Saturday, July 1, 2017

ಕಾವ್ಯ ಕನ್ನಿಕೆ

ಕಾವ್ಯ ಕನ್ನಿಕೆ

ಮಾತೇ ಹೊರಡಲಿಲ್ಲ ಎಂಬುದರ
ಅರ್ಥ ಇಂದೇ ತಿಳಿಯಿತು

ಶಿಲಾ ಬಾಲಕಿಯ ಪ್ರತಿರೂಪ
ಅನುಪಮ ದಿವ್ಯಾನುಭವ
ಜೀವಂತಿಕೆಯ ನವ ಚೇತನ

ಎಲ್ಲೋ ಇದ್ದು ಇಷ್ಟು ದಿನ
ಒಂದಿನಿತು ಸದ್ದು ಮಾಡದೇ
ಅಡಗಿ ಕುಳಿತು ಅಣಕಿಸಿದೆ

ದೇಹದ ಪ್ರತಿ ಅಂಗುಲದಲಿ
ಜೀವಸೆಲೆಯ ನಲಿವಿನ ನರ್ತನ

ಎದೆಗಾರಿಕೆ ಬೇಕು ಕಣ್ಣು
ಕೊರೆಯುವ ಮೈಮಾಟ
ದಿಟ್ಟಿಸಲು ದಿಟ್ಟತನವೂ ಬೇಕು

ಕಣ್ಣು ಪಿಳುಕಿಸದೇ ತದೇಕದಿ
ನೋಟ ಕೀಳದೇ ನೋಡುತ್ತ
ನೋಡುತ್ತಾ ಬೆರಗಾದೆ

ಹುಡುಕುತ್ತಲೇ ಇದ್ದೇನೆ ನನ್ನ ನಾ
ನಿನ್ನಲಿ ಕಳಕೊಂಡು
ಹುಡುಕಿದರೆ ಹೊರಗೆ ಸಿಕ್ಕೇನು ಹೇಗೆ ?

ಅಪ್ಪಟ ದೇಸಿಯ ಚಲುವಿನ ಒಲವ
ಧಾರೆ ಎಲ್ಲಂದರಲ್ಲಿ ಹರಿಯುತಿರಲು
ಹಿಡಿದು ಕಟ್ಟುವುದು ಕನಸಿನ ಮಾತು

ಚಂದಿರನ ಕಾಂತಿ ನಕ್ಷತ್ರಗಳ ನಲಿವು
ಹಾಲು ಗಲ್ಲಕೆ ಬೆಲ್ಲದ ಸೊಗಡು

ನೀಳ ನಾಸಿಕದ ಮೇಲೆ ಗಿಣಿಯ ಆಟ
ಕೆಳಗೆ ತುಟಿಗಳ ರಂಗು ರಂಗಿನಾಟ

ಸಾಕು ಬಿಡು ಈ ಜನುಮಕೆ ಹೆಚ್ಚು
ಹೇಳಿದರೆ ಹುಚ್ಚು ಹಿಡಿಸಿಕೊಂಡು
ಬೆನ್ನು ಬಿದ್ದಾರು ?

ದೃಷ್ಟಿ ತೆಗೆಯಲು ಸಾವಿರ ಪೊರಕೆ ಸಾಲದು
ನಾ ದೃಷ್ಟಿ ಕೀಳುವತನಕ ನಿರ್ಗಮಿಸದಿರು
ಹಿಡಿದು ಬಚ್ಚಿಡುವೆ ಮನೋಮಂದಿರದಲಿ
ಮಹಾ ರಾಣಿಯ ಹಾಗೆ

ಶಬ್ದಗಳು ನಿಶಬ್ದವಾಗಿ ಮಾತು
ಮೌನವಾದ ಹೊತ್ತಲಿ
ಶಬ್ದಗಳಲಿ ಪೋಣಿಸಿ ಮಾಲೆಯ
ಧರಿಸಿ ನಲಿದು ಹಾಡಿ
ಕುಣಿಯುವೆ ನಿನ್ನ ಒಲುಮೆಗಾಗಿ.

---ಸಿದ್ದು ಯಾಪಲಪರವಿ

No comments:

Post a Comment