ಎಷ್ಟೊಂದು ಸೋಜಿಗ. ನೆನಸಿಕೊಂಡರೆ ಅಚ್ಚರಿ. ಮದುವೆ ಆಗುವುದಿಲ್ಲ ಎಂದು ಗೊತ್ತಾದ ಮೇಲಿನ ನಿನ್ನ ವರ್ತನೆ ಅಚ್ಚರಿ ಎನಿಸಿತು.
ಪ್ರೀತಿ-ಪ್ರೇಮದ ವ್ಯಾಪ್ತಿ ಅರಿಯುವುದು ಸರಳವಲ್ಲ. ಪ್ರೀತಿ ಅಂತಹ ಸಂಗತಿಗಳನ್ನು ಪರಿಚಯಿಸುತ್ತದೆ.
ಅಂದು ಏಕಾಏಕಿ ಏನೂ ಹೇಳದೆ ಶಾಲ್ಮಲಾ ಹಾಸ್ಟೇಲಿನ ಹಿಂದಿರುವ ಕಾಡಿಗೆ ಹೋಗೋಣವೆಂದಾಗ ಏನೂ ತಿಳಿಯಲಿಲ್ಲ.
ಅಂದು ಮಾತಿಗಿಂತ ಮೌನವೇ ಕೆಲಸ ಮಾಡಿತು, ಕೇಳುವ ಶಬ್ದಗಳಿಗಿಂತ, ಕೇಳದ ಶಬ್ದಗಳು ನೀಡುವ ಅರ್ಥ ಅಷ್ಟಿಷ್ಟಲ್ಲ. Heard melodies are sweet but those unheard are sweeter ಎನ್ನೊ keats ಸಾಲುಗಳು ರಿಂಗಣವಾಡಿದವು.
ಅತ್ತ-ಇತ್ತ ಸುತ್ತಲೂ ತಿರುಗಾಡಿದಾಗ ನಮ್ಮ ಮಧ್ಯ ಮಾತುಗಳು ಮಾಯವಾಗಿದ್ದವು. ಬದುಕಿನಲ್ಲಿ ಮತ್ತೆಂದೂ ಒಂದಾಗಿ ಬಾಳುವುದಿಲ್ಲ ಎಂದು ಗೊತ್ತಾದಾಗ ಆದ ತಲ್ಲಣ ಅಷ್ಟಿಷ್ಟಲ್ಲ.
ವಾಸ್ತವದ ಪಾಠ ಭಾವನಾತ್ಮಕ ಪ್ರೀತಿಗೆ ಅರ್ಥವಾಗುವುದೇ ಇಲ್ಲ. ಆದರೆ ಪ್ರೇಮ ಭಾವನೆಗಳಿಗೆ ಪರಿಮಿತಿ ಹಾಕುವುದು ಅಷ್ಟೇ ಕಷ್ಟ.
ಇದ್ದಕ್ಕಿದ್ದ ಹಾಗೆ ನಿನ್ನ ಚೀಲದಿಂದ ಅರಿಶಿನ ಕೊಂಬು ಕಟ್ಟಿದ ದಾರ ತೆಗೆದಾಗ ನನಗೇನು ಅರ್ಥವಾಗಲಿಲ್ಲ. ಬಾನೆತ್ತರಕ್ಕೆ ಬೆಳೆದ ಆಲದ ಮರವನ್ನು ಏಳು ಸಲ ಪ್ರದಕ್ಷಿಣೆ ಹಾಕಿ ಇಲ್ಲದ ನಂಬಿಕೆಗಳನ್ನು ಸೃಷ್ಟಿಸಿದಾಗ ಮೌನವಾಗಿದ್ದು ಯಾಕೆ ಎಂದು ಇಂದಿಗೂ ಅರ್ಥವಾಗಿಲ್ಲ. ಮದುವೆಗೆ ಭಿನ್ನ ವಾಖ್ಯಾನ ನೀಡಿದ ನಿನ್ನ ಭಾಷೆ ಅನುಪಮ. ನನ್ನ ಕೈಗಿತ್ತ ಅರಿಶಿನ ದಾರವನ್ನು ಕೊರಳಿಗೆ ಕಟ್ಟಲು ಆದೇಶಿಸಿದಾಗ ದಿವ್ಯಮೌನ. ನಿರ್ಜನ ಕಾಡು ಮಾತನಾಡಲು ಅಸಹಾಯಕ. ಕಟ್ಟಲು ಒತ್ತಯಿಸಿದ ನಿನ್ನ ಶಬ್ದಗಳು ಅರ್ಥವಾಗದಿದ್ದರೂ ನೀ ಹೇಳಿದಂತೆ ನಿನ್ನ ಕೊರಳಿನ ದಾರ ಬಿಗಿದೆ. ಅಲ್ಲಿ ಹಾಕಿದ ಮೂರು ಗಂಟುಗಳು ಶಾಶ್ವತವಾಗಿ ನಿಲ್ಲುವುದಿಲ್ಲ ಎಂದು ಗೊತ್ತಿದ್ದರೂ, ಕಟ್ಟಿಸಿಕೊಂಡ ನಿನ್ನ ಹಠಮಾರಿತನ ಅರ್ಥವಾಗಲಿಲ್ಲ. ಅದರ ಬದಲು ಎಲ್ಲವನ್ನು, ಎಲ್ಲದನ್ನು ಎದುರಿಸಿ ಮದುವೆ ಆಗಿದ್ದರೆ ಸುಖವಿತ್ತಲ್ಲ.
ಇರಲಿ ಬಿಡು ಪ್ರಕೃತಿ ಮಡಿಲಲ್ಲಿ ನಡೆದ ಮದುವೆಗೆ ಮನಸಾಕ್ಷಿ ಶಾಶ್ವತ ಅಕ್ಷತೆ ಹಾಕಿತು. ಕತ್ತಲಾಗುವ ತನಕ ಮದುಮಗಳಂತೆ ಸಂರ್ಭಮಿಸಿದ ನಿನ್ನ ವರ್ತನೆ ಅರಿಯಲಾಗಲಿಲ್ಲ. ಕತ್ತಲಾದರೂ ಕಾಡು ಬಿಡುವ ಮನಸ್ಸಾಗಲಿಲ್ಲ, ಇರುವ ಧೈರ್ಯವೂ ಇರಲಿಲ್ಲ. ಗೋಧೂಳಿ ಸಮಯದಲಿ ಅರಿಶಿನ ದಾರವನ್ನು ಗಿಡಕ್ಕೆ ಕಟ್ಟಿಹಾಕಿ ಮರಳುವಾಗ ಮುಗಿದ ಮನದ ಮದುವೆಗೆ ನೂರೆಂಟು ಸಾಕ್ಷಿಗಳಿದ್ದವು........... ಆದರೆ ಈಗ...........
ಮನುಷ್ಯತ್ವದ ಪರವಾಗಿ ಮಾತನಾಡಲು ಎಂದೂ ಭಯಪಡಬಾರದು
4 weeks ago
ಪ್ರಕೃತಿ ಮಡಿಲಲ್ಲಿ ನಡೆದ ಮದುವೆಗೆ ಮನಸಾಕ್ಷಿ ಶಾಶ್ವತ ಅಕ್ಷತೆ ಹಾಕಿತು haagu ಮನದ ಮದುವೆಗೆ ನೂರೆಂಟು ಸಾಕ್ಷಿಗಳಿದ್ದವು emba saalugalu tumba hidisidavu.
ReplyDelete