Monday, January 21, 2019

ಸಿದ್ಧಗಂಗಾ ಪೂಜ್ಯರು

*ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಸಿದ್ಧಗಂಗಾ ಮಠ*

ಗ್ರಾಮೀಣ ಕರ್ನಾಟಕದ ನೋವು ಅರಿತಿದ್ದ ಶ್ರೀಗಳು ಶಿಕ್ಷಣದ ಮೂಲಕ ಪರಿಹಾರ ನೀಡಲು ನಿರ್ಧರಿಸಿ ದಾಸೋಹ ಪ್ರಾರಂಭಿಸಿದರು. ಅನ್ನ,ಅರಿವೆ,ಅಕ್ಷರ ದಾಸೋಹ ಪಡೆದು ಲಕ್ಷಾಂತರ ಜನ ಧನ್ಯರಾದರು.
ಕೇವಲ ಅಕ್ಷರ ಸಿದ್ಧಾಂತದ ಮೂಲಕ ನಿರಂತರ ಮಕ್ಕಳ ಏಳ್ಗೆಗಾಗಿ ದುಡಿದ ಏಕೈಕ ಸ್ವಾಮೀಜಿಯವರ ಲಿಂಗಪೂಜಾ ನಿಷ್ಠೆ ಕೂಡಾ ಅಪರೂಪ.
ಶಿವಯೋಗದ ಮೂಲಕ ಚಾರಿತ್ರ್ಯ ರೂಪಿಸಿಕೊಂಡ ಶ್ರೀಗಳು ಹಂತ ಹಂತವಾಗಿ ಬೆಳಕಿಗೆ ಬಂದರು. ಅಷ್ಟೇನು ಸಿರಿವಂತಿಕೆ ಹೊಂದಿರದ ಮಠಕ್ಕೆ ಮಕ್ಕಳೇ ಆಸ್ತಿಯಾದರು.

ಮಠದಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನ ತಲುಪಿದ ಹಳೆಯ ವಿದ್ಯಾರ್ಥಿಗಳು ಶ್ರೀಗಳಿಗೆ ಪರೋಕ್ಷವಾಗಿ ಜೊತೆಯಾದರು.
ಅನೇಕ ಲಿಂಗಾಯತ ಮಠಗಳಂತೆ ಯಾವುದೇ ಸಿದ್ಧಾಂತಕ್ಕೆ ಅಂಟಿಕೊಳ್ಳದ ಶ್ರೀಗಳ ನಿಲುವಿನಲ್ಲಿ ಸ್ಪಷ್ಟತೆ ಇತ್ತು.
*ಶಿಕ್ಷಣ ಕೇವಲ ಶಿಕ್ಷಣ* ಅದೂ ಬಡ ಮಕ್ಕಳಿಗಾಗಿ ಮೂಲಭೂತ ಶಿಕ್ಷಣ.

ಇತ್ತೀಚೆಗೆ ಬಹುಪಾಲು ಮಠಗಳಿಗೆ ಸಿದ್ಧಗಂಗಾ ಮಠ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಬಿಸಲು ಪ್ರೇರಣೆಯಾಯಿತು. ಉಚಿತ ಶಿಕ್ಷಣಕೆ ಸಿದ್ಧಗಂಗಾ ಮಠದ ಬದ್ಧತೆ ಪ್ರಶ್ನಾತೀತ.

ಮಠ ಬೆಳೆದಂತೆ ಭಕ್ತರು ಹೆಚ್ಚಾಗುವುದು ಸಹಜ. ಅದರಲ್ಲೂ ರಾಜಕಾರಣಿಗಳು ಜಾಣರು. ಮಠಾಧೀಶರನ್ನು ಬೇಗ ಪವಾಡ ಪುರುಷರನ್ನಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಆಶೀರ್ವಾದ ಪಡೆಯುವ ನೆಪದಲ್ಲಿನ ಪೋಜುಗಳೇ ಮತವಾಗಿಸುವ ಹುನ್ನಾರ.

