Showing posts with label ಲವ್ ಕಾಲ. Show all posts
Showing posts with label ಲವ್ ಕಾಲ. Show all posts

Saturday, October 6, 2018

ಭಾವತೀವ್ರತೆಗೆ ವಿದಾಯ

ಲವ್‌ ಕಾಲ

*ಭಾವತೀವ್ರತೆಗೆ ವಿದಾಯ*

ಅದೆಷ್ಟು ಚಡಪಡಿಸಿ ಒದ್ದಾಡಿದೆ ಸಾವಿರದ ಹಗಲು ರಾತ್ರಿಗಳಲಿ.
ತಲೆಚಿಟ್ಟು ಹಿಡಿಸುವಷ್ಟು ಭಾವುಕ ಎನಿಸಿಕೊಂಡು ಬಿಟ್ಟೆ. ಆದರೆ ಆ ತೀವ್ರತೆಯಲಿ ಪ್ರೀತಿ-ಕಾಳಜಿ ಬಿಟ್ಟರೆ ಬೇರೇನೂ ಇರಲಿಲ್ಲ, ನೀ ಅದನು ಯಾಕೋ ಬೇಗ ಅರ್ಥಮಾಡಿಕೊಳ್ಳದೇ ಅತಿರೇಕದ ಹುಚ್ಚಾಟ ಅಂದುಕೊಂಡುಬಿಟ್ಟೆ.

ಬದುಕಿನ ಪ್ರತಿಯೊಂದು ಘಟನೆಗಳನ್ನು, ಭೇಟಿಯಾದ ವ್ಯಕ್ತಿಗಳನ್ನು ತುಂಬ ಅಂದರೆ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತ ಬೆಳೆದದ್ದು ತಪ್ಪಾಗಿ ಹೋಯಿತು.

ಎಲ್ಲರೂ ಒಳ್ಳೆಯವರು, ಹಿತೈಷಿಗಳು ಎಂದು ನಂಬುತ್ತಲೇ ನಡೆದೆ. ಆ ನಂಬಿಕೆ ಯಾಕೋ ಕೈ ಕೊಡುತ್ತಲೇ ಹೋಯಿತು. ನಾನದನ್ನು ಸಹಿಸುತ್ತಲೇ ಬಂದೆ. ಸಹಿಸಿಕೊಳ್ಳಲೇಬೇಕು, ಏಕೆಂದರೆ ತಪ್ಪಿತಸ್ಥ ನಾನು.

ಆದರೂ ನಾ ಪಾಠ ಕಲಿಯದೇ ವಿಲಿ ವಿಲಿ ಒದ್ದಾಡುತ್ತಲೇ ಬೆಳೆದೆ, ಬುದ್ಧಿ ಬೆಳೆಸಿಕೊಳ್ಳದೇ.

ದಾರಿಯಲಿ ಸಿಕ್ಕವರ ಮಾತ ಕೇಳಿ ಮರ ಹತ್ತಿದೆ, ನೀರಿಗೆ ಹಾರಿದೆ, ಹಳ್ಳದಲಿ ಧುಮುಕಿದೆ, ಆಕಾಶದಲ್ಲಿ ತೇಲಾಡಿದೆ ಯಾಕೋ ಈ ಖೋಡಿ, ಕೊಟ್ಟಿ ವಾಸ್ತವ ನನಗೆ ಭೇಟಿಯಾಗಲಿಲ್ಲ. ನಾ ಜಾಣನಾಗಲೇ ಇಲ್ಲ.

ಇನ್ನೇನು ಸೋತು ತಣ್ಣಗಾಗಿ ಹೋದಾಗ ನೀ ಭೇಟಿಯಾದದ್ದು ಹೊಸ ಇತಿಹಾಸ ಆದರೆ ಪರಿಣಾಮ ಒಂದೇ.
ಭಾವತೀವ್ರತೆಯ ಗಡಿ ಮೀರಲೇ ಇಲ್ಲ. ಮತ್ತದೇ ಹಳೆಯ ಹಳವಂಡಗಳ ಮಾನದಂಡದಲಿ ನಿನ್ನ ಓಲೈಸಲು ಒದ್ದಾಡಿದೆ.

ನೀ ವಾಸ್ತವದ ಸವಾರಿ ಮೇಲಿದ್ದಾಗ ಯಾಕೋ ನನ್ನ ಸಂಬಂಧ ತಲೆಚಿಟ್ಟು ಹಿಡಿಸಿದ್ದು ಸಹಜ. ನನಗೆ ಅರ್ಥವಾಯಿತಾದರೂ ಹೊರ ಬರಲಾಗಲಿಲ್ಲ, ಭಾವತೀವ್ರತೆಯ ಸುಳಿಯಿಂದ.

ಬಂಧನದಿ ಬಿಡಿಸಿಕೊಂಡು ಬಚಾವಾಗಿ ನಾ ಹಗುರಾಗಲು ನಿರ್ಧರಿಸಿದ ಬೆನ್ನಲ್ಲೇ ನೀ ನನ್ನ ತೀವ್ರತೆಯ ಗ್ರಹಿಸಿ ಸಹಿಸಿಕೊಳ್ಳಲಾರಂಭಿಸಿದೆ.
ತಲೆ ಚಿಟ್ಟು ಅನಿಸಿದರೂ ಪ್ರೀತಿಯ ಆಳವ ಇಣುಕಿ ನೋಡುವ ಸಹನೆ ರೂಢಿಸಿಕೊಂಡಿದ್ದಕ್ಕೆ ನಾ ಸಂಪೂರ್ಣ ದಕ್ಕಿಬಿಟ್ಟೆ.

ಮಿತಿ, ಶಕ್ತಿ, ಆಳ, ಅಗಲ, ಅನನ್ಯ ಜೀವಪ್ರೇಮದ ಮುಂದೆ ಈ ತೀವ್ರತೆ ಸಹನೀಯ, ಸ್ವೀಕೃತ ಅನಿಸಿಬಿಟ್ಟಿತು. ಇಬ್ಬರಿಗೂ.

ನೀ ಇದಾವುದನ್ನು ಬಾಯಿ ಬಿಟ್ಟು ಹೇಳಲಿಲ್ಲವಾದರೂ ನಾ‌ ಎರಡನೇ ವ್ಯಕ್ತಿಯಾಗಿ ಗಮನಿಸಿ ತಿಳಿದುಕೊಳ್ಳುತ್ತ ಹೋದೆ. *ಎಲ್ಲ ಓಕೆ, ಈ ತೀವ್ರತೆ ಏಕೆ* ಎಂಬ ಭಾವ ನಿನ್ನ ಸದಾ ಇರಿಯುತ್ತಲೇ ಇತ್ತು.

ಈ ತೀವ್ರತೆಯನ್ನು ಪೊಸೆಸ್ಸಿವ್ ಅಂತಲೂ ಕರಿತಾರೆ. ಪೊಸೆಸ್ಸಿವ್ ಇಲ್ಲದೇ ಪ್ರೀತಿ ಉಳಿಯಲಾರದು ಕೂಡ!

ಆದರೆ ಬಾಂಡೇಜಿನಲ್ಲಿ ಪ್ರಬುದ್ಧತೆ ಹೆಚ್ಚಾದಂತೆ ಪೊಸೆಸ್ಸಿವ್ ಮನಸ್ಥಿತಿ ಕಡಿಮೆಯಾಗುತ್ತ ಹೋಗುತ್ತದೆ.

*ಆದರೆ ಅದು ಕಡಿಮೆ ಆಗುವುದರೊಳಗೆ ರೋಸಿ ಹೋದರೆ, ತಲೆ ಚಿಟ್ಟು ಹಿಡಿಸಿಕೊಂಡರೆ ಬಾಂಡೇಜ್ ಕತೆ ಮುಗಿದಂತೆ*.

ನಮ್ಮ ಪುಣ್ಯ ಎಷ್ಟೇ ರೋಸಿ ಹೋದರೂ ನಾವಿಬ್ಬರೂ ಹಗ್ಗ ಜಗ್ಗಾಟದಲಿ ಪರಸ್ಪರ ಬಿಗಿದುಕೊಂಡು ಗಟ್ಟಿಯಾಗಿ ಉಳಿದದ್ದು, ಅಪರೂಪ, ಅನುರೂಪ, ಅನನ್ಯ ಹಾಗೂ ಅವನ ಲೀಲೆ.

*ಅವನು ಕೈ ಬಿಡದಿರಲು ಕಾರಣ ಇಷ್ಟೇ, ನಮ್ಮಿಬ್ಬರ ನಿಷ್ಟೆ*.
ನಮ್ಮ ಚಾರಿತ್ರ್ಯ ಹಾಗೂ ಚರಿತ್ರೆಯನು ಅಳೆದು ತೂಗಿದ *ಅವನು* ಇವರು ಉಳಿಯಲಿ ಎನಿಸಿ ತಥಾಸ್ತು ಅಂದಾಗ ನಾವು ಗೆದ್ದು ಬಿಟ್ಟೆವು.

