Wednesday, September 15, 2010

ಕವಿಸ್ವವಿಮರ್ಶೆಗೆ ಒಳಗಾಗಗಬೇಕು- ಸಿದ್ದು ಯಾಪಲಪರವಿ





ಕೊಪ್ಪಳ : ಕವಿತೆಯನ್ನು ಬರೆದು ನಂತರ ಇದು ಪ್ರಕಟವಾಗಲೇಬೇಕು, ಇದೇ ಶ್ರೇಷ್ಠ ಎನ್ನುವ ಮನಸ್ಥಿತಿಯನ್ನು ಬಿಟ್ಟು ಕವಿಯಾದವನು ವಿಮರ್ಶೆಗೆ, ಅದರಲ್ಲೂ ಸ್ವ ವಿಮರ್ಶೆಗೆ ಒಳಗಾಗಬೇಕು, ಕವಿತೆ ಮೊದಲು ಬರೆದ ಕವಿಗೆ ಇಷ್ಟವಾಗಬೇಕು ನಂತರವೇ ಇತರರು ಮೆಚ್ಚಲು ಸಾಧ್ಯ ಎಂದು ಕವಿ, ಲೇಖಕ 'ಎತ್ತಣ ಮಾಮರ ಎತ್ತಣ ಕೋಗಿಲೆ'ಖ್ಯಾತಿಯ ಸಿದ್ದು ಯಾಪಲಪರವಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೦ನೇ ಕವಿಸಮಯದ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವಾಚ್ಯತೆ ಮೀರಿದ ಕವನಗಳು ಹುಟ್ಟಬೇಕು ಇದು ಬೇರೆ ಬೇರೆ ಕವಿಗಳನ್ನು ಓದುವದರಿಂದ ವಚನ ಸಾಹಿತ್ಯದಂತವುಗಳನ್ನು ಅಧ್ಯಯನ ಮಾಡುವುದರಿಂದ ಸಾಧ್ಯ. ಕಾವ್ಯದಲ್ಲಿ ಸೂಕ್ಷ್ಮ ನೇಯುವಿಕೆ ಅಗತ್ಯ. ಗೇಯತೆ, ರೂಪಕ, ಪ್ರತಿಮೆಗಳಿರುವ ಕಾವ್ಯ ದ ಸೃಷ್ಟಿಯಾಗಬೇಕು ಎಂದರು. ಇಡೀ ವಿಶ್ವದಲ್ಲಿ ಸುಂದರ ಸೃಷ್ಟಿ ಎಂದರೆ ಕವಿತೆ, ಅದು ಎಲ್ಲವನ್ನೂ ಒಳಗೊಂಡಿರುವಂತಹದ್ದು , ಯುವ ಕವಿಗಳ ಕವಿತೆಗಳನ್ನು ಹಿರಿಯ ಕವಿಗಳು ತಿದ್ದಿ ಅವರಿಗೆ ಮಾರ್ಗದರ್ಶನ ನೀಡಬೇಕು ಕವಿಗೋಷ್ಠಿ ಎಂದರೇ ಹಿಂದೆ ಮುಂದೆ ನೋಡುವಂಥಹ ಪ್ರಸ್ತುತ ಸಂದರ್ಭದಲ್ಲಿ ಕವಿಸಮಯದಂತಹ ಕಾರ್‍ಯಕ್ರಮಗಳು ಹೆಚ್ಚಾಗಬೇಕು, ಲೇಖಕ ಕವಿಯಾದವನು ಹಮ್ಮನ್ನು ಬಿಟ್ಟು ಎಲ್ಲರೊಡನೆ ಬೆರೆತು ಚರ್ಚೆಗೆ ತೊಡಗುವಂತಾಬೇಕು ಇದರಿಂದ ಸುಂದರ ಕಾವ್ಯ ರಚನೆ ಸಾಧ್ಯ ಎಂದರು.
ಇದಕ್ಕೂ ಮೊದಲು ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ-ವಿಪರ್‍ಯಾಸ, ಶಿ.ಕಾ.ಬಡಿಗೇರ- ಜನಪ್ರತಿನಿಧಿ, ಎನ್.ಜಡೆಯಪ್ಪ- ಇವರ್‍ಯಾರು?, ಶಿವಪ್ರಸಾದ ಹಾದಿಮನಿ-ರಾಜಕೀಯವಯ್ಯ, ಎ.ಪಿ.ಅಂಗಡಿ- ಗಾಂಧಿ ಕನಸಿನ ಗ್ರಾಮ ಸ್ವರಾಜ್ಯ, ಶ್ರೀನಿವಾಸ ಚಿತ್ರಗಾರ- ರಾಜಕೀಯ, ಡಾ.ಮಹಾಂತೇಶ ಮಲ್ಲನಗೌಡರ- ಕರ್ನಾಟಕ ರತ್ನ ಕುವೆಂಪು, ಅರುಣಾ ನರೇಂದ್ರ- ವಾಸ್ತವ, ಶಾಂತಾದೇವಿ ಹಿರೇಮಠ- ನಮ್ಮ ನಾಯಕರು, ವೀರಣ್ಣ ಹುರಕಡ್ಲಿ- ಸುತ್ತೋಣ ಬಾರಾ, ಸಿರಾಜ್ ಬಿಸರಳ್ಳಿ- ಮಾರುತ್ತೇವೆ ನಾವು, ಪುಷ್ಪಲತಾ ಏಳುಬಾವಿ-ಆಲಾಪನೆ, ವಾಸುದೇವ ಕುಲಕರ್ಣಿ- ಹಾರುವ ಹಕ್ಕಿಯ ಸಾಲು, ಶಾಂತು ಬಡಿಗೇರ-ಬಣ್ಣ, ಜಿ.