Tuesday, March 5, 2019

ನೀನು ಧ್ಯಾನ

*ನೀನು, ಧ್ಯಾನ,ಕಾಮ‌‌ ಮತ್ತು ದೇವಸಮಯ*

ದೇವಸಮಯದಲಿ ನೀ ಸಿಕ್ಕದ್ದಷ್ಟೇ ನೆನಪು, ಮುಂದಿನದೆಲ್ಲ ಅನಿರೀಕ್ಷಿತ ತುಂಬ ತುಂಬಾ ಅನಿರೀಕ್ಷಿತ!
ಬದುಕಿನ ಹುಡುಕಾಟಕೆ ನೂರಾರು ಉದ್ದೇಶವೋ, ದುರುದ್ದೇಶವೋ ನಾ ಕಾಣೆ.‌ ಒಟ್ಟು ಹುಡುಕಾಟವಿರುತ್ತದೆ. ಗಂಡಸಿನ ಮನಸು ಒಂದರ್ಥದಲ್ಲಿ ತುಡುಗ ದನ, ಅವಕಾಶಕ್ಕಾಗಿ ಕಾಯುವ ಅಷ್ಟಾವಂಕ ಅಥವಾ ಅಷ್ಟಾವಕ್ರನಂತೆ. ಅವಕಾಶ ಸಿಕ್ಕರೆ ಒಂದು ಕೈ ನೋಡಿಯೇ ಬಿಡುವ ಹೀನ ಚಪಲ.

*ಆದರೆ ನಾನು ಹೆಣ್ಣನ್ನು ಹೀಗೆ ವ್ಯಾಖ್ಯಾನಿಸುವಷ್ಟು ನೀಚನಾಗಲಾರೆ.ಅವಳಿಗಿರುವ ಸಂಯಮ ಅಪರೂಪ, ಅನುರೂಪ ಹಾಗೂ ಅನನ್ಯ*.

ಪ್ರತಿಯೊಬ್ಬ ಗಂಡಸಿನ ಮೊದಲ ಸೆಳೆತ ಹೆಣ್ಣು ಅಂತಾರೆ ನಂತರ ಹೊನ್ನು ಮತ್ತು ಮಣ್ಣು ,‌ ಆದರಿದು ಅವರವರ ಅಭಿರುಚಿ, ಆಸಕ್ತಿ ಮತ್ತು ವಯೋಮಾನಕ್ಕೆ ಸಂಬಂಧಿಸಿದ್ದು ಬಿಡಿ. ಈಗ ನಾ ನನ್ನ ಮಿತಿಯನಷ್ಟೇ ಮಾತಾನಾಡುವೆ.‌ ಮಾತನಾಡಬೇಕು ಕೂಡ!
I have no right to speak on others.

ಒಟ್ಟಾರೆ ನಾ ಹುಡುಕಿದ್ದು ನಿಜ. ಒಮ್ಮೆಲೇ ಆ ಹುಡುಕಾಟ ನಿಲ್ಲಿಸುವ ಆಲೋಚನೆ ದಟ್ಟವಾಗಲು ನನ್ನ ವಯೋಮಾನ ಕಾರಣವಾಯಿತು. ಉಳಿದ ಆಧ್ಯತೆಗಳು ಆವರಿಸಲಾರಂಭಿಸಿದವು. ಅದೇ ಹೆಸರು, ಕೀರ್ತಿ, ಜವಾಬ್ದಾರಿ, ಹಣ, ಆಸ್ತಿ ಹೀಗೆ ಹೊಸ ಆಸೆಗಳ ಮಧ್ಯೆ ನೀ ಧುತ್ತೆಂದು ಕಾಣಿಸಿಕೊಂಡಾಗ ಎಲ್ಲ ಉಲ್ಟಾ ಪಲ್ಟಾ.

ಹಾಗೆ ಮಾತು ಕತೆ ಮುಂದುವರೆದಾಗ ನೀ ಕಳೆದು ಹೋದೆ, ಬದುಕಿನಲಿ‌ ಯಾವತ್ತೂ ಕಳೆದು ಹೋದವಳೇ ಅಲ್ಲ ಎಂದು ಗೊತ್ತಾದಾಗ ನಂಬಲಾಗಲೇ ಇಲ್ಲ ಆದರೀಗ ನಂಬಿದ್ದೇನೆ, ನಂಬುವುದು ಧರ್ಮ.