*Now I'm totally free from possessiveness but…*

  *ಸಿದ್ದು ಯಾಪಲಪರವಿ*

Friday, September 28, 2018

ಎಲ್ಲವೂ ನೀ ನಾ ಆದಾಗ‌‌

*ಲವ್ ಕಾಲ*

*ಎಲ್ಲವೂ ನೀ ನಾ ಆದಾಗ ಮಾತು ಬೆಳೆಸುವದಾ!*

‘ಹೌದು ಇಷ್ಟೊಂದು ತಕಾರಾರು ಬೇಕಿತ್ತ, ಹೇಳುವುದನ್ನ ನೇರವಾಗಿ ಹೇಳಬೇಕಪ್ಪ.’

‘ನಿಜ ಆದರೆ ಹಾಗೆ ಹೇಳೋಕಾಗಲ್ಲ ಬಂಗಾರ,
ಅರ್ಥ ಮಾಡಿಕೊಳ್ಳಲಾಗದಿದ್ದರೂ ನನ್ನ ಮೇಲಿನ ನಂಬಿಕೆಯಿಂದ ಒಪ್ಪಿಕೊಂಡರೆ ನನಗೂ ಸಮಾಧಾನ’

‘ಇಷ್ಟು ದೂರ ಕ್ರಮಿಸಿದ ಮೇಲೆ ತಿರುಗಿ ಹೋಗಬಾರದು, ಹೋಗುವ ಆಲೋಚನೆ ಅನಾರೋಗ್ಯಕರ, ಇಡೀ ಮನುಷ್ಯ ಸಂಬಂಧಗಳ ಮೇಲೆ ನಂಬಿಕೆ ಹಾಳಾಗುತ್ತೆ.’

‘ಇರುವಷ್ಟು ದಿನ ಪರಸ್ಪರ ವಿಶ್ವಾಸ, ನಂಬಿಕೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ.‌ ವಿನಾಕಾರಣ ಏನೋ ನೆಪ ಮಾಡಿಕೊಂಡು ಮನಸು ಕೆಡಿಸಿಕೊಳ್ಳುವದರಲಿ ಯಾವ ಪುರುಷಾರ್ಥವಿದೆ.’

*ನೀನು ಗಂಟೆಗಟ್ಟಲೇ ಹೇಳಿದ್ದನ್ನು ಕೇಳಿಸಿಕೊಳ್ಳುವ ಅನಿವಾರ್ಯತೆ.*

ನಾನು ನನ್ನದೇ ಹಾದಿಯಲ್ಲಿ ನಿನ್ನ ನಿಷ್ಕಾಮವಾಗಿಯೇ ಸ್ವೀಕರಿಸಿದ್ದೆ. ಮಿಲನ ಆಕಸ್ಮಿಕ, ಅದೇ ಎಲ್ಲ ಅಲ್ಲವೇ ಅಲ್ಲ.
ವಯೋಮಾನಕೆ ತಕ್ಕಂತೆ ಮಾತ್ರ ವರ್ತಿಸುವಷ್ಟು ದೇಹ ಸಹಕರಿಸುತ್ತದೆ. ಅತಿಯಾಗಿ ಎಲ್ಲ ದಕ್ಕುವುದಿಲ್ಲ.‌

ದಕ್ಕಿದ್ದನ್ನು ಸಮರ್ಪಕವಾಗಿ ವಿವಾದವಿಲ್ಲದೆ ಅನುಭವಿಸಬೇಕು.‌
ಅನುಮಾನ, ಅವಮಾನ, ಹಟಮಾರಿತನದ ಮಾತೇ ಬರಬಾರದು.
ಆದರೂ ಬರುತ್ತೆ, ಮಾತು-ಮಂಥನಗಳ ಮೂಲಕ ಕುದಿಯಬೇಕು, ಭಾವನೆಗಳು ಬೇಯಬೇಕು ಅಂದಾಗ ಬಾಂಡೇಜ್ ಗಟ್ಟಿಗೊಳ್ಳುತ್ತೆ.‌
ಅರ್ಧಕ್ಕೆ ಬಿಟ್ಟು ಓಡಿ ಹೋಗುವುದು ಅಮಾನವೀಯ, ಅಸಹ್ಯ.

ಕಾಮದಾಸೆಗೆ ಕೂಡಿದರೆ ಹಾದರವಾಗುತ್ತೆ. ಅನೈತಿಕವಾಗುತ್ತೆ. ನಮ್ಮ ಬಾಂಧವ್ಯ ಹಾಗಲ್ಲ.‌ ಅದರಾಚೆಗೆ ಅನೇಕ ಸಂಗತಿಗಳಿವೆ.

ಓದು-ಬರಹ-ಸಂಸ್ಕೃತಿಯ ಹೊಳಪಿದೆ.‌
ಆಧ್ಯಾತ್ಮಿಕ ಚಿಂತನೆಗಳಿವೆ, ಇವೇ ಹಾದಿಯಲಿ ಕೊನೆ ದಿನಗಳು ಗಟ್ಟಿಯಾಗಿ ಉಳಿದುಕೊಳ್ಳಬೇಕು.

ದೇಹ ಯಾವಾಗ ದುರ್ಬಲವಾಗುತ್ತೋ ಗೊತ್ತಿಲ್ಲ. ಆರೋಗ್ಯ ಕೈ ಕೊಟ್ಟರೆ ಏನೂ ಬೇಕಾಗಲ್ಲ.
ಆರೋಗ್ಯ ಕೆಟ್ಟು ಮುಪ್ಪು ಆವರಿಸಿದರೂ ಬಾಂಧವ್ಯ ಉಳಿಯಬೇಕಾದರೆ ಕಾಮದ ವಾಸನೆ ಹೊಡೆಯಬಾರದು.

ದೇಹ ಸಾಮಿಪ್ಯವಿಲ್ಲದೆ ಪರಮಸುಖ ಅನುಭವಿಸುವ ತಾಕತ್ತು ಆಧ್ಯಾತ್ಮಿಕ ಬದುಕಿಗಿದೆ.

ಹೇಳುವುದು ಹೇಳಿಯಾದ ಮೇಲೆ ಮತ್ತೆ ಮತ್ತೆ ಹೇಳಿದ್ದನ್ನು  ಹೇಳುವ ಉದ್ದೇಶ ಇಷ್ಟೇ, ಅದು ಮನದಲ್ಲಿ ದಾಖಲಾಗಿ ಉಳಿಯಲೆಂಬ ಆಶಾವಾದ.

ರೋಸಿಕೊಳ್ಳುವುದರಿಂದ ಏನೂ ಪಡೆಯಲಾಗದು, ಕಳೆದುಕೊಂಡು ಹುಚ್ಚರಾಗುತ್ತೇವೆ.‌
ಎಲ್ಲಾ ತಿಳಿದು ಹುಚ್ಚರಾಗುವಷ್ಟು ನಾವು ದಡ್ಡರಲ್ಲ.
ಮಾತು, ಜಗಳ, ವಾದ, ವಿವಾದಗಳೂ ನಮ್ಮನ್ನು ಮುನ್ನಡೆಸಲಿ.

ಸಿಕ್ಕಾಗ ಸಿಗುವ ಸಾಮಿಪ್ಯ ಸುಖದ ಹಂಬಲದಲಿ, ಮೈಮನಗಳ ಪುಳಕದಿಂದ ಕಾಯುತ್ತಲಿರೋಣ.

*ಸಿದ್ದು ಯಾಪಲಪರವಿ*

Tuesday, September 4, 2018

ಲವ್ ಕಾಲಕೂ ಮುನ್ನ

*ಲವ್ ಕಾಲಕೂ ಮುನ್ನ…*

ಭಾವ ಪ್ರಪಂಚದಲ್ಲಿ ತೇಲಾಡಿ ಸುಖ ಅನುಭವಿಸುದೊಂದು ಬಗೆಯ ಉನ್ಮಾದ. ಪ್ರೀತಿ-ಪ್ರೇಮ-ಪ್ರಣಯ ದೌರ್ಬಲ್ಯ ಏನೆಂದರೂ ಒಂದೇ. ಮುಂದೇ ಅದೇ ಪ್ರೀತಿ ವೈರಾಗ್ಯವಾಗಿ ಭಕ್ತಿಯ ಸ್ವರೂಪ ಪಡೆಯಬಹುದು.

*ಪ್ರೀತಿ ಕಣ್ಣು, ಕೈಕಾಲು ಏನೂ ಇಲ್ಲದೆ ಹರಿಯುವ ನದಿ…*

ಬಾಲ್ಯದಲ್ಲಿ ತಾಯಿ-ತಂದೆ, ಕೌಟುಂಬಿಕ ವಾತಾವರಣದ ಪ್ರೀತಿ ಯೌವನಕೆ ಕಾಲಿಟ್ಟ ಕೂಡಲೇ ಅನುರಾಗವಾಗಿಬಿಡುತ್ತೆ.
ಹರೆಯದಲ್ಲಿ ಕಚಗುಳಿ ಇಡುವ ಹುಡುಗಿ/ ಹುಡುಗಿಯರಿಗೆ ಲಿಂಗ, ವಯಸ್ಸು, ಜಾತಿ, ಧರ್ಮಗಳ ತರತಮವಿಲ್ಲ.
ನಂಬಿ ಆರಾಧಿಸಿ ನುಗ್ಗುವುದಷ್ಟೇ ಗೊತ್ತು.

