Friday, December 29, 2017

ಬೇಡಲಾರೆ ಯಾರನೂ

*ಬೇಡಲಾರೆ ಯಾರನೂ*

ಬೇಡಲಾರೆ ನಾನಿನ್ನು ಬೇಡಿದರೆ
ವರವ ಯಾರೂ ಕೊಡುವುದಿಲ್ಲ

ಇವರು ನಮ್ಮವರು ಕೈ ಬಿಡ
ಲಾರರು ಎಂಬ ಭ್ರಮೆಯ
ಬದುಕಲಿ ನೂರೆಂಟು ಆಸೆ
ಭರವಸೆಗಳ ಲೆಕ್ಕಾಚಾರ

ಯಾರೂ ನಮ್ಮವರಲ್ಲದಿರೆಯೂ
ನಮ್ಮವರು ನಮಗೆ ಏನೆಲ್ಲ
ಆಗುತ್ತಾರೆಂಬ ಗಾಳಿ ಗೋಪುರದ
ಮೇಲೆ ಕಳಸವಿಟ್ಟು ಜಾತ್ರೆ
ಮಾಡಿ ತೇರನೆಳೆಯುವ ಹುಚ್ಚು

ನಮ್ಮವರೆನಿಸಿಕೊಂಡವರು ಒಮ್ಮೆ
ಮೇಲೆ ಹಾರಿದರೆ ಗಾಳಿಪಟ ಹಾರಿದ್ದೇ
ಹಾರಿದ್ದು ಪಾಪ ಪಟಕ್ಕೇನು ಗೊತ್ತು

ಪಟ ಹಾರಿಸುವವನ ಕೈ ಸೋತರೆ
ಎಳೆದಾನೆಂದು

ನಿನ್ಪಷ್ಟಕೆ ನೀ ನಡೆ ನಿನ್ನಿಷ್ಟದ ಹಾಗೆ
ಯಾರೂ ಇಲ್ಲಿ ಇಲ್ಲ ನಿನಗೆ ನೆರವಾಗಿ
ನೆರಳಾಗಿ ಕೈ ಹಿಡಿದು ಮುನ್ನಡೆಸಲು

ಏಳು ಎದ್ದೇಳು ಸಾಗು ನಿಧಾನದಿ ನಿನ್ನ
ವೇಗವ ನೀ ಅರಿತು

ಅಲ್ಲಿರಲಿ ಒಂದು
ಗುರಿ ಅದ ತಲುಪಲು ನೀ ತೆವಳುತ್ತ
ಏಳುತ್ತ ಒಮ್ಮೊಮ್ಮೆ ಬೀಳುತ್ತಲಾದರೂ
ನಡೆಯುವದ ಬಿಡಬೇಡ

ದಣಿವು ಹಸಿವು ಬಾಯಾರಿಕೆಯ
ಸಂಕಷ್ಟದಲಿಯೂ ಮಾಸದ
ನಗುವಿರಲಿ ಮೊಗದಲಿ

ಗಂಟು ಮುಖದ ಕಗ್ಗಂಟು ಕಳಚ
ಬಹುದು ಸುತ್ತಲಿನವರ ನಂಟು

ಬೇರೆಯವರ ನಂಟಿನ ಗಂಟನು
ನೆಚ್ಚದೆ ಬಿಚ್ಚದೆ ಬೆಚ್ಚದೆ ನಡೆ

ನಿನ್ನ
ಕಾಲುಗಳ ಮೇಲೆ ನಿನ್ನದೇ ಕಾಲ
ಕೂಡಿ ಬರುವವರೆಗೆ....

---ಸಿದ್ದು ಯಾಪಲಪರವಿ

Thursday, December 28, 2017

ಕಾಮಾಗ್ನಿ

*ಕಾಮಾಗ್ನಿ*

ಆಕಾಶ ಭೂಮಿ ಒಂದಾಗಿ ನಿಂತು
ಉರಿವ ಅಗ್ನಿಯ ಅಂಗೈಯಲಿ
ಹಿಡಿದು ಸಪ್ತ ಸರೋವರಗಳ
ನೀರ ಗಟ ಗಟನೆ ಕುಡಿದರೂ
ಇಂಗದ ದಾಹ
ಬತ್ತದ ತಳಮಳ

ಮನದಾಳದಲಿ ಭೋರ್ಗರೆಯುವ
ಬಯಕಗಳ ಹಂಗು ತೀರಿಸಿ
ಹಗುರಾಗಿ ಬೆತ್ತಲಾಗಿ ಬಯಲಲಿ
ಬಯಲಾಗಲು
ಬಂದು ಸೇರಬಾರದೇ ಬೇಗ

---ಸಿದ್ದು ಯಾಪಲಪರವಿ

Tuesday, December 26, 2017

ಚುಟುಕುಗಳು

1
ಬಾನಂಗಳದ ಕಾರ್ಗತ್ತಲಲಿ ಚಕ ಚಕನೆ ಹೊಳೆಯುವ
ನಕ್ಷತ್ರಗಳ ಮಧ್ಯೆ ಮಿನುಗುವ ಚಂದಿರ.

2
ಉರಿ ಬಿಸಿಲಲಿ ಬಳಲಿದ ಭೂಮಿ ತಣ್ಣಗಾಗಲು ಚಡಪಡಿಸುತಿರೆ  ಒಮ್ಮೆಲೇ ಜೋರಾಗಿ ಸುರಿವ ಮುಂಗಾರು.

3
ಹರಿವ ನದಿಗೆ ಒಮ್ಮೆಲೇ  ಉನ್ಮಾದವ ಹೆಚ್ಚಿಸಿ ವೇಗವಾಗಿ ಹರಿದು ಸಮುದ್ರ ಸೇರಿ ನಲಿಯಲು ದೊರೆಯುವ ತಿರುವು.

4
ಹೂ ಬಿಸಿಲಲಿ ಅರಳಿದ ಕೆಂದಾವರೆಯ ಮಿಲನ ಸ್ಪರ್ಷದುಲ್ಲಾಸಕೆ  ಹಾರಿ ಬರುವ  ದುಂಬಿ ನೀ.

5
ಬೆಳದಿಂಗಳಲಿ ಮೈದುಂಬಿ ನರ್ತಿಸುತ ಮಿಲನದೊಳಿರುವ
ಸರ್ಪಗಳ ಕಂಡು ಬೆಚ್ಚಿ ಚಡಪಡಿಸಿದ ಹಾವಾಡಿಗ.

6
ಮೈಕೊರೆಯುವ ಛಳಿಯಲಿ ಗಡ ಗಡನೆ ನಡುಗುವ
ಚಡಪಡಿಕೆಯ ದೂರಾಗಿಸಲು ಅವತರಿಸುವ ಅಗ್ನಿಕುಂಡ

    ----ಸಿದ್ದು ಯಾಪಲಪರವಿ

Saturday, December 23, 2017

Little champs

*ಭಾವ-ಗಾನ-ಧ್ಯಾನಗಳ ಸಮಾಗಮ: Sa Re Ga Ma Pa little champs*

ನನ್ನನ್ನು ಹಿಡಿದಿಟ್ಟು , ಅಳಿಸಿ , ನಗಿಸಿ ಗಂಟಲು ಬಿಗಿಯುವುವಂತೆ ಮಾಡುವ ದೃಶ್ಯ.

ಆಗೀಗ ಬರೆಯುತ್ತೇನೆ , ಕಾವ್ಯ ಮೊದಲ ಆಯ್ಕೆ. ಮೂವತ್ತು ವರ್ಷಗಳ ಸಾಧನೆಯ ನಂತರ ಈಗ ಕೊಂಚ ಹಿಡಿತ. ಆದರೆ  ಸಂಪೂರ್ಣ ಅಲ್ಲ.

ಸಂಗೀತಕ್ಕೆ ಕಾವ್ಯ-ಸಾಹಿತ್ಯ ಜೀವಾಳ.
ಪಂಚಾಕ್ಷರ ಗವಾಯಿಗಳ ಆಶ್ರಮದ ನನ್ನ ಸಂಪರ್ಕ. ಪೂಜ್ಯ ಪುಟ್ಟರಾಜ ಗವಾಯಿಗಳ ಮೇಲಿನ ಶೃದ್ಧೆ ಸಂಗೀತ ಆಸಕ್ತಿಯನ್ನು ಹೆಚ್ಚಿಸಿದೆ.

ಗಾನ-ಧ್ಯಾನ ಪೂರಕ.

ನನ್ನ ತರಬೇತಿಯಲ್ಲಿಯೂ ಹೇಳುವೆ ' ಸಾಧನೆಗೆ , ಖುಷಿಗೆ ಗಾನ-ಧ್ಯಾನ ಮುಖ್ಯ'.

ಸಂಗೀತ ಎಲ್ಲರಿಗೂ ಅರ್ಥವಾಗುವ, ಎಲ್ಲರನ್ನೂ ಆಕರ್ಷಿಸುವ *universal language*.

ಅರಸಿಕನ ಮನಸನೂ ಅರಳಿಸುವ ತಾಕತ್ತು.

ಇನ್ನು ಕೊಂಚ ತಿಳಿದಿದ್ದರೆ ಮುಗಿದೇ ಹೋಯಿತು.

*ಸ್ವರ್ಗ ಸುಖ,ಹೊಸ ಲೋಕ ದರ್ಶನ*.
Weekend ನಲ್ಲಿ ಊರಲ್ಲಿದ್ದರೆ ಆನಂದದಿ ನಗುತ್ತ-ಅಳುತ್ತ ಅನುಭವಿಸುವ ಪರಮಾನಂದವೇ little champs.

Zee ಕನ್ನಡವರು ತುಂಬ ಜಾಣರು , ಜನರ ನಾಡಿಮಿಡಿತ ಬಲ್ಲವರು.
ವೈಭವೀಕರಿಸಿ ಎಲ್ಲದನ್ನು ಉಣ ಬಡಿಸುತ್ತಾರೆ.

ಅದರಲ್ಲೂ ಮಕ್ಕಳಿದ್ದರೆ ಎಲ್ಲವೂ ಅಂದ-ಚಂದ.
ಇಲ್ಲಿ ಎತ್ತರಕ್ಕೆ ಏರಿದ ಸಾಧಕರು involve ಆಗಿ ಮಕ್ಕಳ ಜೊತೆ ಭಾವನಾತ್ಮಕ ವಾತಾವರಣ ಸೃಷ್ಟಿಸುತ್ತಾರೆ.

ನಿರೂಪಕಿ ಅನುಶ್ರೀ ಪ್ರಮುಖ ಆಕರ್ಷಣೆ. ಕೊಂಚ ಅತೀ ಅನಿಸಿದರೂ ಸಾಮಾನ್ಯರ ಗಮನ ಸೆಳೆಯಲು ಅನಿವಾರ್ಯ ಕೂಡಾ ! Just commercial !!

VP- ವಿಜಯಪ್ರಕಾಶ  ಹಾಗೂ ಅರ್ಜುನ ಜನ್ಯ , ಜುರಿಗಳು , ವಾರದ ಅತಿಥಿ ಹಾಗೂ ಹಂಸಲೇಖ ಎಲ್ಲರೂ  wonderful and ultimate. ಅವರದು ಮಕ್ಕಳೊಡನೆ ಮುದ್ದು ಮಕ್ಕಳಾಗಿ ಬೆರೆಯುವ ಅನನ್ಯತೆ.

ಮಕ್ಕಳ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಕೋಟಿಗಟ್ಟಲೆ ಹಣ ಸುರಿದು , ಕೋಟಿಗಟ್ಟಲೆ ಜನರಿಗೆ ತಲುಪಿಸಿ , ಕೋಟಿಗಟ್ಟಲೆ ಗಳಿಸುವ ರಾಘವೇಂದ್ರ ಹುಣಸೂರ ತಂಡದವರ ಪರಿಕಲ್ಪನೆ ಅನುಪಮ.

ಸಂಗೀತದ ಯಶಸ್ವಿ ಪಯಣ ಹಾಗೂ ಒಳಪಟ್ಟುಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಆಗಾಗ ವಿವರಿಸುವದು ಇನ್ನೂ ವಿಶೇಷ.

