Monday, October 29, 2018

ಬಿಸಿಲೂರಿನ ಕಥೆ

*ಬಿಸಿಲೂರಿನ ವ್ಯಥೆಯ ಕಥೆ*

ಇದನ್ನು ಹೇಳುವಾಗ ಇನ್ನಿಲ್ಲದ ಸಂಕಟ.
ಮನುಷ್ಯರ ಆಲೋಚನ ಕ್ರಮ ಹಾಗೂ ಸಾಮಾಜಿಕ ವ್ಯವಸ್ಥೆ ಬಗ್ಗೆ ಬೇಸರ.

ಕೆಲ ದಿನಗಳ ಹಿಂದೆ ಗೆಳೆಯರು ಮಾತನಾಡುತ್ತ ತಮ್ಮೂರಲಿ ನಡೆದ ಘಟನೆ ಹೇಳಿದರು , ನಿಮಗೂ ಹೇಳ್ತೇನೆ ಆದರೆ ನಾವು ಕೊಂಚ ಭಿನ್ನ ಆಯಾಮದಿಂದ , ಮುಕ್ತ ಮನಸಿನಿಂದ ಆಲೋಚಿಸೋಣ.

ಇಬ್ಬರಿಗೂ ಮದುವೆ ಆಗಿತ್ತು , ಒಳ್ಳೆಯ ಉದ್ಯೋಗ , ಆದರೂ ಪರಸ್ಪರ ಅನುರಾಗ ಉಂಟಾಯಿತು.

ಲೋಕದ ನಿಂದನೆಯಂತೆ ವಿವಾಹಯೇತರ ಸಂಬಂಧ ಅನ್ನೋಣ .

ಈ ಸುದ್ದಿ ಮೊದಲು ಎಲ್ಲಿಯೂ  ಹರಡಿರಲಿಲ್ಲ ಆದರೆ  ಒಮ್ಮೊಮ್ಮೆ ಹುಚ್ಚು ಮನಸಿನ ವಿಪರೀತ ಹುಚ್ಚಾಟಗಳು ಇಂತಹ ಅನಾಹುತ ಮಾಡಿಬಿಡುತ್ತವೆ .

ಇವರೂ ಅಂತಹ ಅನಾಹುತಕ್ಕೆ ಅವರೇ ಕೈ ಹಾಕಿದ್ದಾರೆ.

ತಮ್ಮ ಪ್ರೀತಿ-ಪ್ರೇಮ-ಪ್ರಣಯದ ದೃಶ್ಯಗಳನ್ನು ತಾವೇ shoot ಮಾಡಿ ನೋಡಿಕೊಂಡು ಸಂಭ್ರಮಿಸಿದ್ದರೆ ಸಾಕಾಗಿತ್ತು ಆದರೆ ಅದನ್ನು ಕಂಪ್ಯೂಟರ್ ಗೆ ಲೋಡ್ ಮಾಡಿದ್ದಾರೆ .

ದುರಾದೃಷ್ಟ ಕಂಪ್ಯೂಟರ್ ಕೆಟ್ಟು ಹೋಗಿದೆ , ಮೈಮರೆತ ಎಡವಟ್ಟು ಇನ್ನಿಲ್ಲದ ಅಪಾಯ ತಂದಿದೆ.

ರಿಪೇರಿ ಮಾಡುವವನ ವಿಕೃತ , ಅಮಾನವೀಯ ಮನಸ್ಸು ದುರಾಸೆಗೆ ದೂಡಿದೆ .

ಅವನು ಬ್ಲ್ಯಾಕ್ ಮೇಲ್ ಮಾಡಿ ದೊಡ್ಡ ಮೊತ್ತದ ಹಣಕ್ಕೆ ಪೀಡಿಸಿದ್ದಾನೆ.

ಹೊಂದಿಸುವುದು ವಿಳಂಬವಾದ ಕೂಡಲೇ ವಿಡಿಯೋ ವೈರಲ್ ಆಗಿ ಇಬ್ಬರ ಮಾನ , ಬದುಕು ಬಯಲಾಗಿದೆ.

ಸಮಾಜದ ನಿಂದನೆಗೆ ಪ್ರೇಮಿಗಳು ತಲ್ಲಣಿಸಿ ಬೆಂದು ಹೋಗಿದ್ದಾರೆ , ಸಂಸಾರದಲ್ಲಿ ಬಿರುಕು.

ನೊಂದ ವ್ಯಕ್ತಿ ತೀವ್ರ ಅನಾರೋಗ್ಯದಿಂದ ತೀರಿದ್ದು ಸಣ್ಣ ದುರಂತವಲ್ಲ.

ನಂತರ ತನ್ನ ಹೆಂಡತಿಯ ತಪ್ಪನ್ನು ಮನ್ನಿಸಿ ಮನೆಗೆ ಕರೆದುಕೊಂಡ ಗಂಡ ಆದರ್ಶ ಮೆರೆದಿದ್ದು ಅಭಿನಂದನೀಯ ಹಾಗೂ ಆದರಣೀಯ: ಆ ದಿವ್ಯ ಮನಸಿಗೆ ನೂರಾರು ನಮನಗಳು.

ಮಾನಸಿಕ ಒತ್ತಡದಿಂದ ತೀರಿ ಬದುಕು ಅಪೂರ್ಣಗೊಳಿಸಿದ ಗೆಳೆಯನಿಗಾಗಿ ವಿಷಾದಿಸೋಣ.

                              ***

ಮೇಲಿನ ಘಟನೆಯಲ್ಲಿ ಸಮಾಜ ಆ ಪ್ರೇಮಿಗಳ ಸಂಬಂಧವನ್ನು ಅಕ್ಷಮ್ಯ ಎಂದು ತೀರ್ಮಾನಿಸಿದ್ದು ಸರೀನಾ ?

ನಂತರ ಇದೇ ಖಾಸಗಿ ಪ್ರಕರಣ ಇಟ್ಟುಕೊಂಡು ಕೆಲಸದಿಂದ ತೆಗೆದದ್ದು ಮಾನವ ಹಕ್ಕಿನ ಉಲ್ಲಂಘನೆಯಲ್ಲವೆ  ?

ಸಮಾಜ ಅವರನ್ನು ಮಹಾ ಪಾಪಿಗಳು ಎಂದು ಆಡಿಕೊಂಡಿದ್ದು ಯಾವ ನ್ಯಾಯ  ?

ನೈತಿಕ ಬೆಂಬಲ ನೀಡಿ ಸಾಂತ್ವನದ ಮಾತುಗಳನ್ನು ಆಡಿದ್ದರೆ ಆ ವ್ಯಕ್ತಿ ಬದುಕುತ್ತಿರಲಿಲ್ಲವೆ ?

*ಇವೆಲ್ಲಕ್ಕಿಂತ ಮುಖ್ಯ ವಿಡಿಯೋ ಇಟ್ಟುಕೊಂಡು ಅವಮಾನಿಸಿದ ಕಂಪ್ಯೂಟರ್ ರಿಪೇರಿ ಮಾಡುವವ ಮುಖ್ಯ ಆರೋಪಿ* ಎಂದು ಯಾಕೆ ಪರಿಗಣಿಸಲಿಲ್ಲ ?

ಮತ್ತೊಬ್ಬರ ಖಾಸಗಿ ಸಂಗತಿಗಳು ಸರಿ ತಪ್ಪು ಎಂದು ನಿರ್ಣಯಿಸುವ ಅಧಿಕಾರ ನಮಗೆ ಕೊಟ್ಟವರು ಯಾರು ?

*ನಿಜವಾದ ಶಿಕ್ಷೆ ಆಗಬೇಕಾದದ್ದು ಅದನ್ನು ಹಬ್ಬಿಸಿದ ದೂರ್ತನಿಗೆ*

ಈ ನಿಟ್ಟಿನಲ್ಲಿ ಪ್ರಗತಿಪರ ಮನಸುಗಳು ಆಲೋಚನೆ ಮಾಡಿ ಅವನನ್ನು ಶಿಕ್ಷಿಸಬೇಕಿತ್ತು ಆದರೆ ಈ ಇಡೀ ಪ್ರಕರಣದಲ್ಲಿ ಮುಖ್ಯ ಆರೋಪಿ ಬಚಾವಾಗಿದ್ದು ವಿಪರ್ಯಾಸ.

                               ***

ಪ್ರೀತಿ-ಪ್ರೇಮ-ಪ್ರಣಯ , ಧರ್ಮ ಹಾಗೂ ಆಹಾರ ಪದ್ಧತಿ ವೈಯಕ್ತಿಕ ಅಭಿರುಚಿ. ಮಾನವನ ಹಕ್ಕು ಕೂಡಾ !

ಅಮೇರಿಕ ಹಾಗೂ ಇತರ ಮುಂದುವರೆದ ದೇಶಗಳ ಮಾದರಿಯಲ್ಲಿ *ಮಾನವ ಹಕ್ಕುಗಳ* ರಕ್ಷಣೆ ಗೊತ್ತಿದ್ದರೆ ಇಂತಹ ಅಪಾಯಗಳು ನಡೆಯುತ್ತಿರಲಿಲ್ಲ.

ನಮ್ಮ ಮನಸ್ಥಿತಿ ತುಂಬ ಬದಲಾಗಬೇಕಿದೆ.

ಮನುಷ್ಯ ಖಾಸಗಿ ಬದುಕಿನಲ್ಲಿ ತನಗೆ ಸರಿಕಂಡಂತೆ ಖುಷಿಯಿಂದ ಬದುಕುವ ವಾತಾವರಣ ರೂಪಿಸುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ .

                            ***

ಇಂತಹ ಘಟನೆಗಳು ನಮ್ಮ ಸುತ್ತಲೂ ನಡೆದಾಗ  ಅವಮಾನ ಮಾಡಿ ಅನುಕಂಪ ತೋರದೇ ಅನುಭೂತಿಯಿಂದ ( emphatically )
ನೋಡಬೇಕು.

