Showing posts with label ಮನದ ಮಾತು. Show all posts
Showing posts with label ಮನದ ಮಾತು. Show all posts

Tuesday, January 14, 2020

ಮಠಗಳ ಮಿತಿ

ಮಠಗಳ ಮಿತಿ ಮತ್ತು ರಾಜಕಾರಣ

ಕಳೆದ ಕೆಲವು ವರ್ಷಗಳಿಂದ ರಾಜ್ಯದ ಗೌರವಾನ್ವಿತ ಮಠಾಧೀಶರು ತಮ್ಮ ಸಂಯಮ ಕಳೆದುಕೊಂಡವರಂತೆ ವರ್ತಿಸುತ್ತಿರುವುದು ಧಾರ್ಮಿಕ ವಿಪರ್ಯಾಸ.

ಮಠಗಳು ಅಧ್ಯಾತ್ಮ ಮತ್ತು ಶ್ರದ್ಧಾ ಕೇಂದ್ರಗಳಾಗಬೇಕು.

ಸಂಸಾರಗಳಿಗೆ,ಲೌಕಿಕರಿಗೆ ಮನಸಿಗೆ ಬೇಸರವಾದಾಗ ಕಾಲ ಕಳೆದು ನೆಮ್ಮದಿ ನೀಡುವ ಶಾಂತಿ ಧಾಮಗಳಾಗಬೇಕು.

ಸಮಾಜದ ಪ್ರತಿಯೊಂದು ಜಾತಿ,ಧರ್ಮದ ಪೀಠಾಧಿಪತಿಗಳು ತಮ್ಮ ಪೀಠಗಳ ಅಧಿಕಾರವನ್ನು ತಮ್ಮ ಸಮಾಜದ ರಾಜಕಾರಣಿಗಳಿಗೆ ಮೀಸಲಿಟ್ಟವರಂತೆ ಅಸೂಕ್ಷ್ಮವಾಗಿ ದಯವಿಟ್ಟು ವರ್ತಿಸಬಾರದು. 

ರಾಜಕೀಯ ವ್ಯವಸ್ಥೆಯಲ್ಲಿ ಪ್ರತಿಯೊಂದು ಪಕ್ಷಗಳು ತಮ್ಮ ಸಿದ್ಧಾಂತ ಮತ್ತು ಆಂತರಿಕ ಪರಸ್ಥಿತಿಗನುಗುಣವಾಗಿ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತವೆ.

ಪಕ್ಷದ ಶಾಸಕಾಂಗ ಸಭೆ ಮತ್ತು ಪದಾಧಿಕಾರಿಗಳು ತೆಗೆದುಕೊಳ್ಳಬಹುದಾದ ಆಂತರಿಕ ನಿರ್ಣಯಗಳ ಕುರಿತು ಧಾರ್ಮಿಕ ಮಠಗಳು ಬಹಿರಂಗ ಚರ್ಚೆ ಮಾಡುವುದು ಅಕ್ಷಮ್ಯ.

ಯಾವುದೇ ಧರ್ಮ ಮತ್ತು ಸಿದ್ಧಾಂತ ಈ ರೀತಿ ಆದೇಶ ಮಾಡುವ ಅಧಿಕಾರ ನೀಡಿಲ್ಲ ಎಂಬುದನ್ನು ಮಠಾಧೀಶರು ಅರಿತು ಮಾತನಾಡಬೇಕು.

ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ಸ್ವಾಮಿಗಳು ಸುಮ್ಮನಿರುವ ಹಾಗೆ ಕಾಣುವುದಿಲ್ಲ ಅವರನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಆಯಾ ಮಠಗಳ ಭಕ್ತರೇ ಹೊರಬೇಕು.

ಇಲ್ಲವೇ ರಾಜಕೀಯ ನಾಯಕರು ಮಠಗಳಿಗೆ ಹೋಗುವುದಕ್ಕೆ ಸ್ವಯಂ ನಿಯಂತ್ರಣ ಹೇರಿಕೊಂಡು ಎದುರಾಗುವ ಮುಜುಗರದಿಂದ ಪಾರಾಗಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶಾಸಕ ಎಲ್ಲ ಧರ್ಮದವರಿಂದ ಚುನಾಯಿತರಾಗಿರುತ್ತಾರೆ. ಗೆದ್ದ ಮೇಲೆ ದಿಢೀರ್ ಎಂದು ಒಂದು ಕೋಮಿನ ಪ್ರತಿನಿಧಿಯಂತೆ ವರ್ತಿಸಿ ಮತದಾರರಿಗೆ ಅವಮಾನ ಮಾಡಬಾರದು.

ಮಠಾಧೀಶರು ಅಷ್ಟೇ, ಅವರು ಸರ್ವ ಧರ್ಮಗಳ ರಕ್ಷಕರಂತೆ ನಡೆದುಕೊಳ್ಳಬೇಕು.

ಮಾಧ್ಯಮಗಳ ಎದುರು ಮತ್ತು ಸಾರ್ವಜನಿಕ ಸಭೆಗಳಲ್ಲಿ "ನಮ್ಮ ಜನಾಂಗದವರಿಗೆ ಸಚಿವ ಸ್ಥಾನ ನೀಡದಿದ್ದರೆ ನೋಡಿ " ಎಂಬರ್ಥದ ಮಾತುಗಳನ್ನು ಆಡಬಾರದು.

ಸಾರ್ವಜನಿಕ ಸಮಾರಂಭದಲ್ಲಿ, ಮಾಧ್ಯಮಗಳ ಎದುರು, ಮತ್ತೆ ಕೆಲವರು ವಿಧಾನ ಸಭೆ ಪ್ರವೇಶಿಸಿ ಈ ರೀತಿ ಹಕ್ಕೊತ್ತಾಯ ಮಾಡುವುದು ಒಂದು ಸಾಮಾಜಿಕ ಮುಜುಗರ ಮತ್ತು ಅವಮಾನ.

ಈ ಕುರಿತು ಮಠಾಧೀಶರೊಂದಿಗೆ ಚರ್ಚೆ ಮಾಡುವುದು ಮುಖ್ಯಮಂತಿಗಳಿಗೆ ಸಾಧ್ಯವಾಗುವುದಿಲ್ಲ ಆದ್ದರಿಂದ ತಮ್ಮ ಪಕ್ಷದ ಶಾಸಕರಿಗೆ ಈ ರೀತಿ ಧಾರ್ಮಿಕ ಒತ್ತಾಯ ಹೇರದಂತೆ ತಾಕೀತು ಮಾಡಲೇಬೇಕು. ಇಲ್ಲದೇ ಹೋದರೆ ಅವರ ವೈಯಕ್ತಿಕ ನೆಮ್ಮದಿ ನಾಶವಾಗಿ, ಸಾಮಾಜಿಕ ಅರಾಜಕತೆಯೂ  ಉಂಟಾಗಬಹುದು.

ಅಲ್ಲದೆ ಸಾಧ್ಯವಾದಷ್ಟು ಮಠಗಳಿಗೆ ಹೋಗುವುದನ್ನು ನಿಲ್ಲಿಸಿ ಜನರ ಮೂಲಭೂತ ಸಮಸ್ಯೆಗಳನ್ನು ಆಲಿಸಲು ಜನರ ಬಳಿ ಹೋಗುವುದು ಒಳಿತು.

ಭಕ್ತರ ಮನಃಶಾಂತಿ ಕಾಪಾಡುವ ಧ್ಯಾನ, ಅಧ್ಯಾತ್ಮ ಮತ್ತು ಯೋಗ ಸೂತ್ರಗಳನ್ನು ಬೋಧನೆ ಮಾಡಬೇಕಾದ ಮಠಗಳು ನೇರ ರಾಜಕೀಯ ಅಖಾಡಕ್ಕೆ ಇಳಿದರೆ ಸಾಮಾನ್ಯ ಭಕ್ತರು ನೆಮ್ಮದಿಗಾಗಿ ಇನ್ನೆಲ್ಲಿಗೆ ಹೋಗಬೇಕು?

ಹಾಗಂತ ಮಠಾಧೀಶರು ರಾಜಕೀಯ ನಾಯಕರುಗಳಿಗೆ ಮಾರ್ಗದರ್ಶನ ಮಾಡಬಾರದು ಎಂದು ಅರ್ಥವಲ್ಲ ಅವರ ಮಾರ್ಗದರ್ಶನ ಒಟ್ಟು ಸಮುದಾಯದ ಅಭಿವೃದ್ಧಿ ಪರ ಇರಬೇಕು.

ಅದೂ ಈ ರೀತಿ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಹೇಳದೇ ವೈಯಕ್ತಿಕ ನೆಲೆಯಲ್ಲಿ ಸಂಯಮದಿಂದ ಚರ್ಚೆ ಮಾಡಬೇಕು. 

ಶಾಸಕರು ತಮ್ಮ ಸಮಾಜದ ಸ್ವಾಮಿಗಳ ಪ್ರಭಾವಕ್ಕಿಂತ, ವೈಯಕ್ತಿಕ ಸಾಧನೆ ಮೂಲಕ ಸ್ಥಾನಮಾನ ಪಡೆದುಕೊಂಡು ಪ್ರಜಾಪ್ರಭುತ್ವ ಮತ್ತು ನಾಡಿನ ಮತದಾರರ ಮಾನ ಕಾಪಾಡಲಿ ಎಂದು ಈ ರಾಜ್ಯದ ಸಾಮಾನ್ಯ ಪ್ರಜೆಯಾಗಿ ನಿವೇದಿಸುವೆ.

