Thursday, November 29, 2018

ಎಚ್. ಕಾವ್ಯಶ್ರೀ ನಾಟಕ ಅಗ್ನಿದಿವ್ಯ

ಸಂಶಯದ ಮೇಲೆ ಮತ್ತೊಂದು ಗದಾಪ್ರಹಾರ
*ಎಚ್.ಕಾವ್ಯಶ್ರೀ ಅವರ ನಾಟಕ  ಅಗ್ನಿದಿವ್ಯ*

ಸಾಹಿತ್ಯದಲ್ಲಿ ಅಗ್ರಸ್ಥಾನ ಕಾವ್ಯಕ್ಕೆ  , ದೃಶ್ಯ ಮಾಧ್ಯಮದಲ್ಲಿ ನಾಟಕಕ್ಕೆ ಕಾರಣ ಬೀರಬಹುದಾದ ತೀವ್ರ ಪರಿಣಾಮ.

ಕಿರುತೆರೆ ಹಾಗೂ ಹಿರಿತೆರೆ ಮೇಲಿರುವ ಕೃತಕತೆ ಹಾಗೂ ಢಾಳತೆಯಿಂದ ಬಹು ದೂರವಿರುವ ರಂಗಭೂಮಿ ದೃಶ್ಯ ಪ್ರಕಾರದ ಹಿರಿಯಣ್ಣ.

ನಾಟಕದ ಮೂಲಕ ಅತ್ಯಂತ ಗಂಭೀರ ವಿಷಯಗಳನ್ನು ತೀಕ್ಷ್ಣವಾಗಿ ಪ್ರತಿಬಿಂಬಿಸಬಹುದು.

ಈ ಹಿನ್ನೆಲೆಯಲ್ಲಿ ಎಚ್.ಕಾವ್ಯಶ್ರೀ ಅವರು  *ಅಗ್ನಿದಿವ್ಯ*ದ ಮೂಲಕ ಹೊಸ  ಕಾಣಿಕೆ ನೀಡಿದ್ದಾರೆ.

ನಮ್ಮ ಮಹಾಕಾವ್ಯದ ಪಾತ್ರಗಳು ದಿನಕ್ಕೊಂದು ಬಗೆಯಲಿ ಕಾಡುತ್ತಲೇ ಇವೆ. ಸೀತೆ , ದ್ರೌಪದಿ , ಊರ್ಮಿಳೆ , ಶಾಕುಂತಲೆ , ಅನುಭವ ಮಂಟಪದ ಅಕ್ಕ , ಶೆಕ್ಷಪಿಯರ್ ನಾಟಕದ ಡೆಸ್ಡಿಮೋನಾ ಎಲ್ಲರೂ ಬಗೆ ಬಗೆಯಾದ ಅನುಭವ ನೀಡುತ್ತಾರೆ.

ಸೀತೆ ಎದುರಿಸಿದ ಅಗ್ನಿಪರೀಕ್ಷೆಯನ್ನು ಆಧುನಿಕ ಮಹಿಳೆಯರ ಸಮಕಾಲೀನ ಸವಾಲುಗಳ ಮೇಲೆ ಬೆಳಕು ಚಲ್ಲಿದ್ದಾರೆ.

ರಾಮಾಯಣ ದೃಶ್ಯಗಳನ್ನು ಆಧರಿಸಿ ನಡೆಯುವ ರಿಹರ್ಸಲ್ ಮೂಲಕ ನಾಟಕ ಪ್ರಾರಂಭವಾಗುತ್ತದೆ . ನಟರು ರಾಮಾಯಣದ ದೃಶ್ಯಗಳಲ್ಲಿ ಮುಳುಗಿಹೋಗಿ ತಮ್ಮನ್ನು ತಾವು ಸಮೀಕರಿಸಿಕೊಳ್ಳುವ ಬಗೆ ಕೂಡಾ ವಿಭಿನ್ನ.

ನಾಟಕ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಸ್ತು ನವಿರಾಗಿ ತೆರೆದುಕೊಳ್ಳುತ್ತದೆ. ಅಗ್ನಿಪರೀಕ್ಷೆಗೆ ಒಳಗಾಗುವಾಗ ಸೀತೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ .

ಅಗ್ನಿಪರೀಕ್ಷೆಗೆ ರಾಮ ಕೊಡುವ ಕಾರಣಗಳನ್ನು ಸೀತೆ ಕೇಳಿಸಿಕೊಂಡು ನಂತರ  ತಿರುಗೇಟಿನ ಮೂಲಕ ಕೊಡುವ ಪೆಟ್ಟು ಸಣ್ಣದಲ್ಲ.

ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಸಂಪ್ರದಾಯದ ನೆಪದಲ್ಲಿ ಅನುಭವಿಸುವ ಯಮಯಾತನೆಯನ್ನು  ಅರ್ಥಪೂರ್ಣವಾಗಿ ಹೆಣೆಯಲಾಗಿದೆ.

