Monday, March 18, 2019

ಸಿದ್ಧೇಶ್ವರ ಸ್ವಾಮೀಜಿ

*ಪೂಜ್ಯ ಸಿದ್ಧೇಶ್ವರ ಸ್ವಾಮಿಗಳೊಂದಿಗೆ ಒಂದಿಷ್ಟು ಆಲಿಸುವಿಕೆ*

ಈ ಯುಗದ ದಂತಕಥೆ, ಸರಳ ವ್ಯಕ್ತಿತ್ವದ ಮೇರು ಪರ್ವತ ಪೂಜ್ಯ ಸಿದ್ದೇಶ್ವರ ಅಪ್ಪಗಳು. . ಒಂದಾದ ಕಾರಣ ಇವರ ಪ್ರವಚನಗಳಿಗೆ ದಿವ್ಯ ಶಕ್ತಿಯಿದೆ.
ಬಹಳಷ್ಟು ಜನ ಅದ್ಭುತವಾಗಿ ಮಾತನಾಡುತ್ತಾರೆ ಆದರೆ ಬದುಕುವುದಿಲ್ಲ. ನೂರಾರು ಅಪಕ್ವ ವರ್ತನೆ,ಸಣ್ಣತನ, ಸಿನಿಕತೆ. ಹೇಳುವುದು ವೇದಾಂತ ಆದರೆ ಖಾಸಗಿ ಬದುಕು ಅಯ್ಯೋ ಯಾರಿಗೂ ಬೇಡ.

ಆದರೆ ಸಿದ್ಧೇಶ್ವರ ಅಪ್ಪಗಳದು ಭಿನ್ನ ವ್ಯಕ್ತತ್ವದ ನಡೆನುಡಿ, ಅಪ್ಪಿ ತಪ್ಪಿ ನಕಾರಾತ್ಮಕ ಮಾತುಗಳ ಕಡೆ ಗಮನ ಹರಿಸದ ನಿಲುವು. ಸಂಪೂರ್ಣ ಜಾಗೃತಾವಸ್ಥೆ. ಮಾತಿನಲಿ ನಮ್ರ ವಿನಮ್ರತೆಯ ಹರವು.

ವೇದಾಂತ, ವಚನಗಳು, ಗೀತೆ,ಶಾಸ್ತ್ರ, ಬುದ್ಧ,ಝೆನ್,ಓಶೋ, ಭಾರತೀಯ ತತ್ತ್ವಶಾಸ್ತ್ರ ಹೀಗೆ ಆಳವಾದ ಅಧ್ಯಯನ, ಅದೂ ಕೇವಲ ಅಧ್ಯಯನವಲ್ಲ ಸಂಪೂರ್ಣ ಆಧ್ಯಾತ್ಮಿಕ ಬದುಕಿನ ಅದಮ್ಯ ಸಾಧನೆಯೂ ಎದ್ದು ಕಾಣುತ್ತದೆ. ಇಷ್ಟೊಂದು ಗೊಂದಲದ ಗೂಡಾಗಿರುವ ಸಮಾಜೋಧಾರ್ಮಿಕ ವ್ಯವಸ್ಥೆಯಲಿ ವಿವಾದಗಳಿಲ್ಲದೆ ಬದುಕುವುದು ಕಠಿಣ.

ಮೂಲಭೂತವಾದ ತಾಂಡವವಾಡುತ್ತಿರುವ ಕಾಲದಲ್ಲಿ ನಾವಿದ್ದೇವೆ. ಎಲ್ಲವೂ ಈಗ ಅತಿರೇಕದ ಪರಮಾವಧಿ. ಎಡಬಲಗಳ ಅಟ್ಟಹಾಸ, ಹೇಳಿದ್ದೇ ಸರಿ ಎಂಬ ಹಟಮಾರಿತನ. ಮಾತು ಕೇಳದಿದ್ದರೆ ಯಾಕೆ ಕೊಂದು ಬಿಡಬಾರದೆಂಬ ಅನರ್ಥ ಆಕ್ರೋಶ.
ಸಿದ್ಧಾಂತಗಳ ಹೇರಿ ಪ್ರಭುತ್ವ ಸಾಧಿಸುವ ಹುನ್ನಾರ. ಧರ್ಮ, ಭಾಷೆ,ಸಿಧ್ಧಾಂತಗಳ ನೆಪದಲ್ಲಿ ನೆಪೋಟಿಸಂ.‌

ವಚನ ಶಾಸ್ತ್ರಗಳ ಅಧ್ಯಯನ ಸಂದರ್ಭದಲ್ಲಿ ಕೈಗೆ ಪೂಜ್ಯರ ಅಲ್ಲಮಪ್ರಭು ವಚನಗಳ ಎಂಬ ಬೃಹತ್ ಗ್ರಂಥ ನನಗೆ ಪೂಜ್ಯ ಕೈವಲ್ಯಾನಂದ ಸ್ವಾಮಿಗಳ ಮೂಲಕ ಸಿಕ್ಕಿತ್ತು.

ಈ ಕುರಿತು ಸಾಧ್ಯವಾದರೆ ಪೂಜ್ಯರೊಂದಿಗೆ ಮಾತನಾಡುವ ಮನಸ್ಸು ಇತ್ತು. ಆದರೆ ಪೂಜ್ಯರ ದರ್ಶನ, ಮಾತು ಈಗ ಸರಳವಲ್ಲ. ಜನ ಅನಗತ್ಯ ಕೆಣಕುವ ಪ್ರಶ್ನೆಗಳನ್ನು ಕೇಳುವುದನ್ನು ಗ್ರಹಿಸಿದ ಶ್ರೀಗಳು ಅಂತಹ ಮುಜುಗರದಿಂದ ಸದಾ ದೂರ ಸರಿಯುತ್ತಾರೆ.‌
ನಾವು ಅಷ್ಟೇ ತುಂಬ ತಿಳಿದವರ ಹಾಗೆ ಮಾತನಾಡಿ ದಡ್ಡತನ ಪ್ರದರ್ಶಿಸಿಬಿಡುತ್ತೇವೆ. *ಎಲ್ಲ ಬಲ್ಲವರು ನಮ್ಮ ಅಜ್ಞಾನಕ್ಕೆ ನಕ್ಕು ಸುಮ್ಮನಾಗುತ್ತಾರೆ*.

ಅದರ ಪ್ರಜ್ಞೆ ಇಟ್ಟುಕೊಂಡ ನಾನು ಕೆಲವು ಪ್ರಶ್ನೆಗಳನ್ನು ಮಾತ್ರ ಕೇಳಿ ಅವರಿಂದ ಸುದೀರ್ಘ ವಿವರಣೆ ಬಯಸಿದ್ದೆ.
ಇಂದು ಹಳಿಯಾಳದ ಸುಂದರ ಪರಿಸರ ಮಡಿಲಿನ ಕೋಟೆ ಪ್ರವಾಸಿ ಮಂದಿರದಲ್ಲಿ ದರ್ಶನವಾದಾಗ, ಕೈವಲ್ಯಾನಂದರ ಪರಿಣಾಮಕಾರಿ ಪರಿಚಯದ ಫಲವಾಗಿ ಉತ್ತರ ಲಭಿಸಿತು.

ಶಾಂತವಾಗಿ ಹರಿಯುವ ನದಿಯಂತೆ, ಪಕ್ಷಿಗಳ ಕಲವರದ ಸಂಗೀತದ ಮಧ್ಯ ಹೊರಟ ಪೂಜ್ಯರ ಮಾತುಗಳ ಗಂಭೀರವಾಗಿ ಆಲಿಸಿದೆ. ಅನೇಕ ಅನುಮಾನಗಳಿಗೆ ಮೋಕ್ಷ ಸಿಕ್ಕಿತು. ಏನೇನೋ ಭ್ರಮೆ ಇಟ್ಟುಕೊಂಡು ಬದುಕುವ,ಓದುವ,ಬರೆಯುವ,ಹೇಳುವ ನಮ್ಮ ಮಿತಿಗಳನ್ನು ತಮ್ಮದೇ ಶೈಲಿಯಲ್ಲಿ ಪೂಜ್ಯರು ತೆರೆದಿಟ್ಟರು.
ಗೊತ್ತಿರುವ ಪರಮ ಸತ್ಯಗಳಿಗೆ ದೊಡ್ಡವರ ಅಂಕಿತ ಬಿದ್ದರೆ ಇನ್ನೂ ಹೆಚ್ಚು ಸಮಾಧಾನವಾಗುತ್ತದೆ.

ಅನುಭವ ಮಂಟಪದಲ್ಲಿ ಬಸವಾದಿ ಶರಣರ ಮಾತುಗಳಿಗೆ ಪ್ರಭುದೇವರ ಅಂಕಿತ ಬಿದ್ದ ಮೇಲೆ ಅದು ವಚನವಾಗಿ ದಾಖಲಾಗುತ್ತಿತ್ತು.