ಇಂತ ತಪ್ಪು ನಮ್ಮಿಂದ  ಅಥವಾ ನಮ್ಮ ಬಂಧುಗಳಿಂದ ನಡೆದರೆ ನಮ್ಮ ಸ್ಥಿತಿ ಏನಾಗಬಹುದು ಎಂಬ ವಿವೇಚನೆಯಿಂದ  ಸಮರ್ಪಕ  ತೀರ್ಮಾನ ತೆಗೆದುಕೊಂಡು , ಮನುಷ್ಯರನ್ನು ಬದುಕಿಸುವ ಪುಣ್ಯದ ಕೆಲಸ ಮಾಡಬೇಕು.

*ನೈತಿಕತೆ , ಅನೈತಿಕತೆ ಎಂಬುದೊಂದು ಭ್ರಾಂತು*

ಈ ಭ್ರಮೆಯಿಂದ ಹೊರಬಂದು ಹೊಸ *ಮನುಷ್ಯರಾಗೋಣ, ಮಾನವರಾಗೋಣ*

( Joyful living in personal and professional life )

---ಸಿದ್ದು ಯಾಪಲಪರವಿ.

Sunday, October 28, 2018

ಜಗದ ಸುಖ

*ಜಗದ ಸುಖ ತಾಯಿ-ಮಗು*

ವಿಸ್ಮಯದ ದಿವ್ಯಾಘಾತ ಅಂಗಾಂಗಳ
ಸಂಗದಲಿ ಅನನ್ಯ ಭಿನ್ನ ಭಾವ

ನೆಚ್ಚಿನ ಪುರುಷನಿಗೆ ಒಡ್ಡುವ
ಅಂಗಾಂಗಳಲಿ
ಇನ್ನಿಲ್ಲದ ಕಾಮೋದ್ರೇಕದ
ಪರಮ ಸುಖ

ಹಿಂಡಿ ಹಿಪ್ಪೆಯಾದ ಮೃದು ಎದೆ
ಮೇಲೆ
ಹಿತಕರ ಹಿಂಸೆ
ಆದರೂ
ಮೈಮನಗಳ ಕೆರಳಿ ಅರಳಿ ಅಗಲುವ
ತೊಡೆಗಳ ಸಂಚಲನ ಸೀಳಿ ನುಗ್ಗುವ
ಪುರುಷೇಂದ್ರಿಯ ರಭಸದ
ಸಂಘರ್ಷದ ಪ್ರತಿಫಲ

ತಾಯಿ ಭಾಗ್ಯ

ಮಗುವಿನ ಮಿಲನದ
ಸುಖವೇ
ಭಿನ್ನ ವಿಭಿನ್ನ

ಕಾಮದ ಸುಳಿವು ಮಾಯ

ಮಗುವಿನ ಮೊಲೆ ಉಣಿಸುವ
ಭರದಲಿ ಇಲ್ಲ
ಪುರುಷನ ಕಾಮ ಬಿಂಬ

ಅಂಗ ಅದೇ
ಸಂಗ ಬೇರೆ
ನಿಷ್ಕಾಮ ಮಮತೆ

ತೊಡೆಯಲರಳಿದ ಕಮಲವಾದರೂ ಕಾಮಿಯಲ್ಲ
ವಾತ್ಸಲ್ಯದ ಅರಗಿಣಿ

ಹೆಣ್ಣೊಂದು.

ಸಿದ್ದು ಯಾಪಲಪರವಿ

ಮೌನ ಅನಿವಾರ್ಯ

*ಮೌನ ಅನಿವಾರ್ಯ: ಕಾಲನಿಗಾಗಿ ಕಾಯೋಣ*

ಸುತ್ತಲೂ ನಡೆಯುವ ಘಟನೆಗಳ ಕುರಿತು ಮಾತನಾಡಬೇಕೆನಿಸುತ್ತದೆ. ಆದರೆ ಮಾತನಾಡಲಾಗದು, ಮಾತನಾಡಬಾರದು ಕೂಡ!

ಲೈಕ್ ಮೈಂಡೆಡ್ ಸಂಗಾತಿಗಳು ಎಂದು ಯಾರನ್ನು ಕರೆಯಬೇಕು, ಯಾಕೆ ಕರೆಯಬೇಕೆಂಬ ಅಪನಂಬಿಕೆ.

ಪರಿಸ್ಥಿತಿ ಒತ್ತಡಕ್ಕನುಗುಣವಾಗಿ ಮತ್ತು ಒಮ್ಮೊಮ್ಮೆ ವಿವೇಚನೆಗೆ ಮಂಕು ಬಡಿದಾಗ ಅನ್ಯಾಯದ ವಿರುದ್ಧ ದನಿ ಎತ್ತಲಾಗದ ಅಸಹಾಯಕತೆ.

ಮನುಷ್ಯನ ಸ್ವಾರ್ಥ, ಅವಕಾಶವಾದಿ ನಿಲುವು ಮತ್ತು ಅರ್ಥವಾಗದ ಅರ್ಧಸತ್ಯ ನಮ್ಮನ್ನು ಕಟ್ಟಿ ಹಾಕಿ ಬಾಯಿ ಮುಚ್ಚಿಸಿಬಿಡುತ್ತವೆ.

ಕಳೆದ ವಾರದಿಂದ ಹೊಟ್ಟೆಯಲಿ ವಿಪರೀತ ಸಂಕಟ. ಕಾರಣ ಗೊತ್ತಿದೆಯಾದರೂ ಮನಸು ಅನ್ಯಾಯ‌ ಸಹಿಸುವ ಅಸಹಾಕತೆಯಿಂದಾಗಿ ರೋಸಿ ಕುದಿಯುತ್ತಲಿದೆ.

ಒಂದು ಸುಳ್ಳನ್ನ ನೂರಲ್ಲ ಸಾವಿರ ಸಲ ಹೇಳಿ ಸತ್ಯವಾಗಿಸುವ ಹರಾಮಖೋರರ ನಡೆಯನ್ನು ಬೆಂಬಲಿಸುವ ಜನರೂ  ಇರುತ್ತಾರಲ್ಲ.

ನಮ್ಮನ್ನು ನಂಬಿದ ವ್ಯಕ್ತಿಗಳಿಗೆ ನಾವು ಅವರು ಜೀವಂತ ನಮ್ಮ ಜೊತೆಗಿದ್ದಾಗ ಮೋಸ ಮಾಡುತ್ತೇವೆ.‌ ನಮ್ಮ ಮುಖವಾಡದ ಸೋಗಲಾಡಿ ಮಾತುಗಳಿಂದಾಗಿ ಅವರು ಮೋಸ ಹೋಗಿದ್ದಾರೆಂಬ ಸತ್ಯ ನಮಗೂ ಗೊತ್ತಿರುತ್ತದೆ.
ಆದ್ದರಿಂದ ತಪ್ಪು ಒಪ್ಪಿಕೊಳ್ಳದೇ ಮೋಸ ಮಾಡುತ್ತಲೇ ಹೋಗುತ್ತೇವೆ.

ಅವರು ನಮ್ಮ ಮೋಸವನರಿಯದೇ ಒಂದು ದಿನ ಹೋಗಿಯೇ ಬಿಡುತ್ತಾರೆ.
ಇದ್ದಾಗ ನಮ್ಮ ಮೋಸವನರಿಯದೇ ಹೋದವರು, ಹೋದ ಮೇಲೆ ಖಂಡಿತ ತಮಗಾದ ಮೋಸವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬುದು ಆಧ್ಯಾತ್ಮ ಹಾಗೂ ಆತ್ಮಾನುಸಂಧಾನದ ನಂಬಿಗೆ.

*ಮ್ಯಾಕಬೆತ್ ನಾಟಕದಲ್ಲಿ ರಾಜನನ್ನು ಕೊಂದ ಮ್ಯಾಕಬೆತ್ ಪಶ್ಚಾತ್ತಾಪದಲಿ ನರಳಿ ನರಳಿ ಸಾಯುತ್ತಾನೆ*.

ಸತ್ತ ಆತ್ಮ ತನಗಾದ ಮೋಸವನ್ನು ಅರ್ಥ ಮಾಡಿಕೊಂಡಿರುತ್ತದೆ. ಇದ್ದಾಗ ಅರಿಯದ ಸಂಗತಿಯನ್ನು ಹೋದ ಮೇಲೆ ಸಹಿಸಿಕೊಳ್ಳದ ಪ್ರೇತಾತ್ಮದ ಪ್ರತಿರೂಪವಾಗಿ, ಮನಸಾಕ್ಷಿಯ ಮೂಲಕ ಕಾಡುತ್ತದೆ ಎಂಬ ನಂಬಿಕೆ.
ನಂತರ ಪಾಪಿ ಪಶ್ಚಾತ್ತಾಪದಿಂದ ಕೊನೆಯಾಗುವುದನ್ನು ಮಹಾಕವಿ ವಿಲಿಯಂ ಶೇಕ್ಸ್‌ಪಿಯರ್ Poetic Justice ಎಂದು ವ್ಯಾಖ್ಯಾನಿಸುತ್ತಾನೆ.

ನನ್ನ ಹಾಗೆ ಸಾಹಿತ್ಯ ಓದಿಕೊಂಡ ಮಾಧ್ಯಮದ ಗೆಳೆಯನ ಮುಂದೆ ನನ್ನ ಅಳಲು ತೋಡಿಕೊಂಡೆ.