ಸುಮ್ಮನೇ ಹಾಡನ್ನು enjoy ಮಾಡುವ ನಾವು ಹಿಂದಿರುವ ಶ್ರಮದ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ.

ಹಾಡಿಗೆ ಇರಬೇಕಾದ ಧ್ಯಾನಸ್ಥ ಸಾಧನೆ ಕುರಿತು  ಹೇಳುವುದು , ಕೆಲವು ಘಟನೆಗಳ ಭಾವುಕ ಸಂಗತಿಗಳನ್ನು ಸಿನಿಮೀಯವಾಗಿ ತೋರಿಸಿ ಅಳುವಂತೆ ಮಾಡುವುದು, ಅದಕ್ಕೆ ಬೇಕಾಗುವ ರೀತಿಯಲ್ಲಿ script ತಯಾರಿಸಿ , ಅದನ್ನು ಅಷ್ಟೇ ರಸವತ್ತಾಗಿ present ಮಾಡುವುದು ಎಲ್ಲರನ್ನೂ ಬೇರೆ ಜಗತ್ತಿಗೆ ಕೊಂಡೊಯ್ಯುತ್ತದೆ.

ಹಣದ ವ್ಯವಹಾರ ಇದ್ದರೂ ಹೆಚ್ಚು involvement ಇರುವುದರಿಂದ commercial ಅನಿಸುವುದಿಲ್ಲ.

ಗ್ರಾಮೀಣ , ಅಸಹಾಯಕ ಪ್ರತಿಭೆಗಳಿಗೆ ಸೂಕ್ತ , ನಿಷ್ಪಕ್ಷಪಾತ ವೇದಿಕೆಯೂ ಹೌದು.

' ಅಯ್ಯೋ time waste ' ಎಂದು ಗೊಣಗದೇ , ನಿಜವಾಗ್ಲೂ ಬಿಡುವಿದ್ದರೆ ಈ ಕಾರ್ಯಕ್ರಮ ನೋಡಿ .

ಬೆಟ್ಟಿಂಗ್ ದಂಧೆ ಸೃಷ್ಟಿ ಮಾಡುವ ಕ್ರಿಕೆಟ್ ಆಟ ನೋಡುವ ನಾವು ಕೊಂಚ ಭಿನ್ನವಾಗಿ ಖುಷಿ ಕೊಟ್ಟು ಮೈಮರೆಸುವ ಕಾರ್ಯಕ್ರಮಗಳ ಕಡೆ ತಿರುಗಿ ನೋಡೋಣ. ಇಲ್ಲದಿದ್ದರೆ ಎಲ್ಲವೂ *Waste*.

---ಸಿದ್ದು ಯಾಪಲಪರವಿ.

Thursday, December 21, 2017

ಹಟ ಬೇಡ ನಾ ಕಾಲಜ್ಞಾನಿ‌ ಅಲ್ಲ

*ಲವ್ ಕಾಲ*

*ಹಟ ಬೇಡ ನಾ ಕಾಲಜ್ಞಾನಿ ಅಲ್ಲ*

ಈ ಪ್ರೀತಿಯ ವಾಂಛೆ. ಏನೇನು ಹೇಳೋಕೆ ಬರೋದಿಲ್ಲ.

ಉಸಿರಿನ ಹಾಗೆ ಪ್ರೀತಿಸುವ ಹುಚ್ಚು.
ಒಮ್ಮೊಮ್ಮೆ ಇನ್ನಿಲ್ಲದ ಕೋಪ-ತಾಪ-ಜಗಳ. ಅದೂ ಬಹಳ ಕಾಲ ಇರುವುದಿಲ್ಲ .

ಎಲ್ಲಿ ನೊಂದುಕೊಂಡು ಕೊರಗುತ್ತೀಯಾ ಎಂಬ ಆತಂಕ. ಮತ್ತದೇ ಉತ್ಕಟತೆ.

ಕಾಳಜಿಯಿಂದ ಹೇಳಿದ ಮಾತುಗಳನ್ನು ಕೇಳದ ನಿನ್ನ ಹಟಮಾರಿತನದಿಂದ ರೋಸಿ ಹೋಗಿದ್ದೇನೆ .

ನನ್ನ ಉದ್ದೇಶ ಅರ್ಥ ಮಾಡಿಕೊಳ್ಳಲಾಗದ ನಿನ್ನ ಅಪಾರ್ಥ ಮಾಡಿಕೊಳ್ಳುವ ಇಬ್ಬಂದಿತನ, ಯಾರದೋ ಮುಲಾಜಿಗೆ ಬೀಳುವ ಅಮಾಯಕತೆ , ನಂಬಿ ಒದ್ದಾಡುವ ಅಸಹಾಯಕತೆಗೆ ಏನು ಹೇಳಲಿ ?

ಆದರೂ ತುಂಬಾ ನಿಷ್ಟುರವಾಗಿ ಮಾತನಾಡಿ ನನ್ನ ಪ್ರೀತಿಯ ಪಣಕ್ಕಿಟ್ಟರೂ ಲೆಕ್ಕಿಸದ ನಿನ್ನ ಧೋರಣೆಗೆ ಕಾರಣ ತಿಳಿಯುತ್ತಿಲ್ಲ.

ಅನಾರೋಗ್ಯ , ಅನೇಕ ಒತ್ತಡಗಳ ನಡುವೆ ಮುಖವಾಡ ಹಾಕಿಕೊಂಡ ಸೋಗಲಾಡಿಯೊಬ್ಬ ಕರೆದ ಕಾರ್ಯಕ್ರಮಕ್ಕೆ ನಿನ್ನನ್ನು ಕಳಿಸುವ ಮನಸ್ಸಿರಲಿಲ್ಲ ಆದರೂ ನೀನು ಹೋಗಲೇಬೇಕು ಅಂದಾಗ ಕಂಗಾಲಾದೆ.

ಬುದ್ಧಿ ಸಂಯಮ ಕಳೆದುಕೊಂಡು , ಮನಸ್ಸು ವ್ಯಗ್ರವಾಯಿತು.

ಮನಸು ಮುರಿದುಕೊಳ್ಳುವುದು ದೊಡ್ಡದಲ್ಲ , ನಿನ್ನ ಅಜ್ಞಾನಕೆ ಮರುಗಿ ನಾನೇ ಸಹಿಸಿಕೊಂಡೆ.

ಪ್ರೀತಿ ಎಲ್ಲವನ್ನೂ ಸಹಿಸುತ್ತದೆ ಎಂಬುದ ನಿರೂಪಿಸುವ ಹುಚ್ಚನಂತೆ !

ಗಾಢವಾಗಿ ಪ್ರೀತಿಸುವ ವ್ಯಕ್ತಿಗೆ ಅತೀಂದ್ರಿಯ ಶಕ್ತಿಯನ್ನು ಭಗವಂತ ಕರುಣಿಸಿರುತ್ತಾನೆ.

ಆ ಕಾಳಜಿ ಇಟ್ಟುಕೊಂಡು ಹೇಳಿದ ಮಾತುಗಳನ್ನು ನೀನು ಲೆಕ್ಕಿಸಲೇ ಇದ್ದಾಗ ಮರುಕಪಟ್ಟೆ.

ನಾನು ಕಾಲಜ್ಞಾನಿಯಲ್ಲ ಆದರೂ ನಿನಗಿಂತ ಹೆಚ್ಚು ಲೋಕಜ್ಞಾನ ಇದೆ.

ಎದುರಿಗೆ ಸುಂದರವಾಗಿ ಮಾತನಾಡಿ ಮುಖ ನೋಡಿ ಹಲ್ಲು ಕಿರಿಯುವ , ಮಾತಲ್ಲಿ ಮರ ಹತ್ತಿಸಿ ಮೋಜು ನೋಡುವ ಹಕನಾಕುಗಳ ಹರಾಮಿತನ ನಿನಗೆ ಬೇಗ ತಿಳಿದಷ್ಟು ಕ್ಷೇಮ.

ಯಾರನ್ನೂ ಬೆಳೆಸದ , ಬೆಳೆಯುವುದನ್ನು ಸಹಿಸದ ಜನರ ಮಧ್ಯೆ ನಾವು ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.

*ಕಾಲ ಹಾಗೂ ಪ್ರೀತಿಸುವ ವ್ಯಕ್ತಿಗಳು* ಮಾಯವಾಗುವ ಮುನ್ನ ಎಚ್ಚತ್ತುಕೊಂಡು ಜೊಳ್ಳ ತೂರಿ , ಗಟ್ಟಿ ಕಾಳ ಕಾಪಾಡಿಕೊಳ್ಳಬೇಕು.

ಇಲ್ಲದಿರೆ ಪ್ರೀತಿಯ *ಬರದಲಿ* ಬಾಡಬೇಕಾದೀತು.

ಪ್ರೀತಿಸೌಧ ಒಮ್ಮೆಲೆ  ಕುಸಿಯವುದು ಬೇಡ ಎಂಬ ಕಾರಣಕ್ಕೆ ಎಲ್ಲ ಸಹಿಸಿಕೊಂಡಿರುವೆ.

ನನ್ನ ಸಹನೆ ದೌರ್ಬಲ್ಯವಲ್ಲ. ದಿವ್ಯಶಕ್ತಿ.

ನೀನೂ ಪರಿವರ್ತನೆಯಾಗುವೆ ಎಂಬ ಭರವಸೆಯಿಂದ ಕಾಯುತ್ತೇನೆ.

ಕರುಳು ಕತ್ತರಿಸುವ ತನಕ.

ಮುಖವಾಡ ನೋಡದೇ ಮುಖ ನೋಡು.
ಮರುಳ ಮಾತು ಕೇಳದೇ ಮನಸು ನೋಡು.

---ಸಿದ್ದು ಯಾಪಲಪರವಿ.

Monday, December 18, 2017

ಓಲೆ-17

ಕನಸಿಗೊಂದು ಓಲೆ

ಓಲೆ-17

ಹಲೋ ಚಿನ್ನು ,

ನಿನ್ನ ಆಧ್ಯಾತ್ಮದ ಕುರಿತು ಮಾತನಾಡಿದ ಗೆಳೆಯರು ಈಶ್ವರಿ ವಿಶ್ವವಿದ್ಯಾಲಯದ ಮೌಲ್ಯಗಳ ಬಗ್ಗೆ ವಿವರಿಸುವಾಗ detachment ಮಹತ್ವ ವಿವರಿಸಿ ಮನದ ಮಾತುಗಳ ಹೊಗಳಿದರು.

ಅವರ ಹೊಗಳಿಕೆಯಿಂದ ನಾನೇನು ಪುಳಕಗೊಳ್ಳಲಿಲ್ಲ. I'm detached towards appreciation.

''ನಾವು ನಮ್ಮ ಸಂಬಂಧಗಳು ಹಾಗೂ ಅವರಿಗೆ ಬರುವ ಕಷ್ಟಗಳ ಕುರಿತು ವೃಥಾ ಚಿಂತಿಸುವ ಅಗತ್ಯವಿಲ್ಲ ಅದೂ ಕರ್ಮ' ಎಂಬ ಅವರ ವಿವರಗಳನ್ನು ಆಲಿಸಿದೆ.

ಆದರೆ ಯಾವುದೇ ನೋವುಗಳು ವೈಯಕ್ತಿಕ ನೆಲೆಯಲ್ಲಿ ದಾಳಿ ಮಾಡಿದಾಗ ನಮ್ಮ ಎಲ್ಲ ಸಿದ್ಧಾಂತ ಹಾಗೂ ಮೌಲ್ಯಗಳು ಮಂಕಾಗಿ ಚಿಂತೆ ಮಾಡುವುದು ಮನುಷ್ಯನ ಮಿತಿ ಆದರೆ ನಾವು ಆ ಮಿತಿಯನ್ನು ಇಟ್ಟುಕೊಂಡೇ ಬಂದದ್ದುನ್ನು ಸಹನೆಯಿಂದ ಎದೆಗುಂದದೆ ಎದುರಿಸಲೇಬೇಕು.

ಆ ನೋವಿಗೆ ಪರೋಕ್ಷವಾಗಿ ನಮ್ಮ ಕೆಲವು ತಪ್ಪು ನಿರ್ಧಾರಗಳು ಕಾರಣವಾಗಿರುತ್ತವೆ ಎಂಬುದನ್ನು ನೆನಪಿಸಿಕೊಂಡು ನಮ್ಮನ್ನು ನಾವೇ ಸಂತೈಸಿಕೊಳ್ಳಬೇಕು.

Detachment ಎಲ್ಲ ಘಟನೆಗಳ ನೋವು ನಿವಾರಣೆಗೆ ಮೂಲ ಮಂತ್ರ ಆದರೆ ಕೇವಲ ಸಾಧನೆಯಿಂದ ಮಾತ್ರ ಈ ನಿರ್ಲಿಪ್ತತೆಯನ್ನು ರೂಢಿಸಿಕೊಳ್ಳಬಹುದು.

ನಾವು ಅಂದುಕೊಂಡಂತೆ ನಮಗೆ ಬೇಕಾದವರು ಇರಲಿ ಎಂದು ಬಯಸುವದೇ ವ್ಯಾಮೋಹ , ಆ ವ್ಯಾಮೋಹ ಹಾಗೂ ಭಿನ್ನಾಭಿಪ್ರಾಯ �ನಮ್ಮ ನೋವಿನ ಮೂಲ.

ಮೂಲ ಗೊತ್ತಾದ ಮೇಲಾದರೂ ಖುಷಿಯಾಗಿ ಇರಬೇಕು.

ಆ ಹಂತವನ್ನು ನಿಧಾನವಾಗಿ ತಲುಪೋಣ.

ನಿನ್ನೆ ಅಚಾನಕ್ ಆಗಿ ಒಬ್ಬರು ಹೋಗಿದ್ದರಿಂದ ಈ ಮಾತು ಹೆಚ್ಚು ಪೂರಕವೆನಿಸಿತು.

ನಿನ್ನ ಪ್ರೀತಿಯ

ಅಲೆಮಾರಿ

( ಸಿದ್ದು ಯಾಪಲಪರವಿ )

18-12-2017

Saturday, December 16, 2017

ಹುಸಿ ಮುನಿಸು ಇರಲಿ‌ ಆದರೆ...

*ಲವ್ ಕಾಲ*

*ಹುಸಿ ಮುನಿಸು ಇರಲಿ ಆದರೆ...*

ತುಂಬ ಪ್ರಯಾಸ ಹಾಗೂ ಪ್ರಯತ್ನದ ಪ್ರತಿಫಲವಾಗಿ ಈ ಸಂಬಂಧ.
ಬದುಕಿನ ಆಶಯ-ಆಲೋಚನೆ ಒಟ್ಟಾರೆ ಖುಷಿಯಾಗಿರೋದು ಅದಕ್ಕಾಗಿ ನಾವು ಪರಸ್ಪರ ಸಹಿಸಿಕೊಂಡಿರುತ್ತೇವೆ.

ಪ್ರೀತಿ ಬದುಕಿನ ಜೀವಧಾತು. ಅತಿಯಾದ ಪ್ರೀತಿಯಲಿ ಎಲ್ಲವೂ ಕೊಂಚ ಅತಿರೇಕ.
ಅತಿಯಾದಾಗ possessiveness , ಅದು ಮುಂದೆ ಕೊಂಚ ಅನುಮಾನ- ಎಲ್ಲಿ ಕಳೆದುಕೊಂಡು ಬಿಡುತ್ತೇನೋ ಎಂಬ ತಲ್ಲಣ-ಚಡಪಡಿಕೆ.

ಪ್ರೀತಿ ಬಯಸುವ ಜೀವ ಇದನ್ನು ಅರ್ಥಮಾಡಿಕೊಂಡು ಸಹಿಸಿಕೊಳ್ಳಬೇಕು. ಮನಸು ಮಾತು ಒರಟಾಗಬಾರದು ಒಗಟಾಗಬೇಕು.

*ಬಿಸಿಯಪ್ಪುಗೆ , ಪಿಸುಮಾತುಗಳ ಮಿಲನಕೆ ಬಯಸುವ ಮನಸು ಕೊಂಚ ದೂರಾದಾಗ ವಿಚಲಿತವಾಗಿ ಚಡಪಡಿಸುವುದು ಸಹಜ*.

ಜಗಳ,ಹಟ,ಹುಸಿಮುನಿಸು,ಸಂಶಯ,ಕಾಳಜಿ,ಕಿರಿಕಿರಿ,
ಅಳು,ನಗು,ರಮಿಸಿ ಮುದ್ದಾಡೋದು  ಎಲ್ಲಾ ಒಟ್ಟಿಗೆ ಕಟ್ಟೆ ಒಡೆದ ಭಾವ ಕೆರೆ.

ಅದರಲ್ಲೂ ಇನ್ನಿಲ್ಲದ ಹಿತ.

ಭಾರವಾಗಿ ಭಯಭೀತಗೊಂಡ ಮನಸಿಗೆ ಮತ್ತೆ ಮರುಕಿಸುವ ನಿರಾಳ.
ಯಾವುದು ಖರೆ ಪ್ರೀತಿಯೋ,ಜಗಳವೋ, ಸಂಶಯವೋ.

ಎಲ್ಲವೂ ಖರೆ:ಎಲ್ಲವೂ ಸುಳ್ಳು.

ಅತ್ತು ರಮಿಸಲು ನಮ್ಮನ್ನು ಬಿಟ್ಟು ಬೇರೆ ಯಾರೂ ಇಲ್ಲ ಬಾ ಅಂದಾಗ
*ಮೆಲ್ಲುಸಿರೇ ಸವಿಗಾನ*.

---ಸಿದ್ದು ಯಾಪಲಪರವಿ

Friday, December 8, 2017

ವಾಸ್ತವದಲೆ

ವಾಸ್ತವದಲೆ

ಮೈತುಂಬಾ ಹರಿದಾಡಿ ಸಣ್ಣಪುಟ್ಟ
ಹಿತಕರ ಗಾಯ ಮಾಡಿ ಮನದಾಳದಲಿ
ತಳ ಹೂಡಿ ನೀ
ಹೀಗೆ ಮಾಯವಾಗಬಹುದು ಎಂದು
ನಿನಗೆ ಮಾತ್ರ ಗೊತ್ತು

ನಾ
ಕತ್ತಲಲಿ ಧ್ವನಿ ಹಿಡಿದು , ಬೆಳಕಲಿ
ವಾಸನೆ ಹಿಡಿದು ಕನವರಿಸುತ್ತ ನೀ
ಬರುವೆ ಎಂಬ ಚಿತ್ತದಲಿ ಮತ್ತೆ
ಮತ್ತೆ ಕೆರೆದ ಗಾಯವ ಕೆರೆಯುತ್ತ
ಗಾಯ ಮಾಯಲಿಲ್ಲ ಎಂದು ಹಲುಬುತ್ತೇನೆ

ವಾಸ್ತವ ಲೋಕದಿ ಒಮ್ಮೊಮ್ಮೆ ಬದುಕೇ
ಹೀಗೆ ಕೊಳೆಯಾದ ಬಟ್ಟೆ ಕಳಚಿ ಬಿಸಾಡಿದ
ಹಾಗೆ
ಒಗೆದು ಗಂಜಿ ಹಾಕಿ  ಇಸ್ತ್ರೀ ಮಾಡಿ ಮತ್ತೆ
ನೀ ತೊಡಬಹುದು ಎಂಬ ಭ್ರಮಾಲೋಕ

ನೀ ಒಗೆದದ್ದು ಕೊಳೆಯಾದುದಕೆ ಅಲ್ಲ
ಬಣ್ಣ ಮಾಸಿದೆ ಎಂದು ಸಾಕಾಗಿ

ಹೋಗಲಿ ಬಿಡು ಜಗದ ಮಾರುಕಟ್ಟೆಯಲಿ
ಈಗ ನೂರಾರು ಹೊಸ ಮಾಲುಗಳು ಕೊಂಡು
ಧರಿಸುವ ನಿನ್ನಾಸೆಗೆ ನೀರೆರೆಯಲಾರೆ

ನನದು ನನಗೆ ಸರಿ ನಿನದು ನಿನಗೆ ಸರಿ
ಒಟ್ಟಿನಲಿ ಇದೇ ಈ ಬಾಳಿನ ಪರಿ

ನೋವು , ಹತಾಶೆ , ನಿರಾಸೆಯ ಮನಕೆ
ನೂರೆಂಟು ಗಲಿಬಿಲಿ ಕರಡಿಯ ಬಿಗಿ ಹಿಡಿತವ
ಬಿಡಿಸಿಕೊಳಲು ಒಂದಷ್ಟು ಕಚಗುಳಿ

ಬಾಳ ಹಾದಿಯಲಿ ಬಿಸಿಲಿಗೆ ದಣಿದವರು
ಪಯಣ ಮೊಟುಕುಗೊಳಿಸಿದರೆ
ನಿನಗೇಕೆ ಧಾವಂತ  ಬಿಡು
ಚಿಂತೆ

ನಿನ್ನ ಹಾದಿ ನೀ ಹಿಡಿದು ಮತ್ತೆ ಸಿಗುವ
ದಾರಿ ಹೋಕರ ಮಾತಿಗೆಳೆಯದೆ
ಮಾತಿಗಿಳಿಯದೇ ಮೌನದೀ ಸಾಗು

ಇಲ್ಲದಿರೆ ತಲುಪುವ ಗುರಿ ದೂರಾದೀತು ಜೋಕೆ
ಭ್ರಮೆಯನೊಮ್ಮೆ ಕೊಡವಿ ಹಗುರಾಗಿ
ಕಾಲು ಜಾಡಿಸಿ ಕೊಂಚ ದಣಿವಾರಿಸಿಕೊಂಡು
ನಡೆ ನಡೆ ಮುಂದೆ ಮುಂದೆ...

----ಸಿದ್ದು ಯಾಪಲಪರವಿ

Monday, December 4, 2017

ಕೈ ಹಿಡಿದು ನಡೆಸು ತಂದೆ

*ಕೈ ಹಿಡಿದು ನಡೆಸು ತಂದೆ*

ಹುಟ್ಟಿದಾಗ ಬಾಯಲ್ಲಿ ಇಟ್ಟ
ಬಂಗಾರದ ಚಮಚೆ ಹಾಲು ತುಂಬಿದ 
ಬೆಳ್ಳಿಯ ಬಟ್ಟಲು ಕಲಸಿದ ಗೋಡಂಬಿ
ಸಕ್ಕರೆಯ ತುಂಬ ಬರೀ ಅಕ್ಕರೆ

ನಸುನಗುತ ಬೆಳೆದ ಬಾಲ್ಯದ ಸಿರಿಸಂಪದ
ಈಗೊಂದು ಹೀಗೊಂದು ಬರೀ ನೆನಪು

ಮುಂದೆ ಸಿರಿಯೊಳಡಗಿದ ಬಡತನ
ಹೇಳಲು ತೋರಲು ಎಲ್ಲವೂ ಉಂಟು
ಆದರೆ ಬರಿಗೈ ದಾಸನಾಗಿ ಅಲೆಯುವ
ಖಾಲಿ ಕೈ ಫಕೀರ

ಹೋರಾಟ ನೋವ ನುಂಗುತ ಸಾಗಿದ
ಪಯಣದಲಿ ದಣಿವರಿಯದ ಧಣಿತನದ
ಮೆರುಗಿನ ಮುಸುಕು

ಆರ್ಧ ಹಾದಿ ಸಾಗಿದರೂ ನಿಲ್ಲದ ಹೋ
ರಾಟ ಒಂಟಿ ದುಃಖಕೆ ಇಲ್ಲ ಯಾರ ಸಾಧ್

ಹಾಡಬೇಕು ನಲಿಯಬೇಕು ಅಪ್ಪ
ಹೊರಿಸಿದ ನೊಗ ಹೊರಬೇಕು
ಹೊಲ ಹರಗಬೇಕು ಕಳೆ ತೆಗೀಬೇಕು
ಬೆಳಿ ಬೆಳೀಬೇಕು

ಸಾಕೀ ಧಣಿತನದ ಮುಖವಾಡ ಅಂಗಲಾಚಿ
ಬೇಡಬೇಕು ಮಹಾ ದೇವನ
ಕೊಡು ತಂದೆ ಹಿಡಿ ತುಂಬ ಹಿಡಿ
ಹಿಡಿ ರೊಕ್ಕ ಕರಗಿ ನೀರಾಗಲು

ದುಃಖ-ದುಮ್ಮಾನ  ದುಗುಡ

ಇನ್ನೆಷ್ಟು ದಿನ ಈ ಅಗ್ನಿಪರೀಕ್ಷೆ ಸೋತು
ಕರಕಲಾಗದೇ ಎದ್ದು ಹೋದರು ನಮ್ಮ
ಹಿರಿಯರು ಸೋಲನೊಪ್ಪದೇ ಅಪ್ಪದೇ
ಕೊಟ್ಟ ಮಾತು ತಪ್ಪದೇ

ಕೈಕಾಲು ದಣಿದಿರಲು ದಾರಿ ಸಾಗೀತು
ಹೇಗೆ ? ನಗು ಅರಳುವದಾದರೂ ಹೇಗೆ ?

