Showing posts with label ಮಾನಸೋಲ್ಲಾಸ. Show all posts
Showing posts with label ಮಾನಸೋಲ್ಲಾಸ. Show all posts

Sunday, January 5, 2020

ಸಂಬಂಧನಗಳ ಹುಡುಕಾಟ

*ಹೊಸ ವರ್ಷ ಆದರೂ ಹಳೆ ವರಸೆ: ಸಂಬಂಧನಗಳ ಹುಡುಕಾಟ*

ಹೊಸ ವರ್ಷ ಬಂತು ಆದರೆ ವರಸೆ ಮಾತ್ರ ಬದಲಾಗಲಿಲ್ಲ,ಮಾತುಕತೆ, ಆಲೋಚನಾ ಕ್ರಮ ಎಲ್ಲ ಹಾಗೆಯೇ ಮುಂದುವರೆದಿದೆ.
ಇದು ಇಂಗ್ಲಿಷರ ಹೊಸ ವರ್ಷ ನಮ್ಮದಲ್ಲ ಎಂಬ ಮಾತುಗಳ ಮೂಲಕ ನಮ್ಮ ಸಣ್ಣತನದ ಪ್ರದರ್ಶನ.
ಹಾಗೆ ಹೇಳುತ್ತಲೇ ಕಾಲ ಕಳೆಯುವ ಆಷಾಢಭೂತಿಗಳು ನಾವು.
ಎಲ್ಲಾ ಬೇಕು ನಖರಾನೂ ಹಂಗೆ.

ನಿನ್ನೆ ಸಭೆಯೊಂದರಲ್ಲಿ ಮಾತನಾಡುವಾಗ 'ಟೆಕ್ನಾಲಜಿ ದಾಸರಾಗಿ ನಾವು ಮಾನವೀಯ ಸಂಬಂಧಗಳ ಕಳೆದುಕೊಂಡಿದ್ದೇವೆ.
ಪಾರ್ಕಿನಲ್ಲಿ ಕುಳಿತ ಪ್ರೇಮಿಗಳು ಮಾತಾಡುವುದ ಮರೆತು ತಮ್ಮ ಮೊಬೈಲ್ ಜೊತೆ ಕಾಲ ಕಳೆಯುವುದು ದೊಡ್ಡ ದುರಂತ. ಸುಂದರವಾದ ಹುಡುಗಿ,ಪ್ರೀತಿಸುವ ಮಕ್ಕಳು, ಜವಾವ್ದಾರಿಯುತ ಗೆಳೆಯರು ಯಾರೂ ಬೇಡವಾಗಿದೆ' ಮಾತು ಕೇಳಿದವರಿಗೆ ಹೌದೆನಿಸಿತು.

ಈಗ ಮೊಬೈಲ್ ಫ್ರೀ ಆದರೆ ಮಾತುಗಳೇ ಮಾಯ!
ಏನೋ ಧಾವಂತ,ವ್ಯಕ್ತಿ ಕೇಂದ್ರಿತ ಬದುಕು. ಕೆಲಸ ಇಲ್ಲದೇ ಭೇಟಿ, ಮಾತುಕತೆ, ಹರಟೆಗೆ ಜನ ಬೇಡವೇ ಬೇಡ. ಮಹತ್ವದ ಕೆಲಸ ಇದ್ದರೆ, ದೌಲತ್ತಿಗೆ ಅಧಿಕಾರ ಇದ್ದರೆ ಮಾತ್ರ ಜನ ಬರ್ತಾರೆ,ಮಾತಾಡಿಸ್ತಾರೆ ಇಲ್ಲ ಅಂದರೆ ಗೋವಿಂದ.
ತಿಂಗಳುಗಟ್ಟಲೆ ಫೋನು ಇಲ್ಲ.

ಉದ್ಯೋಗ ಸ್ಥಳಗಳಲ್ಲಿ ಅದೇ ಪೈಪೋಟಿ, ಕೆಲಸದ ಒತ್ತಡ. ದುಡಿಯುವ ಮನಸುಗಳಿಗೆ ಒತ್ತಡ ನೀಗಿಸಲು ಆತ್ಮೀಯರ ನಿಷ್ಕಲ್ಮಶ ಮಾತು,ಪ್ರೀತಿ, ಸ್ನೇಹ ಬೇಡವಾಗಿ ಬಿಟ್ಟದೆ.
ಏನಿದ್ದರೂ 'ಕಾಮಾ ಪೂರ್ತಿ ಮಾಮಾ' ಅನ್ನೋ ಮತಲಬ್ ಕಿ ದುನಿಯಾ.

ಕಾಡು ಹರಟೆ, ಆರೋಗ್ಯ ಪೂರ್ಣ ಚರ್ಚೆ ಸಿಗಬೇಕಾದರೆ ಒಂದಿಷ್ಟು ಹಿರಿಯರ ಬೆಳಗಿನ ವಾಕ್ ಸಮಯದಲ್ಲಿ, ಅವರು ಏಕತಾನತೆಯ ದೇಶಾವರಿ ಮಾತುಕತೆ, ಯಾವುದೇ ಆತ್ಮೀಯತೆಯಾಗಲಿ, ಪ್ರಾಮಾಣಿಕತೆಯಾಗಲಿ ಕಾಣುವುದಿಲ್ಲ.

ಎರಡು ದಶಕಗಳ ಹಿಂದೆ ಪ್ರೀತಿ, ಪ್ರೇಮ ಅಫೇರುಗಳ ನೆಪದಲ್ಲಿ ಜನ ಪರಸ್ಪರ ಸಾಂಗತ್ಯಕ್ಕಾಗಿ ಹಾತೊರೆಯುತ್ತಿದ್ದರು.
ಈಗ ಹಾದರದ ಅನುಸಂಧಾನ ಮಾಯವಾಗಿ ಅಲ್ಲಿ ಕಾಮವೂ ಡೇಟಿಂಗ್ ವ್ಯವಹಾರದ ಸರಕಾಗಿ ಹೋಗಿರುವುದು ಮನುಷ್ಯ ಸಂಬಂಧಗಳ ದುರಂತ.
ರಂಗು ರಂಗಿನ ಪ್ರೇಮ ಕಥೆಗಳ ಕಳಕೊಂಡ ಹಳವಂಡ.

ವೃತ್ತಿಯಿಂದ ನಿವೃತ್ತರಾದವರ ಪಾಡಂತು ಹೇಳತೀರದು.
ಮೈಯಲ್ಲಿ ಕಸುವು ಮಾಯಾವಾಗಿ ಮನಸು ಮೃದುವಾಗಿ ದರ್ಪ ಕಳಕೊಂಡು ಬಿಟ್ಟಿರುತ್ತಾರೆ.
ಹುಲಿಯಂತೆ ಉನ್ನತ ಹುದ್ದೆಗಳಲ್ಲಿ ಮೆರೆದವರು ಇಲಿಯಾಗಿ ಮೂಲೆ ಸೇರಿಕೊಂಡಾಗ ಯಾರೂ ಕೇರ್ ಮಾಡುವುದೇ ಇಲ್ಲ.

ದೇಹ ಮುಪ್ಪಾದರೂ ಒಳಗಿನ ಜೀವಚೈತನ್ಯಕೆ ಮುಪ್ಪು ಇರುವುದಿಲ್ಲ ಎಂಬುದನ್ನು ಕೆಲವರು ಮರೆತು ಬಿಡುತ್ತಾರೆ.
ಓದು,ಬರಹ,ಸಂಗೀತ, ಸಿನೆಮಾ ಮತ್ತು ಸಂಸ್ಕೃತಿಗಳ ಒಡನಾಟ ಇಲ್ಲದವರು, ಕ್ರಿಯಾಶೀಲ ಚಟುವಟಿಗಳ ಹವ್ಯಾಸ ಇಲ್ಲದವರು ಒಂಟಿತನದಿಂದ ನರಳಿ ಬೇಗ ಇನ್ನೂ ಮುದುಕರಾಗಿ ಹೊಸ ತಲೆಮಾರಿನ ಹುಡುಗರ ಬೈಯುತ್ತ ಎಲ್ಲರಿಗೂ ಬೇಡವಾಗುತ್ತಾರೆ.

ಟಿವಿಯಲ್ಲಿ ಬರುವ ಧಾರಾವಾಹಿಗಳ ಕಥೆಯೂ ಅದೇ.
ಅದೇ ಜಗಳ,ದ್ವೇಷ ಇಬ್ಬರು ನಟಿಯರಲ್ಲಿ ಒಬ್ಬಳು ವಿಲನ್… ಇಂತಹ ಕೆಲಸಕ್ಕೆ ಬಾರದ ಅವಾಸ್ತವ ಕತೆಗಳಲ್ಲಿ ಹೆಣ್ಣುಮಕ್ಕಳು ಕರಗಿ ಹೋಗಿದ್ದಾರೆ.

ಮನಸಿಗೆ ಮುದ ನೀಡುವ ಸಂಗೀತ ಆಲಿಸುವ, ಮಹತ್ವದ ಪುಸ್ತಕಗಳನ್ನು ಓದುವ, ಸರಿ ಕಂಡಂತೆ ಬರೆಯುವ ಹವ್ಯಾಸ ಇರದಿದ್ದರೆ ಬದುಕು ನೀರಸವಾಗಿ ಬಿಡುತ್ತದೆ.

ಕೆಲಸವಿಲ್ಲದಿದ್ದರೆ ಬರಲಾಗದ ಗೆಳೆಯರಿಗಾಗಿ ಕಾಯದೇ ನಿಮ್ಮ ಪಾಡಿಗೆ ವೈಯಕ್ತಿಕ ಸಾಂಸ್ಕೃತಿಕ ಲೋಕ ಸೃಷ್ಟಿ ಮಾಡಿಕೊಂಡು ಬದುಕಿದರೆ ಬದುಕು ಸಹನೀಯವಾದೀತು.

ಮುಪ್ಪಾದ ದೇಹವ ಶಪಿಸದೇ ಸಂಗಾತಿ ಜೊತೆ ಪ್ರೀತಿಯಿಂದ ಕಾಲ ಕಳೆಯುವ ಔದಾರ್ಯ ಈಗ ಅನಿವಾರ್ಯ.
ದೇಹಕ್ಕಿಂತ ಮನಸು ದೊಡ್ಡದು, ಕಾಮಕ್ಕಿಂತ ಪ್ರೇಮ ಹಿತಕಾರಿ ಅಂದುಕೊಂಡಾಗ ಬದುಕು ಬಾಳಾಗುತ್ತದೆ.
ಒಂಟಿತನ ಸುಂದರ ಏಕಾಂತವಾಗುತ್ತದೆ.
ಕಾಮದ ಕಸುವು ಮಾಯವಾದಾಗ ಪ್ರೇಮ, ಬಿಸಿ ಅಪ್ಪುಗೆ, ಮುದವಾದ ಮುತ್ತಿಗೂ ಬಡತನ ಇರಬಾರದು.
ಒಮ್ಮೆ ಅಲೋಚನೆ ಬದಲಿಸಿ ನೋಡಿ ಬದುಕು ಬಾಳಾಗಿ ಝಗಮಗ ಬೆಳಗಲು.