#ಸಿದ್ದು_ಯಾಪಲಪರವಿ.

Thursday, March 14, 2019

ಮಾತಾಜಿ

*ಮರೆಯಾಗದ ಮಹಾಬೆಳಗು: ಮಾತಾಜಿ*

ಇಡೀ ಜಗತ್ತಿಗೆ ಬಸವಧರ್ಮ ಪರಿಚಯಿಸಿದ ಪೂಜ್ಯ ಲಿಂಗಾನಂದರು ಹಾಗೂ ಪೂಜ್ಯ ಮಾತಾಜಿ ಅವರ ಕೊಡುಗೆಯನ್ನು ವರ್ಣಿಸಲಾಗದು. ಇಡೀ ಧರ್ಮ ಸಾರವನ್ನು ಅತ್ಯಂತ ವೈಜ್ಞಾನಿಕವಾಗಿ ನಿರೂಪಿಸಲು ಅಹೋರಾತ್ರಿ ಶ್ರಮಿಸಿದರು.
ಅಸ್ಪಷ್ಟವಾಗಿದ್ದ ಇಡೀ ವಚನ ಚಳುವಳಿಯನ್ನು ಜಗತ್ತಿಗೆ ಪರಿಚಯಿಸಿದ ಮೊದಲ ಪೀಠಾಧಿಪತಿಗಳು.
ರಾಜ್ಯದಲ್ಲಿ ಇದ್ದ ಸಾವಿರಾರು ಮಠಾಧೀಶರು ಮಾಡಲಾಗದ ಕೆಲಸವನ್ನು ಇವರೀರ್ವರು ಸಾಧಿಸಿದರು.‌

ರಾಜ್ಯ, ದೇಶ,ವಿದೇಶಗಳಲ್ಲಿ ಅಪ್ಪಟ ಬಸವಾಭಿಮಾನಿಗಳ ಪಡೆ ನಿರ್ಮಿಸಿದರು. ಕೇವಲ ಸೈದ್ಧಾಂತಿಕ ತಿಳುವಳಿಕೆ ನೀಡಿದರೆ ಸಾಲದು ಅದು ಸಂಘಟನೆಯ ಸ್ವರೂಪದಲ್ಲಿರಲಿ ಎಂಬ ಕಾರಣಕ್ಕಾಗಿ ರಾಷ್ಟ್ರೀಯ ಬಸವ ದಳ ಹುಟ್ಟು ಹಾಕಿದರು.‌

ಹೆಚ್ಚು ಹೆಚ್ಚು ಹಣ ಸಂಗ್ರಹಣ ಮತ್ತದರ ಸದ್ಬಳಕೆಯ ಮಾರ್ಗ ಕಲ್ಪಿಸಿದರು. ಸ್ಥಾವರಕ್ಕಳಿವುಂಟು ಎಂದು ಸಾರಿದ ಬಸವಾದಿ ಶರಣರ ಸ್ಮಾರಕಗಳನ್ನು ನಿರ್ಮಿಸಿದ್ದು ಆರಂಭದ ದಿನಗಳಲ್ಲಿ ವಿರೋಧಾಭಾಸ ಅನಿಸುತ್ತಿದ್ದರೂ ಅವಗಳಿಗೆ ಐತಿಹಾಸಿಕ ಮೆರುಗು ಕೊಟ್ಟರು.
ಕಲ್ಯಾಣದ ಬೀದರ ಜಿಲ್ಲೆಯ ತುಂಬ ಸಂಚರಿಸಿ ಜನರನ್ನು ಸಂಘಟಿಸಿದರು.
ಗುರು-ವಿರಕ್ತ ಮಠೀಯ ವ್ಯವಸ್ಥೆಯ ಜೊತೆ ಸೆಣಸಾಡಿ ತಮ್ಮ ಅಸ್ಮಿತೆ ಉಳಿಸಿಕೊಂಡು ತಮ್ಮದೇ ಆದ ಪಡೆ ನಿರ್ಮಿಸಿಕೊಂಡರು. ಇಡೀ ಬಸವ ಚಳುವಳಿಯ ಆಳ,ಅಗಲ,ವಿಶಾಲತೆಗಳ ತಲಸ್ಪರ್ಷಿ ಅಧ್ಯಯನ ಮತ್ತದರ ಪ್ರತಿಪಾದನೆ ಅಪರೂಪ.

ನಾಡಿನ ಅನೇಕ ಮಠಾಧಿಶರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದ ಬಸವ ಸಂದೇಶದ ವೈಜ್ಞಾನಿಕ ಸಾರವನ್ನು ಜಗತ್ತಿಗೆ ತೋರಿಸಿಕೊಟ್ಟರು. ಅನಿವಾರ್ಯವಾಗಿ ವಿರಕ್ತ ಮಠಾಧೀಶರು ಇವರನ್ನು ಒಪ್ಪಿಕೊಳ್ಳುವ ವಾತಾವರಣ ಸೃಷ್ಟಿ ಮಾಡಿದರು.

ಕೂಡಲಸಂಗಮದ ಶರಣ ಮೇಳದ ಯಶಸ್ಸಿಗೆ ಇಲಕಲ್ಲ, ಗದಗ, ಚಿತ್ರದುರ್ಗ ಮಠಗಳ ಪೂಜ್ಯರುಗಳು ಬಹಿರಂಗ ಬೆಂಬಲ ನೀಡಿದರು. ಆದರೆ ಬಸವ ಸಿದ್ಧಾಂತದ ನಿಜ ವಾರಸುದಾರರೆನಿಸಿಕೊಂಡ ಮಾತಾಜಿ ಅವರಿಗೆ ಯಾಕೋ ಹೊಸ ಹೊಳಹುಗಳು ಕಾಡಲಾರಂಭಿಸಿದವು.
ಅದು ಈ ಸಮಾಜದ ದೌರ್ಭಾಗ್ಯವೂ ಹೌದು. ಎಲ್ಲರೂ ಒಗ್ಗಟ್ಟಾಗಿ ಬೆಸೆದುಕೊಂಡಿರುವ ಸುವರ್ಣ ಕಾಲದಲ್ಲಿ ಲಿಂಗದೇವ ನಾಮಾಂಕಿತ ಬದಲಾವಣೆ ಅವರನ್ನು ಆವರಿಸಿಕೊಂಡಿತು.‌

ನೂರಾರು ಮಠಾಧೀಶರು, ಲಕ್ಷಾಂತರ ಬಸವ ಭಕ್ತರಿಗೆ ಸದರಿ ನಿಲುವು ನೋವುಂಟು ಮಾಡಿತು. ತಾವು ಮಾಡಿದ್ದು ತಪ್ಪು ಎಂದು ಗೊತ್ತಾದರೂ ಸುಮ್ಮನೇ ಹಟಕ್ಕೆ ಬಿದ್ದರು. ಅದನ್ನೇ ಮಹಾತ್ಮರ ಟ್ರ್ಯಾಜಿಕ್ ಫ್ಲಾ ( Tragic flaw ) ಎಂದು ಶೇಕ್ಸ್‌ಪಿಯರ್ ತನ್ನ ದುರಂತ ನಾಯಕರನ್ನು ವರ್ಣಿಸುತ್ತಾನೆ.

ಗಣ್ಯಾತಿಗಣ್ಯರ ಒಂದೇ ಒಂದು ಈ ದೌರ್ಬಲ್ಯ ಇಡೀ ವ್ಯವಸ್ಥೆಯನ್ನು ಕುಸಿದು ಹಾಕುತ್ತದೆ. ನಂತರ ದಿನಗಳಲ್ಲಿ ಕೇವಲ ತಮ್ಮ ವಿತಂಡ ವಾದವನ್ನು ಒಪ್ಪುವ ಭಕ್ತರನ್ನು ಮಾತ್ರ ಜೊತೆಗಿಟ್ಟುಕೊಂಡರು.
ಇದನ್ನು ಪ್ರತಿಭಟಿಸಿ ಹೊರ ಬಂದ ಅವರ ಬಸವ ಗರಡಿಯಲ್ಲಿ ಬೆಳೆದ ಸಾಧಕರು ವೈಯಕ್ತಿಕ ನೆಲೆಯಲ್ಲಿ ಬಸವ ಸಾಮ್ರಾಜ್ಯ ವಿಸ್ತರಿಸಿದ್ದು ಸಮಾಜಕ್ಕೆ ಆದ ಇನ್ನೊಂದು ಲಾಭ.
ಲಿಂಗಾನಂದ ಅಪ್ಪಗಳ ಗರಡಿಯಲ್ಲಿ ತಯಾರಾದ ಸಾಧಕರು ಇಂದಿಗೂ ಬಸವ ನಿಷ್ಠೆ ಮೆರೆಯುತ್ತಲಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ ಲಿಂಗದೇವ ವಚನಾಂಕಿತ ಪ್ರಕರಣದ ನಂತರ ಕೂಡಲ ಸಂಗಮದಲ್ಲಿ ಅವರೊಂದಿಗೆ ಎರಡು ತಾಸು ಚರ್ಚೆ ಮಾಡಿ ನಾಮಾಂಕಿತ ಹಿಂದೆ ಪಡೆದು ಬಸವ ಬಳಗದ ಸ್ವಾಸ್ಥ್ಯ ಕಾಪಾಡಲು ನಿವೇದಿಸಿಕೊಂಡಿದ್ದೆ. ಆದರೆ ಮಾತಾಜಿ ತಮ್ಮ ಪಟ್ಟು ಸಡಿಲಿಸದೇ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು ತುಂಬಾ ನೋವಾಯಿತು.
ಮತ್ತೆಂದೂ ನಾನವರನ್ನು ವೈಯಕ್ತಿಕವಾಗಿ ಭೇಟಿಯಾಗಲಿಲ್ಲ, ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಲೂ ಇಲ್ಲ.

