Monday, March 18, 2019

ಸಿದ್ಧೇಶ್ವರ ಸ್ವಾಮೀಜಿ

*ಪೂಜ್ಯ ಸಿದ್ಧೇಶ್ವರ ಸ್ವಾಮಿಗಳೊಂದಿಗೆ ಒಂದಿಷ್ಟು ಆಲಿಸುವಿಕೆ*

ಈ ಯುಗದ ದಂತಕಥೆ, ಸರಳ ವ್ಯಕ್ತಿತ್ವದ ಮೇರು ಪರ್ವತ ಪೂಜ್ಯ ಸಿದ್ದೇಶ್ವರ ಅಪ್ಪಗಳು. . ಒಂದಾದ ಕಾರಣ ಇವರ ಪ್ರವಚನಗಳಿಗೆ ದಿವ್ಯ ಶಕ್ತಿಯಿದೆ.
ಬಹಳಷ್ಟು ಜನ ಅದ್ಭುತವಾಗಿ ಮಾತನಾಡುತ್ತಾರೆ ಆದರೆ ಬದುಕುವುದಿಲ್ಲ. ನೂರಾರು ಅಪಕ್ವ ವರ್ತನೆ,ಸಣ್ಣತನ, ಸಿನಿಕತೆ. ಹೇಳುವುದು ವೇದಾಂತ ಆದರೆ ಖಾಸಗಿ ಬದುಕು ಅಯ್ಯೋ ಯಾರಿಗೂ ಬೇಡ.

ಆದರೆ ಸಿದ್ಧೇಶ್ವರ ಅಪ್ಪಗಳದು ಭಿನ್ನ ವ್ಯಕ್ತತ್ವದ ನಡೆನುಡಿ, ಅಪ್ಪಿ ತಪ್ಪಿ ನಕಾರಾತ್ಮಕ ಮಾತುಗಳ ಕಡೆ ಗಮನ ಹರಿಸದ ನಿಲುವು. ಸಂಪೂರ್ಣ ಜಾಗೃತಾವಸ್ಥೆ. ಮಾತಿನಲಿ ನಮ್ರ ವಿನಮ್ರತೆಯ ಹರವು.

ವೇದಾಂತ, ವಚನಗಳು, ಗೀತೆ,ಶಾಸ್ತ್ರ, ಬುದ್ಧ,ಝೆನ್,ಓಶೋ, ಭಾರತೀಯ ತತ್ತ್ವಶಾಸ್ತ್ರ ಹೀಗೆ ಆಳವಾದ ಅಧ್ಯಯನ, ಅದೂ ಕೇವಲ ಅಧ್ಯಯನವಲ್ಲ ಸಂಪೂರ್ಣ ಆಧ್ಯಾತ್ಮಿಕ ಬದುಕಿನ ಅದಮ್ಯ ಸಾಧನೆಯೂ ಎದ್ದು ಕಾಣುತ್ತದೆ. ಇಷ್ಟೊಂದು ಗೊಂದಲದ ಗೂಡಾಗಿರುವ ಸಮಾಜೋಧಾರ್ಮಿಕ ವ್ಯವಸ್ಥೆಯಲಿ ವಿವಾದಗಳಿಲ್ಲದೆ ಬದುಕುವುದು ಕಠಿಣ.

ಮೂಲಭೂತವಾದ ತಾಂಡವವಾಡುತ್ತಿರುವ ಕಾಲದಲ್ಲಿ ನಾವಿದ್ದೇವೆ. ಎಲ್ಲವೂ ಈಗ ಅತಿರೇಕದ ಪರಮಾವಧಿ. ಎಡಬಲಗಳ ಅಟ್ಟಹಾಸ, ಹೇಳಿದ್ದೇ ಸರಿ ಎಂಬ ಹಟಮಾರಿತನ. ಮಾತು ಕೇಳದಿದ್ದರೆ ಯಾಕೆ ಕೊಂದು ಬಿಡಬಾರದೆಂಬ ಅನರ್ಥ ಆಕ್ರೋಶ.
ಸಿದ್ಧಾಂತಗಳ ಹೇರಿ ಪ್ರಭುತ್ವ ಸಾಧಿಸುವ ಹುನ್ನಾರ. ಧರ್ಮ, ಭಾಷೆ,ಸಿಧ್ಧಾಂತಗಳ ನೆಪದಲ್ಲಿ ನೆಪೋಟಿಸಂ.‌