“ ಅಯ್ಯೋ ಬಿಡಿ ಈಗ *ಪೊಯಟಿಕ್ ಜಸ್ಟಿಸ್* ಕೇವಲ ಕಾವ್ಯದಲ್ಲಿ ಉಳಿದುಕೊಂಡಿದೆ, ಈಗ ಏನಿದ್ದರೂ ಪಾಪಿಗಳೇ ಬದುಕೋದು, ಇಂದು ಅಷ್ಟು ಬೇಗ ಕೊನೆಗೊಳ್ಳುವ ಕಾಲ ಹೋಯಿತು” ಅಂದು ನಕ್ಕಾಗ ಪೆಚ್ಚಾಗಿ ಹೋದೆ.

ವಾಸ್ತವವಾಗಿ ಅವಕಾಶವಾದಿಗಳು ಯೋಗ್ಯತೆ ಇರದಿದ್ದರೂ ತಮ್ಮ ಮುಖವಾಡದ ಮೂಲಕ ಮೇಲೇರುತ್ತಲೇ ಹೊಗುತ್ತಾರೆ. ಆದರ್ಶ ಹಾಗೂ ಸಿದ್ಧಾಂತದ ಮುಖವಾಡ  ಇಟ್ಟುಕೊಂಡು ಜನರನ್ನು ನಂಬಿಸಲು ಯಶಸ್ವಿಯಾಗುತ್ತಾರೆ.

ಅವನು ಹೇಳುವುದು ಶುದ್ಧ ಸುಳ್ಳು ಎಂದು ಗೊತ್ತಿದ್ದರೂ ಸತ್ಯದಂತೆ ಕೇಳಿಸಿಕೊಂಡು ಅವನಷ್ಟೇ ಅವಕಾಶವಾದಿಗಳು ಸುಮ್ಮನಾಗಿಬಿಡುತ್ತಾರೆ.

ಇಂತಹ ನೂರಾರು ಘಟನೆಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಕಾಲನ ಪ್ರವಾಹದಲ್ಲಿ ಕೊಚ್ಚಿ ಹೋದವರ ಕತೆ ಗೊತ್ತಿದ್ದರೂ ಸಹನೆ ಕಳೆದುಕೊಂಡು ಅಸಹಾಯಕರಾಗುವುದು ಯಾಕೋ ನಾ ಕಾಣೆ.

ಸತ್ಯಕ್ಕೆ ಹಲವು ಮುಖಗಳ ವಿಶ್ಲೇಷಣೆಯಿದ್ದರೂ, ಸತ್ಯಕ್ಕೆ ಒಂದೇ ಮುಖವಿರುತ್ತದೆ. ಅದು ಕಾಣುವ ತನಕ ಅಷ್ಟೇ ಸಹನೆಯಿಂದ ಕಾಯಬೇಕು.

ಅನೇಕ ಸಂದರ್ಭಗಳಲ್ಲಿ “ಕಾಲನಿಗಾಗಿ ಕಾಯಬೇಕು, ಅದು ಸತ್ಯವನ್ನು ಮಾತ್ರ ಪ್ರತಿಪಾದಿಸುತ್ತದೆ” ಎಂಬ ಗುರುಗಳ ಮಾತು ಅವರ ಅನುಪಸ್ಥಿತಿಯಲ್ಲಿಯೂ ರಿಂಗಣಿಸುತ್ತಿರುವಾಗ ಅದೇನೋ ಗುಂಗು.

ನಿಲ್ಲದ ಸತ್ಯಾನ್ವೇಷಣೆಯ ಹುಡುಕಾಟ.
ಪೊಯಟಿಕ್ ಜಸ್ಟಿಸ್ ಕಾವ್ಯದಲ್ಲಷ್ಟೇ ಅಲ್ಲ ಬದುಕಿನಲ್ಲಿ ಬದುಕಿದೆಯೆಂಬ ಭರವಸೆ.

ಆ ಭರವಸೆ ಕಳೆದುಕೊಳ್ಳುವ ಸಿನಿಕತನ ಬೇಡ. ‌
ಬದುಕೆಂಬ ಕಾದಂಬರಿಯಲ್ಲಿ ಕೊನೇ ಅಧ್ಯಾಯದವರೆಗೆ ಕಾಯ್ದು ನೋಡಬೇಕು.

ಮಧ್ಯದ ಪುಟಗಳಲ್ಲಿ ಸತ್ಯದ ಹುಡುಕಾಟ ಸಲ್ಲದು.
ಕೊನೇ ಪುಟದ ಕೊನೆಯಾಟಕೆ ಕಾತುರದಿಂದ ಕಾಯುತ ಮೌನವಾಗಿ ಧೇನಿಸುವೆ.
 
  *ಸಿದ್ದು ಯಾಪಲಪರವಿ*

Friday, October 26, 2018

ಇಂದು ರಾತ್ರಿ

ಇಂದು ರಾತ್ರಿ ಎಂದಿನಂತೆ

ಇಂದು ಈ ರಾತ್ರಿಯೂ ಎಂದಿನಂತೆ ಇದೆ
ಅತ್ತ ಭಯಾನಕವೂ ಅಲ್ಲದ ಸುಖವೂ
ಇಲ್ಲದ ಏನೋ ಹುಡುಕಾಟದ ಹುಡುಕಾಟಿಕೆ

ಕಳ್ಳರು ಎಚ್ಚರಾಗಿದ್ದಾರೆ ಮಲಗುವದ
ಕಾಯುತ್ತ
ಸಿರಿವಂತರೂ ಎಚ್ಚರಾಗಿದ್ದಾರೆ ಕಳ್ಳರ
ಹಾಗೆ ಮತ್ತಿಷ್ಟು ಸಿರಿವಂತರಾಗುವ ಹೊಂಚು
ಹಾಕುತ್ತ

ಎಲ್ಲರೂ ಕಳ್ಳ -ಮಳ್ಳರು ಈ ರಾತ್ರಿಯ
ಕಣ್ಣೊಳಗೆ.

ನಶೆ ಏರಿಸಿಕೊಂಡವರು ಏನನ್ನೋ
ಬಡಬಡಿಸುತ್ತ ನಿಚ್ಚಳಾಗಿದ್ದೇವೆ ಎಂದು
ಸಾಬೀತು ಪಡಿಸಲು ಹವಣಿಸುತ್ತಾರೆ

ಹರೆಯದವರು ಬೆದೆಗೆ ಬಂದ ಗೂಳಿಗಳ
ಹಾಗೆ ಕಾದಾಡಿ ಕಾಮಿಸುವ ಜಪ
ಮಾಡುತ್ತಾರೆ

ಇನ್ನು ಕೆಲವರಿಗೆ ಉದ್ರೇಕಗೊಳ್ಳದಿರುವ
ಆತಂಕದ ಅವಮಾನದಲಿ ಸುಖಿಸಿ
ಇನ್ನೂ ಇದೆ ಎಂದು ಸಾಧಿಸುವ ಧಾವಂತ

ವಿರಹ ವೇದನೆಗೆ ನೂರಾರು ದಾಳಿಗಳು
ಮೈಮನಗಳ ಸುಳಿಯಲಿ ಲೆಕ್ಕವಿಲ್ಲದಷ್ಟು
ತಿರುಗುಣಿಗಳು
ಕಳಕೊಂಡವರು ಹೇಗಾದರೂ ಮಾಡಿ
ಪಡೆದೇನು ಎಂಬ ಭ್ರಮಾನಂದ

ತಿಣುಕಾಡಿ ಕೊಸರಾಡಿದರೂ ಎಚ್ಚರಗೊಳ್ಳದ
ಪುರುಷತ್ವ
ಆದರೂ ಎಲ್ಲವೂ ಸರಿ ಇದೆ ಸ್ವಲ್ಪ ಎಡವಟ್ಟು
ಎಂಬ ಸಮಜಾಯಿಷಿ

ಪ್ರೀತಿ-ಪ್ರೇಮ-ಪ್ರಣಯಗಳ ನೂರು
ಸುತ್ತಿನ ನಿಲ್ಲದ ಇನ್ನಿಲ್ಲದ ಪಯಣ

ಹಗಲುಗನಸಿನ ಸವಾರಿಯಲಿ ದಣಿದ
ದೇಹ ಜಪ್ಪನೆ ಮಲಗಿದರೂ ಬಿಡದ
ಕನಸುಗಳು

ಮುಲುಕಾಟ ಕುಲುಕಾಟದ ಕಲರವಕೆ
ನೀರವ ಮೌನದಬ್ಬರ
ನಲುಗುವ ದೇಹ ಹಿಂಡಿ ಹಿಪ್ಪಿಯಾದರೂ
ಸುಖದ ಮೇಲಾಟ

ಹಗಲಿನಲಿ ಊಹಿಸಲಾಗದ
ನಿಲುಕಲಾಗದ ಸಂಗತಿಗಳ ಗಾಳಕೆ
ಬೀಳಿಸುವ ಹರಸಾಹಸ

ಎಂದೆಂದೂ ನಿಲುಕಲಾಗದ ಆಗಸದಲಿ
ತೇಲಾಡುವ
ನಕ್ಷತ್ರಗಳ ಗುಣಿಸಿ ಎಣಿಸಿ ಗುಡ್ಡೆ ಹಾಕುವ
ಮಾಯಾಲೋಕ

ಹಗಲು ಸನ್ಯಾಸದ ವೇಶಗಳು
ವೇಗದಲಿ ಕಳೆದು ಕಾದಾಡಲು
ಕಾದಿರುವ ಸವಿ ಗಳಿಗೆ
ಒಮ್ಮೆ ಮೈ ಹಗುರಾಗಿಸಿ
ತೇಲಾಡುವ ಮಹದಾನಂದ

ಮುಖಕ್ಕೆ ಅಂಟಿದ ಮುಖವಾಡಗಳು
ರಪ ರಪನೆ ಉದುರಿ ಮುಖದರ್ಶನದ
ಲಿಲಾವುಗಳ ಲೀಲೆ
ಕದ್ದ ಮಾಲಿಗೆ ಲೆಕ್ಕ ಕೊಡುವ
ನಾಟಕ

ಅಶ್ಲೀಲ ಲೋಕದ ಝಗಮಗ
ಝೇಂಕಾರ
ನಿರ್ಲಜ್ಯ ಲೋಕದ
ರಂಭೆ-ಊರ್ವಶಿಯರೊಂದಿಗೆ
ಬೆತ್ತಲೆ ಕುಣಿದು ಬಯಲಾಗುವ
ಬಯಕೆಗೆ ಶುಭ ಮುಹೂರ್ತ

ಇಂದು ರಾತ್ರಿ ಎಂದಿನಂತೆ
ಒಬ್ಬೊಬ್ಬರಿಗೆ ಒಂದೊಂದು
ಲೋಕದಂತೆ ಇದು ನಿತ್ಯವೂ
ನಿಲ್ಲದ ಜಾತ್ರೆ
ಮುಗಿಯುವವರೆಗೆ ಈ
ಜೀವನ ಯಾತ್ರೆ.