ಬಂಗಾರ ಪರೀಕ್ಷೆ ಮಾಡಲು ಅತಿಯಾಗಿ ತಿಕ್ಕಿದರೆ ಅಂದ ಕಳೆದುಕೊಳ್ಳುತ್ತದೆಯೋ ಹೊರತು ಅದು ಕಬ್ಬಿಣವಾಗುವುದಿಲ್ಲ. ಈಗ ತಿಕ್ಕುವ ತಿಕ್ಕಲುತನ ನಿಲ್ಲಿಸಿ ಹಗುರಾಗಿದ್ದೇನೆ. ನೀ ಅಂತವಳಲ್ಲ ಎಂಬ ಸತ್ಯ ಅಂದರೆ ಸತ್ಯ ಅಷ್ಟೇ.

ಹಲವು ಭೇಟಿ, ಚರ್ಚೆಗಳ ನಂತರ ಹೆಚ್ಚು ಹತ್ತಿರ ಆಗಿದ್ದು ದೈವ ಕೃಪೆ. ಆಧ್ಯಾತ್ಮಿಕ ಬದುಕ ಅನುಭವಿಸಿದ ಮೇಲೆ ಯಾಕೋ ಮೋಸ ಮಾಡಿಕೊಳ್ಳುವ ಮನಸಾಗಲಿಲ್ಲ. ಸಣ್ಣಗೆ ಪಾಪ ಪ್ರಜ್ಞೆ ಕಾಡಲಾರಂಭಿಸಿ “ಯಾಕೆ ಹೀಗಾಯ್ತು ? “ ನಂಬಿದ ದೇವರಿಗೆ ನಿರ್ಮಲವಾಗಿ ಪ್ರಶ್ನಿಸಿದೆ. ಉತ್ತರ ಸಿಕ್ಕಿತು.

ಇದು ಕೇವಲ ಯೋಗಾಯೋಗ ಅಂದುಕೊಂಡು ಪಯಣ ಮುಂದುವರೆಸಿದೆ. ದಕ್ಕಿಸಿಕೊಳ್ಳುವ ಕಾರಣದಿಂದಾಗಿ ಏನೇನೋ ಯೋಚನೆ,ಯೋಜನೆ, ಆಯೋಜನೆ ತಾನೇ ತಾನಾಗಿ ರೂಪಗೊಂಡವು.
ನೀನು ಯಾವುದು ಅಸಾಧ್ಯ ಅಂದಿದ್ದೆ ಅದೆಲ್ಲ ಸಾಧ್ಯವಾಗುವ ವಾತಾವರಣ ಸೃಷ್ಟಿಯಾಯಿತು.
ಹಳೆಯ ಸುದೀರ್ಘ ಬಂಧನ‌ ಅವರಾಗಿಯೇ ಕಡಿದಾಗ ನಿನ್ನಂತೆ ನನಗೂ ಆಶ್ಚರ್ಯ!

‘ ಅರೆ ಇದು ಹೇಗೆ ಪಕ್ಕದಲ್ಲಿ ಇದ್ದವರು ತಾವೇ ಹೇಗೆ, ಯಾಕೆ ದೂರಾದರು’  ಅದನ್ನು ನಾವಿಬ್ಬರೂ ಊಹಿಸಿರಲಿಲ್ಲ.

ದೈವ ಕೃಪೆ ಹೊಸ ಅನುಬಂಧದ ಪರವಾಗಿರಲು ಕಾರಣ ತೀವ್ರ ತುಡಿತವಿರಬೇಕು ಅಂದುಕೊಂಡೆವು, ಆದರೆ ಬರೀ ತುಡಿತವಿದ್ದರೆ ನಾವು ಮೈ ಮರೆತು ಅನಾಹುತ ಮಾಡಿಕೊಂಡು ಸಿಕ್ಕು ಬೀಳುತ್ತಿದ್ದೆವು.