ಲೈಲಾ-ಮಜ್ನು, ಸಲೀಮ್-ಅನಾರ್ಕಲಿ, ರೋಮಿಯೋ-ಜೂಲಿಯೆಟ್ ಮಾತ್ರ ನೆನಪಾಗುತ್ತಾರೆ. ಹಾಗಾದರೆ ಉಳಿದ ನೂರಾರು ಕೋಟಿ ಮನುಜರು ಪ್ರೇಮಿಗಳಲ್ಲವೆ?

ಪ್ರೀತಿಯನ್ನು ದಕ್ಕಿಸಿಕೊಂಡು ಗೆದ್ದವರು, ಸೋತು ರಾಜಿಯಾಗಿ ಹೊಸ ಬದುಕು ರೂಪಿಸಿಕೊಂಡ ಕೋಟಿಗಟ್ಟಲೆ ಮನುಜರು ಪ್ರೇಮಿಗಳಾಗುವುದು ಅಸಾಧ್ಯ.
ಅವರೆಲ್ಲ ಬರೀ ಮನುಷ್ಯರು ಅಷ್ಟೇ!

ಅವರಿಗೆ ಬೇರೆಯವರ ಪ್ರೇಮಲೋಕ ನೋಡುವ ಅಧಿಕಾರ ಮಾತ್ರ ಇದೆ ಆದರವರು ಪ್ರೇಮಿಗಳಲ್ಲ. ರಾಜಿಯಾಗಿ ಬದುಕಿನುದ್ದಕ್ಕೂ ಒದ್ದಾಡುವ ಸಾಮಾನ್ಯ ಪ್ರಾಣಿಗಳು ಈ ಪ್ರೇಮಿಗಳ ದೃಷ್ಟಿಯಲ್ಲಿ.

ಹರೆಯದಲ್ಲಿ ಪ್ರತಿಯೊಬ್ಬರೂ ಪ್ರೇಮಿಸುತ್ತಾರೆ, ಕೆಲವರು ಇನ್ನೇನು ಪ್ರೇಮಿಸಬೇಕು ಅನ್ನುವುದರೊಳಗೆ ಬಂಧನದಲ್ಲಿ ಕಳೆದು ಹೋಗಿ ಮರುಗುತ್ತ ಕೊನೆತನಕ ಪ್ರೀತಿಗಾಗಿ ಹಂಬಲಿಸುತ್ತ, ಹಂಬಲಿಸುತ್ತಾ ಬದುಕ ಪಯಣ ಮುಗಿಸಿ ಬಿಡುತ್ತಾರೆ.
ಮತ್ತೆ ಕೆಲವರು ಅಯ್ಯೋ ಬದುಕು ಇಷ್ಟೇ ಅಂದುಕೊಳ್ಳುತ್ತಿರುವಾಗ ಅನಿರೀಕ್ಷಿತವಾಗಿ ಪ್ರೇಮಲೋಕದಲಿ ಎಂಟ್ರಿ ಕೊಟ್ಟುಬಿಡುತ್ತಾರೆ. ಅದಕೆ ಈ ಪ್ರೇಮಕೆ ವಯಸಿನ ಹಂಗಿಲ್ಲ ಅಂದದ್ದು.

ಯಾವ ಪ್ರೀತಿಯೂ ಹಾದರ, ಅನೈತಿಕ ಅಲ್ಲ just imbalance happening ಆದರೆ ನಿಭಾಯಿಸವುದು ಹೆಚ್ಚು ಕಡಿಮೆ ಆದರೆ ಎಲ್ಲ ಬಟಾ ಬಯಲು. ಹಾಗಾಗಬಾರದೆಂಬ ಇರಾದೆ ಪ್ರೇಮಿಗಳಿಗೆ ಇರುತ್ತೆ…
ಸಮಯ ಸಂದರ್ಭ ಅವರನ್ನು ಸಿಗಿಸಿಬಿಟ್ಟಾಗ just helpless.

ಮುಂದೇನು ? ಏನೂ ಇಲ್ಲ, ಅನುಭವಿಸಿ ಎದುರಿಸಬೇಕು ಹೆದರದೇ…
ಹೆದರುವ ಮನಸ್ಥಿತಿ ಕಳೆದುಕೊಂಡ ಮನಸು ಬೇರೆ ಹಾದಿ ಹಿಡಿದು ಹೋಗುವುದು ಸಹಜ. ಈ ಬದುಕಿನಲ್ಲಿ ಯಾವುದೂ ಅಸಹಜವಲ್ಲ.

ಎಳೆ ಪ್ರಾಯದಲ್ಲಿ ಯುವಕರು ಪ್ರೀತಿ ಮಾಡಲಿ, ಆದರೆ ಅಸಹ್ಯ, ಅತಿರೇಕವೆನಿಸಿ ಜೀವ ತೆಗೆಯುವ ಅಥವಾ ಕಳೆಯುವ ಮನೋವಿಕಾರ ತಲುಪದೇ ಕೇವಲ ಮನದ ಲೆಕ್ಕಾಚಾರದಲ್ಲಿ ಕಾಲ ದೂಡಲಿ ಯಾರನ್ನೂ ದೂರಿ ದೂರ ದೂಡದೇ.

ಹಿಡಯದ, ಬಿಡಲಾಗದ, ಮಾಡದ, ಮಾಡಲಾಗದ, ಮಾಡದಂತಿರುವ ಮಾಟದೊಳು ತಾನಿದ್ದು ಇರದಂತಿರಬೇಕು.
ಸಹಜವಾಗಿ ದಕ್ಕಿದ್ದು ಸುಂದರ, ಅಸಹಜ ಸದಾ ವಿಕೃತವೆಂಬ ಅರಿವಿದ್ದರೆ ಸಾಕು.

ನಮ್ಮ ತಲ್ಲಣಗಳಿಂದ ಬೇರೆಯವರ ಜೀವ ಹಿಂಡಿ ಹಿಪ್ಪಿ ಮಾಡುವುದು ಬೇಡ.
ಅವ್ವ-ಅಪ್ಪ, ಬಂಧು-ಬಳಗ, ಸಮಾಜ-ಕುಟುಂಬ ವ್ಯವಸ್ಥೆಗೆ ಅಪಾಯಕಾರಿ ಹೊರೆಯಾಗದ ಎಚ್ಚರಿಕೆ, ವಿವೇಚನೆ ಪ್ರೇಮಿಗಳಾದವರಿಗೆ ಇರಲಿ.
ಸಂಯಮ, ಸಂವೇದನೆಗಳ ಪ್ರತಿಫಲವೇ ಪ್ರೀತಿ-ಪ್ರೇಮ-ಪ್ರಣಯ.
*ಅದರ ಜಾಡು ಹಿಡಿದ ಓದು-ಬರಹ, ಕತೆ-ಕವಿತೆ-ಕಾದಂಬರಿ, ಹಾಡು-ಸಂಗೀತ-ಭಾವಗೀತೆ*.
ಮನುಷ್ಯ ತನ್ನ ಖುಷಿಗಾಗಿ ಓದುತ್ತ, ಬರೆಯುತ್ತ, ಹಾಡುತ್ತ, ಕುಣಿಯುತ್ತ ಮನಸನು ರಂಜಿಸಿಕೊಳ್ಳುತ್ತಾನೆ. *ಯಾರು ಕಿವಿಮುಚ್ಚಿದರು ನನಗಿಲ್ಲ ಚಿಂತೆ*.
“ಹಾಡುವುದು ಅನಿವಾರ್ಯ ಕರ್ಮ ನನಗೆ” ಎಂದು ಹಾಡುತ್ತಲೇ ಇರುತ್ತಾನೆ.

ಈ ಪ್ರಪಂಚದಲ್ಲಿ ಬರೀ ವಾಸ್ತವವಾದಿಗಳು, ನಾಸ್ತಿಕರು ಇದ್ದರೆ ಬದುಕು ನೀರಸವಾಗುತ್ತಿತ್ತು.
ಅವಾಸ್ತವ ಎಂಬ ಪ್ರೀತಿಗೆ ಮೈಯಲ್ಲ ಕಾಲು.
ಎಂತಹ ಕ್ರೂರಿಯೂ ಈ ಜಾಲದಲಿ ತನಗರಿವಿಲ್ಲದಂತೆ ಕಳೆದು ಹೋದಾಗ ದಿಢೀರ್ ಅಂತ ತನ್ನ ನಿಲುವಿಗೆ ಮರುವ್ಯಾಖ್ಯಾನ ಮಾಡಿಕೊಂಡು ಬಿಡುತ್ತಾನೆ.

