Tuesday, April 6, 2010

ತೋoಟದಾರ್ಯ ಮಠದ ಸಾವಿರದ ಶಿವಾನುಭವಗಳು
ಗಿನ್ನಿಸ್ ದಾಖಲೆಯತ್ತ ದಾಪುಗಾಲು

ಕರ್ನಾಟಕ ರಾಜ್ಯದ ಸಾವಿರಾರು ಲಿಂಗಾಯತ ಧರ್ಮದ ಮಠಗಳು ಅನೇಕ ಧಾರ್ಮಿಕ ಚಟುವಟಿಕೆಗಳಲ್ಲಿ ನಿರತವಾಗಿವೆ. ಪ್ರತಿಯೊಂದು ಮಠಕ್ಕೂ ಪೀಠ ಪರಂಪರೆಯಿರುತ್ತದೆ.
ಶಿಕ್ಷಣ, ದಾಸೋಹ ಹಾಗೂ ಜಾತ್ರೆಯಂತಹ ಜನಮುಖಿ ಯೋಜನೆಗಳ ಮೂಲಕ ಕರ್ನಾಟಕದ ಲಿಂಗಾಯತ ಮಠಗಳು ಇಡೀ ನಾಡಿನ ಗಮನ ಸೆಳೆದಿವೆ.
ಎಡೆಯೂರು ತೋಂಟದ ಸಿದ್ಧಲಿಂಗ ಯತಿಗಳ ಪಿಠ ಪರಂಪರೆಯ ಡಂಬಳ-ಗದುಗಿನ ತೋಂಟದಾರ್ಯ ಮಠಕ್ಕೆ ತನ್ನದೇ ಆದ ಶ್ರೀಮಂತ ಭವ್ಯ ಪರಂಪರೆಯಿದೆ. ಗದಗ-ಎಡೆಯೂರು-ಡಂಬಳ ಮಠಗಳನ್ನು ಮುಖ್ಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.
ಪ್ರಜಾಸತ್ತತೆಯ ವ್ಯವಸ್ಥೆಯಲ್ಲಿ ರಾಜಕೀಯ ನಾಯಕರು, ಧಾರ್ಮಿಕ ವ್ಯವಸ್ಥೆಯಲ್ಲಿ ಮಠಾಧೀಶರು, ರಾಜಸತ್ತತೆಯ ವ್ಯವಸ್ಥೆಯಲ್ಲಿನ ರಾಜರುಗಳು ತಮ್ಮ ವೈಯಕ್ತಿಕ ವರ್ಚಸ್ಸಿನ ಮೂಲಕ ಹೆಚ್ಚಿನ ಸಾಧನೆ ಮಾಡಿದಾಗ ಮಾತ್ರ ಇತಿಹಾಸ ಪುರುಷರಾಗುತ್ತಾರೆ. ಎಡೆಯೂರಲ್ಲಿ ನೆಲೆಗೊಂಡ 16 ನೆಯ ಶತಮಾನದ ತೋಂಟದ ಸಿದ್ಧಲಿಂಗ ಯತಿಗಳು ಜಂಗಮ ರೂಪಿಯಾಗಿ ನಾಡಿನಾದ್ಯಂತ ಸಂಚರಿಸಿ ಬಸವ ಧರ್ಮ ಪ್ರಚಾರ ಮಾಡಿದರು.
