು ಹಾಗೆಯೇ, ವ್ಯಕ್ತಿಗಳಲ್ಲಿನ ಮುಖವಾಡದಿಂದಾಗಿ, ಹೀಪೋಕ್ರಸಿಯಿಂದಾಗಿ ನಂಬಿಕೆಯನ್ನು ಅಲ್ಪ ಸ್ವಲ್ಪ ಕಳೆದುಕೊಂಡಿದ್ದೆ.ಆದರೆ ಆರ್. ರಾಮಪ್ರಿಯ ಆ ಪದಗಳ ಮೌಲ್ಯಗಳನ್ನು ಮರಳಿ ಕೊಟ್ಟಿದ್ದಾರೆ. ತಮ್ಮ ಪ್ರಖರ, ನೇರ ವ್ಯಕ್ತಿತ್ವದಿಂದಾಗಿ ಅನೇಕರ ನಿಷ್ಠುರ ಕಟ್ಟಿಕೊಂಡಿದ್ದಾರ.
ಅಷ್ಟೇ uಟಿಠಿoಠಿಚಿಟuಡಿ ಅನಿಸಿಕೊಂಡಿದ್ದಾರೆ. ಕೆಲವರ ದೃಷ್ಟಿಕೋನದಲ್ಲಿ. ಆದರೆ ಸತ್ಯಕ್ಕೆ ಇರುವ ಮುಖವೇ ಬೇರೆ. ಅವರ ಸಮಕಾಲಿನ ಅಧಿಕಾರಿಗಳು, ಪ್ರಾಮಾಣಿಕರೆನಿಸಿಕೊಂಡವರೂ ಅಲ್ಪ ಸ್ವಲ್ಪ ಆಸ್ತಿ ಪಾಸ್ತಿ ಮಾಡಿದ್ದಾರೆ. ಅದು ತಪ್ಪಲ್ಲ ಅನಿಸಿದರೂ ಇವರಿಗೆ ಅದೂ ಬೇಡದ, ನ್ಯಾಯ, ನಿಷ್ಠುರ, ಪ್ರಾಮಾಣಿಕ ಪಾರದರ್ಶಕ ಬದುಕು.
ಒಮ್ಮೊಮ್ಮೆ ಅಚ್ಚರಿ ಎನಿಸಿತ್ತದೆ. ಹೆಣ್ಣು, ಹೊನ್ನು, ಮಣ್ಣನ್ನು ನಿರ್ಲಿಪ್ತವಾಗಿ ತಿರಸ್ಕರಿಸಬೇಕು ಎಂದು ಹೇಳಿದಷ್ಟು ಸುಲಭ್ಯವಲ್ಲ ಆದರೆ ರಾಮಪ್ರಿಯ ಬದುಕಿನ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಸಾಧಕರಾಗಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದು, ಪಿಎಚ್.ಡಿ. ಪಡೆದರೂ ಹೆಸರಿನೊಂದಿಗೆ ಡಾಕ್ಟರ್ ಪ್ರಿಫಿಕ್ಸನ್ನು ತಗುಲಿಸಿಕೊಳ್ಳದ ಸರಳತೆ, ಆಗ ಪ್ರಾಧ್ಯಾಕರದವರು ಅದೇ ವೃತ್ತಿಯಲ್ಲಿದ್ದರೆ, ಈಗ ಯಾವುದಾದರೂ ವಿ.ವಿ.ಗೆ ಕುಲಪತಿಗಳಾಗಿರುತ್ತಿದ್ದರು. ಅನಿವಾರ್ಯವಾಗಿ ಅಧಿಕಾರಿಯಾಗಿದ್ದಾರೆ. ವ್ಯವಸ್ಥೆಯ ಕುತಂತ್ರದಿಂದಾಗಿ ಐ.ಎ.ಎಸ್. ನಿಂದ ವಂಚಿತರಾದ ಬಗ್ಗೆ ಕಿಂಚಿತ್ತು ವಿಶಾದವಿಲ್ಲ.
ಕನ್ನಡ ಸಾಹಿತ್ಯದ ಕುಮಾರವ್ಯಾಸ ಭಾರತವನ್ನು ಸುಲಲಿತವಾಗಿ ವಿವರಿಸುತ್ತಾರೆ. ಇಂಗ್ಲೀಷನಲ್ಲಿ ಅರ್ಥಶಾಸ್ತ್ರದ ಸಿದ್ಧಾಂತಗಳನ್ನು ಗಂಭೀರವಾಗಿ ವಿವೇಚಿಸುತ್ತಾರೆ. ಅಪಾರ ಜ್ಞಾನ ಸಂಪತ್ತಿನೊಂದಿಗೆ ಪಾಲಿಸಿಕೊಂಡು ಬಂದಿರುವ ಐಕ್ಯತ ವ್ಯಕ್ತತ್ವ ಮುಖ್ಯವೆನಿಸುತ್ತದೆ.
ಐಷಾರಾಮಿ ಯುಗದಲಿ ಹಾಸಿಗೆಯಲ್ಲದೆ ಚಾಪೆ ಮೇಲೆ ಮಲಗುವುದು, ಹಳೆಕಾರಿನಲ್ಲಿ ಸಂಚರಿಸುವುದು, ಸಿಕ್ಕಿರುವ ಅಧಿಕಾರವನ್ನು ಕಾನೂನು ಚೌಕಟ್ಟಿನಲ್ಲಿಯೇ ಚಲಾಯಿಸುವುದು ಸುಲಭದ ಮಾತಲ್ಲ. ಅವರ ತಾಯಿಯವರು ನಿಧನರಾದಾಗ ಅವರ ಊರಿಗೆ ಹೋಗಿದ್ದೆ. ಕಾಲು ಶತಮಾನದ ಹಿಂದಿನ ಹಳೆ ಮನೆ ಅವರ ವ್ಯಕ್ತಿತ್ವಕ್ಕಿರುವ ಭವ್ಯತೆಗೆ ಸಾಕ್ಷಿ ಎನಿಸಿತು.ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎಂಬ ಕವಿವಾಣಿ ರಾಮಪ್ರಿಯರೊಂದಿಗೆ ಕಾಲ ಕಳೆದಾಗ ಸತ್ಯವೆನಿಸಿ ಜೇನಿನಷ್ಟೇ ಮಧುರವೆನಿಸುತ್ತದೆ. ಅದಕ್ಕೆ ಹೇಳಿದ್ದು, ಈಗಿನ ಲೋಕದಲಿ ಹೀಗಿರುವುದುಂಟೆ ಎಂದು !

Tuesday, March 15, 2011

ತಿರುಗಿ ನೋಡುವ ಸಂಭ್ರಮದಲಿ . . . .


ಕೋಟಿ, ಕೊಟಿ ಕೊಟ್ಟರು ನೀನು ಕಳೆದುಹೋದ ಇತಿಹಾಸವನ್ನು ಕೊಳ್ಳಲಾರೆ ಎಂಬ ಮಾತು ಕಳೆದು ಹೋದ ಇತಿಹಾಸ ವನ್ನ್ಗುನೆನಪಿಸುತ್ತದೆ.
ನಾಡಿಗೆ ಸುಧೀರ್ಘ ಇತಿಹಾಸವಿರುತ್ತದೆ. ಆ ಇತಿಹಾಸದಲ್ಲಿ ಮನುಷ್ಯ ಒಂದು ಸಣ್ಣ ಭಾಗ ವ್ಯಕ್ತಿಯ ಪುಟ್ಟ ಇತಿಹಾಸದಲ್ಲಿಯೂ ಹುಡುಕಿದರೆ ಏನೆಲ್ಲ ಸಿಗುತ್ತದೆ.
ಆದರೆ ಆ ಹುಡುಕಾಟ ಗಂಭೀರವಾಗಿರಬೇಕು ಎನ್ನುವುದಕ್ಕಿಂತ ಪ್ರಾಮಾಣಿಕವಾಗಿರಬೇಕು. ಮುಗ್ಧವಾಗಿರಬೇಕು.
ಎಲ್ಲಿಯವರೆಗೆ ನಮ್ಮಲ್ಲಿ ಮುಗ್ಧತೆಯಿರುತ್ತದೆಯೋ ಅಲ್ಲಿಯವರೆಗೆ ಬಾಲ್ಯವಿರುತ್ತದೆ.
ಮುಗ್ಧತೆಯಲ್ಲಿ ಬಾಲ್ಯವಿದೆಯೋ ಬಾಲ್ಯದಲ್ಲಿ ಮುಗ್ಧತೆಯಿದೆಯೋ ಎಂದು ಹುಡುಕಾಡುವಾಗಲೇ, ಬೆಳೆದ ವಯಸ್ಸು, ಜ್ಞಾನವೃದ್ಧಿ ಮುಗ್ಧತೆಯನ್ನು ಕಳಿಸಿದುಕೊಳ್ಳುತ್ತದೆ.
ಜ್ಞಾನಕ್ಕಾಗಿ ಹಂಬಲಿಸುವ ಮನಸು, ಜ್ಞಾನ ಕಸಿದುಕೊಳ್ಳುವ ಮುಗ್ಧತೆಗಾಗಿ ಪರಿತಪಿಸುತ್ತದೆ. ಕಳೆದು ಹೋದ ಬಾಲ್ಯದೊಂದಿಗೆ, ಅಳಿದು ಹೋದ ಮುಗ್ಧತೆಯ ಹುಡುಕಾಟ ಆರಂಭವಾದ ಹೊತ್ತಿನಲ್ಲಿ ಹೆಕ್ಕಿ ಹೆಕ್ಕಿ ತೆಗೆದು ಬಾಲ್ಯವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ.

ಬಾಲ್ಯದಲ್ಲಿ ಶಾಲೆಗೆ ಸೇರಿದಾಗಿನಿಂದ ಕಾಲೇಜು ಮೆಟ್ಟಿಲೇರುವರೆಗಿನ ಘಟನೆಗಳನ್ನು ಮಾತ್ರ ಇಲ್ಲಿ ದಾಖಲಿಸಿದ್ದೇನೆ. ಹದಿನೈದು ವರ್ಷಗಳವರೆಗಿನ ಸಿಹಿ-ಕಹಿ ನೆನಪುಗಳನ್ನು ಸಕಾರಾತ್ಮಕವಾಗಿ, ಪ್ರಾಮಾಣಿಕವಾಗಿ ಹಂಚಿಕೊಂಡಿದ್ದೇನೆ.
ಈ ಹಂತದಲ್ಲಿ ಒಮ್ಮೆ ನಿಂತು ಇಪ್ಪತ್ತು ವರ್ಷಗಳ ಹಿಂದೆ ತಿರುಗಿ ನೋಡಿದಾಗ ಸಂಭ್ರಮವಾಯಿತು.

ಬಾಲ್ಯದಲ್ಲಿನ ಸಂಗತಿಗಳನ್ನು ವ್ಯಕ್ತಿಗಳನ್ನು ನಕಾರಾತ್ಮಕವಾಗಿ ಚಿತ್ರಿಸಲು ಮನಸಾಗಲಿಲ್ಲ. ಹತ್ತು ಹಲವು ಸಂದರ್ಭ ಕಾರಣವಾಗಿರಬಹುದು. ಅದಕ್ಕೆ ಯಾರೂ ಕಾರಣರಲ್ಲ. ಒಳ್ಳೆಯದು, ಕೆಟ್ಟದು ಎಂದು ವಿಂಗಡಿಸುವುದರಲ್ಲಿ ಏನರ್ಥ ?

ನಡೆದದ್ದು ನಡೆದು ಹೋಗಿದೆ. ಕಳೆದು ಹೋದದ್ದು ಹುಡುಕಿದರೂ ಸಿಗುವುದಿಲ್ಲ.
ಅಂದಿನ ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಜೀವನ ಕುಟುಂಬದ ಮೌಲ್ಯಗಳು ಇಂದು ನಮ್ಮೂರಲ್ಲಿ ಅಲ್ಲ ಎಲ್ಲಿಯೂ ಸಿಗುತ್ತಿಲ್ಲ. ಮರದ ಮೇಲೆ ಕುಳಿತ ಮನಸ್ಸು ಬೇರುಗಳ ಸೆಳೆತಕ್ಕೆ ಸಿಕ್ಕ ಅನುಭವ

ಪ್ರೀತಿ, ವಿಶ್ವಾಸ, ಅವಿಭಕ್ತ ಕುಟುಂಬ ವ್ಯವಸ್ಥೆ, ಅಲ್ಲಿನ ನಿಸ್ವಾರ್ಥ ಜೀವಿಗಳು ಪ್ರೀತಿಯಿಂದ ಬೆಳೆಸಿದ ವ್ಯಕ್ತಿಗಳು ಯಾವುದೇ ಕಾರಣಕ್ಕೆ ದ್ವೇಷಿಸಿದರೂ, ಆ ದ್ವೇಷದಲ್ಲಿಯೂ ಬದುಕಿಗೊಂದು ಅರ್ಥ ಒದಗಿಸಿದ ಅನೇಕರು ನನ್ನನ್ನು ನಿತ್ಯ ಕಾಡುತ್ತಾರೆ.

ಅಂದಿನ ಗ್ರಾಮೀಣ ಬದುಕು, ಅಲ್ಲಿನ ರಂಗು ರಂಗಿನ ಕ್ಷಣಗಳು ಇಂದು ಜಾಗತೀಕರಣ ನಗರೀಕರಣದಿಂದಾಗಿ ಮಾಯವಾಗಿವೆ.
ಊರಿಗೆ ಹೋದಾಗ ಹಳೆಯ ಗೆಳೆಯರನ್ನು, ಹಳೆಯ ಸ್ಥಳಗಳನ್ನು ಹುಡುಕಬೇಕೆನಿಸುತ್ತದೆ. ವಾಸ್ತವವಾಗಿ ಅದು ಸಾಧ್ಯವಾಗದೇ ಹೋದಾಗ, ನೆನಪಿನಾಳಕ್ಕೆ ಇಳಿದು ನನ್ನಲ್ಲಿಯೇ ಹೆಕ್ಕಿ ತೆಗೆದಿದ್ದೇನೆ.

ನನ್ನ ಸ್ಮರಣ ಶಕ್ತಿ ಈಗ ಬರೆಯುವ ಕಾಲಕ್ಕೆ ತುಂಬಾ ಶಾರ್ಪ ಆದದ್ದು ಖುಷಿ ತಂದಿದೆ. ಒಮ್ಮೊಮ್ಮೆ ಮಧ್ಯ ರಾತ್ರಿ ಎದ್ದು ಕುಳಿತು ಹಳೆಯ ಸಂಗತಿಗಳನ್ನು ಮನದ ಪರದೆಯ ಮೇಲೆ ಮೂಡಿಸಿಕೊಂಡು ಅಕ್ಷರಕ್ಕಿಳಿಸಿದ್ದೇನೆ.

ಅದನ್ನು ಬ್ಲಾಗನಲ್ಲಿ ಒದಿದ ಗೆಳೆಯರು, ಬಂಧುಗಳು ಅಬ್ಬಾ ! ಭಾರಿ ನೆನಪಲೇ ನಿಂದು, ಎಂದು ಬೆನ್ನುತಟ್ಟಿದ್ದಾರೆ. ಕೈಕೂಡದ ನೆನಪಿನಾಳಕ್ಕೆ ಕೃತಜ್ಞತೆ ಹೇಳಿದರೆ ಕೃತಕವಾಗುತ್ತದೆ.