ದೇಹ-ಮನಸು ಬೇರೆ ಬೇರೆಯಾಗಿ ಇರುವುದಿಲ್ಲವಾದರೂ ಬೇರೆ ಬೇರೇಯೇ.
ದೇಹ ದಣಿದು ಮುಪ್ಪಾಗುತ್ತದೆ, ಮನಸಿಗೆ ಮುಪ್ಪು, ಸಾವು ಏನೂ ಗೊತ್ತಿಲ್ಲ. ಅಲೌಕಿಕರು ಇದಕೆ ಆತ್ಮವೆಂದರೆ, ಲೌಕಿಕರು ಮನಸು ಅನ್ನುತ್ತಾರೆ ಅಷ್ಟೇ…

ಇದೆಂದಿಗೂ ಮುಗಿಯದ, ಅರ್ಥವಾಗದ ಮೆಲ್ಲುಸಿರ ಸವಿಗಾನ, ಕ್ಷಿಪ್ರ ಕಲರವ, ಅರಿವಿನ ಅನುಸಂಧಾನ.
ಮುಪ್ಪಿನಲಿ ಹರೆಯದ ಒಲವು ನೆನಪಾದರೆ ಮನಸು ಅರಳುತ್ತದೆ. ಹರೆಯದಲ್ಲಿ ಬೆದರಿ ಕೆರಳುತ್ತದೆ, ಎರಡೂ ಒಂದೇ.
ಅರಳಿ ಕೆರಳುವ ತಾಕತ್ತು ಈ ಪ್ರೀತಿಗಿರುವುದೇ ಜೀವನೋತ್ಸಾಹದ ಧಿಮಾಕು.
ಕಾಮದಾಚೆಗಿನ ಆತ್ಮನಿವೇದನೆಗೆ ಒಲವ ವರತೆ ಉಕ್ಕಿ ಹರಿಯುತ ಸಾಗುವುದೇ ಜೀವನ.

ಇರುವುದ ಬಿಟ್ಟು ಇರದುದ ಹುಡುಕುವ ಹುಡುಗಾಟ ಮುಗಿಯುವುದಿಲ್ಲ. ಈ‌ ರೀತಿಯ ಹುಡುಗಾಟದ ಹುಡುಕಾಟವ ನೋಡಿದ್ದೇನೆ, ಕೇಳಿದ್ದೇನೆ, ಅನುಭವಿಸಿದ್ದೇನೆ.
ಅಗಾಗ, ಈಗೀಗ ಬರೆದ ಮನದ ತಳಮಳಗಳ ಓದಿದಾಗ ಅದೇನೋ ಪುಳಕ.

ಬೆಳೆದು ನಿಂತ ಮಕ್ಕಳು, ವಿದ್ಯಾರ್ಥಿಗಳು, ವಾರಿಗೆಯವರು ಕೇಳುವ ಪ್ರಶ್ನೆಗಳಿಗೆ ಈ ಬರಹಗಳೇ ಉತ್ತರಿಸಲಿ.
ಇಲ್ಲಿ ನಾನೀ ಅಲ್ಲದೇ, ಅವನು-ಅವಳು, ಅವರು-ಇವರು ಎಲ್ಲರೂ ಇದ್ದಾರೆ. ನಮ್ಮನ್ನು ನಾವು ಹುಡುಕಿಕೊಂಡರೆ ಸಾಕು.
ಓದಿ ಖುಷಿ ಪಡಿ. ಎಲ್ಲರ ಪರವಾಗಿ ನಾ ಹಾಡಿ ಹಗುರಾಗಿದ್ದೇನೆ. ನೀವೂ ಹಗುರಾಗಿ…

ಸಿದ್ದು ಯಾಪಲಪರವಿ

Saturday, September 1, 2018

ಹಿಡಿದು ಕಟ್ಟುವ ತವಕ

Read my thoughts on YourQuote app at https://yq.app.link/Z4WVBQDGRP

ಲವ್ ಕಾಲ

*ಹಿಡಿದು ಕಟ್ಟುವ ತವಕಕೀಗ ಮೂಗುದಾರ*

ಅಲ್ಲಿ ನೀ ಒಂಟಿ, ಏಕಾಂಗಿ ನನಗಾಗಿ ಎಲ್ಲವನೂ ತ್ಯಜಿಸಿಬಿಟ್ಟೆ. ನೋಡಲು ಬಂಗಾರದ ಪಂಜರದ ಥಳುಕು, ಒಳಗೆಲ್ಲ ಬರೀ ಹುಳುಕು ಎಂದು ಗೊತ್ತಾದ ಕೂಡಲೇ ಮನಸು ಕೆರಳಿತು.

ಬಿಡಿಸಿ ಹಾರಲು ತೂರಿ ಬಿಡುವ ಸಂಕಲ್ಪ.

ಹಗಲಿರುಳು ಅದೇ ಧ್ಯಾನ ಗೊತ್ತು ಗುರಿ ಇಲ್ಲದ ಅಡ್ಡಕಸಬಿಯ ಹಾಗೆ.

ಮೈತುಂಬ ಬಿಡಿಸಲಾಗದಷ್ಟು ಕೆಲಸಗಳು, ಅವುಗಳ ಮಧ್ಯೆ ಮೂರನೇ ಕಣ್ಣಿಂದ ಸಂರಕ್ಷಿಸುವ ಧಾವಂತ.

ತಾಯಿ ಮಗುವಿಗಾಗಿ ಹಲುಬಿದಂತೆ ಅದೇ ಹುಚ್ಚಾಟ.

ಒಂದಲ್ಲ ಎರಡಲ್ಲ ಸಾವಿರದ ಗಂಟೆಗಳ ಕಲರವ ಹಗಲಿರುಳು ಅದೇ ತೀವ್ರತೆ.

*ಆಡುವ ಮಾತಲಿ, ನೋಡುವ ನೋಟದಲಿ, ಕೂಡುವ ಕೂಟದಲಿ, ಬರೆಯುವ ಅಕ್ಕರದಲಿ, ಓದುವ ಪುಟದಲಿ, ಉಣ್ಣುವ ಅನ್ನದಲಿ, ಬಿಗಿದಪ್ಪುವ ಮಗಳ ಬಿಸುಪಲಿ, ಅಪ್ಪಳಿಸುವ ಕನಸಲೂ ಅದೇ ಅದೇ ಗುಂಗು*.

ಎಂದೂ ಮುಗಿಯದ ಹಾಡಿಗೆ ಹೊಸ ಹೊಸ ರಾಗಗಳ ಕಾವ್ಯಾಂಕುರ.

ಬೆವರು, ನೆತ್ತರು, ಅಣು ಕಣದಲಿ, ಒತ್ತರಿಸಿ ಚಿಮ್ಮುವ ಧಾತುವಲಿ ಇನ್ನಿಲ್ಲದ ಕಸುವು. ಅದೇನೋ ಪೊಗರು, ಆಕಳಾಗಿದ್ದ ಮನಕೀಗ ಗೂಳಿಯ ಖದರು.

ಕುದುರೆಯ ಓಟಕೀಗ ತಿರುಗಿದ ಹರೆಯ. ಬಿಗಿದಪ್ಪಿದರೆ ಗಾಳಿಗೂ ತೂರಲು ಜಾಗವಿಲ್ಲ.

ಅರಳುವ ಗುಲಾಬಿಗೆ ಕೆರಳಿದ ದುಂಬಿ.‌ ಮಕರಂದವ ಹೀರಿ ಚಂದ್ರನ ಬೆಳಕಲಿ ಮೆಲ್ಲುಸಿರ ಕಂಪನ.

ಜಿನುಗುವ ಹನಿಯಲಿ ಮಿನುಗುವ ಕೆಂಗುಲಾಬಿ.‌

ಮಾವಿನ ತೋಪಲೂ ಮಿಂಚುವ ದ್ರಾಕ್ಷಿ.

ಹುಚ್ಚು ಹೆಚ್ಚಾದಾಗ ನನಗೇ ಇರಲೆಂಬ ದುರಾಸೆ. ಅಪರಿಮಿತ ವ್ಯಾಮೋಹದಲಿ ಕಟ್ಟಿ ಹಾಕಿ ಉಸಿರುಗಟ್ಟಿ ಚೀರಿದರೂ ಬಿಡದ ಕರಡಿಯ ಹಿಡಿತ.

ನಾ ನೀ ಆದಾಗ ನೀ ನಾನಾಗಲೀ ಎಂಬ ಅಟ್ಟಹಾಸ.

ಇನ್ನಿಲ್ಲದ ಸಿಟ್ಟು, ಸೆಡವು ಮೊಂಡಾಟ, ಹಟ, ಹಟ, ಹಟ ಬೇಕೇ ಬೇಕು ಈ ಮಡಿಲಲಿ ಹಗಲು ಇರುಳು, ಆಗ ಈಗ ಬೇಗ ಬೇಗ.