ಸಾವಿರಕ್ಕೂ ಹೆಚ್ಚು ಬಸವಾದಿ ಶರಣರ ಕಾರ್ಯಕ್ರಮಗಳಲ್ಲಿ ಭಾಗಿಯಾದ ನನಗೆ ಮಾತಾಜಿಯವರಿಂದ ಮಾನಸಿಕವಾಗಿ ದೂರಾದ ನೋವು ಇಂದಿಗೂ ಕಾಡುತ್ತಿದೆ. ಮಾತಾಜಿ ಕೂಡಾ ತಮ್ಮ *ಟ್ರ್ಯಾಜಿಕ್ ಫ್ಲಾ* ಅರ್ಥವಾದರೂ ಒಪ್ಪಕೊಳ್ಳದೇ ಹಟಕ್ಕೆ ಬಿದ್ದರು.

ನಂತರದ ಲಿಂಗಾಯತ ಧರ್ಮದ ಚಳುವಳಿಯಲ್ಲಿ ಈ ಕಹಿ ಮರೆತು ಮಠಾಧೀಶರೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಲು ಬಸವ ಚೈತನ್ಯವೇ ಕಾರಣ.
*ಇದೊಂದು ದೋಷ ಬಿಟ್ಟರೆ ಮಾತಾಜಿ ಅವರ ಸಾಧನೆ ಅನನ್ಯ, ಅಧ್ಬುತ,ಅಪರೂಪ*.
ಬೇರೆಯವರ ಬಸವ ಸಾಧನೆಯೂ ಕೂಡ ಮಾತಾಜಿಯವರ ಮಹಾಮಾರ್ಗದಂತೆ ಗೋಚರಿಸುತ್ತದೆ. ಮಾತಾಜಿಯವರಿಗೆ ಮಾತಾಜಿಯವರೇ ಸರಿಸಾಟಿ.

ತಮ್ಮ ಆರೋಗ್ಯ ಲೆಕ್ಕಿಸದೇ ಇಡೀ ಪ್ರಪಂಚ ಸುತ್ತಿ *ಬಸವಪ್ರಜ್ಞೆ* ಬಿತ್ತಿ ಬೆಳೆಸಿದರು.
ಇಂದು ಇಡೀ ಜಗತ್ತು ಬಸವಾದಿ ಶರಣರ ಸಾಹಿತ್ಯ ಅರ್ಥ ಮಾಡಿಕೊಳ್ಳಲು ಕಾರಣರಾದವರಲ್ಲಿ ಲಿಂಗಾನಂದರು ಹಾಗೂ ಮಾತಾಜಿಯವರು ಅಗ್ರಮಾನ್ಯರು.

ತಮ್ಮ ಗುರುಗಳ ಕಾಲ ನಂತರದಲ್ಲಿಯೂ ಬಸವ ಬಳಗವನ್ನು ಸಾಂಸ್ಥಿಕವಾಗಿ ಕಟ್ಟಿ ಬೆಳೆಸಿದರು. ಅವರ ಸಂಘಟನಾ ಶಕ್ತಿ ಅದ್ವಿತೀಯ.
ಲಿಂಗದೇವ ವಚನಾಂಕಿತ ಪ್ರಕರಣವನ್ನು ಬದಿಗಿರಿಸಿ ನೋಡಿದಾಗ ಮಾತಾಜಿಯವರು ಮಾಡಿದ ಸಾಧನೆ ಬೆರಗು ಮೂಡಿಸುವಂತಹದು.

ಎಡಬಿಡದ ಕಾರ್ಯಚಟುಕೆಗಳಿಂದಾಗ ಆರೋಗ್ಯ ಹಾಳಾಯಿತಾದರೂ ಅದನ್ನವರು ಲೆಕ್ಕಿಸದೇ ದುಡಿದ ಅವರ ಜೀವನೋತ್ಸಾಹ ಅನುಕರಣೀಯ, ಅದಮ್ಯ,ಅಪ್ರತಿಮ.
ನಿಮಗೆ ಸಾವಿರದ ಶರಣು ತಾಯೇ.
ನೀವು ಸದಾ ನಮ್ಮ ಮನದಲ್ಲಿ ಮಹಾ ಬೆಳಗಿನ ಬೆರಗಾಗಿ ನೆಲೆಗೊಂಡಿದ್ದೀರಿ.

*ಸಿದ್ದು ಯಾಪಲಪರವಿ*

Monday, January 21, 2019

ಸಿದ್ಧಗಂಗಾ ಪೂಜ್ಯರು

*ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಸಿದ್ಧಗಂಗಾ ಮಠ*

ಗ್ರಾಮೀಣ ಕರ್ನಾಟಕದ ನೋವು ಅರಿತಿದ್ದ ಶ್ರೀಗಳು ಶಿಕ್ಷಣದ ಮೂಲಕ ಪರಿಹಾರ ನೀಡಲು ನಿರ್ಧರಿಸಿ ದಾಸೋಹ ಪ್ರಾರಂಭಿಸಿದರು. ಅನ್ನ,ಅರಿವೆ,ಅಕ್ಷರ ದಾಸೋಹ ಪಡೆದು ಲಕ್ಷಾಂತರ ಜನ ಧನ್ಯರಾದರು.
ಕೇವಲ ಅಕ್ಷರ ಸಿದ್ಧಾಂತದ ಮೂಲಕ ನಿರಂತರ ಮಕ್ಕಳ ಏಳ್ಗೆಗಾಗಿ ದುಡಿದ ಏಕೈಕ ಸ್ವಾಮೀಜಿಯವರ ಲಿಂಗಪೂಜಾ ನಿಷ್ಠೆ ಕೂಡಾ ಅಪರೂಪ.
ಶಿವಯೋಗದ ಮೂಲಕ ಚಾರಿತ್ರ್ಯ ರೂಪಿಸಿಕೊಂಡ ಶ್ರೀಗಳು ಹಂತ ಹಂತವಾಗಿ ಬೆಳಕಿಗೆ ಬಂದರು. ಅಷ್ಟೇನು ಸಿರಿವಂತಿಕೆ ಹೊಂದಿರದ ಮಠಕ್ಕೆ ಮಕ್ಕಳೇ ಆಸ್ತಿಯಾದರು.

ಮಠದಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನ ತಲುಪಿದ ಹಳೆಯ ವಿದ್ಯಾರ್ಥಿಗಳು ಶ್ರೀಗಳಿಗೆ ಪರೋಕ್ಷವಾಗಿ ಜೊತೆಯಾದರು.
ಅನೇಕ ಲಿಂಗಾಯತ ಮಠಗಳಂತೆ ಯಾವುದೇ ಸಿದ್ಧಾಂತಕ್ಕೆ ಅಂಟಿಕೊಳ್ಳದ ಶ್ರೀಗಳ ನಿಲುವಿನಲ್ಲಿ ಸ್ಪಷ್ಟತೆ ಇತ್ತು.
*ಶಿಕ್ಷಣ ಕೇವಲ ಶಿಕ್ಷಣ* ಅದೂ ಬಡ ಮಕ್ಕಳಿಗಾಗಿ ಮೂಲಭೂತ ಶಿಕ್ಷಣ.

ಇತ್ತೀಚೆಗೆ ಬಹುಪಾಲು ಮಠಗಳಿಗೆ ಸಿದ್ಧಗಂಗಾ ಮಠ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಬಿಸಲು ಪ್ರೇರಣೆಯಾಯಿತು. ಉಚಿತ ಶಿಕ್ಷಣಕೆ ಸಿದ್ಧಗಂಗಾ ಮಠದ ಬದ್ಧತೆ ಪ್ರಶ್ನಾತೀತ.

ಮಠ ಬೆಳೆದಂತೆ ಭಕ್ತರು ಹೆಚ್ಚಾಗುವುದು ಸಹಜ. ಅದರಲ್ಲೂ ರಾಜಕಾರಣಿಗಳು ಜಾಣರು. ಮಠಾಧೀಶರನ್ನು ಬೇಗ ಪವಾಡ ಪುರುಷರನ್ನಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಆಶೀರ್ವಾದ ಪಡೆಯುವ ನೆಪದಲ್ಲಿನ ಪೋಜುಗಳೇ ಮತವಾಗಿಸುವ ಹುನ್ನಾರ.

ಅವರ ಆರೋಗ್ಯ, ಚಾರಿತ್ರ್ಯ, ನಿರ್ವಿಕಾರ ಮನೋಧರ್ಮ,ಸಾಮಾಜಿಕ ಕಾಳಜಿ ಅನೇಕರ ಬಂಡವಾಳವಾಯಿತು.‌ ಆದರೆ ಅದಕ್ಕೆ ಶ್ರೀಗಳು ಹೊಣೆಗಾರರಲ್ಲ. ಅದೂ ಪರಸ್ಥಿತಿಯ ಉಪಯೋಗ ಅಷ್ಟೇ.