ನಾನಂತೂ ದೇವರನ್ನು ಗಟ್ಟಿಯಾಗಿ ಹಿಡಿದುಕೊಂಡೆ, ಬೇರೆ ದಾರಿಯೇ ಇರಲಿಲ್ಲ, ಹೆದರಿ ದೂರಾಗುವ ಮನಸು ಇರಲಿಲ್ಲ, ದಕ್ಕಿಸಿಕೊಳ್ಳಲು ನೂರಾರು ಕಾರಣಗಳು ಸಹಜವಾಗಿ ಹುಟ್ಟಿಕೊಂಡವು.
ವಿಧಿ, ಋಣಾನುಬಂಧ ಹೀಗೆ ಏನೇನೋ ವ್ಯಾಖ್ಯಾನಿಸುತ್ತ ಹೋದೆವು. ಅದು ಅನಿವಾರ್ಯ ಇತ್ತು. ನಿನಗೆ ಒಮ್ಮೊಮ್ಮೆ ರೋಸಿ ಹೋಗಿ ಸಂಬಂಧ ಕಡಿದು ಕೊಳ್ಳುವಷ್ಟು ಕಿರಿಕಿರಿ ಆದರೂ ಸಹಿಸಿಕೊಂಡೆ ಕಾರಣ?

‘ಹಳೆಯ ಬಂಧನದಿಂದ ಸಂಪೂರ್ಣ ಹೊರ ಬಂದಿದ್ದೆ ನಾನು ದೂರಾದರೆ?’ ಇಂತಹ ಆತಂಕಕಾರಿ ಪ್ರಶ್ನೆಗಳು ನಿನ್ನನ್ನು ಕಟ್ಟಿ ಹಾಕಿ ನರಳುವಂತೆ ಮಾಡಿದವು.

ಸಮಾಜದ ಮುಖವಾಡಗಳ ಕಿತ್ತಿ ಬಿಸಾಕಿದೆ, ವ್ಯವಸ್ಥೆಗೆ ನೀ ಅನಿವಾರ್ಯ ಎಂಬ ಭ್ರಾಂತು ಬಿಡಿಸಲು ತುಂಬ ಸಮಯ ತೆಗೆದುಕೊಂಡೆ. ಏನೇ ಆಗಲಿ ಹಟಕ್ಕೆ ಬಿದ್ದು ದಕ್ಕಿಸಿಕೊಂಡೆವು, ಆ ಮಾತು ಬೇರೆ.

                                    ***

ಇದು ಪರಸ್ಪರ ದಕ್ಕಿಸಿಕೊಂಡ ಬಗೆಯಾದರೆ ಉಳಿದಿರುವ ಸಂಗತಿಗಳಿಲ್ಲಿ ನೆನಪಿಸಬೇಕು.
ಗಂಡು ಹೆಣ್ಣಿನ ಲವ್ ಮೇಕಿಂಗ್ ಆಯಾಮಾಗಳನ್ನು ಮಿಲನ ಅಂತಾರೆ, ಮಿಲನೋತ್ಸವ ಅಂತಾರೆ ನಾ ತುಂಬ ಸಡಗರದಿ‌ಂದ *ಮಿಲನಮಹೋತ್ಸವ* ಎಂದು ಬರೆದು ಬಿಟ್ಟಿದ್ದೆ ಆದರದು ಕೇವಲ ಅಕ್ಷರದ ಸಂಭ್ರಮವಾಗಿತ್ತು.

ಮಾನವೀಯ ಸಂಬಂಧಗಳನ್ನು ಕಟು ವಾಸ್ತವದಲಿ ಓಶೋ ವಿವರಿಸುವದನ್ನು ಕೇಳಿದಾಗ *ಇಂಪಾಸಿಬಲ್* ಅನಿಸುತ್ತಿತ್ತು. ಒಬ್ಬ ಅಷ್ಟೊಂದು ಗಟ್ಟಿಯಾಗಿ ಹೇಳಲು ಅವನ ಜೀವನಾನುಭವವೇ ಕಾರಣ ಎಂಬ ಸತ್ಯ ಗೊತ್ತಿದ್ದರೂ ಗುಮಾನಿಸಿದ್ದೆ. ಅವನು ಮಿಲನದ ಕುರಿತು ಹೇಳಿದ್ದು ಪ್ರಯೋಗಿಸಬೇಕೆಂಬ ಬೇಗುದಿ ಸುಪ್ತಮನಸಲಿ ಸುಳಿದಾಡುತ್ತಿತ್ತು
ಅಂತಹ ಪ್ರಯೋಗದ ಕುರಿತು ಅನಿವಾಸಿ ಸಂಗಾತಿಯೊಬ್ಬರೊಂದಿಗೆ ಮಾತಾಡಿದ್ದೆ.