ಬಿಡಲಾರದ ತಲ್ಲಣದ ಮೂಗುದಾರಕೆ ಮೂಗುತಿಯ ಸಡಗರ.

ನೀನೋ ಸಿಗಬಾರದೆಂಬ ಜಾಣ ಹಿರಿಮೆ. ಹಿಂದಿನ ಬಂಧನದ ಮುಕ್ತಿಗೆ ಹೊಸ ಬಂಧ ಬೇಡೆಂಬ ನಿಲುವು.

ಇರಲಿ ನೋಡೋಣ, ಕೂಡಿಸಿದ ಅವನು ಕಳೆಯಲಾರ. ಕಳೆದರೆ ಹಿಡಿದು ಕಟ್ಟಿ, ಕೂಡಿ ಹಾಕಿ ಮೌನರಾಗದಲಿ ಹಾಡಿ ನಲಿವೆ ಚರಮ ಗೀತೆಯ.

ಬಿಡಲಾರೆ ಎಂದೆಂದೂ ಮುಂದೂ.  ಮೂಗುತಿಯ ಮಿಂಚಲಿ, ಉಸಿರ ಲಯದಲಿ ಮೂಗಿನ ಹೊಳ್ಳಿಯಲಿ ಏದುಸಿರಾಟದ ಲಹರಿಯಲಿ ನಾನಿರುವೆ ಉಸಿರು ನಿಲ್ಲುವ ತನಕ. ಮಣ್ಣಲಿ ಮಣ್ಣಾಗುವ ಗರತಿಯ ಮೂಗುತಿಯ ಮುತ್ತಲಿ.

ಸಿದ್ದು ಯಾಪಲಪರವಿ

#kannada #kannadaquotes #lovequotes #love #LoveQuote #YQJogi #YQbaba #YQkannada
@YourQuote Jogi

Sunday, August 26, 2018

ವಿಚಾರ ಪತ್ನಿ

ವಿಚಾರ ಪತ್ನಿ : ಆಚಾರ ಸಾಂಗ್ಯತ್ಯದ ಹುಡುಕಾಟ

ವಿಚಾರ-ಆಚಾರ , ಆಚಾರ-ವಿಚಾರಗಳ ಕದನ ನಿಲ್ಲುವುದೇ ಇಲ್ಲ.
ಅತೃಪ್ತ ಮನಸಿಗೆ ನೂರೆಂಟು ತಳಮಳಗಳು. ಬಿಟ್ಟೆನೆಂದರೂ ಬಿಡದ ಮಾಯಾವಿಗಳು.

ಸರಿ-ತಪ್ಪುಗಳ ಸೆಳೆತದಲಿ ತಪ್ಪು ಪ್ರಿಯವೆನಿಸುವುದು ಸಹಜ. ಆ ತಪ್ಪನ್ನು ಕ್ರಮಬದ್ಧವಾಗಿ ಸಮರ್ಥಿಸುವ ವಾದ-ವಿವಾದ.
ಮಾಗಿದ ಮನಸಿನ ಚಪಲಕೆ ನಿಲ್ಲದ ಹಾರಾಟ. ವಯಸ್ಸಾದಂತೆಲ್ಲ ಏನೋ ಹುಡುಕಾಟ. ಹುಡುಗಾಟ.

ಅನೇಕಾನೇಕ ಸಾಧು ಸಂತರ , ಬಸವಾದಿ ಶರಣರ ಅನುಭಾವಗಳು ನಮಗೆ ಹೊಸ ಲೋಕ ತೋರಿಸಿ ವೈರಾಗ್ಯದ ಕಡೆ ಕೊಂಡೊಯ್ಯುವಾಗ ಕಾಡಿ ನೆನಪಾಗುವ ವೈಚಾರಿಕ ಸಾಂಗ್ಯತ್ಯದ ಸಾಮಿಪ್ಯದ ತುಡಿತ.

ಯಾಕೆ ಹೀಗೆ ? ಏರು ಯೌವನದಲಿ ಇಲ್ಲದ ಮನೋಪಲ್ಲಟ ಈಗೇಕೆ ?

ಪ್ರಬುದ್ಧತೆ , ಸಮಾಧಾನ ಅದರೊಂದಿಗೆ  ಒಂಟಿತನವನ್ನು ಏಕಾಂತವಾಗಿಸುವ ಇರಾದೆ.

ಇನ್ನಿಲ್ಲದ ಜಡಪಡಿಕೆಯ ಪ್ರತಿಫಲವಾಗಿ ಭಾವಲೋಕ ಪ್ರವೇಶಿಸಿ ವಿಚಾರ ಸಂಗಾತಿಯನ್ನು ಹುಡುಕುವುದು ಸಾಮಾನ್ಯ ಎಂಬ ಸತ್ಯ ಬೆಳಕಿಗೆ ಬಂದಿದೆ.

ಹುಡುಕುವ ಪರಿಗೆ ಬೆರಗಾಗಿ ಹುಡುಕಾಟಕೆ ಒಲಿದು ವಿಚಾರಪತ್ನಿ ಸಿಗಬಹುದು ಆದರೆ ಮುಂದೇನು ?
ಇದನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಬಹಿರಂಗ ಪಡಿಸಬಹುದಾ ?
ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದರೊಳಗೆ ನಾವು ಕಳೆದುಹೋಗಿರುತ್ತೇವೆ.

ಮತ್ತದೇ ತಲ್ಲಣ , ಸಂಘರ್ಷಗಳ ಸವಿಮಾಲೆ ಧರಿಸಿ ಹೊಸ ಸಂಬಂಧದ ಹಂಗಾಮಾ ಸವಿಯುವ ತರಾತುರಿ .
ಸಮರ್ಥ ಬೌದ್ಧಿಕ ಸಾಮಿಪ್ಯ ಹೊಂದಿದ ವಿಚಾರ ಪತ್ನಿ - ಪತಿ ಸಿಕ್ಕಾಗಲಾದರೂ ಹುಡುಗಾಟಿಕೆಯ ಹುಡುಕಾಟ ನಿಲ್ಲಬೇಕು.

ತುಂಬ ಆತ್ಮವಿಶ್ವಾಸದಿಂದ ಸಾಮಾಜಿಕ ಅಭಿಪ್ರಾಯ ಲೆಕ್ಕಿಸದೇ , ಚಾರಿತ್ರ್ಯದ ಸೋಗಲಾಡಿತನವನ್ನು ದೂರ ಮಾಡಿ ಸಂತಸ , ಸಂಭ್ರಮದಿಂದ ಬದುಕಬೇಕು.

ವಯಸ್ಸಾದಂತೆಲ್ಲ ಪ್ರಾಮಾಣಿಕತೆ ಪಸರಿಸಬೇಕು. ನಂಬಿಕೆ ಬಿಗಿಯಾಗಬೇಕು.
ಒಪ್ಪಿಕೊಂಡ ವ್ಯಕ್ತಿಯ ಚರಿತ್ರೆ ಹಾಗೂ ಚಾರಿತ್ರ್ಯದ ಗೊಡವೆಗೆ ಹೋಗಬಾರದು.

ಖುಷಿ ನಮ್ಮ ಧೋರಣೆಯಾಗಬೇಕು. ವರ್ತಮಾನದ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಇರುವ ಸಂಬಂಧಗಳನ್ನು ದಿಕ್ಕರಿಸದೇ , ಆಚಾರ ಸಂಗಾತಿಯನ್ನು ಅನಾಥ ಮಾಡದೆ ಇಳಿ ಹೊತ್ತನು ಸಂಭ್ರಮಿಸಬೇಕು.

Life skill ತರಬೇತಿಯ ಸಂದರ್ಭದಲ್ಲಿ ಕೆಲವರು ಈ ರೀತಿಯ ಸಂಬಂಧಗಳ ನಿರ್ವಹಣೆ ಕುರಿತು ಪ್ರಶ್ನಿಸಿದಕ್ಕೆ ಇದನ್ನು ಹೇಳಬೇಕಾಯಿತು ಅಷ್ಟೇ .

----ಸಿದ್ದು ಯಾಪಲಪರವಿ

ಪೊಸೆಸ್ಸಿವ್ ಅಪಾಯ

ಲವ್ ಕಾಲ

Possessive ಇದ್ರೆ ಹೀಗೆ ಆಗೋದು

ನೀನು ನನ್ನೊಂದಿಗೆ ಮಾತಾಡ್ತಾ ಕೆಲವು ಕಹಿ ಸತ್ಯಗಳನ್ನು ಹೇಳಿದ ಕೂಡಲೇ ಮೌನವಾಗಿ ಗಂಟಲು ಬಿಗಿದು ಮಾತು ನಿಲ್ಲಿಸಿದ್ದು ನನಗೆ ಅರ್ಥವಾಗುವುದಿಲ್ಲ ಅಂದುಕೊಂಡೆಯಾ ?

