Sunday, March 10, 2019

ಕನ್ನಡದ ಅಸ್ಮಿತೆ

*ಒಂದು ಪ್ರತಿಕ್ರಿಯೆ*

ಪದ್ಮರಾಜ ದಂಡಾವತಿ: ಕನ್ನಡ ಚುನಾವಣೆ ವಿಷಯ... ‌( ಪ್ರಜಾ ಮತ, ೨ ಮಾರ್ಚ್ , ೨೦೧೮)

*ಕನ್ನಡದ ಅಸ್ಮಿತೆ ಚುನಾವಣಾ ದಾಳವಾಗದು*.

ದಂಡಾವತಿಯವರು ಕನ್ನಡ ಹೋರಾಟ ನಡೆದು ಬಂದ ಬಗೆಯನ್ನು ಅರ್ಥಪೂರ್ಣವಾಗಿ ವಿವರಿಸಿ ಎಚ್ಚರಿಸಿದ್ದಾರೆ.

ನೆರೆ ರಾಜ್ಯಗಳಾದ ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳ ಜನರಷ್ಟು ಭಾಷಾಭಿಮಾನ ಕನ್ನಡಿಗರದಲ್ಲ.

ಇಂಗ್ಲಿಷ್ ಮಾಧ್ಯಮ ಶಿಕ್ಷಣದ ದಾಸರಾದ ಮಧ್ಯಮ ವರ್ಗದ ಕನ್ನಡಿಗರು ಕನ್ನಡದಿಂದ ದೂರ ಸರಿದಿದ್ದಾರೆ.

ಮಾತೃಭಾಷೆಯ ಶಿಕ್ಷಣದ ಮಹತ್ವದ ಕುರಿತು ಕುವೆಂಪು ಆದಿಯಾಗಿ ಜಗತ್ತಿನ ಎಲ್ಲ ಶಿಕ್ಷಣ ತಜ್ಞರು ಗಂಟಲು ಹರಿದುಕೊಂಡರೂ ಗ್ರಹಿಸಲಾಗದ ಕಿವುಡರು ನಾವು.

ಮಾತೃ ಭಾಷಾ ಶಿಕ್ಷಣದ ಮಹತ್ವ ಒಂದು ಸಮೂಹ ಪ್ರಜ್ಞೆಯಾಗಿ ಉಳಿಯಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಕನ್ನಡ ನಾಶವಾಗಲು ಹೋರಾಟದ ಮುಂಚೂಣೆಯಲ್ಲಿರವವರ ನೈತಿಕ ಪ್ರಶ್ನೆಯೂ ಕಾರಣ.

ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ವೇದಿಕೆ ಮೇಲೆ ಮಾತನಾಡುವ ಶಿಕ್ಷಣತಜ್ಞರು, ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕೊಡಿಸಿ ನೈತಿಕ ಮಟ್ಟ ಕಳೆದುಕೊಂಡಿರುವುದು ಕನ್ನಡದ ದೌರ್ಭಾಗ್ಯ.

ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಬಲಶಾಲಿಯಾಗಿ ಉಳಿದಿದೆ. ಪುಸ್ತಕ ಪ್ರೇಮದ ಅನನ್ಯತೆಯನ್ನು ಪ್ರಶ್ನಿಸಲಾಗದು.

ಆದರೆ ತಮ್ಮ ಮುಂದಿನ ಜನಾಂಗಕ್ಕೆ ಶಿಕ್ಷಣ ಕೊಡುವ ವಿಷಯ ಬಂದ ಕೂಡಲೇ ಎಲ್ಲ ಮಂಗಮಾಯ,ಅಯೋಮಯ.

ಮಾತೃಭಾಷಾ ಶಿಕ್ಷಣದ ಕುರಿತು ಮಾತನಾಡುವ ಧ್ವನಿಗಳು ಅಡಗಿ ಹೋಗಿವೆ.

ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಇಚ್ಛಾಶಕ್ತಿ ಯಾರಲ್ಲೂ ಉಳಿದಿಲ್ಲ.

ರಾಜಕಾರಣಿಗಳು, ಶಿಕ್ಷಣತಜ್ಞರು, ಕನ್ನಡ ಪರ ಹೋರಾಟಗಾರರಿಗೆ ಕನ್ನಡ ಹೊಟ್ಟೆಪಾಡು ಆದರೆ ಕರುಳ ಸಂಬಂಧವಾಗಲೇ ಇಲ್ಲ.