ಗಂಡು ತನ್ನ ಸಂಗಾತಿಯ  ಪರಮಸುಖ ಲೆಕ್ಕಿಸದೇ ವಿಸರ್ಜಿಸಿ ಹಗುರಾಗಿ ಮುಗಿಸುವ ಸಮಭೋಗ ವ್ಯವಹಾರದಲ್ಲಿ ಮಿಲನವೂ ಇಲ್ಲ ಮಹೋತ್ಸವವೂ ಇಲ್ಲ ಅದೊಂದು ಕೇವಲ ಕೆಲ ನಿಮಿಷಗಳ ಕ್ರಿಯೆ. ಮೊದಲಾಟದ  ಪ್ರೇಮದ ಉತ್ತುಂಗಕೇರಲು ಇಬ್ಬರೂ ವಂಚಿತರಾಗಲು ಅವಸರವೇ ಕಾರಣ.
ಮಿಲನ ಹೇಗಿರಬೇಕೆಂದು ಓಶೋ ವಾತ್ಸಾಯನನ್ನು ಮೀರಿಸುವಂತೆ ಹೇಳಿ ಎಚ್ಚರಿಸಿದರೂ ಇಂದಿಗೂ ಅದೊಂದು ಅತ್ಯವಸರದ ವಿಸರ್ಜನೆಯಾಗಿ ಉಳಿದಿದೆ ಮಹೋತ್ಸವದ ಸಡಗರ ವಿರಳಾತಿ ವಿರಳ.

ಓದು,ಬರಹ,ಧ್ಯಾನದ ಮಹತ್ವ ಅರಿತ ಮನಸು ಆ ರೀತಿಯ ಮಹೋತ್ಸವದ ಆಚರಣೆಗಾಗಿ ತುಡಿಯುತ್ತಿತ್ತು.
‘ಆ ರೀತಿಯ ಸಂಗಾತಿಗಳು, ಶಿಷ್ಯರು, ಸ್ನೇಹಿತರು ದೇವಸಮಯದಲಿ ಮಾತ್ರ ಸಿಗುತ್ತಾರೆ’ ಎಂಬ ವೀಣಾ ಬನ್ನಂಜೆಯವರ ಮಾತನ್ನು ನೆನಪಿಸಿಕೊಂಡೆ.
ಈ ಮಾತು ಲಂಪಟರಿಗೆ, ಫ್ಲರ್ಟ್ ಗಳಿಗೆ ಅನ್ವಯಿಸಲಾರದು ಕೂಡ.
ನಾನು ಲಂಪಟನಲ್ಲವಾದರೂ ಚಂಚಲದ ಹುಡುಕಾಟ, ಕುತೂಹಲ ನಿಂತಿರಲಿಲ್ಲ. ಬಹುಶಃ ಸಿಕ್ಕವರು ದೇವಸಮಯದಲಿ ಸಿಕ್ಕಿರಲಿಲ್ಲವೇನೋ?

ನನ್ನ ಪೂರ್ವಾಪರ ಮುಕ್ತವಾಗಿ, ಪ್ರಾಮಾಣಿಕತೆ ಹೇಳಿಕೊಳ್ಳುವ ಧೈರ್ಯ ನನ್ನದು.
ನೀ ತುಂಬ ಮುಜುಗರ ಪಟ್ಟುಕೊಂಡದ್ದು ಅಸಹಜವೇನಲ್ಲ.
ಪ್ರೀತಿ, ಜೀವನೋತ್ಸಾಹ ಹಾಗೂ ಸಹನೆಯಿಂದ ನಿನ್ನನ್ನು ಸಂಪೂರ್ಣ ಆಕ್ರಮಿಸಲು ತೀರ್ಮಾನಿಸಿದೆ. ನೀನಿರುವ ವಾತಾವರಣದಲ್ಲಿ ಅದು ಅಸಾಧ್ಯ ಎಂದು ನೀ ಅಂದುಕೊಂಡಿದ್ದೆ, ನನಗೆ ಹಾಗನಿಸಿರಲಿಲ್ಲ.
ನನದೊಂದು ರೀತಿಯ ಅವಾಸ್ತವದ ಸಾತ್ವಿಕ ಹಟ, ಅದರಲ್ಲಿ ಸ್ವಾರ್ಥ ಇರಬಹುದು ವಂಚನೆ, ಮೋಸ ಮಾತ್ರ ಇರಲಿಲ್ಲ.
ನಂಬಿದ ದೇವರ ಪಾಲಿಗೆ ವಾಮ-ಕ್ಷೇಮ ಬಿಟ್ಟು ಭಂಡ ಧೈರ್ಯದಿಂದ ಮುನ್ನುಗ್ಗಿದೆ.