ಪ್ರೀತಿ ಆರಂಭದ ದಿನಗಳಲ್ಲಿ ತುಂಬಾ ಗೊಂದಲದಲ್ಲಿರುತ್ತದೆ. ಈ ತರಹದ ತಲ್ಲಣಗಳು ತೂಗುವ ತಕ್ಕಡಿಯಿದ್ದಂತೆ. ನಿಲ್ಲುವವರೆಗೆ ತೂಗಲೇಬೇಕು .

ಎರಡು ದಂಡೆ ಮೇಲೆ ಕಾಲಿಟ್ಟು ನಡೆಯುವುದು ಹೇಗೆ ? ಎಂಬ ಗೊಂದಲದ ಮಧ್ಯೆ ನೀ ನನ್ನನ್ನು ಸ್ವೀಕರಿಸಿರುವುದರಿಂದ ಈ ತಳಮಳ ಸಹಜ.

ಓಡುವ ರೈಲಿನ ಹಳಿಗಳು ಎಂದೂ ಸೇರುವುದೇ ಇಲ್ಲ ಆದರೆ ಜೊತೆಯಾಗಿ ಚಲಿಸಲೇಬೇಕು.

ನಾವು ಹಾಗೇ ವಿಭಿನ್ನ ನೆಲೆಯಲ್ಲಿ ಬದುಕನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು.

ಪಾಪ ಪ್ರಜ್ಞೆ ಸಲ್ಲದು. ಹಾಗಂತ ಸಂಬಂಧವನ್ನು ಟಾಂ ಟಾಂ ಮಾಡಬಾರದು.
ನಮ್ಮಿಬ್ಬರ ಖುಷಿಗಾಗಿ ನಾವು ಒಂದಾಗಿ ಮಿಲನಮಹೋತ್ಸವ ಆಚರಿಸಿದ್ದೇವೆ. ಸುಖಿಸಿದ್ದೇವೆ. ಸಂಭ್ರಮಿಸಿದ್ದೇವೆ.

ಅದು ನಮ್ಮ ಆಯ್ಕೆಯಾಗಿತ್ತು ಕೂಡಾ !
ಈಗ ಅದಕ್ಕೆ ಪಶ್ಚಾತಾಪ ಪಡುವುದು ಬೇಡವೇ ಬೇಡ .

ನೀನು ಹಾಗೆ ಪಶ್ಚಾತಾಪ ಪಟ್ಟಾಗಲೆಲ್ಲ ರಮಿಸಿ convince ಮಾಡಿ ನನಗೂ ಬೇಸರ ಇಲ್ಲ ಬಿಡು. ಯಾವುದೇ ದುರುದ್ಧೇಶ ನನಗೆ ಇಲ್ಲ ಎಂದ ಮೇಲೆ ಯಾವ ಅಳುಕೂ ಇಲ್ಲ.

ನಿಸ್ಸಂಕೋಚವಾಗಿ ನಿನ್ನನ್ನು ರಮಿಸುತ್ತಲೇ ಇರುತ್ತೇನೆ , ನೀನು ಕೋಪಿಸಿಕೊಳ್ಳುತ್ತಲೇ ಇರು. ಕೋಪಗೊಂಡಿರುವವರನ್ನು ರಮಿಸಿ ಮುದ್ದಿಸುವುದರಲ್ಲಿ thrill ಇರುತ್ತದೆ.

ಹಾಗೆ ಮುದ್ದಿಸಲಿ ಎಂಬ ಇರಾದೆ ಇಟ್ಟುಕೊಂಡೇ ನೀ ಕೋಪ ಮಾಡಿಕೊಂಡರೆ ನನಗೆ ಬೇಸರವಿಲ್ಲ but don't take anything personally.

ನಿನ್ನೆ ಆಗಿದ್ದು ಅಷ್ಟೇ , ನಿನ್ನ over possessiveness ನಿನ್ನಲಿ ಇಲ್ಲದ ಆತಂಕ ಉಂಟು ಮಾಡಿದೆ.

ಆದರೆ ಇದು repeat ಆಗುವುದು ಬೇಡ.
ಮನಸಿಗೆ  ತುಂಬಾ ಹಳಹಳಿಯಾಗುತ್ತೆ.

ರಮಿಸಿ , ರಮಿಸಿ ನನಗೂ ಹೈರಾಣಾಗಬಾರದಲ್ಲ ?

ತೂಗುವ ತಕ್ಕಡಿ ಸಮ ಕಾಯ್ದುಕೊಳ್ಳಲಿ. ಮನಸು ಹಗುರಾಗಲಿ.

ಅರ್ಧ ಕಾಣೆಯ ಸೋಲದೆ , ಅರ್ಧ ಕಾಣೆಯ ಗೆಲ್ಲದೇ ಜಾಣರಾಗಿ ಇರೋಣ. 

' ಅವನು ' ಆಡಿಸಿದಂತೆ ಆಡಿ ಕೇವಲ ಖುಷಿ , ಖುಷಿ ಆಗಿರೋಣ ಅಷ್ಟೇ.
ಆಗೀಗ ಇರಲಿ ಕೊಂಚ ಹುಸಿ ಮುನಿಸು.

ಎಲ್ಲಿ ಪ್ರೀತಿ , ಅಲ್ಲಿ ಕೊಂಚ ಅನುಮಾನ , ಇನ್ನೂ ಕೊಂಚ ಕೋಪ ಎಂದು ನನಗೆ ಗೊತ್ತಿದೆ ಬಿಡು.

----ಸಿದ್ದು ಯಾಪಲಪರವಿ

Thursday, August 23, 2018

ಕಳೆದು ಹೋಗುವ ಹಳವಂಡ ಹಾಗೂ ಮೇಘಸಂದೇಶ

ಲವ್ ಕಾಲ

*ಕಳೆದು ಹೋಗುವ ಹಳವಂಡ ಹಾಗೂ ಮೇಘಸಂದೇಶ*

ಈ ಭಾವಲೋಕವೇ ಹೀಗೆ, ಸಮಯ ಹಾಳು. ಮುಟ್ಟುವ ಗುರಿ ಮರೆಸುವ ಹುನ್ನಾರ. ಕಾಲ ಯಾರಿಗೂ ಕಾಯದೇ ನಿಲ್ಲುವುದಿಲ್ಲ ಆದರೂ ನಾವು ಕೆಲವರಿಗಾಗಿ ಕಾಯುತ್ತೇವೆ ಹುಚ್ಚರ ಹಾಗೆ ಮಾಡುವ ಕೆಲಸ ಬಿಟ್ಟು.

ಊಟ-ನಿದ್ರೆ-ಕಾಮ ಬದುಕಿನ ಅವಿಭಾಜ್ಯ ಅಂಗಗಳು. ಹಾಗಾದರೆ ಈ ಹುಚ್ಚು ಪ್ರೀತಿ ಮತ್ತದವರ ಧಾವಂತಕೆ ಏನನ್ನಬೇಕು?

ಅತ್ತ ಕಾಮವೂ ಅಲ್ಲದ ಬರೀ ದೂರ ದೂರದ ಕಹಿ ಯಾತನೆಯೊಂದಿಗಿನ ಕಾಮವಿಲ್ಲದ ಕಾಲಹರಣಕೆ ಏಕೆ ?

ಭ್ರಮೆಯೋ, ತಲ್ಲಣವೋ, ಅವಾಸ್ತವ ಕಾಲಹರಣವೋ.
ಏನೇ ವ್ಯಾಖ್ಯಾನಿಸಿದರೂ ಭಾವುಕ ಮನಸಿಗೆ ಮುದ ಸಿಗುವುದಂತೂ ಗ್ಯಾರಂಟಿ.

ಅದಕೆ ನಾವು ಭಾವ ಪ್ರಪಂಚದಲ್ಲಿ ತೇಲಾಡಿ ಸಮಯ ಹಾಳಾದರೂ ಖುಷಿಪಡುತ್ತೇವೆ.
ಒಂದು ಕಾಲಕೆ ಪ್ರೇಮಿಗಳು ನಿಗೂಢ ಭಾಷೆಯಲ್ಲಿ ಪತ್ರ ಬರೆದು ನಿವೇದಿಸುತ್ತಿದ್ದರು.

ಇನ್ನೂ ಹಿಂದೆ ಸಾವಿರ ವರ್ಷಗಳ ಹಿಂದೆ ಮೇಘ ಸಂದೇಶ.
ಕಾಳಿದಾಸನ ಕಾಲದಿಂದಲೂ ಇರುವ ಈ ಹುಚ್ಚು ಇಂದಿಗೂ ಜೀವಂತ ಮತ್ತೆ ಹೊಸ ಹೊಸ ರೂಪದಲ್ಲಿ, ಹೊಸ ಆವಿಷ್ಕಾರಗಳೊಂದಿಗೆ.

