Saturday, July 29, 2017

ಒಲವಿನ ವಚನ

ಒಲವಿನ ವಚನ

ಸಂಶಯದ ಸುಳಿಯಲಿ ನೋವಿನ
ಬೇಗುದಿಯಲಿ ಬೆಂದ ಜೀವ ನೀ

ಏಕಾಂತದ ಅಳಲು ಕೇಳಿದ ದೇವ
ನಿನಗಾಗಿ ಕಳಿಸಿದ ಧೂತ ನಾ

ಕಂಗಳ ಬೆಳಕಾಗಿ ಕಣ್ಣೀರ
ಅಳಿಸುವ ಅರಸ

ಸಿರಿವಂತ ಮುಖವಾಡದ ಬಡವನ
ಒಡಲಾಗ್ನಿಯಲಿ ಬೆಂದ ಸಹನಶೀಲೆ

ನುಂಗಿದ ನೋವ ಕಕ್ಕಿ ಬಿಡು
ವಿಷವಾಗಿ ಕರಳು ಕತ್ತರಿಸುವ ಮುನ್ನ

ಪ್ರೀತಿಯೇ ನನ್ನ ಉಸಿರು ಪ್ರೇಮವೇ
ನನ್ನ ಕಡಲು ನಂಬಿಕೆಯ ನಂ
ಬಿಗಿಯಲಿ ದಡ ಸೇರೋಣ

ಅನುಮಾನಿಸುವ ಮಾತ
ಮರೆತಬಿಡು ಪುಟವಿಟ್ಟ ಚಿನ್ನದಲಿ
ಕೆತ್ತಿದ ಬೆಳದಿಂಗಳ ಬೊಗಸೆ
ಕಂಗಳ ದೇವತೆ ನೀ

ಅಳುವದ ಮರೆತು ಮೆರೆ
ಮಹಾರಾಣಿಯ ಹಾಗೆ ನನ್ನ
ಹೃದಯ ಸಿಂಹಾಸನದಿ

ಪೂಜಿಸುವೆ ಆರಾಧಿಸುವೆ ಎದೆಯ
ಒಳಗೆ ಯಾರೂ
ನೋಡದೇ ಕದಿಯದಂತೆ

ಭಾವನೆಗಳ ಅರಮನೆಯಲಿ
ಬಡತನದ ಹಂಗಿಲ್ಲ
ಸಂಶಯದ ನಂಜಿಲ್ಲ.

ನಂಬಿ ಕೆಟ್ಟವರಿಲ್ಲ ನಂಬದಿರೆ
ನೆಮ್ಮದಿಯಿಲ್ಲ ನಂಬಿ ನಂಬುಗೆಯ
ಪಥದ ಮೇಲೆ ಹೊಸ ಪಯಣ
ಹೂಡೋಣ

ಇನ್ನೇನು ದಾರಿ ದೂರ ಸಾಗಿದೆ
ಉಳಿದ ನಾಲ್ಕು ಮಾರು ದಾರಿ
ಖುಷಿಯಿಂದ ಖುಷಿಗಾಗಿ ಸಾಗೋಣ
ನಸುನಗುತ ನೋವ ನುಂಗಿ

ಸವಿಯ ಸಮಪಾಲು ಒಲವ
ಸಮಭೋಗದ ಸಂಭ್ರಮದಲಿ
ಪಾಲುದಾರರಾಗಿ ಜೀವಯಾತ್ರೆಯ
ಜೀಕುತಲಿರೋಣ 

ಉಸಿರು ಉಸಿರಲಿ ಅಳಿಯದ
ಹೊಸ ಅನುಬಂಧದ
ಹೆಸರ ಹಸಿರಾಗಿಸೋಣ.

---ಸಿದ್ದು ಯಾಪಲಪರವಿ

No comments:

Post a Comment