Wednesday, February 23, 2011

ನಶಿಸಿ ಹೋದ ಸಿರಿವಂತಿಕೆ ಸರಸ್ವತಿಗಾಗಿ ಹುಡುಕಾಟ

ನ್ಯಾಯ ಅನ್ಯಾಯದ ಪ್ರಶ್ನೆ ಅಲ್ಲ. ಬ್ಯಾರೆ ಆದ ಮೇಲೆ ಮನೆತನದ ವ್ಯಾಪಾರ ಕುಸಿಯಿತು. ಅಮರಣ್ಣ ತಾತನಿಗೂ ನಿರಾಶೆಯಾಯಿತು. ಒಂದೇ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಗ್ರಾಹಕರಲ್ಲಿ ಗೊಂದಲ ಉಂಟಾಯಿತು. ಕಿರಾಣಿ ಅಂಗಡಿಯಲಿ ಅಪ್ಪ, ಅಮರಣ್ಣ ತಾತ ಇರುತ್ತಿದ್ದರೆ, ಬಸಣ್ಣ ದೊಡ್ಡಪ್ಪ ಖರೀದಿಗಾಗಿ ಹೈದ್ರಾಬಾದ, ರಾಯಚೂರಿಗೆ ತಿರುಗಾಡುತ್ತಿದ್ದ.
ಆದರೆ ಬೇರೆ ಆದ ಮೇಲೆ ಅಪ್ಪನೂ ಕಿರಾಣಿ ಅಂಗಡಿ ಮಾಡುವುದು ಅನಿವಾರ್ಯವಾಯಿತು. ನಮ್ಮ ಗಿರಾಕಿಗಳಿಗೆ ನಿರಾಶೆಯಾಯಿತು. ಪರಿಚಯವಿದ್ದ ಅಪ್ಪನ ಅಂಗಡಿಗೂ ಮನೆತನದ ಹಿರಿಯ ಅಮರಣ್ಣ ತಾತನ ಕಡೆಗೋ ಎಂಬ ಸಂಕೋಚದಲ್ಲಿ ನಮ್ಮ ಗ್ರಾಹಕರು ದೂರಾದರು.
ಆಸ್ತಿ ಹಂಚಿಕೊಂಡ ಹಾಗೆ ನಾವು ನಮ್ಮ ಆಳುಗಳನ್ನು ಲೆಕ್ಕ ಬರೆಯುವವರನ್ನು ಹಂಚಿಕೊಂಡೆವು ಅನಿಸುತ್ತದೆ. ಕೆಲವರು ಅಪ್ಪನ ಕಡೆ, ಕೆಲವರು ತಾತನ ಕಡೆ ಉಳಿದರು. ಒಂದು ರೀತಿಯ ಇಳಿಮುಖ ಆರಂಭವಾಯಿತು. ದಿನಕ್ಕೆ ಸಾವಿರಾರು ರೂಪಾಯಿ ಲಾಭ ತಿರುತ್ತಿದ್ದ ಅಂಗಡಿ ನಿರ್ಜನವಾಯಿತು. ನಮ್ಮಲ್ಲಿ ಕೆಲಸಮಾಡಿ ಗಿರಾಕಿಗಳೊಂದಿಗೆ ಸಂಪರ್ಕ ಹೊಂದಿದ ಗುಮಾಸ್ತರು ಅಂಗಡಿ ಪ್ರಾರಂಭಸಿದರು. ಇದು ಅವರ ಬೆಳವಣಿಗೆಗೆ ಅನಿವಾರ್ಯ ಕೂಡಾ ಆಗಿತ್ತು.
೧೯೭೬ರಲ್ಲಿ ಅಮರಣ್ಣ ತಾತ ಇದೇ ಬೇಸರದಿಂದ ನಿಧನ ಹೊಂದಿದ ಮೇಲೆ ಇಡೀ ಪರಿವಾರದ ಮೇಲೆ ತೀವ್ರ ಪರಿಣಾಮವಾಯಿತು. ಎರಡೂ ಅಂಗಡಿಗಳು ಸರಿಯಾಗಿ ನಡೆಯಲಿಲ್ಲ. ಓಡಾಟಕ್ಕೆ ಇದ್ದ ಜೀಪು ದೂರವಾಯಿತು.ಹಳೆ ಸ್ಕೂಟರ್, ಒಂದೆರಡು ಸೈಕಲ್ಲುಗಳು ನಮ್ಮ ಪಾಲಿಗೆ ಉಳಿದವು. ರಾಯಚೂರಿನಿಂದ ಮಾಲು ತರಲು ಬಳಸುತ್ತಿದ್ದ ಲಾರಿ ಮಾರಾಟವಾಯಿತು. ದಿನದಿಂದ ದಿನಕ್ಕೆ ಧಣಿತನ ಕ್ಷೀಣವಾಗಿ, ಧಣಿ ಎಂಬ ಪಟ್ಟ ಮಾತ್ರ ಉಳಿಯಿತು. ಸೂಗಪ್ಪ ಮಾಮಾ, ನಾಗಪ್ಪ ಮಾಮಾ ಅಪ್ಪನೊಂದಿಗೆ ಉಳಿದು ಬೇರೆ, ಬೇರೆ ವ್ಯಾಪಾರಗಳ ವಿಫಲ ಪ್ರಯೋಗ ಮಾಡಿದರು. ಕನಕರಡ್ಡಿ ಶಿವಲಿಂಗಪ್ಪ, ಮಲ್ಲಪ್ಪ, ಕುಳಗಿ ಶರಣಪ್ಪ ಬೇರೆ ವ್ಯಾಪಾರ ಪ್ರಾರಂಭಿಸಿದರು ನಮ್ಮದು ಅರಸೊತ್ತಿಗೆಯಿಲ್ಲದ ಸಾಮ್ರಾಜ್ಯವಾಯಿತು. ಶಾಲೆಗೆ ಕರೆದುಕೊಂಡು ಹೋಗಲು ನೇಮಿಸಿದ್ದ ಆಳುಗಳು ಬಿಟ್ಟು ಹೋದರು. ನಾವೇ ಪಾಟಿ ಚೀಲ ಹೊತ್ತುಕೊಂಡು ಶಾಲೆಗೆ ಹೋಗಲು ಬೇಸರವಾಗುತ್ತಿತ್ತು.