ಕಾಳಿದಾಸನ ಮೇಘಸಂದೇಶ ಖಂಡಿತ ಕಲ್ಪನೆಯಲ್ಲ.
ಆಧುನಿಕ ತಂತ್ರಜ್ಞಾನದ ಸೆಟ್ ಲೈಟ್ ನೆಟ್ ವರ್ಕ್, ಅಂದರೆ ಈಗಿನ ಇಂಟರ್ ನೆಟ್.
ನಮ್ಮ ಎಲ್ಲ ದಾಖಲೆಗಳ ಶೇಖರಣೆ ಗೂಗಲ್ cloud ನಲ್ಲಿರುವಂತೆ ಆ ಕಾಲದ ಮೇಘಸಂದೇಶ ಇರಬಹುದಲ್ಲ ಅನಿಸುತ್ತದೆ.

ನೂರು ವರ್ಷಗಳ ಹಿಂದೆ ರಾವಣನ ಪುಷ್ಪಕ ವಿಮಾನವೂ ಕಲ್ಪನೆ ಅನಿಸುತಿತ್ತು ಆದರೆ ಈಗಿನ ಹೆಲಿಕ್ಯಾಪ್ಟರ್ ಹಾಗೂ ಚಾರ್ಟರ್ ಫ್ಲೈಟ್ ನೋಡಿದಾಗ ಹೌದಲ್ಲ ಎನಿಸುತ್ತದೆ.

ಮನುಷ್ಯ ತನ್ನ ಉತ್ಕಟ ಪ್ರೇಮಾಭಿವ್ಯಕ್ತಿಗೆ ಕಲ್ಪಿಸಿಕೊಂಡಿದ್ದನ್ನೆಲ್ಲ ವಿಜ್ಞಾನ ತಂತ್ರಜ್ಞಾನ ಮೂಲಕ ನನಸಾಗಿಸಿಕೊಂಡಿದ್ದಾನೆ. ಅದಕ್ಕೆ ಕಾರಣ ಈ ಜೀವನೋತ್ಸಾಹದ ಪ್ರೀತಿ-ಪ್ರೇಮ-ಪ್ರಣಯ.

ಮನುಷ್ಯನ ಖಾಸಗಿ ಗುಟ್ಟೆಂದರೆ ಪ್ರೇಮ ಮತ್ತು ಯುದ್ಧ. ಇವೆರಡು ಗುಟ್ಟಾಗಿರಲಿ ಎಂದು ಬಯಸಿ ಹೊಸ ಮಾರ್ಗ ಕಂಡು ಹಿಡಿಯುತ್ತಾನೆ.
ಪ್ರೇಮಭಾಷೆ ಹಾಗೂ ಯುದ್ಧಭಾಷೆ ಗುಟ್ಟಾಗಿದ್ದು ಸಂಬಂಧಿಸಿದವರಿಗೆ ಮಾತ್ರ ಅರ್ಥವಾಗಲಿ ಎಂಬ ಖಾಸಗಿತನದಿಂದಾಗಿ ನೂರಾರು ಆವಿಷ್ಕಾರಗಳು.

ಫೋನ್, ಮೆಸೆಜುಗಳು, ಇಮೋಜಿಗಳು, ಫೇಸ್ ಬುಕ್, ವಾಟ್ಸ್ ಅ್ಯಾಪ್, ವಿಡಿಯೋ ಕಾಲ್, ಮೆಸೆಂಜರುಗಳು… ಇನ್ನೂ ಏನೇನೋ ಆವಿಷ್ಕಾರಗಳು ಸಾಗಿವೇ ಇವೆ.
ಎಲ್ಲದಕು ಕಾರಣ ಅದೇ ಪ್ರೀತಿ ಮತ್ತು ಯುದ್ಧ. ಎರಡಲ್ಲೂ ತಾನೇ ಗೆಲ್ಲಬೇಕೆಂಬ ಹಟ.

ಅದೇ ಸಾತ್ವಿಕ ಹಟದ ಜಾಡ ಹಿಡಿದು ಆಧುನಿಕ ಮೇಘಸಂದೇಶದ ಮೂಲಕ ನಿನ್ನ ಹಿಡಿದುಬಿಟ್ಟೆ. ಆಧುನಿಕ ಜಾತಾಣದಲಿ ಸೆರೆ ಸಿಕ್ಕ ನಿನ್ನ ಅದೇ ಸಾತ್ವಿಕ ಹಟದ ಮೂಲಕ ಯುದ್ಧ ಗೆದ್ದಂತೆ ಎದೆಗವಚಿಕೊಂಡ ಕತೆ ಈಗ ಹೊಸ ಇತಿಹಾಸ.
ಇನ್ನೂ ಗೆಲುವ ಸದಾ ಹತ್ತಿರ ಇಟ್ಟುಕೊಳುವ ಧಾವಂತಕೆ ಕೊನೆ ಎಂಬುದೇ ಇಲ್ಲ.

ಆದರೂ ಗೂಗಲ್ ಮೇಘಸಂದೇಶ ನಮ್ಮನ್ನು ಹತ್ತಿರ ಇರುವಂತೆ ಮಾಡಿದೆ. ವಿಡಿಯೋ ಕಾಲ್ ಎಂಬ ಜಾದೂ ಲೋಕದಲಿ ಎದುರು ಬದುರಾಗಿ ಹರಟೆ ಹೊಡೆಯುವುದು ತಂತ್ರಜ್ಞಾನದ ಪವಾಡವಲ್ಲದೇ ಇನ್ನೇನು?
ನಾವು ದೂರ ಇದ್ದೇವೆ ಎಂಬ ಭಾವ ದೂರಾಗಿ, ಜೊತೆಗಿದ್ದ ರಸಾನುಭವ. *ಪರಸ್ಪರ ಮುಟ್ಟದಿದ್ದರೂ ಮನಸುಗಳು ತಟ್ಟುತ್ತಲೇ ಇರುತ್ತವೆ*.

ಸಂಪರ್ಕ ಕಡಿದು ಹೋದರೆ ಮನುಷ್ಯ ಮಾನಸಿಕವಾಗಿಯೂ ದೂರಾಗುವ ಅಪಾಯವಿದೆ. ನಿರಂತರ ಸಂಪರ್ಕ ನಿಂತು ಹೋದರೆ ನೆನಪು ಮಸುಕಾಗಿ ಸಂಬಂಧ ಮರೆಯಾಗುತ್ತದೆ.

Out of sight is out of mind… ಎಂಬ ಮಾತು ಸುಳ್ಳಲ್ಲ.
ಮರೆವು ವರ ಹೇಗೇಯೋ ಹಾಗೆ ಶಾಪವೂ ಹೌದು.
*ಮರೆಯುವ ಮಾತ ಮರೆತುಬಿಡು* ಎನ್ನಲು ನೆರವಾಗುವ ಈ ಆಧುನಿಕ ಮೇಘಸಂದೇಶಕೆ ನಾವು ಸದಾ ಚಿರರುಣಿ.
ಹತ್ತಿರ ಇನ್ನೂ ಹತ್ತಿರ ಈ ಲೋಕದ ಹಂಗ ಹರಿದು...

  *ಸಿದ್ದು ಯಾಪಲಪರವಿ*

Sunday, August 19, 2018

ಶಬ್ದಸೂತಕ ಮಾತು

ಲವ್ ಕಾಲ

*ಶಬ್ದ ಸೂತಕವಾಗುವ ಮೊದಲು ಮಾತು ಮುಗಿಯಲಿ*

ಮಾತು ಮಾತು ಬರೀ ಮಾತು. ಹೇಳಿದ್ದೇ ಸಾವಿರ ಸಲ ಹೇಳುವ ಧಾವಂತ.‌ ಬದಲಾಯಿಸಿ ದಕ್ಕಿಸಿಕೊಳ್ಳುವ ಸ್ವಾರ್ಥದ ಪೊಸೆಸ್ಸಿವ್.

‘ ನೀ ಎಷ್ಟೇ ಹೇಳು ನನಗೆ ಸರಿ ಅನಿಸಿದಾಗ ಮಾತ್ರ ಒಪ್ಪಿಕೊಳ್ಳುತ್ತೇನೆ ‘ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದರೂ ನಿಲ್ಲದ ನಿರ್ಲಜ್ಯ.

ಈ ಸುಡುಗಾಡು ವ್ಯಮೋಹವೇ ಹೀಗೆ, ಮತ್ತೊಬ್ಬರ ಸ್ವಾತಂತ್ರ್ಯ ಕಸಿದುಕೊಳ್ಳುವ ಕೆಟ್ಟ ಹುನ್ನಾರ.

ಅದು ಗೊತ್ತಿದ್ದೂ ನಾ ಅದನ್ನೇ ಮಾಡಿ ನಿನ್ನ ಬಲಿ ತೆಗೆದುಕೊಂಡೆ.‌ ಧಿಕ್ಕಾರವಿರಲಿ ನನ್ನ ನಿರ್ಲಜ್ಯ ಸ್ವಾರ್ಥ ವ್ಯಾಮೋಹಕೆ.

