Wednesday, February 23, 2011

ಬೆನ್ನು ಹತ್ತಿದ ಬೆಂಗಳೂರು ನಂಟು

ಬಾಲ್ಯದಲ್ಲಿ ಹದಿನಾರು ವರ್ಷದವರೆಗೆ ಕಾರಟಗಿ, ಕುಷ್ಟಗಿ, ಕೊಪ್ಪಳ, ಗದಗ, ತೆಕ್ಕಲಕೋಟೆ, ರಾಯಚೂರ, ಬಳ್ಳಾರಿಯಂತಹ ಮಿನಿನಗರಗಳನ್ನು ನೋಡಿದ್ದೆ. ಅಂದದೂರು ಬೆಂಗಳೂರಿನ ಕತೆಯನ್ನು ಕೇಳಿ ತಿಳಿದಿದ್ದೆ, ಹತ್ತಿರದ ಸಂಬಂಧಿ ಗಿರಿಜಮ್ಮ ದೊಡ್ಡಮ್ಮಳ ಗಂಡ ಸೋಮಾಲಾಪೂರ ಗವಿಸಿದ್ದಪ್ಪ ದೊಡ್ಡಪ್ಪ ನಮ್ಮೂರಿನ ಪ್ರತಿಷ್ಠಿತ ವ್ಯಾಪಾರಿ ಆಗಿದ್ದು, ಶಿಕ್ಷಣ ಸಂಸ್ಥೆಗಳಲ್ಲೂ ಆಸಕ್ತಿ ಹೊಂದಿದ್ದರು. ತಮ್ಮ ರೈಸ್ ಮಿಲ್ಲಿನ ಕೆಲಸಕ್ಕೆ ಬೆಂಗಳೂರಿಗೆ ಹೋಗುತ್ತಿದ್ದರು. ತುಂಬಾ ಚೂಟಿ ಹಾಗೂ ಮಾತುಗಾರನಾಗಿದ್ದ ನನ್ನೊಂದಿಗೆ ವಾದ ವಿವಾದಕ್ಕೆ ಇಳಿಯುತ್ತಿದ್ದರು.
ಆ ಮಮಕಾರಕ್ಕಾಗಿ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದಾಗ ಆದ ಸಂಭ್ರಮ ಅಷ್ಟಿಷ್ಟಲ್ಲ. ೧೯೭೭ ರ ಮಾರ್ಚ ರಜೆಯಲ್ಲಿ ನನಗೆ ಅಂತಹ ಅವಕಾಶ ಸಿಕ್ಕಿತು. ಹನ್ನೆರಡು ವರುಷದ ಹರೆಯದ ಮನಸ್ಸಿಗೆ ಬೆಂಗಳೂರಿನ ಬಗ್ಗೆ ಅಪಾರ ಕುತೂಹಲವಿತ್ತು. ದೊಡ್ಡಪ್ಪ ಇಟ್ಟಿದ್ದ ಅಂಬಾಸಡರ್ ಕಾರಿನಲ್ಲಿ ಪ್ರಯಾಣ. ದೊಡ್ಡಮ್ಮ ಜೊತೆಯಾಗಿದ್ದರು. ಬೆಂಗಳೂರು ತಲುಪಲು ಒಂದು ದಿನ ಬೇಕಾಗುತ್ತಿದ್ದ ಕಾಲವದು.
ಮಾರ್ಗ ಮಧ್ಯೆ ಎಡೆಯೂರಿನಲ್ಲಿ ವಸತಿ ಮಾಡಿ ಮರುದಿನ ಬೆಂಗಳೂರು ಪ್ರವೇಶವಾದಾಗ ಎಲ್ಲಿಲ್ಲದ ಸಂಭ್ರಮ
ಕಿಡಕಿಯಾಚೆಯಲಿ ಕಣ್ಣಿಗೆ ಬಿದ್ದ ಬೆಂಗಳೂರು ಹೊಸ ಜಗತ್ತನ್ನು ಪರಿಚಯಿಸಿತು. ರಾಮಕೃಷ್ಣ ಲಾಜಿನಲ್ಲಿ ವಸತಿ. ಮೇನಕಾ ಚಿತ್ರಮಂದಿರದಲ್ಲಿ ಸಿನೆಮಾ ನೋಡಿದ ನೆನಪು. ವಿಧಾನ ಸೌಧ, ಲಾಲಬಾಗ, ವಿಶ್ವೇಶ್ವರಯ್ಯ ಮ್ಯೂಸಿಯಂ ತೋರಿಸಿದ ದೊಡ್ಡಪ್ಪ ಬೆಂಗಳೂರಿನ ಹಿರಿಮೆಯನ್ನು ವಿವರಿಸಿದರು.