----ಸಿದ್ದು ಯಾಪಲಪರವಿ

ಗರತಿಯ ಅಳಲು

*ಗರತಿಯ ಅಳಲು*

ನನ್ನವ್ವ ತನ್ನ ದೇಸೀಯ ಸೊಗಡಲಿ
ಬೈದು ಹೇಳಿದ್ದು ಇನ್ನೂ ಹಸಿರು
*ಗರತೀನ ತಡುವ ಬ್ಯಾಡಲೋ ಆಕಿ
ಉಸರು ಚೊಲೋ ಅಲ್ಲ*

ಯಾರೀ ಗರತಿ ?

ಗಾಣದ ಎತ್ತಿನಂಗ ಹಗಲು-ರಾತ್ರಿ
ಬದುಕ ತೇದು ನೋವ
ನುಂಗಿ  ಹೊಟ್ಟಿ ಕಟ್ಟಿ

ಅರೆನಿದ್ರೆಯ ಮಂಪರಿನಲಿ
ಮೈಯನರಳಿಸಿ
ಕೆರಳದೇ
ಸುಖಿಸದೇ ಬಸಿರ ಕಟ್ಟಿ
ಹಡೆದ ಸದ್ದಿಗೆ ಬೆದರಿದ
ಹೊರಸು

ನಾಲ್ಕಾರು ಮಕ್ಕಳ ಉಣಿಸಿ
ಬೆಳೆಸುವ ಧಾವಂತದಿ
ಅವಳೇ ಮಾಯ

ಜೋತು ಬಿದ್ದ ದೇಹವ ಎತ್ತಿ ಕಟ್ಟಿ
ಗಂಡನೆಂಬ *ಮಹಾ ಗಂಡನ*
ಪುಂಡಾಟ ಸಹಿಸಿ ಬೆಚ್ಚಿ
ಬಸವಳಿದರೂ *ತಾಳಿಗೆ* ಶರಣು

ಮಕ್ಕಳೆಂಬ ಭೂಪರು ಹೆಂಡತಿಯ
ಸೆರಗ ಹಿಡಿದು
' ಅವ್ವ ನಿಂದು ಸರಿ ಅಲ್ಲ '
ಅಂದಾಗ ಹೌಹಾರಿದ
ನೆಲಮುಗಿಲು

'ನೀನರ ಚೊಲೋ ಇರು '
ಅನ್ನುವ ಹರಕೆಯಲಿ ಕರಗಿ
ನೀರಾಗಿ ಹರಿಯುತ್ತ ಹರಿಯುತ್ತ
ಬೆನ್ನು ಬಾಗಿದ ಭಾರಕೆ ಕುಸಿದ
ಗರತಿಗೆ ಭೂತಾಯಿ 
ನೆಲದಾಸರೆ.

---ಸಿದ್ದು ಯಾಪಲಪರವಿ

ಇಂದು ರಾತ್ರಿ

ಇಂದು ರಾತ್ರಿ ಎಂದಿನಂತೆ

ಇಂದು ಈ ರಾತ್ರಿಯೂ ಎಂದಿನಂತೆ ಇದೆ
ಅತ್ತ ಭಯಾನಕವೂ ಅಲ್ಲದ ಸುಖವೂ
ಇಲ್ಲದ ಏನೋ ಹುಡುಕಾಟದ ಹುಡುಕಾಟಿಕೆ

ಕಳ್ಳರು ಎಚ್ಚರಾಗಿದ್ದಾರೆ ಮಲಗುವದ
ಕಾಯುತ್ತ
ಸಿರಿವಂತರೂ ಎಚ್ಚರಾಗಿದ್ದಾರೆ ಕಳ್ಳರ
ಹಾಗೆ ಮತ್ತಿಷ್ಟು ಸಿರಿವಂತರಾಗುವ ಹೊಂಚು
ಹಾಕುತ್ತ

ಎಲ್ಲರೂ ಕಳ್ಳ -ಮಳ್ಳರು ಈ ರಾತ್ರಿಯ
ಕಣ್ಣೊಳಗೆ.

ನಶೆ ಏರಿಸಿಕೊಂಡವರು ಏನನ್ನೋ
ಬಡಬಡಿಸುತ್ತ ನಿಚ್ಚಳಾಗಿದ್ದೇವೆ ಎಂದು
ಸಾಬೀತು ಪಡಿಸಲು ಹವಣಿಸುತ್ತಾರೆ

ಹರೆಯದವರು ಬೆದೆಗೆ ಬಂದ ಗೂಳಿಗಳ
ಹಾಗೆ ಕಾದಾಡಿ ಕಾಮಿಸುವ ಜಪ
ಮಾಡುತ್ತಾರೆ

ಇನ್ನು ಕೆಲವರಿಗೆ ಉದ್ರೇಕಗೊಳ್ಳದಿರುವ
ಆತಂಕದ ಅವಮಾನದಲಿ ಸುಖಿಸಿ
ಇನ್ನೂ ಇದೆ ಎಂದು ಸಾಧಿಸುವ ಧಾವಂತ

ವಿರಹ ವೇದನೆಗೆ ನೂರಾರು ದಾಳಿಗಳು
ಮೈಮನಗಳ ಸುಳಿಯಲಿ ಲೆಕ್ಕವಿಲ್ಲದಷ್ಟು
ತಿರುಗುಣಿಗಳು
ಕಳಕೊಂಡವರು ಹೇಗಾದರೂ ಮಾಡಿ
ಪಡೆದೇನು ಎಂಬ ಭ್ರಮಾನಂದ

ತಿಣುಕಾಡಿ ಕೊಸರಾಡಿದರೂ ಎಚ್ಚರಗೊಳ್ಳದ
ಪುರುಷತ್ವ
ಆದರೂ ಎಲ್ಲವೂ ಸರಿ ಇದೆ ಸ್ವಲ್ಪ ಎಡವಟ್ಟು
ಎಂಬ ಸಮಜಾಯಿಷಿ

ಪ್ರೀತಿ-ಪ್ರೇಮ-ಪ್ರಣಯಗಳ ನೂರು
ಸುತ್ತಿನ ನಿಲ್ಲದ ಇನ್ನಿಲ್ಲದ ಪಯಣ

ಹಗಲುಗನಸಿನ ಸವಾರಿಯಲಿ ದಣಿದ
ದೇಹ ಜಪ್ಪನೆ ಮಲಗಿದರೂ ಬಿಡದ
ಕನಸುಗಳು

ಮುಲುಕಾಟ ಕುಲುಕಾಟದ ಕಲರವಕೆ
ನೀರವ ಮೌನದಬ್ಬರ
ನಲುಗುವ ದೇಹ ಹಿಂಡಿ ಹಿಪ್ಪಿಯಾದರೂ
ಸುಖದ ಮೇಲಾಟ

ಹಗಲಿನಲಿ ಊಹಿಸಲಾಗದ
ನಿಲುಕಲಾಗದ ಸಂಗತಿಗಳ ಗಾಳಕೆ
ಬೀಳಿಸುವ ಹರಸಾಹಸ

ಎಂದೆಂದೂ ನಿಲುಕಲಾಗದ ಆಗಸದಲಿ
ತೇಲಾಡುವ
ನಕ್ಷತ್ರಗಳ ಗುಣಿಸಿ ಎಣಿಸಿ ಗುಡ್ಡೆ ಹಾಕುವ
ಮಾಯಾಲೋಕ

ಹಗಲು ಸನ್ಯಾಸದ ವೇಶಗಳು
ವೇಗದಲಿ ಕಳೆದು ಕಾದಾಡಲು
ಕಾದಿರುವ ಸವಿ ಗಳಿಗೆ
ಒಮ್ಮೆ ಮೈ ಹಗುರಾಗಿಸಿ
ತೇಲಾಡುವ ಮಹದಾನಂದ

ಮುಖಕ್ಕೆ ಅಂಟಿದ ಮುಖವಾಡಗಳು
ರಪ ರಪನೆ ಉದುರಿ ಮುಖದರ್ಶನದ
ಲಿಲಾವುಗಳ ಲೀಲೆ
ಕದ್ದ ಮಾಲಿಗೆ ಲೆಕ್ಕ ಕೊಡುವ
ನಾಟಕ

ಅಶ್ಲೀಲ ಲೋಕದ ಝಗಮಗ
ಝೇಂಕಾರ
ನಿರ್ಲಜ್ಯ ಲೋಕದ
ರಂಭೆ-ಊರ್ವಶಿಯರೊಂದಿಗೆ
ಬೆತ್ತಲೆ ಕುಣಿದು ಬಯಲಾಗುವ
ಬಯಕೆಗೆ ಶುಭ ಮುಹೂರ್ತ

ಇಂದು ರಾತ್ರಿ ಎಂದಿನಂತೆ
ಒಬ್ಬೊಬ್ಬರಿಗೆ ಒಂದೊಂದು
ಲೋಕದಂತೆ ಇದು ನಿತ್ಯವೂ
ನಿಲ್ಲದ ಜಾತ್ರೆ
ಮುಗಿಯುವವರೆಗೆ ಈ
ಜೀವನ ಯಾತ್ರೆ.