ಸರಾಸರಿ ದಿನಕ್ಕೆರಡು ತಾಸು ಹೇಳಿದ್ದಾದರೂ ಏನು ?

ಅವೇ ಮಾತುಗಳು. ಪ್ರಯೋಜನ ? ಅತ್ಯಮೂಲ್ಯ ಸಮಯ ಹಾಳು ಮಾಡಿ ಮನಸು ಮಲಿನ ಮಾಡಿಕೊಂಡದ್ದು.‌ ಪರಿಣಾಮ ಶೂನ್ಯ ಸಂಪಾದನೆ.

*ಅನುಮಾನಿಸಿ ಅವಮಾನಿಸುವವನಿಗೂ ನನಗೂ ಏನೂ ವ್ಯತ್ಯಾಸ ಇಲ್ಲ* ಅನಿಸಿಕೊಂಡುಬಿಟ್ಟೆ. ನಾನೂ ಒಬ್ಬ ‘ಸಂಶಯ ಪಿಶಾಚಿ’ ಎಂಬ ಪಟ್ಟ ಕಟ್ಟಿಕೊಂಡು ಕಾಲ ಗರ್ಭದಲಿ ಶಬ್ದಗಳ ಸೂತಕ ಮಾಡಿಬಿಟ್ಟೆ.

*ಪರಿವರ್ತನೆ ನಮ್ಮಲ್ಲಿ ಬರಬೇಕು ಅದನ್ನು ಬೇರೆಯವರಿಂದ ನಿರೀಕ್ಷಸಬಾರದು* ಎಂಬ ಸಾಲುಗಳು ವೇದಾಂತದಲಿ ಉಳಿದುಬಿಟ್ಟವು. ಬದುಕಲಿ ಅಳವಡಿಸಿಕೊಳ್ಳಲು ವ್ಯಾಮೋಹ ಅಡ್ಡಬರಬಾರದಿತ್ತು. ನಾನು ಸೋತೆ. ನನ್ನ ಮೌಲ್ಯಗಳೂ ಸೋತು ಮಾತು ಸೂತಕವಾದವು.

ಬದಲಾಯಿಸಲಾಗದು ಯಾರನ್ನೂ ಎಂಬುದೊಂದು ಶಾಶ್ವತ ಸತ್ಯ ಆದರೂ ಪ್ರಲೋಭನೆಗೆ ಒಳಗಾಗಿ ಆ ಪ್ರಯತ್ನವ ಮನಸು ಬಿಡಲಿಲ್ಲ.

ಪ್ರತಿಯೊಬ್ಬರಿಗೂ ಅವರದೇ ಆದ ಆಯ್ಕೆಗಳಿರುತ್ತವೆ ಅವುಗಳನ್ನು ಕಸಿದುಕೊಂಡಾಗ ಮನಸು ವ್ಯಗ್ರವಾಗುವುದು ಸಹಜ. ಆ ವ್ಯಗ್ರಕ್ಕೆ ನನ್ನ ಪ್ರೀತಿ ಬಲಿಯಾಗಬಾರದಿತ್ತು.

ಅದಕ್ಕೆ ಕಾರಣ ನಾನೇ. ನನ್ನ ಸ್ವಾರ್ಥದ ಹಟಮಾರಿ ಧೋರಣೆ.

ಈಗಲೂ ಕಾಲ ಮಿಂಚಿಲ್ಲ ಅವನಿಗಾದ ಗತಿ ನನಗೂ ಬರಬಾದೆಂದರೆ ನಾನು ಬದಲಾಗಬೇಕು.

ಅವನು ಮಾಸಿಕವಾಗಿ ದೂರಾದಂತೆ ನಾನೂ ದೂರಾಗಬಾದೆಂಬ ಅರಿವಿರಬೇಕು.

ವ್ಯಕ್ತಿ ಒಮ್ಮೆ ರೋಸಿ ಹೋದರೆ ಎಲ್ಲವನ್ನು ತಿರಸ್ಕರಿಸುವುದು ಸಹಜ. ಅದು ನನಗೆ ಚನ್ನಾಗಿ ಗೊತ್ತು.

ಆದರೂ ನಾ ವಿಪರೀತ ಹಟ ಮಾಡಿದೆ. ಆ ಹಟಕ್ಕೆ ಸಾತ್ವಿಕ ಮುಖವಾಡ ಬೇರೆ!

ಆದರೆ ಉದ್ದೇಶ ನಿನ್ನ ಸ್ವಾತಂತ್ರ್ಯ ಕಸಿಯುವ ನೀಚತನ.

ಮನುಷ್ಯ ಅತ್ಯಂತ ಕೊಳಕು ಪ್ರಾಣಿ ಎಲ್ಲಾ ತನ್ನ ಮೂಗಿನ ನೇರಕ್ಕೆ ಆಲೋಚಿಸುವ ದುರಾತ್ಮ. ಅದಕ್ಕೆ ನಾನೂ ಹೊರತಾಗಲಿಲ್ಲ. ನಿನ್ನ ಹಿಂಡಿ ಹಿಪ್ಪೆ ಮಾಡಿ ಘಾಸಿ ಮಾಡಿ  ವಿನಾಕಾರಣ ಮಾನಸಿಕವಾಗಿ ದೂರ ಮಾಡಿಕೊಂಡೆ.

ನನ್ನ ಮಿತಿ ಅರಿತುಕೊಂಡರೂ ದುಡುಕಿ ನಿನ್ನ ಭಾವನೆಗಳ ಮೇಲೆ ಸವಾರಿ ಮಾಡಿ ಸ್ವಾತಂತ್ರ್ಯ ಹರಣಕೆ ಮುಂದಾಗಿ ನಾನೂ *ಅವನಾದೆ*.

ಅವನಿಗೂ ನನಗೂ ಏನೂ ವ್ಯತ್ಯಾಸವೇ ಇಲ್ಲ. ಮುಖ ಬೇರೆ ಮುಖವಾಡ ಒಂದೇ. ಅದೇ ಸ್ವಾರ್ಥ.

ನಾವು ಕ್ರಮಿಸಬೇಕಾದ ಹಾದಿಯಲಿ ನಮ್ಮದೇ ಆದ ಯೋಜನೆಗಳಿರುತ್ತವೆ. ಯೋಚನೆಗಳಿರುತ್ತವೆ. ಅದರಲಿ ತೃಪ್ತಿಯೂ ಇರುತ್ತದೆ. ಅದನ್ನು ಯಾರಾದರೂ ಕಸಿಯಲು ಪ್ರಯತ್ನಿಸಿದಾಗ ಮನಸು ಮುದುಡಿ, ಕಸಿದುಕೊಂಡವರ ದೂರ ದೂಡುವುದು ಸಹಜ.

ರೋಸಿ ಹೋದ ಜೀವಕೆ ಸುಖವ ಕೊಡುವ ಬದಲು ಮತ್ತದೇ ನೋವ ಕೊಟ್ಟೆ, ಕ್ಷಮಿಸು ಎನಲೂ ಸಂಕೋಚ.

ನನ್ನ ತಪ್ಪು ನನಗೂ ಗೊತ್ತು. ನಿನಗೂ ಗೊತ್ತು.

ಹೀಗಿರುವಾಗ ಹೇಳುವದು ನಿಷ್ಪ್ರಯೋಜಕ.

ಆದರೂ ಹೇಳಿದ್ದೇ ಹೇಳಿ ಶಬ್ದ ಸೂತಕ ಮಾಡಿದೆ.

ನನ್ನ ಕ್ಷಮಿಸು *ಅಲ್ಲಮ* ನೀ ಹೇಳಿದ್ದು ಸರಿಯಾಗಿ ಆಲಿಸದೇ ಶಬ್ದ ಸೂತಕ ಮಾಡಿಬಿಟ್ಟೆ.

*ಮುಂದೆ ಹೀಗಾಗದಂತೆ ಎಚ್ಚರವಹಿಸಲು ನಿಶಬ್ದದ ಮೊರೆ ಹೋಗಿ ನನ್ನ ನಾ ಧೇನಿಸಿ ಬದಲಾಗುತ್ತೇನೆ*

ಅಲ್ಲ ಅಲ್ಲ ಪರಿವರ್ತನೆಯಾಗುತ್ತೇನೆ.

ಏಕಾಂತದ ಹಾದಿ ಹಿಡಿದು ಕರಾವಳಿ ತೀರದ ಬೆಟ್ಟ ಏರಿ ಲೀನವಾಗಿ ಮೌನದ ಮಹಿಮೆ ಅರಿಯುವೆ.

*ಬುದ್ಧ-ಅಲ್ಲಮರ* ಹಾದಿ ಹಿಡಿದು ಪಾಪ ಕಳೆದುಕೊಳ್ಳುವೆ.

ಸದ್ಯ ನನ್ನ ಕ್ಷಮಿಸಿ ಮತ್ತೊಂದು ಅವಕಾಶ ಕೊಡು ಸಾಕು.

  *ಸಿದ್ದು ಯಾಪಲಪರವಿ*