ವಾದ-ವಿವಾದ-ಜಗಳ-ಕಿರಿಕಿರಿಯಿಂದ ಮುಕ್ತರಾಗುವುದು ಯಾಕೋ ಇಂದಿಗೂ ಸಾಧ್ಯವಾಗುತ್ತಿಲ್ಲವಾದರೂ ಅನುಬಂಧ ಮಾತ್ರ ಗಟ್ಟಿಯಾಗಿ ಉಳಿದಿದೆ, ಉಳಿಯುತ್ತೆ.
ಯಾಕೆಂದರೆ ಇಲ್ಲಿ ಬರೀ ವ್ಯಾಮೋಹ, ಕಾಮನೆಗಳಿಲ್ಲ. ಓದಿದೆ,ಬರಹವಿದೆ, ಚಿಂತನೆಯಿದೆ, ಸಾಹಿತ್ಯದ ಗುರಿಗಳೂ ಇವೆ. ಬರೀ ತೀಟೆ, ತೆವಲುಗಳಿದ್ದರೆ ಯಾವುದೂ ಉಳಿಯುವುದಿಲ್ಲ.

                               ***

ದೇಹದಾಚೆಗಿನ ಈ ಬಂಧನ ಇನ್ನೂ ಬೆಸೆದುಕೊಳ್ಳಲು ದೇಹಾದಾಟದ ಗಮ್ಮತ್ತು ಬಹುದೊಡ್ಡ ಕಾರಣ ಎಂಬುದ ನಿರಾಕರಿಸಲಾಗದು.
“ದೇಹವೇ ದೇವಾಲಯ” ಬಸವಣ್ಣ ಹೇಳಿದ್ದು ಯಾವ ಕಾರಣಕ್ಕೆ?, “ಆಹಾರವ ಕಿರಿದು ಮಾಡಯ್ಯ” ಎಂದು ಅಕ್ಕ ಅದೇ ದೇಹದ ಆರೋಗ್ಯ ಕಾಪಾಡಲು,  ಆದರೆ‌ ನಾವು ತಿಂದು ತೇಗಿ ದೇಹವ ದೇವಾಲಯ ಮಾಡದೇ ಕಸದ ಗುಂಡಿಯಾಗಿಸಿದ್ದೇವೆ.
ಮನಸನ್ನು ಕೊಳೆತು ನಾರುವ ಹೆಣದ ಹಾಗೆ ಇಟ್ಟುಕೊಂಡಿದ್ದೇವೆ. ಆದರೆ ಬಾಯಿಂದ ಬರೀ ವೇದಾಂತ ಹೇಳುವ ಹುಳುಗಳು ನಾವೆಂಬುದ ಮರೆತುಬಿಟ್ಟಿದ್ದೇವೆ.

ಓಶೋ ಹೇಳಿದ ಮಹೋತ್ಸವಕೆ ಮನಸನು ಹದಗೊಳಿಸಿದೆ, ಆಹಾರವ ಕಿರಿದು ಮಾಡಿದೆ, ದೇಹವ ದೇವಾಲಯ ಎಂದು ನಂಬಿ ನನ್ನ ನಾ ಕನ್ನಡಿಯೊಳು ನೋಡಿಕೊಂಡೆ. ಹೊಸ ಹೊಳವೊಂದು ಮಿಂಚಿ ಮಾಯವಾಗದಂತೆ ಗಪ್ಪನೆ ಹಿಡಿದುಕೊಂಡೆ.

ಮನಸು ನೆಲೆಸುವ ದೇಹಕೂ ಅದರದೇ ಆದ ತಾಕತ್ತಿದೆ, ಕಂಪನಗಳಿವೆ, ಆ ವೈಬ್ರೇಶನ್ನುಗಳನ್ನು ನಾವು ಅನುಭವಿಸುವಷ್ಟು ಧ್ಯಾನಸ್ಥ ಸ್ಥಿತಿಗೇರುವುದೇ ಇಲ್ಲ. ನಮಗೆ ಆ ಸಹನೆಯೇ ಇಲ್ಲ *ಅವಸರ ಬರೀ ಅವಸರ ಗಡಿಬಿಡಿ*.

