Thursday, March 25, 2010


76 ನೆಯ ಸಾಹಿತ್ಯ ಸಮ್ಮೇಳನದ ನೆನಪ ಹನಿಗಳು
ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು'ರ ಆಪ್ತ ಮಾತುಗಳು

ನಿನ್ನೆ ಸಂಜೆ ಯಶಸ್ವಿ 76 ನೆಯ ಸಾಹಿತ್ಯ ಸಮ್ಮೇಳನದ ಸವಿನೆನಪಿನ ಕ್ಷಣಗಳನ್ನು ಮೆಲಕು ಹಾಕಿ ಯಶಸ್ವಿಗಾಗಿ ದುಡಿದ ಕನ್ನಡಾಭಿಮಾನಿಗಳಿಗೆ ಅಭಿನಂದಿಸುವ ಸಮಾರಂಭ. ಸರಳವಾಗಿ ಆಚರಿಸಿದ ಸಮಾರಂಭದಲ್ಲಿ ಖ್ಯಾತ ಗಾಯಕ ಬಸವಲಿಂಗಯ್ಯ ಹಿರೇಮಠ ಅವರ ಸುಮಧುರ ಗಾಯನ ಶಾಸಕ ಹಾಗೂ ಮಂತ್ರಿಗಳ ಅಭಿನಂದನಾಪರ ಮಾತುಗಳೊಂದಿಗೆ ರುಚಿಕಟ್ಟಾದ ಭೋಜನವೂ ಇತ್ತು. ಅಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ರುಚಿಯಾದ ಊಟ, ಸುಮಧುರ ಸಂಗೀತದಷ್ಟೇ ಶ್ರೀರಾಮುಲು ಭಾಷಣದ ಆಪ್ತ ಮಾತುಗಳು ಅಷ್ಟೇ ಸವಿಯೆನಿಸಿದವು.
ಸಮ್ಮೇಳನ ಘೋಷಣೆಯಾದಾಗಿನಿಂದಲೂ ಅನೇಕ ಗೊಂದಲ, ಅನಾನುಕೂಲಗಳು ಆರಂಭವಾಗಿದ್ದವು. ಗದಗ ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪ, ರಾಜಕೀಯದಲ್ಲಿ ದಿಢೀರನೆ ಎದ್ದ ಬಿರುಗಾಳಿ ಸಮ್ಮೇಳನ ಆಚರಣೆಗೆ ವಿಳಂಬ ತಂದಿತ್ತು. ಅನೇಕ ಕಾರಣಗಳಿಂದ ಸಮ್ಮೇಳನ ಯಶಸ್ವಿಯಾಗಬಹುದೆಂಬ ವಿಶ್ವಾಸ ಸ್ವಾಗತ ಸಮಿತಿಯ ಅಧ್ಯಕ್ಷರಾದ , ಸಚಿವ ಶ್ರೀರಾಮುಲು ಅವರಿಗಿರಲಿಲ್ಲ. ಚಿತ್ರದುರ್ಗ ಸಮ್ಮೇಳನದ ಅವಾಂತರಗಳು, ಸಾಹಿತಿಗಳ ನಿಷ್ಠುರತೆ ಸಚಿವರಿಗೆ ಕಿರಿಕಿರಿಯೆನಿಸಿತ್ತು. ಅವರೊಂದಿಗೆ ವೈಯಕ್ತಿಕ ಸ್ನೇಹ ಹೊಂದಿದ್ದ ನಾನು ಅನೇಕ ಸಲ ಸಚಿವರಿಗೆ ಒತ್ತಾಯಿಸಿದರೂ, ಸಮ್ಮೇಳನ ಆಚರಣೆಯ ಭರವಸೆ ಉಂಟಾಗಲಿಲ್ಲ. ಬರಬಹುದಾದ ಪಂಚಾಯತ್ ಚುನಾವಣೆಗಳು, ಆಗಬಹುದಾದ ಅನಾನುಕೂಲಗಳನ್ನು ಊಹಿಸಿ ಸಮ್ಮೇಳನ ಮುಂದೂಡಲು ಸೂಚಿಸಿದರು. ನಾನೊಮ್ಮೆ ಅವರಿಗೆ ನಿಷ್ಠುರವಾಗಿ ಹೇಳಿದೆ ಇಲ್ಲ ಯಾವುದೇ ಕಾರಣಕ್ಕೂ ಸಮ್ಮೇಳನ ಮುಂದೂಡುವುದು ಬೇಡ, ಅರ್ಧ ಶತಮಾನದ ನಂತರ ಗದುಗಿಗೆ ಸಮ್ಮೇಳನ ಸಿಕ್ಕಿದೆ ಇಂತಹ ಅವಕಾಶ ಕಳೆದುಕೊಳ್ಳುವುದು ಬೇಡ ಎಂದಾಗ ಸ್ವಲ್ಪ ಮನಸ್ಸು ಬದಲಾಯಿಸಿದರೂ, ಪೂರ್ಣಪ್ರಮಾಣದ ಸಮ್ಮತಿ ಸಿಕ್ಕಲಿಲ್ಲ. ನಂತರ ರಾಜ್ಯ ಕ.ಸಾ.ಪ ಅಧ್ಯಕ್ಷರಾದ ಡಾ. ನಲ್ಲೂರ ಪ್ರಸಾದ್ , ಗದಗ ಶಾಸಕರಾದ ಶ್ರೀಶೈಲಪ್ಪ ಬಿದರೂರ ಸಮ್ಮೇಳನ ಆಚರಿಸಲು ಪಟ್ಟು ಹಿಡಿದಾಗ ಮಂತ್ರಿಗಳು ತಮ್ಮ ಪಟ್ಟನ್ನು ಸಡಿಲಿಸಿ, ಪೂರ್ವಭಾವಿ ಸಭೆಗೆ ಹಾಜರಾದರು. ನಿಧಾನವಾಗಿ ತಮ್ಮನ್ನು ತೊಡಗಿಸಿಕೊಂಡರು. ಇದೆಲ್ಲ ಈಗ ಇತಿಹಾಸ........ ಅನೇಕ ಗೊಂದಲಮಯ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದ ಸಚಿವರು, ಸಮ್ಮೇಳನ ಯಶಸ್ವಿಯಾದದ್ದನ್ನು, ಅಲ್ಲಿ ನೆರೆದಿದ್ದ ಲಕ್ಷಾಂತರ ಸಾಹಿತ್ಯಾಭಿಮಾನಿಗಳನ್ನು ಕಂಡು ಅವಾಕ್ಕಾದರು. ಸಮ್ಮೇಳನದ ವಿಶಾಲತೆ ಅವರ ಊಹೆಗೂ ಮೀರಿದ್ದು ಅನಿಸಿತು. ಸಮ್ಮೇಳನ ಉದ್ಘಾಟನೆಯ ಹಿಂದಿನ ರಾತ್ರಿ ಆಪ್ತವಾಗಿ ಮಾತನಾಡುತ್ತ ತಮ್ಮ ತಪ್ಪನ್ನು ಮುಗ್ಧವಾಗಿ ಒಪ್ಪಿಕೊಂಡು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಕೊಟ್ಟ ಮಾತನ್ನು ಉಳಿಸಿಕೊಂಡು ನಾಲ್ಕುದಿನ ನಮ್ಮೊಂದಿಗಿದ್ದು ಸಮ್ಮೇಳನ ಸಂಭ್ರಮ ಸವಿದರು. ಅವರ ಮನಸ್ಸಿನಲ್ಲಿನ ಗೊಂದಲ ತಾಕಲಾಟಗಳನ್ನು ಅವರೆಂದು ಸಾರ್ವಜನಿಕವಾಗಿ ಹಂಚಿಕೊಂಡಿರಲಿಲ್ಲ.
ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಕ್ಷಾಂತರ ಜನರನ್ನು ಕಂಡು ಪುಳಕಿತರಾದರು. ಅನಿರೀಕ್ಷಿತ ಯಶಸ್ಸನ್ನು ಕಂಡ ಮುಖ್ಯಮಂತ್ರಿಗಳು ಜಿಲ್ಲಾಭವನ ನಿರ್ಮಾಣಕ್ಕೆ 3 ಕೋಟಿ ಹಣವನ್ನು ನೀಡುವುದಾಗಿ ಘೋಷಿಸುವುದಲ್ಲದೆ, ನಂತರ ಅದನ್ನು ಬಜೆಟ್ ನಲ್ಲಿ ಸೇರಿಸಿದ್ದು ಸಮ್ಮೇಳನದ ಯಶಸ್ಸಿಗೆ ಸಾಕ್ಷಿಯಾಯಿತು. ಈ ಎಲ್ಲಾ ಅಪರೂಪದ ಸಂಗತಿಗಳನ್ನು ಮನದಲ್ಲಿಯೇ ಮೆಲಕು ಹಾಕುತ್ತಿದ್ದ ಸಚಿವ ಶ್ರೀರಾಮುಲು ನಿನ್ನೆಯ ಅಭಿನಂದನಾ ಸಮಾರಂಭದಲ್ಲಿ ಮನಬಿಚ್ಚಿ ಮಾತನಾಡಿದರು.
ಸಮ್ಮೇಳನ ಆಚರಣೆಗೆ ಮುಂಚೆ ತಮ್ಮ ಮನಸ್ಸಿನಲ್ಲಿದ್ದ ಎಲ್ಲ ಗೊಂದಲಗಳನ್ನು ಮುಕ್ತವಾಗಿ ತೊಡಿಕೊಂಡು, ಯಶಸ್ವಿಗಾಗಿ ಶ್ರಮಿಸಿದ ಎಲ್ಲರನ್ನು ಮನಸಾರೆ ಅಭಿನಂದಿಸಿದರು. ಅವರ ಮಾತುಗಳಲ್ಲಿನ ಪ್ರಾಂಜಲತೆ, ಮುಗ್ಧತೆ ನೆರೆದದ್ದವರಿಗೆ ಶ್ರೀರಾಮುಲು ಅವರ ಇನ್ನೊಂದು ಮುಖವನ್ನು ಪರಿಚಯಿಸಿತು. ನಮ್ಮ ರಾಜಕೀಯ ನಾಯಕರುಗಳು, ಅಧಿಕಾರಸ್ಥ ಜನ ಮಾಡಿದ ತಪ್ಪನ್ನು ಒಪ್ಪಿಕೊಂಡಾಗ ಅದೆಂತಹ ಧನ್ಯತೆ ಇರುತ್ತದೆ ಎಂಬುದಕ್ಕೆ ನಿನ್ನೆಯ ಅವರ ಮಾತುಗಳೇ ಸಾಕ್ಷಿ. ಮುಕ್ತವಾಗಿ ಮಾತನಾಡಿ ಮಂತ್ರಿಗಳ ಮನಸ್ಸು ಹಗುರವಾಗಿ, ಕೇಳುಗರ ಹೃದಯ ತುಂಬಿತು. ನವಿರು ಹಾಸ್ಯದೊಂದಿಗೆ, ಒಂದಿಷ್ಟು ಸಿಹಿ-ಕಹಿ ಬೆರೆಸಿ ಸಮ್ಮೇಳನದ ಕುರಿತು ತಮ್ಮ ಅನುಭವ ಹಂಚಿಕೊಳ್ಳುತ್ತಾ, ಸಮ್ಮೇಳನದ ಯಶಸ್ವಿ ಆಚರಣೆ ಕುರಿತು ಇದ್ದ ತಪ್ಪು ಅಭಿಪ್ರಾಯ ಬದಲಿಸಿದ್ದಲ್ಲದೆ, ಸಾರ್ವಜನಿಕವಾಗಿ ಹೊಸ ಇಮೇಜನ್ನು ತಂದುಕೊಟ್ಟಿದೆ ಎಂದರು. ಮೊನ್ನೆ ನಡೆದ ವಿಧಾನಾ ಸಭಾ ಅಧಿವೇಶನದಲ್ಲಿ ಶಾಸಕ ಮಿತ್ರರು ಮಂತ್ರಿಗಳು ಅಭಿನಂದಿಸಿದ್ದನ್ನು ಮೆಲಕು ಹಾಕಿ ಖುಷಿ ಪಟ್ಟರು.