ವಚನ ಶಾಸ್ತ್ರಗಳ ಅಧ್ಯಯನ ಸಂದರ್ಭದಲ್ಲಿ ಕೈಗೆ ಪೂಜ್ಯರ ಅಲ್ಲಮಪ್ರಭು ವಚನಗಳ ಎಂಬ ಬೃಹತ್ ಗ್ರಂಥ ನನಗೆ ಪೂಜ್ಯ ಕೈವಲ್ಯಾನಂದ ಸ್ವಾಮಿಗಳ ಮೂಲಕ ಸಿಕ್ಕಿತ್ತು.

ಈ ಕುರಿತು ಸಾಧ್ಯವಾದರೆ ಪೂಜ್ಯರೊಂದಿಗೆ ಮಾತನಾಡುವ ಮನಸ್ಸು ಇತ್ತು. ಆದರೆ ಪೂಜ್ಯರ ದರ್ಶನ, ಮಾತು ಈಗ ಸರಳವಲ್ಲ. ಜನ ಅನಗತ್ಯ ಕೆಣಕುವ ಪ್ರಶ್ನೆಗಳನ್ನು ಕೇಳುವುದನ್ನು ಗ್ರಹಿಸಿದ ಶ್ರೀಗಳು ಅಂತಹ ಮುಜುಗರದಿಂದ ಸದಾ ದೂರ ಸರಿಯುತ್ತಾರೆ.‌
ನಾವು ಅಷ್ಟೇ ತುಂಬ ತಿಳಿದವರ ಹಾಗೆ ಮಾತನಾಡಿ ದಡ್ಡತನ ಪ್ರದರ್ಶಿಸಿಬಿಡುತ್ತೇವೆ. *ಎಲ್ಲ ಬಲ್ಲವರು ನಮ್ಮ ಅಜ್ಞಾನಕ್ಕೆ ನಕ್ಕು ಸುಮ್ಮನಾಗುತ್ತಾರೆ*.

ಅದರ ಪ್ರಜ್ಞೆ ಇಟ್ಟುಕೊಂಡ ನಾನು ಕೆಲವು ಪ್ರಶ್ನೆಗಳನ್ನು ಮಾತ್ರ ಕೇಳಿ ಅವರಿಂದ ಸುದೀರ್ಘ ವಿವರಣೆ ಬಯಸಿದ್ದೆ.
ಇಂದು ಹಳಿಯಾಳದ ಸುಂದರ ಪರಿಸರ ಮಡಿಲಿನ ಕೋಟೆ ಪ್ರವಾಸಿ ಮಂದಿರದಲ್ಲಿ ದರ್ಶನವಾದಾಗ, ಕೈವಲ್ಯಾನಂದರ ಪರಿಣಾಮಕಾರಿ ಪರಿಚಯದ ಫಲವಾಗಿ ಉತ್ತರ ಲಭಿಸಿತು.