ಹಾಗೆ ನಮ್ಮ ಅನೇಕ ಅಭಿಪ್ರಾಯಗಳಿಗೆ ದೊಡ್ಡವರ ಅಂಕಿತ ಬೇಕಾಗುತ್ತದೆ. ಅದೂ ಸಿದ್ಧೇಶ್ವರ ಅಪ್ಪಗಳಂತವರ ಒಪ್ಪಿಗೆ.
“ *ನಾವು ಬದುಕಿರುವ ಕಾಲಘಟ್ಟದಲ್ಲಿ ನಮ್ಮ ಖುಷಿಗಾಗಿ ಕೆಲಸ ಮಾಡಬೇಕು, ಬೇರೇಯವರನ್ನು ಬದಲಾಯಿಸಬಲ್ಲೆವು ಎಂಬ ಭ್ರಮೆಯಿಂದಲ್ಲ* ಕೋಟ್ಯಾಂತರ ಜನಸಂಖ್ಯೆ ಹೊಂದಿರುವ ನಮ್ಮ ದೇಶ ಎಲ್ಲವನ್ನೂ ಅರಗಿಸಿಕೊಳ್ಳುತ್ತದೆ, ಬೇಡವಾದದ್ದನ್ನು ಬೇಗ ತಿರಸ್ಕರಿಸಿಬಿಡುತ್ತದೆ. “ ಎಂಬ ಪೂಜ್ಯರ ಮಾತುಗಳು ವಾಸ್ತವವಾದ ಹಾಗೂ ವರ್ತಮಾನದಲ್ಲಿ ಬದುಕಬೇಕಂಬ ನನ್ನ ಆಲೋಚನಾ ಲಹರಿಗೆ ಮುದ್ರೆ ಒತ್ತಿದಂತಾಯಿತು.

ನಾವ್ಯಾರು ಪೂಜ್ಯರ ಹಾಗೆ ಸರಳವಾಗಿ ಬದುಕಲಾರೆವು ಆದರೆ ಅವರ ಹಾಗೆ ಆಲೋಚಿಸುವ ಮನೋಧರ್ಮ ರೂಪಿಸಿಕೊಳ್ಳುವ ಒಳೆಚ್ಚರ ಇಮ್ಮಡಿಸಿತು.
ತುಕ್ಕು ಹಿಡಿದ ಮನಸಿಗೆ ಹೊಸ ಹೊಳಪು ಹೊಳೆಯಿತು.
ಭ್ರಮೆಗಳಿಲ್ಲದೆ ಮಿತಿಯರಿತು ವರ್ತಮಾನವ ಅನುಭವಿಸಿ ಮುಂದೆ ಸಾಗಲು ಬೆಳಕು ದೊರೆಯಿತು.

*ಸಿದ್ದು ಯಾಪಲಪರವಿ*

ಪ್ರೇಮ ಬಿಕ್ಷೆ

*Begging is better than stealing*

ಪ್ರೇಮ ಬಿಕ್ಷೆ

ಬಿಕ್ಷೆ ಬೇಡುವುದು ಸಣ್ಣ ಸಂಗತಿಯೇನಲ್ಲ
ಹಂಗು ಹರಿದು ಮಾನ ಬಿಟ್ಟು
ಬೀದಿಗಿಳಿಯುವುದು ಎಲ್ಲಿಲ್ಲದ
ಅವಮಾನ
ಅಂಗೈಯಲಿ ಜೀವ ಹಿಡಿದು
ಅರೆಬೆತ್ತಲೆಯಾಗಿ ತಿರುಬೋಕಿಯ
ಹಾಗೆ ತಿರುಗುವುದು ನಡು
ಬೀದಿಯಲಿ ಮಾನ ತೂರಿಕೊಂಡಂತೆ

ಕರುಳು ಹಿಂಡಿ ಹೊಟ್ಟೆ ತಳಮಳಿಸಿ
ಉಸಿರು ಗಟ್ಟಿ ಹಪಾಹಪಿಸಿ ಸಾಯುವೆ
ಎನಿಸಿದಾಗ ತಟ್ಟೆ ಕೈ ಸೇರಿ ಮೈ
ಮನಗಳು ಅರೆಬೆತ್ತಲಾಗಿ  ಕಣ್ಣು
ಕತ್ತಲಾಗಿ ಬೀದಿಗೆ ದೂಡುತ್ತವೆ

ಆತ್ಮಗೌರವ ಮನಸಾಕ್ಷಿ ಮಂಗ
ಮಾಯ ಈಗ ಬರೀ ಬದುಕು
ಸಾವು ದೂರಾದರೆ ಸಾಕು

ಮನೆಯೊಡತಿ ಮುಂದೆ ಹೋಗೆಂದಾಳು
ಎಂಬ ತಲ್ಲಣ
ಅನ್ನಲಿ ಬಿಡಿ ಮಾನಕ್ಕಿಂತ ಪ್ರಾಣ
ದೊಡ್ಡದು

ಎದೆ ಬಗೆದು ಕರುಳು ಕಿತ್ತಿ ಬರುವ ಹಾಗೆ
ಕೂಗಿದರೆ ಹೋಗೆನ್ನಲಾರಳೆಂಬ ಹುಚ್ಚು
ನಂಬಿಗೆ

ಆದರೂ ಬದುಕಿಗೆ ಬೇಕಲ್ಲ ತಂ
ಬಿಗೆ ಆ ಬಿಗಿಯಲಿ ಬಿಗುಮಾನ
ಬಿಟ್ಟು ಕೇಳುವ ಕರ್ಮ

ಕಳುವು , ಮೋಸ , ಸುಳ್ಳು ಹಾಗೂ
ಮಳ್ಳನ ಮುಖವಾಡವಿಲ್ಲದ
ಈ ಬಿಕ್ಷೆಯ ಬದುಕು ಹೀನಾಯವಲ್ಲ
ಎಂಬ ಸಂತೃಪ್ತಿ

ಕಡು-ಕಷ್ಟಗಳ ದೂರ ಮಾಡಿ ಮೈ
ಮನಗಳ ಮಾನ ಕಾಪಾಡಲು
ಬೇಡುವ ಬಿಕ್ಷೆಗೆ ಶಿಕ್ಷೆ ಬೇಡ

ಕಾಲನ ಮಹಿಮೆಯ ಕೂಸುಗಳು
ಮಿಂಚಿ ಮಾಯವಾಗುವ
ಸಂಚನು ಬಲ್ಲವರು ಯಾರು ?

ಮುಂದೆ ಹೋಗೆಂದರೆ ಹೋದಾನು
ತಿರುಗಿ ನೀ ಬೇಕೆಂದಾಗ ಬರಲಾರ
ಹಾಕಿಬಿಡು ಅನ್ನ ಹಳಸುವ ಮುನ್ನ
ಬೇರೆಯವರು ಕನ್ನ ಹಾಕುವ ಮುನ್ನ.

---ಸಿದ್ದು ಯಾಪಲಪರವಿ

Thursday, March 14, 2019

ಮಾತಾಜಿ

*ಮರೆಯಾಗದ ಮಹಾಬೆಳಗು: ಮಾತಾಜಿ*

ಇಡೀ ಜಗತ್ತಿಗೆ ಬಸವಧರ್ಮ ಪರಿಚಯಿಸಿದ ಪೂಜ್ಯ ಲಿಂಗಾನಂದರು ಹಾಗೂ ಪೂಜ್ಯ ಮಾತಾಜಿ ಅವರ ಕೊಡುಗೆಯನ್ನು ವರ್ಣಿಸಲಾಗದು. ಇಡೀ ಧರ್ಮ ಸಾರವನ್ನು ಅತ್ಯಂತ ವೈಜ್ಞಾನಿಕವಾಗಿ ನಿರೂಪಿಸಲು ಅಹೋರಾತ್ರಿ ಶ್ರಮಿಸಿದರು.
ಅಸ್ಪಷ್ಟವಾಗಿದ್ದ ಇಡೀ ವಚನ ಚಳುವಳಿಯನ್ನು ಜಗತ್ತಿಗೆ ಪರಿಚಯಿಸಿದ ಮೊದಲ ಪೀಠಾಧಿಪತಿಗಳು.
ರಾಜ್ಯದಲ್ಲಿ ಇದ್ದ ಸಾವಿರಾರು ಮಠಾಧೀಶರು ಮಾಡಲಾಗದ ಕೆಲಸವನ್ನು ಇವರೀರ್ವರು ಸಾಧಿಸಿದರು.‌

ರಾಜ್ಯ, ದೇಶ,ವಿದೇಶಗಳಲ್ಲಿ ಅಪ್ಪಟ ಬಸವಾಭಿಮಾನಿಗಳ ಪಡೆ ನಿರ್ಮಿಸಿದರು. ಕೇವಲ ಸೈದ್ಧಾಂತಿಕ ತಿಳುವಳಿಕೆ ನೀಡಿದರೆ ಸಾಲದು ಅದು ಸಂಘಟನೆಯ ಸ್ವರೂಪದಲ್ಲಿರಲಿ ಎಂಬ ಕಾರಣಕ್ಕಾಗಿ ರಾಷ್ಟ್ರೀಯ ಬಸವ ದಳ ಹುಟ್ಟು ಹಾಕಿದರು.‌