----ಸಿದ್ದು ಯಾಪಲಪರವಿ

Wednesday, October 24, 2018

ಅಂತರ ಅನಿವಾರ್ಯ

*ರಾಜಕಾರಣದ ಶಕ್ತಿ ಕೇಂದ್ರಗಳಿಂದ ಅಂತರ ಅನಿವಾರ್ಯ*

ವೈಯಕ್ತಿಕ ಸ್ನೇಹವಿದ್ದರೂ ವಿಮರ್ಶಿಸುವ ಪ್ರಸಂಗ ಬಂದಾಗ ಕಟುವಾದ ಮಾತುಗಳಿಂದ ಬರೆಯುವ ತಾಕತ್ತು ಹೊಂದಿದ್ದ ಲಂಕೇಶ್ ಸದಾ ರಾಜಕಾರಣಿಗಳಿಂದ ಆ ಅಂತರ ಕಾಪಾಡಿಕೊಂಡಿದ್ದರು.

ಅದು ಅವರ ನೈತಿಕ ಶಕ್ತಿಯಾಗಿತ್ತು ಕೂಡ.
ಇತ್ತೀಚಿನ ನನ್ನ ಪ್ರತಿಕ್ರಿಯೆ ಗಮನಿಸಿದ ಹಿರಿಯ ಪ್ರಾಧ್ಯಾಪಕ, ಕಿರುತೆರೆ ಕಾರ್ಯಕ್ರಮಗಳ ಮೂಲಕ ಹೆಸರು ಮಾಡಿದ ಹಿತೈಷಿಗಳು ಈ ಮಾತನ್ನು ನನಗೆ ಮತ್ತೆ  ನೆನಪಿಸಿಕೊಟ್ಟರು.

ಲಿಂಗಾಯತ ಧರ್ಮದ ಕುರಿತ ಪ್ರತಿಕ್ರಿಯೆ ಬರೆಯುವಾಗ ಸಾಂದರ್ಭಿಕವಾಗಿ ಮಾಜಿ ಮುಖ್ಯಮಂತ್ರಿಗಳನ್ನು ಹೊಗಳಿದ್ದು ಅವರಿಗೆ ಸರಿ ಅನಿಸಿಲ್ಲ.

ಒಬ್ಬ ಬರಹಗಾರ ಅನವಶ್ಯಕವಾಗಿ ರಾಜಕಾರಣಿಗಳನ್ನು ಹೊಗಳಿ ಕ್ಲೀನ್ ಚಿಟ್ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ.

“ಇಂದಿನ ಪ್ರತಿಯೊಬ್ಬ ರಾಜಕಾರಣಿ ಏನೇ ಮಾಡಿದರು ರಾಜಕೀಯ ಲಾಭದ ಲೆಕ್ಕಾಚಾರ ಮುಖ್ಯವಾಗಿರುತ್ತದೆ.
ಕೇವಲ ಸೈದ್ಧಾಂತಿಕ ಕಾರಣಕ್ಕಾಗಿ ಬೆಂಬಲಕ್ಕೆ ಬರುವುದಿಲ್ಲ “
ಎಂಬ ಅವರ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿದೆ, ನನಗೆ ಆ ಎಚ್ಚರಿಕೆಯೂ ಇದೆ.

ಸಾಂದರ್ಭಿಕವಾಗಿ ಇನ್ನೊಬ್ಬ ರಾಜಕಾರಣಿಗೆ ಹೋಲಿಸುವ ಭರದಲಿ ನನ್ನಿಂದ ತಪ್ಪಾಯಿತು ಎಂದು ಕ್ಷಮೆಯಾಚಿಸಿದೆ.

ನಮ್ಮ ಸಿದ್ಧಾಂತಗಳನ್ನು ಗೌರವಿಸಿ ಬೆಂಬಲಿಸುವ ಪಕ್ಷಕ್ಕೆ ಮತ ನೀಡಿ ಎಂದು ಹೇಳಿಕೆ ಕೊಡುವದು, ಅವರ ಪರ ಬರಹಗಾರ ನಿಲ್ಲುವದಕ್ಕೆ ನನ್ನ ವಿರೋಧವಿದೆ.

ಸಂವಿಧಾನಕ್ಕೆ ಗೌರವ ನೀಡುವ ಕಾರಣದಿಂದ ಮತ ಚಲಾಯಿಸಿ ಕರ್ತವ್ಯ ಮೆರೆಯಬೇಕು. ರಾಜಕಾರಣದ ನಿಲುವು ಸಾರ್ವತ್ರಿಕ ಆಗಬಾರದೆಂಬುದನ್ನು ನಾನು ಗೌರವಿಸುತ್ತೇನೆ.

*ನಮ್ಮವರ‌್ಯಾರೋ ಸ್ಪರ್ಧಿಸಿದಾಗ ಸಿದ್ಧಾಂತಗಳ ಮರೆತು ಮತ ಹಾಕಿದ ಆತ್ಮವಂಚನೆ ನಮ್ಮ ಒಡಲೊಳು ಹೊತ್ತಿ ಉರಿಯುವುದು ಅಷ್ಟೇ ಸತ್ಯ*.

ಆದರದು ಬರಹದ ಮೂಲಕ ದಾಖಲಾಗಿ ತನ್ನ ಘನತೆ ಕಳೆದುಕೊಳ್ಳಬಾರದು.

ನಿರಂತರ ಬರೆಯುವ ಭರದಲ್ಲಿ, ಸೈದ್ಧಾಂತಿಕವಾಗಿ ಯಾರಾದರು ನಮ್ಮನ್ನು ಬೆಂಬಲಿಸುವ ನಾಟಕವಾಡಿದಾಗ ನಾವು ಮೈಮರೆತು ಪುಳಕಗೊಳ್ಳುವದು ಸಹಜ.

ಒಮ್ಮೊಮ್ಮೆ ವೇದಿಕೆ ಮೇಲಿದ್ದಾಗ ಸಭಾ ಗೌರವ ಕಾಪಾಡಲು ಹೊಗಳುವ ಅಪಾಯ ನಮ್ಮ ಪಾಲಿಗಿರುತ್ತದೆ. ಅದು ಅನಿವಾರ್ಯದ ದಾಕ್ಷಿಣ್ಯ.

ಆದರೆ ಬರೆಯುವಾಗ ಲೇಖಕನಿಗೆ ಇರಬೇಕಾದ ನಿಷ್ಟುರತೆಯನ್ನು ನೆನಪಿಸಿ ಎಚ್ಚರಿಸಿದ ಹಿರಿಯರ ಔದಾರ್ಯಕ್ಕೆ ಋಣಿಯಾಗಿದ್ದೇನೆ.

*ಜನತಾ ಪರಿವಾರದ ಜೆ.ಎಚ್. ಪಟೇಲ್, ಎಂ.ಪಿ.ಪ್ರಕಾಶ, ಬಾಪು ಹೆದ್ದೂರಶೆಟ್ಟಿ ಹಾಗೂ ಇತರ ಕೆಲವರ ಸಂಪರ್ಕ ರಾಜಕಾರಣದ ಸೆಳೆತ ಹೆಚ್ಚಿಸಿದ್ದು ನಿಜ*.

ಆದರೆ ವರ್ತಮಾನದ ರಾಜಕಾರಣಕೀಗ ಯಾವುದೇ ಸಿದ್ಧಾಂತಗಳಿಲ್ಲ. ಬರೀ ಚುನಾವಣಾ ರಾಜಕಾರಣದ ಅಧಿಕಾರದ ಹಂಬಲ.

ಇಲ್ಲಿ ಪ್ರಾಮಾಣಿಕತೆ, ಸಿದ್ಧಾಂತಗಳು ವೇದಿಕೆಗಷ್ಟೇ ಸೀಮಿತ. ಯಾವುದೇ ಕಾರಣಕ್ಕೂ ಅವರ ಮಾತುಗಳನ್ನು ನಂಬಬಾರದ ಸ್ಥಿತಿ. ಎರಡು ದಶಕಗಳ ರಾಜಕೀಯ ವಾತಾವರಣದಲ್ಲಿ ಬರೀ ಜಾತಿ, ಹಣ ಹಾಗೂ ತೋಳ್ಬಲಕ್ಕೆ ಪ್ರಾಧಾನ್ಯತೆ.

ಈ ಅರಿವಿದ್ದರೂ ಸಾಂದರ್ಭಿಕವಾಗಿ ನಾನು ಅಧಿಕಾರಸ್ಥರ ಪರ ಬರೆದದ್ದಕ್ಕೆ ಕ್ಷಮೆ ಕೋರುತ್ತೇನೆ.

ನನ್ನ ನಿರಂತರ ಬರಹದ ಮೇಲಿನ ಪ್ರೀತಿ, ಅಭಿಮಾನ ಇಟ್ಟುಕೊಂಡ ಸಹೃದಯ ಮನಸುಗಳ ಸಲಹೆಗಳನ್ನು ಗಂಭೀರವಾಗಿ ಸ್ವೀಕರಿಸುತ್ತೇನೆ.