ಮಾತು ಮೌನವಾಗುವ ಮುನ್ನ
ಉಸಿರು ನಿಟ್ಟುಸಿರಾಗಿ ನಿಲುವ
ಮೊದಲೇ ಕೃಪೆ ಮಾಡು
ತಂದೆ ನಾ ಕಾಲನ ಹೊಡೆತಕೆ ಸಿಕ್ಕು
ನಲುಗಿ ನರಳುವ ಮುನ್ನ.

---ಸಿದ್ದು ಯಾಪಲಪರವಿ

Sunday, November 26, 2017

ವಿದಾಯದ ಮಿಲನ

*ವಿದಾಯದ ಮಿಲನ*

ಎರಡೂ ಅಷ್ಟೇ ಪೂರಕ
ಪ್ರತಿ ಮಿಲನಕೂ ಇರಲೇಬೇಕು
ವಿದಾಯ ವಿದಾಯವಿಲ್ಲದೆ ಮಿಲನಿಸುವು-
ದಾದರೂ ಹೇಗೆ ?

ಹೋಗುವೆ ಅಲ್ಲ ಹೋಗಿ-
ಬರುವೆ ಮತ್ತೆ ಮತ್ತೆ ನಾ-
ನೀ

ಹತ್ತಿರವಿದ್ದವರು ಸದಾ ದೂರ ನೀ
ದೂರವಿದ್ದರೂ ಇಲ್ಲೇ ಹತ್ತಿರ
ಹಾಗಂತ ಬೇಡವೇ ಬೇಡ ಸದಾ  ನಾ
ಹತ್ತಿರ

ದೂರದೂರಿನ ಮಿಲನಕೆ ಸಾವಿರದ
ಸಾವೇ ಇರದ ಸವಿಸುಖ ಚಿಮ್ಮಿ
ಪುಟಿಯುವ ಜೀವತಾರುಣ್ಯ ವಯ
ಮಾನಕೂ ಮೀರಿದ ತೀವ್ರತೆ

ಇದು ಬರೀ ಕೂಡುವಿಕೆಯಲ್ಲ ನಾವೇ
ಕಳೆದುಹೋಗುವ ಪರಿ ಪರಿ
ಏದುರಿಸ ಸಂಚಲನಕೆ ಅಪರಿಮಿತ
ಲಯ-ರಾಗ-ತಾಳ-ಮೇಳಗಳ
ಮಹಾಸಮ್ಮೇಳನ

ಮತ್ತೆ ಮತ್ತೆ ಸೇರೋಣ ಆಗೊಮ್ಮೆ
ಈಗೊಮ್ಮೆ ಮಗದೊಮ್ಮೆ ನಿತ್ಯ ಬರೀ
ಮಾತಾಡೋಣ
ಸೇರಿದಾಗ ಎಲ್ಲ ಕೂಡಿ ಕಳೆಯೋಣ

ವಿದಾಯ-ಮಿಲನ ಎರಡೂ ಅವನೇ
ಹೊಣೆಗಾರ ಬಾ ಎಂದಾಗ ಬರೋಣ
ಹೋಗು ಎಂದಾಗ ಸುಮ್ಮನೇ ನಡೆದು
ಬಿಡೋಣ

ಮತ್ತೆ ಮಿಲನದ ಸಡಗರವ
ನೆನಪಿನಲಿ ನೆನೆಯುತ್ತ ನೆನೆಯುತ.

---ಸಿದ್ದು ಯಾಪಲಪರವಿ.

Sunday, November 12, 2017

ಮಾಯವಾದ ಪ್ರೇಮ

*ಲವ್ ಕಾಲ*

*ಮಾಯವಾದ ಪ್ರೇಮ ಏನಿದ್ದರೂ ಡೇಟಿಂಗ್*

ನನ್ನ ಬ್ಲಾಗಿನ ಜನಪ್ರಿಯ ಅಂಕಣ *ಲವ್ ಕಾಲ* .

ಇತ್ತೀಚೆಗೆ ಫೇಸ್ ಬುಕ್ ಭರಾಟೆಯಲಿ ಸುದೀರ್ಘ ಬರಹ ಮಂಕಾಗಿದೆ. ಓದುವ ಪುರುಸೊತ್ತೇ ಇಲ್ಲ .

ಅಲ್ಲಲ್ಲಿ ಗಂಭೀರ ಓದುಗರು ಸಿಗುತ್ತಾರೆ ಎಂಬ ಕಾರಣಕ್ಕೆ ನಮ್ಮಂತವರು ಬರೆಯುತ್ತೇವೆ.

ಹೋಗಲಿ ಬಿಡಿ ವಿಷಯಕ್ಕೆ ಬರುತ್ತೇನೆ . ಸಾಹಿತ್ಯದ ವಿದ್ಯಾರ್ಥಿಯಾಗಿ ಅನೇಕ ಪ್ರೇಮ ಕಥೆಗಳನ್ನು ಓದಿದ್ದೇನೆ , ಕೇಳಿದ್ದೇನೆ ಹಾಗೆ ಹೇಳಿದ್ದೇನೆ .

ಆದರೆ ಈಗ ಅದಕ್ಕೆ *ಸಮಯವಿಲ್ಲ* ಎಂಬ ವಾತಾವರಣ . ಫಾಸ್ಟ್ ಫುಡ್ ಯುಗದಲ್ಲಿ ಫಾಸ್ಟ್ ಸಂಬಂಧಗಳು .
ಅಷ್ಟೇ ಬೇಗ ಹಳಸಿಬಿಡುತ್ತವೆ .

ಪ್ರೀತಿಸಿ ಮರ ಸುತ್ತಿ ಪ್ರೇಮ ಪತ್ರ ಬರೆಯುವುದು ಈಗ ಬಿಗ್ ಜೋಕ್ .

ಆಧುನಿಕ ದಿನಗಳ ಡೇಟಿಂಗ್ , ಲಿವ್ ಇನ್ ರಿಲೇಶನ್ , ವೀಕ್ ಎಂಡ್ ಸ್ಟೇ ಇತ್ಯಾದಿ ದೇಹಕೇಂದ್ರಿತ ಸಂಬಂಧಗಳು ತಲ್ಲಣವನುಂಟು ಮಾಡಿವೆ .

*ದೇಹವೇನು ಬಟ್ಟೆಯಾ ಬದಲಿಸಲು* ಎಂಬ ಕಾಲ ಹೋಗಿದೆ . ಕೊಳೆಯಾದ ಬಟ್ಟೆಯಂತೆ ಸಂಬಂಧಗಳು ಕೊಳೆತು ಕಳೆದು ಹೋಗುತ್ತವೆ , ಬದಲಾಗುತ್ತವೆ .

ಪ್ರೀತಿ-ಪ್ರೇಮ-ಪ್ರಣಯಗಳಲಿ ಹಿಂದೆ ಇದ್ದ ಥ್ರಿಲ್ ಈಗ ಇಲ್ಲವೇ ಇಲ್ಲ very practical and mechanical .

ನಾವು ವಿದ್ಯಾರ್ಥಿಗಳಾಗಿದ್ದಾಗ ಪ್ರತಿಶತಃ 80 ಪ್ರೇಮಿಗಳು ಇರುತ್ತಿದ್ದರು . ಎಲ್ಲವೂ ಬರೀ ತೇಲಾಡುವ ಅನುಭವ . ದೇಹಸಂಬಂಧ , ಮದುವೆ ಏನೂ ಇಲ್ಲ !

ಗಣ ಗಣ ತಿರುಗಿ , ಗಂಟೆಗಟ್ಟಲೆ ಮಾತಾಡಿ , ನೂರಾರು ಪುಟ ಪತ್ರ ಬರೆದು ಊರು ಸೇರೋದು ಅಷ್ಟೇ !!

ಈಗ ವಾತಾವರಣಕ್ಕೆ ತಕ್ಕಂತೆ ಪ್ರೀತಿ , ಅದರ ಸ್ಥಿತಿಯೂ ಭಿನ್ನ . ಭಾವುಕತೆ ಮಾಯ .

SMS , fb ,watsapp ಇತ್ಯಾದಿ ಬರಹಗಳ short ಸಂದೇಶಗಳಂತೆ ಅಷ್ಟೇ short ಆಗಿ ಮುಗಿದುಬಿಡುತ್ತವೆ .

ಕಾಲೇಜಿನ ಸಂಬಂಧಗಳು , ವೃತ್ತಿ ಬದುಕಿನ ಸಂಬಂಧಗಳು ಯಾವುದೇ ಇರಲಿ very short and hot no sweet .
ಭಾವ ತೀವ್ರತೆಯ ಕೊರತೆ .

*ಆದರೂ ಲಕ್ಷಕ್ಕೆ ಒಂದು ಜೋಡಿ ಹಕ್ಕಿಗಳು ಹಾರುತ್ತವೆ*

ಉರ್ದು ಹಾಗೂ ಹಿಂದಿ ಭಾಷೆಯಲ್ಲಿ ಬರೆದ *ಸಾಹಿರ್ ಲೂಧಿಯಾನ್ವಿ ಹಾಗೂ ಅಮೃತಾ ಪ್ರಿತಮ್* ನನ್ನನ್ನು ಈಗಲೂ ಕಾಡುತ್ತಾರೆ .

ಕೇವಲ 59 ವರ್ಷ ಬದುಕಿದ ಸಾಹಿರ್ ಎಂದಿಗೂ ಸಾಯುವದಿಲ್ಲ . ಪ್ರಿತಮ್ ತನಗೆ ಸಿಗದ ಸಾಹಿರ್ ನೆನಪಲಿ ಹೆಚ್ಚು ಕಾಲ ಬದುಕಿ ಅಷ್ಟೇ ತೀವ್ರವಾಗಿ ಬರೆದು ಅಮರಳಾಗಿದ್ದಾಳೆ .

ಅವನು ಸೇದಿ ಬಿಸಾಕಿದ ತುಂಡು ಸಿಗರೇಟ್ , ಅವಳು ಕುಡಿದಿಟ್ಟ ಚಹಾದ ಕಪ್ ಪ್ರೇಮ ಸಂಕೇತದ ಪ್ರತಿಮೆಗಳು .

ಅವನ ಹಾಡುಗಳನ್ನು ಗುನುಗುನಿಸುವ ಕಂಠದಲಿ ಸಾಹಿರ್ ಜೀವಂತವಾಗಿದ್ದಾನೆ .

ಇಂತಹ ಭಾವುಕ ಲೋಕದಲ್ಲಿ ತೇಲಾಡಿದ ಪ್ರೇಮ ಪ್ರಕರಣಗಳು ನಮ್ಮ ಯುವಕರಿಗೆ ತಮಾಷೆಯಾಗಿ ಕಾಣುವದು ಸಹಜ .

ದೇಹಯಜ್ಞ ಯುಗದಲ್ಲಿ ಬೆಂದು ಹೋಗುವ ಯುವಕರು ತಮ್ಮ ಜೀವನ ಶೈಲಿಯನ್ನು ಕೊಂಚ ಬದಲಾಯಿಸಿಕೊಳ್ಳಬೇಕು ಎಂದನಿಸುವುದು ಸಹಜ .