ಹೆಚ್ಚು ಹೆಚ್ಚು ಹಣ ಸಂಗ್ರಹಣ ಮತ್ತದರ ಸದ್ಬಳಕೆಯ ಮಾರ್ಗ ಕಲ್ಪಿಸಿದರು. ಸ್ಥಾವರಕ್ಕಳಿವುಂಟು ಎಂದು ಸಾರಿದ ಬಸವಾದಿ ಶರಣರ ಸ್ಮಾರಕಗಳನ್ನು ನಿರ್ಮಿಸಿದ್ದು ಆರಂಭದ ದಿನಗಳಲ್ಲಿ ವಿರೋಧಾಭಾಸ ಅನಿಸುತ್ತಿದ್ದರೂ ಅವಗಳಿಗೆ ಐತಿಹಾಸಿಕ ಮೆರುಗು ಕೊಟ್ಟರು.
ಕಲ್ಯಾಣದ ಬೀದರ ಜಿಲ್ಲೆಯ ತುಂಬ ಸಂಚರಿಸಿ ಜನರನ್ನು ಸಂಘಟಿಸಿದರು.
ಗುರು-ವಿರಕ್ತ ಮಠೀಯ ವ್ಯವಸ್ಥೆಯ ಜೊತೆ ಸೆಣಸಾಡಿ ತಮ್ಮ ಅಸ್ಮಿತೆ ಉಳಿಸಿಕೊಂಡು ತಮ್ಮದೇ ಆದ ಪಡೆ ನಿರ್ಮಿಸಿಕೊಂಡರು. ಇಡೀ ಬಸವ ಚಳುವಳಿಯ ಆಳ,ಅಗಲ,ವಿಶಾಲತೆಗಳ ತಲಸ್ಪರ್ಷಿ ಅಧ್ಯಯನ ಮತ್ತದರ ಪ್ರತಿಪಾದನೆ ಅಪರೂಪ.

ನಾಡಿನ ಅನೇಕ ಮಠಾಧಿಶರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದ ಬಸವ ಸಂದೇಶದ ವೈಜ್ಞಾನಿಕ ಸಾರವನ್ನು ಜಗತ್ತಿಗೆ ತೋರಿಸಿಕೊಟ್ಟರು. ಅನಿವಾರ್ಯವಾಗಿ ವಿರಕ್ತ ಮಠಾಧೀಶರು ಇವರನ್ನು ಒಪ್ಪಿಕೊಳ್ಳುವ ವಾತಾವರಣ ಸೃಷ್ಟಿ ಮಾಡಿದರು.

ಕೂಡಲಸಂಗಮದ ಶರಣ ಮೇಳದ ಯಶಸ್ಸಿಗೆ ಇಲಕಲ್ಲ, ಗದಗ, ಚಿತ್ರದುರ್ಗ ಮಠಗಳ ಪೂಜ್ಯರುಗಳು ಬಹಿರಂಗ ಬೆಂಬಲ ನೀಡಿದರು. ಆದರೆ ಬಸವ ಸಿದ್ಧಾಂತದ ನಿಜ ವಾರಸುದಾರರೆನಿಸಿಕೊಂಡ ಮಾತಾಜಿ ಅವರಿಗೆ ಯಾಕೋ ಹೊಸ ಹೊಳಹುಗಳು ಕಾಡಲಾರಂಭಿಸಿದವು.
ಅದು ಈ ಸಮಾಜದ ದೌರ್ಭಾಗ್ಯವೂ ಹೌದು. ಎಲ್ಲರೂ ಒಗ್ಗಟ್ಟಾಗಿ ಬೆಸೆದುಕೊಂಡಿರುವ ಸುವರ್ಣ ಕಾಲದಲ್ಲಿ ಲಿಂಗದೇವ ನಾಮಾಂಕಿತ ಬದಲಾವಣೆ ಅವರನ್ನು ಆವರಿಸಿಕೊಂಡಿತು.‌

ನೂರಾರು ಮಠಾಧೀಶರು, ಲಕ್ಷಾಂತರ ಬಸವ ಭಕ್ತರಿಗೆ ಸದರಿ ನಿಲುವು ನೋವುಂಟು ಮಾಡಿತು. ತಾವು ಮಾಡಿದ್ದು ತಪ್ಪು ಎಂದು ಗೊತ್ತಾದರೂ ಸುಮ್ಮನೇ ಹಟಕ್ಕೆ ಬಿದ್ದರು. ಅದನ್ನೇ ಮಹಾತ್ಮರ ಟ್ರ್ಯಾಜಿಕ್ ಫ್ಲಾ ( Tragic flaw ) ಎಂದು ಶೇಕ್ಸ್‌ಪಿಯರ್ ತನ್ನ ದುರಂತ ನಾಯಕರನ್ನು ವರ್ಣಿಸುತ್ತಾನೆ.

ಗಣ್ಯಾತಿಗಣ್ಯರ ಒಂದೇ ಒಂದು ಈ ದೌರ್ಬಲ್ಯ ಇಡೀ ವ್ಯವಸ್ಥೆಯನ್ನು ಕುಸಿದು ಹಾಕುತ್ತದೆ. ನಂತರ ದಿನಗಳಲ್ಲಿ ಕೇವಲ ತಮ್ಮ ವಿತಂಡ ವಾದವನ್ನು ಒಪ್ಪುವ ಭಕ್ತರನ್ನು ಮಾತ್ರ ಜೊತೆಗಿಟ್ಟುಕೊಂಡರು.
ಇದನ್ನು ಪ್ರತಿಭಟಿಸಿ ಹೊರ ಬಂದ ಅವರ ಬಸವ ಗರಡಿಯಲ್ಲಿ ಬೆಳೆದ ಸಾಧಕರು ವೈಯಕ್ತಿಕ ನೆಲೆಯಲ್ಲಿ ಬಸವ ಸಾಮ್ರಾಜ್ಯ ವಿಸ್ತರಿಸಿದ್ದು ಸಮಾಜಕ್ಕೆ ಆದ ಇನ್ನೊಂದು ಲಾಭ.
ಲಿಂಗಾನಂದ ಅಪ್ಪಗಳ ಗರಡಿಯಲ್ಲಿ ತಯಾರಾದ ಸಾಧಕರು ಇಂದಿಗೂ ಬಸವ ನಿಷ್ಠೆ ಮೆರೆಯುತ್ತಲಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ ಲಿಂಗದೇವ ವಚನಾಂಕಿತ ಪ್ರಕರಣದ ನಂತರ ಕೂಡಲ ಸಂಗಮದಲ್ಲಿ ಅವರೊಂದಿಗೆ ಎರಡು ತಾಸು ಚರ್ಚೆ ಮಾಡಿ ನಾಮಾಂಕಿತ ಹಿಂದೆ ಪಡೆದು ಬಸವ ಬಳಗದ ಸ್ವಾಸ್ಥ್ಯ ಕಾಪಾಡಲು ನಿವೇದಿಸಿಕೊಂಡಿದ್ದೆ. ಆದರೆ ಮಾತಾಜಿ ತಮ್ಮ ಪಟ್ಟು ಸಡಿಲಿಸದೇ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು ತುಂಬಾ ನೋವಾಯಿತು.
ಮತ್ತೆಂದೂ ನಾನವರನ್ನು ವೈಯಕ್ತಿಕವಾಗಿ ಭೇಟಿಯಾಗಲಿಲ್ಲ, ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಲೂ ಇಲ್ಲ.

ಸಾವಿರಕ್ಕೂ ಹೆಚ್ಚು ಬಸವಾದಿ ಶರಣರ ಕಾರ್ಯಕ್ರಮಗಳಲ್ಲಿ ಭಾಗಿಯಾದ ನನಗೆ ಮಾತಾಜಿಯವರಿಂದ ಮಾನಸಿಕವಾಗಿ ದೂರಾದ ನೋವು ಇಂದಿಗೂ ಕಾಡುತ್ತಿದೆ. ಮಾತಾಜಿ ಕೂಡಾ ತಮ್ಮ *ಟ್ರ್ಯಾಜಿಕ್ ಫ್ಲಾ* ಅರ್ಥವಾದರೂ ಒಪ್ಪಕೊಳ್ಳದೇ ಹಟಕ್ಕೆ ಬಿದ್ದರು.

ನಂತರದ ಲಿಂಗಾಯತ ಧರ್ಮದ ಚಳುವಳಿಯಲ್ಲಿ ಈ ಕಹಿ ಮರೆತು ಮಠಾಧೀಶರೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಲು ಬಸವ ಚೈತನ್ಯವೇ ಕಾರಣ.
*ಇದೊಂದು ದೋಷ ಬಿಟ್ಟರೆ ಮಾತಾಜಿ ಅವರ ಸಾಧನೆ ಅನನ್ಯ, ಅಧ್ಬುತ,ಅಪರೂಪ*.
ಬೇರೆಯವರ ಬಸವ ಸಾಧನೆಯೂ ಕೂಡ ಮಾತಾಜಿಯವರ ಮಹಾಮಾರ್ಗದಂತೆ ಗೋಚರಿಸುತ್ತದೆ. ಮಾತಾಜಿಯವರಿಗೆ ಮಾತಾಜಿಯವರೇ ಸರಿಸಾಟಿ.