ಆದರೆ ಕಾಲಚಕ್ರ ನಮ್ಮನ್ನು ಕೆಳಗೆ ಇಳಿಸಿತ್ತು. ನಾವು ಮೇಲಿದ್ದೇವೆ ಎಂಬ ಭ್ರಮೆಯಲ್ಲಿ ಬಹಳ ದಿನ ಉಳಿಯಲಾಗಲಿಲ್ಲ.
ಸೂಗಪ್ಪ ಮಾಮ ಅಪ್ಪನನ್ನು ಬಿಟ್ಟು ಹೋಗಿ ಬೇರೆ ಉದ್ಯೋಗ ಪ್ರಾರಂಭಿಸಿ ಅಷ್ಟೇ ಬೇಗ ಯಶಸ್ಸುನ್ನು ಗಳಿಸಿದ ನಮ್ಮ ಅಂಗಡಿಯಲ್ಲಿ ಗುಮಾಸ್ತರಾಗಿದ್ದವರೆಲ್ಲ ಸ್ವಯಂ ಪರಿಶ್ರಮದಿಂದ, ಪ್ರಾಮಾಣಿಕ ಹೋರಾಟದಿಂದ ನಿಜವಾದ ಧಣಿಗಳಾದರು.
ದುರಾದೃಷ್ಟ ಅಂದುಕೊಂಡು ಅಪ್ಪಾ, ದೊಡ್ಡಪ್ಪ ವ್ಯಾಪಾರ ನಿಲ್ಲಿಸುವುದು ಅನಿವಾರ್ಯವಾಯಿತು.
ನಾವು ಬೇರೆ ಆಗಿದ್ದು ತಪ್ಪು ಎಂಬ ಭಾವನೆ ಉಂಟಾದರೂ ಏನೂ ಮಾಡಲು ಸಾಧ್ಯವಾಗಲಿಲ್ಲ.
ಬಟ್ಟೆ ಅಂಗಡಿ, ದಲಾಲಿ ಅಂಗಡಿಗಳ ಪ್ರಯೋಗವು ಆಯಿತು. ಹಳೆ ಬಜಾರನ ಕಿರಾಣಿ ಅಂಗಡಿಗೆ ನನ್ನನ್ನು ಕೂಡ್ರಿಸಿದರು. ನನಗೆ ವಿಪರೀತ ಪೇಪರ್ ಹೋದೋ ಹುಚ್ಚು ವ್ಯಾಪಾರದ ಕಡೆ ನಿಗಾ ಬರಲಿಲ್ಲ.
ವ್ಯಾಪಾರ ಕುಸಿಯಿತು. ರದ್ದಿ ಪತ್ರಿಕೆಗಳಾಗಿ ಬರುತ್ತಿದ್ದ ಕನ್ನಡಪ್ರಭ, ರೂಪತಾರಾ, ಪ್ರಪಂಚ ಓದಲು ಶುರು ಮಾಡಿ ಸಾಹಿತ್ಯದ ಗೀಳು ಬೆಳಸಿಕೊಂಡೆ.
ರಾಜನ ಪಾತ್ರಧಾರಿ ತನ್ನ ಪಾತ್ರ ಮುಗಿದು ಮನೆಗೆ ಹೋಗುವಾಗ ಆಭರಣ ಕಳಚಿಡುವಂತೆ, ನಾವು ಒಂದೊಂದನ್ನೆ ಕಳಚುತ್ತಾ ಹೋದೆವು.
ಹೈಸ್ಕೂಲು ಸೇರೋ ಹೊತ್ತಿಗೆ ರಿಪೇರಿಯಾಗದ ಸೈಕಲ್ಲು ಚೈನು ಹರಿದುಕೊಂಡು ಮೂಲೆ ಸೇರಿತು.
ನಾನು, ದಿದಗಿ ಸುರೇಶ, ಕಾಗಲಕರ್ ನಾಗರಾಜ್ ನಡೆದುಕೊಂಡೆ ಶಾಲೆಗೆ ಹೋಗುತ್ತಿದ್ದೆವು. ಎಂಟನೇ ಕ್ಲಾಸಿನಲ್ಲಿದ್ದಾಗ ಸ್ಕೂಟರ್ ಸವಾರಿ ಕಲಿಕೆ, ಆದರೆ ಪೆಟ್ರೋಲ್ ದುಬಾರಿ ಆಗಿದ್ದರಿಂದ ಶಾಲೆಗೆ ಒಯ್ಯಲು ಸಾಧ್ಯವಾಗಲಿಲ್ಲ. ಲಕ್ಷ್ಮೀ ನಮ್ಮಿಂದ ದೂರಾದಳು ಎಂಬ ಭಾವ ಉಂಟಾಗುವಾಗಲೇ ಸರಸ್ವತಿಯನ್ನು ಒಲಿಸಿಕೊಳ್ಳುವ ಪ್ರಯತ್ನ ಶುರು ಆಯಿತು. ಆದರೆ ದುರಾದೃಷ್ಟ ಅಲ್ಲಿಯೂ ಕೈಕೊಡಬೇಕೆ ?

No comments:

Post a Comment