ನಾನು *ವಾಸ್ತವದಲೆಗಳ ಮೇಲೆ ಭಾವ ಪಯಣದಲಿ* ಇದ್ದೇನೆ ಬೇಕಾದರೆ ನೀವು ಬನ್ನಿ , ಕರೆದುಕೊಂಡು ಹೋಗುವೆ .

---ಸಿದ್ದು ಯಾಪಲಪರವಿ.

Saturday, October 21, 2017

*ಕನಸಿಗೊಂದು ಓಲೆ-1*

*ಕನಸಿಗೊಂದು ಓಲೆ-1*

ಹಲೋ ಚಿನ್ನು ,

ಹೇಗಿದ್ದೀಯಾ ? ಮನಸು ಎಂತಹ ವಿಚಿತ್ರ ನೋಡು. ಹೊಸ , ಹೊಸ ವಿಚಾರಗಳು ಹೊಳೆಯುತ್ತವೆ. 

ದಿನವೀಡಿ ಕೆಲಸಗಳ ಒತ್ತಡಗಳ ಮಧ್ಯೆ *ಒಳಮನಸು* ಏನೇನೋ ಆಲೋಚನೆ ಮಾಡುತ್ತಾ ಇರುತ್ತದೆ.

ಅವುಗಳನ್ನೆಲ್ಲ ನಿನಗೆ ಹೇಳಲೇಬೇಕೆಂಬ subconscious mind ಮಾತನ್ನು ನಿರಾಕರಿಸಲಾಗುವುದಿಲ್ಲ . ಹಾಗಂತ phone ಮಾಡಿ ಗಂಟೆಗಟ್ಟಲೆ ಮಗುವಿನ ಹಾಗೆ ಹೇಳಲು ಸಮಯ ನನಗೂ ಇಲ್ಲ , ನಿನಗೂ ಇಲ್ಲ !

ಅದಕ್ಕೆ ನನ್ನ ಇಡೀ ದಿನದ ಒಟ್ಟು ಅನುಭವಗಳ ಕ್ರೋಢೀಕರಿಸಿ ಚುಟುಕಾಗಿ *ಪತ್ರ* ಬರೆಯುತ್ತೇನೆ : ನಿನಗೆ ಬಿಡುವಾದಾಗ ಆರಾಮಾಗಿ ಓದು ಚಿನ್ನ .

ಈ *ಕನಸಿಗೊಂದು ಓಲೆಯನ್ನ* ಬೇರೆಯವರೂ ಓದಲಿ ಬಿಡು ! ಒಂದು ಕಾಲಕ್ಕೆ ನಾವು ಬರೆದದ್ದು ಯಾರೂ ಓದಬಾರದೆಂದು ಗುಟ್ಟಾಗಿ *ಡೈರಿ* ಬರೆಯುತ್ತಿದ್ದೆವಲ್ಲ , ಆದರೆ ಈಗ ವಿಚಿತ್ರ ಎಂದರೆ ಗುಟ್ಟಾಗಿ ಬರೆದದ್ದು ಎಲ್ಲರೂ ಓದಿ *like* ಮಾಡಬೇಕು ಅಂತ ಬೇರೆ ಬಯಸುತ್ತಲ್ಲ ಮಂಗ ಮನಸು . 

ವೈಯುಕ್ತಿಕ ಸಂಗತಿಗಳು ಎಲ್ಲರಿಗೂ , ಎಲ್ಲ ಕಾಲಕ್ಕೆ , ಎಲ್ಲ ದೇಶಗಳಿಗೆ ಅನ್ವಯಿಸುವ universal quality ಹೊಂದಿದ impersonal ಗುಣ ಹೊಂದಿದರೆ ಮಾತ್ರ ಅದು ಬಹು ಕಾಲ ನಿಲ್ಲುತ್ತದೆ ಎಂಬ ಗುರುಗಳ ಮಾತನ್ನು ಗಮನದಲಿ ಇಟ್ಟುಕೊಂಡು ಬರೆಯುತ್ತೇನೆ , ಬೇಸರವಾದರೆ ಹೇಳು.

ಹೇಳುವ ರೀತಿ ಬದಲಿಸಿಕೊಳ್ಳುತ್ತೇನೆ.

ಹಬ್ಬಕ್ಕೆ ಈಗ ಊರಿಗೆ , ಬಂದ ಮೇಲೆ ಮತ್ತೆ ಬರೆಯುವೆ.

Bye bye 

ನಿನ್ನ ಪ್ರೀತಿಯ 

*ಅಲೆಮಾರಿ*

(  ಸಿದ್ದು ಯಾಪಲಪರವಿ )

18-10-2017

Tuesday, August 22, 2017

ಅಸ್ಮಿತೆ

ಸಣ್ಣ ಕಥೆ

ಅಸ್ಮಿತೆ
                           ಭಾಗ-1

ನನ್ನ ನಿರಂತರ ಸಂಪರ್ಕವನ್ನು ನೀನು ಲೆಕ್ಕಿಸದಂತೆ ನಟಿಸುತ್ತಲೇ ಬಂದೆ ನನ್ನ ನೂರೆಂಟು ಕವಿತೆಗಳಿಗೆ ಮನಸೋತ ಸಂಗತಿಯನ್ನು ಮರೆಮಾಚುತ್ತ ತುಂಬಾ casual ಆಗಿ ಮಾತನಾಡುವ ನಿನ್ನ ಧ್ವನಿಯಲ್ಲಿ ಅಡಗಿದ ಪ್ರೇಮವನ್ನು ಹಿಡಿದುಬಿಟ್ಟಿದ್ದೆ.

ನಾನೇ ಮೊದಲು ಪ್ರಸ್ತಾಪಿಸಲಿ ಎಂಬ ಮೊಂಡಾಟವೂ ಅರ್ಥವಾಯಿತು.
ಆಗಸದಲಿ ಮೂಡಿರುವ ಚುಕ್ಕೆಗಳನು ಎಷ್ಟು ಅಂತ ಎಣಿಸಲಿ.
One fine day I frankly shared my love...
ಎಲ್ಲ ತಿರುವು ಮುರುವು Sudden U turn , ತಪ್ಪಾಗಿ ಭಾವಿಸಿದ್ದೇನೆ ಎಂಬ ಸಮಜಾಯಿಷಿ ಬೇರೆ !

ಊ ಹೂಂ ನಾ ನಿನ್ನ ವಾದವನ್ನು ಸುತಾರಾಂ ಒಪ್ಪಲಿಲ್ಲ.
ಮುಂದಿನದೆಲ್ಲ one side ಪ್ರಲಾಪ , ಯಾವುದೇ ಆತಂಕ ಹಾಗೂ ಮುಲಾಜಿಲ್ಲದೆ ನನ್ನ ಮನೋಭಿಲಾಸೆಯ ನಿವೇದಿಸುವದನ್ನು ಮಾತ್ರ ನಿಲ್ಲಿಸದ ಸಾತ್ವಿಕ ಹಟ , ಗೆದ್ದೇ ತೀರುತ್ತೇನೆ ಎಂಬ ಅಚಲ ವಿಶ್ವಾಸ.

ಮಾತಿನ ಧಾಟಿ ಬದಲಾಯಿತು , ಮಾತು ಮುಗಿಸುವಾಗ wish you warm hug , sweet kisses bye bye ಎಂದು ನಿನ್ನ ಪ್ರತಿಕ್ರಿಯೆಯನ್ನು ಲೆಕ್ಕಿಸದೇ ಮಾತುಕತೆ ಮುಂದುವರೆಸುವ ಭಂಡತನ.

ನಿನಗೆ ನಿನ್ನ ಆದ ಗುಮಾನಿ , ಅಸಹಾಯಕ
ಲೆಕ್ಕಾಚಾರಗಳನ್ನು ನಾನು ಲೆಕ್ಕಿಸಲೇ ಇಲ್ಲ ಬಿಡು.
ಹೀಗೆ ಸ್ನೇಹ ವರ್ಷಗಟ್ಟಲೇ ಮುಂದುವರೆಯಿತು. 
ನೀನು ಒಪ್ಪಿಕೊಳ್ಳುವ ಯಾವುದೇ ಲಕ್ಷಣಗಳು ಕಾಣಿಸಲಿಲ್ಲ ಹಾಗಂತ ನಾನು ಸೋಲಲೂ ಇಲ್ಲ.

ಕೊನೆಗೊಂದು ದಿನ ಒಟ್ಟು ನಾನು ಕಳಿಸಿದ ಸಂದೇಶಗಳ , ಕವಿತೆಗಳ ಹಾಗೂ ಚಿತ್ರಗಳ ಲೆಕ್ಕಕ್ಕೆ ಇಬ್ಬರೂ ಮಟಾಶ್ !

ಅಂದು ಆ ದಿನ ಬಂದೇ ಬಿಡಬಹುದು ಅಂದುಕೊಂಡಿರಲಿಲ್ಲ.

ನಾನು ತಂಗಿದ್ದ ಲಂಡನ್ನಿನಿಂದ ಮ್ಯಾಂಚೆಸ್ಟರ್ ಗೆ ಬಂದು ಅಲ್ಲಿಂದ ಇಬ್ಬರೂ ರೈಲಿನಲ್ಲಿ ಲೇಕ್ ಗೆ ಹೋಗುವ ಪ್ರಯಾಣದ ವಿವರಗಳ online ticket ರವಾನೆಯಾದಾಗ ಕುಣಿದು ಕುಪ್ಪಳಿಸುವದೊಂದೆ ಬಾಕಿ.

ಆದರೆ ಕುಣಿಯದೇ ಮನಸಿನ ಕಂಪನಗಳನ್ನು ಅದುಮಿಕೊಂಡು ಸಹಿಸಿಕೊಂಡೆ.
ನಮ್ಮ ಮುಖಾಮುಖಿಯಾದಾಗ ಏನು ಹೇಳಬಹುದು ಎಂದು ಊಹಿಸುವದಾದರೂ ಹೇಗೆ ?
ಈ chatting ಹೊರತು ಪಡಿಸಿ ಒಮ್ಮೆಯೂ ನೇರವಾಗಿ ನೋಡಿರಲಿಲ್ಲ.

ಬರೀ ಭಾವನೆಗಳ ಸವಾರಿಯ ಅಪರಿಮಿತ ಸಲಿಗೆ. ಹೇಳಲು ಏನೂ ಉಳಿದೇ ಇಲ್ಲ ಅನ್ನುವಷ್ಟು ಹೇಳುವುದನ್ನು ಹೇಳಿ ಮುಗಿಸಿದ್ದೆ.
' Ball is in your court . 'ಎಂದು ಹೇಳುತ್ತಿದ್ದ ವಾದಕೆ ಅಂಟಿಕೊಂಡಿದ್ದೆ.
' You wanted to be more comfort in the journey and wanted share things ' ಎಂಬ ರಹಸ್ಯವನ್ನು ಯಾಕೋ ನೀನು ಬಿಚ್ಚಿಡಲಿಲ್ಲ , in fact you wanted to test me .

ಎಲ್ಲದಕೂ ತಯಾರಾಗಿಯೇ ಹೊರಟೆ. ಇನ್ನಿಲ್ಲದ ಆತಂಕ , ಭಯ , ನೋವು , ಸಂಭ್ರಮ... ಏನೆಲ್ಲಾ ತವಕ ತಲ್ಲಣಗಳ ಮಹಾಪುರ.

ಮ್ಯಾಂಚೆಸ್ಟರ್ ತಲುಪಿದೆ . ನೀನು ನೋಡಲು ಹೇಗಿರಬಹುದು ಎಂದು ಕಲ್ಪಿಸಿಕೊಂಡೆ .
ಫೋಟೋಗಳೇ ಬೇರೆ , ಜೀವಂತ ಬೇರೆ.

ಗುರುತು ಹಿಡಿಯುವ ಸಾಮರ್ಥ್ಯವಿದ್ದರೂ ಅವ್ಯಕ್ತ ಆತಂಕ.
ರೈಲು ಹೊರಡಲು ಕೇವಲ ಐದೇ ನಿಮಿಷ . ಇನ್ನಿಲ್ಲದ ಚಡಪಡಿಕೆ. ನೀ ಬರದೇ ಇದ್ದು , ತಮಾಷೆ ನೋಡುವ ಹುನ್ನಾರು ಇದ್ದರೆ ? ಮುಂದೆ ನಾನು ಹೋಗುವದಾದರೂ ಎಲ್ಲಿಗೆ ?