ಇಲ್ಲಿ ಭಾಷೆಗಿಂತ ಭಾವನೆಗಳಿಗೆ ಒತ್ತು ನೀಡಿದ್ದರಿಂದ ಭಾಷಾ ಅಲಂಕಾರ ಮುಖ್ಯ ಅನಿಸಲಿಲ್ಲ. ನೆನಪುಗಳು ಎಲ್ಲಿ ಕಳೆದು ಹೋಗುತ್ತವೆ ಎಂಬಂತೆ ಹೇಳಬಹುದಾದ ಎಲ್ಲ ಸಂಗತಿಗಳನ್ನು ಹೇಳಿದ್ದೇನೆ. ಸರಿ ಸುಮಾರು ಹನ್ನೆರಡು ವರ್ಷದ ಸಂಗತಿಗಳನ್ನು ಅಸ್ಪಷ್ಠವಾಗಿ ಹರಡಿಟ್ಟಿದ್ದೇನೆ. ಯಾಪಲಪರವಿ ಮನೆತನದ ಮೂರನೇ ತಲೆಮಾರಿನ ಎಲ್ಲ ಬಂಧುಗಳು ಬೆರಗಿನಿಂದ ಅಭಿನಂದಿಸಿದ್ದಾರೆ.
ಹಿಂದಿನ ಕಹಿಗಳೆಲ್ಲ ಕಳೆದು ಸಿಕ್ಕಿರುವ ಸಿಹಿಯನ್ನು ಹಂಚಿಕೊಳ್ಳುವಾಗ ಇದು ಪ್ರಸ್ತುತ ಬ್ಲಾಗ ಮೂಲಕ ಮೂಡಿ ಬಂದ ಲೇಖನಗಳನ್ನು ವಿಶ್ವದ ವಿವಿದೆಡೆ ನೆಲೆಸಿರುವ ಕನ್ನಡ ಸ್ನೇಹಿತರು ಓದಿ ಖುಷಿ ಪಟ್ಟು ಪ್ರೇರಕ ಮಾತುಗಳನ್ನಾಡಿದ್ದಾರೆ.
ಲಿಬಿಯಾದಲ್ಲಿದ್ಸ ಪರಶುರಾಮ ಕಳ್ಳಿ ಹಾಗೂ ಅನಿವಾಸಿ ಬಂಧುಗಳು ಸ್ನೇಹಿತರು ತೋರಿದ ಪ್ರೀತಿ ಅನನ್ಯ.
ಇಲ್ಲಿ ಚಿತ್ರಿತವಾಗಿರುವ ವ್ಯಕ್ತಿಗಳು ಕೇವಲ ನನ್ನ ಬಂದುಗಳಲ್ಲ, ಓದುವ ಎಲ್ಲರ ಬಂಧುಗಳು. ಇಲ್ಲಿನ ಅನುಭವಗಳು ಕೇವಲ ನನ್ನ ಅನುಭವಗಳಲ್ಲ. ನನ್ನಂತಹ ಲಕ್ಷಾಂತರ ಹಳ್ಳಿ ಹೈದರ ಅನುಭವಗಳು. ಖಾಸಗಿ ಅನುಭವಗಳ ಸಾರ್ವತ್ರಿಕರಣ ಇದು ಎಂದು ನಮ್ರವಾಗಿ ಹೇಳಬಯಸುತ್ತೇನೆ.
ಅಮ್ಮ, ಅಜ್ಜ, ಅತ್ತೆ, ಅವ್ವ, ದೊಡ್ಡಪ್ಪ, ಚಿಕ್ಕಪ್ಪಂದಿರು ಬಂಧು ಮಿತ್ರರು ನಮ್ಮ ಬದುಕನ್ನು ಕಟ್ಟಿಕೊಡುವಲ್ಲಿ ಹೇಗೆಲ್ಲ ಕಾರಣರಾಗಿದ್ದಾರಲ್ಲ ಎನಿಸುತ್ತದೆ.
ವ್ಯಕ್ತಿ ಕೇಂದ್ರಿತ ಬದುಕಿನಲ್ಲಿರುವ ಯುವಕರಿಗೆ ನನ್ನ ಅನುಭವಗಳು ಅಚ್ಚರಿ ಎನಿಸಿವೆ. ನನ್ನ ಬರಹಗಳಿಗೆ ಗಟ್ಟಿತನ ಒದಗಿಸಿದ ಹೊಸ ಮಾಧ್ಯಮ ಬ್ಲಾಗಗೆ ರುಣಿಯಾಗಿದ್ದೇನೆ ದೇಶಗಳಲ್ಲಿ ನೆಲೆಸಿರುವ ಅಂಗೈಯಲ್ಲಿನ ಕಂಪ್ಯೂಟರ ಮೂಲಕ ಲೇಖನಗಳನ್ನು ಓದಿ ತುಟಿಯಂಚಿನ ಮೇಲೆ ನಗೆಮೂಡಿಸಿ, ಕಣ್ಣಂಚಿನಲ್ಲಿ ನೀರು ಜಿನುಗಿಸಿದ್ದಕ್ಕಾಗಿ ಕೃತಜ್ಞತೆ ಹೇಳಿದ್ದಾರೆ.
ಅತಿರಂಚಿತವಲ್ಲದ, ವೈಭವೀಕರಣವಿಲ್ಲದ, ಪ್ರಾಮಾಣಿಕ ಅನುಭವಗಳನ್ನು ಪ್ರೀತಿಯಿಂದ ಓದುವ ನಿಮಗೆ ಸಾವಿರದ ಶರಣುಗಳು.

ಕುಷ್ಟಗಿ ಅಜ್ಜನ ಪ್ರೀತಿ ರಾಯಲ್ ಜೀವನ


ಕಾರಟಗಿ ಯಲ್ಲಾದರೆ ಅಮರಣ್ಣ ತಾತ, ಕುಷ್ಟಗಿಯಲ್ಲಿ ಅವ್ವಳ ಅಪ್ಪ ಅಜ್ಜನಾಗಿದ್ದ. ಈ ಭಾಷಾ ಭಿನ್ನತೆಯೊಂದಿಗೆ ಸಾಂಸ್ಕೃತಿಕ ಭಿನ್ನತೆಯನ್ನು ಕುಷ್ಟಗಿಯಲ್ಲಿ ಅನುಭವಿಸುತ್ತಿದ್ದೆ.
ವೃತ್ತಿಯಿಂದ ವಕೀಲರಾಗಿದ್ದ ಗುರುಸಿದ್ದಪ್ಪ ಅಜ್ಜನಿಗೆ ನಾನು ಅತ್ಯಂತ ಪ್ರೀತಿಯ ಮೊಮ್ಮಗ ಅದಕ್ಕೆ ಕಾರಣ ನನ್ನ ವಾಚಾಳಿತನ. ನಿರಂತರ ಕೇಳುವ ಪ್ರಶ್ನೇಗಳಿಂದಾಗಿ ನಾನು ಆತನಿಗೆ ಪ್ರತಿವಾದಿ ವಕೀಲನಂತೆ ಕಾಣುತ್ತಿದ್ದೆ.
ಕುಷ್ಟಗಿ ಸಣ್ಣ ಹಳ್ಳಿಯಾದರೂ ತಾಲೂಕ ಕೇಂದ್ರ. ಹೈದ್ರಾಬಾದಿನಲ್ಲಿ ಲಾ ಪದವಿ ಪಡೆದಿದ್ದ ಅಜ್ಜ ಕುಷ್ಟಗಿಯಲ್ಲಿ ವೃತ್ತಿ ಮುಂದುವರೆಸಿದ್ದರು.
ವಕೀಲಿ ವೃತ್ತಿಯನ್ನು ನ್ಯಾಯಸಮ್ಮತವಾಗಿ ಮಾಡುವುದರೊಂದಿಗೆ ಹಳ್ಳಿ ಜನರೊಂದಿಗೆ ಪ್ರೀತಿಯಿಂದ, ಶೋಷಣೆ ಮಾಡದೇ ನ್ಯಾಯ ಒದಗಿಸುತ್ತಿದ್ದ ಅಜ್ಜ ಹಲವಾರು ಕಾರಣಗಳಿಂದ ಪ್ರಭಾವ ಬೀರಿದರು.
ನಾಲ್ಕು ಜನ ಹೆಣ್ಣು ಮಕ್ಕಳು, ಒಬ್ಬ ಮಗ ಹತ್ತಾರು ಜನ ಮೊಮ್ಮಕ್ಕಳ ತುಂಬು ಸಂಸಾರ. ಗದುಗಿನ ಮೇಲಗಿರಿ ಮನೆತನದ ಅಮ್ಮ ಕಾಶಮ್ಮ ಅಜ್ಜನಿಗಿಂತಲೂ ಬೋಲ್ದ. ಹಟಮಾರಿ ಕೂಡಾ. ಅಮ್ಮನ ಹಟಮಾರಿತನವನ್ನು ತುಂಬಾ ಪೋಸಿಟಿವ್ ಸ್ವೀಕರಿಸುತ್ತಿದ್ದ ಅಜ್ಜ ಸದಾ ಹಸನ್ಮುಖಿ. ಮುಂಜಾನೆ ಯೋಗಾಸನ, ಮಿತ ಆಹಾರ, ಓದು, ಅಧ್ಯಯನದೊಮದಿಗೆ ದಿನಚರಿ ಇಟ್ಟುಕೊಂಡಿದ್ದ ಅಜ್ಜನ ಸೆಳೆತದಿಂದಲೂ ಬಹುಪಾಲು ನನ್ನ ಬಾಲ್ಯವನ್ನು ಕುಷ್ಟಗಿಯಲ್ಲಿ ಕಳೆದೆ.
ಶಾಲೆ ತಪ್ಪಿಸಿ ಕುಷ್ಟಗಿಯಲ್ಲಿ ಕಾಲ ಕಳೆಯುತ್ತಿದ್ದಕ್ಕೆ ನನ್ನ ಬಗ್ಗೆ ಅಜ್ಜ ಅಂತಹ ದೊಡ್ಡ ತಕರಾರು ತೆಗೆಯುತ್ತಿದ್ದಿಲ್ಲ. ಸಿದ್ದನ ಸಾಲಿ ಪಡಸಾಲಿ ಎಂದು ತಮಾಷೆ ಮಾಡುತ್ತಿದ್ದ.
ಅಜ್ಜನ ಕೈ ಹಿಡಿದು ಅನಾಹುತ ಪ್ರಶ್ನೆಗಳನ್ನು ಕೇಳುತ್ತಾ ನಡೆದುಕೊಂಡು ಕೋರ್ಟಿಗೆ ಹೋಗುತ್ತಿದ್ದೆ.
ಅಲ್ಲಿ ಪೋಲಿಸರು, ಕಕ್ಷಿದಾರರು ನೀಡುತ್ತಿದ್ದ ಗೌರವ ಖುಷಿ ತರುತ್ತಿತ್ತು. ಕರಿ ಕೋಟಿನ ವಕೀಲರಿಗೆ ಗೌರವ ಅಪಾರ ಅನಿಸಿತು.
ಇಡೀ ಕೋರ್ಟಿನ ಗೌರವಪೂರ್ವಕ ನಡಾವಳಿಗಳು ವಕೀಲನಾಗಬೇಕು ಎಂದು ಪ್ರೇರೆಪಿಸುತ್ತಿದ್ದವು. ಆದರೆ ಅದು ಸಾಧ್ಯವಾಗಬೇಕಾದರೆ ಶಾಲೆಗೆ ಹೋಗಬೇಕು, ಹೆಚ್ಚು ಓದಬೇಕು ಎಂದು ಹೇಳಿದ ಕೂಡಲೇ ಬ್ಯಾಡಪ್ಪ ಶಾಲೆ ಸಹವಾಸ ಅನಿಸುತ್ತಿತ್ತು. ಅಜ್ಜ ಖಾಸಗಿ ಬದುಕಿನಲ್ಲಿ ಭಾವುಕರಾಗಿದ್ದರು.
ನಾಲ್ಕು ಜನ ಅಳಿಯಂದರ ಬಗ್ಗೆ ಅಭಿಮಾನ ಪ್ರೀತಿ ಗೌರವಗಳಿದ್ದವು. ಹೆಣ್ಣು ಮಕ್ಕಳ ಮೇಲಿನ ಪ್ರೇಮ, ಮೊಮ್ಮಕ್ಕಳ ಮೇಲಿನ ಮಮಕಾರದಲ್ಲಿ ಸಹಜತೆಯಿತ್ತು.

ಗದುಗಿನ ದೊಡ್ಡ ಮನೆತನದ ಅಳಿಯನಾಗಿದ್ದ ಅಜ್ಜ ಹೆಚ್ಚು ಗದುಗಿಗೆ ಹೋಗುತ್ತಿದ್ದಿಲ್ಲ ನಿಜಾಮ ಪ್ರಾಂತದ ಹೈದ್ರಾಬಾದ ಕರ್ನಾಟಕದ ಜನ, ಹಳೆ ಧಾರವಾಡ ಜಿಲ್ಲೆಯ ಜನತೆಗೆ ಹೋಲಿಸಿದರೆ ತುಂಬಾ ಭಾವುಕರು. ಮಹಾರಾಷ್ಟ್ರ ಹಾಗೂ ಇಂಗ್ಲೀಷರ ಪ್ರಭಾವದಲ್ಲಿ ಬೆಳೆದು ತಮ್ಮ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಧಾರವಾಡಿಗರು ತುಂಬಾ ವಾಸ್ತವವಾದಿಗಳು. ಹಳೆ ಧಾರವಾಡ ಜಿಲ್ಲೆಯ ಜನ ಸೌಮ್ಯತೆಯೊಂದಿಗೆ ಕುಟುಂಬದ ಸದಸ್ಯರೊಂದಿಗೆ ಕೂಡಾ ಅಷ್ಟೇ ರಿಸರ್ವ ಆಗಿರುತ್ತಿದ್ದರು.ಅಳಿಯರೇ ಇರಲಿ, ಮಕ್ಕಳೆ ಇರಲಿ ಎಲ್ಲರೊಂದಿಗೂ ಅಷ್ಟಕ್ಕಷ್ಟೇ.

ಅದೇ ಹೈದ್ರಾಬಾದ ಕರ್ನಾಟಕದ ಊರುಗಳಲ್ಲಿ ಅಳಿಯಂದಿರ ಬಗ್ಗೆ ವಿಶೇಷ ಕಾಳಜಿ ಪ್ರೀತಿ, ಅಪಾರ ಗೌರವ ಬೇರೆ. ಕುಷ್ಟಗಿಯ ಅಜ್ಜನಿಗೆ ಗದುಗಿನಲ್ಲಿ ತನಗೆ ಸಿಗದ ಹೆಚ್ಚು ಪ್ರೀತಿಯನ್ನು ಅಳಿಯರಿಗೆ ತೋರಿಸಿದ ಅಂತ ಅನಿಸುತ್ತದೆ.
ಈಗಲೂ ನಾನದನ್ನು ಅನುಭವಿಸುತ್ತೇನೆ. ನಮ್ಮೂರ ಮೂಲ ಗುಣಗಳು ಇಂದಿಗೂ ನನ್ನಲ್ಲಿ ಉಳಿದುಕೊಂಡಿವೆ.

ಅನಗತ್ಯ ಔದಾರ್ಯ, ಭಾವುಕತೆ, ಅತಿಥಿ-ಬಂಧುಗಳಿಗೆ ನೀಡಬೇಕೆನಿಸುವ ರಾಯಲ್ ಟ್ರೀಟಮೆಂಟ್ ಎಷ್ಟೊಂದು ಬೇಡ ಎನಿಸಿ ಹತ್ತಿಕ್ಕಿದ್ದರೂ ಉಕ್ಕಿ ಬರುತ್ತವೆ.
ಅದನ್ನೆ ಧಾರವಾಡ ಸ್ನೇಹಿತರು, ಬಂಧುಗಳು ಹೇಳುವಂತೆ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಅಲ್ಲವೇ ? ಶಿಸ್ತು ಸಂಯಮ, ಮಿತ ಆಹಾರ ಹಾಗೂ ಸಮಚಿತ್ತದಿಂದ ಬದುಕಿದ ಗುರುಸಿದ್ದಪ್ಪ ಅಜ್ಜ ತನ್ನ ಕೊನೆ ದಿನಗಳಲ್ಲಿ ಪಾರ್ಶ್ವವಾಯುವಿನಿಂದಾಗಿ ಅನಾರೋಗ್ಯದಿಂದ ನರಗಳಿದ್ದು ಯಾಕೆ ಎಂದು ಗೊಂದಲ ಉಂಟಾಗಿ ಬೇಸರವಾಯಿತು.
ಅಜ್ಜನ ಕೊನೆಯ ದಿನಗಳಲ್ಲಿ ಆರೈಕೆ ಮಾಡಿದ ಬೇಬಿಕಕ್ಕಿಯ ಬಗ್ಗೆಯೂ ನನ್ನ ಪ್ರೀತಿ ಹೆಚ್ಚಾಯಿತು. ಹಟಮಾರಿ ಸೋದರ ಮಾವ ಕುಷ್ಟಗಿ ಬಿಟ್ಟ ಮೇಲೆ ಅನಾಥ ಪ್ರಜ್ಞೆ ಉಂಟಾಯಿತು.
ಈಗ ಅಲ್ಲಿನ ಎಲ್ಲ ಬಂಧುಗಳು ಚದುರಿಹೋಗಿದ್ದರಿಂದ ವರ್ತಮಾನದಲ್ಲಿ ಕುಷ್ಟಗಿ ಇತಿಹಾಸವಾಗಿ ಉಳಿದಿದೆ. ಅಜ್ಜನ ಬದುಕಿನ ಹಾಗೆ !

ಕಂಠೀರವ ಸ್ಟುಡೀಯೋ ಚಿತ್ರಿಕರಣದ ಅನುಭವ


ಒಮ್ಮೆ ಬೆಂಗಳೂರು ನೋಡಿದ ಸಣ್ಣ ಅನುಭವ ಬೆನ್ನಿಗಿತ್ತು. ಮತ್ತೊಮ್ಮೆ ಸಿನೆಮಾ ಹುಚ್ಚಿನಿಂದ ಬೆಂಗಳೂರಿನತ್ತ ಪಯಣ. ಬಂಧು ಬಪ್ಪುರ ಮಲ್ಕಾ ಜಪ್ಪ ಮಾವು ಭತ್ತದ ವ್ಯಾಪಾರಕ್ಕೆಂದು ಬೆಂಗಳೂರಿಗೆ ಹೋಗುತ್ತಿದ್ದ.
ಅವರ ಲಾರಿ ಹಿಡಿದು ಹೋದರೆ ಪುಕ್ಕಟೆ ಬೆಂಗಳೂರು ತಲುಪುವ ವಿಚಾರ ಆರಂಭವಾಯಿತು.
ಬೆಂಗಳೂರಿಗೆ ಹೋಗಿ, ಒಂದೆರಡು ದಿನ ಇದ್ದು ಶೂಟಿಂಗ್ ನೋಡಿ ಬರಲು ಒಟ್ಟು ಮುನ್ನೂರು ರೂಪಾಯಿ ಬೇಕಾಗಬಹುದೆಂದು ಗೆಳೆಯ ಹೇಳಿದ. ಅಷ್ಟೊಂದು ಹಣ ಮನೆಯಲ್ಲಿ ಕೊಡುತ್ತಿರಲಿಲ್ಲ ನನ್ನ ಓರಿಗೆಯ ಗೆಳೆಯ ಕಿರಾಣಿ ವ್ಯಾಪಾರ ಮಾಡುತ್ತಿದ್ದ, ಅವನು ಸಾಲದ ರೂಪದಲ್ಲಿ ಹಣ ಕೊಡುವುದಾಗಿ ಒಪ್ಪಿದ. ಭತ್ತ ತುಂಬಿದ ಲಾರಿಯಲಿ ಮಲ್ಕಾಜಪ್ಪ ಮಾವನೊಂದಿಗೆ ಬೆಂಗಳೂರು ಟೋಲ್ ನಾಕಾಗಳ ಬಳಿ ಹಣ ನೀಡುತ್ತ ಬೆಂಗಳೂರು ತಲುಪಿದ ನೆನಪು.
ಮಾರ್ಕೆಟ್ನಲ್ಲಿದ್ದ ತಮಿಳು ಏಜೆಂಟರ ಅಂಗಡಿಯಲ್ಲಿ ವಾಸ ಅದರ ಹಿಂದಿದ್ದ ಲಾಜನಲ್ಲಿಯೂ ವಾಸಕ್ಕೆ ವ್ಯವಸ್ಥೆ ಗದ್ದಲದಿಂದ ಕೂಡಿದ ಮಾರುಕಟ್ಟೆ, ಧೂಳು ಎಲ್ಲದು ಹೊಸದೆನಿಸಿದರೂ ಸಹಿಸಿಕೊಂಡೆ.