*ಸಿದ್ದು ಯಾಪಲಪರವಿ*‌

Monday, October 22, 2018

ಜಿನ್ನಾಗೆ ಹೋಲಿಸಲಾಗದು

*ಪ್ರತಿಕ್ರಿಯೆ*

*ಲಿಂಗಾಯತ ಧರ್ಮ ಜಿನ್ನಾ ವಿಭಜನೆಗೆ ಹೋಲಿಸಲಾಗದು*

ನಾಡಿನ ಹಿರಿಯ ಚಿಂತಕರು, ಲಂಕೇಶ್ ಅವರ ಒಡನಾಡಿಗಳು ಆದ ಪ್ರೊ.ರವೀಂದ್ರ ರೇಷ್ಮೆ ಅವರು ತಮ್ಮ ಕ್ರಿಯಾಲೋಪ ಅಂಕಣದಲ್ಲಿ ಸಣ್ಣ ಲೋಪವಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಬರೆಯುವಾಗ ಅಧಿಕಾರಿ ಡಾ.ಎಸ್.ಎಂ.ಜಾಮದಾರ ಅವರನ್ನು ಖಳನಾಯಕರಂತೆ, ಸಚಿವರಾದ ಡಿ.ಕೆ.ಶಿವಕುಮಾರ ಅವರನ್ನು ಮಹಾನ್ ಚಿಂತಕರಂತೆ ಚಿತ್ರಿಸಿದ್ದಾರೆ‌.

ಇಡೀ ಲೇಖನವನ್ನು ಗಮನಿಸಿದಾಗ ಲಿಂಗಾಯತ ಧರ್ಮದ ಕುರಿತು ಅವರಿಗಿರಬಹುದಾದ ಅಸ್ಪಷ್ಟತೆ ಸ್ಪಷ್ಟವಾಗುತ್ತದೆ.
ಯಾಕೆಂದರೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವನ್ನು *ಧರ್ಮ ವಿಭಜನೆ* ಎಂದು ಪದೇ ಪದೇ ಉಲ್ಲೇಖಿಸುತ್ತಾರೆ.

ಲಿಂಗಾಯತ ಹಾಗೂ ವೀರಶೈವ ಒಂದೇ ಅಂದುಕೊಂಡರೂ, ಹಿಂದು ಧರ್ಮ ಅಲ್ಲ ಎಂಬ ವಾದವನ್ನಾದರು ಒಪ್ಪಿಕೊಳ್ಳಬೇಕು.

ಈ ವಿಭಜನೆ ಇಂದಿನ ಆಲೋಚನೆಯಲ್ಲ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪವೆಂಬ ಸಂಸತ್ತಿನಲ್ಲಿ ಜಾರಿಗೊಳಿಸಿದ ಸ್ವತಂತ್ರ ಧರ್ಮವಾಗಿದೆ.

ಹಿಂದು ಧರ್ಮದ ವರ್ಣಾಶ್ರಮ ಪದ್ಧತಿಯನ್ನು ನಿರಾಕರಿಸಿ ದೀನದಲಿತರಿಗೆ, ಶೂದ್ರರಿಗೆ, ಮಹಿಳೆಯರಿಗೆ ಹಾಗೂ ಅಲಕ್ಷಿತ ಪಂಚಮರಿಗೆ ಧಾರ್ಮಿಕ ಆತ್ಮವಿಶ್ವಾಸ ತುಂಬಲು ಅಂಗೈಗೆ ಇಷ್ಟಲಿಂಗ ನೀಡುವ ಮೂಲಕ ಸ್ಥಾಪಿತವಾದ ವಿನೂತನ ಧರ್ಮವಾಗಿದೆ.

ಈ ಧಾರ್ಮಿಕ ವಿಭಜನೆ ಎಂಬ ವಾದವೇ ನಿರಾಧಾರ.
ಜಾತ್ಯಾತೀತ ಪರಿಕಲ್ಪನೆಯ, ದೇವಾಲಯ ಸಂಸ್ಕೃತಿಯ ಪುರೋಹಿತಶಾಹಿಯ ನಿರಾಕರಣವೇ ಹೊರತು ಬ್ರಾಹ್ಮಣ ವಿರೋಧಿ ಕ್ರಮವಲ್ಲ. ಕೇವಲ ಬ್ರಾಹ್ಮಣ್ಯದ ವಿರುದ್ಧದ ಜನಪರ ಹೋರಾಟವೂ ಆಗಿತ್ತು.

ಅದೇ ಪರಂಪರೆಯ ಲಿಂಗಾಯತ ಮಠಗಳು ನಂತರದ ಕೆಲವು ಗೊಂದಲಗಳಿಂದ ವೀರಶೈವ ಅಥವಾ ಲಿಂಗಾಯತ ಎಂಬ ಧರ್ಮ ಎಂದು ಕರೆಯಲ್ಪಟ್ಟಿತೋ ವಿನಹ ಒಂದು ಜಾತಿ ಎಂದು ಯಾವತ್ತೂ ಗುರುತಿಸಲ್ಪಡಲಿಲ್ಲ.

ಲಿಂಗಾಯತ ಧರ್ಮದ ಹೋರಾಟದ ಸಂದರ್ಭದಲ್ಲಿ ವೀರಶೈವ ಪದ ಬಳಕೆಯ ನಿವಾರಣೆಯ ಸಂಗತಿಯೂ ಚರ್ಚೆಗೊಳಪಟ್ಟಿತು.‌
ವೀರಶೈವ ಪದದಲ್ಲಿ ನಂಬಿಕೆ ಇಟ್ಟವರು, ಲಿಂಗಾಯತ ಪದ ಒಪ್ಪಿಕೊಳ್ಳುವವರೂ ಕೂಡಾ ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟಿದ್ದನ್ನು ಪ್ರೊ.ರೇಷ್ಮೆಯವರು ದಯವಿಟ್ಟು ಅರ್ಥಮಾಡಿಕೊಳ್ಳಬೇಕು.

ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ರಾಜಕೀಯ ಉದ್ದೇಶ ಏನೇ ಇರಲಿ, ಇಡೀ ಧಾರ್ಮಿಕ ಚಳುವಳಿಯ ಉದ್ದೇಶ ಹಾಗೂ ಸಾಮರ್ಥ್ಯವನ್ನು ಸರಿಯಾಗಿಯೇ ಗ್ರಹಿಸಿದ್ದರು.
ಜನತಾ ಪರಿವಾರದ ಜೆ.ಪಿ. ಹಾಗೂ ಲೋಹಿಯಾ ಸಿದ್ಧಾಂತ ಓದಿಕೊಂಡ ಮುತ್ಸದ್ದಿ ನಾಯಕ. ವೈಚಾರಿಕವಾಗಿ ಅವರನ್ನು ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಹೋಲಿಸಲಾಗದು, ಹೋಲಿಸಬಾರದು ಕೂಡ. ‌

ಕಾಂಗ್ರೆಸ್ ಸೋಲಿಗೆ ಅನೇಕ ಬೇರೆ, ಬೇರೆ ಕಾರಣಗಳಿರಬಹುದು. ಆದರೆ ಲಿಂಗಾಯತ ಸ್ವತಂತ್ರ ಧರ್ಮ ಚಳುವಳಿಯಿಂದ ಖಂಡಿತವಾಗಿ ಲಾಭವಾಗಿದೆ. ಕೆಲವು ಪ್ರಮಾಣದ ಮತಗಳನ್ನು ವಿಭಜಿಸಲಾಯಿತು, ಪ್ರಮಾಣ ಹೆಚ್ಚು ಕಡಿಮೆ ಇರಬಹುದು ಅಷ್ಟೇ.

ಧರ್ಮ, ಸಾಹಿತ್ಯ, ಸಾಮಾಜಿಕ ಚಳುವಳಿ ಕುರಿತು ಆಳ ಗ್ರಹಿಕೆ ಹೊಂದಿರದ ಸಚಿವರ ಕ್ಷಮೆಯಾಚನೆಯಿಂದ ರೇಷ್ಮೆ ಅವರು ಇಷ್ಟೊಂದು ಪುಳಕಗೊಳ್ಳುವ ಅಗತ್ಯವಿಲ್ಲ.

ಹಾಗೆ ಜಾಮದಾರ ಅವರ  ಧಾರ್ಮಿಕ ಬದ್ಧತೆಯನ್ನು ಜಿನ್ನಾ ದೇಶ  ವಿಭಜನೆಗೆ ಹೋಲಿಸುವುದು ಅಸಮಂಜಸ.
ರೇಷ್ಮೆ ಅವರ ಈ ವಾದವನ್ನು ಅವರ ಪತ್ರಿಕಾ ಒಡನಾಡಿ, ಹಿರಿಯ ಚಿಂತಕ ಲಂಕೇಶ್ ಕೇಳಿದ್ದರೆ ಖಂಡಿತವಾಗಿ ಖಂಡಿಸುತ್ತಿದ್ದರು.
ಲಂಕೇಶ್ ಅವರ ಜನಪರ ಸಿದ್ಧಾಂತದ ಆಶಯಗಳ ನೆರಳಡಿ ಬೆಳೆದ ರೇಷ್ಮೆ ಅವರು ಹೀಗೆ ವ್ಯಾಖ್ಯಾನಿಸುವುದು ನೋವಿನ ಸಂಗತಿ.
ಯಾರೋ ಅಪಕ್ವ ಚಿಂತಕರ ಆರೋಪವಾಗಿದ್ದರೆ ಅಲಕ್ಷಿಸಬಹುದಿತ್ತೇನೋ !

ರೇಷ್ಮೆ ಅವರು‌ ನಿಸ್ಸಂಶಯವಾಗಿ ನುರಿತ ರಾಜಕೀಯ ಚಿಂತಕರು. ಧಾರ್ಮಿಕ ಸಂಗತಿಯನ್ನು ರಾಜಕೀಯ ವಿಶ್ಲೇಷಣೆಯಂತೆ ಅರ್ಥೈಸಿಕೊಳ್ಳುವುದು ಸರಿಯಲ್ಲ.
ಪ್ರತ್ಯೇಕ ಧರ್ಮ ಬೇಡಿಕೆ ರಾಜಕಾರಣದಾಚೆಗಿನ ಹೋರಾಟ.