ತಮ್ಮ ಆರೋಗ್ಯ ಲೆಕ್ಕಿಸದೇ ಇಡೀ ಪ್ರಪಂಚ ಸುತ್ತಿ *ಬಸವಪ್ರಜ್ಞೆ* ಬಿತ್ತಿ ಬೆಳೆಸಿದರು.
ಇಂದು ಇಡೀ ಜಗತ್ತು ಬಸವಾದಿ ಶರಣರ ಸಾಹಿತ್ಯ ಅರ್ಥ ಮಾಡಿಕೊಳ್ಳಲು ಕಾರಣರಾದವರಲ್ಲಿ ಲಿಂಗಾನಂದರು ಹಾಗೂ ಮಾತಾಜಿಯವರು ಅಗ್ರಮಾನ್ಯರು.

ತಮ್ಮ ಗುರುಗಳ ಕಾಲ ನಂತರದಲ್ಲಿಯೂ ಬಸವ ಬಳಗವನ್ನು ಸಾಂಸ್ಥಿಕವಾಗಿ ಕಟ್ಟಿ ಬೆಳೆಸಿದರು. ಅವರ ಸಂಘಟನಾ ಶಕ್ತಿ ಅದ್ವಿತೀಯ.
ಲಿಂಗದೇವ ವಚನಾಂಕಿತ ಪ್ರಕರಣವನ್ನು ಬದಿಗಿರಿಸಿ ನೋಡಿದಾಗ ಮಾತಾಜಿಯವರು ಮಾಡಿದ ಸಾಧನೆ ಬೆರಗು ಮೂಡಿಸುವಂತಹದು.

ಎಡಬಿಡದ ಕಾರ್ಯಚಟುಕೆಗಳಿಂದಾಗ ಆರೋಗ್ಯ ಹಾಳಾಯಿತಾದರೂ ಅದನ್ನವರು ಲೆಕ್ಕಿಸದೇ ದುಡಿದ ಅವರ ಜೀವನೋತ್ಸಾಹ ಅನುಕರಣೀಯ, ಅದಮ್ಯ,ಅಪ್ರತಿಮ.
ನಿಮಗೆ ಸಾವಿರದ ಶರಣು ತಾಯೇ.
ನೀವು ಸದಾ ನಮ್ಮ ಮನದಲ್ಲಿ ಮಹಾ ಬೆಳಗಿನ ಬೆರಗಾಗಿ ನೆಲೆಗೊಂಡಿದ್ದೀರಿ.

*ಸಿದ್ದು ಯಾಪಲಪರವಿ*

Sunday, March 10, 2019

ಕನ್ನಡದ ಅಸ್ಮಿತೆ

*ಒಂದು ಪ್ರತಿಕ್ರಿಯೆ*

ಪದ್ಮರಾಜ ದಂಡಾವತಿ: ಕನ್ನಡ ಚುನಾವಣೆ ವಿಷಯ... ‌( ಪ್ರಜಾ ಮತ, ೨ ಮಾರ್ಚ್ , ೨೦೧೮)

*ಕನ್ನಡದ ಅಸ್ಮಿತೆ ಚುನಾವಣಾ ದಾಳವಾಗದು*.

ದಂಡಾವತಿಯವರು ಕನ್ನಡ ಹೋರಾಟ ನಡೆದು ಬಂದ ಬಗೆಯನ್ನು ಅರ್ಥಪೂರ್ಣವಾಗಿ ವಿವರಿಸಿ ಎಚ್ಚರಿಸಿದ್ದಾರೆ.

ನೆರೆ ರಾಜ್ಯಗಳಾದ ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳ ಜನರಷ್ಟು ಭಾಷಾಭಿಮಾನ ಕನ್ನಡಿಗರದಲ್ಲ.

ಇಂಗ್ಲಿಷ್ ಮಾಧ್ಯಮ ಶಿಕ್ಷಣದ ದಾಸರಾದ ಮಧ್ಯಮ ವರ್ಗದ ಕನ್ನಡಿಗರು ಕನ್ನಡದಿಂದ ದೂರ ಸರಿದಿದ್ದಾರೆ.

ಮಾತೃಭಾಷೆಯ ಶಿಕ್ಷಣದ ಮಹತ್ವದ ಕುರಿತು ಕುವೆಂಪು ಆದಿಯಾಗಿ ಜಗತ್ತಿನ ಎಲ್ಲ ಶಿಕ್ಷಣ ತಜ್ಞರು ಗಂಟಲು ಹರಿದುಕೊಂಡರೂ ಗ್ರಹಿಸಲಾಗದ ಕಿವುಡರು ನಾವು.

ಮಾತೃ ಭಾಷಾ ಶಿಕ್ಷಣದ ಮಹತ್ವ ಒಂದು ಸಮೂಹ ಪ್ರಜ್ಞೆಯಾಗಿ ಉಳಿಯಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಕನ್ನಡ ನಾಶವಾಗಲು ಹೋರಾಟದ ಮುಂಚೂಣೆಯಲ್ಲಿರವವರ ನೈತಿಕ ಪ್ರಶ್ನೆಯೂ ಕಾರಣ.

ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ವೇದಿಕೆ ಮೇಲೆ ಮಾತನಾಡುವ ಶಿಕ್ಷಣತಜ್ಞರು, ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕೊಡಿಸಿ ನೈತಿಕ ಮಟ್ಟ ಕಳೆದುಕೊಂಡಿರುವುದು ಕನ್ನಡದ ದೌರ್ಭಾಗ್ಯ.

ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಬಲಶಾಲಿಯಾಗಿ ಉಳಿದಿದೆ. ಪುಸ್ತಕ ಪ್ರೇಮದ ಅನನ್ಯತೆಯನ್ನು ಪ್ರಶ್ನಿಸಲಾಗದು.

ಆದರೆ ತಮ್ಮ ಮುಂದಿನ ಜನಾಂಗಕ್ಕೆ ಶಿಕ್ಷಣ ಕೊಡುವ ವಿಷಯ ಬಂದ ಕೂಡಲೇ ಎಲ್ಲ ಮಂಗಮಾಯ,ಅಯೋಮಯ.

ಮಾತೃಭಾಷಾ ಶಿಕ್ಷಣದ ಕುರಿತು ಮಾತನಾಡುವ ಧ್ವನಿಗಳು ಅಡಗಿ ಹೋಗಿವೆ.

ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಇಚ್ಛಾಶಕ್ತಿ ಯಾರಲ್ಲೂ ಉಳಿದಿಲ್ಲ.

ರಾಜಕಾರಣಿಗಳು, ಶಿಕ್ಷಣತಜ್ಞರು, ಕನ್ನಡ ಪರ ಹೋರಾಟಗಾರರಿಗೆ ಕನ್ನಡ ಹೊಟ್ಟೆಪಾಡು ಆದರೆ ಕರುಳ ಸಂಬಂಧವಾಗಲೇ ಇಲ್ಲ.

ಭಾಷೆ,ನೆಲ,ಜಲ ನಮ್ಮ ರಾಜಕೀಯ ಹೋರಾಟದ ವಿಷಯವಾಗಿ ಈಗ ಉಳಿದಿಲ್ಲ.

ರಾಷ್ಟ್ರೀಯ ಪಕ್ಷಗಳ ಗುಲಾಮರಾಗಿರುವ ನಮ್ಮ ರಾಜಕೀಯ ನಾಯಕರುಗಳಿಗೆ ನಾಡು,ನುಡಿ ಮಹತ್ವವಾಗುವ  ಪ್ರಶ್ನೆಯೇ ಅಲ್ಲ.

ಭಾಷೆಯನ್ನು ಮುಂದಿಟ್ಟುಕೊಂಡು ಗೆಲ್ಲುವ ವಾತಾವರಣವಿಲ್ಲ. ಹಾಗಾಗಿ ಕನ್ನಡ ಭಾಷೆ ತನ್ನ ಅಂತಃಸತ್ವ ಕಳೆದುಕೊಂಡಿದೆ.

ಒಂದೆಡೆ ಮಾತೃಭಾಷಾ ಶಿಕ್ಷಣವನ್ನು ಬೆಂಬಲಿಸುವ ಸರಕಾರ ನ್ಯಾಯಾಂಗದ ಮೂಲಕ ಪಾಲಕರ ಹಕ್ಕನ್ನು ಎತ್ತಿ ಹಿಡಿಯುವ ತೀರ್ಮಾನದ ನೆಪ ಒಡ್ಡುತ್ತದೆ. ಸರಕಾರಿ  ಶಾಲೆಗಳನ್ನು ಸಂಖ್ಯೆಯ ಕೊರತೆಯ ನೆಪದ ಮೂಲಕ ಮುಚ್ಚುವ ಹುನ್ನಾರ.

ಸ್ವತಃ ರಾಜಕಾರಣಿಗಳು ನಡೆಸುವ ಇಂಗ್ಲಿಷ್ ಮಾಧ್ಯಮ ಶಾಲೆಗಳ ರಕ್ಷಣೆ ಮಾಡುವ ಹಿಡನ್ ಅಜೆಂಡಾ ಈಗ ಓಪನ್ ಸಕ್ರೆಟ್.