ಮರುದಿನ ಅಲ್ಲಿದ್ದವನು ವಿಚಾರಿಸಿ ಕಂಠಿರವ ಸ್ಟುಡಿಯೋ ಎಲ್ಲಿದೆ ಎಂದು ಪತ್ತೆ ಹಚ್ಚಿದೆ. ಆಟೋಕ್ಕೆ ಹೋದರೆ ಹತ್ತು ರೂಪಾಯಿ ಆಗುತ್ತ ಅಂದಾಗ ಅಲ್ಲಿಗೆ ಹೋಗುವ ಯೋಜನೆ ರೂಪಿಸಿದೆ.
ಆಟೋದಿಂದ ಇಳಿದು ಹೋದದ್ದಕ್ಕೆ ಏನೋ, ವಾಚಮ್ಯಾನ್ ತಕರಾರು ತೆಗೆಯಲಿಲ್ಲ. ಸೆಲ್ಯೂಟ ಹೊಡೆದು ನಕ್ಕಿದ್ದಕ್ಕೆ ಐದು ರೂಪಾಯಿ ಕೊಟ್ಟೆ.
ಒಳಗೆ ಹೋದಾಗ ನನಗೆ ಇಷ್ಟವಾದ ವಿಸ್ಮಯ ಲೋಕವೊಂದು ತೆರೆದುಕೊಂಡಿತು.
ಪ್ರಭಾಕರ, ಶ್ರೀಪ್ರಿಯಾ, ರಾಜೇಶ್, ಆರತಿ, ಹೀಗೆ ರಜತ ಪರದೆಯ ಮೇಲೆ ಮಹಿಮಾ ಪುರುಷರಂತೆ ಕಂಗೊಳಿಸುತ್ತಿದ್ದ ನಟರೆಲ್ಲ ಎದುರಿಗೆ ಓಡಾಡಿದಾಗ ಗಾಭರಿಯಾದೆ. ನನ್ನನ್ನು ಯಾರು ವಿಚಾರಿಸಲಿಲ್ಲ. ನನ್ನ ಪಾಡಿಗೆ ನಾನು ಶೂಟಿಂಗ್ ನೋಡುತ್ತಾ ಸಾಗಿದೆ.
ಕೋರ್ಟ ಸನ್ನಿವೇಶದ ಚಿತ್ರಿಕರಣ ನಡೆದಿತ್ತು. ಪ್ರಭಾಕರ, ಲೋಕೇಶ ಇದ್ದರು. ಪದೇ, ಪದೇ ರೀ-ಟೇಕ್ ನೋಡಿ ಸಿನೆಮಾ ಬಗ್ಗೆ ಇದ್ದ ಕುತೂಹಲ ಮಾಯವಾಯಿತು. ನಟಿಸಲು ಅವಕಾಶ ನೀಡಿ ಎಂದು ಕೇಳಲು ಹೋದ ನನ್ನ ಆಸೆ ಕಮರಿಹೋಯಿತು.

ರಾಜೇಶ, ಆರತಿ, ಅಭಿನಯಿಸಿದ ಕಲಿಯುಗ ಚಿತ್ರಿಕರಣ ಸಾಗಿತ್ತು. ಒಂದು ಸನ್ನಿವೇಶವನ್ನು ಒಂದು ತಾಸಿನ ತನಕ ಚಿತ್ರಿಕರಿಸಿ ಓ.ಕೆ. ಮಾಡಲಾಯಿತು. ಸಿನೆಮಾ ಬಂದ ಮೇಲೆ ನೋಡಿದರೆ ಅರ್ಧ ನಿಮಿಷದಲ್ಲಿ ಆ ಸನ್ನಿವೇಶ ಮುಗಿದು ಹೋಯಿತು.

ಅಂದು ಶೂಟಿಂಗ್ ನೋಡಿದ ಮೂರು ಸಿನೆಮಾಗಳನ್ನು ಮತ್ತೆ, ಮತ್ತೆ ಕುತೂಹಲದಿಂದ ನೋಡಿದೆ. ನಾನು ಆರಾಧಿಸುತ್ತಿದ್ದ ಹತ್ತಾರು ಕಲಾವಿದರು ಅಲ್ಲಿ ಸಿಕ್ಕರು. ಅವರನ್ನೆಲ್ಲ ಮಾತನಾಡಿಸಿದೆ. ಚೀಲದಲ್ಲಿ ಇಟ್ಟುಕೊಂಡಿದ್ದ ನೋಟಬುಕ್ ತೆಗೆದು ಸಹಿ ಹಾಕಿಸಿಕೊಂಡೆ. ಏನಪ್ಪ ನೋಟ ಬುಕ್ ತಂದಿದ್ದಿಯಾ ಆಟೋಗ್ರಾಫ್ ಇಲ್ಲವಾ ಅಂದರು.
ಸಂಜೆಯವರೆಗೆ ಇದ್ದೆ. ಸಿನೆಮಾ ಯುನಿಟಗಳಲ್ಲಿಯೇ ಊಟ ಮಾಡಿದೆ. ಯಾರೂ ತಕರಾರು ತೆಗೆಯಲಿಲ್ಲ.
ಸಿನೆಮಾದವರ ಸಹನೆ, ಚಿತ್ರೀಕರಣದ ಬೇಸರ, ಕಲಾವಿದರ ಖಾಸಗಿ ಬದುಕಿನ ಭಿನ್ನ ವರ್ತನೆ ಅಚ್ಚರಿ ಮೂಡಿಸಿತು. ಹೇಗಾದರೂ ಮಾಡಿ ನಟಿಸಲು ಅವಕಾಶ ಕೇಳಬೇಕೆಂದು ಹೋಗಿದ್ದೆ. ಸಹ ಕಲಾವಿದರ ಗೋಳಿನ ಕತೆ, ಚಿತ್ರಿರಂಗದ ಕಷ್ಟಗಳನ್ನು ಕೇಳಿ ಸಿನೆಮಾ ಸಹವಾಸವೇ ಬೇಡ ಎನಿಸಿತು.
ಸಿನೆಮಾ ವ್ಯಾಮೋಹ ಮಾತ್ರ ಕಡಿಮೆ ಆಗಲಿಲ್ಲ ಅವಕಾಶ ಸಿಕ್ಕರೆ ನಟಿಸಬೇಕು ಎನಿಸುತ್ತಿತ್ತು. ಹೈಸ್ಕೂಲಿನಲ್ಲಿ ನಾಟಕದಲ್ಲಿ ಅಭಿನಯಿಸಿದೆ. ಬಣ್ಣದ ಗೀಳು ಕಡಿಮೆ ಆಗಲಿಲ್ಲ. ಮುಂದೆ ಕಾಲೇಜಿನಲ್ಲಿಯೂ ಅಭಿನಯಿಸಿದೆ.
ಗದ್ದಲದ ಬೆಂಗಳೂರನ್ನು ಈಗ ನೋಡಿದಾಗಲೆಲ್ಲ. ನನ್ನ ಬಾಲ್ಯದ ಭಂಡ ಧೈರ್ಯ ನೆನಪಾಗಿ ಬೆರಗು ಉಂಟಾಗುತ್ತದೆ. ಆಕಸ್ಮಾತ ಅವಕಾಶ ಸಿಕ್ಕಿದ್ದರೆ ಏನಾಗುತ್ತಿತ್ತೋ ಏನೋ?
ಅಥವಾ ಗದ್ದಲದ ಬೆಂಗಳೂರಿನಲ್ಲಿ ಕಳೆದು ಹೋಗಿದ್ದರೆ ಹೇಗೆ ಎಂಬ ಆತಂಕ ಈಗ. ಸಿನೆಮಾ ಶೂಟಿಂಗ್ ನೋಡಿದ ವಿಷಯ ಯಾರಿಗೂ ಸ್ವಲ್ಪ ದಿನ ಹೇಳಲಿಲ್ಲ. ಹೇಳಿದರೆ ನಂಬುವುದಿಲ್ಲ ಅನಿಸುತ್ತಿತ್ತು. ಮೊನ್ನೆ ಧಾರವಾಹಿಯಲ್ಲಿ ನಟಿಸಲು ಬಣ್ಣ ಹಚ್ಚಿದಾಗ ಬಾಲ್ಯದ ಈ ಘಟನೆ ನೆನಪಾಯಿತು.

ಮೌಢ್ಯತೆಗೆ ಉತ್ತರವಿಲ್ಲ - ಪ್ರೀತಿ ತೋರಿದ ಹಡಪದ ಸ್ನೇಹಿತರು

ಹಳ್ಳಿಗಳಲ್ಲಿ ನೂರೆಂಟು ನಂಬಿಕೆಗಳು, ಅಂದರೆ ಮೂಢನಂಬಿಕೆಗಳು. ಈ ರೀತಿಯ ಅನುಮಾನಗಳಿಗೆ ಪ್ರಶ್ನಿಸುವಂತೆಯೇ ಇಲ್ಲ.
ಅಮ್ಮ, ಅವ್ವ, ಅತ್ತೆಯರು ಶಾವಗಿ ಹೊಸೆಯುವಾಗ ಒಂದು ರೀತಿಯ ಕುತೂಹಲ ಶಾವಗಿ ಹಿಟ್ಟಿನಲ್ಲಿ ಉಳ್ಳಾಗಡ್ಡಿ ಇಟ್ಟಿರುತ್ತಿದ್ದರು. ಯಾಕೆ ಎಂದು ಕೇಳಿದೆ ? ಹಾಗೆಲ್ಲ ಕೇಳಬಾರದು ಎಂಬ ತಾಕೀತು. ಈ ಪ್ರಶ್ನೆಗೆ ಇಂದಿಗೂ ಉತ್ತರವಿಲ್ಲ ಬಿಡಿ.
ಬೆಳಿಗ್ಗೆ ಎದ್ದ ಕೂಡಲೆ ಹಡಪದ ಜನಾಂಗದವರ ಮುಖ ನೋಡಬಾರದು ಎಂದು ಹೇಳಿದಾಗ ನನಗೆ ಬೇಸರವಾಗುತ್ತಿತ್ತು.
ಇದೆಂತಹ ವಿಪರ್ಯಾಸ ನಾದರ ಶಿವಪ್ಪ ತಲೆ ಕೂದಲು ತೆಗೆಯಲು ಬರುತ್ತಿದ್ದುದೇ ನಸುಕಿನಲ್ಲಿ ಅಷ್ಟರೊಳಗೆ ಎದ್ದು ದೇವರ ಫೋಟೋಗೆ ವಂದಸಿ ಕಟಿಂಗ್ ಮಾಡಿಸಲು ಕೂಡಬೇಕಾಗುತ್ತಿತ್ತು.
ಅತ್ಯಂತ ಸರಳವಾಗಿ ನಾನು ಒಮ್ಮೆ ಶಿವಪ್ಪನಿಗೆ ಕೇಳಿದೆ. ಯಾಕೆ ಶಿವಪ್ಪ ಮುಂಜಾನೆದ್ದ ಕೂಡಲೇ ಯಾಕ ನಿನ್ನ ಮಕ ನೋಡಬಾರದು ಅಂದೆ. ಏನ ಅಂತಾರಪ ದಣಿ, ನೋಡಿದ್ರೇನ ದರಿದ್ರ ಹತ್ತತೈತಂತೆ ಅಂದ. ಹಿಂಗ ಅನ್ನೋದರಿಂದ ಬ್ಯಾಸರ ಆಗಂಗಿಲ್ಲೇನು ಅಂದೆ. ಇಲ್ಲ ಬಿಡು ಧಣಿ ಅಂಗೇನಿಲ್ಲ ಎಂದ.
ನಾನು ಒಮ್ಮೆ ಹಟಕ್ಕೆ ಬಿದ್ದಂತೆ ಬೆಳಿಗ್ಗೆ ಎದ್ದು ದೇವರಿಗೆ ನಮಸ್ಕರಿಸಿದೇ ನಾದರ ಶಿವಪ್ಪನ ಮುಖ ನೋಡಿ ಇಡೀ ದಿನ ಏನು ಕಾಡುತ್ತೋ ನೋಡಿಯೇ ಬಿಡೋಣ ಅಂತ ತೀರ್ಮಾನಿಸಿದೆ.
ಆದರೆ ಸಂಜೆಯವರೆಗೆ ಅಲ್ಲ ನನಗೆ ಎಂದೂ ಏನೂ ತೊಂದರೆಯಾಗಲಿಲ್ಲ. ಅಯ್ಯೋ ಇದೊಂದು ಸುಳ್ಳು ಕಂತೆ ಎಂದುಕೊಂಡೆ.
ಇದನ್ನ ನಾನೊಮ್ಮೆ ಅಮರಣ್ಣ ತಾತನಿಗೆ ಹೇಳಿಯೇ ಬಿಟ್ಟೆ. ತಾತ ನಿನ್ನೆ ನಾನು ನಾದರ ಶಿವಪ್ಪನ ಮುಖ ನೋಡಿದೆ. ನನಗೇನು ಕೆಟ್ಟದಾಗಲಿಲ್ಲ. ಹೌದು ಬಿಡಪ ಖೋಡಿ ಸುಮ್ಮನೆ ಅಂತಾರೆ ಅಂದಾಗ ಸಮಾಧಾನವಾಯಿತು. ಹೀಗೆ ಒಂದೊಂದೇ ಮೌಢ್ಯ ಅಭಿಪ್ರಾಯಗಳಿಗೆ ಉತ್ತರ ನನ್ನಲ್ಲಿ ಕಾಣುತ್ತಾ ಹೋದೆ.
ಕಟಿಂಗ್ ಮಾಡಿಸಿಕೊಳ್ಳುವಾಗಲೆಲ್ಲ ಆಪ್ತವಾಗಿ ಮಾತನಾಡುತ್ತಾ ಶಿವಪ್ಪನಿಗೆ ಆತ್ಮೀಯನಾದೆ .
ಪಾಪ, ನಮ್ಮ ಸಲುವಾಗಿ ನಸಗಿನಾಗ ಕಷ್ಟ ಮಾಡಾಕ ಬರ್ತಿಯಪ, ಆದ್ರ ಇವರು ನಿನ್ನ ಮಕ ನೋಡಬಾರದು ಅಂತಾರಲ್ಲಪ ಅಂದಾಗ ಇರ‍ಲಿ ಬಿಡಪ ಧಣಿ ಮದ್ಲಿಂದ ನಂಬ್ಯಾರ, ಅಂತಾರ ಬುಡು ಅಂತಿದ್ದ.
ಪ್ರತಿನಿತ್ಯ ಶೇವ್ ಮಾಡಿಕೊಳ್ಳುವಾಗ ಅನುಭವಿಸುವ ಕಿರಿಕಿರಿಯಲ್ಲಿ ನಮ್ಮೂರ ಹಡಪದ ಮಹದೇವನನ್ನು ಜ್ಞಾಪಿಸಿಕೊಳ್ಳುತ್ತೇನೆ. ಹೈದ್ರಾಬಾದ್ ಕರ್ನಾಟಕದ ಹಳ್ಳಿಗಳಲ್ಲಿ ಹುಡುಗರಿಗೆ ತಮಗೂ ವಯಸ್ಸಾಯಿತು. ಹರೆಯದ ಪ್ರಾಯ ಬಂದಿದೆ ಎಂದು ತೋರಿಸುವ ಉತ್ಸಾಹ - ಚಪಲವೂ ಇರುತ್ತಿತ್ತು.
ಸಣ್ಣವರಂತೆ ಇರುವುದಕ್ಕಿಂತ ದೊಡ್ಡವರಾಗಬೇಕು. ಮದುವೆ ಎಂಬ ತೊಡರಿಗೆ ಸಿಕ್ಕು ಹಿರೆತನ ಮಾಡಬೇಕು ಎಂಬ ಸುಪರಫಿಸಿಯಲ್ ಭಾವನೆಗಳಿರುತ್ತಿದ್ದವು.