ಅದೇ ಪೀಠ ಪರಂಪರೆಯ ತೋಟದಾರ್ಯ ಮಠಕ್ಕೆ ತನ್ನ ಐತಿಹಾಸಿಕ ಹಿರಿಮೆಯನ್ನು ಹೆಚ್ಚಿಕೊಂಡಿದ್ದು 20 ಹಾಗೂ 21 ನೇ ಶತಮಾನದ ಕಾಲಘಟ್ಟದಲ್ಲಿ. ಇಂದಿನ ಪೀಠಾಧಿಪತಿಗಳಾದ ಪರಮ ಪೂಜ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು 29-7-1974 ರಂದು ತಮ್ಮ ಅಧಿಕಾರ ಸೇವಾವಧಿಯ ಕಾಲದಲ್ಲಿ ಇಡೀ ಚಿತ್ರಣವನ್ನೇ ಬದಲಿಸಿದರು. ಆರ್ಥಿಕ ಮುಗ್ಗಟ್ಟಿನಿಂದ ಶ್ರೀಮಠ ಅನೇಕ ತೊಂದರೆಗಳನ್ನು ಎದುರಿಸುತ್ತಿತ್ತು. ಆರ್ಥಿಕ ದುರ್ಬಲ ಸ್ಥಿತಿಯಲ್ಲಿಯೂ ಜನರನ್ನು ಕಟ್ಟಿಕೊಂಡು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶ್ರೀಮಠದ ಭಕ್ತ ಸಮೂಹವನ್ನು ಸಂಘಟಿಸಿದರು. ಮೂವತ್ತಾರು ವರ್ಷಗಳ ಅತ್ಯಲ್ಪ ಕಾಲಘಟ್ಟದಲ್ಲಿ ಶ್ರೀಮಠ ಬೆಳೆದು ಬಂದಿರುವ ರೀತಿ ಅನನ್ಯವಾದದು. ಕಾಯಕ-ದಾಸೋಹ-ಶಿಕ್ಷಣ ಎಂಬ ಮೂರು ಸೂತ್ರಗಳನ್ನು ಹಿಡಿದ ಸ್ವಾಮಿಜಿಗಳು ತಾವೇ ಕೃಷಿ ಕಾಯಕದಲ್ಲಿ ನಿರತರಾದರು. ಶಿಕ್ಷಣ ಸಂಸ್ಥೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭಿಸಿದರು. ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಸ್ವತ: ತಾವೇ ನಾಡಿನುದ್ದಕ್ಕೂ ಸಂಚರಿಸಿದರು. ತಮ್ಮ ಪ್ರಖರ ವಾಣಿಯ ಮೂಲಕ ಲಿಂಗಾಯತ ಧರ್ಮದ ಸಂದೇಶಗಳನ್ನು ಅಧಿಕಾರಯುತವಾಗಿ ಸಾರಿದರು. ತೋಂಟದಾರ್ಯ ಶ್ರೀಗಳ ಮಾತುಗಳೆಂದರೆ ಸಿಂಹಘರ್ಜನೆ. ನೇರ-ನಿಷ್ಠುರ .
ಸಾರ್ವತ್ರಿಕವಾಗಿ ವಿಶಿಷ್ಠ ವ್ಯಕ್ತಿತ್ವ ರೂಪಿಸಿಕೊಂಡಿರುವ ಶ್ರೀಗಳು. ವಯಕ್ತಿಕವಾಗಿ ಭಕ್ತರ ಪಾಲಿನ ಮಾತೆಯಾಗಿದ್ದಾರೆ. ಸಾಮಾನ್ಯರ ಸ್ವಾಮೀಜಿ. ಕನ್ನಡದ ಜಗದ್ಗುರುಗಳು, ಪುಸ್ತಕ ಜಗದ್ಗುರುಗಳು ಎಂದು ಖ್ಯಾತಿ ಪಡೆದಿರುವ ಶ್ರೀಗಳು, ತೋಟದಾರ್ಯ ಮಠದ ಶಿವಾನುಬವ ಹಾಗೂ 'ಜಾತ್ರೆ' ಯ ಮೂಲಕ ಹೊಸ ಕ್ರಾಂತಿ ಮಾಡಿದ್ದಾರೆ.
1976 ರಲ್ಲಿ ನಾನು ಮೊದಲ ಜಾತ್ರೆ ನೋಡಿದಾಗ ನನಗೆ ಹನ್ನೊಂದರ ಪ್ರಾಯ. 1981 ರಲ್ಲಿ ಧಾರವಾಡ ಕರ್ನಾಟಕ ಕಾಲೇಜಿಗೆ ಪ್ರವೇಶ ಪಡೆದ ನಂತರ ಮೇಲಿಂದ ಮೇಲೆ ಮಠಕ್ಕೆ ಬರುತ್ತಿದ್ದೆ. ಮಠದ ಆರ್ಥಿಕ ಸ್ಥಿತಿ ನಿಧಾನವಾಗಿ ಚೇತರಿಸಿಕೊಂಡು ಪ್ರತಿವಾರ ನಡೆಯುವ ಶಿವಾನುಭವದ ರೂಪರೇಷೆ ಬದಲಾಯಿತು. 1974 ರಿಂದ ಪ್ರತಿ ಸೋಮವಾರ ಸಂಜೆ ನಡೆಯುವ ಶಿವಾನುಭವಕ್ಕೆ ದಣಿವೆಂಬುದಿಲ್ಲ. ರೋಟರಿ, ಲಾಯನ್ ನಂತಹ ಖಾಸಗಿ ಸೇವಾ ಸಂಸ್ಥೆಗಳನ್ನು ಬಿಟ್ಟರೆ ಅದೇ ಮಾದರಿಯಲ್ಲಿ ಧಾರ್ಮಿಕ ಕೇಂದ್ರವೊಂದರಲ್ಲಿ ಕಾರ್ಯಕ್ರಮ ತಪ್ಪದೆ ನಡೆಯುತ್ತಿರುವುದು ಗದುಗಿನ ತೋಂಟದಾರ್ಯಮಠದಲ್ಲಿ ಮಾತ್ರ.