ಅವರ ಆರೋಗ್ಯ, ಚಾರಿತ್ರ್ಯ, ನಿರ್ವಿಕಾರ ಮನೋಧರ್ಮ,ಸಾಮಾಜಿಕ ಕಾಳಜಿ ಅನೇಕರ ಬಂಡವಾಳವಾಯಿತು.‌ ಆದರೆ ಅದಕ್ಕೆ ಶ್ರೀಗಳು ಹೊಣೆಗಾರರಲ್ಲ. ಅದೂ ಪರಸ್ಥಿತಿಯ ಉಪಯೋಗ ಅಷ್ಟೇ.

ಇಂದು ಇಡೀ ಜಗತ್ತು ಶ್ರೀಗಳ ಹಿರಿಮೆಯನ್ನು ಕೊಂಡಾಡುತ್ತದೆ. ಶತಾಯುಷಿ ಶ್ರೀಗಳು ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ತೋರಿದ ಲಿಂಗ ನಿಷ್ಟೆಯನ್ನು ವೈಭವೀಕರಿಸಿದ್ದೂ ಸಹಜ.

ದೈಹಿಕವಾಗಿ ತುಂಬ ಆರೋಗ್ಯಪೂರ್ಣವಾಗಿರುವ ಅನೇಕ ಮಠಾಧೀಶರು ಆಧ್ಯಾತ್ಮ ಬಿಟ್ಟು ಬೇರೆಲ್ಲಾ ಮಾಡುತ್ತಾರೆ.
ಹಾಗೆ ರಾಜಕಾರಣ ಮಾಡುವ ಸ್ವಾಮಿಗಳಿಗೆ ಸಣ್ಣ ಅಸಮಾಧಾನವಿತ್ತಾದರೂ ಹೇಳುವ ತಾಕತ್ತಿರಲಿಲ್ಲ.

ಪೂಜ್ಯರು ಶಿಕ್ಷಣ ದಾಸೋಹ ಹೊರತುಪಡಿಸಿ ಬೇರೇನು ಮಾಡುತ್ತಿರಲ್ಲ. ಕೊನೆ ಕ್ಷಣದವರೆಗೆ ಲಿಂಗಾಂಗ ಸಾಮರಸ್ಯ, ಶಿಕ್ಷಣ ದಾಸೋಹ ಅವರ ಉಸಿರಾಯಿತು.
ಲಿಂಗಾಯತ ನಾಯಕರೊಬ್ಬರ ಮೇಲೆ ಮಮಕಾರವಿತ್ತಾದರೂ ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ.

*ಜನರ ನಂಬಿಕೆಗಳಿಗೆ ಅನುಗುಣವಾಗಿ ಕರಿದಾರ, ಭಸ್ಮದ ಚೀಟು ನೀಡುತ್ತಿದ್ದರು ಎಂಬ ಪ್ರಗತಿಪರರ ಸಣ್ಣ ಗೊಣಗಾಟವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರಿಗೆ ಅದರ ಅಗತ್ಯವೂ ಇರಲಿಲ್ಲ*.

ಕೆಲವು ಪುಢಾರಿಗಳು ಪೂಜ್ಯರ ಹೆಸರನ್ನು ದುರುಪಯೋಗ ಪಡಿಸಿಕೊಂಡರೂ ಮೌನವಹಿಸಿದರು. ಅದು ಅವರವರ ಪಾಪ-ಪುಣ್ಯ ಎಂಬ ಧೋರಣೆಯ ತಟಸ್ಥ ನಿಲುವು.

*ಪೂಜ್ಯರೊಂದಿಗೆ ವೇದಿಕೆ ಹಂಚಿಕೊಂಡ ಪುಣ್ಯ*.

