Sunday, March 27, 2016
March end hot
Thursday, March 24, 2016
ಕಾಮ ದಹನ
ಕಾಮ ದಹನ
ಕಾಮದೋಕುಳಿಯ
ರಂಗು ರಂಗಿನ ಚಲ್ಲಾಟ
ಹೇಗೆ ಸಹಿಸಲಿ ನಾ
ಈ ಕಚಗುಳಿಯಾಟ ನಿತ್ಯ
ನಿಟ್ಟುಸಿರು ಏಕಾಂತದಿ ನಿನ್ನ
ಸೇರಲೆಂದು.
ಉಕ್ಕುವ ಭಾವನೆಗಳ ರಮಿಸುವುದು
ಹೇಗೆ ?
ಅನ್ನ-ಚಿನ್ನದಾತುರವ ಹೇಗೋ
ಸಹಿಸೇನು ಆದರೆ ತಾಳಲಾರೆ
ಒಲುಮೆಯ ಮಿಲನೋತ್ಸವದ
ವಿರಹವ.
ಅಪ್ಪಳಿಸಿ ಅಬ್ಬರಿಸುವ ಎದೆಯುಸಿರಿನ
ತಾಕಲಾಟವ ಅದುಮಿಡಲಾರೆ.
ನೀ ಸಿಕ್ಕರೆ ಎಲ್ಲಿಲ್ಲದ ಹಬ್ಬದೂಟ
ಇಂಚಿಂಚು ಅಗೆದು ಬಗೆಯುವಾಸೆ.
ನಿನ್ನೆದೆಯ ಶಿಖರವನೇರಿ
ಲೀಲಾಜಾಲವಾಗಿ ಹರಿದಾಡಿ
ಹೆಡೆ ಎತ್ತಿ ಅಪ್ಪಳಿಸಿ ಹಿಂಡಿ
ಹಿಪ್ಪೆ ಮಾಡುವ ಪರಿಯಲಿ
ನಿ�ನ್ನ ಹಾರಾಟ-ಚೀರಾಟ
ಗಳ ಗಾಳದಿ ಸಿಕ್ಕು
ಸಂಭ್ರಮಿಸುವಾಸೆ.
ಭುವಿಯ ಮೇಲೆ ಎಲ್ಲಿಯೂ
ಸಿಗದ ಸವಿಸುಖ ನಿನ್ನ
ಮೈ-ದಾನದ ಈ ಹೋರಾ�ಟದಲಿ
ಸೋಲು-ಗೆಲುವಿನ ಪ್ರಶ್ನೆ
ಇನ್ನಿಲ್ಲ .
ಗೆಲ್ಲುವ ಆತುರದಿ ಸೋಲುವ
ಭೀತಿಯ ಲೆಕ್ಕಿಸದೇ ಹಾರಾಟ
ಚೀರಾಟ.
ಒಮ್ಮೆ ಮತ್ತೊಮ್ಮೆ ಬಗೆ ಬಗೆಯ
ರಂಗಿನಾಟವ ಆಡುತ್ತ...ಆಡುತ್ತ...
ವಿರಮಿಸುವ ಮುನ್ನ ಮೈತುಂಬಾ
ಹರಿದಾಡಿದ ಹೆಡೆ...
ನಿಧಾನ...ನಿಧಾನದಿ ಕಳಚುವ
ಮುನ್ನ ಸಿಗದ ಮುನ್ಸೂಚನೆಗೆ
ತತ್ತರಿಸುವ ಮೈ-ಮನಕೆ
ಅಲ್ಪ ವಿರಾಮ...
ಮತ್ತೆ ಮತ್ತೊಮ್ಮೆ ಹೀಗೆ
ಮಗುದೊಮ್ಮೆ ಬೇಕೇ
ಬೇಕೆಂಬ ಇಂಗದ ದಾಹ
ನಿನ್ನೊಲುಮೆಯ ಸವಿಸುಖದ
ನಿತ್ಯ ಮರೆಯಾಗದ
ರಂಗು ರಂಗಿನ ಈ
ಹೋಳಿಯಾಟ
ಒಲುಮೆಯ ಸವಿಯೂಟ.
---ಸಿದ್ದು ಯಾಪಲಪರವಿ
Wednesday, March 23, 2016
ಕಾವಲುಗಾರ
ಕಾವಲುಗಾರ
ಬುದ್ಧ ಬಸವ ಅಲ್ಲಮರ
ವಾರಸುದಾರ ನಾನು
ನನ್ನಷ್ಟು ಶ್ರೀಮಂತ
ಬೇರೆ ಯಾರೂ ಇಲ್ಲವೇ
ಇಲ್ಲ.