ಇಂದು ಇಡೀ ಜಗತ್ತು ಶ್ರೀಗಳ ಹಿರಿಮೆಯನ್ನು ಕೊಂಡಾಡುತ್ತದೆ. ಶತಾಯುಷಿ ಶ್ರೀಗಳು ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ತೋರಿದ ಲಿಂಗ ನಿಷ್ಟೆಯನ್ನು ವೈಭವೀಕರಿಸಿದ್ದೂ ಸಹಜ.

ದೈಹಿಕವಾಗಿ ತುಂಬ ಆರೋಗ್ಯಪೂರ್ಣವಾಗಿರುವ ಅನೇಕ ಮಠಾಧೀಶರು ಆಧ್ಯಾತ್ಮ ಬಿಟ್ಟು ಬೇರೆಲ್ಲಾ ಮಾಡುತ್ತಾರೆ.
ಹಾಗೆ ರಾಜಕಾರಣ ಮಾಡುವ ಸ್ವಾಮಿಗಳಿಗೆ ಸಣ್ಣ ಅಸಮಾಧಾನವಿತ್ತಾದರೂ ಹೇಳುವ ತಾಕತ್ತಿರಲಿಲ್ಲ.

ಪೂಜ್ಯರು ಶಿಕ್ಷಣ ದಾಸೋಹ ಹೊರತುಪಡಿಸಿ ಬೇರೇನು ಮಾಡುತ್ತಿರಲ್ಲ. ಕೊನೆ ಕ್ಷಣದವರೆಗೆ ಲಿಂಗಾಂಗ ಸಾಮರಸ್ಯ, ಶಿಕ್ಷಣ ದಾಸೋಹ ಅವರ ಉಸಿರಾಯಿತು.
ಲಿಂಗಾಯತ ನಾಯಕರೊಬ್ಬರ ಮೇಲೆ ಮಮಕಾರವಿತ್ತಾದರೂ ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ.

*ಜನರ ನಂಬಿಕೆಗಳಿಗೆ ಅನುಗುಣವಾಗಿ ಕರಿದಾರ, ಭಸ್ಮದ ಚೀಟು ನೀಡುತ್ತಿದ್ದರು ಎಂಬ ಪ್ರಗತಿಪರರ ಸಣ್ಣ ಗೊಣಗಾಟವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರಿಗೆ ಅದರ ಅಗತ್ಯವೂ ಇರಲಿಲ್ಲ*.

ಕೆಲವು ಪುಢಾರಿಗಳು ಪೂಜ್ಯರ ಹೆಸರನ್ನು ದುರುಪಯೋಗ ಪಡಿಸಿಕೊಂಡರೂ ಮೌನವಹಿಸಿದರು. ಅದು ಅವರವರ ಪಾಪ-ಪುಣ್ಯ ಎಂಬ ಧೋರಣೆಯ ತಟಸ್ಥ ನಿಲುವು.

*ಪೂಜ್ಯರೊಂದಿಗೆ ವೇದಿಕೆ ಹಂಚಿಕೊಂಡ ಪುಣ್ಯ*.

ಹದಿನೈದು ವರ್ಷಗಳ ಹಿಂದೆ ಹಿರಿಯ ನಟ, ಸಾಹಿತಿ ಪ್ರೊ.ಟಿ.ಎಸ್.ಲೋಹಿತಾಶ್ವ ಅವರ ತಂದೆಯವರ ನಿಧನದ ನಂತರ ಪುಣ್ಯಾರಾಧನೆಯ ಸಮಾರಂಭ ತುಮಕೂರು ಜಿಲ್ಲೆಯ ಕೊನೆ ಹಳ್ಳಿ ತೊಂಡಗೆರೆಯಲ್ಲಿ ಆಯೋಜಿಸಲಾಗಿತ್ತು. ಅನಿರೀಕ್ಷಿತವಾಗಿ ಪ್ರೊ.ಚಂಪಾ ಅವರೊಡನೆ ನಾನು ವೇದಿಕೆ ಹಂಚಿಕೊಂಡು *ಮರಣವೇ ಮಹಾನವಮಿ* ಎಂದು ಮಾತನಾಡಿದ್ದನ್ನು ಕೇಳಿ ಪೂಜ್ಯರು ನಗೆ ಚಲ್ಲಿದ್ದ‌ ನೆನಪು ಈಗಲೂ ಹಸಿರು.‌

*ಭಾರತರತ್ನ ಮತ್ತು ಶ್ರೀಗಳು*

ನಮ್ಮ ದೇಶದಲ್ಲಿ ಪ್ರಶಸ್ತಿಗಳು ಮೌಲ್ಯ ಕಳೆದುಕೊಂಡು ತುಂಬ ದಿನಗಳಾದವು. ಆದರೂ ಅನೇಕ ಮನಸುಗಳು ಪ್ರಶಸ್ತಿಗಳಿಗಾಗಿ ಹಾತೊರೆಯುತ್ತವೆ, *ಪಡೆಯಲು ಮತ್ತು ಕೊಡಿಸಲು*.

ಪ್ರಶಸ್ತಿಗಳಾಚೆ ಬ್ರಹದಾಕಾರವಾಗಿ ಬೆಳೆದರೂ ಪ್ರಶಸ್ತಿಗಳನ್ನು ಮಾನದಂಡವಾಗಿ ವಿಶೇಷಣಗಳನ್ನಾಗಿ ಬಳಸಿದಾಗಲೇ ಸಮಾಧಾನ.

ಕೇಂದ್ರ ಸರ್ಕಾರ ಯಾಕೆ ಕೊಡಲಿಲ್ಲ ಎಂಬುದು ಮುಖ್ಯವಲ್ಲ. ಕೊಡಲಿ ಎಂದು ಒತ್ತಾಯಿಸುವುದು ನಮ್ಮ ತಪ್ಪು. ಅದು ಪೂಜ್ಯರಿಗೆ ಮಾಡುವ ಅವಮಾನ.‌ ಪೂಜ್ಯರ ಮಠದಲ್ಲಿ ಬೆಳೆದ
ಲಕ್ಷಾಂತರ ವಿದ್ಯಾರ್ಥಿಗಳು, ಕೋಟ್ಯಂತರ ಭಕ್ತರ ಭಕ್ತಿಗಿಂತ ದೊಡ್ಡ ಪುರಸ್ಕಾರ ಬೇರೆ ಯಾವುದೂ ಇಲ್ಲ.
ಪ್ರಶಸ್ತಿ ಮಾನದಂಡ ಇಟ್ಟುಕೊಂಡು ರಾಜಕಾರಣ ಮಾಡಬಾರದು. ‌
ತುಂಬು ಜೀವನ ಸಾಗಿಸಿ ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲಿ ದೈಹಿಕವಾಗಿ ಅಗಲಿದ್ದಾರೆ.
ಉಳಿದ ಮಠಗಳು, ಸರಕಾರ ಅವರ ಶೈಕ್ಷಣಿಕ ಮೌಲ್ಯಗಳ ನಿರಂತರ ಉಳಿಸಿಕೊಳ್ಳಲಿ.

  *ಸಿದ್ದು ಯಾಪಲಪರವಿ*

Monday, January 7, 2019

ವಿವಾದ ವಿಷಾದ

*ವಿವಾದಕ್ಕಾಗಿ ವಿವಾದ: ಒಂದು ವಿಷಾದ*

ಕೆಲದಿನಗಳಿಂದ ಬರೀ ಅಬ್ಬರ, ಭೀಕರ ಸದ್ದು ಗದ್ದಲ. ವೈಚಾರಿಕತೆಯ ಹೆಸರಿನ ಚರ್ಚಾ ಭರಾಟೆಯಲಿ.
ಪ್ರೊ.ಭಗವಾನ ಅವರು ಆಗಾಗ ರಾಮನ ಹೆಸರಿನಲ್ಲಿ ರಾಮಾಯಣ ಮಾಡಿಕೊಳ್ಳುತ್ತಾರೆ.

ಭಾರತ ಅನೇಕ ನಂಬಿಕೆಗಳ ತವರು, ಈ ನಂಬಿಕೆ ಅನೇಕರಿಗೆ ಮೌಢ್ಯದಂತೆ ಕಾಣಿಸುವುದು ಸಹಜ. ಅವೈಜ್ಞಾನಿಕ ನಂಬಿಕೆಗಳಿಗೆ ನಮ್ಮ ಸನಾತನ ಕತೆ, ಪುರಾಣಗಳೂ ಕಾರಣವಿರಬಹುದು ಅನ್ನಿ. ಸರಿಯೋ, ತಪ್ಪೋ ಒಟ್ನಲ್ಲಿ ಅದನ್ನು ಅನೇಕರು ಪ್ರಶ್ನೆ ಮಾಡದಂತೆ ಪಾಲಿಸುವುದು ಅವರಿಗೆ ಸಮಾಧಾನ ತಂದಿದೆ.

ಅದು ಬಹುಸಂಖ್ಯಾತರ ಭಾವನಾತ್ಮಕ ನಂಬಿಕೆಯಾದಾಗ ನಾವದನ್ನು ಸಿದ್ಧಾಂತಗಳ ಹೆಸರಿನಲ್ಲಿ ಕೆರಳಿಸುವುದು ಸರಿಯಲ್ಲ.
ಹಾಗೆ ಟೀಕಿಸುವ ಭರದಲ್ಲಿ ಹತ್ತಾರು ಮಹಾಕಾವ್ಯದ ಪಾತ್ರಗಳನ್ನು ಮನಸೋ ಇಚ್ಛೆ ಈಗ ಜಾಡಿಸಲಾಗದು.‌
ಒಂದು ಕಾಲದಲ್ಲಿ ಈ ತರಹದ ಒಳನೋಟ ಕುತೂಹಲ ಉಂಟು ಮಾಡಿ ಓದಿಸಿಕೊಂಡು ಹೊಗುತ್ತಿತ್ತು.