Saturday, July 13, 2019

ಕಹಿ ಮತ್ತು ಸಹನೆ

ಕಹಿ ಮತ್ತು ಸಹನೆ

ಅನಿವಾರ್ಯತೆಯೋ,ಅಸಹಾಯಕತೆಯೋ ನಾ ಕಾಣೆ ಎಲ್ಲವನ್ನು ವಿಪರೀತ ಅನ್ನುವಷ್ಟು ಸಹಿಸಿಕೊಳ್ಳುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯ ವರ್ತನೆಯ ಹಿಂದೆ ಅವನ ಬಾಲ್ಯದ ಘಟನೆಗಳ ಪ್ರಭಾವ ಅಡಗಿರುತ್ತದೆ. ಬಾಲ್ಯದ ಕಾಣದ ಸಂಗತಿಗಳು ಈಗಲೂ ನಮ್ಮನ್ನು ನಮಗೆ ಅರಿವಿಲ್ಲದಂತೆ ಆಳುತ್ತಿರುತ್ತವೆ.ಅಂತಹ ಆಳುವ ಒಂದು ಪ್ರಸಂಗವನ್ನು ಹಂಚಿಕೊಳ್ಳಬೇಕೆನಿಸಿದೆ.

'ಮಗು ಆರೋಗ್ಯವಾಗಿರಲು ನಿತ್ಯ ಮುಂಜಾನೆ ಒಂದು ಲೋಟ ಬೇವಿನ ರಸ ಕುಡಿಸಬೇಕು' ಎಂದು ಅವ್ವನಿಗೆ ಯಾರೋ ಹೇಳಿದ್ದರಂತೆ, ಅದರ ಪ್ರಯೋಗ ನನ್ನ ಮೇಲೆ ಮಾಡಲು ನಿರ್ಧರಿಸಿ, ಮನೆಕೆಲಸದ ಹಿರಿಯ‌ ಮುದುಕಪ್ಪನಿಗೆ ಜವಾಬ್ದಾರಿ ನೀಡಿದ ನೆನಪು.

ಮೊದಲ ದಿನ ವಿಷ ( ಕಹಿಗೆ ಬಳಸುವ ಸಾಮಾನ್ಯ ಪದ) ಕುಡಿಯುವ ಸರದಿ ನನ್ನದು. ವಿಪರೀತ ಕಹಿಯಾಗಿ ವಾಂತಿ ಮಾಡಿಕೊಂಡೆ. ಇಲ್ಲಿಗೆ ಈ ಪ್ರಹಸನ ಮುಗಿಯಬಹುದು ಅಂದುಕೊಂಡೆ. ಮುಗಿಯಲಿಲ್ಲ.
ಮರುದಿನ ನಸುಕಿನಲ್ಲಿ ಎಬ್ಬಿಸಿದಾಗ ಭಯ ಭೀತನಾದೆ, ವಿಷ ಕುಡಿಯುವ ಶಿಕ್ಷೆ ನೆನೆದು.

ಅವ್ವ ಮತ್ತು ಮುದುಕಪ್ಪ ಸೇರಿ ಹೊಸ ಸಂಚು ಹೂಡಿದವರಂತೆ ನಾಲಿಗೆ ಮೇಲೆ ನಾಲಿಗೆ ಗಾತ್ರದ ಪ್ಲ್ಯಾಸ್ಟಿಕ್ ಹಾಕಿ ಮೂಗು ಮುಚ್ಚಿ ನೇರವಾಗಿ ಗಂಟಲಿನಲ್ಲಿ ಬೇವಿನ ರಸ ಸುರುವಿ ವಾಂತಿಯಿಂದ ಪಾರು ಮಾಡಿದರು.
' ಅಯ್ಯೋ ವಾಂತಿಯಾದರೆ ಚನ್ನಾಗಿತ್ತು ಈ ವಿಷ ಕುಡಿಯುವ ಹಿಂಸೆ ತಪ್ಪುತ್ತಿತ್ತು' ಎಂದು ನೆನೆದು ಗಂಭೀರವಾಗಿ ಆಲೋಚನೆ ಮಾಡುತ್ತ ಹೊಟ್ಟೆಯೊಳಗೆ ವಿಷ ಹೇಗೆ ಕೆಲಸ ಮಾಡುತ್ತಿರಬಹುದೆಂದು ಕಲ್ಪಿಸಿಕೊಂಡೆ.

ಹೀಗೆ ಬೇವಿನ ರಸ ಕುಡಿದು ದಕ್ಕಿಸಿಕೊಂಡ ಮಗನಿಗೆ ರೋಗ ರುಜಿನಗಳು ಮಗನಿಗೆ ತಟ್ಟುವುದಿಲ್ಲ ಎಂಬ ಸಮಾಧಾನ ಅವ್ವನಿಗೆ.
ನನಗೋ ಒಳಗೊಳಗೆ ಇನ್ನಿಲ್ಲದ ಆತಂಕ. ಈ ಪ್ರಕ್ರಿಯೆ ತಿಂಗಳುಗಟ್ಟಲೆ ನಡೆಯಿತು.

ನನಗೂ ಅನೇಕ ಕಲ್ಪನೆಗಳು ಆರಂಭವಾದವು. ನಾ ಬಹಳ ಗಟ್ಟಿಯಾದೆ. ಹಾವು ಕಡಿದರೂ ವಿಷ ಏರುವುದಿಲ್ಲ ಎಂಬ ದಂತಕತೆಗಳು ಕಿವಿಗೆ ಅಪ್ಪಳಿಸಲಾರಂಭಿಸಿ ಸಂಭ್ರಮಿಸಿದೆ.
ಮುಂದೆ ಈ ರಹಸ್ಯ ಮಾಹಿತಿ ಅಪ್ಪನ ತಾಯಿ ಅಮರಮ್ಮ ಅಮ್ಮನಿಂದಾಗಿ ಸ್ಪೋಟಗೊಂಡಿತು.
ಆಗ ಜನ ಭಿನ್ನ ವಿಭಿನ್ನ ಸುದ್ದಿ ಹಬ್ಬಿಸಲಾರಂಭಿಸಿದರು.
"ಈ ರಸ ಕುಡಿದರೆ ಮುಂದೆ ಯಾವುದೇ ಔಷಧ ಹತ್ತುವುದಿಲ್ಲ…
ರೋಗ ಬರದೇ ಇರಬಹುದು ಬಂದರೆ ಗುಣವಾಗುವುದೇ ಇಲ್ಲ…ನಾಲಿಗೆ ರುಚಿ ಹಾಳಾಗಿ ಹೋಗುತ್ತೆ..." ಇಂತಹ ಅನಾಹುತ ಸುದ್ದಿಗಳಿಗೆ ಅವ್ವ ಥಂಡಾ ಹೊಡೆದಿರಬೇಕು.

ಮುಂದೆ ಮುದುಕಪ್ಪನ ವಿಷಪ್ರಾಶನ ಪ್ರಸಂಗ ಇದ್ದಕಿದ್ದ ಹಾಗೆ ಬಂದ್ ಆಯಿತೆನ್ನಿ.
ಪ್ರೀತಿ, ಕಾಳಜಿ,ಅನುಕಂಪ,ಅವಮಾನಗಳ ಪ್ರಯೋಗ ಶಾಲೆ ನನ್ನ ಬಾಲ್ಯ.

ದುಂಡು ದುಂಡಾದ ಗುಳಿ ಕೆನ್ನೆಯ‌ ಹುಡುಗನ ತಲ್ಲಣ, ಹುಡುಕಾಟದ ಕುತೂಹಲಗಳಿಗೆ ನನ್ನ ನಾ ಒಡ್ಡಿಕೊಂಡು ಎಲ್ಲ ಪ್ರಯೋಗಗಳಿಗೆ ತೆರೆದುಕೊಂಡು ಜೀವನಾನುಭವ ಹೆಚ್ಚಿಸಿಕೊಂಡೆ.

ಈಗ

ಯಾರು ಎಷ್ಟೇ ಅವಮಾನ ಮಾಡಿದರೂ ಪ್ರತಿಕ್ರಿಯಿಸಿದಿರುವಾಗ, ತಟ್ಟೆಯ ಆಹಾರಕೆ ಹೆಸರಿಡದೆ ಮೌನವಾಗಿ ಊಟ ಮಾಡುವಾಗ, ಮಾಟ ಮಂತ್ರಗಳಿಗೆ ಮನಸು ಹೆದರದೇ ಇದ್ದಾಗ ಈ ಬೇವಿನ ರಸ ಕುಡಿದ ಪ್ರಸಂಗ ನೆನಪಾಗಿ ಮನಸು ನಾಲ್ಕು ದಶಕಗಳ ಹಿಂದೆ ಓಡುತ್ತದೆ.

*ಸಿದ್ದು ಯಾಪಲಪರವಿ*

Friday, May 3, 2019

ಪುಸ್ತಕ ದಿನ

*ಪುಸ್ತಕ ದಿನ ಮತ್ತು ವಿಲಿಯಂ ಶೇಕ್ಸ್‌ಪಿಯರ್*

ಮನುಷ್ಯನಿಗೆ ಪ್ರಾಣ,ಸ್ವಾತಂತ್ರ್ಯ ಹಾಗೂ ದೃಷ್ಟಿ ಕನಿಷ್ಠ ಅಗತ್ಯಗಳು ಎಂದು ಹೇಳಿದ ವಿಲಿಯಂ ಶೇಕ್ಸ್‌ಪಿಯರ್ ಹುಟ್ಟು ಮತ್ತು ಸಾವಿನ ದಿನ. ಪುಸ್ತಕ ದಿನವೂ ಹೌದು.

ಮನಷ್ಯನಿಗೆ ಹಸಿವು, ನಿದ್ರೆ ಮತ್ತು ಮೈಥುನ ದೈಹಿಕ ಬೇಕುಗಳು.

ಜ್ಞಾನಿಗಳು, ಸಂತರು ಇವುಗಳನ್ನು ನಿಗ್ರಹಿಸುತ್ತ ಅರ್ಥಪೂರ್ಣವಾಗಿ ಬದುಕಬಲ್ಲರು.

ನಾವು ಮನುಷ್ಯರು ನಮ್ಮ ಮನಸಿನ ವಿಕಾರಗಳಲಿ ಒದ್ದಾಡುತ್ತ ನರಳುತ್ತ ಕಾಲ ಕಳೆಯುತ್ತ ಕಾಲನ ಕರೆ ಬಂದಾಗ ಹೇಳದೇ ಕೇಳದೇ ಹೋಗಿಬಿಡುತ್ತೇವೆ, ಒಂದು ಸಣ್ಣ ಗುರುತನ್ನು ಬಿಡದೇ.

ಆದರೆ ಶೇಕ್ಸ್‌ಪಿಯರ್ ತನ್ನ ಮೂವತ್ತೇಳು ನಾಟಕಗಳ ಪಾತ್ರಗಳ ಮೂಲಕ ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾನೆ.

ಸಾಹಿತ್ಯದ ವಿದ್ಯಾರ್ಥಿಗಳು ಅವನ ಕುರಿತು ಹೇಳದೇ ಇರಲಾಗದು.

ನಾವೆಲ್ಲ ಉಪನ್ಯಾಸಕರಾದ ಹೊಸತರಲ್ಲಿ ಶೇಕ್ಸ್‌ಪಿಯರ್ ಬಿಟ್ಟು ಬೇರೇನೂ ಕಲಿಸಲಾಗುದಿಲ್ಲ ಎಂಬ ಸ್ಥಿತಿ ಇತ್ತು.

ಹತ್ತಾರು ವರ್ಷಗಳ ಪಯಣದ ನಂತರ ಶೇಕ್ಸ್‌ಪಿಯರ್ ಮೋಹದಿಂದ ಹೊರಬರಲು ಒದ್ದಾಡಬೇಕಾಯ್ತು.