ಹೀಗೆ ಹತ್ತು ಹಲವು ಭಯಂಕರ ಆಲೋಚನೆಗಳು. ಮನಸು ಗೊಂದಲದ ಗೂಡಾಗಿ ಜೋರಾಗಿ ಚೀರಬೇಕೆನಿತು. ಹುಚ್ಚು ಹಿಡಿಯುವದೊಂದೇ ಬಾಕಿ. ರೈಲಿನಲ್ಲಿ ಹತ್ತಿ ಹುಡುಕಾಡಿದೆ. ಕಾಣದೇ ಹೋದಾಗ ಹೇಗಾಗಿರಬೇಡ ?

ಮುಖ ಒಣಗಿಸಿಕೊಂಡು ಬಾಗಿಲ ಬಳಿ ಬಂದೆ.

ಛಕ್ಕನೆ ಮಿಂಚು ಹೊಡೆದ ಅನುಭವ ! ಎದುರಿಗೆ ಸುಂದರ ವದನೆಯ ದಿವ್ಯ ಪ್ರತ್ಯಕ್ಷ . ಕೊಂಚ ಕ್ಷಣದ ಅಮಿತಾನಂದವ ಅದುಮಿ ಉಸಿರು ಬಿಗಿ ಹಿಡಿದು ಅವಲೋಕಿಸಿದೆ. Red top , blue jeans , ಅದೇ ನಗು ಮೊಗ.

ಧ್ಯಾನಸ್ಥನಾಗಿ ನೋಡಿ ಧನ್ಯನಾದೆ. ಹೋದ ಜೀವ ತಿರುಗಿತು.
ಒಳಗೆ ಕರೆದುಕೋ ಎಂಬಂತೆ ಕೈ ಚಾಚಿದೆ
ಅದೇ ಸಂಭ್ರಮದಲಿ ಕೈ ಚಾಚಿ ಒಳಗೆ ಎಳೆದುಕೊಂಡೆ....

                          ಭಾಗ-2

ಅಬ್ಬಾ ! ಅಂತೂ ಬಂದೆಯಲ್ಲ ' ಎಂಬ ನಿಟ್ಟುಸಿರ ಚೀತ್ಕಾರ ಮುಗಿಲು ಮುಟ್ಟಿತೇನೋ ?
ಕುಳಿತ ಮೇಲೆ ಪರಸ್ಪರ ಕಣ್ಣಾಲೆಯ ಮಿಲನಕೆ ನೀ ಪೆಚ್ಚಾದ ಪರಿ ಮರೆಯಲಾಗದು.
ಕೊಂಚ ನೀರವ ಮೌನ. ಸಪ್ಪಳಾಗದೆ ಉಸಿರು ಬಿಗಿ ಹಿಡಿದು ಓಡುವ ಇಂಗ್ಲೆಂಡಿನ ರೈಲಿನ ಹಾಗೆ.

              ***

' ಹಲೋ ಡಿಯರ್ ಮುಂದೇನು ಯೋಜನೆ ' ನಾನೇ ಮಾತಿಗಳೆದೆ.
' ಹೇಳು , ಡಿಯರ್ ಎನ್ನುವ ಸ್ವಾತಂತ್ರ್ಯ ನಾನಂತು ಕೊಟ್ಟಿಲ್ಲ , ಅಲ್ಲದೆ ನನಗಿರುವ ಸಾಧ್ಯತೆಗಳನ್ನು ನೀನ್ಯಾಕೆ ಅರ್ಥ ಮಾಡಿಕೊಳಲ್ಲ ? ನಾನು ಯಾರು ? ನನಗೀರೋ limitations ಏನು ? ಎಂದು ತಿಳಿಯದೇ ಹೀಗೆ ಬೇತಾಳನ  ಹಾಗೆ  ಬೆನ್ನು ಬೀಳೋದು ಸರೀನಾ ?'
' ಸರಿ ಹೌದೋ ಅಲ್ಲೋ ನನಗೆ ಮುಖ್ಯ ಅಲ್ಲ . ಅದನ್ನ ತಿಳಿಯೋಕೆ ಅಲ್ವಾ ಈ ಪಯಣ . '

' ಒಂದು ವೇಳೆ ನಾನು ಒಪ್ಪದೇ ಹೋದರೆ '.

' ಬಿಡುವ ಮಾತೇ ಇಲ್ಲ .'

' This is too much , I have no feelings on you , ನಿನ್ನಷ್ಟಕ್ಕೆ ನೀನೇ ಏನೋ ಅಂದ್ಕೊಂಡ್ರೆ ನಾ
ಹೊಣೆಗಾರಳಲ್ಲ '.
' ನಾನು ಅಷ್ಟೇ ಸಿರಿಯಸ್ ಆಗಿ ಹೇಳ್ತೀನಿ , ನೀ ಹೇಳೋದನೆಲ್ಲ ಮನಸಾರೆ ಕೇಳಿ ನಂದು ತಪ್ಪೆನಿಸಿದರೆ ಯಾವತ್ತೂ ನಿನ್ನ ಕಡೆ ತಿರುಗಿಯೂ ನೋಡಲ್ಲ , it's my promise '.

ಹಾಗೆ ಹೇಳುವಾಗ ಅವನ ಕಣ್ಣಲ್ಲಿದ್ದ ಮುಗ್ಧ ಪ್ರಾಮಾಣಿಕತೆಯನ್ನು ಗಮನಿಸಿ ಕೊಂಚ ಮೆತ್ತಗಾದಳು.

' ನಾನು ರಾಣಿ ಅಂತ ನಮ್ಮಪ್ಪನ ಮುದ್ದಿನ ಮಗಳು. ಆಕ್ಸಫರ್ಡ್ ನಲ್ಲಿ ಲಿಟರೇಚರ್ ಓದಿ, ಎರಡು ಭಾಷೆಯಲ್ಲಿ ಬರೆಯೋದು , ನಿನಗೆ ಗೊತ್ತೇ ಇದೆಯಲ್ಲ . ಅದೇ ಪೊಯಟ್ರಿ ಅಲ್ಲವೆ ನಮ್ಮನ್ನು ಇಲ್ಲಿಯವರೆಗೆ ಎಳೆದು ತಂದದ್ದು.

'ಸರಿ ಬೇಗ ವಿಷಯಕ್ಕೆ ಬರೋದಾದರೆ , ನಾನು ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಸತೀಶನನ್ನು ಭೇಟಿ ಮಾಡ್ದೆ , he was rich businessman , ಮಾತುಕತೆ ಆಯ್ತು ಅನ್ನು . ಅಪ್ಪ ಬೇಗ ಎಸ್ ಅಂದರು . ಮಗಳು ಇಂಡಿಯಾದ ಹುಡುಗನನ್ನು ಮೆಚ್ಚಿದಳು ಎಂಬ ಖುಷಿ ಬೇರೆ.'

ಮದುವೆ ಆಯ್ತು. ತುಂಬಾ ಮಜ ಇತ್ತು , ಆದರೆ ಸತೀಶ ಪಕ್ಕಾ ವ್ಯಾಪಾರಿ , ಅವನಿಗೆ ಹಣಾನೇ ಸರ್ವಸ್ವ. No any strong human feelings. ದಾಂಪತ್ಯನೂ Very mechanical , I felt impossible. '

ನಾನು ಭಾವನಾ ಜೀವಿ ಭಾರತೀಯ ಹುಡುಗ ನನ್ನ ಹಾಗೆ ಇರಬಹುದು ಅಂತ ದುಡುಕಿದೆ ಎನಿಸಿತು . ಅವನು London school of economics ನಲ್ಲಿ ಮನುಷ್ಯತ್ವ ಬಿಟ್ಟು ಎಲ್ಲಾ ಕಲಿತಿದ್ದ . ನಿಧಾನ ತನ್ನ ವ್ಯಾಪಾರೋದ್ಯಮಕೆ ನನ್ನನ್ನು ಕರೆದ ಈ poetry ಎಲ್ಲ bullshit ಅಂದಾಗ ಕೆರಳಿ ಹೋಯಿತು.'

' Poetry ಹೊಟ್ಟೆ ತುಂಬಿಸೋಲ್ಲ , accept the reality and try to live with money , I need an educated secretary like you to run business ' ಅಂದಾಗ ನಾನು ಸತ್ತೇ ಹೋದೆ.

'ನಾನು ಕೆಲಸ ಬಿಡು ಅಂದರೆ ಬಿಡ್ತೀನಿ ಆದರೆ poetry ಬಿಡಲ್ಲ ಅಂದೆ. ಒಂದೆರಡು ತಿಂಗಳಲ್ಲಿ ಬದುಕು ನರಕ ಆಯ್ತು . ಭಾವನೆಗಳೇ ಇಲ್ಲದವನ ಜೊತೆ ಎಲ್ಲಾ ಹೇಸಿಗೆ ಎನಿಸಿತು.'

ಈ ವಿಷಯ ತಂದೆಗೆ ಗೊತ್ತಾದರೆ ನೋವು ಮಾಡ್ಕೊಳ್ತಾರೆ ಅಂತ ಎಲ್ಲ ಮುಚ್ಚಿಟ್ಟೆ , even today. ಅವನು ಬರು ಬರುತ್ತ ಕ್ರೂರಿಯಾದ ಯಾವುದೇ ರೀತಿಯ ಸಾಹಿತ್ಯದ ಸುದ್ದಿ ತೆಗೆಯೋ ಹಾಗಿಲ್ಲ ಎಂದು ಹೇಳಿ ನನ್ನ ಬದುಕನ್ನು ಅತಂತ್ರಗೊಳಿಸಿದ. ಇಂಡಿಯಾದಲ್ಲಿ ಅಮ್ಮನಿಲ್ಲದ ಅಪ್ಪ ನನಗೋಸ್ಕರ ಇನ್ನೊಂದು ಮದುವೆ ಆಗಿರ್ಲಿಲ್ಲ. ನಾನು ಖುಷಿಯಾಗಿದೀನಿ ಅನ್ನೋ ಭ್ರಮೆಯಲ್ಲಿ ಅವರು ಆರಾಮಾಗಿ ಇದ್ದರು . '

ನಾನು ಸತೀಶನಿಗೆ divorce ಗಾಗಿ ಕೇಳ್ದೆ. 'ಇದೊಂದು social issue , ಅನಿವಾಸಿ ಭಾರತೀಯರ ಮುಂದೆ ಅವಮಾನ ಆಗುತ್ತೆ.' ಅಂದಾಗ ಬೆರಗಾಗಾದೆ.
ಸಾಯದೇ ಬದುಕುವ ಸ್ಥಿತಿ . 'ಅವನದು ಪಕ್ಕಾ ಇಂಡಿಯನ್ ಗಂಡಸು ಬುದ್ಧಿ. ಜೋರಾಗಿ ಹೊಡೆದು ಸಾಯಿಸಬೇಕು , ನಾನೂ ಸಾಯಬೇಕು ಅನಿಸಿತು '

' ಆದರೆ ನಾನು ಸಾಹಿತ್ಯ -ಕಾವ್ಯ -ಮಾನವೀಯತೆ ಅಂತ ಎಲ್ಲ ನುಂಗಿದೆ .
'ಅಪ್ಪನಿಗೆ ಈ ಸತ್ಯ ಗೊತ್ತಾಗುವ ಮೊದಲು ಹೋಗಿ ಬಿಟ್ರು . '

ಕೊಂಚ ಮೌನಕೆ ಶರಣಾಗಿ ಹೊರಗೆ ನೋಡಲಾರಂಭಿಸಿದಳು.

ದುಃಖ ಉಮ್ಮಳಿಸಿದರೂ ಸಹಿಸಿಕೊಂಡಳು.

' I'm sorry Rani , ನನಗೆ ಇದನ್ನೆಲ್ಲ ಊಹಿಸೋಕೆ ಆಗಿಲ್ಲ , ನಿನ್ನ ಮಾದಕ ನಗು , ಅದ್ಭುತ ಕಾವ್ಯಲೋಕ ಸತ್ಯವನ್ನೇ ನುಂಗಿ ಹಾಕಿದೆ. '
' ಹೋಗಲಿ ಈಗ ಏನು ?'

