Friday, November 9, 2018

ಮಣ್ಣ ಮಂತ್ರದ ಕಾಯಕಯೋಗಿ

*ಮಣ್ಣ ಮಂತ್ರದ ಕಾಯಕಯೋಗಿ*

ಹಗಲಿರುಳು ಒಂದೇ ದುಡಿಯುವ
ಜೀವಕೆ
ಭಿಕ್ಷಾಟನೆ ದೂರ ದೂಡಿ ಜೋಳಿಗೆಯ
ಮಡಿಚಿಟ್ಟು ಕೃಷಿ ಕಾಯಕಕೆ ಮೈಯೊಡ್ಡಿ
ಡಂಬಳಕೆ ಸಾಗಿದ ಪಾದಯಾತ್ರೆ

ಬೇಡುವ ಜಂಗಮ ಕಳಂಕವ ದೂರ
ಮಾಡಲು ಮೈಮುರಿದು ದುಡಿವ ಛಲ

ಬತ್ತಿದ ಜಲಕೆ ಜೀವ ತುಂಬುವ
ಕನಸು ಸಲಿಕೆ ಗುದ್ದಲಿ ಹಿಡಿದು
ಬಾವಿ ತೋಡಲು ಸನ್ನದ್ಧರಾದ
ಶಿಷ್ಯ ಪಡೆಗೆ ಇನ್ನಿಲ್ಲದ ಉತ್ಸಾಹ

ಬಂಜರು ಭೂಮಿಗೆ ದ್ರಾಕ್ಷಿ ದಾಳಿಂಬೆ
ಸಡಗರ ಕಂಗಳಲರಳಿದ ಧನ್ಯತೆ

ಬರೀ ಬೇಡುವದು ಸ್ವಾಮಿತ್ವ ಅಲ್ಲ
ಬೇಡಬಾರದೆಂಬ ಹೊಸ ಸತ್ಯದ ಬೆಳಕ
ಪಸರಿಸಿದ ಕಾಯಕ ಯೋಗಿ

ದೇಹವೇ ದೇವಾಲಯವೆಂಬ
ವಚನವ ನಿರ್ವಚನವಾಗಿಸಲು
ದಣಿಸುವ ಕೈಂಕರ್ಯ

ಕಾಯಕದಿ ಬೊಬ್ಬೆಯಾದ ಕೈಗಳಲಿ
ಕಂಡ ಕೈಲಾಸ ದುಡಿತವೇ ನಿತ್ಯ
ಲಿಂಗ ಪೂಜೆ ಹಿತವಚನಗಳೇ
ದಿವ್ಯಮಂತ್ರ

ಐಷಾರಾಮಿ ಬದುಕಿಗೆ ಮಾರು
ಹೋಗದ ಸಾತ್ವಿಕ ಬದುಕ
ಬಿತ್ತಿ ಶ್ರಮದಾಲದ ಮರವ
ಹೆಮ್ಮರವಾಗಿಸಿ ಹೊಲದಲಿ ದುಡಿದ
ಏಕೈಕ ಸಂತ

ರೈತರ ಪಾಲಿಗೊಬ್ಬ ರೈತಮಿತ್ರ
ಮಾತು ಮತಿಯಲೂ ಅದೇ
ಧ್ಯಾನ
‘ಬಿತ್ತಿರಿ ಬೆಳೆಯಿರಿ’

ಮಾರದಿರಿ ಭೂಮಿಯ ಕಳಕೊಳ್ಳದಿರಿ
ಭೂತಾಯಿ ಒಡಲ ಒಲವ
ಧನದಾಸೆಯ ಬಂಡವಾಳಶಾಹಿಗಳ ಭಂಡ
ಬಡಿವಾರದ ಮಾತುಗಳಿಗೆಂದೆಚ್ಚೆರಿಸಿದ
ಭೂ ರಕ್ಷಕ

ನಿರಂತರ ದುಡಿದು ದಣಿದು
ಭೂಸೇರಿ ಲೀನವಾದಾಗ
ಎದೆಗವಚಿಕೊಂಡಳಾ
ಭೂ ಮಾತೆ ನೆಮ್ಮದಿಯ
ಸವಿಸುಖದಿ ಥೇಟ್ ಅವ್ವನ ತೆರದಿ.

 *ಸಿದ್ದು ಯಾಪಲಪರವಿ*

No comments:

Post a Comment