*ಬದುಕಿನ ಪಾಠ ನೆನಪಿಸುವ ಅವನ ದುರಂತ ನಾಟಕಗಳು*

ಅಸಾಮಾನ್ಯ ಪಾತ್ರಗಳು ಮಾತ್ರ ನಮಗೆ ಆದರ್ಶವಾಗಬಲ್ಲವು ಎಂಬ ಸಿದ್ಧಾಂತ ಇಟ್ಟುಕೊಂಡು ದುರಂತ ನಾಯಕರುಗಳನ್ನು ಸೃಷ್ಟಿಸುತ್ತಾನೆ.‌

*ಒಥೆಲೋ, ಕಿಂಗ್ ಲಿಯರ್, ಹ್ಯಾಮ್ಲೆಟ್ ಹಾಗೂ ಮ್ಯಾಕ್ ಬೆತ್ ಪಾತ್ರಗಳ‌‌ tragic flaw ಹೇಗೆ ವ್ಯಕ್ತಿ ಹಾಗೂ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ರಸವತ್ತಾಗಿ ನಿರೂಪಿಸಿದ್ದಾನೆ*.

ಓದುತ್ತ,ಕಲಿಯುತ್ತ,ಕಲಿಸುತ್ತ ಕಾಲ ಕಳೆಯುವ ನಮಗೆ ಅವನು ಈಗಲೂ ದಂತಕಥೆ.

ಹತ್ತು ವರ್ಷಗಳ ಹಿಂದೆ ಇಂಗ್ಲೆಂಡಿನ ಪ್ರವಾಸದಲ್ಲಿ ನಾನು ತುಂಬ ಇಷ್ಟಪಟ್ಟು ನೋಡಿದ ಅವನ ಊರು, ಮನೆ ಎಂದಿಗೂ ಮರೆಯಲಾಗದು.

ಅವನೊಬ್ಬ ಅದ್ಭುತ ಸಂತ. ಮನುಷ್ಯನ ಮನಸ್ಥಿತಿ ಅರ್ಥಮಾಡಿಕೊಳ್ಳುವ ಹತ್ತಾರು ಪಾತ್ರಗಳ‌ ಮೂಲಕ ಜೀವನ ಸಾರ ತಿಳಿಸುತ್ತಾನೆ.

*ಒಥೆಲೋನ ದುಡುಕು ಮತ್ತು ಸಂಶಯದಿಂದ ಪ್ರಾಣ ಕಳೆದುಕೊಳ್ಳುವ ಡೆಸ್ಡಿಮೋನಾ, ತನ್ನ ಮಂದಗತಿಯ ತೀರ್ಮಾನಗಳಿಂದ ಅಂತ್ಯ ಕಾಣುವ ಹ್ಯಾಮ್ಲೆಟ್, ಭ್ರಮೆ ಮತ್ತು ಅವಾಸ್ತವ ಪ್ರೀತಿಯ ನಿರೀಕ್ಷೆಗಳಿಂದ ಹುಚ್ಚನಾಗುವ ದೊರೆ ಲಿಯರ್ ಹಾಗೆ  ಅತಿಯಾದ ಮಹತ್ವಾಕಾಂಕ್ಷೆ‌ ಇಟ್ಟುಕೊಂಡು ನಂಬಿದ ರಾಜನನ್ನೇ ಕೊಲ್ಲುವ ಮ್ಯಾಕ್ಬೆತ್* ಪಾತ್ರಗಳು ನಮ್ಮ ಒಳಗೆ ನಮಗರಿವಿಲ್ಲದಂತೆ ಜೀವಂತವಾಗಿರುವ ಗುಣಗಳಾಗಿವೆ.

ನಾವು ಕೂಡ ನಾಲ್ಕು ಪಾತ್ರಗಳ ಸಮೀಕರಣದಂತಿದ್ದೇವೆ.‌

ಸಾಮಾನ್ಯ ಕುರಿ ಕಾಯುವ ಹಳ್ಳಿ ಹುಡುಗ, ತನ್ನ ಜೀವನಾನುಭವದ ಮೂಟೆ ಹೊತ್ತುಕೊಂಡು ಲಂಡನ್ ಸೇರುತ್ತಾನೆ. ತಲೆ ತುಂಬಾ ಬರೀ ಕನಸುಗಳು, ಕೈಯಲ್ಲಿ ಕಸುವಿರದಿದ್ದರೂ ನನಸು ಮಾಡುವ ಹುಮ್ಮಸ್ಸಿಗೇನೂ ಕೊರತೆ ಇರಲಿಲ್ಲ.

ಥಿಯೇಟರ್ ಹೊರಗೆ ಕುದುರೆ ಕಾಯುತ್ತ ನಾಟಕಗಳಲಿ ತನ್ಮಯನಾಗಿ ಮುಂದೆ ನಟನಾಗಿ, ನಾಟಕ ರಚಿಸಿ, ನಿರ್ದೇಶಿಸಿ ಕೊನೆಗೆ ಬಹು ದೊಡ್ಡ ಗ್ಲೋಬ್ ಥಿಯೇಟರ್ ಮಾಲೀಕನೂ ಆಗುವದೆಂದರೆ ಪವಾಡವೇ!

ಇಂಗ್ಲೆಂಡ್ ಎಂದರೆ ಶೇಕ್ಸ್‌ಪಿಯರ್ ನಾಟಕಗಳು ಎಂಬ ಪ್ರಸಿದ್ಧಿ ಅರಿತ ಎಲಿಜಾಬೆತ್ ರಾಣಿ ಅವನ ಪ್ರತಿಭೆಗೆ ಬೆರಗಾದದ್ದೀಗ ಮರೆಯಾಗದ, ಮರೆಯಲಾಗದ ಇತಿಹಾಸ.

ಅವನ ನಾಟಕಗಳ ಸೊಕ್ಕಡಗಿಸಲು ತಿಣುಕಾಡುವ university wits ಗಳು ಅವನೇರಿದ ಎತ್ತರಕೇರಲೇ ಇಲ್ಲ. ವಿಶ್ವವಿದ್ಯಾಲಯ ಪ್ರಾಧ್ಯಾಪಕರುಗಳಿಗೆ ಸೈದ್ಧಾಂತಿಕ ಸವಾಲೊಡ್ಡಿದರೂ ಆ ಅಹಮಿಕೆ ತಟ್ಟಿಸಿಕೊಳ್ಳದಿರಲು ಕಾರಣ ಅವನ ಆಧ್ಯಾತ್ಮಿಕ ಆಲೊಚನಾ ಕ್ರಮ.

ಅಲ್ಪರಿಗೆ ಅಹಮಿಕೆಯ ಸೋಂಕು ತಗುಲಿ ವಿನಾಶವಾಗುತ್ತಾರೆ ಎಂಬ ಸತ್ಯ ಅವನಿಗೆ ಗೊತ್ತಿದ್ದರಿಂದ ಅವನಿಗೆ ಅವನೇ ಸಾಟಿ.

ತಾವು ತುಂಬಾ ತಿಳಿದವರು ಎಂಬ ಅಹಮಿಕೆಯಲಿದ್ದ university wits ಗಳ ಯೋಗ್ಯತೆಯನ್ನು ಅರಿವು ಮಾಡಿಕೊಟ್ಟ ಧೀಮಂತ.

ಶೇಕ್ಸ್‌ಪಿಯರ್ ನಾಟಕದ ಜೀವಾಳವೆಂದರೆ‌ ಸಂಭಾಷಣೆ. ಕಾವ್ಯಮಯ ಹರಿತ ಮಾತುಗಳು ಮನುಷ್ಯನ ಎದೆ ಗೂಡು ಹೊಕ್ಕು ಬಿಡುತ್ತವೆ. ಮನುಷ್ಯನ ಇತಿಮಿತಿಗಳನ್ನು, ಮನದಾಳದ ಸ್ವಾರ್ಥ, ತಿಕ್ಕಲುತನ, ಅಸೂಯೆ, ಕಾಮ, ದ್ವೇಷ, ಭ್ರಮೆ ಹಾಗೂ ಅವನನ್ನು ನುಂಗಿ ಹಾಕುವ ದುರಂತಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾನೆ.

ಇಡೀ ಜಗತ್ತು ಬೆಚ್ಚಿ ಬೀಳುವಂತೆ ನಿರಂತರವಾಗಿ ಬರೆದು ಸಿರಿವಂತಿಕೆಯ ಉತ್ತುಂಗ ತಲುಪಿ ಬದುಕಿನ ಸಂತೃಪ್ತಿಯನ್ನು ತನ್ನ ಜೀವನದಲ್ಲಿ ಅನುಭವಿಸುತ್ತಾನೆ.‌

Way back to roots ಎಂಬಂತೆ ತನ್ನ ಕೊನೆ ದಿನಗಳನ್ನು ತಾನು ಹುಟ್ಟಿದ Stratford upon Avon ನಲ್ಲಿ ಕಳೆಯುತ್ತಾನೆ.

ಜಗತ್ತಿನ ಎಲ್ಲ ಭಾಷೆಗಳ ಮೂಲಕ ಅವನ ನಾಟಕಗಳು ಕೋಟ್ಯಾಂತರ ಪ್ರೇಕ್ಷಕರ ಮನಸು ಗೆದ್ದಿವೆ.

ಲಕ್ಷಾಂತರ ಸಾಹಿತ್ಯ ವಿದ್ಯಾರ್ಥಿಗಳು ಅವನ ನಾಟಕಗಳ ಮೇಲೆ ಇಂದಿಗೂ ಸಂಶೋಧನೆ ಮಾಡುತ್ತಲೇ ಇದ್ದಾರೆ.

ಪ್ರತಿ ಓದಿನಲ್ಲಿ ಅವನ ಪಾತ್ರಗಳು ಭಿನ್ನವಾಗಿ ಮೈದೆರೆಯುತ್ತವೆ.

ರೋಮಿಯೋ ಜೂಲಿಯೆಟ್‌, ಮರ್ಚೆಂಟ್ ಆಫ್ ವೆನಿಸ್, ಜೂಲಿಯಸ್ ಸೀಸರ್, ಮಿಡ್ ಸಮರ್ ನೈಟ್ ಡ್ರೀಮ್, ಕಾಮೆಡಿ ಆಫ್ ಎರರ್ಸ್ ಹೀಗೆ ಎಲ್ಲಾ ಜನಪ್ರಿಯ ಮತ್ತು ಜನಪ್ರಿಯವಲ್ಲದ ನಾಟಕಗಳಲ್ಲಿ ನಾವೆಲ್ಲ ಅಡಗಿ ಇಣುಕಿ ನೋಡುತ್ತಲಿದ್ದೇವೆ.

ಬದುಕಿನ ವಿವಿಧ ಘಟನೆಗಳು, ಪಾಠ ಕಲಿಸುವ ಭಿನ್ನ ವ್ಯಕ್ತಿಗಳು ಅವನ ನಾಟಕಗಳಲಿ ಕಣ್ಣಿಗೆ ಕಟ್ಟುವಂತೆ ಕುಣಿಯುತ್ತಾರೆ.

ನಾವು ಅಲ್ಪಮತಿಗಳು ಏನೇ ಓದಿದರು, ನೋಡಿದರು, ಕೇಳಿದರು ನಾವೇ ಕಟ್ಟಿಕೊಂಡ ಬಲೆಯಲ್ಲಿ ಸಿಕ್ಕು ಒದ್ದಾಡಿ ಸಾಯುತ್ತೇವೆ.

*ಶೇಕ್ಸ್‌ಪಿಯರ್ ಪಾತ್ರಗಳಿಗೆ ಸಿಕ್ಕ ಕೆಥಾರ್ಸಿಸ್ ಕೂಡ ನಮಗೆ ದಕ್ಕದೇ ಇರುವುದು ನಮ್ಮ ಮಿತಿ*.