ಹದಿನೈದು ವರ್ಷಗಳ ಹಿಂದೆ ಹಿರಿಯ ನಟ, ಸಾಹಿತಿ ಪ್ರೊ.ಟಿ.ಎಸ್.ಲೋಹಿತಾಶ್ವ ಅವರ ತಂದೆಯವರ ನಿಧನದ ನಂತರ ಪುಣ್ಯಾರಾಧನೆಯ ಸಮಾರಂಭ ತುಮಕೂರು ಜಿಲ್ಲೆಯ ಕೊನೆ ಹಳ್ಳಿ ತೊಂಡಗೆರೆಯಲ್ಲಿ ಆಯೋಜಿಸಲಾಗಿತ್ತು. ಅನಿರೀಕ್ಷಿತವಾಗಿ ಪ್ರೊ.ಚಂಪಾ ಅವರೊಡನೆ ನಾನು ವೇದಿಕೆ ಹಂಚಿಕೊಂಡು *ಮರಣವೇ ಮಹಾನವಮಿ* ಎಂದು ಮಾತನಾಡಿದ್ದನ್ನು ಕೇಳಿ ಪೂಜ್ಯರು ನಗೆ ಚಲ್ಲಿದ್ದ‌ ನೆನಪು ಈಗಲೂ ಹಸಿರು.‌

*ಭಾರತರತ್ನ ಮತ್ತು ಶ್ರೀಗಳು*

ನಮ್ಮ ದೇಶದಲ್ಲಿ ಪ್ರಶಸ್ತಿಗಳು ಮೌಲ್ಯ ಕಳೆದುಕೊಂಡು ತುಂಬ ದಿನಗಳಾದವು. ಆದರೂ ಅನೇಕ ಮನಸುಗಳು ಪ್ರಶಸ್ತಿಗಳಿಗಾಗಿ ಹಾತೊರೆಯುತ್ತವೆ, *ಪಡೆಯಲು ಮತ್ತು ಕೊಡಿಸಲು*.

ಪ್ರಶಸ್ತಿಗಳಾಚೆ ಬ್ರಹದಾಕಾರವಾಗಿ ಬೆಳೆದರೂ ಪ್ರಶಸ್ತಿಗಳನ್ನು ಮಾನದಂಡವಾಗಿ ವಿಶೇಷಣಗಳನ್ನಾಗಿ ಬಳಸಿದಾಗಲೇ ಸಮಾಧಾನ.

ಕೇಂದ್ರ ಸರ್ಕಾರ ಯಾಕೆ ಕೊಡಲಿಲ್ಲ ಎಂಬುದು ಮುಖ್ಯವಲ್ಲ. ಕೊಡಲಿ ಎಂದು ಒತ್ತಾಯಿಸುವುದು ನಮ್ಮ ತಪ್ಪು. ಅದು ಪೂಜ್ಯರಿಗೆ ಮಾಡುವ ಅವಮಾನ.‌ ಪೂಜ್ಯರ ಮಠದಲ್ಲಿ ಬೆಳೆದ
ಲಕ್ಷಾಂತರ ವಿದ್ಯಾರ್ಥಿಗಳು, ಕೋಟ್ಯಂತರ ಭಕ್ತರ ಭಕ್ತಿಗಿಂತ ದೊಡ್ಡ ಪುರಸ್ಕಾರ ಬೇರೆ ಯಾವುದೂ ಇಲ್ಲ.
ಪ್ರಶಸ್ತಿ ಮಾನದಂಡ ಇಟ್ಟುಕೊಂಡು ರಾಜಕಾರಣ ಮಾಡಬಾರದು. ‌
ತುಂಬು ಜೀವನ ಸಾಗಿಸಿ ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲಿ ದೈಹಿಕವಾಗಿ ಅಗಲಿದ್ದಾರೆ.
ಉಳಿದ ಮಠಗಳು, ಸರಕಾರ ಅವರ ಶೈಕ್ಷಣಿಕ ಮೌಲ್ಯಗಳ ನಿರಂತರ ಉಳಿಸಿಕೊಳ್ಳಲಿ.

  *ಸಿದ್ದು ಯಾಪಲಪರವಿ*

No comments:

Post a Comment