ಭಾಷೆ,ನೆಲ,ಜಲ ನಮ್ಮ ರಾಜಕೀಯ ಹೋರಾಟದ ವಿಷಯವಾಗಿ ಈಗ ಉಳಿದಿಲ್ಲ.

ರಾಷ್ಟ್ರೀಯ ಪಕ್ಷಗಳ ಗುಲಾಮರಾಗಿರುವ ನಮ್ಮ ರಾಜಕೀಯ ನಾಯಕರುಗಳಿಗೆ ನಾಡು,ನುಡಿ ಮಹತ್ವವಾಗುವ  ಪ್ರಶ್ನೆಯೇ ಅಲ್ಲ.

ಭಾಷೆಯನ್ನು ಮುಂದಿಟ್ಟುಕೊಂಡು ಗೆಲ್ಲುವ ವಾತಾವರಣವಿಲ್ಲ. ಹಾಗಾಗಿ ಕನ್ನಡ ಭಾಷೆ ತನ್ನ ಅಂತಃಸತ್ವ ಕಳೆದುಕೊಂಡಿದೆ.

ಒಂದೆಡೆ ಮಾತೃಭಾಷಾ ಶಿಕ್ಷಣವನ್ನು ಬೆಂಬಲಿಸುವ ಸರಕಾರ ನ್ಯಾಯಾಂಗದ ಮೂಲಕ ಪಾಲಕರ ಹಕ್ಕನ್ನು ಎತ್ತಿ ಹಿಡಿಯುವ ತೀರ್ಮಾನದ ನೆಪ ಒಡ್ಡುತ್ತದೆ. ಸರಕಾರಿ  ಶಾಲೆಗಳನ್ನು ಸಂಖ್ಯೆಯ ಕೊರತೆಯ ನೆಪದ ಮೂಲಕ ಮುಚ್ಚುವ ಹುನ್ನಾರ.

ಸ್ವತಃ ರಾಜಕಾರಣಿಗಳು ನಡೆಸುವ ಇಂಗ್ಲಿಷ್ ಮಾಧ್ಯಮ ಶಾಲೆಗಳ ರಕ್ಷಣೆ ಮಾಡುವ ಹಿಡನ್ ಅಜೆಂಡಾ ಈಗ ಓಪನ್ ಸಕ್ರೆಟ್.

ಪಾಲಕರ ನಿರಾಸಕ್ತಿ, ರಾಜಕಾರಣಿಗಳ ಹಿಪೊಕ್ರೆಟಿಕ್ ನಿಲುವಿನಿಂದ ಭಾಷೆ ಈಗ ಉಳಿಯುವುದಿಲ್ಲ.

ಯುವಕರು, ವಿದೇಶದಲ್ಲಿ ಕೆಲಸ ಮಾಡುವ ಟೆಕ್ಕಿಗಳು ಮಾತೃಭಾಷೆಯ ಮಹತ್ವ ಅರ್ಥಮಾಡಿಕೊಂಡು ಭಾಷೆಯ ಉಳಿವಿಗಾಗಿ ಹೆಣಗಾಡುತ್ತಿರುವುದೂ ಹೊಸ ಭರವಸೆ.

ತಂತ್ರಜ್ಞಾನದ ವಿಪರೀತ ಬಳಕೆ, ಈಗಿನ ತಲೆಮಾರಿನ ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದಾಗಿ ಮಕ್ಕಳು ಕನ್ನಡ ಭಾಷೆಯ ಗ್ರಹಿಕೆಯಿಂದ ವಂಚಿತರಾಗಲು ನಾವೇ ಕಾರಣ.

ಮುಂದೆ ಇದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ನಮ್ಮ ಮೂರ್ಖತನವನ್ನು ಶಪಿಸುವದರಲ್ಲಿ ಸಂಶಯವಿಲ್ಲ.

ಆದ್ದರಿಂದ ಕನ್ನಡ ಭಾಷೆ ಈಗ ಚುನಾವಣಾ ವಿಷಯವಾಗುವುದಿಲ್ಲ. 

----ಸಿದ್ದು ಯಾಪಲಪರವಿ.

No comments:

Post a Comment