ಆಧುನಿಕ ದಿನಗಳ behavioral science ಹೇಳುವ ಅನೇಕ ಸತ್ಯಗಳನ್ನು ಶೇಕ್ಸ್‌ಪಿಯರ್ ಎಂದೋ ಹೇಳಿದ್ದಾನೆ.

ಜೀವನಶೈಲಿ ನಿರ್ವಹಣೆ ಹಾಗೂ ಮನುಷ್ಯನ ಗುಣಸ್ವಭಾವ ಅರಿಯುವ ಉಪಕ್ರಮ ಅವನ ನಾಲ್ಕು tragic ಪಾತ್ರಗಳಲ್ಲಿ ಸಿಗುತ್ತದೆ.

ವರ್ತಮಾನದ ರಾಜಕಾರಣದ ಮಾತುಗಳನ್ನು ಕೇಳಿದಾಗ ಬ್ರೂಟಸ್ ನೆನಪಾಗುತ್ತಾನೆ.

ಬೆನ್ನಿಗೆ ಚೂರಿ ಹಾಕುವ ಮಾತುಗಳು ಸೀಸರ್ ಅಂತ್ಯದ ಮುಂದೆ ಯಾವ ಲೆಕ್ಕ!

ಹೀಗೆ ನನಗೆ ನಿತ್ಯವೂ ಹೊಸ ಮದುಮಗನಂತೆ ಕಂಗೊಳಿಸುವ ವಿಲಿಯಂ ಶೇಕ್ಸ್‌ಪಿಯರ್, ನಾನು ಸಂಕಷ್ಟದಲ್ಲಿದ್ದಾಗ ಕೈಹಿಡಿದು ನಡೆಸುತ್ತಾನೆ. ತಪ್ಪು ಮಾಡಿದಾಗ ಒಳಮನಸ ಎಚ್ಚರಿಸುತ್ತಾನೆ.

“ಒಂದರಗಳಗೆ ನನ್ನ ದುರಂತ ನಾಯಕರು ಮತ್ತವರ tragic flaw ನೆನಪಿಸಿಕೋ ದುರಂತ ಕಾಣಬೇಡ” ಎಂದು ಇರಿಯುತ್ತಾನೆ.

ನಮ್ಮ ಸಮಯ ಪ್ರಜ್ಞೆ ಮತ್ತು ಸಮೂಹ ಪ್ರಜ್ಞೆಯ ಸಂಕೇತವಾಗಿರುವ ಶೇಕ್ಸ್‌ಪಿಯರ್ ಹುಟ್ಟು ದಿನದ ನೆಪದಲ್ಲಿ ಅವನ ಕುರಿತು ಒಂದಿಷ್ಟು ಹಂಚಿಕೊಂಡೆ.

ಪುಸ್ತಕ ಓದುವ ಹುಚ್ಚು ಹಿಡಿಸಿದ ಶೇಕ್ಸ್‌ಪಿಯರ್ ಹಾಗೂ ಪುಸ್ತಕ ದಿನಾಚರಣೆಯ ಶುಭಾಶಯಗಳು.

*ಸಿದ್ದು ಯಾಪಲಪರವಿ*

Monday, March 18, 2019

ಸಿದ್ಧೇಶ್ವರ ಸ್ವಾಮೀಜಿ

*ಪೂಜ್ಯ ಸಿದ್ಧೇಶ್ವರ ಸ್ವಾಮಿಗಳೊಂದಿಗೆ ಒಂದಿಷ್ಟು ಆಲಿಸುವಿಕೆ*

ಈ ಯುಗದ ದಂತಕಥೆ, ಸರಳ ವ್ಯಕ್ತಿತ್ವದ ಮೇರು ಪರ್ವತ ಪೂಜ್ಯ ಸಿದ್ದೇಶ್ವರ ಅಪ್ಪಗಳು. . ಒಂದಾದ ಕಾರಣ ಇವರ ಪ್ರವಚನಗಳಿಗೆ ದಿವ್ಯ ಶಕ್ತಿಯಿದೆ.
ಬಹಳಷ್ಟು ಜನ ಅದ್ಭುತವಾಗಿ ಮಾತನಾಡುತ್ತಾರೆ ಆದರೆ ಬದುಕುವುದಿಲ್ಲ. ನೂರಾರು ಅಪಕ್ವ ವರ್ತನೆ,ಸಣ್ಣತನ, ಸಿನಿಕತೆ. ಹೇಳುವುದು ವೇದಾಂತ ಆದರೆ ಖಾಸಗಿ ಬದುಕು ಅಯ್ಯೋ ಯಾರಿಗೂ ಬೇಡ.

ಆದರೆ ಸಿದ್ಧೇಶ್ವರ ಅಪ್ಪಗಳದು ಭಿನ್ನ ವ್ಯಕ್ತತ್ವದ ನಡೆನುಡಿ, ಅಪ್ಪಿ ತಪ್ಪಿ ನಕಾರಾತ್ಮಕ ಮಾತುಗಳ ಕಡೆ ಗಮನ ಹರಿಸದ ನಿಲುವು. ಸಂಪೂರ್ಣ ಜಾಗೃತಾವಸ್ಥೆ. ಮಾತಿನಲಿ ನಮ್ರ ವಿನಮ್ರತೆಯ ಹರವು.

ವೇದಾಂತ, ವಚನಗಳು, ಗೀತೆ,ಶಾಸ್ತ್ರ, ಬುದ್ಧ,ಝೆನ್,ಓಶೋ, ಭಾರತೀಯ ತತ್ತ್ವಶಾಸ್ತ್ರ ಹೀಗೆ ಆಳವಾದ ಅಧ್ಯಯನ, ಅದೂ ಕೇವಲ ಅಧ್ಯಯನವಲ್ಲ ಸಂಪೂರ್ಣ ಆಧ್ಯಾತ್ಮಿಕ ಬದುಕಿನ ಅದಮ್ಯ ಸಾಧನೆಯೂ ಎದ್ದು ಕಾಣುತ್ತದೆ. ಇಷ್ಟೊಂದು ಗೊಂದಲದ ಗೂಡಾಗಿರುವ ಸಮಾಜೋಧಾರ್ಮಿಕ ವ್ಯವಸ್ಥೆಯಲಿ ವಿವಾದಗಳಿಲ್ಲದೆ ಬದುಕುವುದು ಕಠಿಣ.

ಮೂಲಭೂತವಾದ ತಾಂಡವವಾಡುತ್ತಿರುವ ಕಾಲದಲ್ಲಿ ನಾವಿದ್ದೇವೆ. ಎಲ್ಲವೂ ಈಗ ಅತಿರೇಕದ ಪರಮಾವಧಿ. ಎಡಬಲಗಳ ಅಟ್ಟಹಾಸ, ಹೇಳಿದ್ದೇ ಸರಿ ಎಂಬ ಹಟಮಾರಿತನ. ಮಾತು ಕೇಳದಿದ್ದರೆ ಯಾಕೆ ಕೊಂದು ಬಿಡಬಾರದೆಂಬ ಅನರ್ಥ ಆಕ್ರೋಶ.
ಸಿದ್ಧಾಂತಗಳ ಹೇರಿ ಪ್ರಭುತ್ವ ಸಾಧಿಸುವ ಹುನ್ನಾರ. ಧರ್ಮ, ಭಾಷೆ,ಸಿಧ್ಧಾಂತಗಳ ನೆಪದಲ್ಲಿ ನೆಪೋಟಿಸಂ.‌

ವಚನ ಶಾಸ್ತ್ರಗಳ ಅಧ್ಯಯನ ಸಂದರ್ಭದಲ್ಲಿ ಕೈಗೆ ಪೂಜ್ಯರ ಅಲ್ಲಮಪ್ರಭು ವಚನಗಳ ಎಂಬ ಬೃಹತ್ ಗ್ರಂಥ ನನಗೆ ಪೂಜ್ಯ ಕೈವಲ್ಯಾನಂದ ಸ್ವಾಮಿಗಳ ಮೂಲಕ ಸಿಕ್ಕಿತ್ತು.

ಈ ಕುರಿತು ಸಾಧ್ಯವಾದರೆ ಪೂಜ್ಯರೊಂದಿಗೆ ಮಾತನಾಡುವ ಮನಸ್ಸು ಇತ್ತು. ಆದರೆ ಪೂಜ್ಯರ ದರ್ಶನ, ಮಾತು ಈಗ ಸರಳವಲ್ಲ. ಜನ ಅನಗತ್ಯ ಕೆಣಕುವ ಪ್ರಶ್ನೆಗಳನ್ನು ಕೇಳುವುದನ್ನು ಗ್ರಹಿಸಿದ ಶ್ರೀಗಳು ಅಂತಹ ಮುಜುಗರದಿಂದ ಸದಾ ದೂರ ಸರಿಯುತ್ತಾರೆ.‌
ನಾವು ಅಷ್ಟೇ ತುಂಬ ತಿಳಿದವರ ಹಾಗೆ ಮಾತನಾಡಿ ದಡ್ಡತನ ಪ್ರದರ್ಶಿಸಿಬಿಡುತ್ತೇವೆ. *ಎಲ್ಲ ಬಲ್ಲವರು ನಮ್ಮ ಅಜ್ಞಾನಕ್ಕೆ ನಕ್ಕು ಸುಮ್ಮನಾಗುತ್ತಾರೆ*.

ಅದರ ಪ್ರಜ್ಞೆ ಇಟ್ಟುಕೊಂಡ ನಾನು ಕೆಲವು ಪ್ರಶ್ನೆಗಳನ್ನು ಮಾತ್ರ ಕೇಳಿ ಅವರಿಂದ ಸುದೀರ್ಘ ವಿವರಣೆ ಬಯಸಿದ್ದೆ.
ಇಂದು ಹಳಿಯಾಳದ ಸುಂದರ ಪರಿಸರ ಮಡಿಲಿನ ಕೋಟೆ ಪ್ರವಾಸಿ ಮಂದಿರದಲ್ಲಿ ದರ್ಶನವಾದಾಗ, ಕೈವಲ್ಯಾನಂದರ ಪರಿಣಾಮಕಾರಿ ಪರಿಚಯದ ಫಲವಾಗಿ ಉತ್ತರ ಲಭಿಸಿತು.

ಶಾಂತವಾಗಿ ಹರಿಯುವ ನದಿಯಂತೆ, ಪಕ್ಷಿಗಳ ಕಲವರದ ಸಂಗೀತದ ಮಧ್ಯ ಹೊರಟ ಪೂಜ್ಯರ ಮಾತುಗಳ ಗಂಭೀರವಾಗಿ ಆಲಿಸಿದೆ. ಅನೇಕ ಅನುಮಾನಗಳಿಗೆ ಮೋಕ್ಷ ಸಿಕ್ಕಿತು. ಏನೇನೋ ಭ್ರಮೆ ಇಟ್ಟುಕೊಂಡು ಬದುಕುವ,ಓದುವ,ಬರೆಯುವ,ಹೇಳುವ ನಮ್ಮ ಮಿತಿಗಳನ್ನು ತಮ್ಮದೇ ಶೈಲಿಯಲ್ಲಿ ಪೂಜ್ಯರು ತೆರೆದಿಟ್ಟರು.
ಗೊತ್ತಿರುವ ಪರಮ ಸತ್ಯಗಳಿಗೆ ದೊಡ್ಡವರ ಅಂಕಿತ ಬಿದ್ದರೆ ಇನ್ನೂ ಹೆಚ್ಚು ಸಮಾಧಾನವಾಗುತ್ತದೆ.