ಎಡ-ಬಲ ವಾದ ಈಗ ಕೇವಲ ಸೈದ್ದಾಂತಿಕ ಚರ್ಚೆಯಾಗಿ ಉಳಯದೇ ಹಿಂಸಾ ಸ್ವರೂಪ ಪಡೆದುಕೊಂಡಿದೆ.
ಡಾ.ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆ ನಂತರ ಕಾಲ ಸೂಕ್ಷ್ಮವಾಗಿದೆ‌. ಕೊಲೆಗಾರರು ಯಾರು ಎಂಬುದು ತನಿಖೆ ಮುಗಿಯದೇ ಹೇಳಲಾಗದು.

ಒಂದರ್ಥದಲ್ಲಿ ಎಲ್ಲವೂ ಓಪನ್ ಸೀಕ್ರೇಟ್ ನಂತೆ ಇರುವಾಗ ಭಗವಾನ್ ಅವರು ಮಾಧ್ಯಮಗಳಿಗೆ ಆಹಾರವಾಗಿ ಜನರನ್ನು ಕೆರಳಿಸುವುದು ಸರಿಯಲ್ಲ.
ಅದರಲ್ಲೂ ಜನರ ನಂಬಿಕೆಗಳನ್ನು ಅಲುಗಾಡಿಸುವಾಗ ಬಳಸುವ ಪದಗಳ ಮೇಲೆ ಹಿಡಿತವಿರಬೇಕು.

ವೈಚಾರಿಕ ಸಂಘರ್ಷಕೆ ಡೆಮಾಕ್ರಸಿಯಲ್ಲಿ ಜಾಗವಿದೆಯಾದರೂ ವಾತಾವರಣ ಪೂರಕ ಇರದೇ ಇದ್ದಾಗ ಕಹಿಯಾದ ಸತ್ಯಗಳ ನಿರರ್ಗಳವಾಗಿ ಹಂಚಿಕೊಳ್ಳಲಾಗದ ಸಂದರ್ಭ ವಿಶಾದನೀಯ.

ಎಡ-ಬಲ ಚರ್ಚೆ ನಿಯತ್ತನ್ನು ಕಳೆದುಕೊಂಡಿದೆ. ಸಾಮಾಜಿಕ ಜಾಲತಾಣದ ವಿಪರೀತ ದುರ್ಬಳಕೆ, ದೃಶ್ಯ ವಾಹಿನಿಗಳ ಟಿ.ಅರ್.ಪಿ. ದಾಹಕ್ಕೆ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ.

ಭಗವಾನ ಅವರು ರಾಮಾಯಣ, ಮಹಾಭಾರತದ ವ್ಯಕ್ತಿಗಳನ್ನು ಕೇವಲ ಪಾತ್ರಗಳನ್ನಾಗಿ ನೋಡಿ ವಿಶ್ಲೆಷಿಸಬಹುದು. ಆದರೆ ಬಹುಪಾಲು ಜನರು ದೇವರೆಂದು ಆರಾಧಿಸುವ ಕಾರಣದಿಂದಾಗಿ ನಂಬಿಕೆಯ ಅಲುಗಾಟ ಶುರುವಾಗಿದೆ.

ಪೋಲಿಸರ ರಕ್ಷಣೆ ಪಡೆಯುವ ಅನಿವಾರ್ಯ ವಾತಾವರಣ ಸೃಷ್ಟಯಾದಾಗ ಸಹನೆ ಅನಿವಾರ್ಯವಾಗುತ್ತದೆ.

“ಲಿಂಗಾಯತರು ಸೈದ್ಧಾಂತಿಕವಾಗಿ ಹಿಂದುಗಳಲ್ಲ” ಎಂಬ ವಾಸ್ತವ ಸತ್ಯ ಹೇಳಿದ ಡಾ..ಕಲಬುರ್ಗಿ ಅವರನ್ನು ಸಹಿಸದ ವಾತಾವರಣದಲ್ಲಿ ಇಂತಹ ಕಠೋರ ಸಂಗತಿಗಳನ್ನು ಸಹಿಸಿಕೊಳ್ಳುತ್ತಾರೆಯೇ?
ಸಹಿಸದೇ ಇರುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಅಗತ್ಯವಿಲ್ಲ.

ಎಡ-ಬಲಗಳ ಗೆರೆಯನ್ನು ತೀಕ್ಷ್ಣವಾಗಿ ಎಳೆಯಲಾಗಿದೆ.
ಬಹುಸಂಖ್ಯಾತರೆಂದರೆ ದೇವರು ಎಂದು ನಂಬಿ ಆರಾಧಿಸುವ ಜನ. ಈ ಆರಾಧಕರಿಗೆ ಜಾತಿ, ಧರ್ಮ ಏನೇನೂ ಗೊತ್ತಿಲ್ಲ. ಬ್ಲೈಂಡ್ ಆಗಿ ನಂಬುತ್ತಾರೆ. ಹಾಗೆ ನಂಬದೇ ಇರುವವರಿಗೆ ವಾಸ್ತವ ಸಂಗತಿ ಗೊತ್ತಿದೆ ಎಂಬ ಭರದಲ್ಲಿ ಕಲ್ಲಿಗೆ ತಲೆ ಜಜ್ಜಿಕೊಳ್ಳಲಾಗದು. ಸಂಯಮದ ಅನಿವಾರ್ಯತೆ ಇದೆ.

ವೈಜ್ಞಾನಿಕ ಸಂಗತಿಗಳನ್ನು ಒಪ್ಪಲಾರದ ಜನರ ಸಂಖ್ಯೆ ಹೆಚ್ಚಿದ್ದಾಗ *ಬೆತ್ತಲೆ ಓಡಾಡುವವರು ಹೆಚ್ಚಾದಾಗ ಬಟ್ಟೆ ಹಾಕಿಕೊಂಡವರೇ ಅಸಹ್ಯವಾಗಿ ಕಾಣುತ್ತಾರೆ* ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಒಮ್ಮೆಲೇ ಬಟ್ಟೆಯ ಮಹತ್ವ ಹೇಳ ಹೋದರೆ ನಮ್ಮ ಬಟ್ಟೆ ಬಿಚ್ಚಿ  ಒಗೆಯುತ್ತಾರೆ.

ಅತಿಯಾದ ಟೀಕೆಯಿಂದ ದಿಢೀರ್ ಸಾಮಾಜಿಕ ಬದಲಾವಣೆ ಅಸಾಧ್ಯ.
ಬುದ್ಧ, ಬಸವ,ಗಾಂಧಿ, ಅಂಬೇಡ್ಕರ್ ಹಾಗೂ ಇತರೆ ಸಾಮಾಜಿಕ ಸುಧಾರಕರು ಸತ್ಯ ಹೇಳುವ ಭರದಲ್ಲಿ ಸಾಮಾಜಿಕ ಸ್ವ್ಯಾಸ್ಥ ಕದಡಲಿಲ್ಲ.
ನಿಧಾನವಾಗಿ ಜನಜಾಗೃತಿ ಮೂಡಿಸಿದರು.
ಅವರಿಗೆ *ಪರಿವರ್ತನೆ* ಮುಖ್ಯವಾಗಿತ್ತು *ಪ್ರಚಾರ* ಅಲ್ಲ.
ಈಗಿನ ಇಸಂ ಗಳಿಗೆ ಬೇಕಾಗಿರುವುದು ಕೇವಲ ಪ್ರಚಾರ ಬದಲಾವಣೆ ಅಲ್ಲ.‌

ಅಬ್ಬರದ ಕೀಳು ಪ್ರಚಾರ ಬಿಟ್ಟು ಬದಲಾವಣೆಗಾಗಿ ಕೆಲಸ ಮಾಡೋಣ.

*ಸಿದ್ದು ಯಾಪಲಪರವಿ*

Sunday, December 9, 2018

ಮೋಹನ್ ನಾಗಮ್ಮನವರ

*ನಾಗಮ್ಮನವರ ಬರೀ ನೆನಪಲ್ಲ*

ಕರ್ನಾಟಕ ಕಾಲೇಜಿನ ಸಂಗಾತಿಗಳೇ ಹಾಗೆ, ಆಯಸ್ಕಾಂತೀಯ ಸೆಳೆತ. ನನ್ನ ಸೀನಿಯರ್ ಮೋಹನ್ ಸೊಗಸಾದ ಮಾತುಗಾರ, ತುಂಬಾ ಜಾಣ ಆದರೂ ಪ್ರ್ಯಾಕ್ಟಿಕಲ್ ಪರೀಕ್ಷೆಗಳಲಿ ಪಾಸಾಗದಷ್ಟು ಜಗಳ ಆಡಿಬಿಟ್ಟಿದ್ದ.