ದೊಡ್ಡವರಾಗಿದ್ದಕ್ಕೆ ಸಾಕ್ಷಿಯಾದ ಗಡ್ಡ-ಮೀಸೆಗಳು ಚಿಗಿಯಲಿ ಎಂಬ ತುಡಿತ ಬೇರೆ. ಹದಿನಾಲ್ಕರ ಪ್ರಾಯದಲ್ಲಿ ಗೆಳೆಯ ಹಡಪದ ಮಹದೇವನ ಹತ್ತಿರ ಕಟಿಂಗ್‌ಗೆ ಹೋಗಿದ್ದಾಗ ಮಹದೇವ ಗಡ್ಡ-ಮಿಸೆ ಮೇಲೆ ಕತ್ತಿ ಆಡಿಸಿಲಾ ಧಣಿ ಎಂದ. ಅಲ್ಲ ಬಂದೇ ಇಲ್ಲಲ್ಲ ಅಂದೆ. ಇಲ್ಲಪ ಒಂದೆರಡು ಬಾರಿ ಕತ್ತಿ ಆಡಿಸಿದ್ರ ಜಲ್ದಿ ಬರ‍್ತಾವಪಾ ಅನ್ನಬೇಕೆ.
ಎಲ್ಲರಿಗೂ ಇರುವ ಹಾಗೆ ನನಗೂ ತುಡಿತವಿತ್ತು ಒಪ್ಪಿಗೆ ನೀಡಿದೆ. ಎಳೆಯ ಚರ್ಮದ ಮೇಲೆ ಹರಿತ ಕತ್ತಿ ಹರಿದಾಡಿ ಮುಖ ರಕ್ತಸಿಕ್ತವಾದರೂ ಮೀಸೆ ಬರುತ್ತಿವೆ ಎಂಬ ಸಂಭ್ರಮದಲ್ಲಿ ನಗುತ ಸುಮ್ಮನಾದೆ. ಇದರ ಅಪಾಯವನ್ನು ಈಗ ಅನುಭವಿಸುತ್ತಿದ್ದೇನೆ. ಮುಖದ ತುಂಬೆಲ್ಲ ಆವರಿಸಿರುವ ಬಿಳಿ ಗಡ್ಡಗಳ ಕಾರಣಕ್ಕೆ ನಿತ್ಯ ಶೇವ್ ಮಾಡುವುದು ಅನಿವಾರ್ಯ. ಇಷ್ಟೊಂದು ತೀವ್ರವಾಗಿ ಆವರಿಸಲು ಬಾಲ್ಯದಲ್ಲಿನ ಬೇಗ ಕತ್ತಿ ಹಚ್ಚಿದ್ದೇ ಕಾರಣ. ಉಪನ್ಯಾಸಕ ವೃತ್ತಿಗೆ ಸೇರಿದ ಮೇಲೆ ಶೇವಿಂಗ್ ಕಡ್ಡಾಯವಾಯಿತು.
ಕನ್ನಡಿಯಲ್ಲಿ ಮುಖ ನೋಡಿಕೊಂಡಾಗಲೆಲ್ಲ ಹೆಮ್ಮೆಯಿಂದ ಮಹದೇವನ ಅಂಗಡಿಗೆ ಹೋಗಿ ಕತ್ತಿ ಹಚ್ಚಲು ಒತ್ತಾಯಿಸುತ್ತಿದ್ದೆ. ಗಡ್ಡ ಮೀಸೆ ಬೆಳೆಯಲಿ, ಧ್ವನಿ ಗಡಸಾಗಲಿ, ಮುಖದ ಮೇಲೆ ಮೊಡವೆಗಳು ಕಾಣಿಸಲಿ ಎಂದು ಬಯಸುವ ಅಂದಿನ ಮನೋಸ್ಥಿತಿ ನೆನಸಿಕೊಂಡರೆ ವಿಚಿತ್ರವೆನಿಸುತ್ತದೆ.
ಬಾಲ್ಯದ ಮುಗ್ಧತೆಯನ್ನು ಕಳೆದುಕೊಳ್ಳುವ ಧಾವಂತ ಅಜ್ಞಾನದ ಸಂಕೇತವೆನಿಸುತ್ತದೆ. ನಾಲ್ಕು ವರ್ಷಕ್ಕೆ ಒಂದನೇ ವರ್ಗಕ್ಕೆ ಪ್ರವೇಶ ಪಡೆದ ಕಾರಣಕ್ಕೆ ಹೈಸ್ಕೂಲಿನಲ್ಲಿ ನಾನೇ ಅತೀ ಚಿಕ್ಕ ಹುಡುಗ. ಹತ್ತನೇ ಕ್ಲಾಸಿನ ನನ್ನ ಗೆಳೆಯರೆಲ್ಲ ವಯಸ್ಸಿನಲ್ಲಿ ನನಗಿಂತ ಎರಡು ವರ್ಷ ಹಿರಿಯರಿದ್ದರು. ಅವರ ಹಾಗೆ ಗಡ್ಡ-ಮೀಸೆ ಇರಲಿ ಎಂಬ ಅತಿಯಾಸೆ ನಿತ್ಯ ಕಾಡುತ್ತಿತ್ತು. ಮೀಸೆ ದಾಡಿ ಗೋಳು ಅನಿಸಿದಾಗಲೆಲ್ಲ ಹಡಪದ ಶಿವಪ್ಪ ಮಹದೇವ ಬೆಳಿಗ್ಗೆಯೇ ನೆನಪಾಗಿ ನನ್ನ ಪಾಲಿನ ಸುದೈವಿಗಳೆನಿಸುತ್ತಾರೆ ಅಪಶಕುನ ಅಲ್ಲ.

Wednesday, February 23, 2011

ನಶಿಸಿ ಹೋದ ಸಿರಿವಂತಿಕೆ ಸರಸ್ವತಿಗಾಗಿ ಹುಡುಕಾಟ

ನ್ಯಾಯ ಅನ್ಯಾಯದ ಪ್ರಶ್ನೆ ಅಲ್ಲ. ಬ್ಯಾರೆ ಆದ ಮೇಲೆ ಮನೆತನದ ವ್ಯಾಪಾರ ಕುಸಿಯಿತು. ಅಮರಣ್ಣ ತಾತನಿಗೂ ನಿರಾಶೆಯಾಯಿತು. ಒಂದೇ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಗ್ರಾಹಕರಲ್ಲಿ ಗೊಂದಲ ಉಂಟಾಯಿತು. ಕಿರಾಣಿ ಅಂಗಡಿಯಲಿ ಅಪ್ಪ, ಅಮರಣ್ಣ ತಾತ ಇರುತ್ತಿದ್ದರೆ, ಬಸಣ್ಣ ದೊಡ್ಡಪ್ಪ ಖರೀದಿಗಾಗಿ ಹೈದ್ರಾಬಾದ, ರಾಯಚೂರಿಗೆ ತಿರುಗಾಡುತ್ತಿದ್ದ.
ಆದರೆ ಬೇರೆ ಆದ ಮೇಲೆ ಅಪ್ಪನೂ ಕಿರಾಣಿ ಅಂಗಡಿ ಮಾಡುವುದು ಅನಿವಾರ್ಯವಾಯಿತು. ನಮ್ಮ ಗಿರಾಕಿಗಳಿಗೆ ನಿರಾಶೆಯಾಯಿತು. ಪರಿಚಯವಿದ್ದ ಅಪ್ಪನ ಅಂಗಡಿಗೂ ಮನೆತನದ ಹಿರಿಯ ಅಮರಣ್ಣ ತಾತನ ಕಡೆಗೋ ಎಂಬ ಸಂಕೋಚದಲ್ಲಿ ನಮ್ಮ ಗ್ರಾಹಕರು ದೂರಾದರು.
ಆಸ್ತಿ ಹಂಚಿಕೊಂಡ ಹಾಗೆ ನಾವು ನಮ್ಮ ಆಳುಗಳನ್ನು ಲೆಕ್ಕ ಬರೆಯುವವರನ್ನು ಹಂಚಿಕೊಂಡೆವು ಅನಿಸುತ್ತದೆ. ಕೆಲವರು ಅಪ್ಪನ ಕಡೆ, ಕೆಲವರು ತಾತನ ಕಡೆ ಉಳಿದರು. ಒಂದು ರೀತಿಯ ಇಳಿಮುಖ ಆರಂಭವಾಯಿತು. ದಿನಕ್ಕೆ ಸಾವಿರಾರು ರೂಪಾಯಿ ಲಾಭ ತಿರುತ್ತಿದ್ದ ಅಂಗಡಿ ನಿರ್ಜನವಾಯಿತು. ನಮ್ಮಲ್ಲಿ ಕೆಲಸಮಾಡಿ ಗಿರಾಕಿಗಳೊಂದಿಗೆ ಸಂಪರ್ಕ ಹೊಂದಿದ ಗುಮಾಸ್ತರು ಅಂಗಡಿ ಪ್ರಾರಂಭಸಿದರು. ಇದು ಅವರ ಬೆಳವಣಿಗೆಗೆ ಅನಿವಾರ್ಯ ಕೂಡಾ ಆಗಿತ್ತು.
೧೯೭೬ರಲ್ಲಿ ಅಮರಣ್ಣ ತಾತ ಇದೇ ಬೇಸರದಿಂದ ನಿಧನ ಹೊಂದಿದ ಮೇಲೆ ಇಡೀ ಪರಿವಾರದ ಮೇಲೆ ತೀವ್ರ ಪರಿಣಾಮವಾಯಿತು. ಎರಡೂ ಅಂಗಡಿಗಳು ಸರಿಯಾಗಿ ನಡೆಯಲಿಲ್ಲ. ಓಡಾಟಕ್ಕೆ ಇದ್ದ ಜೀಪು ದೂರವಾಯಿತು.ಹಳೆ ಸ್ಕೂಟರ್, ಒಂದೆರಡು ಸೈಕಲ್ಲುಗಳು ನಮ್ಮ ಪಾಲಿಗೆ ಉಳಿದವು. ರಾಯಚೂರಿನಿಂದ ಮಾಲು ತರಲು ಬಳಸುತ್ತಿದ್ದ ಲಾರಿ ಮಾರಾಟವಾಯಿತು. ದಿನದಿಂದ ದಿನಕ್ಕೆ ಧಣಿತನ ಕ್ಷೀಣವಾಗಿ, ಧಣಿ ಎಂಬ ಪಟ್ಟ ಮಾತ್ರ ಉಳಿಯಿತು. ಸೂಗಪ್ಪ ಮಾಮಾ, ನಾಗಪ್ಪ ಮಾಮಾ ಅಪ್ಪನೊಂದಿಗೆ ಉಳಿದು ಬೇರೆ, ಬೇರೆ ವ್ಯಾಪಾರಗಳ ವಿಫಲ ಪ್ರಯೋಗ ಮಾಡಿದರು. ಕನಕರಡ್ಡಿ ಶಿವಲಿಂಗಪ್ಪ, ಮಲ್ಲಪ್ಪ, ಕುಳಗಿ ಶರಣಪ್ಪ ಬೇರೆ ವ್ಯಾಪಾರ ಪ್ರಾರಂಭಿಸಿದರು ನಮ್ಮದು ಅರಸೊತ್ತಿಗೆಯಿಲ್ಲದ ಸಾಮ್ರಾಜ್ಯವಾಯಿತು. ಶಾಲೆಗೆ ಕರೆದುಕೊಂಡು ಹೋಗಲು ನೇಮಿಸಿದ್ದ ಆಳುಗಳು ಬಿಟ್ಟು ಹೋದರು. ನಾವೇ ಪಾಟಿ ಚೀಲ ಹೊತ್ತುಕೊಂಡು ಶಾಲೆಗೆ ಹೋಗಲು ಬೇಸರವಾಗುತ್ತಿತ್ತು.
ಆದರೆ ಕಾಲಚಕ್ರ ನಮ್ಮನ್ನು ಕೆಳಗೆ ಇಳಿಸಿತ್ತು. ನಾವು ಮೇಲಿದ್ದೇವೆ ಎಂಬ ಭ್ರಮೆಯಲ್ಲಿ ಬಹಳ ದಿನ ಉಳಿಯಲಾಗಲಿಲ್ಲ.
ಸೂಗಪ್ಪ ಮಾಮ ಅಪ್ಪನನ್ನು ಬಿಟ್ಟು ಹೋಗಿ ಬೇರೆ ಉದ್ಯೋಗ ಪ್ರಾರಂಭಿಸಿ ಅಷ್ಟೇ ಬೇಗ ಯಶಸ್ಸುನ್ನು ಗಳಿಸಿದ ನಮ್ಮ ಅಂಗಡಿಯಲ್ಲಿ ಗುಮಾಸ್ತರಾಗಿದ್ದವರೆಲ್ಲ ಸ್ವಯಂ ಪರಿಶ್ರಮದಿಂದ, ಪ್ರಾಮಾಣಿಕ ಹೋರಾಟದಿಂದ ನಿಜವಾದ ಧಣಿಗಳಾದರು.
ದುರಾದೃಷ್ಟ ಅಂದುಕೊಂಡು ಅಪ್ಪಾ, ದೊಡ್ಡಪ್ಪ ವ್ಯಾಪಾರ ನಿಲ್ಲಿಸುವುದು ಅನಿವಾರ್ಯವಾಯಿತು.
ನಾವು ಬೇರೆ ಆಗಿದ್ದು ತಪ್ಪು ಎಂಬ ಭಾವನೆ ಉಂಟಾದರೂ ಏನೂ ಮಾಡಲು ಸಾಧ್ಯವಾಗಲಿಲ್ಲ.
ಬಟ್ಟೆ ಅಂಗಡಿ, ದಲಾಲಿ ಅಂಗಡಿಗಳ ಪ್ರಯೋಗವು ಆಯಿತು. ಹಳೆ ಬಜಾರನ ಕಿರಾಣಿ ಅಂಗಡಿಗೆ ನನ್ನನ್ನು ಕೂಡ್ರಿಸಿದರು. ನನಗೆ ವಿಪರೀತ ಪೇಪರ್ ಹೋದೋ ಹುಚ್ಚು ವ್ಯಾಪಾರದ ಕಡೆ ನಿಗಾ ಬರಲಿಲ್ಲ.
ವ್ಯಾಪಾರ ಕುಸಿಯಿತು. ರದ್ದಿ ಪತ್ರಿಕೆಗಳಾಗಿ ಬರುತ್ತಿದ್ದ ಕನ್ನಡಪ್ರಭ, ರೂಪತಾರಾ, ಪ್ರಪಂಚ ಓದಲು ಶುರು ಮಾಡಿ ಸಾಹಿತ್ಯದ ಗೀಳು ಬೆಳಸಿಕೊಂಡೆ.
ರಾಜನ ಪಾತ್ರಧಾರಿ ತನ್ನ ಪಾತ್ರ ಮುಗಿದು ಮನೆಗೆ ಹೋಗುವಾಗ ಆಭರಣ ಕಳಚಿಡುವಂತೆ, ನಾವು ಒಂದೊಂದನ್ನೆ ಕಳಚುತ್ತಾ ಹೋದೆವು.
ಹೈಸ್ಕೂಲು ಸೇರೋ ಹೊತ್ತಿಗೆ ರಿಪೇರಿಯಾಗದ ಸೈಕಲ್ಲು ಚೈನು ಹರಿದುಕೊಂಡು ಮೂಲೆ ಸೇರಿತು.
ನಾನು, ದಿದಗಿ ಸುರೇಶ, ಕಾಗಲಕರ್ ನಾಗರಾಜ್ ನಡೆದುಕೊಂಡೆ ಶಾಲೆಗೆ ಹೋಗುತ್ತಿದ್ದೆವು. ಎಂಟನೇ ಕ್ಲಾಸಿನಲ್ಲಿದ್ದಾಗ ಸ್ಕೂಟರ್ ಸವಾರಿ ಕಲಿಕೆ, ಆದರೆ ಪೆಟ್ರೋಲ್ ದುಬಾರಿ ಆಗಿದ್ದರಿಂದ ಶಾಲೆಗೆ ಒಯ್ಯಲು ಸಾಧ್ಯವಾಗಲಿಲ್ಲ. ಲಕ್ಷ್ಮೀ ನಮ್ಮಿಂದ ದೂರಾದಳು ಎಂಬ ಭಾವ ಉಂಟಾಗುವಾಗಲೇ ಸರಸ್ವತಿಯನ್ನು ಒಲಿಸಿಕೊಳ್ಳುವ ಪ್ರಯತ್ನ ಶುರು ಆಯಿತು. ಆದರೆ ದುರಾದೃಷ್ಟ ಅಲ್ಲಿಯೂ ಕೈಕೊಡಬೇಕೆ ?