ಪಾಲಕರ ನಿರಾಸಕ್ತಿ, ರಾಜಕಾರಣಿಗಳ ಹಿಪೊಕ್ರೆಟಿಕ್ ನಿಲುವಿನಿಂದ ಭಾಷೆ ಈಗ ಉಳಿಯುವುದಿಲ್ಲ.

ಯುವಕರು, ವಿದೇಶದಲ್ಲಿ ಕೆಲಸ ಮಾಡುವ ಟೆಕ್ಕಿಗಳು ಮಾತೃಭಾಷೆಯ ಮಹತ್ವ ಅರ್ಥಮಾಡಿಕೊಂಡು ಭಾಷೆಯ ಉಳಿವಿಗಾಗಿ ಹೆಣಗಾಡುತ್ತಿರುವುದೂ ಹೊಸ ಭರವಸೆ.

ತಂತ್ರಜ್ಞಾನದ ವಿಪರೀತ ಬಳಕೆ, ಈಗಿನ ತಲೆಮಾರಿನ ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದಾಗಿ ಮಕ್ಕಳು ಕನ್ನಡ ಭಾಷೆಯ ಗ್ರಹಿಕೆಯಿಂದ ವಂಚಿತರಾಗಲು ನಾವೇ ಕಾರಣ.

ಮುಂದೆ ಇದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ನಮ್ಮ ಮೂರ್ಖತನವನ್ನು ಶಪಿಸುವದರಲ್ಲಿ ಸಂಶಯವಿಲ್ಲ.

ಆದ್ದರಿಂದ ಕನ್ನಡ ಭಾಷೆ ಈಗ ಚುನಾವಣಾ ವಿಷಯವಾಗುವುದಿಲ್ಲ. 

----ಸಿದ್ದು ಯಾಪಲಪರವಿ.

Tuesday, March 5, 2019

ನೀನು ಧ್ಯಾನ

*ನೀನು, ಧ್ಯಾನ,ಕಾಮ‌‌ ಮತ್ತು ದೇವಸಮಯ*

ದೇವಸಮಯದಲಿ ನೀ ಸಿಕ್ಕದ್ದಷ್ಟೇ ನೆನಪು, ಮುಂದಿನದೆಲ್ಲ ಅನಿರೀಕ್ಷಿತ ತುಂಬ ತುಂಬಾ ಅನಿರೀಕ್ಷಿತ!
ಬದುಕಿನ ಹುಡುಕಾಟಕೆ ನೂರಾರು ಉದ್ದೇಶವೋ, ದುರುದ್ದೇಶವೋ ನಾ ಕಾಣೆ.‌ ಒಟ್ಟು ಹುಡುಕಾಟವಿರುತ್ತದೆ. ಗಂಡಸಿನ ಮನಸು ಒಂದರ್ಥದಲ್ಲಿ ತುಡುಗ ದನ, ಅವಕಾಶಕ್ಕಾಗಿ ಕಾಯುವ ಅಷ್ಟಾವಂಕ ಅಥವಾ ಅಷ್ಟಾವಕ್ರನಂತೆ. ಅವಕಾಶ ಸಿಕ್ಕರೆ ಒಂದು ಕೈ ನೋಡಿಯೇ ಬಿಡುವ ಹೀನ ಚಪಲ.

*ಆದರೆ ನಾನು ಹೆಣ್ಣನ್ನು ಹೀಗೆ ವ್ಯಾಖ್ಯಾನಿಸುವಷ್ಟು ನೀಚನಾಗಲಾರೆ.ಅವಳಿಗಿರುವ ಸಂಯಮ ಅಪರೂಪ, ಅನುರೂಪ ಹಾಗೂ ಅನನ್ಯ*.

ಪ್ರತಿಯೊಬ್ಬ ಗಂಡಸಿನ ಮೊದಲ ಸೆಳೆತ ಹೆಣ್ಣು ಅಂತಾರೆ ನಂತರ ಹೊನ್ನು ಮತ್ತು ಮಣ್ಣು ,‌ ಆದರಿದು ಅವರವರ ಅಭಿರುಚಿ, ಆಸಕ್ತಿ ಮತ್ತು ವಯೋಮಾನಕ್ಕೆ ಸಂಬಂಧಿಸಿದ್ದು ಬಿಡಿ. ಈಗ ನಾ ನನ್ನ ಮಿತಿಯನಷ್ಟೇ ಮಾತಾನಾಡುವೆ.‌ ಮಾತನಾಡಬೇಕು ಕೂಡ!
I have no right to speak on others.

ಒಟ್ಟಾರೆ ನಾ ಹುಡುಕಿದ್ದು ನಿಜ. ಒಮ್ಮೆಲೇ ಆ ಹುಡುಕಾಟ ನಿಲ್ಲಿಸುವ ಆಲೋಚನೆ ದಟ್ಟವಾಗಲು ನನ್ನ ವಯೋಮಾನ ಕಾರಣವಾಯಿತು. ಉಳಿದ ಆಧ್ಯತೆಗಳು ಆವರಿಸಲಾರಂಭಿಸಿದವು. ಅದೇ ಹೆಸರು, ಕೀರ್ತಿ, ಜವಾಬ್ದಾರಿ, ಹಣ, ಆಸ್ತಿ ಹೀಗೆ ಹೊಸ ಆಸೆಗಳ ಮಧ್ಯೆ ನೀ ಧುತ್ತೆಂದು ಕಾಣಿಸಿಕೊಂಡಾಗ ಎಲ್ಲ ಉಲ್ಟಾ ಪಲ್ಟಾ.

ಹಾಗೆ ಮಾತು ಕತೆ ಮುಂದುವರೆದಾಗ ನೀ ಕಳೆದು ಹೋದೆ, ಬದುಕಿನಲಿ‌ ಯಾವತ್ತೂ ಕಳೆದು ಹೋದವಳೇ ಅಲ್ಲ ಎಂದು ಗೊತ್ತಾದಾಗ ನಂಬಲಾಗಲೇ ಇಲ್ಲ ಆದರೀಗ ನಂಬಿದ್ದೇನೆ, ನಂಬುವುದು ಧರ್ಮ.

ಬಂಗಾರ ಪರೀಕ್ಷೆ ಮಾಡಲು ಅತಿಯಾಗಿ ತಿಕ್ಕಿದರೆ ಅಂದ ಕಳೆದುಕೊಳ್ಳುತ್ತದೆಯೋ ಹೊರತು ಅದು ಕಬ್ಬಿಣವಾಗುವುದಿಲ್ಲ. ಈಗ ತಿಕ್ಕುವ ತಿಕ್ಕಲುತನ ನಿಲ್ಲಿಸಿ ಹಗುರಾಗಿದ್ದೇನೆ. ನೀ ಅಂತವಳಲ್ಲ ಎಂಬ ಸತ್ಯ ಅಂದರೆ ಸತ್ಯ ಅಷ್ಟೇ.

ಹಲವು ಭೇಟಿ, ಚರ್ಚೆಗಳ ನಂತರ ಹೆಚ್ಚು ಹತ್ತಿರ ಆಗಿದ್ದು ದೈವ ಕೃಪೆ. ಆಧ್ಯಾತ್ಮಿಕ ಬದುಕ ಅನುಭವಿಸಿದ ಮೇಲೆ ಯಾಕೋ ಮೋಸ ಮಾಡಿಕೊಳ್ಳುವ ಮನಸಾಗಲಿಲ್ಲ. ಸಣ್ಣಗೆ ಪಾಪ ಪ್ರಜ್ಞೆ ಕಾಡಲಾರಂಭಿಸಿ “ಯಾಕೆ ಹೀಗಾಯ್ತು ? “ ನಂಬಿದ ದೇವರಿಗೆ ನಿರ್ಮಲವಾಗಿ ಪ್ರಶ್ನಿಸಿದೆ. ಉತ್ತರ ಸಿಕ್ಕಿತು.

ಇದು ಕೇವಲ ಯೋಗಾಯೋಗ ಅಂದುಕೊಂಡು ಪಯಣ ಮುಂದುವರೆಸಿದೆ. ದಕ್ಕಿಸಿಕೊಳ್ಳುವ ಕಾರಣದಿಂದಾಗಿ ಏನೇನೋ ಯೋಚನೆ,ಯೋಜನೆ, ಆಯೋಜನೆ ತಾನೇ ತಾನಾಗಿ ರೂಪಗೊಂಡವು.
ನೀನು ಯಾವುದು ಅಸಾಧ್ಯ ಅಂದಿದ್ದೆ ಅದೆಲ್ಲ ಸಾಧ್ಯವಾಗುವ ವಾತಾವರಣ ಸೃಷ್ಟಿಯಾಯಿತು.
ಹಳೆಯ ಸುದೀರ್ಘ ಬಂಧನ‌ ಅವರಾಗಿಯೇ ಕಡಿದಾಗ ನಿನ್ನಂತೆ ನನಗೂ ಆಶ್ಚರ್ಯ!