ಅದನ್ನು ರಾಜಕಾರಣಿಗಳು ಹೇಗಾದರೂ ಬಳಸಿಕೊಂಡು ಬೆಳೆಯಲಿ ಅದು ಅವರ ಸಾಮರ್ಥ್ಯಕ್ಕೆ ಬಿಟ್ಟ ವಿಷಯ.
ಸೈದ್ಧಾಂತಿಕವಾಗಿ ಇಡೀ ಹೋರಾಟದ ಸದುದ್ದೇಶವನ್ನು ಗಮನಿಸಿ ವಿಶ್ಲೇಷಿಸುವುದು ಒಳಿತು.

ದೇಶ ವಿಭಜನೆ ನಿಜಾರ್ಥದ ವಿಭಜನೆ ಆದರೆ ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ವಿಭಜನೆ ಅಲ್ಲ. ಇರುವ ಸತ್ಯ ಸಂಗತಿಗೆ ಸಾಂವಿಧಾನಿಕ ಮಾನ್ಯತೆ ದೊರಕಿಸಿಕೊಡುವುದಾಗಿದೆ ಎಂದು ಈ ಮೂಲಕ ನಿವೇದಿಸಿಕೊಳ್ಳುತ್ತೇನೆ.

  *ಸಿದ್ದು ಯಾಪಲಪರವಿ*

Sunday, October 21, 2018

ಮೀಟೂ ದುರುಪಯೋಗ ಬೇಡ

#Metoo

*ಆರೋಗ್ಯಪೂರ್ಣ ಚಿಂತನೆ ಇರಲಿ, ದುರುಪಯೋಗ ಬೇಡ*

ಎಲ್ಲ ದಾರಿಗಳು ಈಗ ಅಮೆರಿಕದ ಕಡೆಗೆ ಅನ್ನುವಂತಾಗಿದೆ, ಅದೇ ಅಮೇರಿಕಾದಿಂದ ಎದ್ದ #Metoo ಚಳುವಳಿ ಈಗ ಇಂಡಿಯಾಕ್ಕೂ ಕಾಲಿಟ್ಟಿದೆ.

ಪರ-ವಿರೋಧ ಚರ್ಚೆ ಸಹಜ ಆದರೆ ಅನಾರೋಗ್ಯಕರ ಹಾದಿ ಹಿಡಿಯುವುದು ದುರಂತ.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಸದಾ ಬಲಿಪಶು.
ಕಾರಣ ಆವಳನ್ನು ದುರ್ಬಲ ಎಂದು ಕರೆಯುವುದೇ ಆಗಿದೆ.

“ಅತ್ಯಾಚಾರ ಹೆಣ್ಣಿನ ಒಪ್ಪಿಗೆ ಇಲ್ಲದೇ ನಡೆಯುವುದಿಲ್ಲ” ಎಂದು ಕುಹಕವಾಡಿ “ಅವಳು ಮನಸು ಮಾಡಿದ್ದರೆ ತಪ್ಪಿಸಿಕೊಳ್ಳಬಹುದು” ಎಂಬ ಹೇಳಿಕೆ ಗಂಡಿಂದ ಬಂದಿದೆ. ಅನ್ಯಾಯಕ್ಕೆ ಒಳಗಾದ ಯಾವ ಹೆಣ್ಣು ಈ ತರಹದ ಹೇಳಿಕೆ ನೀಡಿಲ್ಲ ಎಂಬುದು ಗಮನಾರ್ಹ.

ಶೋಷಣೆ ಮಾಡುವ ಧೈರ್ಯ ಬರಲು ವ್ಯಕ್ತಿ ಹೊಂದಿರುವ ಅಧಿಕಾರ, ಸ್ಥಾನ ಮತ್ತು ಮೇಲರಿಮೆ.
ಉನ್ನತ ಹುದ್ದೆಯಲ್ಲಿರುವವರು, ಅವಕಾಶ ಕಲ್ಪಿಸುವ ತಾಕತ್ತು ಹೊಂದಿದವರು ಈ ಕೆಲಸಕ್ಕೆ ಕೈ ಹಾಕುವ ಭಂಡತನ ತೋರಿಸುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸಿರಿವಂತರು, ಮೇಲ್ಜಾತಿಯವರು ಈ ಅಟ್ಟಹಾಸಕೆ ಕೈ ಹಾಕುತ್ತಿದ್ದರು ಆದರದು ಸುದ್ದಿಯಾಗುತ್ತಿರಲಿಲ್ಲ.

ಈಗ ಸಾರ್ವಜನಿಕವಾಗಿ ಮಹಿಳೆ ಕೆಲಸ ಮಾಡುವ, ಒಂಟಿಯಾಗಿ ಪಯಣಿಸುವ ಅನಿವಾರ್ಯತೆ ಹೆಚ್ಚಾಗಿದ್ದರಿಂದ ತೀವ್ರತೆ ಎದ್ದು ಕಾಣುತ್ತದೆ.
ಮಹಿಳೆ ಸಿಗುತ್ತಿರುವ ಶಿಕ್ಷಣ ಹಾಗೂ ಅವೇರ್ನೆಸ್ ಹೆಚ್ಚಾದ್ದರಿಂದ ಗಂಡಸು ಅಪರಾಧಿ ಸ್ಥಾನದಲ್ಲಿ ನಿಲ್ಲುವ ವಾತಾವರಣ ಸೃಷ್ಟಿಯಾಗಿದೆ.

ಲೈಫ್ ಸ್ಕಿಲ್ ತರಬೇತಿಯ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದ ಘಟನೆಗಳನ್ನು ಯಥಾವತ್ತಾಗಿ ಇಲ್ಲಿ ನಿವೇದಿಸುತ್ತೇನೆ. ನನ್ನ ಯಾವುದೇ ಅಭಿಪ್ರಾಯ ಹೇರದೇ.

ಘಟನೆ -1

ಸಾಹಿತ್ಯದ ವಿದ್ಯಾರ್ಥಿಗೆ ಅವರ ಗೈಡ್ ನೀಡುತ್ತಿದ್ದ ಕಿರುಕಳದಿಂದಾಗಿ ಅರ್ಧಕ್ಕೆ ನಿಂತ ಅಧ್ಯಯನ.
ಸದರಿ ಯುವತಿ ಅಷ್ಟೇನು ಸುಂದರಿಯಲ್ಲ ಆದರೂ ಅರವತ್ತರ ಆಜು ಬಾಜು ಇದ್ದ ಗೈಡ್ ಆಹ್ವಾನಿಸಿದ್ದು ಹೇಸಿಗೆ ಎನಿಸಿದೆ. ಈ ಘಟನೆಯ ವಿವರಣೆಯಲ್ಲಿ ಅವಳು ನೇರವಾಗಿ ಹೇಳಿದ ಪದಗಳನ್ನು ಇಲ್ಲಿ ವಿವರಿಸಲಾಗದು.
ನಂತರ ಈ ಘಟನೆಯನ್ನು ಕೇಳಿದ ಗೆಳೆಯ ಪ್ರೇಮಿಯೂ ಆಗಿ ನಂತರ ಅವಳನ್ನು ವಿಪರೀತ ಸಂಶಯದಿಂದ ಕಂಡು ದೂರಾದ ಸಂಕಷ್ಟದ ಕತೆಯೂ ಅಷ್ಟೇ ಕ್ರೂರ.
ಮುಂದೆ ಒಂದೆರಡು ವರ್ಷದ ನಂತರ ಅವಳು ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದು..‌.

ಘಟನೆ-2

ಆಡಳಿತ ಮಂಡಳಿ ಮುಖ್ಯಸ್ಥ ತನ್ನ ಒಳಮನಸಿನ ಹೀನ ಆಸೆಯನ್ನು ಹೇಳಿಕೊಂಡಿದ್ದಾನೆ. ಮದುವೆಯಾಗಿ ಸುಖೀ ಬದುಕಿನ ಅವಳಿಗಿದು ಅಸಹ್ಯವೆನಿಸಿ ತಿರಸ್ಕರಿದ್ದಾಳೆ.
ಮುಂದೆ ನಿರಂತರ ಕಿರುಕಳ ಸಹಿಸದೇ ಕೆಲಸದಿಂದ ಮುಕ್ತಿ ಪಡೆಯುವ ನಿರ್ಧಾರ ಕೇಳಿದ ಗಂಡ ‘ ಹೋಗಲಿ ಒಪ್ಪಿಕೋ’ ಅಂದದ್ದು ಕೇಳಿ ತತ್ತರಿಸಿ ಹೋಗಿದ್ದಾಳೆ.
ತೀವ್ರ ಮನೋರೋಗದಿಂದ ನರಳಿ ಪುರುಷ ದ್ವೇಷಿಯಾಗಿ ಗಂಡನಿಂದ ಮಾನಸಿಕವಾಗಿ ದೂರಾಗಿದ್ದಾಳೆ.

ಘಟನೆ-3

ಸಾಮಾಜಿಕ ಜಾಲತಾಣದಲಿ ಐವತ್ತರ ಅಂಚಿನಲ್ಲಿರುವ ಮಹಿಳೆಗೆ ವಯಸ್ಸಿನ ಮಿತಿ ಗೊತ್ತಿದ್ದರೂ ವಿಕೃತ ಮನಸಿನ ನಾಲ್ವತ್ತರ ವ್ಯಕ್ತಿ ಜೊಲ್ಲು ಸುರಿಸಿ ನಿವೇದಿಸಿಕೊಂಡಿದ್ದಾನೆ.
ಅವಳು ವಯಸ್ಸಿನಲ್ಲಿ ಹಿರಿಯಳು, ಗೃಹಿಣಿ ಬೆಳೆದ ಮಕ್ಕಳ ಮದುವೆ ಮುಗಿಸುವ ಹಂತ. ಇವನ ಉದ್ಧಟತನಕೆ ಪ್ರತಿಕ್ರಿಯಿಸದೇ ಸುಮ್ಮನಾದದ್ದು ಕಂಡು ಉತ್ತೇಜಿತನಾಗಿ ಚಿಗುರಿ ಅವಳ ಫೋಟೋ ಕ್ರಾಪ್ ಮಾಡಿ ಕಳಿಸುವುದು, ಸಾರ್ವಜನಿಕ ಕಾರ್ಯಕ್ರಮಳಲ್ಲಿ ತೆಗೆದ ಫೋಟೋಗಳನ್ನು ಸಂಗ್ರಹಿಸಿ ಬಳಿ ಇಟ್ಟುಕೊಂಡ ಈ ವಿಕೃತನಿಗೆ ಆ ಮಹಿಳೆ ಸರಿಯಾಗಿ ದಬಾಯಿಸಿದ್ದಾಳೆ.