ಮಾಟ-ಮಂತ್ರ ಇಂದಿನ ಕತೆಯಲ್ಲ

೨೧ನೇ ಶತಮಾನದಲ್ಲಿಯೂ ಮಾಟ ಮಾಡಿಸುತ್ತಾರೆ. ವಿಧಾನ ಸೌಧಕ್ಕೆ ಮುಖ್ಯಮಂತ್ರಿಗಳಿಗೆ ಮಾಟ ಮದ್ದು ಮಾಡಿಸುವಾಗ ಹಿಂದಿನ ಕತೆ ಹೇಳಿದರೆ ಪರಮಾ ಶ್ವರ್ಯವಲ್ಲ ಬಿಡಿ.
ನಾನು ಕೇವಲ ಹನ್ನೆರಡರ ಪ್ರಾಯದಲ್ಲಿದ್ದಾಗಲೇ ಈ ಶಬ್ದಗಳನ್ನು ಕೇಳಿದ್ದೇನೆ.
ಅವಿಭಕ್ತ ಕುಟುಂಬ, ವಿಭಕ್ತಗೊಳ್ಳವದನ್ನು ಗ್ರಾಮ್ಯಭಾಷೆಯಲ್ಲಿ ಬ್ಯಾರೆ ಆಗುವುದು ಅನ್ನುತ್ತಿದ್ದರು. ಬ್ಯಾರೆ ಆಗುವುದು ಆ ಕಾಲದಲ್ಲಿ ದೇಶ ವಿಭಜನೆ ಆದಂತೆಯೇ.
ಕಾರಟಗಿಯ ಪ್ರತಿಷ್ಠಿತ ಯಾಪಲಪರವಿ ಮನೆತನದವರು ಬ್ಯಾರೆ ಆಗ್ತಾರೆ ಅಂದದ್ದು ಇಡೀ ಊರನ್ನೇ ಬೆರಗುಗೊಳಿಸಿತ್ತು. ಸಾವಿರ ವರ್ಷ ಬದುಕಿದ್ರು ಸಾಯೋದು ತಪ್ಪಲಿಲ್ಲ, ನೂರು ವರ್ಷ ಕೂಡಿದ್ರು ಬ್ಯಾರೆ ಆಗೋದು ತಪ್ಪಲಿಲ್ಲ ಎಂಬುದೊಂದು ನಮ್ಮೂರಲ್ಲಿ ಪ್ರಚಲಿತ ಗಾದೆ.
೧೯೭೨ ರಲ್ಲಿ ನಮ್ಮ ಮನೆತನದ ಬ್ಯಾರೆ ಆಗೋ ಪ್ರಕಿಯೆ ಶುರು ಆಯಿತು. ಕೂಡಿದ್ದಾಗ ಹಾಲು-ಜೇನಿನಂತೆ ಇರುವ ಕುಟುಂಬಗಳು ಬ್ಯಾರೆ ಆಗುವ ಸಂದರ್ಭದಲ್ಲಿ ದಾಯಾದಿ ಕಲಹದ ಸ್ವರೂಪ ತಾಳುವುದು ಕುಟುಂಬ ವ್ಯವಸ್ಥೆಯ ವಿಪರ್‍ಯಾಸ.
ಒಂದರ್ಥದಲ್ಲಿ ಇದು ಕೂಡಾ ಅತ್ತೆ-ಸೊಸೆ ಸಂಬಂಧ ಇದ್ದ ಹಾಗೆ ನೆವರ್ ಎಂಡಿಂಗ್ ಪ್ರಾಬ್ಲಂ ಅಂತಾರೆಲ್ಲ ಹಾಗೆ.
ಅಂತೂ ಇಂತೂ ಹತ್ತು ಹಲವು ಹೊಡೆದಾಟ ತಾಕಲಾಟಗಳ ನಡುವೆ ಬ್ಯಾರೆ ಆದದ್ದೇನೋ ಆಯಿತು.
ಆದರೆ ನಂತರದ ಸಮಸ್ಯೆಗಳು ಅದಕ್ಕಿಂತಲೂ ಭಯಾನಕ ಸರಿಯಾಗಿ ಪಾಲು ಕೊಡಲಿಲ್ಲ ಎಂಬ ಅಸಹನೆ ಅವ್ವನದಾದರೆ, ಸುರಕ್ಷಿತ ಬ್ಯಾರೆ ಆಗಲಿಲ್ಲ ಎಂಬ ಸಿಟ್ಟು ಅಮ್ಮನದು ಇದು ಮಾಟ ಮೂಡಿಸಿದ್ದಾರೆ ಎಂಬ ದಂತಕ್ಕೆ ತಲುಪಿತು. ಮನೆತನದ ಹಿರಿಯ ಅಮ್ಮ, ಅವ್ವನ ಮೇಲಿನ ಸಿಟ್ಟಿಗೆ ಮಾಟ ಮಾಡಿಸುತ್ತಾಳೆ ಎಂಬ ಭಾವನೆ ಅವ್ವಗೆ ಬಂದಿದ್ದೆ ಮುಂದಿನ ಅವಾಂತರಗಳಿಗೆ ಕಾರಣವಾಯಿತು.
ಅವಿಭಕ್ತ ಕುಟುಂಬದಲ್ಲಿದ್ದಾಗ ಇದ್ದ ದನದ ಮನೆ ನಮ್ಮ ಪಾಲಿಗೆ ಬಂತು. ಹಾಗೆ ಅದರ ಪಕ್ಕದಲ್ಲಿದ್ದ ಭಾವಿಯನ್ನು ಭಾಗ ಮಾಡಿದ್ದು ನಮ್ಮೂರ ಮಟ್ಟಿಗೆ ಇತಿಹಾಸವೇ.
ದುಂಡಗಿನ ನೀರಿನಿಂದ ಆವೃತವಾದ ಜಾಗೆಯನ್ನು ಬಿಟ್ಟು ಉಳಿದ ಭಾವಿಮನೆಯನ್ನು ವಿಭಜಿಸಲು ಗೋಡೆ ಕಟ್ಟಲಾಯಿತು. ಹೀಗೆ ನೀರು ಕೊಡುವ ಭಾವಿಯನ್ನು ಹಂಚಿಕೊಂಡಿದ್ದು, ಅದಕ್ಕಾಗಿ ನಡುರಸ್ತೆಯಲ್ಲಿ ನಿಂತು ಅಮ್ಮ ಅವ್ವ ಚೀರಾಡಿದ್ದು ಇನ್ನೂ ಹಚ್ಚ ಹಸಿರಾಗಿದೆ. ಮಾತಿಗೆ ಮಾತು ಬೆಳೆದು ಅಮ್ಮ ಸಿಟ್ಟಿನಲ್ಲಿ ನೀರು ಹಂಚಿಕೊಂಡ ನಿನ್ನ ಹೊಟ್ಟೇಲಿ ನೀರು ತುಂಬಲಿ ಅಂದಳಂತೆ.
ಮುಂದಿನ ದಿನಗಳಲ್ಲಿ ಆ ಮಾತು ಸತ್ಯ ಅನುವಂತೆ ಬಸುರಿಯಾಗಿದ್ದ ಅವ್ವನ ಹೊಟ್ಟೆಯಲ್ಲಿ ನೀರು ತುಂಬಿತ್ತಂತೆ ನೀರು ತುಂಬಿದ ಕಾರಣಕ್ಕೆ ಮಗು ಬದುಕಲಿಲ್ಲವಂತೆ.

ಈ ಎಲ್ಲ ಅಂತೆ-ಕಂತೆಗಳಿಗೆ ಕಾರಣ ಅಂತಿಮವಾದದ್ದು ಮಾಟ ಎಂಬ ಮಹಾಭೂತದಿಂದ.
ಅಮ್ಮ ಸಿಟ್ಟಿನಿಂದ ಅವ್ವಗೆ ಮಾಟ ಮಾಡಿಸಿದ್ದರಿಂದ ಹೊಟ್ಟೆಯಲಿ ನೀರು ತುಂಬಿ ಮಗು ಬದುಕಲಿಲ್ಲ ಅನಿಸಿ ಕುಟುಂಬದ ಮಧ್ಯೆದ ದ್ವೇಷ ಹೆಚ್ಚಾಯಿತು.
ಹಳೆ ದೊಡ್ಡ ಮನೆಗೆ ಹೋಗಬಾರದು ಎಂದು ಅವ್ವ ತಾಕೀತು ಮಾಡಿದಳು, ಹಳೆಯ ಮನೆಯ ಸೆಳೆತದಿಂದ ನಾನು ತಪ್ಪಿಸಿಕೊಳ್ಳಲಿಲ್ಲ. ಕದ್ದು ಮುಚ್ಚಿ ಹೋಗಿ ಅಮ್ಮ ಕೊಟ್ಟ ಹಾಲು ಕುಡಿದು ಬರುತ್ತಿದ್ದೆ .ವಿಷಯ ತಿಳಿದು ಅವ್ವ ಕೆಂಡ ಮಂಡಲವಾದಳು. ಹೆಂಗಾದರೂ ಹಾಳಾಗಿ ಹೋಗಲಿ ಎಂದು ಬೈದು ಯಾಲಕ್ಕಿ ತಿನಿಸಿ ಕಳಿಸುತ್ತಿದ್ದಳು. ಯಾಲಕ್ಕಿ ತಿಂದು ಹೋದರೆ ಮಾಟ ಮಾಡಿದ್ದು ಹೊಟ್ಟೆಗೆ ಹತ್ತುವುದಿಲ್ಲ ಎಂಬ ವಿಚಿತ್ರ ನಂಬಿಕೆ ಬೇರೆ !
ನಾನು ಮನೆ ಬಿಟ್ಟು ಹೊರಗೆ ಹೋಗುವ ಮುಂಚೆ ಯಾಲಕ್ಕಿ ತಿನ್ನುವುದು ಕಡ್ಡಾಯವಾಯಿತು. ಮಾಟ ಎಂದರೆ ಏನು ? ಅದು ಯಾವ ಸ್ವರೂಪದಲ್ಲಿರುತ್ತದೆ ಎಂಬುದನ್ನು ಅರಿಯದ ಮುಗ್ದ ವಯಸ್ಸಿನಲ್ಲಿ ಇಂತಹ ಪದಗಳು ಅನಿವಾರ್ಯವಾಗಿ ಕಿವಿಗೆ ಅಪ್ಪಳಿಸುತ್ತಿದ್ದವು.

ಆಗ ಬಹಳಷ್ಟು ಯಾಲಕ್ಕಿ ತಿಂದದ್ದಕ್ಕೋ ಏನೋ ನನಗೆ ಇಲ್ಲಿಯವರೆಗೆ ಯಾವ ಮಾಟಗಳು ನನ್ನ ತಂಟೆಗೆ ಬಂದಿಲ್ಲ ಎನಿಸುತ್ತದೆ. ಅಮ್ಮ ಮಾಡಿಸಿರಬಹುದಾದ ಮಾಟ ತೆಗೆಸಲು ತಜ್ಞರು ಬೇರೆ ಊರಿಂದ ಬಂದದ್ದು ಭಾವಿ ಮನೆಯ ನೆಲದಲ್ಲಿ ಹೂತಿಟ್ಟ ಗೊಂಬೆ ತೆಗೆದದ್ದು ಅಸ್ಪಷ್ಟವಾಗಿ ನೆನಪಿದೆ. ಹೀಗೆ ಅಮ್ಮ ಅವ್ವ ಹತ್ತಾರು ವರ್ಷ ಬಡಿದಾಡಿ ಸುಸ್ತಾದರು. ಬರು ಬರುತ್ತಾ ಸಂಬಂಧಗಳು ಸುಧಾರಿಸಿದವು. ಭಾವಿ ಮಧ್ಯೆ ಕಟ್ಟಿದ ಗೋಡೆ ಶಿಥಿಲವಾಗಿ ಸಂಬಂಧಗಳು ಗಟ್ಟಿಯಾಗುತ್ತ ಹೋದದ್ದು ವಿಪರ್ಯಾಸವಲ್ಲವೇ ?

ಬ್ಯಾರೆ ಆಗೋದು ಧರ್ಮ ಯುದ್ಧವಲ್ಲ

ನನಗೆ ಅವಿಭಕ್ತ ಕುಟುಂಬ ವ್ಯವಸ್ಥೆಯ ಸೌಹಾರ್ದದಲ್ಲಿ ಖುಷಿ ಇತ್ತು ಹೀಗಿರುವಾಗ ನಾವು ಬ್ಯಾರೆ ಆಗ್ತೇವೆ. ನಾನು ಅಪ್ಪಾ, ಅಮ್ಮ ಅವರೊಂದಿಗೆ ಇನ್ನೊಂದು ಮನೆಗೆ ಹೋಗ್ತೆವೆ ಎಂದಾಗ ದುಃಖವಾಯಿತು. ಕೂಡಿದ್ದ ಮನೆಯ ಸಂಭ್ರಮ ಕಳೆದುಕೊಳ್ಳುತ್ತೇನೆ ಎನಿಸಿತು. ಅತ್ತೆ, ಕಕ್ಕ, ದೊಡ್ಡಪ್ಪ, ದೊಡ್ಡಮ್ಮ, ತಾತ, ಹಿರಿಯ ಅಮ್ಮ ಹೀಗೆ ಎಲ್ಲರೂ ಒಟ್ಟಿಗೆ ಇರುವುದಿಲ್ಲ ಎಂಬುದು ಅವರಿವರು ಆಡುವ ಮಾತುಗಳಿಂದ ಗ್ರಹಿಸಿಕೊಂಡೆ.
ಒಂದು ಮಾತುಕತೆಯ ದಿನ ಫಿಕ್ಸ್ ಆದ ಮೇಲೆ ನಮ್ಮ ಪರವಾಗಿ ವಾದಿಸಲು ಕುಷ್ಟಗಿ ಅಜ್ಜ ,ಕೊಪ್ಪಳದ ಪ್ರಸಿದ್ಧ ವ್ಯಾಪಾರಿ ಅಜ್ಜ ಗಡಾದ ಸಂಗಣ್ಣ ಶೆಟ್ಟರ ಇದ್ದ ನೆನಪು. ಅಮರಣ್ಣ ತಾತನ ಪರವಾಗಿ ಜವಳಿ ಪಂಪಣ್ಣ ತಾತ ಇತರರು ಇದ್ದ ಚಿತ್ರ ಈಗಲೂ ಕಣ್ಣ ಮುಂದೆ ಕಟ್ಟಿ ನಿಲ್ಲುತ್ತದೆ.
ಮುಂಜಾನೆಯಿಂದ ಚರ್ಚೆ ಪ್ರಾರಂಭವಾಯಿತು. ಮನೆ ತುಂಬ ಗದ್ದಲೋ ಗದ್ದಲು. ನಮ್ಮ ಅಂಗಡಿಯಲಿ ಕೆಲಸ ಮಾಡುತ್ತಿದ್ದ ಆಳು ಲೆಕ್ಕ ಬರೆಯುವ ಯಜಮಾನರು ತುಂಬಿ ಹೋಗಿದ್ದರು.
ಈ ರೀತಿ ಬ್ಯಾರೆ ಆಗುವ ಸಮಯದಲ್ಲಿ ಇಡೀ ಆಸ್ತಿಯನ್ನು ಸಮನಾಗಿ ವಿಭಜಿಸುವುದು ವಾಡಿಕೆ.
ಆದರೆ ಅಂದು ವಿಭಿನ್ನ ರೀತಿಯ ಪ್ರಸ್ತಾಪವಾದದ್ದನ್ನು ಊರಲ್ಲಿ ಎಲ್ಲರೂ ಆಡಿಕೊಳ್ಳುತ್ತಿದ್ದರು.
ಅದೇನೆಂದರೆ ಆಸ್ತಿಯನ್ನು ಮೂರು ಭಾಗವಾಗಿ ವಿಂಗಡಿಸುವುದು, ಎರಡು ಪಾಲನ್ನು ಅಮರಣ್ಣ ತಾತನ ಪರವಾಗಿ ತೆಗೆದುಕೊಂಡರೆ ಉಳಿದ ಒಂದು ಪಾಲನ್ನು ಮಾತ್ರ ಅಪ್ಪ ತೆಗೆದುಕೊಳ್ಳಬೇಕು ಎಂಬ ಅಮ್ಮನ ವಾದವನ್ನು ಹಿರಿಯರು ಒಪ್ಪಲಿಲ್ಲ.

ಅನಾಥರಾಗಿದ್ದ ಅಪ್ಪನನ್ನು ಸಾಕಿ ಬೆಳೆಸಿದ್ದರಿಂದ ಸಮಪಾಲು ಕೊಡುವುದು ತಾರ್ಕಿಕವಾಗಿ ಸರಿಯಲ್ಲ ಎಂಬುದು ಅಮರಣ್ಣ ತಾತನ ಪರವಾಗಿ ಇರುವ ಹಿರಿಯರ ವಾದವಾಗಿತ್ತು.
ಇದೇ ವಿಷಯವನ್ನು ಮುಂಜಾನೆಯಿಂದ, ಮಧ್ಯಾಹ್ನದ ವರೆಗೆ ಚರ್ಚಿಸಿ ಅನಿವಾರ್ಯವಾಗಿ ನಮ್ಮ ಪರವಾಗಿರುವ ಹಿರಿಯರು ಒಪ್ಪಬೇಕಾಯಿತು. ಆದರೆ ನ್ಯಾಯಸಮ್ಮತವಲ್ಲ ಎಂದು ಎಲ್ಲರೂ ವಾದಿಸಿದರು. ಅಮ್ಮ ಕೇಳಲೇ ಇಲ್ಲ. ಸರಿ ಹಾಗಾದರೆ ನಿಜವಾಗಿ ಇದ್ದ ಆಸ್ತಿಯನ್ನು ಸಭೆಗೆ ತಿಳಿಸುವ ವಿಷಯದಲ್ಲಿಯೂ ಗೊಂದಲ ಶುರು ಆಯಿತು.