‘ ಅರೆ ಇದು ಹೇಗೆ ಪಕ್ಕದಲ್ಲಿ ಇದ್ದವರು ತಾವೇ ಹೇಗೆ, ಯಾಕೆ ದೂರಾದರು’  ಅದನ್ನು ನಾವಿಬ್ಬರೂ ಊಹಿಸಿರಲಿಲ್ಲ.

ದೈವ ಕೃಪೆ ಹೊಸ ಅನುಬಂಧದ ಪರವಾಗಿರಲು ಕಾರಣ ತೀವ್ರ ತುಡಿತವಿರಬೇಕು ಅಂದುಕೊಂಡೆವು, ಆದರೆ ಬರೀ ತುಡಿತವಿದ್ದರೆ ನಾವು ಮೈ ಮರೆತು ಅನಾಹುತ ಮಾಡಿಕೊಂಡು ಸಿಕ್ಕು ಬೀಳುತ್ತಿದ್ದೆವು.

ನಾನಂತೂ ದೇವರನ್ನು ಗಟ್ಟಿಯಾಗಿ ಹಿಡಿದುಕೊಂಡೆ, ಬೇರೆ ದಾರಿಯೇ ಇರಲಿಲ್ಲ, ಹೆದರಿ ದೂರಾಗುವ ಮನಸು ಇರಲಿಲ್ಲ, ದಕ್ಕಿಸಿಕೊಳ್ಳಲು ನೂರಾರು ಕಾರಣಗಳು ಸಹಜವಾಗಿ ಹುಟ್ಟಿಕೊಂಡವು.
ವಿಧಿ, ಋಣಾನುಬಂಧ ಹೀಗೆ ಏನೇನೋ ವ್ಯಾಖ್ಯಾನಿಸುತ್ತ ಹೋದೆವು. ಅದು ಅನಿವಾರ್ಯ ಇತ್ತು. ನಿನಗೆ ಒಮ್ಮೊಮ್ಮೆ ರೋಸಿ ಹೋಗಿ ಸಂಬಂಧ ಕಡಿದು ಕೊಳ್ಳುವಷ್ಟು ಕಿರಿಕಿರಿ ಆದರೂ ಸಹಿಸಿಕೊಂಡೆ ಕಾರಣ?

‘ಹಳೆಯ ಬಂಧನದಿಂದ ಸಂಪೂರ್ಣ ಹೊರ ಬಂದಿದ್ದೆ ನಾನು ದೂರಾದರೆ?’ ಇಂತಹ ಆತಂಕಕಾರಿ ಪ್ರಶ್ನೆಗಳು ನಿನ್ನನ್ನು ಕಟ್ಟಿ ಹಾಕಿ ನರಳುವಂತೆ ಮಾಡಿದವು.

ಸಮಾಜದ ಮುಖವಾಡಗಳ ಕಿತ್ತಿ ಬಿಸಾಕಿದೆ, ವ್ಯವಸ್ಥೆಗೆ ನೀ ಅನಿವಾರ್ಯ ಎಂಬ ಭ್ರಾಂತು ಬಿಡಿಸಲು ತುಂಬ ಸಮಯ ತೆಗೆದುಕೊಂಡೆ. ಏನೇ ಆಗಲಿ ಹಟಕ್ಕೆ ಬಿದ್ದು ದಕ್ಕಿಸಿಕೊಂಡೆವು, ಆ ಮಾತು ಬೇರೆ.

                                    ***

ಇದು ಪರಸ್ಪರ ದಕ್ಕಿಸಿಕೊಂಡ ಬಗೆಯಾದರೆ ಉಳಿದಿರುವ ಸಂಗತಿಗಳಿಲ್ಲಿ ನೆನಪಿಸಬೇಕು.
ಗಂಡು ಹೆಣ್ಣಿನ ಲವ್ ಮೇಕಿಂಗ್ ಆಯಾಮಾಗಳನ್ನು ಮಿಲನ ಅಂತಾರೆ, ಮಿಲನೋತ್ಸವ ಅಂತಾರೆ ನಾ ತುಂಬ ಸಡಗರದಿ‌ಂದ *ಮಿಲನಮಹೋತ್ಸವ* ಎಂದು ಬರೆದು ಬಿಟ್ಟಿದ್ದೆ ಆದರದು ಕೇವಲ ಅಕ್ಷರದ ಸಂಭ್ರಮವಾಗಿತ್ತು.

ಮಾನವೀಯ ಸಂಬಂಧಗಳನ್ನು ಕಟು ವಾಸ್ತವದಲಿ ಓಶೋ ವಿವರಿಸುವದನ್ನು ಕೇಳಿದಾಗ *ಇಂಪಾಸಿಬಲ್* ಅನಿಸುತ್ತಿತ್ತು. ಒಬ್ಬ ಅಷ್ಟೊಂದು ಗಟ್ಟಿಯಾಗಿ ಹೇಳಲು ಅವನ ಜೀವನಾನುಭವವೇ ಕಾರಣ ಎಂಬ ಸತ್ಯ ಗೊತ್ತಿದ್ದರೂ ಗುಮಾನಿಸಿದ್ದೆ. ಅವನು ಮಿಲನದ ಕುರಿತು ಹೇಳಿದ್ದು ಪ್ರಯೋಗಿಸಬೇಕೆಂಬ ಬೇಗುದಿ ಸುಪ್ತಮನಸಲಿ ಸುಳಿದಾಡುತ್ತಿತ್ತು
ಅಂತಹ ಪ್ರಯೋಗದ ಕುರಿತು ಅನಿವಾಸಿ ಸಂಗಾತಿಯೊಬ್ಬರೊಂದಿಗೆ ಮಾತಾಡಿದ್ದೆ.

ಗಂಡು ತನ್ನ ಸಂಗಾತಿಯ  ಪರಮಸುಖ ಲೆಕ್ಕಿಸದೇ ವಿಸರ್ಜಿಸಿ ಹಗುರಾಗಿ ಮುಗಿಸುವ ಸಮಭೋಗ ವ್ಯವಹಾರದಲ್ಲಿ ಮಿಲನವೂ ಇಲ್ಲ ಮಹೋತ್ಸವವೂ ಇಲ್ಲ ಅದೊಂದು ಕೇವಲ ಕೆಲ ನಿಮಿಷಗಳ ಕ್ರಿಯೆ. ಮೊದಲಾಟದ  ಪ್ರೇಮದ ಉತ್ತುಂಗಕೇರಲು ಇಬ್ಬರೂ ವಂಚಿತರಾಗಲು ಅವಸರವೇ ಕಾರಣ.
ಮಿಲನ ಹೇಗಿರಬೇಕೆಂದು ಓಶೋ ವಾತ್ಸಾಯನನ್ನು ಮೀರಿಸುವಂತೆ ಹೇಳಿ ಎಚ್ಚರಿಸಿದರೂ ಇಂದಿಗೂ ಅದೊಂದು ಅತ್ಯವಸರದ ವಿಸರ್ಜನೆಯಾಗಿ ಉಳಿದಿದೆ ಮಹೋತ್ಸವದ ಸಡಗರ ವಿರಳಾತಿ ವಿರಳ.

ಓದು,ಬರಹ,ಧ್ಯಾನದ ಮಹತ್ವ ಅರಿತ ಮನಸು ಆ ರೀತಿಯ ಮಹೋತ್ಸವದ ಆಚರಣೆಗಾಗಿ ತುಡಿಯುತ್ತಿತ್ತು.
‘ಆ ರೀತಿಯ ಸಂಗಾತಿಗಳು, ಶಿಷ್ಯರು, ಸ್ನೇಹಿತರು ದೇವಸಮಯದಲಿ ಮಾತ್ರ ಸಿಗುತ್ತಾರೆ’ ಎಂಬ ವೀಣಾ ಬನ್ನಂಜೆಯವರ ಮಾತನ್ನು ನೆನಪಿಸಿಕೊಂಡೆ.
ಈ ಮಾತು ಲಂಪಟರಿಗೆ, ಫ್ಲರ್ಟ್ ಗಳಿಗೆ ಅನ್ವಯಿಸಲಾರದು ಕೂಡ.
ನಾನು ಲಂಪಟನಲ್ಲವಾದರೂ ಚಂಚಲದ ಹುಡುಕಾಟ, ಕುತೂಹಲ ನಿಂತಿರಲಿಲ್ಲ. ಬಹುಶಃ ಸಿಕ್ಕವರು ದೇವಸಮಯದಲಿ ಸಿಕ್ಕಿರಲಿಲ್ಲವೇನೋ?