ದೊಡ್ಡಪ್ಪ ಚೈನ್ ಸ್ಮೋಕರ್, ಅವರಿಗೆ ಸಿಗರೇಟ್ ಪ್ಯಾಕೇಟ್ ತರಲು ಮೆಜೆಸ್ಟಿಕ್ ಸರ್ಕಲ್ ಗೆ ಕಳಿಸುತ್ತಿದ್ದರು. ಸಣ್ಣ ಹುಡುಗ ತಪ್ಪಿಸಿಕೊಂಡರೆ ಹೇಗೆ ಎಂಬ ಆತಂಕ ದೊಡ್ಡಮ್ಮಗೆ ,ನಾನು ತಪ್ಪಿಸಿಕೊಳ್ಳುವುದಿಲ್ಲ ಎಂದು ವಾದಿಸಿದೆ.
ಸವಾಲು ಸ್ವೀಕರಿಸಿ ಮೆಜೆಸ್ಟಿಕ್ ಸರ್ಕಲಗೆ ಹೋಗಿ, ಸುರಕ್ಷಿತವಾಗಿ ವಾಪಸು ಬಂದೆ. ರಾಮಕೃಷ್ಣ ಲಾಡ್ಜ್ ಹೇಗೆ ಗುರುತಿಸಿದೆ ಎಂದು ದೊಡ್ಡಪ್ಪ ಕೇಳಿದರು. ಲಾಡ್ಜ್ ಮುಂದಿದ್ದ ಲೈಟಿನ ಕಂಬಗಳನ್ನು ಎಣಿಸುತ್ತಾ ಹೋದೆ. ವಾಪಸು ಬರುವಾಗ ಅದೇ ಕಂಬಗಳನ್ನು ಆಧರಿಸಿ ಲಾಡ್ಜ್ ಪತ್ತೆ ಹಚ್ಚಿದ್ದನ್ನು ಹೇಳಿದೆ. ದೊಡ್ಡಪ್ಪ ನನ್ನ ಜಾಣತನಕ್ಕೆ ಮೆಚ್ಚಿ ಐದು ರೂಪಾಯಿ ಬಹುಮಾನ ಕೊಟ್ಟ ನೆನಪು. ಸಣ್ಣ ಹುಡುಗ ಎಂಬುದನ್ನು ಲೆಕ್ಕಿಸದೇ ಕೇಳಿದೆ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುತ್ತಿದ್ದ ದೊಡಪ್ಪನ ಜಾದಾರ್ಯಕ್ಕೆ ಇಂದಿಗೂ ಕೃತಜ್ಞನಾಗಿದ್ದೇನೆ.
ಸ್ವಭಾವತಃ ಸಿಟ್ಟಿನ ವ್ಯಕ್ತಿ ಅನಿಸಿಕೊಂಡಿದ್ದರೂ ದೊಡ್ಡಪ್ಪನನ್ನು ನಾನು ಧೈರ್ಯದಿಂದ ಮಾತನಾಡಿಸುತ್ತಿದ್ದೆ. ಮನೆಯ ಹಜಾರದ ಸೋಫಾದ ಮೇಲೆ ಸಿಗರೇಟು ಸೇದುತ್ತಾ ಕುಳಿತಿದ್ದ ದೊಡ್ಡಪ್ಪನ ಚಿತ್ರ ಇನ್ನೂ ಕಣ್ಣು ಮುಂದೆ ಬರುತ್ತದೆ. ಹಟಮಾರಿ ದೊಡ್ಡಪ್ಪ ನನ್ನ ವ್ಯಕ್ತಿತ್ವದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರಿದರು. ನಮ್ಮ ಹಾಗೂ ಅವರ ಮನೆತನದ ಸಂಬಂಧಗಳ ಬಿರುಕು, ಅವರ ಅನಿರಿಕ್ಷಿತ ಸಾವು ನನ್ನನ್ನು ಬಲವಾಗಿ ಕಾಡಿದವು.