ಬುದ್ಧ ಬಿಟ್ಟು ಹೋದ
ಶಾಂತಿ ಸರೋವರಕೆ ಬೆಲೆ
ಕಟ್ಟುವ ತಾಕತ್ತು ಯಾರಿಗಿದೆ?
ಬಸವ ಬಿತ್ತಿ ಬೆಳೆದ ಸೌಹಾರ್ದ
ಎಂಬ ವಿಶಾಲ ತೋಟವ ಉತ್ತಿ
ಬಿತ್ತಿ ಸಾಗುವಳಿ ಮಾಡಲಾದೀತೆ?
ಅಲ್ಲಮನ ಜ್ಞಾನ ಭಂಡಾರದಲಿ
ತೆರೆದು ಕೈಮಾಡಿ ಕರೆಯುತಿರುವ
ಕೋಟಿ ಕೋಟಿ ಅಸಂಖ್ಯ ಶಬ್ದಗಳ
ಅಳೆದು ತೂಗಿ ಅರಿಯುವ ಅನನ್ಯ
ಜ್ಞಾನಿ ಎಲ್ಲಿದ್ದಾನೆ?
ನಾನೂ ಅಷ್ಟೇ
ಯಾರಾದರೂ ಅರ್ಹರು
ಬಂದರೆ ಅವರವರ
ಪಾಲಿನದು ಅವರಿಗೆ ನೀಡಿ
ಮುಂದೆ ಸಾಗಲು ಕಾಯುತ್ತಲಿರುವೆ.
ಬುದ್ಧ ಬಸವ ಅಲ್ಲಮರ ಮಹಾ
ಸಂಪತ್ತಿನ ಕೇವಲ ಕಾವಲುಗಾರ
ನಾ...ನು...
----ಸಿದ್ದು ಯಾಪಲಪರವಿ
Thursday, March 17, 2016
Global Warming
ಇಂದಿನ ಜಾಗತಿಕ ತಾಪಮಾನವನ್ನು ನೋಡಿದರೆ ಭಯಾನಕವೆನಿಸುತ್ತದೆ.
ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟರ ಕೈಗೆ ಸಿಕ್ಕು ಪರಿಸರ ನಾಶವಾಗುತ್ತಲೇ ಇದೆ.
ಹಣ ಇದ್ದರೆ ಏನೆಲ್ಲಾ ಕೊಂಡುಕೊಳ್ಳಬಹುದು ಎಂಬುದು ಕೇವಲ ಭ್ರಮೆ !
ಎಷ್ಟೋ ಸಾವಿರ ಕೋಟಿ ಸುರಿದರೂ ಮನುಷ್ಯ ದಿಢಿರೆಂದು ನೀರನ್ನು , ಆಹಾರ ಪದಾರ್ಥಗಳನ್ನು ಸೃಷ್ಟಿಸಲಾರ ಎಂಬ ಸತ್ಯ ಗೊತ್ತಿದ್ದರೂ ಅವನ ಅನಾದರ , ಅಜ್ಞಾನಕ್ಕೆ ಕೊನೆಯಿಲ್ಲದಾಗಿದೆ.
ಪರಿಸರ ಇಲಾಖೆ ,ಲೆಕ್ಕವಿಲ್ಲದಷ್ಟು ಹುಟ್ಟಿಕೊಂಡಿರುವ ಸೇವಾಸಂಸ್ಥೆಗಳು ಕಣ್ಣಾ ಮುಚ್ಚಾಲೆ ಆಟದಲ್ಲಿವೆ ಇಲ್ಲಿಯೂ ಅತಿಯಾದ ಹಿಪೊಕ್ರಸಿ ತುಂಬಿ ತುಳುಕುತ್ತಲಿದೆ.
ನಮ್ಮ ಹೋರಾಟಗಳು , ನಾವು ಮಾಡುವ ಭಾಷಣಗಳು , ಮಾಧ್ಯಮಗಳ ಸಂವೇದನೆಯಿಲ್ಲದ ಸಂವಾದಗಳು , ಸಹಿಷ್ಣತೆ,ಅಸಹಿಷ್ಣತೆಯ ಕೆಸರಾಟ ಎಲ್ಲವೂ ಕೇವಲ ಕಾಳಜಿರಹಿತ ಹಿಪೊಕ್ರಸಿ !!
ಆದರೆ ಈ ನಾಟಕ ಎಷ್ಟು ದಿನ ?
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಗಾರರಿಕೆಯ ಜವಾಬ್ದಾರಿಯುತ ಅಬ್ಬರವಿಲ್ಲದ ಹೋರಾಟವಾಗಬೇಕು.