ಅನುಭವ ಮಂಟಪದಲ್ಲಿ ಬಸವಾದಿ ಶರಣರ ಮಾತುಗಳಿಗೆ ಪ್ರಭುದೇವರ ಅಂಕಿತ ಬಿದ್ದ ಮೇಲೆ ಅದು ವಚನವಾಗಿ ದಾಖಲಾಗುತ್ತಿತ್ತು.

ಹಾಗೆ ನಮ್ಮ ಅನೇಕ ಅಭಿಪ್ರಾಯಗಳಿಗೆ ದೊಡ್ಡವರ ಅಂಕಿತ ಬೇಕಾಗುತ್ತದೆ. ಅದೂ ಸಿದ್ಧೇಶ್ವರ ಅಪ್ಪಗಳಂತವರ ಒಪ್ಪಿಗೆ.
“ *ನಾವು ಬದುಕಿರುವ ಕಾಲಘಟ್ಟದಲ್ಲಿ ನಮ್ಮ ಖುಷಿಗಾಗಿ ಕೆಲಸ ಮಾಡಬೇಕು, ಬೇರೇಯವರನ್ನು ಬದಲಾಯಿಸಬಲ್ಲೆವು ಎಂಬ ಭ್ರಮೆಯಿಂದಲ್ಲ* ಕೋಟ್ಯಾಂತರ ಜನಸಂಖ್ಯೆ ಹೊಂದಿರುವ ನಮ್ಮ ದೇಶ ಎಲ್ಲವನ್ನೂ ಅರಗಿಸಿಕೊಳ್ಳುತ್ತದೆ, ಬೇಡವಾದದ್ದನ್ನು ಬೇಗ ತಿರಸ್ಕರಿಸಿಬಿಡುತ್ತದೆ. “ ಎಂಬ ಪೂಜ್ಯರ ಮಾತುಗಳು ವಾಸ್ತವವಾದ ಹಾಗೂ ವರ್ತಮಾನದಲ್ಲಿ ಬದುಕಬೇಕಂಬ ನನ್ನ ಆಲೋಚನಾ ಲಹರಿಗೆ ಮುದ್ರೆ ಒತ್ತಿದಂತಾಯಿತು.

ನಾವ್ಯಾರು ಪೂಜ್ಯರ ಹಾಗೆ ಸರಳವಾಗಿ ಬದುಕಲಾರೆವು ಆದರೆ ಅವರ ಹಾಗೆ ಆಲೋಚಿಸುವ ಮನೋಧರ್ಮ ರೂಪಿಸಿಕೊಳ್ಳುವ ಒಳೆಚ್ಚರ ಇಮ್ಮಡಿಸಿತು.
ತುಕ್ಕು ಹಿಡಿದ ಮನಸಿಗೆ ಹೊಸ ಹೊಳಪು ಹೊಳೆಯಿತು.
ಭ್ರಮೆಗಳಿಲ್ಲದೆ ಮಿತಿಯರಿತು ವರ್ತಮಾನವ ಅನುಭವಿಸಿ ಮುಂದೆ ಸಾಗಲು ಬೆಳಕು ದೊರೆಯಿತು.

*ಸಿದ್ದು ಯಾಪಲಪರವಿ*

Sunday, March 10, 2019

ಕನ್ನಡದ ಅಸ್ಮಿತೆ

*ಒಂದು ಪ್ರತಿಕ್ರಿಯೆ*

ಪದ್ಮರಾಜ ದಂಡಾವತಿ: ಕನ್ನಡ ಚುನಾವಣೆ ವಿಷಯ... ‌( ಪ್ರಜಾ ಮತ, ೨ ಮಾರ್ಚ್ , ೨೦೧೮)

*ಕನ್ನಡದ ಅಸ್ಮಿತೆ ಚುನಾವಣಾ ದಾಳವಾಗದು*.

ದಂಡಾವತಿಯವರು ಕನ್ನಡ ಹೋರಾಟ ನಡೆದು ಬಂದ ಬಗೆಯನ್ನು ಅರ್ಥಪೂರ್ಣವಾಗಿ ವಿವರಿಸಿ ಎಚ್ಚರಿಸಿದ್ದಾರೆ.

ನೆರೆ ರಾಜ್ಯಗಳಾದ ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳ ಜನರಷ್ಟು ಭಾಷಾಭಿಮಾನ ಕನ್ನಡಿಗರದಲ್ಲ.

ಇಂಗ್ಲಿಷ್ ಮಾಧ್ಯಮ ಶಿಕ್ಷಣದ ದಾಸರಾದ ಮಧ್ಯಮ ವರ್ಗದ ಕನ್ನಡಿಗರು ಕನ್ನಡದಿಂದ ದೂರ ಸರಿದಿದ್ದಾರೆ.

ಮಾತೃಭಾಷೆಯ ಶಿಕ್ಷಣದ ಮಹತ್ವದ ಕುರಿತು ಕುವೆಂಪು ಆದಿಯಾಗಿ ಜಗತ್ತಿನ ಎಲ್ಲ ಶಿಕ್ಷಣ ತಜ್ಞರು ಗಂಟಲು ಹರಿದುಕೊಂಡರೂ ಗ್ರಹಿಸಲಾಗದ ಕಿವುಡರು ನಾವು.

ಮಾತೃ ಭಾಷಾ ಶಿಕ್ಷಣದ ಮಹತ್ವ ಒಂದು ಸಮೂಹ ಪ್ರಜ್ಞೆಯಾಗಿ ಉಳಿಯಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಕನ್ನಡ ನಾಶವಾಗಲು ಹೋರಾಟದ ಮುಂಚೂಣೆಯಲ್ಲಿರವವರ ನೈತಿಕ ಪ್ರಶ್ನೆಯೂ ಕಾರಣ.

ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ವೇದಿಕೆ ಮೇಲೆ ಮಾತನಾಡುವ ಶಿಕ್ಷಣತಜ್ಞರು, ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕೊಡಿಸಿ ನೈತಿಕ ಮಟ್ಟ ಕಳೆದುಕೊಂಡಿರುವುದು ಕನ್ನಡದ ದೌರ್ಭಾಗ್ಯ.

ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಬಲಶಾಲಿಯಾಗಿ ಉಳಿದಿದೆ. ಪುಸ್ತಕ ಪ್ರೇಮದ ಅನನ್ಯತೆಯನ್ನು ಪ್ರಶ್ನಿಸಲಾಗದು.

ಆದರೆ ತಮ್ಮ ಮುಂದಿನ ಜನಾಂಗಕ್ಕೆ ಶಿಕ್ಷಣ ಕೊಡುವ ವಿಷಯ ಬಂದ ಕೂಡಲೇ ಎಲ್ಲ ಮಂಗಮಾಯ,ಅಯೋಮಯ.

ಮಾತೃಭಾಷಾ ಶಿಕ್ಷಣದ ಕುರಿತು ಮಾತನಾಡುವ ಧ್ವನಿಗಳು ಅಡಗಿ ಹೋಗಿವೆ.

ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಇಚ್ಛಾಶಕ್ತಿ ಯಾರಲ್ಲೂ ಉಳಿದಿಲ್ಲ.

ರಾಜಕಾರಣಿಗಳು, ಶಿಕ್ಷಣತಜ್ಞರು, ಕನ್ನಡ ಪರ ಹೋರಾಟಗಾರರಿಗೆ ಕನ್ನಡ ಹೊಟ್ಟೆಪಾಡು ಆದರೆ ಕರುಳ ಸಂಬಂಧವಾಗಲೇ ಇಲ್ಲ.

ಭಾಷೆ,ನೆಲ,ಜಲ ನಮ್ಮ ರಾಜಕೀಯ ಹೋರಾಟದ ವಿಷಯವಾಗಿ ಈಗ ಉಳಿದಿಲ್ಲ.

ರಾಷ್ಟ್ರೀಯ ಪಕ್ಷಗಳ ಗುಲಾಮರಾಗಿರುವ ನಮ್ಮ ರಾಜಕೀಯ ನಾಯಕರುಗಳಿಗೆ ನಾಡು,ನುಡಿ ಮಹತ್ವವಾಗುವ  ಪ್ರಶ್ನೆಯೇ ಅಲ್ಲ.

ಭಾಷೆಯನ್ನು ಮುಂದಿಟ್ಟುಕೊಂಡು ಗೆಲ್ಲುವ ವಾತಾವರಣವಿಲ್ಲ. ಹಾಗಾಗಿ ಕನ್ನಡ ಭಾಷೆ ತನ್ನ ಅಂತಃಸತ್ವ ಕಳೆದುಕೊಂಡಿದೆ.

ಒಂದೆಡೆ ಮಾತೃಭಾಷಾ ಶಿಕ್ಷಣವನ್ನು ಬೆಂಬಲಿಸುವ ಸರಕಾರ ನ್ಯಾಯಾಂಗದ ಮೂಲಕ ಪಾಲಕರ ಹಕ್ಕನ್ನು ಎತ್ತಿ ಹಿಡಿಯುವ ತೀರ್ಮಾನದ ನೆಪ ಒಡ್ಡುತ್ತದೆ. ಸರಕಾರಿ  ಶಾಲೆಗಳನ್ನು ಸಂಖ್ಯೆಯ ಕೊರತೆಯ ನೆಪದ ಮೂಲಕ ಮುಚ್ಚುವ ಹುನ್ನಾರ.

ಸ್ವತಃ ರಾಜಕಾರಣಿಗಳು ನಡೆಸುವ ಇಂಗ್ಲಿಷ್ ಮಾಧ್ಯಮ ಶಾಲೆಗಳ ರಕ್ಷಣೆ ಮಾಡುವ ಹಿಡನ್ ಅಜೆಂಡಾ ಈಗ ಓಪನ್ ಸಕ್ರೆಟ್.

ಪಾಲಕರ ನಿರಾಸಕ್ತಿ, ರಾಜಕಾರಣಿಗಳ ಹಿಪೊಕ್ರೆಟಿಕ್ ನಿಲುವಿನಿಂದ ಭಾಷೆ ಈಗ ಉಳಿಯುವುದಿಲ್ಲ.

ಯುವಕರು, ವಿದೇಶದಲ್ಲಿ ಕೆಲಸ ಮಾಡುವ ಟೆಕ್ಕಿಗಳು ಮಾತೃಭಾಷೆಯ ಮಹತ್ವ ಅರ್ಥಮಾಡಿಕೊಂಡು ಭಾಷೆಯ ಉಳಿವಿಗಾಗಿ ಹೆಣಗಾಡುತ್ತಿರುವುದೂ ಹೊಸ ಭರವಸೆ.

ತಂತ್ರಜ್ಞಾನದ ವಿಪರೀತ ಬಳಕೆ, ಈಗಿನ ತಲೆಮಾರಿನ ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದಾಗಿ ಮಕ್ಕಳು ಕನ್ನಡ ಭಾಷೆಯ ಗ್ರಹಿಕೆಯಿಂದ ವಂಚಿತರಾಗಲು ನಾವೇ ಕಾರಣ.

ಮುಂದೆ ಇದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ನಮ್ಮ ಮೂರ್ಖತನವನ್ನು ಶಪಿಸುವದರಲ್ಲಿ ಸಂಶಯವಿಲ್ಲ.

ಆದ್ದರಿಂದ ಕನ್ನಡ ಭಾಷೆ ಈಗ ಚುನಾವಣಾ ವಿಷಯವಾಗುವುದಿಲ್ಲ. 