ಆದರೆ ಬೆಳೆದು ನಿಂತ ಈ ಸಂದರ್ಭದಲ್ಲಿ ಬೆಂಗಳೂರಿಗೆ ಹತ್ತಾರು ಬಾರಿ ಹೋದಾಗಲೆಲ್ಲ ಗವಿಸಿದ್ದಪ್ಪ ದೊಡ್ಡಪ್ಪ, ಗಿರಿಜಮ್ಮ ದೊಡ್ಡಮ್ಮ ನೆನಪಾಗಿ ಕಾಡುತ್ತಾರೆ.
ಈಗ ಎಲ್ಲ ಸಂಬಂಧಗಳು ಸರಿ ಹೋಗಿವೆ. ಅನರ್ಥ ಇತಿಹಾಸ, ವರ್ತಮಾನದ ಅರ್ಥವನ್ನು ಹೆಚ್ಚಿಸುತ್ತದೆ. ಅಮರಮ್ಮ ಅಮ್ಮ ಹೇಳುತ್ತಿದ್ದ ಮಾತು ಈಗಲೂ ನೆನಪಾಗುತ್ತದೆ. ಸಿದ್ದಪ್ಪ ನಿನ್ನ ಕಾಲಲ್ಲಿ ನಾಯಿಗೆರೆಗಳು ಇವೆ ಎಂಬ ಮಾತಿನಂತೆ ಬೆಂಗಳೂರಿಗೆ ನಿರಂತರ ತಿರುಗುತ್ತಲೇ ಇದ್ದೇನೆ. ಬೆಂಗಳೂರು ಈಗ ನನ್ನ ಪಾಲಿನ ತಂಗಳೂರು ಆಗಿದೆ. ಗುಲಾಬಿ ನಗರ ಕೇವಲ ಲಾಬಿ ನಗರವಾಗಿದೆ. ಕಾಮಾ ಪೂರ್ತೆ ಮಾಮಾಗಳಿಂದ ತುಂಬಿರುವ ಬೆಂಗಳೂರಿನ ದೈಹಿಕ, ಮಾನಸಿಕ ಸೌಂದರ್ಯ ಹಾಳಾಗಿದೆ.
ನೌಕರಿ ಅನುಮೋದನೆಗೆ, ಆಫೀಸು ಕೆಲಸ, ಮೌಲ್ಯ ಮಾಪನಕ್ಕಾಗಿ ತಿಂಗಳುಗಟ್ಟಲೆ ಬೆಂಗಳೂರಿನಲ್ಲಿ ಇರುವುದು ಬಂದಾಗ ಬೇಡವೆನಿಸುವ ಬೆಂಗಳೂರು ಪಯಣ ಅನಿವಾರ್ಯವಾಗಿದೆ.
ಬೆಂಗಳೂರು ಬಿಟ್ಟರೆ ಲೈಫೇ ಇಲ್ಲ ಎನ್ನುವ ವಾತಾವರಣದಲ್ಲಿ ಬೆಂಗಳೂರಿಗೆ ಕೊಂಡೊಯ್ಯುವ ರೈಲು, ಬಸ್ಸು, ವಿಮಾನಗಳು ನಿತ್ಯ ಕೈ ಮಾಡಿ ಕರೆಯುತ್ತವೆ.
ನಿಧಾನ ಕೆಲಸಗಳಿಗೆ ಹೆಸರಾದ ವಿಧಾನ ಸೌಧ, ಅಕ್ಷರಗಳನ್ನು ಪುಸ್ತಕಕ್ಕೆ ಇಳಿಸುವ ಪ್ರಿಂಟಿಂಗ್ ಪ್ರೆಸ್ಸುಗಳು, ಹಿರಿಯ ಅಧಿಕಾರಿಗಳು, ಸಾಹಿತ್ಯ, ಪತ್ರಿಕೋದ್ಯಮದ ಗೆಳೆಯರು ಕರೆದಾಗಲೆಲ್ಲ ಬೆಂಗಳೂರಿಗೆ ಹಾರುತ್ತಲೇ ಇರುತ್ತೇನೆ.

No comments:

Post a Comment