*ದೇಹದಾಟದ ಗಮ್ಮತ್ತಿನಲ್ಲೂ ಧ್ಯಾನವಿದೆ, ಆಲಿಸುವ ಸಂಗೀತದಲ್ಲಿಯೂ ಧ್ಯಾನವಿದೆ, ಓದುವ ಅಕ್ಷರಗಳಲೂ ಧ್ಯಾನವಿದೆ, ಬರೆಯುವ ಬೆರಳುಗಳಲೂ ಧ್ಯಾನವಿದೆ, ತಿನ್ನುವ ಕ್ರಮದಲೂ ಧ್ಯಾನವಿದೆ, ಹಾಕುವ ಹೆಜ್ಜೆಗಳಲೂ ಧ್ಯಾನವಿದೆ, ಆಡುವ ಮಾತಿನ ಪ್ರತಿ ಶಬ್ದಗಳಲೂ ಧ್ಯಾನವಿದೆ*.

ಧ್ಯಾನವೆಂದರೆ ಬರೀ ಕಣ್ಣು ಮುಚ್ಚಿ ಉಸಿರಾಡುವುದಲ್ಲ. ಮಲಗುವತನಕ ನಾವು ಕಳೆಯುವ ಪ್ರತಿ ಕ್ಷಣಗಳನ್ನು ನಾವೇ ಮೂರನೇ ವ್ಯಕ್ತಿಯಾಗಿ ಗಮನಿಸಿ ನಿಯಂತ್ರಿಸಿ ಸಮಾಧಾನದಿಂದ ನಡೆಯುವುದು.

ಮೊದಲು ಆ ಸಮಾಧಾನ ನಾವು ತುಂಬ ಬಯಸುವ ಕಾಮದಾಟದಿಂದ ಆರಂಭವಾಗಿ ಉಳಿದ ಕ್ರಿಯೆಗಳಿಗೆ ವ್ಯಾಪಿಸಬೇಕು. ಮುಪ್ಪಾದ ಮೇಲೆ ದೇಹ ತನ್ನ ಕಾಮಸತ್ವ ಕಳೆದುಕೊಳ್ಳುತ್ತದೆ ಆದರೆ ಮನಸು ಹಾಗಲ್ಲ. ಅದಕೆ ಮುಪ್ಪು ಇಲ್ಲ.
ದೇಹದಲಿ ಕಸುವಿದ್ದಾಗ ಮಾತ್ರ ದೇಹದೊಂದಿಗೆ ಆಟ ಆಡಬಹುದು;ಅದನ್ನು ಸರಿಯಾಗಿ ವ್ಯವಧಾನದಿಂದ ಆಡಬೇಕು.

                                 ***

ಅದೇ ಗಾಢವಾದ ಧ್ಯಾನಸ್ಥ ಸ್ಥಿತಿಯಲ್ಲಿ ಮೊದಲ ಭೇಟಿಗೆ ಅಣಿಯಾದೆ…

ಪಯಣದುದ್ದಕ್ಕೂ ನಿರರ್ಗಳವಾಗಿ ಮಾತನಾಡಿ ಸಲಿಗೆ ವ್ಯಾಪಿಸಿಕೊಂಡೆ. ಮನದಾಳದ ಆಸೆ ಹೇಳುವಾಗ ನಿನ್ನ ಮುಖ ಅರಳಿ ಸಮ್ಮತಿಸುತ್ತಲೇ ಹೋಯಿತು.
You looked more cheerful and gorgeous beyond your age and beauty because it was my deep love on you.

ಪ್ರೀತಿ ಇದ್ದ ಮೇಲೆ ಎಲ್ಲವೂ ಗೌಣ. ಪ್ರೀತಿ ಎಲ್ಲವನ್ನೂ ದಕ್ಕಿಸಿಕೊಳ್ಳುತ್ತದೆ, ಪ್ರೀತಿಗಾಗಿ ಮೈಮನ ಅರಳಿದ ಮುಸ್ಸಂಜೆ.
ಅಪರಿಚಿತ ಮನಸುಗಳು ಅಪರಿಚಿತ ಜಾಗ ತಲುಪಿದಾಗ ನಡು ರಾತ್ರಿ. ನಳನಳಸುವ ದೀಪಗಳಲಿ ಓಡುವ ವೇಗದಲಿ ಇಬ್ಬರಲೂ ಕುತೂಹಲ.
ಸುಸಜ್ಜಿತ, ಸುರಕ್ಷಿತ ಜಾಗ ತಲುಪಿದಾಗ ಸುದೀರ್ಘ ನಿಟ್ಟುಸಿರು.