----ಸಿದ್ದು ಯಾಪಲಪರವಿ.

Tuesday, March 5, 2019

ನೀನು ಧ್ಯಾನ

*ನೀನು, ಧ್ಯಾನ,ಕಾಮ‌‌ ಮತ್ತು ದೇವಸಮಯ*

ದೇವಸಮಯದಲಿ ನೀ ಸಿಕ್ಕದ್ದಷ್ಟೇ ನೆನಪು, ಮುಂದಿನದೆಲ್ಲ ಅನಿರೀಕ್ಷಿತ ತುಂಬ ತುಂಬಾ ಅನಿರೀಕ್ಷಿತ!
ಬದುಕಿನ ಹುಡುಕಾಟಕೆ ನೂರಾರು ಉದ್ದೇಶವೋ, ದುರುದ್ದೇಶವೋ ನಾ ಕಾಣೆ.‌ ಒಟ್ಟು ಹುಡುಕಾಟವಿರುತ್ತದೆ. ಗಂಡಸಿನ ಮನಸು ಒಂದರ್ಥದಲ್ಲಿ ತುಡುಗ ದನ, ಅವಕಾಶಕ್ಕಾಗಿ ಕಾಯುವ ಅಷ್ಟಾವಂಕ ಅಥವಾ ಅಷ್ಟಾವಕ್ರನಂತೆ. ಅವಕಾಶ ಸಿಕ್ಕರೆ ಒಂದು ಕೈ ನೋಡಿಯೇ ಬಿಡುವ ಹೀನ ಚಪಲ.

*ಆದರೆ ನಾನು ಹೆಣ್ಣನ್ನು ಹೀಗೆ ವ್ಯಾಖ್ಯಾನಿಸುವಷ್ಟು ನೀಚನಾಗಲಾರೆ.ಅವಳಿಗಿರುವ ಸಂಯಮ ಅಪರೂಪ, ಅನುರೂಪ ಹಾಗೂ ಅನನ್ಯ*.

ಪ್ರತಿಯೊಬ್ಬ ಗಂಡಸಿನ ಮೊದಲ ಸೆಳೆತ ಹೆಣ್ಣು ಅಂತಾರೆ ನಂತರ ಹೊನ್ನು ಮತ್ತು ಮಣ್ಣು ,‌ ಆದರಿದು ಅವರವರ ಅಭಿರುಚಿ, ಆಸಕ್ತಿ ಮತ್ತು ವಯೋಮಾನಕ್ಕೆ ಸಂಬಂಧಿಸಿದ್ದು ಬಿಡಿ. ಈಗ ನಾ ನನ್ನ ಮಿತಿಯನಷ್ಟೇ ಮಾತಾನಾಡುವೆ.‌ ಮಾತನಾಡಬೇಕು ಕೂಡ!
I have no right to speak on others.

ಒಟ್ಟಾರೆ ನಾ ಹುಡುಕಿದ್ದು ನಿಜ. ಒಮ್ಮೆಲೇ ಆ ಹುಡುಕಾಟ ನಿಲ್ಲಿಸುವ ಆಲೋಚನೆ ದಟ್ಟವಾಗಲು ನನ್ನ ವಯೋಮಾನ ಕಾರಣವಾಯಿತು. ಉಳಿದ ಆಧ್ಯತೆಗಳು ಆವರಿಸಲಾರಂಭಿಸಿದವು. ಅದೇ ಹೆಸರು, ಕೀರ್ತಿ, ಜವಾಬ್ದಾರಿ, ಹಣ, ಆಸ್ತಿ ಹೀಗೆ ಹೊಸ ಆಸೆಗಳ ಮಧ್ಯೆ ನೀ ಧುತ್ತೆಂದು ಕಾಣಿಸಿಕೊಂಡಾಗ ಎಲ್ಲ ಉಲ್ಟಾ ಪಲ್ಟಾ.

ಹಾಗೆ ಮಾತು ಕತೆ ಮುಂದುವರೆದಾಗ ನೀ ಕಳೆದು ಹೋದೆ, ಬದುಕಿನಲಿ‌ ಯಾವತ್ತೂ ಕಳೆದು ಹೋದವಳೇ ಅಲ್ಲ ಎಂದು ಗೊತ್ತಾದಾಗ ನಂಬಲಾಗಲೇ ಇಲ್ಲ ಆದರೀಗ ನಂಬಿದ್ದೇನೆ, ನಂಬುವುದು ಧರ್ಮ.

ಬಂಗಾರ ಪರೀಕ್ಷೆ ಮಾಡಲು ಅತಿಯಾಗಿ ತಿಕ್ಕಿದರೆ ಅಂದ ಕಳೆದುಕೊಳ್ಳುತ್ತದೆಯೋ ಹೊರತು ಅದು ಕಬ್ಬಿಣವಾಗುವುದಿಲ್ಲ. ಈಗ ತಿಕ್ಕುವ ತಿಕ್ಕಲುತನ ನಿಲ್ಲಿಸಿ ಹಗುರಾಗಿದ್ದೇನೆ. ನೀ ಅಂತವಳಲ್ಲ ಎಂಬ ಸತ್ಯ ಅಂದರೆ ಸತ್ಯ ಅಷ್ಟೇ.

ಹಲವು ಭೇಟಿ, ಚರ್ಚೆಗಳ ನಂತರ ಹೆಚ್ಚು ಹತ್ತಿರ ಆಗಿದ್ದು ದೈವ ಕೃಪೆ. ಆಧ್ಯಾತ್ಮಿಕ ಬದುಕ ಅನುಭವಿಸಿದ ಮೇಲೆ ಯಾಕೋ ಮೋಸ ಮಾಡಿಕೊಳ್ಳುವ ಮನಸಾಗಲಿಲ್ಲ. ಸಣ್ಣಗೆ ಪಾಪ ಪ್ರಜ್ಞೆ ಕಾಡಲಾರಂಭಿಸಿ “ಯಾಕೆ ಹೀಗಾಯ್ತು ? “ ನಂಬಿದ ದೇವರಿಗೆ ನಿರ್ಮಲವಾಗಿ ಪ್ರಶ್ನಿಸಿದೆ. ಉತ್ತರ ಸಿಕ್ಕಿತು.

ಇದು ಕೇವಲ ಯೋಗಾಯೋಗ ಅಂದುಕೊಂಡು ಪಯಣ ಮುಂದುವರೆಸಿದೆ. ದಕ್ಕಿಸಿಕೊಳ್ಳುವ ಕಾರಣದಿಂದಾಗಿ ಏನೇನೋ ಯೋಚನೆ,ಯೋಜನೆ, ಆಯೋಜನೆ ತಾನೇ ತಾನಾಗಿ ರೂಪಗೊಂಡವು.
ನೀನು ಯಾವುದು ಅಸಾಧ್ಯ ಅಂದಿದ್ದೆ ಅದೆಲ್ಲ ಸಾಧ್ಯವಾಗುವ ವಾತಾವರಣ ಸೃಷ್ಟಿಯಾಯಿತು.
ಹಳೆಯ ಸುದೀರ್ಘ ಬಂಧನ‌ ಅವರಾಗಿಯೇ ಕಡಿದಾಗ ನಿನ್ನಂತೆ ನನಗೂ ಆಶ್ಚರ್ಯ!

‘ ಅರೆ ಇದು ಹೇಗೆ ಪಕ್ಕದಲ್ಲಿ ಇದ್ದವರು ತಾವೇ ಹೇಗೆ, ಯಾಕೆ ದೂರಾದರು’  ಅದನ್ನು ನಾವಿಬ್ಬರೂ ಊಹಿಸಿರಲಿಲ್ಲ.

ದೈವ ಕೃಪೆ ಹೊಸ ಅನುಬಂಧದ ಪರವಾಗಿರಲು ಕಾರಣ ತೀವ್ರ ತುಡಿತವಿರಬೇಕು ಅಂದುಕೊಂಡೆವು, ಆದರೆ ಬರೀ ತುಡಿತವಿದ್ದರೆ ನಾವು ಮೈ ಮರೆತು ಅನಾಹುತ ಮಾಡಿಕೊಂಡು ಸಿಕ್ಕು ಬೀಳುತ್ತಿದ್ದೆವು.

ನಾನಂತೂ ದೇವರನ್ನು ಗಟ್ಟಿಯಾಗಿ ಹಿಡಿದುಕೊಂಡೆ, ಬೇರೆ ದಾರಿಯೇ ಇರಲಿಲ್ಲ, ಹೆದರಿ ದೂರಾಗುವ ಮನಸು ಇರಲಿಲ್ಲ, ದಕ್ಕಿಸಿಕೊಳ್ಳಲು ನೂರಾರು ಕಾರಣಗಳು ಸಹಜವಾಗಿ ಹುಟ್ಟಿಕೊಂಡವು.
ವಿಧಿ, ಋಣಾನುಬಂಧ ಹೀಗೆ ಏನೇನೋ ವ್ಯಾಖ್ಯಾನಿಸುತ್ತ ಹೋದೆವು. ಅದು ಅನಿವಾರ್ಯ ಇತ್ತು. ನಿನಗೆ ಒಮ್ಮೊಮ್ಮೆ ರೋಸಿ ಹೋಗಿ ಸಂಬಂಧ ಕಡಿದು ಕೊಳ್ಳುವಷ್ಟು ಕಿರಿಕಿರಿ ಆದರೂ ಸಹಿಸಿಕೊಂಡೆ ಕಾರಣ?

‘ಹಳೆಯ ಬಂಧನದಿಂದ ಸಂಪೂರ್ಣ ಹೊರ ಬಂದಿದ್ದೆ ನಾನು ದೂರಾದರೆ?’ ಇಂತಹ ಆತಂಕಕಾರಿ ಪ್ರಶ್ನೆಗಳು ನಿನ್ನನ್ನು ಕಟ್ಟಿ ಹಾಕಿ ನರಳುವಂತೆ ಮಾಡಿದವು.

ಸಮಾಜದ ಮುಖವಾಡಗಳ ಕಿತ್ತಿ ಬಿಸಾಕಿದೆ, ವ್ಯವಸ್ಥೆಗೆ ನೀ ಅನಿವಾರ್ಯ ಎಂಬ ಭ್ರಾಂತು ಬಿಡಿಸಲು ತುಂಬ ಸಮಯ ತೆಗೆದುಕೊಂಡೆ. ಏನೇ ಆಗಲಿ ಹಟಕ್ಕೆ ಬಿದ್ದು ದಕ್ಕಿಸಿಕೊಂಡೆವು, ಆ ಮಾತು ಬೇರೆ.

                                    ***

ಇದು ಪರಸ್ಪರ ದಕ್ಕಿಸಿಕೊಂಡ ಬಗೆಯಾದರೆ ಉಳಿದಿರುವ ಸಂಗತಿಗಳಿಲ್ಲಿ ನೆನಪಿಸಬೇಕು.
ಗಂಡು ಹೆಣ್ಣಿನ ಲವ್ ಮೇಕಿಂಗ್ ಆಯಾಮಾಗಳನ್ನು ಮಿಲನ ಅಂತಾರೆ, ಮಿಲನೋತ್ಸವ ಅಂತಾರೆ ನಾ ತುಂಬ ಸಡಗರದಿ‌ಂದ *ಮಿಲನಮಹೋತ್ಸವ* ಎಂದು ಬರೆದು ಬಿಟ್ಟಿದ್ದೆ ಆದರದು ಕೇವಲ ಅಕ್ಷರದ ಸಂಭ್ರಮವಾಗಿತ್ತು.