ನನ್ನ ಪೂರ್ವಾಪರ ಮುಕ್ತವಾಗಿ, ಪ್ರಾಮಾಣಿಕತೆ ಹೇಳಿಕೊಳ್ಳುವ ಧೈರ್ಯ ನನ್ನದು.
ನೀ ತುಂಬ ಮುಜುಗರ ಪಟ್ಟುಕೊಂಡದ್ದು ಅಸಹಜವೇನಲ್ಲ.
ಪ್ರೀತಿ, ಜೀವನೋತ್ಸಾಹ ಹಾಗೂ ಸಹನೆಯಿಂದ ನಿನ್ನನ್ನು ಸಂಪೂರ್ಣ ಆಕ್ರಮಿಸಲು ತೀರ್ಮಾನಿಸಿದೆ. ನೀನಿರುವ ವಾತಾವರಣದಲ್ಲಿ ಅದು ಅಸಾಧ್ಯ ಎಂದು ನೀ ಅಂದುಕೊಂಡಿದ್ದೆ, ನನಗೆ ಹಾಗನಿಸಿರಲಿಲ್ಲ.
ನನದೊಂದು ರೀತಿಯ ಅವಾಸ್ತವದ ಸಾತ್ವಿಕ ಹಟ, ಅದರಲ್ಲಿ ಸ್ವಾರ್ಥ ಇರಬಹುದು ವಂಚನೆ, ಮೋಸ ಮಾತ್ರ ಇರಲಿಲ್ಲ.
ನಂಬಿದ ದೇವರ ಪಾಲಿಗೆ ವಾಮ-ಕ್ಷೇಮ ಬಿಟ್ಟು ಭಂಡ ಧೈರ್ಯದಿಂದ ಮುನ್ನುಗ್ಗಿದೆ.

ವಾದ-ವಿವಾದ-ಜಗಳ-ಕಿರಿಕಿರಿಯಿಂದ ಮುಕ್ತರಾಗುವುದು ಯಾಕೋ ಇಂದಿಗೂ ಸಾಧ್ಯವಾಗುತ್ತಿಲ್ಲವಾದರೂ ಅನುಬಂಧ ಮಾತ್ರ ಗಟ್ಟಿಯಾಗಿ ಉಳಿದಿದೆ, ಉಳಿಯುತ್ತೆ.
ಯಾಕೆಂದರೆ ಇಲ್ಲಿ ಬರೀ ವ್ಯಾಮೋಹ, ಕಾಮನೆಗಳಿಲ್ಲ. ಓದಿದೆ,ಬರಹವಿದೆ, ಚಿಂತನೆಯಿದೆ, ಸಾಹಿತ್ಯದ ಗುರಿಗಳೂ ಇವೆ. ಬರೀ ತೀಟೆ, ತೆವಲುಗಳಿದ್ದರೆ ಯಾವುದೂ ಉಳಿಯುವುದಿಲ್ಲ.

                               ***

ದೇಹದಾಚೆಗಿನ ಈ ಬಂಧನ ಇನ್ನೂ ಬೆಸೆದುಕೊಳ್ಳಲು ದೇಹಾದಾಟದ ಗಮ್ಮತ್ತು ಬಹುದೊಡ್ಡ ಕಾರಣ ಎಂಬುದ ನಿರಾಕರಿಸಲಾಗದು.
“ದೇಹವೇ ದೇವಾಲಯ” ಬಸವಣ್ಣ ಹೇಳಿದ್ದು ಯಾವ ಕಾರಣಕ್ಕೆ?, “ಆಹಾರವ ಕಿರಿದು ಮಾಡಯ್ಯ” ಎಂದು ಅಕ್ಕ ಅದೇ ದೇಹದ ಆರೋಗ್ಯ ಕಾಪಾಡಲು,  ಆದರೆ‌ ನಾವು ತಿಂದು ತೇಗಿ ದೇಹವ ದೇವಾಲಯ ಮಾಡದೇ ಕಸದ ಗುಂಡಿಯಾಗಿಸಿದ್ದೇವೆ.
ಮನಸನ್ನು ಕೊಳೆತು ನಾರುವ ಹೆಣದ ಹಾಗೆ ಇಟ್ಟುಕೊಂಡಿದ್ದೇವೆ. ಆದರೆ ಬಾಯಿಂದ ಬರೀ ವೇದಾಂತ ಹೇಳುವ ಹುಳುಗಳು ನಾವೆಂಬುದ ಮರೆತುಬಿಟ್ಟಿದ್ದೇವೆ.

ಓಶೋ ಹೇಳಿದ ಮಹೋತ್ಸವಕೆ ಮನಸನು ಹದಗೊಳಿಸಿದೆ, ಆಹಾರವ ಕಿರಿದು ಮಾಡಿದೆ, ದೇಹವ ದೇವಾಲಯ ಎಂದು ನಂಬಿ ನನ್ನ ನಾ ಕನ್ನಡಿಯೊಳು ನೋಡಿಕೊಂಡೆ. ಹೊಸ ಹೊಳವೊಂದು ಮಿಂಚಿ ಮಾಯವಾಗದಂತೆ ಗಪ್ಪನೆ ಹಿಡಿದುಕೊಂಡೆ.

ಮನಸು ನೆಲೆಸುವ ದೇಹಕೂ ಅದರದೇ ಆದ ತಾಕತ್ತಿದೆ, ಕಂಪನಗಳಿವೆ, ಆ ವೈಬ್ರೇಶನ್ನುಗಳನ್ನು ನಾವು ಅನುಭವಿಸುವಷ್ಟು ಧ್ಯಾನಸ್ಥ ಸ್ಥಿತಿಗೇರುವುದೇ ಇಲ್ಲ. ನಮಗೆ ಆ ಸಹನೆಯೇ ಇಲ್ಲ *ಅವಸರ ಬರೀ ಅವಸರ ಗಡಿಬಿಡಿ*.

*ದೇಹದಾಟದ ಗಮ್ಮತ್ತಿನಲ್ಲೂ ಧ್ಯಾನವಿದೆ, ಆಲಿಸುವ ಸಂಗೀತದಲ್ಲಿಯೂ ಧ್ಯಾನವಿದೆ, ಓದುವ ಅಕ್ಷರಗಳಲೂ ಧ್ಯಾನವಿದೆ, ಬರೆಯುವ ಬೆರಳುಗಳಲೂ ಧ್ಯಾನವಿದೆ, ತಿನ್ನುವ ಕ್ರಮದಲೂ ಧ್ಯಾನವಿದೆ, ಹಾಕುವ ಹೆಜ್ಜೆಗಳಲೂ ಧ್ಯಾನವಿದೆ, ಆಡುವ ಮಾತಿನ ಪ್ರತಿ ಶಬ್ದಗಳಲೂ ಧ್ಯಾನವಿದೆ*.

ಧ್ಯಾನವೆಂದರೆ ಬರೀ ಕಣ್ಣು ಮುಚ್ಚಿ ಉಸಿರಾಡುವುದಲ್ಲ. ಮಲಗುವತನಕ ನಾವು ಕಳೆಯುವ ಪ್ರತಿ ಕ್ಷಣಗಳನ್ನು ನಾವೇ ಮೂರನೇ ವ್ಯಕ್ತಿಯಾಗಿ ಗಮನಿಸಿ ನಿಯಂತ್ರಿಸಿ ಸಮಾಧಾನದಿಂದ ನಡೆಯುವುದು.

ಮೊದಲು ಆ ಸಮಾಧಾನ ನಾವು ತುಂಬ ಬಯಸುವ ಕಾಮದಾಟದಿಂದ ಆರಂಭವಾಗಿ ಉಳಿದ ಕ್ರಿಯೆಗಳಿಗೆ ವ್ಯಾಪಿಸಬೇಕು. ಮುಪ್ಪಾದ ಮೇಲೆ ದೇಹ ತನ್ನ ಕಾಮಸತ್ವ ಕಳೆದುಕೊಳ್ಳುತ್ತದೆ ಆದರೆ ಮನಸು ಹಾಗಲ್ಲ. ಅದಕೆ ಮುಪ್ಪು ಇಲ್ಲ.
ದೇಹದಲಿ ಕಸುವಿದ್ದಾಗ ಮಾತ್ರ ದೇಹದೊಂದಿಗೆ ಆಟ ಆಡಬಹುದು;ಅದನ್ನು ಸರಿಯಾಗಿ ವ್ಯವಧಾನದಿಂದ ಆಡಬೇಕು.

                                 ***

ಅದೇ ಗಾಢವಾದ ಧ್ಯಾನಸ್ಥ ಸ್ಥಿತಿಯಲ್ಲಿ ಮೊದಲ ಭೇಟಿಗೆ ಅಣಿಯಾದೆ…

ಪಯಣದುದ್ದಕ್ಕೂ ನಿರರ್ಗಳವಾಗಿ ಮಾತನಾಡಿ ಸಲಿಗೆ ವ್ಯಾಪಿಸಿಕೊಂಡೆ. ಮನದಾಳದ ಆಸೆ ಹೇಳುವಾಗ ನಿನ್ನ ಮುಖ ಅರಳಿ ಸಮ್ಮತಿಸುತ್ತಲೇ ಹೋಯಿತು.
You looked more cheerful and gorgeous beyond your age and beauty because it was my deep love on you.

ಪ್ರೀತಿ ಇದ್ದ ಮೇಲೆ ಎಲ್ಲವೂ ಗೌಣ. ಪ್ರೀತಿ ಎಲ್ಲವನ್ನೂ ದಕ್ಕಿಸಿಕೊಳ್ಳುತ್ತದೆ, ಪ್ರೀತಿಗಾಗಿ ಮೈಮನ ಅರಳಿದ ಮುಸ್ಸಂಜೆ.
ಅಪರಿಚಿತ ಮನಸುಗಳು ಅಪರಿಚಿತ ಜಾಗ ತಲುಪಿದಾಗ ನಡು ರಾತ್ರಿ. ನಳನಳಸುವ ದೀಪಗಳಲಿ ಓಡುವ ವೇಗದಲಿ ಇಬ್ಬರಲೂ ಕುತೂಹಲ.
ಸುಸಜ್ಜಿತ, ಸುರಕ್ಷಿತ ಜಾಗ ತಲುಪಿದಾಗ ಸುದೀರ್ಘ ನಿಟ್ಟುಸಿರು.