ಎಸ್.ಬಾರಕೇರ-ಕನ್ನಡ ಕಂದನ ಆಸೆ, ಬಸವರಾಜ- ಅಮ್ಮನ ಮಡಿಲು, ಡಾ.ವಿ.ಬಿ.ರಡ್ಡೇರ- ಕದಡಬೇಡಿ ತಿಳಿನೀರ ಕೊಳವ, ವಿಠ್ಠಪ್ಪ ಗೋರಂಟ್ಲಿ- ಚುಟುಕು, ಸಿದ್ದು ಯಾಪಲಪರವಿ- ಯಾರಿವರು ಕವನಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯ ನಂತರ ಸಿದ್ದು ಯಾಪಲಪರವಿಯವರ ನೆಲದ ಮರೆಯ ನಿದಾನ ಕುರಿತು ಸಂವಾದ ಏರ್ಪಡಿಸಲಾಗಿತ್ತು.ಸಂವಾದಲ್ಲಿ ಮಾತನಾಡಿದ ಶಿ.ಕಾ.ಬಡಿಗೇರ- ಈ ಕವನಸಂಕಲನದ ಕವನಗಳಿಗೆ ಯಾವತ್ತೂ ಮುಪ್ಪಿಲ್ಲ, ಸಾವಿಲ್ಲ, ಸಾಮಾಜಿಕ ಪ್ರಜ್ಞೆಯುಳ್ಳ, ಬದ್ದತೆಯುಳ್ಳ ಕವನಗಳು ಇವು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿವಪ್ರಸಾದ ಹಾದಿಮನಿ- ಕವಿಯನ್ನು ನವ್ಯ ಎನ್ನಬೇಕೋ, ಸಾಮಾಜಿಕ ಕವಿ ಎನ್ನಬೇಕೋ ತಿಳಿಯದಾಗಿದೆ. ಅವರ ಕವನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ಎನ್.ಜಡೆಯಪ್ಪ, ಶ್ರೀನಿವಾಸ ಚಿತ್ರಗಾರ ಮಾತನಾಡಿದರು. ಡಾ.ವಿ.ಬಿ.ರಡ್ಡೇರ ಮಾತನಾಡಿ ಸಿದ್ದು ಯಾಪಲಪರವಿಯವ ಮೇಲೆ ವಚನ ಸಾಹಿತ್ಯ ಹೆಚ್ಚಿನ ಪ್ರಭಾವ ಬೀರಿದೆ ಎಂದರು. ಬೂಟು ಪಾಲೀಸು ಮಾಡುವ ಹುಡುಗನ ಕುರಿತ ಕವನದ ಕುರಿತು ಅತೀ ಮೆಚ್ಚುಗೆ ವ್ಯಕ್ತಪಡಿಸಿದರು. ವಿಠ್ಠಪ್ಪ ಗೋರಂಟ್ಲಿಯವರೂ ಸಹ ಸಿದ್ದು ಯಾಪಲಪರವಿ ಬಹುಮುಖ ಪ್ರತಿಭೆಯ ವ್ಯಕ್ತಿ , ಅವರ ಕವನಗಳಲ್ಲಿ ವಚನಗಳ ಪ್ರಭಾವ ಎದ್ದು ಕಾಣುವಂತಿದೆ. ಎತ್ತಣ ಮಾಮರ ಎತ್ತಣ ಕೋಗಿಲೆ ಪ್ರವಾಸ ಕಥನ ಅದ್ಭುತವಾಗಿ ಮೂಡಿ ಬಂದಿದೆ ಎಂದರು. ಕೊನೆಯಲ್ಲಿ ಮಾತನಾಡಿದ ಕವಿ ಸಿದ್ದು ಯಾಪಲಪರವಿ ತಮ್ಮ ಕವನಗಳ ಹುಟ್ಟಿನ ಕುರಿತು ಮಾತನಾಡಿದರು. ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಕಾರ್‍ಯಕ್ರಮ ನಡೆಸಿಕೊಟ್ಟ ಸಿರಾಜ್ ಬಿಸರಳ್ಳಿ ಸಿದ್ದು ಯಾಪಲಪರವಿಯವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ, ಜಿಲ್ಲೆಯ ಯುವ ಕವಿಗಳಿಗೆ, ಲೇಖಕರಿಗೆ ಅವರ ಮಾರ್ಗದರ್ಶನ ನೀಡುವಂತಾಗಲಿ ಎಂದರು.
ವರದಿ : ಸಿರಾಜ್ ಬಿಸರಳ್ಳಿ ಕನ್ನಡನೆಟ್.ಕಾಂ

No comments:

Post a Comment