ಪ್ರತಿ ಸೋಮವಾರ ಕಾರ್ಯಕ್ರಮ ರೂಪಿಸುವುದು ಸಣ್ಣ ಸಂಗತಿಯಲ್ಲ. ಅತಿಥಿಗಳನ್ನು, ಉಪನ್ಯಾಸಕರನ್ನು, ಸಂಗೀತಗಾರರನ್ನು, ಖರ್ಚು-ವೆಚ್ಚ ನಿರ್ವಹಿಸಲು ಪ್ರಾಯೋಜಕರನ್ನು ಹುಡುಕಬೇಕು. ಈಎಲ್ಲ ಕಾರ್ಯಗಳು ಸಾಂಗವಾಗಿ ಸಾಗಲು ಶ್ರೀಗಳು ಶ್ರೀಮಠದ ಲಿಂಗಾಯತ ಪ್ರಗತಿಶೀಲ ಸಂಘವನ್ನು ಕ್ರೀಯಾಶೀಲಗೊಳಿಸಿದರು. ಅಧಿಕಾರವನ್ನು ನಿಂತ ನೀರಾಗಿಸದೇ, ಪ್ರತಿ ಬಾರಿ ಪದಾಧಿಕಾರಿಗಳನ್ನು ಬದಲಿಸುವುದರ ಮೂಲಕ ಹೊಸ ಪ್ರತಿಭಾಸಂಪನ್ನ ಕ್ರೀಯಾಶೀಲ ಭಕ್ತರ ತಂಡವನ್ನು ರೂಪಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ, ವಿವಿಧ ವೃತ್ತಿಗಳಲ್ಲಿ ತೊಡಗಿದ ಮಹನೀಯರು ಶ್ರೀಮಠದ ಶಿವಾನುಭವ ವೇದಿಕೆಯನ್ನು ಕೇವಲ social prestige ಎಂದು ಪರಿಭಾವಿಸದೆ ಸೇವಾ ಕೇಂದ್ರವೆಂದು ತಮ್ಮನ್ನು ತಾವು ಶ್ರದ್ಧಾ ಭಕ್ತಿಯಿಂದ ತೊಡಗಿಸಿಕೊಂಡರು. ಶ್ರೀ ಅಜ್ಜಣ್ಣ ಮಾನ್ವಿ, ಶ್ರೀವಿಶ್ವನಾಥ ಬುಳ್ಳಾ, ರಾಚಣ್ಣ, ಶೇಖಣ್ಣ ಮುನವಳ್ಳಿ ಪಿ.ಎಸ ಸಂಶಿಮಠ ಹಾಗೂ ಅನೇಕ ಹಿರಿಯರು ಶ್ರೀಗಳೊಂದಿಗೆ ಕೈಜೋಡಿಸಿದರು.
ಈಗ ಮೂರನೇ ತಲೆಮಾರಿನ ಯುವಕರು ಶ್ರೀಮಠದ ಪದಾಧಿಕಾರಿಗಳಾಗಿದ್ದಾರೆ.
2009 ಹಾಗೂ 2010 ರ ಸಾಲಿನ ಪದಾಧಿಕಾರಿಗಳಾಗುವ ಸುದೈವ ನನ್ನ ಪಾಲಿಗೆ ಅನಿರೀಕ್ಷಿತವಾಗಿ ಸಿಕ್ಕಿತು. ಶ್ರೀಗಳ ಪ್ರಭಾವವಲಯದಲ್ಲಿ ಬೆಳೆದಿದ್ದರಿಂದ ಮಠದ ಪದಾಧಿಕಾರಿಯಾಗುವ ಮನಸ್ಸಿರಲಿಲ್ಲ. ಡಾ. ಜಿ.ಬಿ. ಪಾಟೀಲರು ಅಧ್ಯಕ್ಷರಾಗುವ ಸಂದರ್ಭ ಬಂದಾಗ, ಶಿವಾನುಭವ ಸಮಿತಿಯ ಚೆರಮನ್ ಆಗುವ ಅವಕಾಶ ಬಂತು.
