Monday, September 13, 2010

ನಮ್ಮೂರ ಶಾಲೆ - ಒದ್ದೆಯಾದ ಚೊಣ್ಣ

ಊರ ಮಧ್ಯೆ ಸಿಹಿನೀರಿನ ಬಾವಿಯ ಹಿಂದೆ ಇದ್ದ ನಮ್ಮೂರ ಶಾಲೆ ವಿಶಾಲವೆನಿಸುತ್ತಿತ್ತು. ಈಗ ಬಿಡಿ ಶಾಲೆ ಊರ ಮಧ್ಯೆ

ಕಮರ್ಶಿಯಲ್ ಕಾಂಪ್ಲೆಕ್ಸಗಳ ದಾಂಗುಡಿಯಲ್ಲಿ ಸಿಕ್ಕುಬಿಟ್ಟಿದೆ. ಪಂಚಾಯತ್ ನವರು ಕಟ್ಟಿದ ಎರಡಂತಸ್ತಿನ ಮಳಿಗೆಗಳು

ಶಾಲೆಯನ್ನು ಮುಚ್ಚಿ ಹಾಕಿಬಿಟ್ಟಿವೆ. ಅದೇ ಹಳೆ ಗೇಟು ಜಂಗು ಹಿಡಿದು ಹೋಗಿದೆ. ಊರು ಸಾಕಷ್ಟು ಬೆಳೆದಿದೆ. ಆರ್ಥಿಕವಾಗಿ

ಪ್ರಬಲವಾಗಿದೆ. ಊರ ತುಂಬಾ ಆವರಿಸಿಕೊಮಡಿರುವ ರೈಸ್ ಮಿಲ್ಲುಗಳು ಊರ ಸಂಸ್ಕೃತಿಯನ್ನೇ ಬದಲಿಸಿವೆ.

ಆದರೆ ಆಗ ಕೇವಲ ಎರಡೇ ರೈಸ್ ಮಿಲ್ಲುಗಳು. ಎರಡೇ ದೊಡ್ಡ ಕಿರಾಣಿ ಅಂಗಡಿಗಳು, ಬೆರಳೆಣಿಕೆಯಷ್ಟು ಜನ ಶ್ರೀಮಂತರು.

ಜಾತಿಯ ಜಂಜಾಟವಿರಲಿಲ್ಲ. ಹಿಂದುಳಿದವರು, ದಲಿತರು ವಿನಯದಿಂದ ಶ್ರೀಮಂತರ ಫ್ಯೂಡಲ್ ವರ್ತನೆಯನ್ನು ಭಕ್ತಿಯಿಂದ

ಸ್ವೀಕರಿಸುವ ಮುಗ್ಧ ಸ್ಥಿತಿಯಿತ್ತು.

ಇದ್ದ ಒಂದು ಸರಕಾರಿ ಶಾಲೆ ಎಲ್ಲರ ಪಾಲಿನ ದೇವಾಲಯವಾಗಿತ್ತು. ಬಾಲ್ಯದ ದಿನಗಳ ಶಿಕ್ಷಕರು ಅಷ್ಟಾಗಿ ನೆನಪಾಗುತ್ತಿಲ್ಲ.

ದೂರದ ಬಂಧು ಸಾಲಗುಂದಿ ಸಿದ್ದಪ್ಪ ಮೇಷ್ಟ್ರು, ರಾಮಣ್ಣ ಮೇಷ್ಟ್ರು, ಪ್ರಕಾಶಪ್ಪ ಮೇಷ್ಟ್ರು ನನ್ನ ಸ್ಮೃತಿ ಪಟಲದ ಮೇಲಿದ್ದಾರೆ.

ಐದನೇ ವಯಸ್ಸಿಗೆ ಶಾಲೆ ಕಟ್ಟಡ ಏರಿದೆ. ಆರು ವರ್ಷಕ್ಕೆ ಎಂಬ ಕಾರಣಕ್ಕೆ admission ಸಮಯದಲ್ಲಿ ತಮಗೆ ತೋಚಿದಂತೆ
1-

6-1964 ಎಂದು ಜನ್ಮ ದಿನಾಂಕವನ್ನು ನಮೂದಿಸಿ ಪ್ರವೇಶ ನೀಡಿದರು. 12-4-1965 ನನ್ನ ನಿಜವಾದ ಜನ್ಮದಿನ. ಆದರೆ

ಅಧಿಕೃತವಾಗಿ ಸರಕಾರಿ ದಿನದಂದೇ ದಾಖಲಾದೆ.