ಪದವಿ ಪಾಸಾಗದಿದ್ರೂ ಬದುಕ ನದಿಗೆ ಈಸಿ ಬಿಟ್ಟಿದ್ದ.
ಹೋರಾಟಗಳ ಮೂಲಕ ಧಾರವಾಡ ನೆಲ ಹಿಡಿದುಬಿಟ್ಟ. ವಿದ್ಯಾವರ್ಧಕ ಸಂಘದ ಚಟುವಟಿಕೆಗಳ ಮೂಲಕ ನೆಲೆ ಕಂಡುಕೊಂಡ.
ಹಳ್ಳಿಯಿಂದ ಬಂದ ನನ್ನಂತ ಸಾವಿರಾರು ಹುಡುಗರ ಹೀರೊ ಆದ.
ಓದುವ, ಬರೆಯುವ,ಮಾತನಾಡುವ ಕಲೆ ಕಲಿಸಿಕೊಟ್ಟ ಗುರುವಾದ.

ನಿಸ್ವಾರ್ಥ ಸೇವೆ ಮೂಲಕ ಜನಾನುರಾಗಿಯೂ ಆದ. ಏನಾದರು ನೌಕರಿ ಮಾಡಬೇಕು ಅನಿಸದಷ್ಟು ಸಂತೃಪ್ತ ಭಾವ ಬೆಳೆಸಿಕೊಂಡ.
ಲಂಕೇಶ್ ಪತ್ರಿಕೆಯ ವಿಶಿಷ್ಟ ಬರಹಗಳ ಮೂಲಕ ನಾಡಿನ ಗಮನ ಸೆಳೆದು ಪತ್ರಿಕೋದ್ಯಮದ ಸೆಳೆತ ಹಚ್ಚಿಕೊಂಡು ನಿರಂತರ ಬರೆಯಲಾರಂಭಿಸಿ ಊಹಿಸದ ಎತ್ತರಕ್ಕೆ ಬೆಳೆದು ನಮ್ಮ ಪಾಲಿನ ಹೀರೊ ಆಗಿಬಿಟ್ಟ.

ಧಾರವಾಡಕ್ಕೆ ಹೋದಾಗಲೆಲ್ಲ ಭೇಟಿಯಾದಾಗ ಅದೇ ಹಳೆಯ ಗೆಳೆತನದ ವಾತ್ಸಲ್ಯದ ಹೊನಲು.
ಸಂಘದ ಚುನಾವಣೆಯಲ್ಲಿ ಸ್ವಂತ ಬಲದಿಂದ ಗೆಲ್ಲುವ ಸಾಮರ್ಥ್ಯ. ಅಚ್ಚುಕಟ್ಟಾಗಿ ಕಾರ್ಯಕ್ರಮಗಳ‌ ಆಯೋಜಿಸುವ ಕುಶಲತೆ, ಸಂಘಟನಾ ಸಾಮರ್ಥ್ಯ.

ಹಿರಿಯರೊಂದಿಗೆ ನವಿರು ಸಂಬಂಧ, ಕಿರಿಯರೊಡನೆ ಆತ್ಮೀಯತೆ, ರಾಜಕಾರಣಿಗಳ ಜೊತೆ ಅಗತ್ಯಕ್ಕೆ ಬೇಕಾದಷ್ಟು ಒಡನಾಟಗಳ ಮೂಲಕ ಎಲ್ಲ ಗಳಿಸುತ್ತ ಹೋದ ಹಣ *ಹೊರತು ಪಡಿಸಿ*.

ಸರಕಾರದ ವಿವಿಧ ಸಮಿತಿಗಳು, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಚಟುವಟಿಕೆಗಳಿಗೆ ಜೀವ ತುಂಬಿದ.
ಅತಿಯಾದ ಕೂಗಾಟ,ಹಾರಾಟ ಇರದ ತಣ್ಣನೆಯ ಚಳುವಳಿಗಳಿಗೆ ಹೊಸ ಆಯಾಮ ಕೊಟ್ಟ ಹೆಗ್ಗಳಿಕೆ ಮೋಹನ್ ನಾಗಮ್ಮನವರ ಅವರಿಗೆ ಸಲ್ಲುತ್ತದೆ.

ನಾನೂ ಧಾರವಾಡಕ್ಕೆ ಬರಲಿ ಎಂಬ ಆಸೆಯೂ ಇತ್ತು.‌ ಗದುಗಿನ ಪರಿಸರ ನನಗೆ ಸಾಲದು ಎಂದು ತಿವಿಯುತ್ತಿದ್ದ.
ಸರಕಾರಿ ಉದ್ಯೋಗ, ತೋಂಟದಾರ್ಯ ಮಠದ ಸೆಳೆತದಿಂದಾಗಿ‌ ಗದಗ ಬಿಡುವ ಮನಸಾಗಲಿಲ್ಲ.

ಆಹ್ವಾನಿಸಿದ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರು, ನಾನೂ ಅಷ್ಟೇ ಕರೆದರೆ ಓಡಿ ಹೋಗುತ್ತಿದ್ದೆ. ಹತ್ತಾರು ಬೈಟಕ್ಕುಗಳು, ಕಳೆದ ಮಧುರ ಕ್ಷಣಗಳು ಒತ್ತರಿಸುತ್ತಲೇ ಇವೆ.
*ವೈಯಕ್ತಿಕ ಬದುಕಿನ ಖಾಸಗಿ ಸಂಗತಿಗಳಿಗೆ ಮೌನ ಸಾಕ್ಷಿಯಾದೆ*. ಹಲವು ಘಟನೆಗಳಿಗೆ ಇಬ್ಬರೂ ಅಸಹಾಯಕರು.

ರಾಜಕಾರಣದ ಹುಚ್ಚಿತ್ತಾದರೂ ಅದರ ಮಿತಿ ಮತ್ತು ಅಪಾಯ ಗೊತ್ತಿತ್ತು. ಹೀಗಾಗಿ ಸೂಜಿಗೆ ಕೊಟ್ಟ ಮುತ್ತಾಯಿತು.

ಹಿರಿಯ ತಲೆಮಾರಿನ ಸಾಹಿತಿಗಳಿಗೆ ನಾಗಮ್ಮನವರ ಊರುಗೋಲಾದ. ಧಾರವಾಡದ ಕಲ್ಯಾಣನಗರ  *Pensioners Paradise* ನಂತಾಗಿತ್ತು, ಅಲ್ಲಿ ನೆಲೆಸಿರುವ ಸಾಹಿತಿಗಳ ಮಕ್ಕಳೆಲ್ಲ ಈಗ ಅನಿವಾಸಿ ಭಾರತೀಯರು.‌ ಹಿರಿಯರ ಒಂಟಿತನ ದೂರ ಮಾಡಲು ಮೋಹನ್ ಮಗನಂತೆ ನೆರವಾದ.

ಅತಿಯಾದ ಓಡಾಟ, ಸಂಜೆಯ ಬೈಟಕ್ಕುಗಳು ಆರೋಗ್ಯ ಹಾಳಾಗಲು ಒಂದು ನೆಪವಿರಬಹುದು, ಆದರೂ ಇದು ಅರ್ಧಸತ್ಯ.

ಕೊನೆ ದಿನಗಳಲ್ಲಿ ತುಂಬ ಹಿಂಸೆ ಅನುಭವಿಸಿದ, ಡೈಲೆಸಿಸ್ ಅನಿವಾರ್ಯ ಆದಾಗ ಬದುಕು ಕಠಿಣ ಅನಿಸಿತು.

ಅನಾರೋಗ್ಯ-ಮುಪ್ಪು-ಸಾವು ಬದುಕಿನಲ್ಲಿ ಅನಿವಾರ್ಯ ಆದರೆ ಬೇಗ ಬರಬಾರದಲ್ಲ. ಅದೂ ಇಷ್ಟೊಂದು ಪಾದರಸದಂತೆ ಓಡಾಡುವ ಜೀವಗಳಿಗೆ. ಅದಕೆ ನೋವು, ತಲ್ಲಣ, ಹತಾಷೆ, ಹಳಹಳಿ, ಹೇಳಲಾಗದ ದುಃಖ.
ಈ ಹಿಂದೆ ಕುಲಕರ್ಣಿ ವೀಣಾ ಅಕಾಲಿಕವಾಗಿ ಹೋದಾಗ ಅಷ್ಟೇ ಒದ್ದಾಡಿದ್ದೆ, ಈಗ ಮೋಹನ್.
ಛೇ ! ಈ ಸಾವು ನ್ಯಾಯವಲ್ಲ ಖರೆ ಆದರೂ…

  *ಸಿದ್ದು ಯಾಪಲಪರವಿ*

Tuesday, November 6, 2018

ನಂಜಾದ ನಾಲಿಗೆ

*ನಂಜಾದ ನಾಲಿಗೆ ಪರಿಣಾಮ ಮತ್ತು ಚುನಾವಣೆ*

ನಾಲಿಗೆ ನಿಯಂತ್ರಣ ಕಳೆದುಕೊಂಡರೆ ಆಗೋದೇ ಹೀಗೆ. ಜನ ಮೂರ್ಖರಲ್ಲ. ಸುಳ್ಳು ಹಾಗೂ ಬಣ್ಣದ ಮಾತುಗಳ ನಾಟಕವನ್ನು ಹೆಚ್ಚು ದಿನ ಸಹಿಸಲಾರರು.

So called ಸಲಹೆಗಾರರ ಉದ್ಧಟ ಮಾತು ಕೇಳಿ ವೈಯಕ್ತಿಕ ಜೀವನದ ಸಾವಿನ ವಿಷಯ ಕೀಳಾಗಿ ಮಾತಾಡಿದ ಪರಿಣಾಮ ಇದು.