                      ***
ಮಂದ ಬೆಳಕಲಿ ನಾ ಕಂಡ ಕನಸ ಸಾಕಾರಗೊಳಿಸುವ ತೀವ್ರತೆ. ಸ್ವಲ್ಪ ಸಹನೆ ಕಳೆದುಕೊಂಡರೆ ಎಲ್ಲ ಕೈ ಬಿಟ್ಟು ಹೋಗುತ್ತದೆ ಎಂಬ ಒಳೆಚ್ಚರ ಜಾಗೃತವಾಗಿತ್ತು.
ಮಾತು ಮಾಯವಾಗಿ ಮೌನ ಬೆಳಗಲಾರಂಭಿಸಿದಾಗ ನೀ ಕೈಗೊಂಬೆಯಾದೆ. ನಿನಗೆ ಅದೆಲ್ಲ ಹೊಸದೆಂದು ನಾ ಊಹಿಸಿರಲಿಲ್ಲ.
ಪೂಜೆಯಂತೆ, ಧ್ಯಾನದಂತೆ, ಸಂಗೀತದಂತೆ ಸಹನೆಯ ಲಹರಿ ರಿಂಗಣವಾಡಿತು ನಮ್ಮ ಮೈಮನಗಳ ತುಂಬ.

ಮೊದಲಾಲಿಂಗನಕೆ ಕರಗಿ ಕೈಸೆರೆಯಾದೆ, ವಶೀಕರಣಕೊಂಡವಳಂತೆ ಎಲ್ಲವನ್ನೂ ಪರಿಪಾಲಿಸಿದೆ.
ಹೂಮಂಚದಲಿ ಅರಳಿದಾಗ ರಕ್ಕಸನಂತೆ ಭೋಗಿಯಾಗದೇ  ಯೋಗಿಯಾದೆ, ಸಹನೆಯ ಅವಗಾಹನೆ ಮಾಡಿಕೊಂಡೆ.

*ನನ್ನ ಕೈಲಿರುವ ವೀಣೆಯ ತಂತಿಗಳ ನವಿರಾಗಿ ಮೀಟಿದೆ, ನಾದ ಉನ್ಮಾದ ಹೊರ ಹೊಮ್ಮಿತು*

ಸಂಗೀತ ವಾದ್ಯಗಳ ಮೇಲೆ ಕೈಯಾಡಿಸಿ ನಾದ ಹೊರಡಿಸಬೇಕೇ ಹೊರತು ಒರಟಾಗಿ ಅಲ್ಲ.
ಎದುರಿಗೆ ಮೃಷ್ಟಾನ್ನ ಭೋಜನ ಗಬ ಗಬ ತಿನ್ನದೇ ಸವಿ ರುಚಿ ಅನುಭವಿಸಲು ನಿರ್ಧರಿಸಿದೆ.

ಹಾಲು-ಜೇನು, ಹಣ್ಣು-ಹಂಪಲು, ದ್ರಾಕ್ಷಾ ಗೊಂಚಲು, ಸಿಹಿ ತಿನಿಸುಗಳ ಒಂದೊಂದಾಗಿ ಸವಿಯುತ ತಟ್ಟೆ ತುಂಬ ಬೆರಳಾಡಿಸುವ ಅಭಿರುಚಿ ನೂರ್ಮಡಿಸಿದೆ.
ಸರ ಸರ ಹರಿದಾಡುವಾಗ ಭಾರ ಹಾಕಿ ಹಿಂಸೆಮಾಡದೇ ಹಕ್ಕಿಯಂತೆ ಗರಿಬಿಚ್ಚಿ ಕೊಂಚ ಅಂತರದಲಿ ಹಗುರಾಗಿ ಹಾರಿದೆ.