ಯಾಪಲಪರವಿ ಅವರ ಮನೆಯಲಿ ತೊಲೆಗಟ್ಟಲೆಯಲ್ಲ ಮಣಗಟ್ಟಲೆ ಬಂಗಾರವಿದೆ ಎಂದು ಜನ ಮಾತನಾಡುತ್ತಿದ್ದರು. ಆದರೆ ಅಂದು ಸಭೆಯಲ್ಲಿ ಹಾಜರಾದದ್ದು, ಕೆಲವೇ ತೊಲೆಗಳಲ್ಲಿ ಎಂಬುದು ಎಲ್ಲರಿಗೂ ಬೆರಗು ಮೂಡಿಸಿತು. ಈ ಅಂಕಿ ಅಂಶಗಳನ್ನು ನಮ್ಮ ಕಡೆಯ ಹಿರಿಯರು ಒಪ್ಪಲಿಲ್ಲ.
ಹಿಂದಿನ ಒಂದೆರಡು ದಿನ ಮೊದಲು ಮನೆಯಲ್ಲಿದ್ದ ಬಂಗಾರವನ್ನು ಗೋಣಿ ಚೀಲದಲ್ಲಿ ಆಪ್ತರ ಮನೆಗೆ ಸಾಗಿಸಲಾಗಿತ್ತು. ಎಂಬ ವದಂತಿಯೂ ಇತ್ತು. ಗೋಣಿ ಚೀಲಗಳಲ್ಲಿ ಬಂಗಾರದ ಆಭರಣಗಳನ್ನು ತುಂಬಿ ಇಟ್ಟದ್ದಂತು ನಿಜ. ಆದರೆ ಬ್ಯಾರೆ ಆಗುವ ಸಂದರ್ಭಗಳಲ್ಲಿ ಆ ಚೀಲಗಳು ಅಲ್ಲಿಂದ ಮಾಯವಾದದ್ದು ಅಷ್ಟೇ ನಿಜ!
ಆದರೆ ಈಗಲೂ ಆರ್ಥಿಕ ವಿಷಯ ಬಂದಾಗ ನಾವು ಪುರಾಣಗಳ ನೀತಿ ಕತೆಗಳಲಿ ಹೇಳುವಂತೆ, ಕದ್ದು ಮೋಸ ಮಾಡಬಾರದು. ಅಣ್ಣ ತಮ್ಮಂದಿರುಗಳಿಗೆ ಆಸ್ತಿಯಲಿ ಪಾಲು ಕೊಡದಿದ್ದರೆ ಉಳಿಯುವುದಿಲ್ಲ ಹಾಗೆ ಹೀಗೆ ಅಂತ ಆದರೆ ಬೇರೆ ಆಗುವ ಸಂದರ್ಭಗಳಲಿ, ಆಸ್ತಿ ಹಂಚಿಕೊಳ್ಳುವಾಗ ಸ್ನೇಹಿತರಿಗೆ, ಸೋದರರಿಗೆ ಮೋಸ ಮಾಡುವುದು ಮಾನವನ ಹುಟ್ಟುಗುಣ.
ಕಾಲಚಕ್ರದಲಿ ಈ ಸಂಗತಿ ಪುನರಾರ್ವನೆಯಾಗುತ್ತಲೇ ಇರುತ್ತದೆ. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬ ಹಾಡು ನೆನಪಿಸಿಕೊಂಡು ಅಂದಿನ ಸಭೆಯನ್ನು ಮುಗಿಸಲಾಯಿತು. ಅವ್ವ ತನಗಾದ ಅನ್ಯಾಯದ ವಿರುದ್ಧ ಕೂಗಾಡಿದರೂ ಯಾರೂ ಕೇಳಲಿಲ್ಲ.
ಆಸ್ತಿಗೆ ಮುಖ್ಯ ಪಾಲುದಾರರಾದ ಅಮರಮ್ಮ ಅಮ್ಮ, ಅಪ್ಪ ಇದೊಂದು ನೈತಿಕ ವಿಷಯ ಎಂದು ಪರಿಗಣಿಸಿದ್ದರಿಂದ ವಿಷಯ ಹೆಚ್ಚು ಚರ್ಚೆಯಾಗಲಿಲ್ಲ.
ನಾನು ಕುಷ್ಟಗಿ ಗುರುಸಿದ್ಧಪ್ಪ ಅಜ್ಜನ ತೊಡೆಯ ಮೇಲೆ ಕುಳಿತುಕೊಂಡೆ ಬೇರೆ ಆಗುವ ಪ್ರಹಸನವನ್ನು ಗಂಭೀರವಾಗಿ ಆಲಿಸಿದ್ದು, ಇಂದಿಗೂ ನೆನಪಿದೆ ಎಂದರೆ ನೀವು ನಂಬುವುದಿಲ್ಲ ಅಲ್ಲವೇ ? ನನಗಂತೂ ಖಂಡಿತಾ ನೆನಪಿದೆ.
ಅಂದು ಆದ ಒಪ್ಪಂದದಂತೆ ನಾವು ದನದ ಮನೆಯಲ್ಲಿ ವಾಸಿಸತೊಡಗಿದೆವು ಭವ್ಯವಾದ ದೊಡ್ಡ ಮನೆ ಬಿಟ್ಟು ದನದ ಮನೆಯಲ್ಲಿ ವಾಸಿಸುವ ಸ್ಥಿತಿಗೆ ಅವ್ವ ವಿಚಲಿತಳಾದಳು. ದನದ ಮನೆಯಲ್ಲಿದ್ದ ದನ-ಕರುಗಳು ಭಾವಿಮನೆಗೆ ಶಿಫ್ಟ್ ಆದವು. ದನದ ಗ್ವಾದಲಿಯಲ್ಲಿಯೇ ಮಲಗುವುದು ನನಗೆ ಮಜ ಅನಿಸುತ್ತಿತ್ತು. ಬಾಲ್ಯದ ಮುಗ್ಧತೆಗೆ ಎಲ್ಲವೂ ಮಜವೇ ಆದ್ದರಿಂದ ನನಗೆ ಅಷ್ಟೇನು ನಿರಾಶೆ ಆಗಲಿಲ್ಲ.

ಬೆನ್ನು ಹತ್ತಿದ ಬೆಂಗಳೂರು ನಂಟು

ಬಾಲ್ಯದಲ್ಲಿ ಹದಿನಾರು ವರ್ಷದವರೆಗೆ ಕಾರಟಗಿ, ಕುಷ್ಟಗಿ, ಕೊಪ್ಪಳ, ಗದಗ, ತೆಕ್ಕಲಕೋಟೆ, ರಾಯಚೂರ, ಬಳ್ಳಾರಿಯಂತಹ ಮಿನಿನಗರಗಳನ್ನು ನೋಡಿದ್ದೆ. ಅಂದದೂರು ಬೆಂಗಳೂರಿನ ಕತೆಯನ್ನು ಕೇಳಿ ತಿಳಿದಿದ್ದೆ, ಹತ್ತಿರದ ಸಂಬಂಧಿ ಗಿರಿಜಮ್ಮ ದೊಡ್ಡಮ್ಮಳ ಗಂಡ ಸೋಮಾಲಾಪೂರ ಗವಿಸಿದ್ದಪ್ಪ ದೊಡ್ಡಪ್ಪ ನಮ್ಮೂರಿನ ಪ್ರತಿಷ್ಠಿತ ವ್ಯಾಪಾರಿ ಆಗಿದ್ದು, ಶಿಕ್ಷಣ ಸಂಸ್ಥೆಗಳಲ್ಲೂ ಆಸಕ್ತಿ ಹೊಂದಿದ್ದರು. ತಮ್ಮ ರೈಸ್ ಮಿಲ್ಲಿನ ಕೆಲಸಕ್ಕೆ ಬೆಂಗಳೂರಿಗೆ ಹೋಗುತ್ತಿದ್ದರು. ತುಂಬಾ ಚೂಟಿ ಹಾಗೂ ಮಾತುಗಾರನಾಗಿದ್ದ ನನ್ನೊಂದಿಗೆ ವಾದ ವಿವಾದಕ್ಕೆ ಇಳಿಯುತ್ತಿದ್ದರು.
ಆ ಮಮಕಾರಕ್ಕಾಗಿ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದಾಗ ಆದ ಸಂಭ್ರಮ ಅಷ್ಟಿಷ್ಟಲ್ಲ. ೧೯೭೭ ರ ಮಾರ್ಚ ರಜೆಯಲ್ಲಿ ನನಗೆ ಅಂತಹ ಅವಕಾಶ ಸಿಕ್ಕಿತು. ಹನ್ನೆರಡು ವರುಷದ ಹರೆಯದ ಮನಸ್ಸಿಗೆ ಬೆಂಗಳೂರಿನ ಬಗ್ಗೆ ಅಪಾರ ಕುತೂಹಲವಿತ್ತು. ದೊಡ್ಡಪ್ಪ ಇಟ್ಟಿದ್ದ ಅಂಬಾಸಡರ್ ಕಾರಿನಲ್ಲಿ ಪ್ರಯಾಣ. ದೊಡ್ಡಮ್ಮ ಜೊತೆಯಾಗಿದ್ದರು. ಬೆಂಗಳೂರು ತಲುಪಲು ಒಂದು ದಿನ ಬೇಕಾಗುತ್ತಿದ್ದ ಕಾಲವದು.
ಮಾರ್ಗ ಮಧ್ಯೆ ಎಡೆಯೂರಿನಲ್ಲಿ ವಸತಿ ಮಾಡಿ ಮರುದಿನ ಬೆಂಗಳೂರು ಪ್ರವೇಶವಾದಾಗ ಎಲ್ಲಿಲ್ಲದ ಸಂಭ್ರಮ
ಕಿಡಕಿಯಾಚೆಯಲಿ ಕಣ್ಣಿಗೆ ಬಿದ್ದ ಬೆಂಗಳೂರು ಹೊಸ ಜಗತ್ತನ್ನು ಪರಿಚಯಿಸಿತು. ರಾಮಕೃಷ್ಣ ಲಾಜಿನಲ್ಲಿ ವಸತಿ. ಮೇನಕಾ ಚಿತ್ರಮಂದಿರದಲ್ಲಿ ಸಿನೆಮಾ ನೋಡಿದ ನೆನಪು. ವಿಧಾನ ಸೌಧ, ಲಾಲಬಾಗ, ವಿಶ್ವೇಶ್ವರಯ್ಯ ಮ್ಯೂಸಿಯಂ ತೋರಿಸಿದ ದೊಡ್ಡಪ್ಪ ಬೆಂಗಳೂರಿನ ಹಿರಿಮೆಯನ್ನು ವಿವರಿಸಿದರು.
ದೊಡ್ಡಪ್ಪ ಚೈನ್ ಸ್ಮೋಕರ್, ಅವರಿಗೆ ಸಿಗರೇಟ್ ಪ್ಯಾಕೇಟ್ ತರಲು ಮೆಜೆಸ್ಟಿಕ್ ಸರ್ಕಲ್ ಗೆ ಕಳಿಸುತ್ತಿದ್ದರು. ಸಣ್ಣ ಹುಡುಗ ತಪ್ಪಿಸಿಕೊಂಡರೆ ಹೇಗೆ ಎಂಬ ಆತಂಕ ದೊಡ್ಡಮ್ಮಗೆ ,ನಾನು ತಪ್ಪಿಸಿಕೊಳ್ಳುವುದಿಲ್ಲ ಎಂದು ವಾದಿಸಿದೆ.
ಸವಾಲು ಸ್ವೀಕರಿಸಿ ಮೆಜೆಸ್ಟಿಕ್ ಸರ್ಕಲಗೆ ಹೋಗಿ, ಸುರಕ್ಷಿತವಾಗಿ ವಾಪಸು ಬಂದೆ. ರಾಮಕೃಷ್ಣ ಲಾಡ್ಜ್ ಹೇಗೆ ಗುರುತಿಸಿದೆ ಎಂದು ದೊಡ್ಡಪ್ಪ ಕೇಳಿದರು. ಲಾಡ್ಜ್ ಮುಂದಿದ್ದ ಲೈಟಿನ ಕಂಬಗಳನ್ನು ಎಣಿಸುತ್ತಾ ಹೋದೆ. ವಾಪಸು ಬರುವಾಗ ಅದೇ ಕಂಬಗಳನ್ನು ಆಧರಿಸಿ ಲಾಡ್ಜ್ ಪತ್ತೆ ಹಚ್ಚಿದ್ದನ್ನು ಹೇಳಿದೆ. ದೊಡ್ಡಪ್ಪ ನನ್ನ ಜಾಣತನಕ್ಕೆ ಮೆಚ್ಚಿ ಐದು ರೂಪಾಯಿ ಬಹುಮಾನ ಕೊಟ್ಟ ನೆನಪು. ಸಣ್ಣ ಹುಡುಗ ಎಂಬುದನ್ನು ಲೆಕ್ಕಿಸದೇ ಕೇಳಿದೆ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುತ್ತಿದ್ದ ದೊಡಪ್ಪನ ಜಾದಾರ್ಯಕ್ಕೆ ಇಂದಿಗೂ ಕೃತಜ್ಞನಾಗಿದ್ದೇನೆ.
ಸ್ವಭಾವತಃ ಸಿಟ್ಟಿನ ವ್ಯಕ್ತಿ ಅನಿಸಿಕೊಂಡಿದ್ದರೂ ದೊಡ್ಡಪ್ಪನನ್ನು ನಾನು ಧೈರ್ಯದಿಂದ ಮಾತನಾಡಿಸುತ್ತಿದ್ದೆ. ಮನೆಯ ಹಜಾರದ ಸೋಫಾದ ಮೇಲೆ ಸಿಗರೇಟು ಸೇದುತ್ತಾ ಕುಳಿತಿದ್ದ ದೊಡ್ಡಪ್ಪನ ಚಿತ್ರ ಇನ್ನೂ ಕಣ್ಣು ಮುಂದೆ ಬರುತ್ತದೆ. ಹಟಮಾರಿ ದೊಡ್ಡಪ್ಪ ನನ್ನ ವ್ಯಕ್ತಿತ್ವದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರಿದರು. ನಮ್ಮ ಹಾಗೂ ಅವರ ಮನೆತನದ ಸಂಬಂಧಗಳ ಬಿರುಕು, ಅವರ ಅನಿರಿಕ್ಷಿತ ಸಾವು ನನ್ನನ್ನು ಬಲವಾಗಿ ಕಾಡಿದವು.
ಆದರೆ ಬೆಳೆದು ನಿಂತ ಈ ಸಂದರ್ಭದಲ್ಲಿ ಬೆಂಗಳೂರಿಗೆ ಹತ್ತಾರು ಬಾರಿ ಹೋದಾಗಲೆಲ್ಲ ಗವಿಸಿದ್ದಪ್ಪ ದೊಡ್ಡಪ್ಪ, ಗಿರಿಜಮ್ಮ ದೊಡ್ಡಮ್ಮ ನೆನಪಾಗಿ ಕಾಡುತ್ತಾರೆ.
ಈಗ ಎಲ್ಲ ಸಂಬಂಧಗಳು ಸರಿ ಹೋಗಿವೆ. ಅನರ್ಥ ಇತಿಹಾಸ, ವರ್ತಮಾನದ ಅರ್ಥವನ್ನು ಹೆಚ್ಚಿಸುತ್ತದೆ. ಅಮರಮ್ಮ ಅಮ್ಮ ಹೇಳುತ್ತಿದ್ದ ಮಾತು ಈಗಲೂ ನೆನಪಾಗುತ್ತದೆ. ಸಿದ್ದಪ್ಪ ನಿನ್ನ ಕಾಲಲ್ಲಿ ನಾಯಿಗೆರೆಗಳು ಇವೆ ಎಂಬ ಮಾತಿನಂತೆ ಬೆಂಗಳೂರಿಗೆ ನಿರಂತರ ತಿರುಗುತ್ತಲೇ ಇದ್ದೇನೆ. ಬೆಂಗಳೂರು ಈಗ ನನ್ನ ಪಾಲಿನ ತಂಗಳೂರು ಆಗಿದೆ. ಗುಲಾಬಿ ನಗರ ಕೇವಲ ಲಾಬಿ ನಗರವಾಗಿದೆ. ಕಾಮಾ ಪೂರ್ತೆ ಮಾಮಾಗಳಿಂದ ತುಂಬಿರುವ ಬೆಂಗಳೂರಿನ ದೈಹಿಕ, ಮಾನಸಿಕ ಸೌಂದರ್ಯ ಹಾಳಾಗಿದೆ.
ನೌಕರಿ ಅನುಮೋದನೆಗೆ, ಆಫೀಸು ಕೆಲಸ, ಮೌಲ್ಯ ಮಾಪನಕ್ಕಾಗಿ ತಿಂಗಳುಗಟ್ಟಲೆ ಬೆಂಗಳೂರಿನಲ್ಲಿ ಇರುವುದು ಬಂದಾಗ ಬೇಡವೆನಿಸುವ ಬೆಂಗಳೂರು ಪಯಣ ಅನಿವಾರ್ಯವಾಗಿದೆ.
ಬೆಂಗಳೂರು ಬಿಟ್ಟರೆ ಲೈಫೇ ಇಲ್ಲ ಎನ್ನುವ ವಾತಾವರಣದಲ್ಲಿ ಬೆಂಗಳೂರಿಗೆ ಕೊಂಡೊಯ್ಯುವ ರೈಲು, ಬಸ್ಸು, ವಿಮಾನಗಳು ನಿತ್ಯ ಕೈ ಮಾಡಿ ಕರೆಯುತ್ತವೆ.
ನಿಧಾನ ಕೆಲಸಗಳಿಗೆ ಹೆಸರಾದ ವಿಧಾನ ಸೌಧ, ಅಕ್ಷರಗಳನ್ನು ಪುಸ್ತಕಕ್ಕೆ ಇಳಿಸುವ ಪ್ರಿಂಟಿಂಗ್ ಪ್ರೆಸ್ಸುಗಳು, ಹಿರಿಯ ಅಧಿಕಾರಿಗಳು, ಸಾಹಿತ್ಯ, ಪತ್ರಿಕೋದ್ಯಮದ ಗೆಳೆಯರು ಕರೆದಾಗಲೆಲ್ಲ ಬೆಂಗಳೂರಿಗೆ ಹಾರುತ್ತಲೇ ಇರುತ್ತೇನೆ.

