Friday, November 9, 2018

ಅಕ್ಷರ ಸಂತ

*ನಿರಂಜನ ಜಂಗಮ‌ ಅಕ್ಷರ ಸಂತ*

ಏಕಿಷ್ಟು ಅವಸರ ಗುರುವೆ

ಹೀಗೆ ಹೇಳದೇ ಕೇಳದೇ

ಹೋಗಲು

ಅವ್ವನ ಮಮತೆ ಅಪ್ಪನ ಕಾಳಜಿ

ಗುರುವಿನ ಚೇತನ ಬೇರೆಲ್ಲೂ ಸಿಗದು

ಈಗ ಮಹಾ ಬಯಲಲಿ ಬರೀ ಶೂನ್ಯ

ಸೂರ್ಯನಿಗೆ ಬಡಿದ ದಟ್ಟ ಕತ್ತಲು

ಇನ್ನೂ ಬೆಳಗಲಾರ ರವಿ ನೀ ನಿಲ್ಲದೆ

ದಟ್ಟಡವಿಯ ಕಾರ್ಗತ್ತಲಲಿ ದಿಕ್ಕು

ತಪ್ಪಿ ಅಲೆಯುವಾಗ ಕೈಹಿಡಿದು

ಹೂ ಬೆಳಕ ಚಲ್ಲಿ ಕೈಹಿಡಿದು

ದಡ ಸೇರಿಸಿದ ಮಹಾ ಗುರುವೆ

ಒಮ್ಮೆಲೇ ಹೀಗೆ ಮರೆಯಾದ ಬರ

ಸಿಡಿಲ‌‌ ಸದ್ದಿಗೆ ಬೆಚ್ಚಿ ಬಿದ್ದು ತತ್ತರಿಸಿದೆ

ಮನ

ಹುಡುಕುವುದ ಪಡೆಯುವುದ ಪಡೆದುದ

ದಕ್ಕಿಸುವುದ ಕಲಿಸಿದೆ

ಕಳಕೊಳ್ಳುವದ ಹೇಳಿ ಕೊಡದೇ

ಕಳೆದು ಹೋದರೆ ಸಹಿಸಲಿ ಹೇಗೆ ?

ಅಕ್ಷರ ಅರಿವು ಅನ್ನದಾಸೋಹದ

ಹರಿಕಾರ ತ್ರಿವಿಧತೆಯಲಿ ಅನಂತತೆ

ಅಜರಾಮರ

ಯಾರೂ ಇಲ್ಲಿ ಉಳಿಯಲು

ಬಂದಿಲ್ಲ ಬಂದವರು ಏನೂ

ಬಿಡಲು ಇರುವುದೇ ಇಲ್ಲ

ನೀ ಏನೆಲ್ಲ ಕೊಟ್ಟೆ ಎಲ್ಲವನೂ

ಬಿಟ್ಟೆ ಬರೀ ನಮಗಾಗಿ

ಕೊಂಡು ಒಯ್ಯಲಿಲ್ಲ ಏನೂ

ನಿನಗಾಗಿ

ಐಷಾರಾಮಿ ಬಯಸದ ಮನಕೆ

ಬರೀ ಓದುವ ದಾಹ

ತಿಳಿ ಹೇಳುವ ತವಕ ಜಾಗೃತ

ಗೊಳಿಸುವ ಕಾಯಕದಲಿ ನಾಡ

ಸಂಚಾರದ ನಿಜ ಜಂಗಮ

ದಣಿದ ದೇಹಕೆ ಮುಪ್ಪಿರಲಿಲ್ಲ

ಮಿಂಚುವ ತೇಜಸ್ಸು ಎತ್ತರದ

ನಿಲುವು ನಡೆದರೆ ಆನೆ

ನುಡಿದರೆ ಸಿಂಹಘರ್ಜನೆ

ಸದಾ ಮಂದಹಾಸದ ಸುಂದರ

ಕಾಂತಿಗೆ ಮನ ಕರಗದಿರಲಾದೀತೆ ?

ಕಂಚಿನ ಕಂಠದ ಮಾತುಗಳಲಿ

ಮುತ್ತಿನ ಹಾರ ಒಲವ ಕಂಪು

ಕರುಳ ತುಂಬ ತಂಪು ತಂಪು

ಎಗ್ಗಿಲ್ಲ ಅಳುಕಿಲ್ಲದ ನಿರ್ಭಯ

ನುಡಿಗಳಲಿ ಸತ್ಯದ ಹೊಳಪು

ಮುಚ್ಚು ಮರೆಯ ಸೋಂಕಿಲ್ಲ

ನಡೆ-ನುಡಿ-ಆಚಾರ-ವಿಚಾರಗಳಲಿ‌

ಎಲ್ಲ ಬಯಲು ಬಟಾ ಬಯಲು

ತೆರೆದ ಪುಸ್ತಕ ಕೈಯೊಳಗಿನ ಕನ್ನಡಿ

ನೆನಪೊಂದೇ ಸಾಕು ಜೀವಚೈತನ್ಯ

ಉಕ್ಕಿ ಹರಿಯಲು ಇರಲಿ

ಕೃಪೆ ಕರುಣೆಯ ಕಂಪನ

ಪಂಚಮಹಾಭೂತಗಳ ಹೊರಗೂ

ಒಳಗೂ ನಿರಂತರ ಮಧುರ

ನೆನಪಿನಾಳದ ಶ್ರಧ್ಧೆಯಲಿ.

*ಸಿದ್ದು ಯಾಪಲಪರವಿ*

No comments:

Post a Comment