ಸಹನೆ-ನಿಯಂತ್ರಣಗಳ ಉಸಿರ ಏರಿತದ ಅನುರಣನ ಆಲಿಸಿದೆ.
ಇಡೀ ದೇಹದ ತುಂಬ ವ್ಯಾಪಿಸಿರುವ ಉನ್ಮಾದದ ಕಂಪ ಮೂಸಿದೆ.
ನೀ ಅರಳಿದ ಪರಿ… *ಸೂರ್ಯನುದಯಕೆ ತಾವರೆಯೇ ಜೀವಾಳ*
ಅರಳುತ್ತ ಅರಳುತ್ತ ಕೇಳಿದ್ದೆಲ್ಲ ಕೈಗಿತ್ತೆ. ಒಮ್ಮೆಲೇ ನುಗ್ಗಿದಾಗ ಸಂಭ್ರಮ ಮುಗಿಲು ಮುಟ್ಟಿತು. “ಹೊರ ಬರಲಾ” , “ಹೂಂ” ಮುಗುಳ ನಗುವಿನ ನಿವೇದನೆಗೆ ಅಷ್ಟೇ ಸಹನೆಯಿಂದ…
ಹಗುರಾಗುವ ಧಾವಂತ ಕೈ ಬಿಟ್ಟು ಹೊರ ಬಂದ ಪರಿ ಅನಿರೀಕ್ಷಿತ ನಿನಗೂ, ನನಗೂ…

ಇದೆಲ್ಲ ನಿಂಗೆ ಹೊಸದೆಂದು ತಿಳಿದಾಗ ನನಗೆ ಹೇಗಾಗಿರಬೇಡ!
ನನಗೂ ಹೊಸದೇ ನಾವು ಮದುಮಕ್ಕಳು ನಮಗಾಗಿ.
ಮಿಲನ ಮಹೋತ್ಸವ ಮುಗಿಯುವ ಸೂರ್ಯ ಕಣ್ಣುಬಿಟ್ಟಿದ್ದ ನಾವು ಕೊಂಚ ವಿರಮಿಸಿದಾಗ…
ಲೋಕದ ತುಂಬ ತೃಪ್ತಿ, ಸಂತೃಪ್ತಿ, ಮುಂದೆಂದೂ ಹಸಿವಾಗದಷ್ಟು ಉಂಡ ಮಹದಾನಂದ.
ಹಾಗೆ ಉಂಡರೆ ನಾವು ನಮ್ಮೊಂದಿಗೆ ಮಾತ್ರ ಎಂಬ ಖಚಿತತೆ.

ಪ್ರತಿ ಮಿಲನದಲೂ ಅದೇ ಸಹನೆ, ಅದೇ ಏಕಾಂತ, ತಾದಾತ್ಮಕತೆ, ಹೊಸತನದ ಕಂಪನ, ಅದೇ ಒಲವ ವರತೆ, ಮೆಲ್ಲುಸಿರ ಸವಿಗಾನ.
ದೇಹವೇ ದೇವಾಲಯ ಅದನು ಪೂಜಿಸಿ,ಆರಾಧಿಸಿ ಶುಚಿಯಾಗಿಡಬೇಕು‌. ಆ ಆರಾಧನೆಯಲಿ ನಿಯತ್ತು, ಪಾರದರ್ಶಕತೆ ವಿಜ್ರಂಭಿಸಬೇಕು.
*ಒಲವ ಹೂ ಹರಡಿ, ವಿಶ್ವಾಸದ ಪತ್ರಿಯನೇರಿಸಿ, ಪಿಸುಮಾತುಗಳ ಜಾಗಟೆ ಬಾರಿಸಿ, ಪ್ರೇಮದ ಕ್ಷೀರಾಭಿಷೇಕದಲಿ ಪೂಜಿಸಿ ನಮಿಸಬೇಕು*.

ನಾನೀ ಬೇಧವನಳಿಸಿ ಬೆರೆಯಬೇಕು ಹಾಲ ಜೇನಾಗಿ, ಕಲ್ಲು ಸಕ್ಕರೆಯಂತೆ ಕರಗಿ ಸವಿ ಹರಿಸಬೇಕು.
ದೇಹವಿದು ದೇವಾಲಯ ಅರಿತು ನಡೆದಾಗ, ಇಲ್ಲದಿರೆ ಮಾಂಸದ ಮಡಿಕೆ…
ಜಗಳ,ವಾದ,ವಿವಾದ ಅಹಂಕಾರ ಹಾಗೂ ಅಜ್ಞಾನ ಎಲ್ಲವೂ ಗೌಣ, ಮಂಗಮಾಯ ಈ ಮಿಲನದ ಸವಿ ಸಡಗರ ನೆನೆದು ಓಡೋಡಿ ಬಳಿ ಬಂದು ಬಿಗಿದಪ್ಪಿದಾಗ…
ನಿಲ್ಲಲಾಗದು ಮೆಲ್ಲುಸಿರ ಸವಿಗಾನ...ಮೆಲ್ಲುಸಿರ ಸವಿಗಾನ...

No comments:

Post a Comment