“ ಈ ಹಾಳು WhatsApp ನಲ್ಲಿ ತೋರಿಸುವ ಧೈರ್ಯ ಎದುರಿಗೆ ತೋರಿಸು ಸರಿಯಾಗಿ ಉತ್ತರ ಕೊಡುವೆ” ಎಂದು ಜಾಡಿಸಿದ್ದಾರೆ. ಆದರೂ ಆ ನಿರ್ಲಜ್ಯ ತನ್ನ ಕೆಲಸ ಬಿಟ್ಟಿಲ್ಲ. ಈಗವನು blocked. ಅವನು ಏನಾದರೂ ಎಡವಟ್ಟು ಮಾಡಿದರೆ ಎಂಬ ಆತಂಕವೂ ಇದೆ.

ಮೇಲಿನ ಮಹಿಳೆಯ ಅಳುಕು ದೂರ ದೂಡಿ ನಾನವಳ ಧೈರ್ಯಕ್ಕೆ ಬೆಂಬಲಿಸಿದೆ.

ಘಟನೆ-4

ಕುಟುಂಬ ವ್ಯವಸ್ಥೆಯಲಿ ಮಾವ, ಭಾವ ಇತ್ಯಾದಿಗಳ ಹಿಂಸೆಯಿಂದ ಒದ್ದಾಡುವ ಮಹಿಳೆಯರಿಗೆ ಗಂಡ ನೈತಿಕ ಬೆಂಬಲ ನೀಡದ ಅಸಹಾಯಕ ಘಟನೆಗಳು.

                           ***

ಹೀಗೆ ಹೇಳುತ್ತ ಹೋದರೆ ಅಸಂಖ್ಯ ಪ್ರಕರಣಗಳು.
ಒಟ್ಟು ಗಂಡಸಿನ ಅನುಮಾನ-ಅವಮಾನ ಪ್ರಧಾನ ಪಾತ್ರ ಎಲ್ಲ ಪ್ರಕರಣಗಳಲ್ಲಿ.

ಮನೆಯಲ್ಲಿ ನಮ್ಮ ಬಂಧುಗಳಿಗೆ ಇಂತಹ ಸ್ಥಿತಿ ಬರಬಾರದೆಂದು ಆಶಿಸುವ ನಾವು ಅವಕಾಶ ಸಿಕ್ಕಾಗ ದುರ್ಬಲರಾಗಿಬಿಡುತ್ತೇವೆ ಯಾಕೆ?

ಅವಕಾಶ ಸಿಕ್ಕಾಗ ಹೆಣ್ಣನ್ನು ಗೌರವಿಸುವ ಮನಸ್ಥಿತಿ ಬೆಳೆಸಿಕೊಂಡು ಇನ್ನೂ ದೊಡ್ಡವರಾಗಬಹುದು. ಮನೆಯ ಮಕ್ಕಳು ಒಮ್ಮೆ ಕಣ್ಣೆದುರು ನಿಲ್ಲಬೇಕು ಅಷ್ಟೇ.

ಕಾನೂನು ಹೋರಾಟದಿಂದ ಯಾವ ಪ್ರಯೋಜನ ದೊರಕುವುದಿಲ್ಲ, ಅನಗತ್ಯ ಮಾನಸಿಕ ಹಿಂಸೆ. ಹಣ ಬಲ ಬಳಸಿ ಪ್ರಕರಣಗಳು ದುರ್ಬಲವಾಗಿ ಬಿದ್ದು ಹೋಗುತ್ತವೆ.

ನೈತಿಕಪ್ರಜ್ಞೆ ಹೆಚ್ಚಾಗುವಂತ ವಾತಾವರಣ ಉಂಟಾಗಬೇಕು.
ಪ್ರಗತಿಪರ ಮಹಿಳೆಯರು ಹುಡುಗಿಯರಿಗೆ, ಯುವತಿಯರಿಗೆ ತರಬೇತಿ ನೀಡಬೇಕು. ಡ್ರೆಸ್ ಕೋಡ್ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಜೊಲ್ಲು ಸುರಿಸುವ ಪರಿಸರದಲ್ಲಿ ಕೆರಳುವಿಕೆಗೆ ಅವಕಾಶ ಕೊಡಬಾರದು.

ಸಾಮಾಜಿಕ ಜಾಲತಾಣಗಳಲ್ಲಿ ಬಿಂದಾಸ್ ಫೋಟೋ ಹಾಕಿದವರೆಲ್ಲರೂ ಪ್ರದರ್ಶನದ ಬೊಂಬೆಗಳೆಂದು ಪರಿಗಣಿಸಬಾರದು. ಅವರ ಖುಷಿಗಾಗಿ ಶೆರ್ ಮಾಡಿದ್ದನ್ನು ತಪ್ಪಾಗಿ ಭಾವಿಸಿ ನಾಲಿಗೆ ಚಾಚಬಾರದು.

ಈ ರೀತಿ ಘಟನೆಗಳು ನಡೆದಾಗ ಹತ್ತಿರದ ಬಂಧುಗಳಿಗೆ ಹೇಳಿಕೊಳ್ಳಬೇಕು ಆದರೆ ಅವರೊಂದಿಗೆ ತಗಾದೆ ತೆಗೆದು ಅವಮಾನಿಸಿ ದ್ವೇಷ ಕಟ್ಟಿಕೊಳ್ಳದೇ ನಯವಾಗಿ  ತಿರಸ್ಕರಿಸಿ ಉದಾಸೀನ ಮಾಡಬೇಕು.

ಪ್ರತಿ ಶಾಲಾ ಕಾಲೇಜುಗಳಲ್ಲಿ ಮಹಿಳಾ ಆಪ್ತಸಮಾಲೋಚಕರು ತರಬೇತಿ ನೀಡಬೇಕು. ವೃತ್ತಿ ಬದುಕಿನಲಿ ಎದುರಾಗುವ ಇಂತಹ ಸಮಸ್ಯೆಗಳ ಕುರಿತು ಮಾಹಿತಿ ನೀಡಬೇಕು.

ಸೋಸಿಯಲ್, ಕ್ಲೋಸ್ ನೆಪದಲ್ಲಿ ಹತ್ತಿರ ಬಂದು ನಾಲಿಗೆ ಚಾಚುವ ಮುಖವಾಡಗಳ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮಹಿಳೆಯರಲ್ಲಿ ಹೆಚ್ಚಾಗಬೇಕು.

*ಪುರುಷನ ನೋಟ ಮತ್ತು ಸ್ಪರ್ಷದ ಆಳವನ್ನು ಗ್ರಹಿಸುವ ಶಕ್ತಿ, ತಾಕತ್ತು ಪ್ರತಿ ಹೆಣ್ಣಿಗೆ ನಿಸರ್ಗದತ್ತವಾಗಿ ಬಂದ ವರ*

ಆ ವಿವೇಚನೆ ಬಳಸಿಕೊಂಡು ಅಪಾಯಕಾರಿ ನೋಟ ಹಾಗೂ ಸ್ಪರ್ಷವನ್ನು ನಾಜೂಕಾಗಿ ನಿರಾಕರಿಸಬೇಕು.

*ಕೊನೆ ಮಾತು*

ಸದರಿ ಚಳುವಳಿ ಪೂರ್ವ ನಿಯೋಜಿತ ಸಂಚಾಗಿ ದುರ್ಬಳಕೆಯಾಗಬಾರದು. ಅನಗತ್ಯ ಹಳೆ ಘಟನೆಗಳನ್ನು ಕೆದಕಿ ಮಾನ ಹಾರಾಜು ಹಾಕುವ ಸ್ಯಾಡಿಸಂ ಆಗಬಾರದು. ಬ್ಲ್ಯಾಕ್ ಮೇಲ್ ತಂತ್ರವಾದರೆ ಹೆಣ್ಣಿಗೆ ಅಪಾಯ ಹೆಚ್ಚು.
*ಪ್ರತಿಷ್ಟೆ, ಪ್ರಚಾರಗಳ ಹುಚ್ಚಿಗಾಗಿ ಗಂಡನ್ನು ಉತ್ತೇಜಿಸಿ ಆಟ ಆಡಿ ಬಳಸಿ ಬಿಸಾಕುವ ಮಹಿಳೆಯರು ಇದ್ದಾರೆ* ಎಂಬುದು ಸುಳ್ಳಾಗಬೇಕು‌.
ಹೆಸರು, ಕೀರ್ತಿಯ ಬೆನ್ನು ಹತ್ತಿ ಚಾರಿತ್ರ್ಯ ಬಲಿಕೊಟ್ಟು ಪರಿತಪಿಸಬಾರದು.
ಅವಕಾಶ ಬೇಗ ಸಿಗಲಿ ಎಂದು ಬಯಸಬಾರದು.
ಕೆಲಸ ಸಾಧಿಸಲು ಕಾಲು ಹಿಡಿಯುವ, ತಲೆ ಹಿಡಿಯುವ ದುರುಳರ ಮುಖವಾಡಗಳ ಅರ್ಥಮಾಡಿಕೊಂಡು ಸಂಬಂಧ ಬೆಳೆಸಬೇಕು.

*ಸಿದ್ದು ಯಾಪಲಪರವಿ*