ಶಾಂತವಾಗಿ ಹರಿಯುವ ನದಿಯಂತೆ, ಪಕ್ಷಿಗಳ ಕಲವರದ ಸಂಗೀತದ ಮಧ್ಯ ಹೊರಟ ಪೂಜ್ಯರ ಮಾತುಗಳ ಗಂಭೀರವಾಗಿ ಆಲಿಸಿದೆ. ಅನೇಕ ಅನುಮಾನಗಳಿಗೆ ಮೋಕ್ಷ ಸಿಕ್ಕಿತು. ಏನೇನೋ ಭ್ರಮೆ ಇಟ್ಟುಕೊಂಡು ಬದುಕುವ,ಓದುವ,ಬರೆಯುವ,ಹೇಳುವ ನಮ್ಮ ಮಿತಿಗಳನ್ನು ತಮ್ಮದೇ ಶೈಲಿಯಲ್ಲಿ ಪೂಜ್ಯರು ತೆರೆದಿಟ್ಟರು.
ಗೊತ್ತಿರುವ ಪರಮ ಸತ್ಯಗಳಿಗೆ ದೊಡ್ಡವರ ಅಂಕಿತ ಬಿದ್ದರೆ ಇನ್ನೂ ಹೆಚ್ಚು ಸಮಾಧಾನವಾಗುತ್ತದೆ.

ಅನುಭವ ಮಂಟಪದಲ್ಲಿ ಬಸವಾದಿ ಶರಣರ ಮಾತುಗಳಿಗೆ ಪ್ರಭುದೇವರ ಅಂಕಿತ ಬಿದ್ದ ಮೇಲೆ ಅದು ವಚನವಾಗಿ ದಾಖಲಾಗುತ್ತಿತ್ತು.

ಹಾಗೆ ನಮ್ಮ ಅನೇಕ ಅಭಿಪ್ರಾಯಗಳಿಗೆ ದೊಡ್ಡವರ ಅಂಕಿತ ಬೇಕಾಗುತ್ತದೆ. ಅದೂ ಸಿದ್ಧೇಶ್ವರ ಅಪ್ಪಗಳಂತವರ ಒಪ್ಪಿಗೆ.
“ *ನಾವು ಬದುಕಿರುವ ಕಾಲಘಟ್ಟದಲ್ಲಿ ನಮ್ಮ ಖುಷಿಗಾಗಿ ಕೆಲಸ ಮಾಡಬೇಕು, ಬೇರೇಯವರನ್ನು ಬದಲಾಯಿಸಬಲ್ಲೆವು ಎಂಬ ಭ್ರಮೆಯಿಂದಲ್ಲ* ಕೋಟ್ಯಾಂತರ ಜನಸಂಖ್ಯೆ ಹೊಂದಿರುವ ನಮ್ಮ ದೇಶ ಎಲ್ಲವನ್ನೂ ಅರಗಿಸಿಕೊಳ್ಳುತ್ತದೆ, ಬೇಡವಾದದ್ದನ್ನು ಬೇಗ ತಿರಸ್ಕರಿಸಿಬಿಡುತ್ತದೆ. “ ಎಂಬ ಪೂಜ್ಯರ ಮಾತುಗಳು ವಾಸ್ತವವಾದ ಹಾಗೂ ವರ್ತಮಾನದಲ್ಲಿ ಬದುಕಬೇಕಂಬ ನನ್ನ ಆಲೋಚನಾ ಲಹರಿಗೆ ಮುದ್ರೆ ಒತ್ತಿದಂತಾಯಿತು.

ನಾವ್ಯಾರು ಪೂಜ್ಯರ ಹಾಗೆ ಸರಳವಾಗಿ ಬದುಕಲಾರೆವು ಆದರೆ ಅವರ ಹಾಗೆ ಆಲೋಚಿಸುವ ಮನೋಧರ್ಮ ರೂಪಿಸಿಕೊಳ್ಳುವ ಒಳೆಚ್ಚರ ಇಮ್ಮಡಿಸಿತು.
ತುಕ್ಕು ಹಿಡಿದ ಮನಸಿಗೆ ಹೊಸ ಹೊಳಪು ಹೊಳೆಯಿತು.
ಭ್ರಮೆಗಳಿಲ್ಲದೆ ಮಿತಿಯರಿತು ವರ್ತಮಾನವ ಅನುಭವಿಸಿ ಮುಂದೆ ಸಾಗಲು ಬೆಳಕು ದೊರೆಯಿತು.

*ಸಿದ್ದು ಯಾಪಲಪರವಿ*

No comments:

Post a Comment