ರಾಮ-ಸೀತೆಯರ ಪಾತ್ರಧಾರಿಗಳ ತೊಳಲಾಟದ  ಮನೋಕ್ಷೋಭೆಯನ್ನು ಪರಿಣಾಮಕಾರಿಯಾಗಿ ನಾಟಕಕಾರರು ಮುಖದ ಮೇಲೆ ಎಸೆಯುತ್ತಾರೆ .

ಅಗ್ನಿಪರೀಕ್ಷೆ ಹಾಗೂ ಅಗಸನ ಮಾತಿಗೆ ಮನ್ನಣೆ ಕೊಟ್ಟು ಕಾಡಿಗೆ ಅಟ್ಟುವ ಮೂಲ ಉದ್ದೇಶ ಕೇವಲ *ಸಂಶಯ* ಮಿಕ್ಕದ್ದೆಲ್ಲ ಬರೀ ನೆಪ.

ರಾಮಾಯಣದ ಸೀತೆ ಹಾಗೂ ಪಾತ್ರದಾರಿ ದಿವ್ಯ ಎದುರಿಸುವ ತಲ್ಲಣ ಒಂದೇ ಆದರೆ ಕಾಲ ಬೇರೆ.

ಸೀತೆ ಅನುಭವಿಸಿದ ಹಿಂಸೆಯನ್ನು ದಿವ್ಯ ಎದುರಿಸಿ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಾಳೆ ಆದರೆ ಕೊನೆಗೆ ಅವಳು ತೆಗೆದುಕೊಳ್ಳುವ ನಿರ್ಣಯ !
ಅಬ್ಬಾ ! ಪ್ರೇಕ್ಷಕ ನಿಟ್ಟುಸಿರು ಬಿಡುತ್ತಾನೆ.

ಇಂತಹ ಕಠಿಣ ವಸ್ತುವನ್ನು ರಂಗದ ಮೇಲೆ ಪ್ರಯೋಗ ಮಾಡುವದೊಂದು ದೊಡ್ಡ ಸವಾಲು.
ಆ ಸವಾಲನ್ನು ನಿರ್ದೇಶಕ ಲಕ್ಷ್ಮಣ ಪೀರಗಾರ ಸಮರ್ಪಕವಾಗಿ ನಿರ್ವಹಿಸಿದ್ದಾರೆ.

ಮನುಷ್ಯನ ಮನಸ್ಸಿನ ಸೂಕ್ಷ್ಮಾತೀತ ಸಂಗತಿಗಳ ಎಳೆಹಿಡಿದು ನಮ್ಮ ಸಂಪ್ರದಾಯದ ಮೂಲಭೂತವಾದವನ್ನು ಕೆಣಕುತ್ತಾರೆ.

ಹೆಣ್ಣನ್ನು ಸಂಶಯಿಸಿ , ಸತಾಯಿಸಿ ಕಾಡುವ ರೀತಿ ರಿವಾಜುಗಳ ಮೇಲೆ  ನಾಟಕಕಾರರು ಗದಾಪ್ರಹಾರ ಮಾಡಿ ಕೊಂಚ ಆಲೋಚನೆಗೆ ಹಚ್ಚಲು ಯಶ ಸಾಧಿಸಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದ ಅರುಣೋದಯ ಕಲಾತಂಡದ ಶಂಕರಣ್ಣ ಸಂಕಣ್ಣವರ್ ಹಾಗೂ ಕಲಾವಿದರ ಶ್ರಮ ಸಾರ್ಥಕವೆನಿಸುತ್ತದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾತಂಡಗಳನ್ನು ಉತ್ತೇಜಿಸುವ ಹೊಸ ಯೋಚನೆಯ  ಪ್ರತಿಫಲವೇ *ಅಗ್ನಿದಿವ್ಯ*.

*ನೊಂದವರ ನೋವ ನೋಯದವರು ಎತ್ತ ಬಲ್ಲರು* ಎಂಬ ಮಹದೇವಿ ಅಕ್ಕನ ಸಾಲುಗಳು ಮನದ ತುಂಬೆಲ್ಲ ರಿಂಗಣಿಸುತ್ತಿರುವಾಗ ನೂರಾರು ಸೀತೆಯರ ಅಸಹಾಯಕತೆ ನೆನಪಾಯಿತು.

ಸೂಕ್ಷ್ಮ ವಿಷಯವನ್ನು ರಂಗಾಭಿನಯದ ಮೂಲಕ ಮನದಾಳದಲಿ ಅಚ್ಚೊತ್ತಲು ಕಾರಣರಾದ ಎಲ್ಲರಿಗೂ ಅಭಿವಂದನೆಗಳು.

ಮಹಿಳಾ ಸಬಲೀಕರಣ ಹಾಗೂ ಫೆಮಿನಿಸಮ್ ಕುರಿತ ರಂಗ ಪ್ರತಿಪಾದನೆಯ ಮುನ್ನೋಟ ಇದು.

---ಸಿದ್ದು ಯಾಪಲಪರವಿ.

No comments:

Post a Comment