ಅಚ್ಚರಿ ಮೂಡಿಸಿದ ಮಾನವ ಸಂಬಂಧಗಳು

ಊರಲ್ಲಿ ಒಬ್ಬ ಹಿರಿಯರಿದ್ದರು. ಅವರು ಲಿಂಗಾಯತರ ಮೇಲ್ವರ್ಗಕ್ಕೆ ಸೇರಿದವರು. ನಮ್ಮೂರಿನಲ್ಲಿ ವಿವಾಹೇತರ ಸಂಬಂಧಗಳನ್ನು ಗಂಭೀರವಾಗಿ ಪರಿಗಣಿಸುವ ವಾತಾವರಣವಿರಲಿಲ್ಲ.
ಆದರೆ ಆ ಹಿರಿಯರು ಮಾತ್ರ ತುಂಬಾ ತಮಾಷೆಯಾಗಿ ಕಾಣಿಸುತ್ತಿದ್ದರು. ಗಂಡಸರ ಲೈಂಗಿಕ ಸಂಬಂಧಗಳನ್ನು ಹೆಂಡತಿಯರು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಮಾತು ಚರ್ಚೆಗಳಲ್ಲಿ ಸಂಬಂಧಗಳನ್ನು ಸ್ಪೋಟಿವ್ ಆಗಿ ವಿವರಿಸುತ್ತಿದ್ದರು.
ಆಗ ಆ ಹಿರಿಯರ ಅನೇಕ ಮಹಿಳೆಯರೊಂದಿಗಿನ ಸಂಬಂಧಗಳನ್ನು ಅವರ ಪರಿವಾರದವರು ಅಷ್ಟೇ ರಸವತ್ತಾಗಿ ಹೇಳಿಕೊಳ್ಳುತ್ತಿದ್ದರು.
ಈಗಲೂ ಅಚ್ಚರಿ ಈ ರೀತಿಯ ಸಂಬಂಧಗಳು ಲೈಂಗಿಕ ವಾಂಛೆಯನ್ನು ಮಿರಿ ನಿಲ್ಲುತ್ತದೆ ಅನಿಸುತ್ತದೆ. ನಮ್ಮೂರಲ್ಲಿ ಆಗಿದ್ದು ಹಾಗೇಯೇ. ಆ ಅಯ್ಯನವರು ಪಾಪ! ಇಡೀ ರಾತ್ರಿ ನಿದ್ದೆಗಿಟ್ಟು ಎಲ್ಲ ಮನೆಗಳಿಗೂ ಹಾಜರಿ ಹಾಕುತ್ತಿದ್ದುದನ್ನು ಜನ ತಮಾಷೆಯಾಗಿ ಆಡಿಕೊಳ್ಳುತ್ತಿದ್ದರು. ಅವರೆದುರು ತಮಾಷೆ ಮಾಡಿದರೂ ಗಂಭೀರವಾಗಿ ತೆಗೆದುಕೊಳ್ಳದೇ ಇದೆಲ್ಲ ಇರದ ಬಿಡ್ರಲೇ ತಮ್ಮಾ ಅನ್ನುತ್ತಿದ್ದರು.
ಅವರ ಸಾನಿಯರ ಮಕ್ಕಳು ಕೂಡಾ ಅಷ್ಟೇ ಅಭಿಮಾನದಿಂದ ಅವರ ಹೆಸರನ್ನು ಹೇಳಿಕೊಂಡೇ ಓಡಾಡುತ್ತಿದ್ದರು.
ಅಪ್ಪಣ್ಣ ಅರಳಿ, ಸಿದ್ಧಲಿಂಗಣ್ಣ ನಾವೆಲ್ಲ ಈ ವಿಷಯವನ್ನು ಚರ್ಚಿಸುವಾಗಲೆಲ್ಲ ಅವರ ಸಾಮರ್ಥ್ಯವನ್ನು ತಮಾಷೆಯಿಂದ ಹೊಗಳುತ್ತಿದ್ದೆವು.
ಊರಲ್ಲಿ ಇವರದೊಂದು ಬೃಹತ್ ವಿಗ್ರಹ ನಿಲ್ಲಿಸಬೇಕು. ಮದುವೆಯಾಗದ ಹುಡುಗರು ಅವರ ವಿಗ್ರಹಕ್ಕೆ ಐದು ಅನುವಾಸ್ಯೆ ನಡೆದುಕೊಂಡರೆ ಮದುವೆಯಾಗುತ್ತೆ, ಮಕ್ಕಳಾಗದ ಮಹಿಳೆಯರು ವಿಗ್ರಹ ಪೂಜಿಸಿದರೆ ಮಕ್ಕಳಾಗುವ ಸಾಧ್ಯತೆ ಇದೆ ಎಂದು ಮಾತಾಡಿಕೊಂಡು ಎಂಜಾಯ್ ಮಾಡುತ್ತಿದ್ದೆವು.
ನಮ್ಮ ಕೋಮಿನ ಅನೇಕ ವ್ಯಾಪಾರಸ್ಥ ಹಿರಿಯರನೇಕರ ಸಂಬಂಧಗಳನ್ನು ಹೀಗೆ ಆಡಿಕೊಳ್ಳುತ್ತಿದ್ದರೂ ಬೇರೆ ಹಳ್ಳಿಗಳಲ್ಲಿ ಆಗುವಂತೆ ಲೈಂಗಿಕ ಸಂಬಂಧ ಎಂದು ಭಯಾನಕವಾಗಿ ಬಣ್ಣಿಸಿ ಹೊಡೆದಾಟ-ಬಡಿದಾಟಗಳಾಗುತ್ತಿರಲಿಲ್ಲ ಎನ್ನುವದು ಅಭಿಮಾನದ ಸಂಗತಿ.
ರಾಜ್ಯದ ಕೆಲವು ಹಳ್ಳಿಗಳಲ್ಲಿ ಈ ರೀತಿಯ ಸಂಬಂಧಗಳು ಹಿಂಸೆಯಲ್ಲಿ ಕೊನೆಗೊಳ್ಳುವುದನ್ನು ಕಾಣುತ್ತೇವೆ. ನಮ್ಮೂರಿನ ಸೌಹಾರ್ದ ವಾತಾವರಣ ಈಗಲೂ ಹೆಮ್ಮೆಯನ್ನುಂಟು ಮಾಡುತ್ತದೆ.
ಜಾತಿ, ಧರ್ಮ, ಲಿಂಗ ತರತಮಗಳು, ಅಜ್ಞಾನದಿಂದ ಉಂಟಾಗುತ್ತವೆ ಎಂದು ಊಹಿಸುತ್ತೇವೆ. ಆದರೆ ಅಕ್ಷರ ಜ್ಞಾನವಿಲ್ಲದಿದ್ದರೂ ಕೇವಲ ಜೀವನಾನುಭವಗಳನ್ನು ಆಧರಿಸಿ ಜನ ಸಂತೋಷದಿಂದ ಸೌಹಾರ್ದದಿಂದ ಬದುಕಬಹುದು ಎಂಬುದನ್ನು ನಮ್ಮ ಹಿರಿಯರು ಸಾಬೀತು ಮಾಡಿದ್ದಾರೆ.
ಹಿರಿಯರ ಎಲ್ಲ ಪತ್ನಿಯರು, ಉಪಪತ್ನಿಯರು ಸಾರ್ವಜನಿಕ ಸಮಾರಂಭಗಳಲ್ಲಿ ಒಟ್ಟಾಗಿ ಭಾಗವಹಿಸಿ ಕಷ್ಟ ಸುಖ ಹಂಚಿಕೊಂಡು ತಮ್ಮ ಯಜಮಾನರ ವ್ಯಕ್ತಿತ್ವದ ವಿವಿಧ ಮಗ್ಗುಲುಗಳನ್ನು ಚರ್ಚಿಸಿ ಹಾರ್ದಿಕವಾಗಿ ಮಾತನಾಡುತ್ತಿದ್ದರು. ಈ ರೀತಿ ಮೈ-ಮನಗಳ ಹಂಚಿಕೊಳ್ಳುವಿಕೆಯಲ್ಲಿಯೂ ಇದ್ದ ವಿಶಾಲತೆ, ತಿಳುವಳಿಕೆ ಅನನ್ಯವಲ್ಲದೆ ಇನ್ನೇನು ? ಈಗಿನ ಧಾರವಾಹಿಗಳಲ್ಲಿ ಚಿತ್ರಿಸುವ ಸಂಬಂಧಗಳು, ಅವುಗಳ ನೆಪದಲ್ಲಿ ಪರಸ್ಪರ ಕಚ್ಚಾಡುವ ಪಾತ್ರಗಳನ್ನು ನೋಡಿದರೆ ವ್ಯಥೆ ಎನಿಸುತ್ತದೆ.
ವಿವಾಹೇತರ ಸಂಬಂಧಗಳನ್ನು, ಬೇರೆಯವರ ಲೈಂಗಿಕ ಸಂಬಂಧಗಳನ್ನು ಕೀಳಾಗಿ ವೈಭವಿಕರಿಸುವ ಗುಣಧರ್ಮ ನಮ್ಮ ಹಳ್ಳಿಗಳಲ್ಲಿ ಇರಲಿಲ್ಲ.
ಪರಸ್ಪರ ಗೌರವ ಇದ್ದಾಗ ಈ ರೀತಿಯ ಗೊಂದಲ ಉಂಟಾಗುವುದಿಲ್ಲ. ಪ್ರತಿಯೊಬ್ಬರಲ್ಲಿರುವ ದೌರ್ಬಲ್ಯ ಮತ್ತು ಬಲವನ್ನು ಅರಿತುಕೊಂಡಾಗ ಸಮಸ್ಯೆಗಳು ಉದ್ಭವವಾಗುವುದಿಲ್ಲ.
ಮತ್ತೊಬ್ಬರ ಬದುಕಿನಲ್ಲಿನ ಘಟನೆಗಳನ್ನು ತಪ್ಪು ಎಂದು ನಿರ್ಣಯಿಸುವುದು ಅಸಮಂಜಸ ಎಂದರಿತುಕೊಂಡಾಗ ಈ ರೀತಿಯ ಗೊಂದಲ ಉಂಟಾಗುವುದಿಲ್ಲ.
ಈಗ ಬೇರೆಯವರ ಸಂಬಂಧಗಳನ್ನು ಬಹು ದೊಡ್ಡ ವಿಷಯ ಎಂಬಂತೆ ಚರ್ಚಿಸುವ ಪರಿಪಾಠ ಪ್ರಜ್ಞಾವಂತರಲ್ಲಿಯೇ ಹೆಚ್ಚಾಗಿರುವುದು ವಿಷಾದನೀಯ ಬೆಳವಣಿಗೆ.
ಪ್ರಜ್ಞಾವಂತರೆನಿಸಿಕೊಳ್ಳುವ ನಾವು ಅಶಿಕ್ಷಿತರಿಂದ ಕಲಿಯುವುದು ಬಹಳಷ್ಟಿದೆ ಎಂಬುದನ್ನು ನನ್ನ ಬಾಲ್ಯದ ಅನುಭವಗಳು ನಿರೂಪಿಸುತ್ತವೆ.

