Tuesday, November 6, 2018

ನಂಜಾದ ನಾಲಿಗೆ

*ನಂಜಾದ ನಾಲಿಗೆ ಪರಿಣಾಮ ಮತ್ತು ಚುನಾವಣೆ*

ನಾಲಿಗೆ ನಿಯಂತ್ರಣ ಕಳೆದುಕೊಂಡರೆ ಆಗೋದೇ ಹೀಗೆ. ಜನ ಮೂರ್ಖರಲ್ಲ. ಸುಳ್ಳು ಹಾಗೂ ಬಣ್ಣದ ಮಾತುಗಳ ನಾಟಕವನ್ನು ಹೆಚ್ಚು ದಿನ ಸಹಿಸಲಾರರು.

So called ಸಲಹೆಗಾರರ ಉದ್ಧಟ ಮಾತು ಕೇಳಿ ವೈಯಕ್ತಿಕ ಜೀವನದ ಸಾವಿನ ವಿಷಯ ಕೀಳಾಗಿ ಮಾತಾಡಿದ ಪರಿಣಾಮ ಇದು.

ಈ ಹಿಂದೆ ಹಿರಿಯ ರಾಜಕಾರಣಿಯ ಸಾವಿನ ಕುರಿತು ಆಡಿದ ತುಚ್ಛ ಮಾತುಗಳಿಂದಾಗಿ ಜನ ರೋಸಿ ಹೋಗಿದ್ದರು. ಹಣ-ಅಧಿಕಾರದ ಮದ ಹೆಚ್ಚಾದಾಗ, ಶಕುನಿ ಮಾಮಾಗಳ ಮಾತು ಕಟ್ಟಿಕೊಂಡು ಹೇಳಿಕೆ ಕೊಟ್ಟರೆ ಆಗೋದೇ ಹೀಗೆ.
ಸ್ವಪಕ್ಷೀಯರ ಉದ್ಧಟ ಅಹಂಕಾರದ ಮಾತುಗಳಿಗೆ ಜನ ಉತ್ತರ ನೀಡಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಅರಸನೆಂಬ ಭ್ರಮೆ ಹುಟ್ಟಿಸಿದವರ ಮಾತು ನಂಬಿ, ಪಡಬಾರದ ಕಷ್ಟ ಪಟ್ಟು ಅಜ್ಞಾತ ಅನುಭವಿಸಿ ಹೊರ ಬಂದ ಮೇಲಾದರೂ ಎಚ್ಚರಿಕೆಯಿಂದ ಇರಬೇಕಾಗಿತ್ತು.

ವಿಧಿ ಹಾಗಾಗಲು ಬಿಡುವುದಿಲ್ಲ, ಅಹಂಕಾರಕೆ ಪಾಠ ಕಲಿಸುವ ತೀರ್ಮಾನ ಮಾಡುತ್ಯದೆ.
ಶನಿ ಹೇಗಲೇರಿದಾಗ ಮನುಷ್ಯ ಇಂತಹ ಅನಾಹುತ ಮಾತುಗಳಿಗೆ ಮುಂದಾಗುತ್ತಾನೆ.‌

ಹಲಾಲಕೋರ ಸಲಹೆಗಾರರ ದುರುದ್ದೇಶ ಹಾಗೂ ಶಕುನಿ ಕುತಂತ್ರ‌ ಅರಿಯದ ಇವರೇನು ಮಹಾಭಾರತದ ಉದಾಹರಣೆ ಹೇಳುತ್ತಾರೆ.
ಅಮಾನವೀಯ ಸಲಹೆಗಳನ್ನು ಯಾರೇ ನೀಡಲಿ, ಸ್ವೀಕರಿಸಿ ಬಾಯಿ ಬಿಡುವ ಮುನ್ನ ಮನುಷ್ಯರಾಗಿ ಆಲೋಚಿಸಬೇಕು.
ಚುನಾವಣೆಯೆಂಬ ರಣರಂಗದಲ್ಲಿ ಎಲ್ಲವೂ ಕೌಂಟ್ ಆಗುತ್ತದೆ.