ಮಾನವೀಯ ಸಂಬಂಧಗಳನ್ನು ಕಟು ವಾಸ್ತವದಲಿ ಓಶೋ ವಿವರಿಸುವದನ್ನು ಕೇಳಿದಾಗ *ಇಂಪಾಸಿಬಲ್* ಅನಿಸುತ್ತಿತ್ತು. ಒಬ್ಬ ಅಷ್ಟೊಂದು ಗಟ್ಟಿಯಾಗಿ ಹೇಳಲು ಅವನ ಜೀವನಾನುಭವವೇ ಕಾರಣ ಎಂಬ ಸತ್ಯ ಗೊತ್ತಿದ್ದರೂ ಗುಮಾನಿಸಿದ್ದೆ. ಅವನು ಮಿಲನದ ಕುರಿತು ಹೇಳಿದ್ದು ಪ್ರಯೋಗಿಸಬೇಕೆಂಬ ಬೇಗುದಿ ಸುಪ್ತಮನಸಲಿ ಸುಳಿದಾಡುತ್ತಿತ್ತು
ಅಂತಹ ಪ್ರಯೋಗದ ಕುರಿತು ಅನಿವಾಸಿ ಸಂಗಾತಿಯೊಬ್ಬರೊಂದಿಗೆ ಮಾತಾಡಿದ್ದೆ.

ಗಂಡು ತನ್ನ ಸಂಗಾತಿಯ  ಪರಮಸುಖ ಲೆಕ್ಕಿಸದೇ ವಿಸರ್ಜಿಸಿ ಹಗುರಾಗಿ ಮುಗಿಸುವ ಸಮಭೋಗ ವ್ಯವಹಾರದಲ್ಲಿ ಮಿಲನವೂ ಇಲ್ಲ ಮಹೋತ್ಸವವೂ ಇಲ್ಲ ಅದೊಂದು ಕೇವಲ ಕೆಲ ನಿಮಿಷಗಳ ಕ್ರಿಯೆ. ಮೊದಲಾಟದ  ಪ್ರೇಮದ ಉತ್ತುಂಗಕೇರಲು ಇಬ್ಬರೂ ವಂಚಿತರಾಗಲು ಅವಸರವೇ ಕಾರಣ.
ಮಿಲನ ಹೇಗಿರಬೇಕೆಂದು ಓಶೋ ವಾತ್ಸಾಯನನ್ನು ಮೀರಿಸುವಂತೆ ಹೇಳಿ ಎಚ್ಚರಿಸಿದರೂ ಇಂದಿಗೂ ಅದೊಂದು ಅತ್ಯವಸರದ ವಿಸರ್ಜನೆಯಾಗಿ ಉಳಿದಿದೆ ಮಹೋತ್ಸವದ ಸಡಗರ ವಿರಳಾತಿ ವಿರಳ.

ಓದು,ಬರಹ,ಧ್ಯಾನದ ಮಹತ್ವ ಅರಿತ ಮನಸು ಆ ರೀತಿಯ ಮಹೋತ್ಸವದ ಆಚರಣೆಗಾಗಿ ತುಡಿಯುತ್ತಿತ್ತು.
‘ಆ ರೀತಿಯ ಸಂಗಾತಿಗಳು, ಶಿಷ್ಯರು, ಸ್ನೇಹಿತರು ದೇವಸಮಯದಲಿ ಮಾತ್ರ ಸಿಗುತ್ತಾರೆ’ ಎಂಬ ವೀಣಾ ಬನ್ನಂಜೆಯವರ ಮಾತನ್ನು ನೆನಪಿಸಿಕೊಂಡೆ.
ಈ ಮಾತು ಲಂಪಟರಿಗೆ, ಫ್ಲರ್ಟ್ ಗಳಿಗೆ ಅನ್ವಯಿಸಲಾರದು ಕೂಡ.
ನಾನು ಲಂಪಟನಲ್ಲವಾದರೂ ಚಂಚಲದ ಹುಡುಕಾಟ, ಕುತೂಹಲ ನಿಂತಿರಲಿಲ್ಲ. ಬಹುಶಃ ಸಿಕ್ಕವರು ದೇವಸಮಯದಲಿ ಸಿಕ್ಕಿರಲಿಲ್ಲವೇನೋ?

ನನ್ನ ಪೂರ್ವಾಪರ ಮುಕ್ತವಾಗಿ, ಪ್ರಾಮಾಣಿಕತೆ ಹೇಳಿಕೊಳ್ಳುವ ಧೈರ್ಯ ನನ್ನದು.
ನೀ ತುಂಬ ಮುಜುಗರ ಪಟ್ಟುಕೊಂಡದ್ದು ಅಸಹಜವೇನಲ್ಲ.
ಪ್ರೀತಿ, ಜೀವನೋತ್ಸಾಹ ಹಾಗೂ ಸಹನೆಯಿಂದ ನಿನ್ನನ್ನು ಸಂಪೂರ್ಣ ಆಕ್ರಮಿಸಲು ತೀರ್ಮಾನಿಸಿದೆ. ನೀನಿರುವ ವಾತಾವರಣದಲ್ಲಿ ಅದು ಅಸಾಧ್ಯ ಎಂದು ನೀ ಅಂದುಕೊಂಡಿದ್ದೆ, ನನಗೆ ಹಾಗನಿಸಿರಲಿಲ್ಲ.
ನನದೊಂದು ರೀತಿಯ ಅವಾಸ್ತವದ ಸಾತ್ವಿಕ ಹಟ, ಅದರಲ್ಲಿ ಸ್ವಾರ್ಥ ಇರಬಹುದು ವಂಚನೆ, ಮೋಸ ಮಾತ್ರ ಇರಲಿಲ್ಲ.
ನಂಬಿದ ದೇವರ ಪಾಲಿಗೆ ವಾಮ-ಕ್ಷೇಮ ಬಿಟ್ಟು ಭಂಡ ಧೈರ್ಯದಿಂದ ಮುನ್ನುಗ್ಗಿದೆ.

ವಾದ-ವಿವಾದ-ಜಗಳ-ಕಿರಿಕಿರಿಯಿಂದ ಮುಕ್ತರಾಗುವುದು ಯಾಕೋ ಇಂದಿಗೂ ಸಾಧ್ಯವಾಗುತ್ತಿಲ್ಲವಾದರೂ ಅನುಬಂಧ ಮಾತ್ರ ಗಟ್ಟಿಯಾಗಿ ಉಳಿದಿದೆ, ಉಳಿಯುತ್ತೆ.
ಯಾಕೆಂದರೆ ಇಲ್ಲಿ ಬರೀ ವ್ಯಾಮೋಹ, ಕಾಮನೆಗಳಿಲ್ಲ. ಓದಿದೆ,ಬರಹವಿದೆ, ಚಿಂತನೆಯಿದೆ, ಸಾಹಿತ್ಯದ ಗುರಿಗಳೂ ಇವೆ. ಬರೀ ತೀಟೆ, ತೆವಲುಗಳಿದ್ದರೆ ಯಾವುದೂ ಉಳಿಯುವುದಿಲ್ಲ.

                               ***

ದೇಹದಾಚೆಗಿನ ಈ ಬಂಧನ ಇನ್ನೂ ಬೆಸೆದುಕೊಳ್ಳಲು ದೇಹಾದಾಟದ ಗಮ್ಮತ್ತು ಬಹುದೊಡ್ಡ ಕಾರಣ ಎಂಬುದ ನಿರಾಕರಿಸಲಾಗದು.
“ದೇಹವೇ ದೇವಾಲಯ” ಬಸವಣ್ಣ ಹೇಳಿದ್ದು ಯಾವ ಕಾರಣಕ್ಕೆ?, “ಆಹಾರವ ಕಿರಿದು ಮಾಡಯ್ಯ” ಎಂದು ಅಕ್ಕ ಅದೇ ದೇಹದ ಆರೋಗ್ಯ ಕಾಪಾಡಲು,  ಆದರೆ‌ ನಾವು ತಿಂದು ತೇಗಿ ದೇಹವ ದೇವಾಲಯ ಮಾಡದೇ ಕಸದ ಗುಂಡಿಯಾಗಿಸಿದ್ದೇವೆ.
ಮನಸನ್ನು ಕೊಳೆತು ನಾರುವ ಹೆಣದ ಹಾಗೆ ಇಟ್ಟುಕೊಂಡಿದ್ದೇವೆ. ಆದರೆ ಬಾಯಿಂದ ಬರೀ ವೇದಾಂತ ಹೇಳುವ ಹುಳುಗಳು ನಾವೆಂಬುದ ಮರೆತುಬಿಟ್ಟಿದ್ದೇವೆ.

ಓಶೋ ಹೇಳಿದ ಮಹೋತ್ಸವಕೆ ಮನಸನು ಹದಗೊಳಿಸಿದೆ, ಆಹಾರವ ಕಿರಿದು ಮಾಡಿದೆ, ದೇಹವ ದೇವಾಲಯ ಎಂದು ನಂಬಿ ನನ್ನ ನಾ ಕನ್ನಡಿಯೊಳು ನೋಡಿಕೊಂಡೆ. ಹೊಸ ಹೊಳವೊಂದು ಮಿಂಚಿ ಮಾಯವಾಗದಂತೆ ಗಪ್ಪನೆ ಹಿಡಿದುಕೊಂಡೆ.

ಮನಸು ನೆಲೆಸುವ ದೇಹಕೂ ಅದರದೇ ಆದ ತಾಕತ್ತಿದೆ, ಕಂಪನಗಳಿವೆ, ಆ ವೈಬ್ರೇಶನ್ನುಗಳನ್ನು ನಾವು ಅನುಭವಿಸುವಷ್ಟು ಧ್ಯಾನಸ್ಥ ಸ್ಥಿತಿಗೇರುವುದೇ ಇಲ್ಲ. ನಮಗೆ ಆ ಸಹನೆಯೇ ಇಲ್ಲ *ಅವಸರ ಬರೀ ಅವಸರ ಗಡಿಬಿಡಿ*.

*ದೇಹದಾಟದ ಗಮ್ಮತ್ತಿನಲ್ಲೂ ಧ್ಯಾನವಿದೆ, ಆಲಿಸುವ ಸಂಗೀತದಲ್ಲಿಯೂ ಧ್ಯಾನವಿದೆ, ಓದುವ ಅಕ್ಷರಗಳಲೂ ಧ್ಯಾನವಿದೆ, ಬರೆಯುವ ಬೆರಳುಗಳಲೂ ಧ್ಯಾನವಿದೆ, ತಿನ್ನುವ ಕ್ರಮದಲೂ ಧ್ಯಾನವಿದೆ, ಹಾಕುವ ಹೆಜ್ಜೆಗಳಲೂ ಧ್ಯಾನವಿದೆ, ಆಡುವ ಮಾತಿನ ಪ್ರತಿ ಶಬ್ದಗಳಲೂ ಧ್ಯಾನವಿದೆ*.

ಧ್ಯಾನವೆಂದರೆ ಬರೀ ಕಣ್ಣು ಮುಚ್ಚಿ ಉಸಿರಾಡುವುದಲ್ಲ. ಮಲಗುವತನಕ ನಾವು ಕಳೆಯುವ ಪ್ರತಿ ಕ್ಷಣಗಳನ್ನು ನಾವೇ ಮೂರನೇ ವ್ಯಕ್ತಿಯಾಗಿ ಗಮನಿಸಿ ನಿಯಂತ್ರಿಸಿ ಸಮಾಧಾನದಿಂದ ನಡೆಯುವುದು.