'ಒಂದೇ ಮನೇಲಿ,  ಆದರೆ ಮೈಮನಗಳ ಸಂಪರ್ಕ ಇಲ್ಲ ಅದೇ ನನ್ನ ಪುಣ್ಯ '
' ಮುಂದೇನು ?'

'I don't know and I don't want any risk in my life , ಅದರಲ್ಲೂ ಈ ಗಂಡಸರ ಸಹವಾಸವೇ ಬೇಡ ಅನಿಸಿದೆ. ನಾನು ನನಗಾಗಿ , ನನ್ನನ್ನು ಪ್ರೀತಿಸುತ್ತ ಬದುಕುವೆ. ಈ ಮುಖವಾಡದ ಮನುಷ್ಯರು ಇಂಗ್ಲೆಂಡ್ ನಲ್ಲಿಯೂ ತಮ್ಮ ಕಂತ್ರಿ ಬುದ್ಧಿ ಬಿಡಲಿಲ್ಲ ಅನ್ನೋದೇ ಬೇಸರ '.

' ದುರ್ದೈವ ನೀನೂ ಇಂಡಿಯಾದ ಗಂಡಸು , ನಿನ್ನನ್ನು ನಂಬಲ್ಲ , ಕಾವ್ಯದ ಸೌಂದರ್ಯ ನೋಡಿ ಬಂದು , ಈಗ ಕತೆ ಕೇಳಿ ಓಡ್ತೀಯಾ ಅಂತ ಗೊತ್ತು . ಅದಕ್ಕೆ ಈ ಸಣ್ಣ tour plan , just to close the topic ' ಎಂದಳು .
ಮಾತು ಮುಗಿಯುವದರೊಳಗೆ ರೈಲು ಲೇಕ್ ತಲುಪಿತು.
ಬ್ಯಾಗ್ ಎತ್ತಿಕೊಂಡು ಇಳಿದಾಗ ಮೌನವಾಗಿ ಹಿಂಬಾಲಿಸಿದೆ.

          
                      ಭಾಗ -3

ಅವಳು ತನಗೆ ತುಂಬಾ ಇಷ್ಟವಾದ ಕವಿಮನೆ ಡವ್ ಕಾಟೇಜ್ ಕಡೆಗೆ ಹೋಗುವುದಾಗಿ ಹೇಳಿದಳು.
ಮೊದಲೇ ಬುಕ್ ಆದ ಕ್ಯಾಬ್ ಹಿಡಿದರು.

ಈಗ ಮಾತನಾಡುವುದು ಅವನ ಸರದಿಯೆಂಬಂತೆ ಹೇಳಿದ.

' ನೀನು ಹೇಳುವದೆಲ್ಲ ಅದಕ್ಕಾಗಿ ತುಂಬಾ  ವಿಷಾದವಿದೆ , ನೀನು ಬೇರೆಯವರ ವಸ್ತು ಎಂಬ ಅನುಮಾನ ಇದ್ದರೂ ಕವಿತೆಗಳ ಭಾವನೆಗಳನ್ನು ಗ್ರಹಿಸಿ ನಾನು ನಿನ್ನನ್ನು ಆಳವಾಗಿ ಪ್ರೀತಿಸಿದೆ.

ನಿನ್ನ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ಕುತೂಹಲ ಇರಲಿಲ್ಲ . ನಿನ್ನದು ಸುಖಮಯ ಬದುಕು ಅಂದುಕೊಂಡಿ ದ್ದೆ. ಕಾವ್ಯದ ಅಭಿವ್ಯಕ್ತಿಗೆ ಮಾರು ಹೋಗಿ ಒಲಿಸಿಕೊಳ್ಳಲು ಸ್ವಾಭಿಮಾನ ಮರೆತು ಬೆನ್ನು ಹತ್ತಿ ಒಲಿಸಿಕೊಳ್ಳುವ ತೀವ್ರತೆ ಹೆಚ್ಚಿಸಿಕೊಂಡೆ. ಈಗ ನಿನ್ನ ನೋವಿನ ಕಥೆ ಕೇಳಿದ ಮೇಲೆ ನಾನು ಮಾಡಿದ್ದು ಸರಿ ಅನಿಸ್ತಾ ಇದೆ. '

ನಾನು ಈಗಲೂ ನಿನ್ನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ನಿಸ್ವಾರ್ಥಿ , ನನಗೆ ನೀನು ಬೇಕೇ ಬೇಕು . ಇಂತಹ ಸ್ಥಿತಿಯಲ್ಲಿರುವ ನಿನ್ನನ್ನು ಕೈ ಬಿಡುವಷ್ಟು ಸ್ವಾರ್ಥಿ ನಾನಲ್ಲ.'

ನಾನು ನಿನ್ನ ನಿರ್ಣಯವನ್ನು ಗೌರವಿಸುತ್ತೇನೆ ಹಾಗಂತ ನೀನು ಮುಖವಾಡ ಹಾಕಿಕೊಂಡು ನೋವಿನಿಂದ ಬದುಕುವದರಲ್ಲಿ ಅರ್ಥವಿಲ್ಲ .

ಸಮಾಜದ ಕಟ್ಟು ಪಾಡಿಗೆ ಹೆದರಿ ಕೊರಗುತ್ತ ಬದುಕಲು ಇದು ಇಂಡಿಯಾ ಅಲ್ಲ. ಹಾಗಂತ ಸ್ವೇಚ್ಛೆಯಿಂದ ಬದುಕು ಎಂದು ಹೇಳುತ್ತಿಲ್ಲ. ಪ್ರೀತಿ -ವಿಶ್ವಾಸ-ಸಂಬಂಧಗಳ ಬೆಲೆ ಇಲ್ಲದವನೊಂದಿಗೆ ಎಷ್ಟು ದಿನ ಇರ್ತಿ.

ಮನೆಯಿಂದ ಹೊರಗೆ ಬಾ ಅಂತಾನು ಹೇಳುವ ಮನಸಾಗ್ತಾ ಇಲ್ಲ. ನಾನು ಎಲ್ಲಾ ರೀತಿಯ ಖುಷಿ ಕೊಡುವ ಗೆಳೆಯನಾಗಿ ಕೊನೆಯವರೆಗೂ ಇರುತ್ತೇನೆ . Please believe me ' ಎಂದು ಅಳಲಾರಂಭಿಸಿದ.

ಅವನ ಮುಗ್ಧ ಹಾಗೂ ಪ್ರಾಮಾಣಿಕ ನಿಲುವನ್ನು ಕಂಡು ಮೂಕಳಾದಳು.

ಕಠೋರವಾಗಿ ಮಾತನಾಡಬೇಕೆಂದು ಬಂದವಳು ತಣ್ಣಗಾದಳು.

ಅವನೇ ಮುಂದುವರೆಸಿದ , ' ನೋಡು ನಾನು ನಿನ್ನ ಯೌವನ , ಸೌಂದರ್ಯಕ್ಕೆ ಬೆನ್ನು ಹತ್ತಿ ಬಂದಿಲ್ಲ , ಯಾವುದೇ ಅವ್ಯಕ್ತ ಋಣಾನುಬಂಧ ನಿನ್ನಲ್ಲಿಗೆ ಎಳೆದು ತಂದಿದೆ . ನಾನೊಬ್ಬ ಜವಾಬ್ದಾರಿ ಇರುವ psychologist , philosophy ಓದಿದ್ದೇನೆ .

ಬದುಕು ಮತ್ತು ಬರಹಗಳನ್ನು ಗಂಭೀರ ಆಯಾಮಗಳಿಂದ ನೋಡುತ್ತೇನೆ. Sublime ಗುಣ ಸ್ವಭಾವ ನನ್ನನ್ನು ಕಟ್ಟಿ ಹಾಕಿ ಇಲ್ಲಿಗೆ ಎಳೆದು ತಂದಿದೆ.

ಉಡಾಫೆ ಮನಸ್ಥಿತಿ ನನ್ನದಾಗಿದ್ದರೆ ನಿನ್ನ ನೋವಿನ ಕಥೆಗೆ ಮರುಗದೇ ಓಡುತ್ತಿದ್ದೆ . ನೀನು ನಿನ್ನ ಕಥೆ ಹೇಳಿದ್ದು ಒಳ್ಳೆಯದೇ ಆಯಿತು.
ಖಂಡಿತ ನನಗೆ ನಿನ್ನನ್ನು ಸ್ವೀಕರಿಸುವ ಹಂಬಲ ಹೆಚ್ಚಾಗಿದೆ.
ಇದು ವಿಚಿತ್ರ , ಆದರೂ ಪರಮ ಸತ್ಯ .
ಭಾವನೆಗಳೊಂದಿಗೆ ಬದುಕುವ ಸಂಭ್ರಮವೇ ಅನನ್ಯ. ವಾಸ್ತವಕಿಂತಲೂ ರಮ್ಯವಾಗಿರುತ್ತದೆ. '

ವಾಸ್ತವವಾದಿಗಳು ಎಷ್ಟೊಂದು ಅಪಾಯಕಾರಿ ಎಂದು ನಿನಗೆ ಹೇಳುವ ಅಗತ್ಯವಿಲ್ಲ. School of economics ನಲ್ಲಿ ಓದಿದವನನ್ನೂ ನೋಡಿದ್ದೀಯಲ್ಲ ' ಎಂದು ವಿಷಾದದ ನಗೆ ಬೀರಿದ. ಅಲ್ಲಿ ಆಳವಾದ ಕಳಕಳಿ ಇತ್ತು.

ಈಗಲೂ ಕಾಲ ಮಿಂಚಿಲ್ಲ ಡಿಯರ್ ಬದುಕನ್ನು ಹಾಳು ಮಾಡಿಕೊಳ್ಳಬೇಡ. ಬದುಕು ಎಂದರೆ ಬರೀ ಭ್ರಮೆಯಲ್ಲಿ ಬದುಕುವದೂ ಅಲ್ಲ ಹಾಗಂತ ತುಂಬಾ ವಾಸ್ತವವಾದಿಗಳಾದರೆ ಥ್ರಿಲ್ ಕಳೆದುಕೊಳ್ಳುತ್ತೇವೆ. '

ಎರಡನ್ನು ಸಮನಾಗಿ ಸ್ವೀಕರಿಸಬೇಕು. ಅಂದಾಗ ಬದುಕಿನ ಮೌಲ್ಯ ಹೆಚ್ಚಾಗುತ್ತದೆ. ನಾವು ಅನಿವಾಸಿ ಭಾರತೀಯರು ದ್ವಂದ್ವದಲ್ಲಿ ಬದುಕುತ್ತೇವೆ. ಐರೋಪ್ಯರ ಹಾಗೆ ಪೂರ್ಣ ಪ್ರಮಾಣದ ನಿರ್ಭಾವುಕ ಮನಸ್ಥಿತಿ ನಮ್ಮದಲ್ಲ.
ವಾಸ್ತವ ಮತ್ತು ಭಾವುಕತೆಯ ಎಡಬಿಡಂಗಿಗಳು ನಾವು. ಸಾಯದೇ ಬದುಕದೇ ವಿಲಿ ವಿಲಿ ಒದ್ದಾಡುತ್ತೇವೆ. '

ನೀನು ಅಷ್ಟೇ ಆ ಒದ್ದಾಟದಿಂದ ಹೊರಗೆ ಬಾ , ನಿನ್ನದೇ ಆದ ಬದುಕು ಕಟ್ಟಿಕೋ. Keep some space for your feelings . ಪ್ರತಿಷ್ಠೆಗೆ ಬಲಿಯಾಗಿ ಸಂತೋಷ ಕಳೆದುಕೊಳ್ಳಬೇಡ. ''

ಮನಸು ಮುಗಿಲಿನಷ್ಟು ವಿಶಾಲ ಆದರೆ ದೇಹಕೆ ಮಿತಿ ಇದೆ. ಅದಕ್ಕೆ ಮುಪ್ಪು ಹಾಗೂ ಅಂತ್ಯವಿದೆ. ಅದನ್ನು ಕೊಳೆಯಲು ಬಿಡದೇ ಸರಿಯಾದವರೊಂದಿಗೆ , ಸರಿಕಂಡಂತೆ ಖುಷಿಯಾಗಿ ಬದುಕಬೇಕು. ಯಾರದೋ ತಪ್ಪಿಗಾಗಿ ನಾವು  ಶಿಕ್ಷೆ ಅನುಭವಿಸಬಾರದು.'