ಗದುಗಿನ ನೆಲದ ಸಾಧು-ಸಂತರ ಪುಣ್ಯವೋ, ಜನರ ಸದ್ಧಿಚ್ಛೆಯೋ ಏನೋ ಎಂಬಂತೆ ಪವಾಡ ಸದೃಶ ವೆಂಬಂತೆ ಸಮ್ಮೇಳನ ಅತ್ಯಂತ ಯಶಸ್ವಿಯಾಗಿದ್ದು ಎಲ್ಲರಂತೆ ಸ್ವತ: ಸ್ವಾಗತ ಸಮಿತಿಯ ಅಧ್ಯಕ್ಷರಿಗೂ ಅಚ್ಚರಿಯುಂಟು ಮಾಡಿದೆ. ಅದನ್ನವರು ಪವಾಡವೆಂದು ಬಣ್ಣಿಸಿದರು.
ಈ ದೇಶದ ಅಧಿಕಾರಸ್ಥ ಸ್ವಯಂ ಪೋಷಿತ ಪ್ರಭುಗಳೆನಿಸಿಕೊಂಡಿರುವ ರಾಜಕಾರಣಿಗಳು ಹೆಚ್ಚು ಹೆಚ್ಚು ಮುಕ್ತರಾಗಬೆಕು. ಜನರನ್ನು ರಂಜಿಸುವ, ವಂಚಿಸುವ ಮಾತುಗಳನ್ನಾಡಬಾರದು ಎಂದು ಶ್ರೀರಾಮುಲು ಅವರ ಮುಗ್ಧ ಭಾಷಣ ಕೇಳಿದ ನಂತರ ಅನಿಸಿತು. ಅಂದ ಹಾಗೆ ಖಂಡಿತಾ ಇದು ಶ್ರೀರಾಮುಲು ಅವರ ಎಲ್ಲ ವಿಷಯಗಳಿಗೂ ಅನ್ವಯವಾಗುವ ಶಹಬ್ಬಾಸಗಿರಿ ಅಂತ ತಪ್ಪಾಗಿ ಭಾವಿಸುವ ಅಗತ್ಯವಿಲ್ಲ ಎಂದು ನಮ್ರವಾಗಿ ನಿವೇದಿಸುತ್ತೇನೆ.

2 comments:

  1. ಬ್ಲಾಗ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ದಯವಿಟ್ಟು ಯಾವುದೇ ಕಾರಣಕ್ಕೂ ಇದನ್ನು ನಿಲ್ಲಿಸಬೇಡಿ. ನಿಮ್ಮ ಊಟ ನಿದ್ರೆಯಷ್ಟೇ ಪ್ರಾಮುಖ್ಯತೆ ಇದಕ್ಕೂ ಕೊಡಿ ಸರ್.

    ReplyDelete
  2. Nimma lekhan S..u..p..e..r Sir

    Sriramulu sir bagge heloke nanu innu chikkavlu

    adru nanage tilida mattige Avaru Gadag Nagarad Ella Janara Manisinalli iruva devaru

    ReplyDelete