Wednesday, February 2, 2011

ನೆನಪಿನ ಮೇಲೆ ನರ್ತಿಸುವ ಬಯಲಾಟ ನಾಟಕಗಳು


ವೆಂಕಟರಮಣ ಗುಡಿಯ ಪಕ್ಕದ ಕಟ್ಟೆ ನಮ್ಮೂರಿನ ಬಯಲು ರಂಗಮಂದಿರವಾಗಿತ್ತು. ಬಯಲಾಟ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗಿದ್ದ ಕಟ್ಟೆಯ ಮೇಲೆ ವರ್ಷದಲ್ಲಿ ನಾಲ್ಕಾರು ಬಾರಿ ಬಯಲಾಟಗಳು ನಲಿಯುತ್ತಿದ್ದವು.
ವೇದಿಕೆ ಮುಂದೆ ತಗ್ಗು ಅಗೆದು ಕಾಲಿನಿಂದ ತುಳಿಯುವ ಬೃಹತ್ ಹಾರ್ಮೋನಿಯಂ ಬಳಸಿ ನಾಟಕದ ಮಾಷ್ಟ್ರು ಆಟ ಕಲಿಸುತ್ತಿದ್ದರು. ಹಕಾರ, ಅಕಾರ ವನ್ನು ಲೆಕ್ಕಿಸದೆ ನಮ್ಮೂರ ಕಲಾವಿದರು ಭರ್ಜರಿಯಾಗಿ ಕುಣಿದು ಕುಪ್ಪಳಿಸುತ್ತ ಆಟ ಆಡುತ್ತಿದ್ದರು. ಕಣ್ಣಿಗೆ ರಾಚುವಂತೆ ಮುಖಕ್ಕೆ ಬಳಿದ ಮೇಕಪ್, ಕೂಲಿಂಗ್ ಗ್ಲಾಸ್, ಬುಜ ಕಿರೀಟಗಳು, ಥಳ ಥಳ ಹೊಳೆಯುವ ನಕಲಿ ಆಭರಣಗಳು ಇಂದಿಗೂ ನನ್ನ ಮುಂದೆ ನರ್ತಿಸುತ್ತವೆ.
ರಾಮಾಯಣ, ಮಹಾಭಾರತದಿಂದ ಆಯ್ದ ಕತೆಗಳನ್ನು ಆಡುತ್ತಿದ್ದರು. ಎಳೆಯ ಪ್ರಾಯದ ನನಗೆ ಆಟ ರಂಜನೀಯ ಎನಿಸುತ್ತಿತ್ತು. ನಮ್ಮೂರ ಮಣ್ಣಿನ ರಸ್ತೆಯ ನೆಲದ ಮೇಲೆ ಕುಳಿತು ಒಮ್ಮೊಮ್ಮೆ ಹೊದ್ದಿದ್ದ ಟಾವೆಲ್ ಹಾಸಿಕೊಂಡು ಮಲಗಿಯೇ ಇಡೀ ರಾತ್ರಿ ಆಟ ನೋಡುತ್ತಿದ್ದನ್ನು ನೆನೆದರೆ ಬೆರಗಾಗುತ್ತದೆ. ಅಂದು ನೆಲದ ಮೇಲೆ ಕುಳಿತುಕೊಳ್ಳಲು ಸಂಕೋಚಪಟ್ಟುಕೊಳ್ಳತ್ತಿರಲಿಲ್ಲ ಎಂಬುದು ನೆನೆದರೆ ಅಚ್ಚರಿಯೆನಿಸುತ್ತದೆ.
ಆಗಿನ ಮುಗ್ಧತೆ, ನಿಸ್ಶಂಕೋಚ ಕಲಾ ಪ್ರೇಮ ಅನನ್ಯವೆನಿಸುತ್ತದೆ. ಈಗ ಯಾರೂ ನೆಲದ ಮೇಲೆ ಕುಳಿತುಕೊಳ್ಳಲು ಮನಸ್ಸು ಮಾಡುವುದಿಲ್ಲ. ಕುರ್ಚಿ ಕೇಳುತ್ತಾರೆ. ವೆಂಕಟರವಣ ಗುಡಿಯ ಮುಂದಿನ ಬಯಲು ನೆಲದ ಮಣ್ಣಲಿ ಕುಳಿತು ಕೇಳಿದ ಸಂಭಾಷಣೆ- ಭಲರೇ ಎಲೈ ಸಾರಥಿ, ಮತ್ತೇನಂತಿಯಲೆ ಭೂಪತಿ ಎಂಬ ಸಾಲುಗಳು ಇಂದಿಗೂ ರಿಂಗಣವಾಡುತ್ತವೆ.
ನಾಲ್ಕಾರು ಅಡಿ ಎತ್ತರಕ್ಕೆ ಹಾರುತ್ತಿದ್ದ, ಕುಣಿಯುತ್ತಿದ್ದ ಕಲಾವಿದರ ಎನರ್ಜಿ ಅದ್ಭುತ ಅವರ ಕಾಲಲ್ಲಿನ ಶಕ್ತಿ, ಆಟಗಳ ಪ್ರದರ್ಶನದಲ್ಲಿನ ಜೀವನೋತ್ಸಾಹ ಇಂದು ಹುಡುಕಿದರೂ ಸಿಗುವುದಿಲ್ಲ.
ಅವರ ಕುಣಿದಾಟಕ್ಕೆ ಅಲುಗಾಡದಂತೆ ಭುಜಕಿರೀಟಗಳನ್ನು ಹಗ್ಗದಿಂದ ಬಿಗಿದಿರುತ್ತಿದ್ದರು. ಬಯಲಾಟದ ತಾಲೀಮಿನಿಂದ ಹಿಡಿದು ಪ್ರದರ್ಶನ ಮುಗಿಯುವವರೆಗೆ ಕುಣಿಯುತ್ತಿದ್ದ, ಚೀರುತ್ತಿದ್ದ ನಮ್ಮ ಕಲಾವಿದರ ತಾಕತ್ತು ನೆನೆದರೆ ರೋಮಾಂಚನವಾಗುತ್ತದೆ.
ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ ನಾನು ಆ ರೀತಿ ಕುಣಿಯಲು ಪ್ರಯತ್ನಿಸಿ ಕೈಕಾಲು ನೋಯಿಸಿಕೊಂಡಿದ್ದೆ, ರಾತ್ರಿ ಹತ್ತು ಗಂಟೆಗೆ ಪ್ರಾರಂಭವಾದ ಆಟ ಬೆಳಕು ಹರಿದರೂ ಮುಗಿಯುತ್ತಿರಲಿಲ್ಲ. ಇನ್ನು ನೂರಾರು ಮಾತುಗಳು ಹತ್ತಾರು ಹಾಡುಗಳು ಹಾಗೆ ಉಳಿದಿರುವಾಗಲೇ ಸೂರ್ಯ ಆಗಸನಲ್ಲಿ ಅರುಳುತ್ತಿದ್ದ, ಅನಿವಾರ್ಯವಾಗಿ ಕಲಾವಿದರು ಆಟ ಮುಗಿಸಬೇಕಾಗುತ್ತಿತ್ತು. ಬೆಳಕು ಹರಿದರೂ ಕಲಾವಿದರ ಉತ್ಸಾಹ ಮಾತ್ರ ಕುಗ್ಗುತ್ತಿರಲಿಲ್ಲ.
ಮುಂಜಾವು ಕಲಾವಿದರ ಉತ್ಸಾಹಕ್ಕೆ ತಣ್ಣೀರು ಎರೆಚುತ್ತಿತ್ತು. ಆಟ ಮುಗಿದರೂ ನೂರಾರು ಪ್ರೇಕ್ಷಕರು ಅಲ್ಲಲ್ಲಿ ಹಾಗೆ ನೆಲದ ಮೇಲೆ ನಿದ್ರೆಗೆ ಶರಣಾಗುತ್ತಿದ್ದರು. ಅವರು ಕುಳಿತು ಬಿಟ್ಟ ಉಳಿದ ಪ್ರದೇಶಗಳಲ್ಲಿನ ಮೂತ್ರ ವಿಸರ್ಜನೆಯು ಚಿತ್ತಾರಗಳನ್ನು ಕುತೂಹಲದಿಂದ ಗಮನಿಸಿ ಎಣಿಸುತ್ತಿದ್ದೆ. ಅರೆ ರಾತ್ರಿ ಯಾವಾಗ, ಎಲ್ಲಿ ಜನ ಉಚ್ಚೆ ಹೊಯ್ದರು ಎಂದು ಗೊತ್ತಾಗುತ್ತಿದ್ದಿಲ್ಲ.
ಪ್ರತಿಯೊಂದನ್ನು ಕೂಲಂಕುಷವಾಗಿ ಗಮನಿಸುವ ನನ್ನ ಮನಸ್ಸಿಗೆ ಇಂತಹ ಸಣ್ಣ ಸಂಗತಿಗಳು ಬೆರಗು ಮೂಡಿಸುತ್ತಿದ್ದವು.
ಮುಂದೆ ನಾನು ಹೈಸ್ಕೂಲು ಸೇರುವ ಹೊತ್ತಿಗೆ ಬಯಲಾಟಗಳು ಸಂಪೂರ್ಣ ಮಾಯವಾದವು. ಜನರಿಗೆ ಹಲಗಿ ಮುರಿಯುವ ಹಾಗೆ ಕುಣಿಯುವ ತಾಕತ್ತು ಕಡಿಮೆಯಾಯಿತೇನೋ ಅನಿಸುತ್ತದೆ. ಜನ ಸೂಕ್ಷ್ಮರಾದಂತೆಲ್ಲ ಜನಪದ ಕಲೆಗಳು ನಶಿಸಿ ಹೋದವು. ನಮ್ಮೂರ ಎರಡನೇ ತಲೆಮಾರಿನ ಯುವಕರು ರಕ್ತ ರಾತ್ರಿ ನಾಟಕದಲ್ಲಿ ಆಸಕ್ತಿ ಬೆಳೆಸಿದಿಕೊಂಡರು.
ಹವ್ಯಾಸಿ ಕಲಾವಿದರು, ಸೇರಿಕೊಂಡು ರಕ್ತರಾತ್ರಿ ನಾಟಕ ಆಡಲು ಆರಂಭಿಸಿದರು. ನಮ್ಮೂರ ವ್ಯಾಪಾರಸ್ಥರು ಬಣ್ಣ ಹಚ್ಚಿದ್ದು ರಕ್ತ ರಾತ್ರಿಯ ವೈಶಿಷ್ಟ್ಯ.
ಹಗಲು ಹೊತ್ತಿನಲ್ಲಿ ಪೈಜಾಮ, ದೋತ್ರ, ಲುಂಗಿ ಸುತ್ತಿಕೊಂಡು ತಿರುಗಾಡುತ್ತಿದ್ದ ಬಂಧು ಮಿತ್ರರನ್ನು ರಕ್ತ ರಾತ್ರಿ ನಾಟಕಗಳಲ್ಲಿ ನೋಡಿದಾಗ ನಿಜವಾದ ಅಪ್ರತಿಮ ಕಲಾವಿದರೆನಿಸುತ್ತಿದ್ದರು. ಕಂದಗಲ್ ಹನುಮಂತರಾಯರ ರಕ್ತರಾತ್ರಿ ಸಂಭಾಷಣೆಗಾಗಿ ಹೆಸರುವಾಸಿಯಾದ ನಾಟಕ.
ಎಲೆ ಉತ್ತರೆ ದಿನ ಮೂರು ಕಳೆಯುವದೊರಳಗೆ ನಿನ್ನ ಗರ್ಭಸ್ಠ ಪಿಂಡವು ಪ್ರಳಯ ಎಂಬ ಆರ್ಭಟ ಸಂಭಾಷಣೆ ಇಡೀ ವೇದಿಕೆ ಕಂಪಿಸುವಂತೆ ಮಾಡುತ್ತಿತ್ತು.
ಅಶ್ವತ್ಥಾಮನ ಪಾತ್ರದಾರಿ ಕೈಯಲ್ಲಿ ಚಂಡಾಡಿದ ರುಂಡಗಳನ್ನು ಹಿಡಿದು ವೇದಿಕೆ ಮೇಲೆ ಗುಡುಗುವಾಗ ಹೆಣ್ಣು ಮಕ್ಕಳು ಹೆದರಿ ಬಿಡುತ್ತಿದ್ದರು. ಬಾಲ್ಯದಲ್ಲಿ ಅತೀ ಹೆಚ್ಚು ಬಾರಿ ನೋಡಿ ನಲಿದ ನಾಟಕ ರಕ್ತ ರಾತ್ರಿ ಇಂದಿಗೂ ನೋಡಬೇಕೆನಿಸುತ್ತದೆ. ಆದರೆ ಮುಂದೆ ನಾಟಕ ಸಂಸ್ಕೃತಿ ಬದಲಾಯಿತು. ರಕ್ತರಾತ್ರಿಯಿಂದ ಕಲಾವಿದರು ಗೌಡ್ರ ಗದ್ಲ, ದೇಸಾಯರ ದರ್ಬಾರಕ್ಕೆ ತಿರುಗಿದಾಗ ನಿರಾಶೆಯಾಗ ತೊಡಗಿತು

ವೃತ್ತಿರಂಗಭೂಮಿ ಕಲಾವಿದರು ಹಾಗೂ ಊರ ಕಲಾವಿದರೊಂದಿಗೆ


ರಕ್ತ ರಾತ್ರಿ ನಾಟಕದ ದ್ರೌಪದಿ ಪಾತ್ರದಾರಿ ಮನ್ಸೂರ ಸುಭದ್ರಮ್ಮ ಶ್ರೇಷ್ಠ ಕಲಾವಿದೆ. ನಮ್ಮೂರಿನ ರಂಗಾಸಕ್ತಿ ವ್ಯಾಪಾರಿಗಳಾದ ಸಿ.ಶಿವಪ್ಪ ಅವರ ಸಹಾಯದೊಂದಿಗೆ ಸುಭದ್ರಮ್ಮ ಸಾಕಷ್ಟು ಸಲ ಕಾರಟಗಿಗೆ ಬರುತ್ತಿದ್ದರು.
ರಕ್ತ ರಾತ್ರಿ ನಾಟಕದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವದಲ್ಲದೆ, ಕೊನೆಗೆ ಬೆಟ್ಟದ ಮೇಲೊಂದು ಮನೆಯ ಮಾಡಿ ವಚನವನ್ನು ಹಾಡಿ ಪ್ರೇಕ್ಷಕರನ್ನು ಖುಷಿ ಪಡಿಸುತ್ತಿದ್ದರು.
ಒಮ್ಮೆ ನಮ್ಮೂರಲ್ಲಿನ ರಕ್ತ ರಾತ್ರಿಯ ಅಭಿನಯಕ್ಕಾಗಿ ನಾಡಿನ ಹಿರಿಯ ಕಲಾವಿದರನ್ನು ಕರೆಸಿದ ನೆನಪು. ರಕ್ತ ರಾತ್ರಿ ನಾಟಕದಲ್ಲಿ ಪಾತ್ರ ಮಾಡಲು ಪ್ರವಚನಕಾರ, ರಂಗಕಲಾವಿದ ರೇವಣಸಿದ್ಧಯ್ಯಶಾಸ್ತ್ರೀ (ಭಾರತೀಶ) ಹಾಗೂ ಎಲಿವಾಳ ಸಿದ್ಧಯ್ಯ ಅವರನ್ನು ಕರೆಸಿದ್ದರು.
ಆವರಿಬ್ಬರೂ ಸಿನೆಮಾ ನಟರು ಎಂಬ ಖ್ಯಾತಿ ಬೇರೆ ರಂಗ ಕಲಾವಿದ ಎಲಿವಾಳ ಸಿದ್ಧಯ್ಯ ಶ್ರೀಕೃಷ್ಣ ಗಾರುಡಿ ಸಿನೆಮಾದಲ್ಲಿ ಡಾ ರಾಜ್ ಅವರೊಂದಿಗೆ ಅಭಿನಯಿಸಿದ್ದರು ಎಂಬ ಖ್ಯಾತಿ ಬೇರೆ ಇತ್ತು.
ರಕ್ತ ರಾತ್ರಿ ನಾಟಕದಲ್ಲಿನ ಎಲಿವಾಳ ಸಿದ್ಧಯ್ಯ ಹಾಗೂ ಭಾರತೀಶರ ಅಭಿನಯ, ಸಂಭಾಷಣೆ ಹೇಳುವ ವಿಧಾನ ಅಬ್ಬಾ ! ತುಂಬಾ ರೋಮಾಂಚನಕಾರಿ !!
ಬಾಲಕನಾಗಿದ್ದಾಗಿನ ರಂಗಾಸಕ್ತಿಗೆ ಕಾರಣ ಹುಡುಕಿದೆ ಉತ್ತರ ಸಿಗಲಿಲ್ಲ. ನಂತರ ವಿರಾಮದ ವೇಳೆಯಲ್ಲಿ ನಮ್ಮೂರ ಹಿರಿಯರನ್ನು ವಿನಂತಿಸಿಕೊಂಡು ಗ್ರೀನ್ ರೂಮಿನಲ್ಲಿ ಸಿದ್ಧಯ್ಯ ಹಾಗೂ ಭಾರತೀಶರನ್ನು ಭೇಟಿ ಆಗಿ ಬಂದೆ. ಒಬ್ಬ ಕಲಾವಿದನ ಖಾಸಗಿ ಬದುಕಿನ ವರ್ತನೆಯನ್ನು ಗ್ರೀನ್ ರೂಮಿನಲ್ಲಿ ಕಂಡು ಅಚ್ಚರಿ ಪಟ್ಟೆ.
ರಾಜ ಮಹಾರಾಜರ ವೇಷಧಾರಿಗಳು ಗ್ರೀನ್ ರೂಮಿನಲ್ಲಿ ಬೀಡಿ, ಸಿಗರೇಟು ಸೇದುತ್ತಾ ಕುಳಿತದ್ದನ್ನು ಕಂಡು ದಂಗಾದೆ. ಅಯ್ಯೋ ರಾಜ-ಮಹಾರಾಜರು ಬೀಡಿ ಸೇದಬಹುದೇ ಎಂದು ಆಲೋಚಿಸಿದೆ.
ಮುಂದೆ ನಮ್ಮೂರಿಗೆ ಗೌಡ್ರಗದ್ಲ ನಾಟಕದ ಕ್ಯಾಂಪ್ ಬಂದಿತು. ನಾಟಕದ ಲೇಖಕ ಬಿ.ವ್ಹಿ.ಈಶ ಹಾಸ್ಯಪಾತ್ರದಲ್ಲಿ ನಟಿಸುತ್ತಿದ್ದರೆ, ಸಂಘದ ಒಡೆಯರಾದ ಹಾಲಾಪೂರ ರಾಮರಾವ್ ದೇಸಾಯಿ ಗೌಡರ ಪಾತ್ರ ಮಾಡುತ್ತಿದ್ದರು.
ಗೌಡ್ರ ಗದ್ಲ ಕಾರಟಗಿಯಲ್ಲಿ ತುಂಬಾ ದಿನ ಇತ್ತು. ರಂಗಭೂಮಿ ಕಲಾವಿದರ ಅಸಹಾಯಕತೆ, ಹಗಲು ನಿದ್ರೆ, ಕುಡಿತದ ಹವ್ಯಾಸಗಳನ್ನು ಹಿರಿಯ ಗೆಳೆಯರು ರಸವತ್ತಾಗಿ ವಿವರಿಸುತ್ತಿದ್ದರು.
ಮುಂದೆ ಮತ್ಯಾವುದೋ ಕಂಪನಿಯಲ್ಲಿ ಅಭಿನಯಿಸಲು ಹಿರಿಯ ನಟ ಉದಯಕುಮಾರ ಬಂದಿದ್ದರು. ನಮ್ಮ ಕಟ್ಟಡದಲ್ಲಿ ಬಾಡಿಗೆಯಿದ್ದ ಕರ್ನಾಟಕ ಪೋಟೋ ಸ್ಟುಡೀಯೋ ಪ್ರಭು ನನ್ನು ಕರೆದುಕೊಂಡು ಹೋಗಿ ಉದಯಕುಮಾರ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದೆ.
ಉದಯಕುಮಾರರಂತಹ ಮೇರು ನಟ, ನಾಟಕ ಆಡಲು ಹಳ್ಳಿಗಳಿಗೆ ತಿರುಗುವ ಅನಿವಾರ್ಯತೆಗಾಗಿ ಒಳಗೊಳಗೆ ಮರುಕ ಪಟ್ಟಿದ್ದೆ, ಸಿನೆಮಾದವರು ಎಂದರೆ ನಡೆದಾಡುವ ದೇವರೆಂದು ನಂಬಿದ ಕಾಲವದು.
ಅವರನ್ನು ಕಣ್ಣು ಪಿಳುಕಿಸದಂತೆ ನೋಡಿ ನಂತರ ಅವರು ಅಭಿನಯಿಸಿದ ಸಿನೆಮಾಗಳನ್ನು ನೋಡಿ, ಹೋ ನಾನವರನ್ನು ಹತ್ತಿರದಿಂದ ನೋಡಿದ್ದೇನೆಲ್ಲ ಎಂದು ಆನಂದ ಪಡುತ್ತಿದ್ದೆ.
ಆಗ ಸಿನೆಮಾಗಳಲ್ಲಿ ಜನಪ್ರಿಯತೆ ಗಳಿಸಿದ್ದ ಕಾಲದಲ್ಲಿ ಸುಂದರ ಕೃಷ್ಣ ಅರಸ್ ಕಾರಟಗಿಗೆ ಬಂದಿದ್ದರು. ಅಷ್ಟೊಂದು ಬೇಡಿಕೆಯಿದ್ದರೂ, ನಾಟಕಗಳಲ್ಲಿ ಅಭಿನಯಿಸಿದ್ದು ಯಾಕೆ ಎಂದು ಅರ್ಥವಾಗಲಿಲ್ಲ.
ಮುಂದೆ ಸುದರ್ಶನ ಶೈಲಶ್ರೀ ದಂಪತಿಗಳು ಕಾರಟಗಿಗೆ ಬಂದಿದ್ದರು. ಹೀಗೆ ಬಾಲ್ಯದಲ್ಲಿ ನಾಟಕದ ಹುಚ್ಚಿನಿಂದಾಗಿ ಮತ್ತೆ ಸಿನೆಮಾ ನೋಡುವ ಚಟಕ್ಕೆ ಬಲಿಯಾದೆ .
ನಟರು, ಅವರ ಅಭಿನಯ, ರಂಗು ರಂಗಿನ ಬದುಕು ಎಲ್ಲರಿಗಿಂತ ಅವರೇ ಗ್ರೇಟ್ ಎನಿಸುತ್ತಿತ್ತು. ಕಲಾವಿದರು ಸತ್ತರೂ ಅವರ ಸಿನೆಮಾಗಳಲ್ಲಿ ಶಾಶ್ವತವಾಗಿ ಉಳಿಯುತ್ತಾರಲ್ಲ ಅನಿಸುತ್ತಿತ್ತು.
ಹಾಸ್ಯ ನಟ ನರಸಿಂಹರಾಜು ಅವರನ್ನು ಕುಷ್ಟಗಿಯಲ್ಲಿ ನೋಡಿದ್ದೆ, ಬಾಲ್ಯದುದ್ದಕ್ಕೂ ನಾಟಕಗಳ ಮೂಲಕ ನಾನು ಕಂಡ ಕಲಾವಿದರು ನನ್ನ ಮೇಲೆ ಪ್ರಭಾವ ಬೀರಿದರು. ನನ್ನ ನೆಚ್ಚಿನ ನಟರಾದ ಅನಂತನಾಗ, ಶಂಕರನಾಗ ಹಾಗೂ ರಾಜಕುಮಾರ ಅವರನ್ನು ನೋಡಬೇಕೆಂದು ಹಂಬಲಿಸುತ್ತಿದ್ದೆ ಮುಂದೊಂದು ದಿನ ಆ ಕನಸು ಈಡೇರಿತು.