ನನ್ನ ಕಾಳಜಿ ನಿನಗೆ ಅರ್ಥವಾಗಬಹುದು , ನೀನೊಬ್ಬ ಕವಿ ಎಂಬ ಕಾರಣಕ್ಕೆ ಈ ವಿವರಣೆ . I think it's enough to know me '. ಎಂದು ಹೇಳಿ ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿದ .

ಅಷ್ಟೇ ಆಪ್ತಭಾವ ಹೊರಹೊಮ್ಮಿ ಮಿಂಚು ಹೊಡೆದಂತಾಯಿತು. ಇವನು really amazing ಅನಿಸಿತು. ಇಂತಹ ಗಂಭೀರ ತೂಕ ಬದ್ಧ ವಿವರಣೆಗೆ ಬೆರಗಾದಳು.

ಹಾಗೆ ಕೆಲ ಕಾಲ ನೋಡಿದಾಗ ಅವನನ್ನು ನೋಡುತ್ತಲೇ ಇರಬೇಕೆಂಬ ಹಂಬಲ ಇಮ್ಮಡಿಸಿತು . ತಾನು ಬರುವಾಗ ಅಂದುಕೊಂಡದ್ದು ಮಾಯವಾಗಿ , ಹೊಸ ಸೆಳೆತ ಆಕ್ರಮಿಸಿಕೊಂಡಿತು. ತಂದೆಯ ನೆನಪಾಗಿ ದುಃಖವಾಯಿತು. ಇವನನ್ನು ನಂಬಿ ಸುಖವಾಗಿ ಬದುಕಬಹುದಾ ? ಎಂಬ ಪ್ರಶ್ನೆ ಸುಳಿದು ಮಾಯವಾಯಿತು.

ಮತ್ತೊಮ್ಮೆ ಅವನನ್ನು ದಿಟ್ಟಿಸಿದಳು. ನಿಸ್ವಾರ್ಥ ನೋಟ , ಕಂಗಳ ಸೆಳೆತಕೆ ನಲುಗಿದಳಾದರೂ ತೋರಿಸಿಕೊಳ್ಳಲಿಲ್ಲ.

ಇಬ್ಬರೂ ಮೌನಕೆ ಶರಣಾದರು. ಅವನು ಎಲ್ಲವನ್ನೂ ಹೇಳಿದ್ದ. ಈಗ ಅವನದು ಕಾಯುವ ಸರದಿ . ಚಡಪಡಿಕೆ ಇಲ್ಲದ ನಿರ್ಲಿಪ್ತ ಭಾವ . ಶಾಂತವಾಗಿ ಹರಿವ ನದಿಯ ತೆರದಿ ಉಸಿರಾಟ ಬಿಟ್ಟರೆ ಏನೂ ಇರಲಿಲ್ಲ.

ಅವಳು ಏನಾದರೂ ಹೇಳಬೇಕು , ಅದೂ ಇಂದೇ ಹೇಳಬೇಕು. ಯಾಕೆ ಈ ಹೊಸ ಗೋಳು ಒಂಟಿಯಾಗಿ ಕಾಲ ಕಳೆದರಾಯಿತು ಎಂಬ ಭಾವನೆ ಸುಳಿಯಿತು. ಏನೂ ಹೇಳದ ಅಸಹಾಯಕ ಭಾವ . ಪಡೆದುಕೊಳ್ಳುವ ಸಣ್ಣ ಬೆಳಕಿನ ಹೊಳಪು , ಹೊತ್ತಿ ಉರಿದು ಹೋದರೆ ಎಂಬ ತಲ್ಲಣ.

ಇಬ್ಬರೂ ಬಾಯಿ ಬಿಡದೇ ಮೇಲೆದ್ದರು.

ಗ್ರ್ಯಾಸ್ಮಿಯರ್ ಲೇಕ್ ತೀರದ ರಮ್ಯ ಪರಿಸರದ ಸವಿ ಅನುಭವಿಸಲಾಗದ ಗೊಂದಲ. ಜನ ತಮ್ಮ ಪಾಡಿಗೆ ತಾವು ಬಿಗಿದಪ್ಪಿ ಮುತ್ತಿನ ಮತ್ತಿನಲಿ ತೇಲಾಡುತ್ತಿದ್ದರು .

ವರ್ಡ್ಸವರ್ತ್ ಚಿತ್ರಸಿದ ಡೆಫೊಡಿಲ್ಸ್ ನರ್ತನ ಕಣ್ಣುಗಳಿಗೆ ಆಹ್ಲಾದವನ್ನು ಉಂಟು ಮಾಡಿತು.
ಇಬ್ಬರೂ ಈಗ ನಿಧಾನವಾಗಿ ಅರಳತೊಡಗಿದರು.
ಭಾವನೆಗಳು ಡೆಫೊಡಿಲ್ಸ್ ತರಹ ಕುಣಿದಾಡಿದವು.
ಸಂಜೆಗತ್ತಲು ಕೈಮಾಡಿ ಕರೆದು ಏಕಾಂತವ ನೆನಪಿಸಿತು.

ರಾತ್ರಿ ಒಂದು ಕಡೆ ತಂಗುವ ಅನಿವಾರ್ಯತೆ. ಅವನ ಮೇಲಿನ ವಿಶ್ವಾಸ ಆ comfort ನ್ನು ಹೆಚ್ಚಿಸಿತ್ತು.

ಅವನು ಆಗಾಗ ಸಲ್ಲಿಸುತ್ತಿದ್ದ ಬೇಡಿಕೆಗಳಲ್ಲಿ , ಒಂದು ದಿನ ಇಬ್ಬರೂ ಕಾಡಿನಲ್ಲಿ ಇದ್ದು ಕವಿತೆ ಬರೆಯಬೇಕು ಎಂಬುದಾಗಿತ್ತು . ಇಂದು ರಾತ್ರಿ ಅಂತಹದೊಂದು ಕಾಟೇಜ್ ನಲ್ಲಿ ಕಾಲ ಕಳೆಯುವದಕ್ಕೆ ಅವಳ ಮನಸು ಸಮ್ಮತಿಸಿತು.

ಬಿಗುಮಾನದಿಂದ ಸುಮ್ಮನಾದಳು.

ಆದರೆ ಅವನು ಮಹಾ ಚತುರ ಅವಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡರೂ ದುಡುಕಲಿಲ್ಲ.

' ನನ್ನ ಕೆಲವು ಕರಾರುಗಳಿಗೆ ನೀನು ಒಪ್ಪಬೇಕು ' ಅವಳು ಹೇಳಲಾರಂಭಿಸಿದಳು.
' ನಾನು ಅವನಿಗೆ divorce ನೀಡಲ್ಲ , ನಿನ್ನೊಂದಿಗೆ ಮದುವೆಯ ಗೊಂದಲದ ಬಂಧನವು ಬೇಡ . ಇಬ್ಬರೂ ಗೆಳೆಯರಾಗಿರೋಣ. ನನಗೆ ನೀನು ಖುಷಿ ಕೊಡುತ್ತೀ ಎಂಬ ನಂಬಿಕೆ ಇದೆ. ಹಾಗಂತ ಎಲ್ಲವನ್ನೂ ಈಗಲೇ ಹೇಳಲಾರೆ . ನಂಬಿಕೆ ಭಯದ ಕೈಯಲ್ಲಿ ನರಳುತ್ತಿದೆ. ಆ ಅವಿಶ್ವಾಸದ ಸಂಕೋಲೆಯಿಂದ ಹೊರಗೆ ಬರಲು ಸ್ವಲ್ಪ ಸಮಯ ಬೇಕು.

ಕಾಯುವ ಸಹನೆ ಇದ್ದರೆ ಒಟ್ಟಿಗೆ ಗೆಳೆಯರಾಗಿ ಇರೋಣ . ಸಮಯ , ಸಂದರ್ಭ ಒಪ್ಪಿದರೆ ಅವನ ಹಂಗು ಹರಿದು ಮುಖವಾಡ ಕಳಚಿಟ್ಟು ಬರುತ್ತೇನೆ but I need some times to take a call ' ಎಂದಳು.

ಸುಮ್ಮನೇ ನಸು ನಕ್ಕ.

ಕಾಟೇಜ್ ಸೇರಿ fresh ಆಗಿ ಊಟ ಮಾಡುವಾಗ ಮೌನವೇ ಮಾತುಕತೆಗಳು.

' ಆಯ್ತು ಖಂಡಿತ ಕಾಯುತ್ತೇನೆ ಆದರೆ ಈ ಸುಂದರ ರಾತ್ರಿ ವ್ಯರ್ಥವಾಗದಿರಲಿ , ಮತ್ತೆ ಮತ್ತೆ ಮಾತಾಡೋಣ . ಸಮಯ ನಮಗಾಗಿ ಕಾಯುವುದಿಲ್ಲ , ಕಾಲನ ಕರೆಯ ಕೂಸುಗಳು ನಾವು '.

ರಾತ್ರಿಯ ಕೊರೆಯುವ ಛಳಿಯಲಿ ಕಳಕೊಂಡುದ ಹುಡುಕೋಣ. ಬದುಕಿನಲ್ಲಿ ಕಾಮ-ಪ್ರೇಮ ಮೀರಿದ ಅನುಸಂಧಾನವಿದೆ.
ಇತಿಹಾಸವನ್ನು ಮರೆಸುವ ಹೊಸ ಇತಿಹಾಸ ಸೃಷ್ಟಿಸೋಣ. ಗೆಳೆತನಕ್ಕೆ ಅಂತ ಶಕ್ತಿ ಇದೆ.

ನಾವೂ ಅಂತಹ ಗೆಳೆಯರಾಗಿರೋಣ. ಸಮಯ , ಸಂದರ್ಭ ಹಾಗೂ ಮನಸ್ಸು ಬಯಸಿದರೆ ಮಿಲನವನ್ನು ಸದ್ದಿಲ್ಲದೆ ಸಂಭ್ರಮಿಸೋಣ.
ಮನಸಿಗೆ ಅನಗತ್ಯ ಕಟ್ಟು ಪಾಡು ಹಾಕುವುದು ಬೇಡ . ನೀನು ಪ್ರಕೃತಿಯಲ್ಲಿ  ಅರಳುವ ಹೂವಿನ ಹಾಗೆ ಅರಳಿದರೆ ಮಾತ್ರ ನಾನು ದುಂಬಿಯಾಗಿ ಮಧು ಹೀರುತ್ತೇನೆ. ಒತ್ತಡ , ಒತ್ತಾಯದಿಂದ ಏನೂ ಎಲ್ಲವೂ ಕಾವ್ಯದ ಸಿರಿಯಂತೆ ಅರಳಿದರೆ ಬರೆದು ಬಿಡುವೆ.'

  ಎಂದಾಗ ಕೊಂಚ ಅರಳಿದ ಅನುಭವಕೆ ಆ ಛಳಿಯಲಿ ಒದ್ದೆಯಾದಳು.
ಹೊರಗೆ ಕೊರೆಯುವ ಛಳಿಯಲ್ಲಿ ನಡೆದಾಡಿ ನಲಿಯೋಣ ಎನಿಸಿತು.

ಇಬ್ಬರಿಗೂ.

ಕತ್ತಲಲಿ ಅರ್ಥಪೂರ್ಣವಾಗಿ ನಗುವ ಚಂದಿರ , ಹೊಳೆಯುವ ಚುಕ್ಕೆಗಳ ಸಾಕ್ಷಿಯಲಿ ಓಡಿ ಬಂದು ಬಿಗಿದಪ್ಪಿ ಸುಧೀರ್ಗವಾಗಿ ಚುಂಬಿಸಿ ನಸು ನಕ್ಕು ಕರ್ಟನ್ ಎಳೆದಳು.

---ಸಿದ್ದು ಯಾಪಲಪರವಿ