ಸಾರ್ವಜನಿಕ ಜೀವನದ ರಾಜಕಾರಣ ಅತಿಯಾದ ಸಹನೆ, ಚಾಣಾಕ್ಷತನ ಹಾಗೂ ಜಾಣತನ ಬಯಸುತ್ತದೆ. ಹುಂಬತನ, ಅಹಂಕಾರ ರಾಜಕಾರಣದ ಸಂಸ್ಕೃತಿಯಾದರೆ ಮತದಾರ ಪ್ರಭು ಕೆರಳಿಬಿಡುತ್ತಾನೆ. ಚುನಾವಣೆಯಲ್ಲಿ ಪಾಠವನ್ನೂ ಕಲಿಸಿಬಿಡುತ್ತಾನೆ.‌

ಜನತಾ ಪರಿವಾರದ ಗರಡಿಯಲ್ಲಿ ಬೆಳೆದ ಕೆಲವರು, ಹಿರಿಯರು, ರಾಜಕಾರಣದ ಪಟ್ಟು ಬಲ್ಲವರು, ಚುನಾವಣೆಯನ್ನು ಯುದ್ಧವೆಂದೇ ಪರಿಗಣಿಸುತ್ತಾರೆ. 

*ಧರ್ಮ-ಅಧರ್ಮ ರಾಜಕಾರಣಿಗೆ ಬೇಡವಾಗಿದ್ದರೂ ಜನರಿಗೆ ಬೇಕಾಗಿದೆ*.
ಜನರ ನಾಡಿ ಮಿಡಿತ ಬಲ್ಲವರು ಆಳುತ್ತಾರೆ, ಇಲ್ಲದವರು ಅಳುತ್ತಾರೆ.
ಸಹನೆ ಹಾಗೂ ಆತ್ಮವಿಶ್ವಾಸ ರೂಢಿಸಿಕೊಂಡವರು ಕಾಯುತ್ತಾರೆ. ಅಂತಹ ಜಾಣ ನಡೆ ಇಂದಿನ ಸರ್ಕಾರದ ಶಕ್ತಿಯೂ ಹೌದು,ಮಿತಿಯೂ ಹೌದು.

*ಎಲ್ಲ ಕಾಲಕ್ಕು ಒಂದೇ ಸೂತ್ರ ಕೆಲಸ ಮಾಡುವುದಿಲ್ಲ*.
ಹಣ ಹಾಗೂ ಜಾತಿಯಾಚೆಗಿನ ಲೆಕ್ಕಾಚಾರ ಇರಬೇಕಾಗುತ್ತದೆ. ಈ ಬೈ ಎಲೆಕ್ಷನ್ ಪರಿಣಾಮ ಮತ್ತೊಮ್ಮೆ ದಾರಿದೀಪ. ಎಚ್ಚೆತ್ತುಕೊಳ್ಳಬೇಕಾದವರು ಬೇಗ ಎಚ್ಚೆತ್ತುಕೊಳ್ಳಬೇಕು.

ಶಕುನಿಗಳ ಮಾತಿನ ತಾಳಕ್ಕೆ ತಕ್ಕಂತೆ ಕುಣಿಯಬಾರದು.‌
ಹೊಗಳಿ ಅಟ್ಟಕ್ಕೇರಿಸಿ, ಮೇಲೆತ್ತಿ ಕುಣಿಯುವವರು ಧೊಪ್ಪೆಂದು ಒಗೆದು ಓಡಿ ಹೋಗುತ್ತಾರೆ. ನಮ್ಮವರೇ ಚೂರಿ ಹಾಕಿದರೆ ಹೆಚ್ಚು ನೋವಾಗುವುದು ಸಹಜ.

ಅಧಿಕಾರ ಯೋಗ್ಯತೆಗೆ ತಕ್ಕಂತೆ ಸಿಗಲಿ ಎಂದು ಬಯಸಬೇಕು. ಯಾರೋ ಮರ ಹತ್ತಿಸುವವರ ಮಾತುಗಳಿಂದ ಅಲ್ಲ.

ಇದು ರಾಜಕೀಯ ಪಕ್ಷಗಳ ಗೆಲುವಲ್ಲ ಜಾಣ ಮತದಾರರ ಗೆಲುವು. ‌ಪ್ರಜಾಪ್ರಭುತ್ವದ ಗೆಲುವು. ಈ ಗೆಲುವನ್ನು ತಲೆಗೇರಿಸಿಕೊಳ್ಳುವ ಅಗತ್ಯವಿಲ್ಲ.
ಮುಂದಿನ ಚುನಾವಣೆಗೆ ದಿಕ್ಸೂಚಿಯೂ ಹೌದು ಆದರೆ ಇದು ಅಂತಿಮವೂ ಅಲ್ಲ. ಇನ್ನಾರು ತಿಂಗಳಲ್ಲಿ ಮತ್ತೆನಾಗುತ್ತೆ ಎಂದು ಪ್ರಭು ಕಾಯುತ್ತಾನೆ.
At least there is a *poetic justice* in the politics.

  *ಸಿದ್ದು ಯಾಪಲಪರವಿ*

No comments:

Post a Comment