ಸಮಿತಿಯ ಚೇರಮನ್ ಆದ ಮೇಲೆ ಶಿವಾನುಭವದ difficulty ಗೊತ್ತಾಯಿತು. ಆದರೆ ಪ್ರತಿವಾರ ತಪ್ಪದಂತೆ ಭಾಗವಹಿಸಿ, ನಿರೂಪಣೆ ಮಾಡುತ್ತ ವಿಭಿನ್ನ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿದೆ. ಅತಿಥಿಗಳನ್ನು, ಉಪನ್ಯಾಸಕರನ್ನು ಹೊಂದಿಸುತ್ತ ವೈಯಕ್ತಿಕವಾಗಿ ಹೆಚ್ಚು ತೊಡಗಿಕೊಂಡೆ. ಇಲ್ಲಿ ಏನಿದ್ದರೂ ನನ್ನದು ನಿರ್ದೇಶಕ ಪಾತ್ರ. ಹೆಚ್ಚು ಜವಾಬ್ದಾರಿ ನಿರ್ವಹಿಸಿದ ಹೆಗ್ಗಳಿಕೆ ಉಳಿದ ಪದಾಧಿಕಾರಿಗಳಾಗಿ ಸಲ್ಲುತ್ತದೆ. ಅದರಲ್ಲೂ ವಿಶೇಷವಾಗಿ ಕೈಂಡ್ ಪರಿವಾರ ಅಧ್ಯಕ್ಷರಾದ ಸ್ನೇಹಿತ ಕೆ.ಪಿ.ಗುಳಗೌಡರ ಕಾರ್ಯದರ್ಶಿಯಾಗಿ ಅತ್ಯುತ್ತಮ ಕಾರ್ಯನಿರ್ವಹಿಸಿದರು. ಶಿವಾನುಭವ ಭೌತಿಕ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ 60 ಶಿವಾನುಭವಗಳು ಯಶಸ್ವಿಯಾಗಿ ಜರುಗಿದವು. ನಿರ್ಮಾಪಕರಂತೆ ಕಾರ್ಯನಿರ್ವಹಿಸಿದ ಅಧ್ಯಕ್ಷರಾದ ಡಾ. ಜಿ.ಬಿ.ಪಾಟೀಲ, ಖಜಾಂಚಿ ಸಿದ್ಧರಾಮೇಶ ಪಟ್ಟೇದ, ಸಹ ಕಾರ್ಯದರ್ಶಿ ಡಾ. ಉಮೇಶ ಪುರದ ನೂತನ ಅಧ್ಯಕ್ಶ, ನಮ್ಮೊಂದಿಗೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಉದ್ಯಮಿ ಈಶಣ್ಣ ಮುನವಳ್ಳಿಯವರ ನೆರವನ್ನು ಮರೆಯಲಸಾಧ್ಯ.
ಸಾವಿರದ ಶಿವಾನುಭವಗಳ ಕೇವಲ ಪ್ರೇಕ್ಷಕನಾಗಿದ್ದ ನಾನು, ಉಪನ್ಯಾಸಕನಾಗಿ, ನಿರೂಪಕನಾಗಿ ಶಿವಾನುಭವಗಳ ರೂವಾರಿಯೂ ಆದದ್ದು ನನ್ನ ಪುಣ್ಯವೇ ಸರಿ.
ನಿನ್ನೆಯ ಹಸ್ತಾಂತರ ಕಾರ್ಯಕ್ರಮದ ಅತಿಥಿಗಳಾಗಿ ಡಾ. ಎಂ.ಎಂ. ಕಲಬುರ್ಗಿಯವರು ಪಾಲ್ಗೊಂಡು ಆಡಿದ ಮಾತುಗಳು ಹೆಚ್ಚು ಅರ್ಥ ಪೂರ್ಣ.

1 comment:

  1. ಈ ಶಿವಾನುಭಾವಗಳ ಉಂಟು ಮಾಡಿದ ಪ್ರಭಾವವನ್ನು ಅಳೆಯಲು ಯಾವ ಮಾಪಕದಿಂದಲೂ ಸಾಧ್ಯವಿಲ್ಲ. ಇವುಗಳ ಸಂಖ್ಯೆ ಹತ್ತು ಸಾವಿರವಾಗಲಿ, ಲಕ್ಷವಾಗಲಿ, ಕೋಟಿ ಆಗಲಿ...
    -ಸಂಗಮೇಶ ಮೆಣಸಿನಕಾಯಿ

    ReplyDelete