                      ***
ಮಂದ ಬೆಳಕಲಿ ನಾ ಕಂಡ ಕನಸ ಸಾಕಾರಗೊಳಿಸುವ ತೀವ್ರತೆ. ಸ್ವಲ್ಪ ಸಹನೆ ಕಳೆದುಕೊಂಡರೆ ಎಲ್ಲ ಕೈ ಬಿಟ್ಟು ಹೋಗುತ್ತದೆ ಎಂಬ ಒಳೆಚ್ಚರ ಜಾಗೃತವಾಗಿತ್ತು.
ಮಾತು ಮಾಯವಾಗಿ ಮೌನ ಬೆಳಗಲಾರಂಭಿಸಿದಾಗ ನೀ ಕೈಗೊಂಬೆಯಾದೆ. ನಿನಗೆ ಅದೆಲ್ಲ ಹೊಸದೆಂದು ನಾ ಊಹಿಸಿರಲಿಲ್ಲ.
ಪೂಜೆಯಂತೆ, ಧ್ಯಾನದಂತೆ, ಸಂಗೀತದಂತೆ ಸಹನೆಯ ಲಹರಿ ರಿಂಗಣವಾಡಿತು ನಮ್ಮ ಮೈಮನಗಳ ತುಂಬ.

ಮೊದಲಾಲಿಂಗನಕೆ ಕರಗಿ ಕೈಸೆರೆಯಾದೆ, ವಶೀಕರಣಕೊಂಡವಳಂತೆ ಎಲ್ಲವನ್ನೂ ಪರಿಪಾಲಿಸಿದೆ.
ಹೂಮಂಚದಲಿ ಅರಳಿದಾಗ ರಕ್ಕಸನಂತೆ ಭೋಗಿಯಾಗದೇ  ಯೋಗಿಯಾದೆ, ಸಹನೆಯ ಅವಗಾಹನೆ ಮಾಡಿಕೊಂಡೆ.

*ನನ್ನ ಕೈಲಿರುವ ವೀಣೆಯ ತಂತಿಗಳ ನವಿರಾಗಿ ಮೀಟಿದೆ, ನಾದ ಉನ್ಮಾದ ಹೊರ ಹೊಮ್ಮಿತು*

ಸಂಗೀತ ವಾದ್ಯಗಳ ಮೇಲೆ ಕೈಯಾಡಿಸಿ ನಾದ ಹೊರಡಿಸಬೇಕೇ ಹೊರತು ಒರಟಾಗಿ ಅಲ್ಲ.
ಎದುರಿಗೆ ಮೃಷ್ಟಾನ್ನ ಭೋಜನ ಗಬ ಗಬ ತಿನ್ನದೇ ಸವಿ ರುಚಿ ಅನುಭವಿಸಲು ನಿರ್ಧರಿಸಿದೆ.

ಹಾಲು-ಜೇನು, ಹಣ್ಣು-ಹಂಪಲು, ದ್ರಾಕ್ಷಾ ಗೊಂಚಲು, ಸಿಹಿ ತಿನಿಸುಗಳ ಒಂದೊಂದಾಗಿ ಸವಿಯುತ ತಟ್ಟೆ ತುಂಬ ಬೆರಳಾಡಿಸುವ ಅಭಿರುಚಿ ನೂರ್ಮಡಿಸಿದೆ.
ಸರ ಸರ ಹರಿದಾಡುವಾಗ ಭಾರ ಹಾಕಿ ಹಿಂಸೆಮಾಡದೇ ಹಕ್ಕಿಯಂತೆ ಗರಿಬಿಚ್ಚಿ ಕೊಂಚ ಅಂತರದಲಿ ಹಗುರಾಗಿ ಹಾರಿದೆ.

ಸಹನೆ-ನಿಯಂತ್ರಣಗಳ ಉಸಿರ ಏರಿತದ ಅನುರಣನ ಆಲಿಸಿದೆ.
ಇಡೀ ದೇಹದ ತುಂಬ ವ್ಯಾಪಿಸಿರುವ ಉನ್ಮಾದದ ಕಂಪ ಮೂಸಿದೆ.
ನೀ ಅರಳಿದ ಪರಿ… *ಸೂರ್ಯನುದಯಕೆ ತಾವರೆಯೇ ಜೀವಾಳ*
ಅರಳುತ್ತ ಅರಳುತ್ತ ಕೇಳಿದ್ದೆಲ್ಲ ಕೈಗಿತ್ತೆ. ಒಮ್ಮೆಲೇ ನುಗ್ಗಿದಾಗ ಸಂಭ್ರಮ ಮುಗಿಲು ಮುಟ್ಟಿತು. “ಹೊರ ಬರಲಾ” , “ಹೂಂ” ಮುಗುಳ ನಗುವಿನ ನಿವೇದನೆಗೆ ಅಷ್ಟೇ ಸಹನೆಯಿಂದ…
ಹಗುರಾಗುವ ಧಾವಂತ ಕೈ ಬಿಟ್ಟು ಹೊರ ಬಂದ ಪರಿ ಅನಿರೀಕ್ಷಿತ ನಿನಗೂ, ನನಗೂ…

ಇದೆಲ್ಲ ನಿಂಗೆ ಹೊಸದೆಂದು ತಿಳಿದಾಗ ನನಗೆ ಹೇಗಾಗಿರಬೇಡ!
ನನಗೂ ಹೊಸದೇ ನಾವು ಮದುಮಕ್ಕಳು ನಮಗಾಗಿ.
ಮಿಲನ ಮಹೋತ್ಸವ ಮುಗಿಯುವ ಸೂರ್ಯ ಕಣ್ಣುಬಿಟ್ಟಿದ್ದ ನಾವು ಕೊಂಚ ವಿರಮಿಸಿದಾಗ…
ಲೋಕದ ತುಂಬ ತೃಪ್ತಿ, ಸಂತೃಪ್ತಿ, ಮುಂದೆಂದೂ ಹಸಿವಾಗದಷ್ಟು ಉಂಡ ಮಹದಾನಂದ.
ಹಾಗೆ ಉಂಡರೆ ನಾವು ನಮ್ಮೊಂದಿಗೆ ಮಾತ್ರ ಎಂಬ ಖಚಿತತೆ.

ಪ್ರತಿ ಮಿಲನದಲೂ ಅದೇ ಸಹನೆ, ಅದೇ ಏಕಾಂತ, ತಾದಾತ್ಮಕತೆ, ಹೊಸತನದ ಕಂಪನ, ಅದೇ ಒಲವ ವರತೆ, ಮೆಲ್ಲುಸಿರ ಸವಿಗಾನ.
ದೇಹವೇ ದೇವಾಲಯ ಅದನು ಪೂಜಿಸಿ,ಆರಾಧಿಸಿ ಶುಚಿಯಾಗಿಡಬೇಕು‌. ಆ ಆರಾಧನೆಯಲಿ ನಿಯತ್ತು, ಪಾರದರ್ಶಕತೆ ವಿಜ್ರಂಭಿಸಬೇಕು.
*ಒಲವ ಹೂ ಹರಡಿ, ವಿಶ್ವಾಸದ ಪತ್ರಿಯನೇರಿಸಿ, ಪಿಸುಮಾತುಗಳ ಜಾಗಟೆ ಬಾರಿಸಿ, ಪ್ರೇಮದ ಕ್ಷೀರಾಭಿಷೇಕದಲಿ ಪೂಜಿಸಿ ನಮಿಸಬೇಕು*.

ನಾನೀ ಬೇಧವನಳಿಸಿ ಬೆರೆಯಬೇಕು ಹಾಲ ಜೇನಾಗಿ, ಕಲ್ಲು ಸಕ್ಕರೆಯಂತೆ ಕರಗಿ ಸವಿ ಹರಿಸಬೇಕು.
ದೇಹವಿದು ದೇವಾಲಯ ಅರಿತು ನಡೆದಾಗ, ಇಲ್ಲದಿರೆ ಮಾಂಸದ ಮಡಿಕೆ…
ಜಗಳ,ವಾದ,ವಿವಾದ ಅಹಂಕಾರ ಹಾಗೂ ಅಜ್ಞಾನ ಎಲ್ಲವೂ ಗೌಣ, ಮಂಗಮಾಯ ಈ ಮಿಲನದ ಸವಿ ಸಡಗರ ನೆನೆದು ಓಡೋಡಿ ಬಳಿ ಬಂದು ಬಿಗಿದಪ್ಪಿದಾಗ…
ನಿಲ್ಲಲಾಗದು ಮೆಲ್ಲುಸಿರ ಸವಿಗಾನ...ಮೆಲ್ಲುಸಿರ ಸವಿಗಾನ...