ಪ್ರತಿ ಬೇಸಿಗೆಯ ತಾಪಮಾನ ಹೆಚ್ಚಾದಾಗ ಈ ರೀತಿಯ ಸ್ಮಶಾನ ವೈರಾಗ್ಯ ಉಂಟಾಗದೇ ನಿರಂತರ ಪ್ರಜ್ಞೆಯಾಗಬೇಕು. ಧಾರ್ಮಿಕ ಮುಖಂಡರುಗಳು , ಸಾಮಾಜಿಕ ಸಂಘಟನೆಗಳು , ವಿದ್ಯಾಸಂಸ್ಥೆಗಳು ಪರಿಸರ ರಕ್ಷಣೆಗೆ ಮುಂದಾಗಬೇಕು. ವಿಶ್ವಮಾನವತೆ ಹಾಗೂ ಪರಿಸರ ರಕ್ಷಣೆ ನಮ್ಮ ಜವಾಬ್ದಾರಿಯಾದಾಗ ಎಲ್ಲಾ ಅಸಹಿಷ್ಣತೆ ಇಲ್ಲದಾಗುತ್ತದೆ.
ಈ ಸತ್ಯ ಎಲ್ಲರಿಗೂ ಗೊತ್ತಿದ್ದರೂ ತಮ್ಮದೇ ವಾದ ಗೆಲ್ಲಲಿ ಎಂಬ ಹಟಮಾರಿತನವಿದೆ.
ಎಡ-ಬಲ ವಿಚಾರವಾದಿಗಳ ಮೂಲ ಧೋರಣೆ ಪರಿಸರ ರಕ್ಷಣೆ ಹಾಗೂ ವಿಶ್ವಮಾನವತೆಯಾಗಬೇಕು ಇಲ್ಲದಿದ್ದರೆ ನಾವ್ಯಾರು ಇರುವುದಿಲ್ಲ ನಮ್ಮ ವಾದವೂ ಇರುವುದಿಲ್ಲ.
ಪ್ರಗತಿಪರ, ಮುಂದುವರೆದ ರಾಷ್ಟ್ರಗಳ ಪರಿಸರ ಪ್ರಜ್ಞೆ ಹಾಗೂ ಧೋರಣೆಯನ್ನೊಮ್ಮೆ ಗಮನಿಸಿ ಪಾಠ ಕಲಿಯೋಣ...
---ಸಿದ್ದು ಯಾಪಲಪರವಿ
Saturday, March 12, 2016
Journey of Life
Journey from 1965 to 2015
ನಮ್ಮನ್ನು ನಾವು ಆರಾಧಿಸುವ ಕಾಲ ಬಂತಲ್ಲ ಎಂಬ ವಿಷಾದವಿದ್ದರೂ ಒಳ್ಳೆಯ ಉದ್ದೇಶಕ್ಕಾಗಿ ಮುಖ ಪುಸ್ತಕವನ್ನು ಹಾಗೂ ವಾಟ್ಸ್ಆ್ಯಾಪ್
ಬಳಸಿಕೊಳ್ಳಬಹುದೆನಿಸಿದೆ. ನಮಗನಿಸಿದ್ದನ್ನು , ಯಾರೂ ಪ್ರಕಟಿಸದೇ ಇದ್ದುದನ್ನು ಇಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು.
ಇಲ್ಲಿಯೂ TRP ತನಗರಿವಿಲ್ಲದಂತೆ ಕೆಲಸ ಮಾಡುತ್ತದೆ. ಪ್ರಾಮಾಣಿಕವಾಗಿದ್ದರೆ ರಾಶಿ , ರಾಶಿ ಲೈಕುಗಳು,ಕಮೆಂಟುಗಳು ಜೊಳ್ಳಿದ್ದರೆ ಹಾರಿಸಿ ಬಿಡುತ್ತಾರೆ.
ಒಳ್ಳೆಯದು ಕೆಟ್ಟದ್ದು ಎಲ್ಲ ಕಡೆ ಇದೆ!
ಎಲ್ಲವೂ ಹೌದು !
ಎಲ್ಲಿಲ್ಲದ ಅಕ್ಕರೆ
ಅನುಭವಿಸಿದರೆ
ಎಲ್ಲವೂ ಸಕ್ಕರೆ
ನೀ ಬರೀ ನಕ್ಕರೆ.
