Wednesday, February 2, 2011

ನೆನಪಿನ ಮೇಲೆ ನರ್ತಿಸುವ ಬಯಲಾಟ ನಾಟಕಗಳು


ವೆಂಕಟರಮಣ ಗುಡಿಯ ಪಕ್ಕದ ಕಟ್ಟೆ ನಮ್ಮೂರಿನ ಬಯಲು ರಂಗಮಂದಿರವಾಗಿತ್ತು. ಬಯಲಾಟ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗಿದ್ದ ಕಟ್ಟೆಯ ಮೇಲೆ ವರ್ಷದಲ್ಲಿ ನಾಲ್ಕಾರು ಬಾರಿ ಬಯಲಾಟಗಳು ನಲಿಯುತ್ತಿದ್ದವು.
ವೇದಿಕೆ ಮುಂದೆ ತಗ್ಗು ಅಗೆದು ಕಾಲಿನಿಂದ ತುಳಿಯುವ ಬೃಹತ್ ಹಾರ್ಮೋನಿಯಂ ಬಳಸಿ ನಾಟಕದ ಮಾಷ್ಟ್ರು ಆಟ ಕಲಿಸುತ್ತಿದ್ದರು. ಹಕಾರ, ಅಕಾರ ವನ್ನು ಲೆಕ್ಕಿಸದೆ ನಮ್ಮೂರ ಕಲಾವಿದರು ಭರ್ಜರಿಯಾಗಿ ಕುಣಿದು ಕುಪ್ಪಳಿಸುತ್ತ ಆಟ ಆಡುತ್ತಿದ್ದರು. ಕಣ್ಣಿಗೆ ರಾಚುವಂತೆ ಮುಖಕ್ಕೆ ಬಳಿದ ಮೇಕಪ್, ಕೂಲಿಂಗ್ ಗ್ಲಾಸ್, ಬುಜ ಕಿರೀಟಗಳು, ಥಳ ಥಳ ಹೊಳೆಯುವ ನಕಲಿ ಆಭರಣಗಳು ಇಂದಿಗೂ ನನ್ನ ಮುಂದೆ ನರ್ತಿಸುತ್ತವೆ.
ರಾಮಾಯಣ, ಮಹಾಭಾರತದಿಂದ ಆಯ್ದ ಕತೆಗಳನ್ನು ಆಡುತ್ತಿದ್ದರು. ಎಳೆಯ ಪ್ರಾಯದ ನನಗೆ ಆಟ ರಂಜನೀಯ ಎನಿಸುತ್ತಿತ್ತು. ನಮ್ಮೂರ ಮಣ್ಣಿನ ರಸ್ತೆಯ ನೆಲದ ಮೇಲೆ ಕುಳಿತು ಒಮ್ಮೊಮ್ಮೆ ಹೊದ್ದಿದ್ದ ಟಾವೆಲ್ ಹಾಸಿಕೊಂಡು ಮಲಗಿಯೇ ಇಡೀ ರಾತ್ರಿ ಆಟ ನೋಡುತ್ತಿದ್ದನ್ನು ನೆನೆದರೆ ಬೆರಗಾಗುತ್ತದೆ. ಅಂದು ನೆಲದ ಮೇಲೆ ಕುಳಿತುಕೊಳ್ಳಲು ಸಂಕೋಚಪಟ್ಟುಕೊಳ್ಳತ್ತಿರಲಿಲ್ಲ ಎಂಬುದು ನೆನೆದರೆ ಅಚ್ಚರಿಯೆನಿಸುತ್ತದೆ.
ಆಗಿನ ಮುಗ್ಧತೆ, ನಿಸ್ಶಂಕೋಚ ಕಲಾ ಪ್ರೇಮ ಅನನ್ಯವೆನಿಸುತ್ತದೆ. ಈಗ ಯಾರೂ ನೆಲದ ಮೇಲೆ ಕುಳಿತುಕೊಳ್ಳಲು ಮನಸ್ಸು ಮಾಡುವುದಿಲ್ಲ. ಕುರ್ಚಿ ಕೇಳುತ್ತಾರೆ. ವೆಂಕಟರವಣ ಗುಡಿಯ ಮುಂದಿನ ಬಯಲು ನೆಲದ ಮಣ್ಣಲಿ ಕುಳಿತು ಕೇಳಿದ ಸಂಭಾಷಣೆ- ಭಲರೇ ಎಲೈ ಸಾರಥಿ, ಮತ್ತೇನಂತಿಯಲೆ ಭೂಪತಿ ಎಂಬ ಸಾಲುಗಳು ಇಂದಿಗೂ ರಿಂಗಣವಾಡುತ್ತವೆ.