ಒಂದನೇ ತರಗತಿ ಈಗಲೂ ನೆನಪಿದೆ. ಹೊಸದಾಗಿ ನೇಮಕಗೊಂಡ ರಾಮಣ್ಣ ಮೇಷ್ಟ್ರು ಇಂದಿಗೂ ನೆನಪಾಗುವುದು ಅವರ

ವಿಶೇಷ ಪೋಷಕುಗಳಿಂದಾಗಿ. ಉಳಿದ ಶಿಕ್ಷಕರು ಧೋತ್ರ ಧರಿಸುತ್ತಿದ್ದರೆ, ಈ ರಾಮಣ್ಣ ಮೇಷ್ಟ್ರು ಮಾತ್ರ ಪ್ಯಾಂಟ್,

ಶರ್ಟ,ಬೂಟುಗಳನ್ನು ಧರಿಸುತ್ತಿದ್ದರು. ಅವರ ಕಾಲಲ್ಲಿನ ಬೂಟುಗಳನ್ನು, ಅದಕ್ಕೆ ಲೇಪಿತವಾಗಿದ್ದ ಪಾಲೀಸನ್ನು ವಿಸ್ಮಯದಿಂದ

ನೋಡುತ್ತಿದೆ. ಅವರು ಸೊಂಟಕ್ಕೆ ಬಿಗಿದುಕೊಂಡಿದದ್ದ ದಪ್ಪನೇ belt ಬಹುವಾಗಿ ಆಕರ್ಷಿಸಿತ್ತು.

ಗಡಸು ಧ್ವನಿಯ ರಾಮಣ್ಣ ಮೇಷ್ಟ್ರು ಮಿಸಲಾತಿಯ ಮೇಲೆ ಆಯ್ಕೆಯಾಗಿದ್ದರು. ಹಳ್ಳಿ ಹುಡುಗರು ಕಲಿಯಲಿ ಎಂಬ ಉತ್ಸಾಹವಿತ್ತು.

ಅವರ ಕೈಯಲ್ಲಿನ ಕೋಲು ನೋಡಿದಾಗಲೆಲ್ಲ ಭಯವಾಗಿತ್ತಿತ್ತು. ನಂತರದ ಎಷ್ಟೋ ಘಟನೆಗಳು ನೆನಪಿಲ್ಲವಾದರೂ, ಒಂದನೇ

ಕ್ಲಾಸ್ ಇಂದಿಗೂ ನೆನಪಿರಲು ಈ ರಾಮಣ್ಣ ಮೇಷ್ಟ್ರೇ ಕಾರಣ. ಏನೋ ಪ್ರಶ್ನೆ ಕೇಳಿದರು, ಹೇಳಲು ಸಾಧ್ಯವಾಗಲಿಲ್ಲ. ಕೈ

ಮುಂದೆಮಾಡಲೇ ಎಂದರು. ರಪ್ಪ ಅಂತ ಏಟು ಕೊಟ್ಟರು ಏಟು ಕೊಟ್ಟಾಗ ಅಳಬೇಕಾದವನು ನಾನು. ಆದರೆ ರಾಮಣ್ಣ ಮೇಷ್ಟ್ರು

ಗಾಭರಿಯಾದರು. ನನಗೆ ಅರಿವಿರದಂತೆ ನನ್ನ ಚಣ್ಣ ಒದ್ದೆಯಾಗಿ ಹೋಗಿತ್ತು. ಥೂ ಹಲ್ಕಟ್ ಸೂಳೆಮಗನೆ, ಒಂದ ಏಟಗೆ ಉಚ್ಚೆ

ಹೊಯ್ಕಂಡೆಲಲೇ, ನಡೀ ಹೊರಗೆ ನಡಿ ಎಂದು ಜೋರಾಗಿ ಗದರಿದರು. ಗಡ,ಗಡ ನಡುಗುತ್ತಲೇ ಇದ್ದೆ. ಮುಂದೆ ಉಚ್ಚೆ ಬಿಡುತ್ತಲೇ

ಹೊರಗೆ ಬಂದೆ.

ಹೊರಗೆ ಹೋಗಿ ಒಯ್ದು ಬಾರಲೇ ಅಂದ್ರು ನೂರಾರು ಹೆಜ್ಜೆ ನಡೆದು ಹೋದೆ. ಎಲ್ಲ ಖಾಲಿ ಆಗಿದ್ದರಿಂದ ಮತ್ತೆ ಹೊಯ್ಯುವ ಮಾತೆಲ್ಲಿ

ಚಣ್ಣ ಒಣಗುವರೆಗೆ ಬಿಸಿಲಲ್ಲೆ ನಿಂತೆ.