ಈ ಹಿಂದೆ ಹಿರಿಯ ರಾಜಕಾರಣಿಯ ಸಾವಿನ ಕುರಿತು ಆಡಿದ ತುಚ್ಛ ಮಾತುಗಳಿಂದಾಗಿ ಜನ ರೋಸಿ ಹೋಗಿದ್ದರು. ಹಣ-ಅಧಿಕಾರದ ಮದ ಹೆಚ್ಚಾದಾಗ, ಶಕುನಿ ಮಾಮಾಗಳ ಮಾತು ಕಟ್ಟಿಕೊಂಡು ಹೇಳಿಕೆ ಕೊಟ್ಟರೆ ಆಗೋದೇ ಹೀಗೆ.
ಸ್ವಪಕ್ಷೀಯರ ಉದ್ಧಟ ಅಹಂಕಾರದ ಮಾತುಗಳಿಗೆ ಜನ ಉತ್ತರ ನೀಡಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಅರಸನೆಂಬ ಭ್ರಮೆ ಹುಟ್ಟಿಸಿದವರ ಮಾತು ನಂಬಿ, ಪಡಬಾರದ ಕಷ್ಟ ಪಟ್ಟು ಅಜ್ಞಾತ ಅನುಭವಿಸಿ ಹೊರ ಬಂದ ಮೇಲಾದರೂ ಎಚ್ಚರಿಕೆಯಿಂದ ಇರಬೇಕಾಗಿತ್ತು.

ವಿಧಿ ಹಾಗಾಗಲು ಬಿಡುವುದಿಲ್ಲ, ಅಹಂಕಾರಕೆ ಪಾಠ ಕಲಿಸುವ ತೀರ್ಮಾನ ಮಾಡುತ್ಯದೆ.
ಶನಿ ಹೇಗಲೇರಿದಾಗ ಮನುಷ್ಯ ಇಂತಹ ಅನಾಹುತ ಮಾತುಗಳಿಗೆ ಮುಂದಾಗುತ್ತಾನೆ.‌

ಹಲಾಲಕೋರ ಸಲಹೆಗಾರರ ದುರುದ್ದೇಶ ಹಾಗೂ ಶಕುನಿ ಕುತಂತ್ರ‌ ಅರಿಯದ ಇವರೇನು ಮಹಾಭಾರತದ ಉದಾಹರಣೆ ಹೇಳುತ್ತಾರೆ.
ಅಮಾನವೀಯ ಸಲಹೆಗಳನ್ನು ಯಾರೇ ನೀಡಲಿ, ಸ್ವೀಕರಿಸಿ ಬಾಯಿ ಬಿಡುವ ಮುನ್ನ ಮನುಷ್ಯರಾಗಿ ಆಲೋಚಿಸಬೇಕು.
ಚುನಾವಣೆಯೆಂಬ ರಣರಂಗದಲ್ಲಿ ಎಲ್ಲವೂ ಕೌಂಟ್ ಆಗುತ್ತದೆ.

ಸಾರ್ವಜನಿಕ ಜೀವನದ ರಾಜಕಾರಣ ಅತಿಯಾದ ಸಹನೆ, ಚಾಣಾಕ್ಷತನ ಹಾಗೂ ಜಾಣತನ ಬಯಸುತ್ತದೆ. ಹುಂಬತನ, ಅಹಂಕಾರ ರಾಜಕಾರಣದ ಸಂಸ್ಕೃತಿಯಾದರೆ ಮತದಾರ ಪ್ರಭು ಕೆರಳಿಬಿಡುತ್ತಾನೆ. ಚುನಾವಣೆಯಲ್ಲಿ ಪಾಠವನ್ನೂ ಕಲಿಸಿಬಿಡುತ್ತಾನೆ.‌

ಜನತಾ ಪರಿವಾರದ ಗರಡಿಯಲ್ಲಿ ಬೆಳೆದ ಕೆಲವರು, ಹಿರಿಯರು, ರಾಜಕಾರಣದ ಪಟ್ಟು ಬಲ್ಲವರು, ಚುನಾವಣೆಯನ್ನು ಯುದ್ಧವೆಂದೇ ಪರಿಗಣಿಸುತ್ತಾರೆ. 

*ಧರ್ಮ-ಅಧರ್ಮ ರಾಜಕಾರಣಿಗೆ ಬೇಡವಾಗಿದ್ದರೂ ಜನರಿಗೆ ಬೇಕಾಗಿದೆ*.
ಜನರ ನಾಡಿ ಮಿಡಿತ ಬಲ್ಲವರು ಆಳುತ್ತಾರೆ, ಇಲ್ಲದವರು ಅಳುತ್ತಾರೆ.
ಸಹನೆ ಹಾಗೂ ಆತ್ಮವಿಶ್ವಾಸ ರೂಢಿಸಿಕೊಂಡವರು ಕಾಯುತ್ತಾರೆ. ಅಂತಹ ಜಾಣ ನಡೆ ಇಂದಿನ ಸರ್ಕಾರದ ಶಕ್ತಿಯೂ ಹೌದು,ಮಿತಿಯೂ ಹೌದು.

*ಎಲ್ಲ ಕಾಲಕ್ಕು ಒಂದೇ ಸೂತ್ರ ಕೆಲಸ ಮಾಡುವುದಿಲ್ಲ*.
ಹಣ ಹಾಗೂ ಜಾತಿಯಾಚೆಗಿನ ಲೆಕ್ಕಾಚಾರ ಇರಬೇಕಾಗುತ್ತದೆ. ಈ ಬೈ ಎಲೆಕ್ಷನ್ ಪರಿಣಾಮ ಮತ್ತೊಮ್ಮೆ ದಾರಿದೀಪ. ಎಚ್ಚೆತ್ತುಕೊಳ್ಳಬೇಕಾದವರು ಬೇಗ ಎಚ್ಚೆತ್ತುಕೊಳ್ಳಬೇಕು.

ಶಕುನಿಗಳ ಮಾತಿನ ತಾಳಕ್ಕೆ ತಕ್ಕಂತೆ ಕುಣಿಯಬಾರದು.‌
ಹೊಗಳಿ ಅಟ್ಟಕ್ಕೇರಿಸಿ, ಮೇಲೆತ್ತಿ ಕುಣಿಯುವವರು ಧೊಪ್ಪೆಂದು ಒಗೆದು ಓಡಿ ಹೋಗುತ್ತಾರೆ. ನಮ್ಮವರೇ ಚೂರಿ ಹಾಕಿದರೆ ಹೆಚ್ಚು ನೋವಾಗುವುದು ಸಹಜ.

ಅಧಿಕಾರ ಯೋಗ್ಯತೆಗೆ ತಕ್ಕಂತೆ ಸಿಗಲಿ ಎಂದು ಬಯಸಬೇಕು. ಯಾರೋ ಮರ ಹತ್ತಿಸುವವರ ಮಾತುಗಳಿಂದ ಅಲ್ಲ.

ಇದು ರಾಜಕೀಯ ಪಕ್ಷಗಳ ಗೆಲುವಲ್ಲ ಜಾಣ ಮತದಾರರ ಗೆಲುವು. ‌ಪ್ರಜಾಪ್ರಭುತ್ವದ ಗೆಲುವು. ಈ ಗೆಲುವನ್ನು ತಲೆಗೇರಿಸಿಕೊಳ್ಳುವ ಅಗತ್ಯವಿಲ್ಲ.
ಮುಂದಿನ ಚುನಾವಣೆಗೆ ದಿಕ್ಸೂಚಿಯೂ ಹೌದು ಆದರೆ ಇದು ಅಂತಿಮವೂ ಅಲ್ಲ. ಇನ್ನಾರು ತಿಂಗಳಲ್ಲಿ ಮತ್ತೆನಾಗುತ್ತೆ ಎಂದು ಪ್ರಭು ಕಾಯುತ್ತಾನೆ.
At least there is a *poetic justice* in the politics.

  *ಸಿದ್ದು ಯಾಪಲಪರವಿ*

Monday, October 29, 2018

ಬಿಸಿಲೂರಿನ ಕಥೆ

*ಬಿಸಿಲೂರಿನ ವ್ಯಥೆಯ ಕಥೆ*

ಇದನ್ನು ಹೇಳುವಾಗ ಇನ್ನಿಲ್ಲದ ಸಂಕಟ.
ಮನುಷ್ಯರ ಆಲೋಚನ ಕ್ರಮ ಹಾಗೂ ಸಾಮಾಜಿಕ ವ್ಯವಸ್ಥೆ ಬಗ್ಗೆ ಬೇಸರ.

ಕೆಲ ದಿನಗಳ ಹಿಂದೆ ಗೆಳೆಯರು ಮಾತನಾಡುತ್ತ ತಮ್ಮೂರಲಿ ನಡೆದ ಘಟನೆ ಹೇಳಿದರು , ನಿಮಗೂ ಹೇಳ್ತೇನೆ ಆದರೆ ನಾವು ಕೊಂಚ ಭಿನ್ನ ಆಯಾಮದಿಂದ , ಮುಕ್ತ ಮನಸಿನಿಂದ ಆಲೋಚಿಸೋಣ.

ಇಬ್ಬರಿಗೂ ಮದುವೆ ಆಗಿತ್ತು , ಒಳ್ಳೆಯ ಉದ್ಯೋಗ , ಆದರೂ ಪರಸ್ಪರ ಅನುರಾಗ ಉಂಟಾಯಿತು.

ಲೋಕದ ನಿಂದನೆಯಂತೆ ವಿವಾಹಯೇತರ ಸಂಬಂಧ ಅನ್ನೋಣ .