ಬಾಲ್ಯದ ಕೃಷ್ಣ
ಲೀಲೆಗೆ ತಾಯಾಗಿ
ಸಾಂಗ್ಯತ್ಯಕ್ಕೆ ಸೋದರಿ
ಏರು ಯೌವ್ವನಕೆ ಗೆಳತಿ
ಪ್ರೌಢಿಮೆಗೆ ಸತಿ
ದೌರ್ಬಲ್ಯಗಳ
ಇತಿ-ಮಿತಿಗಳ
ಕೆಣಕಿ ರಮಿಸಿ
ಕಾಡುವ ಸಂಗತಿಗಳ
ಸಂಗಾತಿ.
ಅಕ್ಕರೆಯ ಅನುಭವದ
ಮಗಳು
ಅನುಭಾವದ ರಸದೌತಣ
ಉಣಬಡಿಸುವ ಮೊಮ್ಮಗಳು...
ಹೀಗೆ ಏನೆಲ್ಲ ಸವಿಸುಖದ
ಘಮಲು ನೀ ಕೇವಲ
ಹೆಣ್ಣಲ್ಲ.. ಗಂಡಿಗೆ ಕಾಡುವ
ಮಾಯೆಯೂ ಅಲ್ಲ.
ಜೀವನೋತ್ಸಾಹದ
ಜೀವಜಲ
ಎಂದೂ ಮಾಸದ
ಮಾನಸ ಸರೋವರ.
ಬೇಡಿದ್ದನ್ನು ಬೇಕಾದಾಗ
ತಿಳಿಸಿ ತಿಳುವಳಿಯ
ಅರವಳಿಕೆಯ ನೀಡಿ
ಹರಸುವ ಚೈತನ್ಯ.
ಪುರುಷ ಪ್ರಧಾನ
ವ್ಯವಸ್ಥೆಯಲಿ
ದುರ್ಬಲಳೆಂಬ
ಪಟ್ಟ ಹೊತ್ತ
ಪ್ರಬಲೆ , ಸಬಲೆ
ಶಕ್ತಿಶಾಲಿ...
ಬತ್ತದ ಚಿಲುಮೆ...
ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು
---ಸಿದ್ದು ಯಾಪಲಪರವಿ
ಕಳೆದು ಹೋಗಿದ್ದೇನೆ
ಮುಗ್ಧತೆ-ತವಕ--ತಲ್ಲಣ
ಗಳ ತೊಟ್ಟಿಲಲಿ
ತೂಗುಯ್ಯಾಲೆ
ಕಂಡ ಕನಸುಗಳಿಗೆ
ಲೆಕ್ಕವಿಲ್ಲ.
ಕಾಮಕುದುರೆಯನೇರಿ
ಪ್ರೇಮದಾಟದಲಿ
ಮೀಯುವ
ತವಕ
ಅಕ್ಷರ ಬಂಧನದ
ತಲ್ಲಣ
ಸೋಲು ನೋವು
ಹತಾಶೆಯ ಬೇಗುದಿ.
ಹಿಡಿದ ಹಾದಿಯ
ಅಂತ್ಯ ಅಯೋಮಯ
ಭಾವುಕ ಭ್ರಾಮಕ ಸುಳಿಯ
ಸೆಳೆತದ ಆಲಿಂಗನ.
ಸತ್ಯ - ಆದರ್ಶಗಳ
ಗಾಳದಿ ಸಿಕ್ಕ ಮೀನು.
ಕಂಡದ್ದೆಲ್ಲ ಕಸಿದು
ಹೊಸಕುವ ಹುಮ್ಮಸ್ಸು.
ತೋಳ ದಿಂಬಾಗಿಸಿ
ದಿಂಬಲಿ ಅವಳ
ಬಿಂಬವ ತಡಕಾಡಿದ
ಅನರ್ಥ ಬದುಕು.
ನಿಟ್ಟುಸಿರ ದಾಳಿ ಗೆ
ಏದುಸಿರಿ ಬೆವರಿಗೆ
ಥಟ್ಟನೆ ಜಾರಿ ಬಿದ್ದ
ಪುರುಷ ಹನಿ...
ಸಹಿಸುತ, ರಮಿಸುತ
ಸೋಲುತ ಗೆಲ್ಲುತ
ಅಗ್ನಿ ಪರೀಕ್ಷೆಗೊಳಗಾಗಿ
ಎಲ್ಲವನು ಎಲ್ಲರನು
ಸಹಿಸಿಕೊಂಡು
ನನ್ನನೇ ದಹಿಸಿಕೊಂಡು
ಪಾರಾದ ಏರು ಯೌವ್ವನ
ಈಗ ನೀ ಎಲ್ಲಿರುವೆ?!..
---ಸಿದ್ದು ಯಾಪಲಪರವಿ