ಮೊದಲು ಆ ಸಮಾಧಾನ ನಾವು ತುಂಬ ಬಯಸುವ ಕಾಮದಾಟದಿಂದ ಆರಂಭವಾಗಿ ಉಳಿದ ಕ್ರಿಯೆಗಳಿಗೆ ವ್ಯಾಪಿಸಬೇಕು. ಮುಪ್ಪಾದ ಮೇಲೆ ದೇಹ ತನ್ನ ಕಾಮಸತ್ವ ಕಳೆದುಕೊಳ್ಳುತ್ತದೆ ಆದರೆ ಮನಸು ಹಾಗಲ್ಲ. ಅದಕೆ ಮುಪ್ಪು ಇಲ್ಲ.
ದೇಹದಲಿ ಕಸುವಿದ್ದಾಗ ಮಾತ್ರ ದೇಹದೊಂದಿಗೆ ಆಟ ಆಡಬಹುದು;ಅದನ್ನು ಸರಿಯಾಗಿ ವ್ಯವಧಾನದಿಂದ ಆಡಬೇಕು.

                                 ***

ಅದೇ ಗಾಢವಾದ ಧ್ಯಾನಸ್ಥ ಸ್ಥಿತಿಯಲ್ಲಿ ಮೊದಲ ಭೇಟಿಗೆ ಅಣಿಯಾದೆ…

ಪಯಣದುದ್ದಕ್ಕೂ ನಿರರ್ಗಳವಾಗಿ ಮಾತನಾಡಿ ಸಲಿಗೆ ವ್ಯಾಪಿಸಿಕೊಂಡೆ. ಮನದಾಳದ ಆಸೆ ಹೇಳುವಾಗ ನಿನ್ನ ಮುಖ ಅರಳಿ ಸಮ್ಮತಿಸುತ್ತಲೇ ಹೋಯಿತು.
You looked more cheerful and gorgeous beyond your age and beauty because it was my deep love on you.

ಪ್ರೀತಿ ಇದ್ದ ಮೇಲೆ ಎಲ್ಲವೂ ಗೌಣ. ಪ್ರೀತಿ ಎಲ್ಲವನ್ನೂ ದಕ್ಕಿಸಿಕೊಳ್ಳುತ್ತದೆ, ಪ್ರೀತಿಗಾಗಿ ಮೈಮನ ಅರಳಿದ ಮುಸ್ಸಂಜೆ.
ಅಪರಿಚಿತ ಮನಸುಗಳು ಅಪರಿಚಿತ ಜಾಗ ತಲುಪಿದಾಗ ನಡು ರಾತ್ರಿ. ನಳನಳಸುವ ದೀಪಗಳಲಿ ಓಡುವ ವೇಗದಲಿ ಇಬ್ಬರಲೂ ಕುತೂಹಲ.
ಸುಸಜ್ಜಿತ, ಸುರಕ್ಷಿತ ಜಾಗ ತಲುಪಿದಾಗ ಸುದೀರ್ಘ ನಿಟ್ಟುಸಿರು.

                      ***
ಮಂದ ಬೆಳಕಲಿ ನಾ ಕಂಡ ಕನಸ ಸಾಕಾರಗೊಳಿಸುವ ತೀವ್ರತೆ. ಸ್ವಲ್ಪ ಸಹನೆ ಕಳೆದುಕೊಂಡರೆ ಎಲ್ಲ ಕೈ ಬಿಟ್ಟು ಹೋಗುತ್ತದೆ ಎಂಬ ಒಳೆಚ್ಚರ ಜಾಗೃತವಾಗಿತ್ತು.
ಮಾತು ಮಾಯವಾಗಿ ಮೌನ ಬೆಳಗಲಾರಂಭಿಸಿದಾಗ ನೀ ಕೈಗೊಂಬೆಯಾದೆ. ನಿನಗೆ ಅದೆಲ್ಲ ಹೊಸದೆಂದು ನಾ ಊಹಿಸಿರಲಿಲ್ಲ.
ಪೂಜೆಯಂತೆ, ಧ್ಯಾನದಂತೆ, ಸಂಗೀತದಂತೆ ಸಹನೆಯ ಲಹರಿ ರಿಂಗಣವಾಡಿತು ನಮ್ಮ ಮೈಮನಗಳ ತುಂಬ.

ಮೊದಲಾಲಿಂಗನಕೆ ಕರಗಿ ಕೈಸೆರೆಯಾದೆ, ವಶೀಕರಣಕೊಂಡವಳಂತೆ ಎಲ್ಲವನ್ನೂ ಪರಿಪಾಲಿಸಿದೆ.
ಹೂಮಂಚದಲಿ ಅರಳಿದಾಗ ರಕ್ಕಸನಂತೆ ಭೋಗಿಯಾಗದೇ  ಯೋಗಿಯಾದೆ, ಸಹನೆಯ ಅವಗಾಹನೆ ಮಾಡಿಕೊಂಡೆ.

*ನನ್ನ ಕೈಲಿರುವ ವೀಣೆಯ ತಂತಿಗಳ ನವಿರಾಗಿ ಮೀಟಿದೆ, ನಾದ ಉನ್ಮಾದ ಹೊರ ಹೊಮ್ಮಿತು*

ಸಂಗೀತ ವಾದ್ಯಗಳ ಮೇಲೆ ಕೈಯಾಡಿಸಿ ನಾದ ಹೊರಡಿಸಬೇಕೇ ಹೊರತು ಒರಟಾಗಿ ಅಲ್ಲ.
ಎದುರಿಗೆ ಮೃಷ್ಟಾನ್ನ ಭೋಜನ ಗಬ ಗಬ ತಿನ್ನದೇ ಸವಿ ರುಚಿ ಅನುಭವಿಸಲು ನಿರ್ಧರಿಸಿದೆ.

ಹಾಲು-ಜೇನು, ಹಣ್ಣು-ಹಂಪಲು, ದ್ರಾಕ್ಷಾ ಗೊಂಚಲು, ಸಿಹಿ ತಿನಿಸುಗಳ ಒಂದೊಂದಾಗಿ ಸವಿಯುತ ತಟ್ಟೆ ತುಂಬ ಬೆರಳಾಡಿಸುವ ಅಭಿರುಚಿ ನೂರ್ಮಡಿಸಿದೆ.
ಸರ ಸರ ಹರಿದಾಡುವಾಗ ಭಾರ ಹಾಕಿ ಹಿಂಸೆಮಾಡದೇ ಹಕ್ಕಿಯಂತೆ ಗರಿಬಿಚ್ಚಿ ಕೊಂಚ ಅಂತರದಲಿ ಹಗುರಾಗಿ ಹಾರಿದೆ.

ಸಹನೆ-ನಿಯಂತ್ರಣಗಳ ಉಸಿರ ಏರಿತದ ಅನುರಣನ ಆಲಿಸಿದೆ.
ಇಡೀ ದೇಹದ ತುಂಬ ವ್ಯಾಪಿಸಿರುವ ಉನ್ಮಾದದ ಕಂಪ ಮೂಸಿದೆ.
ನೀ ಅರಳಿದ ಪರಿ… *ಸೂರ್ಯನುದಯಕೆ ತಾವರೆಯೇ ಜೀವಾಳ*
ಅರಳುತ್ತ ಅರಳುತ್ತ ಕೇಳಿದ್ದೆಲ್ಲ ಕೈಗಿತ್ತೆ. ಒಮ್ಮೆಲೇ ನುಗ್ಗಿದಾಗ ಸಂಭ್ರಮ ಮುಗಿಲು ಮುಟ್ಟಿತು. “ಹೊರ ಬರಲಾ” , “ಹೂಂ” ಮುಗುಳ ನಗುವಿನ ನಿವೇದನೆಗೆ ಅಷ್ಟೇ ಸಹನೆಯಿಂದ…
ಹಗುರಾಗುವ ಧಾವಂತ ಕೈ ಬಿಟ್ಟು ಹೊರ ಬಂದ ಪರಿ ಅನಿರೀಕ್ಷಿತ ನಿನಗೂ, ನನಗೂ…

ಇದೆಲ್ಲ ನಿಂಗೆ ಹೊಸದೆಂದು ತಿಳಿದಾಗ ನನಗೆ ಹೇಗಾಗಿರಬೇಡ!
ನನಗೂ ಹೊಸದೇ ನಾವು ಮದುಮಕ್ಕಳು ನಮಗಾಗಿ.
ಮಿಲನ ಮಹೋತ್ಸವ ಮುಗಿಯುವ ಸೂರ್ಯ ಕಣ್ಣುಬಿಟ್ಟಿದ್ದ ನಾವು ಕೊಂಚ ವಿರಮಿಸಿದಾಗ…
ಲೋಕದ ತುಂಬ ತೃಪ್ತಿ, ಸಂತೃಪ್ತಿ, ಮುಂದೆಂದೂ ಹಸಿವಾಗದಷ್ಟು ಉಂಡ ಮಹದಾನಂದ.
ಹಾಗೆ ಉಂಡರೆ ನಾವು ನಮ್ಮೊಂದಿಗೆ ಮಾತ್ರ ಎಂಬ ಖಚಿತತೆ.

ಪ್ರತಿ ಮಿಲನದಲೂ ಅದೇ ಸಹನೆ, ಅದೇ ಏಕಾಂತ, ತಾದಾತ್ಮಕತೆ, ಹೊಸತನದ ಕಂಪನ, ಅದೇ ಒಲವ ವರತೆ, ಮೆಲ್ಲುಸಿರ ಸವಿಗಾನ.
ದೇಹವೇ ದೇವಾಲಯ ಅದನು ಪೂಜಿಸಿ,ಆರಾಧಿಸಿ ಶುಚಿಯಾಗಿಡಬೇಕು‌. ಆ ಆರಾಧನೆಯಲಿ ನಿಯತ್ತು, ಪಾರದರ್ಶಕತೆ ವಿಜ್ರಂಭಿಸಬೇಕು.
*ಒಲವ ಹೂ ಹರಡಿ, ವಿಶ್ವಾಸದ ಪತ್ರಿಯನೇರಿಸಿ, ಪಿಸುಮಾತುಗಳ ಜಾಗಟೆ ಬಾರಿಸಿ, ಪ್ರೇಮದ ಕ್ಷೀರಾಭಿಷೇಕದಲಿ ಪೂಜಿಸಿ ನಮಿಸಬೇಕು*.

ನಾನೀ ಬೇಧವನಳಿಸಿ ಬೆರೆಯಬೇಕು ಹಾಲ ಜೇನಾಗಿ, ಕಲ್ಲು ಸಕ್ಕರೆಯಂತೆ ಕರಗಿ ಸವಿ ಹರಿಸಬೇಕು.
ದೇಹವಿದು ದೇವಾಲಯ ಅರಿತು ನಡೆದಾಗ, ಇಲ್ಲದಿರೆ ಮಾಂಸದ ಮಡಿಕೆ…
ಜಗಳ,ವಾದ,ವಿವಾದ ಅಹಂಕಾರ ಹಾಗೂ ಅಜ್ಞಾನ ಎಲ್ಲವೂ ಗೌಣ, ಮಂಗಮಾಯ ಈ ಮಿಲನದ ಸವಿ ಸಡಗರ ನೆನೆದು ಓಡೋಡಿ ಬಳಿ ಬಂದು ಬಿಗಿದಪ್ಪಿದಾಗ…
ನಿಲ್ಲಲಾಗದು ಮೆಲ್ಲುಸಿರ ಸವಿಗಾನ...ಮೆಲ್ಲುಸಿರ ಸವಿಗಾನ...