ಚಣ್ಣ ಒಣಗಿದ ಮೇಲೆ ಮತ್ತೆ ಕ್ಲಾಸಿಗೆ ಬಂದೆ. ಒದ್ದೆಯಾದ ಚಣ್ಣ, ಅವರ ಕೈಯಲ್ಲಿನ ಬೆತ್ತ, ಅವರ ಪಳ, ಪಳ ಹೊಳೆಯೋ

ಬೂಟುಗಳನ್ನು ನೋಡುತ್ತಾ ಕುಳಿತುಕೊಂಡೆ. ಅಕ್ಷರಗಳು ತಲೆಯಲ್ಲಿ ಹೋಗಲೇ ಇಲ್ಲ. ಚಣ್ಣ ಒದ್ದೆಯಾದದ್ದು ಅಪಮಾನ ಎಂದು

ಅನಿಸಲೇ ಇಲ್ಲ. ಮನ್ಯಾಗ ಹೋಗಿ ಹೇಳಿದ್ರ ಮಗನ ನಿನ್ನ ಚರ್ಮಾ ಸುಲಿತೀನಿ ಎಂದು ರಾಮಣ್ಣ ಮೇಷ್ಟ್ರು ಮತ್ತೊಮ್ಮೆ ಗುಟುಕು

ಹಾಕಿದರು. ಇಲ್ಲ ಸರ್ ಎಂದೆ.

ಈ ಪ್ರಕರಣವನ್ನು ಬೇಗ ಮರೆಯಲಾಗಲಿಲ್ಲ. ಮನೆಯಲ್ಲಿ ಯಾರಿಗೂ ಹೇಳಲಿಲ್ಲ. ಅಂತಹ ಗುರುಭಕ್ತಿ ನನ್ನದು. ಅವ್ವ

ಹೆರಿಗೆಗೆ ಕುಷ್ಟಗಿಗೆ ಹೋಗಿದ್ದರು. ಅದೇ ನೆಪಮಾಡಿಕೊಂಡು ಶಾಲೆ ತಪ್ಪಿಸಿ ಊರಿಗೆ ಓಡಿ ಹೋದೆ. ನಾಲ್ಕಾರು ತಿಂಗಳು ಬಿಟ್ಟು

ವಾಪಾಸಾದಾಗ ರಾಮಣ್ಣ ಮೇಷ್ಟ್ರು ಅದೇಗತ್ತಿನಲ್ಲಿ, 'ಎಲ್ಲಿ ಹೋಗಿದ್ದಲೇ ಸುಡುಗಾಡು ಸಿದ್ಧ' ಎಂದು ಕೇಳಿದರು.

ಇನ್ನೊಮ್ಮೆ ತಪ್ಪಿಸಿದರೆ ಮುಕಳಿಮ್ಯಾಲೆ ಒದೀತಿನಲೇ ಎಂದು ಗುಡುಗಿದರು. ಮುಂದೆ ಎಥಾ ಪ್ರಕಾರ ಎರಡನೇ ಕ್ಲಾಸಿಗೆ ಹೋದೆ.

ಸಿದ್ದಪ್ಪ ಸರ್, ಪ್ರಕಾರಪ್ಪ ಸರ್ ಪಾಠ ಮಾಡಿದ ನೆನಪಿಲ್ಲವಾದರೂ ಅವರು ಬಳಸುತ್ತಿದ್ದ ಬೈಗಳುಗಳು ಇನ್ನೂ ನೆನಪಿನಲ್ಲಿವೆ.

ಸಿದ್ದಪ್ಪ ಮೇಷ್ಟ್ರು ಮನೆ, ನಮ್ಮ ಮನೆ ಎದುರಿಗಿತ್ತು. ಅವರು ತುಂಬಾ ಸಂಭಾವಿತರು. ಎಂದೂ ಕೆಟ್ಟ ಪದ ಬಳಸುತ್ತಿರಲಿಲ್ಲ. ಕೈಯಲ್ಲಿನ

ಬೆತ್ತ ಯಾರ ಕೈಗೂ ಅಪ್ಪಳಿಸುತ್ತಿದ್ದಿಲ್ಲ. ಧೋತರದ ಚುಂಗು ಹಿಡಿದು ಆ ಕಡೆ, ಈ ಕಡೆ ತಿರುಗಾಡುತ್ತ ಪಾಠ ಮಾಡುತ್ತಿದ್ದರು.

ಪ್ರಕಾಶಪ್ಪ ಮೇಷ್ಟ್ರು ಬೈಯುತ್ತಿದ್ದ ಹಿರೇತನ ಹಡಸೋ ಸೂಳೆ ಮಕ್ಕಳ ಎಂಬ ಪದದ ಅರ್ಥ ಗೊತ್ತಾಗದಿದ್ದರೂ ಅದನ್ನು enjoy

ಮಾಡುತ್ತಿದ್ದೆವು. ತುಂಬಾ ಚೆನ್ನಾಗಿ ಪಾಠಮಾಡುತ್ತಿದ್ದ ಪ್ರಕಾಶಪ್ಪ ಮೇಷ್ಟ್ರು ತಪ್ಪು ಮಾಡಿದಾಗಲೆಲ್ಲ. ಹಿರೇತನ ಹಡಸೋ ಸೂಳೆ

ಮಕ್ಕಳಾ ಎಂಬ ಬಿರುದನ್ನು ದಯಪಾಲಿಸುತ್ತಲೇ ಇದ್ದರು.

No comments:

Post a Comment