ಈ ಸುದ್ದಿ ಮೊದಲು ಎಲ್ಲಿಯೂ  ಹರಡಿರಲಿಲ್ಲ ಆದರೆ  ಒಮ್ಮೊಮ್ಮೆ ಹುಚ್ಚು ಮನಸಿನ ವಿಪರೀತ ಹುಚ್ಚಾಟಗಳು ಇಂತಹ ಅನಾಹುತ ಮಾಡಿಬಿಡುತ್ತವೆ .

ಇವರೂ ಅಂತಹ ಅನಾಹುತಕ್ಕೆ ಅವರೇ ಕೈ ಹಾಕಿದ್ದಾರೆ.

ತಮ್ಮ ಪ್ರೀತಿ-ಪ್ರೇಮ-ಪ್ರಣಯದ ದೃಶ್ಯಗಳನ್ನು ತಾವೇ shoot ಮಾಡಿ ನೋಡಿಕೊಂಡು ಸಂಭ್ರಮಿಸಿದ್ದರೆ ಸಾಕಾಗಿತ್ತು ಆದರೆ ಅದನ್ನು ಕಂಪ್ಯೂಟರ್ ಗೆ ಲೋಡ್ ಮಾಡಿದ್ದಾರೆ .

ದುರಾದೃಷ್ಟ ಕಂಪ್ಯೂಟರ್ ಕೆಟ್ಟು ಹೋಗಿದೆ , ಮೈಮರೆತ ಎಡವಟ್ಟು ಇನ್ನಿಲ್ಲದ ಅಪಾಯ ತಂದಿದೆ.

ರಿಪೇರಿ ಮಾಡುವವನ ವಿಕೃತ , ಅಮಾನವೀಯ ಮನಸ್ಸು ದುರಾಸೆಗೆ ದೂಡಿದೆ .

ಅವನು ಬ್ಲ್ಯಾಕ್ ಮೇಲ್ ಮಾಡಿ ದೊಡ್ಡ ಮೊತ್ತದ ಹಣಕ್ಕೆ ಪೀಡಿಸಿದ್ದಾನೆ.

ಹೊಂದಿಸುವುದು ವಿಳಂಬವಾದ ಕೂಡಲೇ ವಿಡಿಯೋ ವೈರಲ್ ಆಗಿ ಇಬ್ಬರ ಮಾನ , ಬದುಕು ಬಯಲಾಗಿದೆ.

ಸಮಾಜದ ನಿಂದನೆಗೆ ಪ್ರೇಮಿಗಳು ತಲ್ಲಣಿಸಿ ಬೆಂದು ಹೋಗಿದ್ದಾರೆ , ಸಂಸಾರದಲ್ಲಿ ಬಿರುಕು.

ನೊಂದ ವ್ಯಕ್ತಿ ತೀವ್ರ ಅನಾರೋಗ್ಯದಿಂದ ತೀರಿದ್ದು ಸಣ್ಣ ದುರಂತವಲ್ಲ.

ನಂತರ ತನ್ನ ಹೆಂಡತಿಯ ತಪ್ಪನ್ನು ಮನ್ನಿಸಿ ಮನೆಗೆ ಕರೆದುಕೊಂಡ ಗಂಡ ಆದರ್ಶ ಮೆರೆದಿದ್ದು ಅಭಿನಂದನೀಯ ಹಾಗೂ ಆದರಣೀಯ: ಆ ದಿವ್ಯ ಮನಸಿಗೆ ನೂರಾರು ನಮನಗಳು.

ಮಾನಸಿಕ ಒತ್ತಡದಿಂದ ತೀರಿ ಬದುಕು ಅಪೂರ್ಣಗೊಳಿಸಿದ ಗೆಳೆಯನಿಗಾಗಿ ವಿಷಾದಿಸೋಣ.

                              ***

ಮೇಲಿನ ಘಟನೆಯಲ್ಲಿ ಸಮಾಜ ಆ ಪ್ರೇಮಿಗಳ ಸಂಬಂಧವನ್ನು ಅಕ್ಷಮ್ಯ ಎಂದು ತೀರ್ಮಾನಿಸಿದ್ದು ಸರೀನಾ ?

ನಂತರ ಇದೇ ಖಾಸಗಿ ಪ್ರಕರಣ ಇಟ್ಟುಕೊಂಡು ಕೆಲಸದಿಂದ ತೆಗೆದದ್ದು ಮಾನವ ಹಕ್ಕಿನ ಉಲ್ಲಂಘನೆಯಲ್ಲವೆ  ?

ಸಮಾಜ ಅವರನ್ನು ಮಹಾ ಪಾಪಿಗಳು ಎಂದು ಆಡಿಕೊಂಡಿದ್ದು ಯಾವ ನ್ಯಾಯ  ?

ನೈತಿಕ ಬೆಂಬಲ ನೀಡಿ ಸಾಂತ್ವನದ ಮಾತುಗಳನ್ನು ಆಡಿದ್ದರೆ ಆ ವ್ಯಕ್ತಿ ಬದುಕುತ್ತಿರಲಿಲ್ಲವೆ ?

*ಇವೆಲ್ಲಕ್ಕಿಂತ ಮುಖ್ಯ ವಿಡಿಯೋ ಇಟ್ಟುಕೊಂಡು ಅವಮಾನಿಸಿದ ಕಂಪ್ಯೂಟರ್ ರಿಪೇರಿ ಮಾಡುವವ ಮುಖ್ಯ ಆರೋಪಿ* ಎಂದು ಯಾಕೆ ಪರಿಗಣಿಸಲಿಲ್ಲ ?

ಮತ್ತೊಬ್ಬರ ಖಾಸಗಿ ಸಂಗತಿಗಳು ಸರಿ ತಪ್ಪು ಎಂದು ನಿರ್ಣಯಿಸುವ ಅಧಿಕಾರ ನಮಗೆ ಕೊಟ್ಟವರು ಯಾರು ?

*ನಿಜವಾದ ಶಿಕ್ಷೆ ಆಗಬೇಕಾದದ್ದು ಅದನ್ನು ಹಬ್ಬಿಸಿದ ದೂರ್ತನಿಗೆ*

ಈ ನಿಟ್ಟಿನಲ್ಲಿ ಪ್ರಗತಿಪರ ಮನಸುಗಳು ಆಲೋಚನೆ ಮಾಡಿ ಅವನನ್ನು ಶಿಕ್ಷಿಸಬೇಕಿತ್ತು ಆದರೆ ಈ ಇಡೀ ಪ್ರಕರಣದಲ್ಲಿ ಮುಖ್ಯ ಆರೋಪಿ ಬಚಾವಾಗಿದ್ದು ವಿಪರ್ಯಾಸ.

                               ***

ಪ್ರೀತಿ-ಪ್ರೇಮ-ಪ್ರಣಯ , ಧರ್ಮ ಹಾಗೂ ಆಹಾರ ಪದ್ಧತಿ ವೈಯಕ್ತಿಕ ಅಭಿರುಚಿ. ಮಾನವನ ಹಕ್ಕು ಕೂಡಾ !

ಅಮೇರಿಕ ಹಾಗೂ ಇತರ ಮುಂದುವರೆದ ದೇಶಗಳ ಮಾದರಿಯಲ್ಲಿ *ಮಾನವ ಹಕ್ಕುಗಳ* ರಕ್ಷಣೆ ಗೊತ್ತಿದ್ದರೆ ಇಂತಹ ಅಪಾಯಗಳು ನಡೆಯುತ್ತಿರಲಿಲ್ಲ.

ನಮ್ಮ ಮನಸ್ಥಿತಿ ತುಂಬ ಬದಲಾಗಬೇಕಿದೆ.

ಮನುಷ್ಯ ಖಾಸಗಿ ಬದುಕಿನಲ್ಲಿ ತನಗೆ ಸರಿಕಂಡಂತೆ ಖುಷಿಯಿಂದ ಬದುಕುವ ವಾತಾವರಣ ರೂಪಿಸುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ .

                            ***

ಇಂತಹ ಘಟನೆಗಳು ನಮ್ಮ ಸುತ್ತಲೂ ನಡೆದಾಗ  ಅವಮಾನ ಮಾಡಿ ಅನುಕಂಪ ತೋರದೇ ಅನುಭೂತಿಯಿಂದ ( emphatically )
ನೋಡಬೇಕು.

ಇಂತ ತಪ್ಪು ನಮ್ಮಿಂದ  ಅಥವಾ ನಮ್ಮ ಬಂಧುಗಳಿಂದ ನಡೆದರೆ ನಮ್ಮ ಸ್ಥಿತಿ ಏನಾಗಬಹುದು ಎಂಬ ವಿವೇಚನೆಯಿಂದ  ಸಮರ್ಪಕ  ತೀರ್ಮಾನ ತೆಗೆದುಕೊಂಡು , ಮನುಷ್ಯರನ್ನು ಬದುಕಿಸುವ ಪುಣ್ಯದ ಕೆಲಸ ಮಾಡಬೇಕು.

*ನೈತಿಕತೆ , ಅನೈತಿಕತೆ ಎಂಬುದೊಂದು ಭ್ರಾಂತು*

ಈ ಭ್ರಮೆಯಿಂದ ಹೊರಬಂದು ಹೊಸ *ಮನುಷ್ಯರಾಗೋಣ, ಮಾನವರಾಗೋಣ*

( Joyful living in personal and professional life )

---ಸಿದ್ದು ಯಾಪಲಪರವಿ.