ನಾಲ್ಕಾರು ಅಡಿ ಎತ್ತರಕ್ಕೆ ಹಾರುತ್ತಿದ್ದ, ಕುಣಿಯುತ್ತಿದ್ದ ಕಲಾವಿದರ ಎನರ್ಜಿ ಅದ್ಭುತ ಅವರ ಕಾಲಲ್ಲಿನ ಶಕ್ತಿ, ಆಟಗಳ ಪ್ರದರ್ಶನದಲ್ಲಿನ ಜೀವನೋತ್ಸಾಹ ಇಂದು ಹುಡುಕಿದರೂ ಸಿಗುವುದಿಲ್ಲ.
ಅವರ ಕುಣಿದಾಟಕ್ಕೆ ಅಲುಗಾಡದಂತೆ ಭುಜಕಿರೀಟಗಳನ್ನು ಹಗ್ಗದಿಂದ ಬಿಗಿದಿರುತ್ತಿದ್ದರು. ಬಯಲಾಟದ ತಾಲೀಮಿನಿಂದ ಹಿಡಿದು ಪ್ರದರ್ಶನ ಮುಗಿಯುವವರೆಗೆ ಕುಣಿಯುತ್ತಿದ್ದ, ಚೀರುತ್ತಿದ್ದ ನಮ್ಮ ಕಲಾವಿದರ ತಾಕತ್ತು ನೆನೆದರೆ ರೋಮಾಂಚನವಾಗುತ್ತದೆ.
ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ ನಾನು ಆ ರೀತಿ ಕುಣಿಯಲು ಪ್ರಯತ್ನಿಸಿ ಕೈಕಾಲು ನೋಯಿಸಿಕೊಂಡಿದ್ದೆ, ರಾತ್ರಿ ಹತ್ತು ಗಂಟೆಗೆ ಪ್ರಾರಂಭವಾದ ಆಟ ಬೆಳಕು ಹರಿದರೂ ಮುಗಿಯುತ್ತಿರಲಿಲ್ಲ. ಇನ್ನು ನೂರಾರು ಮಾತುಗಳು ಹತ್ತಾರು ಹಾಡುಗಳು ಹಾಗೆ ಉಳಿದಿರುವಾಗಲೇ ಸೂರ್ಯ ಆಗಸನಲ್ಲಿ ಅರುಳುತ್ತಿದ್ದ, ಅನಿವಾರ್ಯವಾಗಿ ಕಲಾವಿದರು ಆಟ ಮುಗಿಸಬೇಕಾಗುತ್ತಿತ್ತು. ಬೆಳಕು ಹರಿದರೂ ಕಲಾವಿದರ ಉತ್ಸಾಹ ಮಾತ್ರ ಕುಗ್ಗುತ್ತಿರಲಿಲ್ಲ.
ಮುಂಜಾವು ಕಲಾವಿದರ ಉತ್ಸಾಹಕ್ಕೆ ತಣ್ಣೀರು ಎರೆಚುತ್ತಿತ್ತು. ಆಟ ಮುಗಿದರೂ ನೂರಾರು ಪ್ರೇಕ್ಷಕರು ಅಲ್ಲಲ್ಲಿ ಹಾಗೆ ನೆಲದ ಮೇಲೆ ನಿದ್ರೆಗೆ ಶರಣಾಗುತ್ತಿದ್ದರು. ಅವರು ಕುಳಿತು ಬಿಟ್ಟ ಉಳಿದ ಪ್ರದೇಶಗಳಲ್ಲಿನ ಮೂತ್ರ ವಿಸರ್ಜನೆಯು ಚಿತ್ತಾರಗಳನ್ನು ಕುತೂಹಲದಿಂದ ಗಮನಿಸಿ ಎಣಿಸುತ್ತಿದ್ದೆ. ಅರೆ ರಾತ್ರಿ ಯಾವಾಗ, ಎಲ್ಲಿ ಜನ ಉಚ್ಚೆ ಹೊಯ್ದರು ಎಂದು ಗೊತ್ತಾಗುತ್ತಿದ್ದಿಲ್ಲ.
ಪ್ರತಿಯೊಂದನ್ನು ಕೂಲಂಕುಷವಾಗಿ ಗಮನಿಸುವ ನನ್ನ ಮನಸ್ಸಿಗೆ ಇಂತಹ ಸಣ್ಣ ಸಂಗತಿಗಳು ಬೆರಗು ಮೂಡಿಸುತ್ತಿದ್ದವು.
ಮುಂದೆ ನಾನು ಹೈಸ್ಕೂಲು ಸೇರುವ ಹೊತ್ತಿಗೆ ಬಯಲಾಟಗಳು ಸಂಪೂರ್ಣ ಮಾಯವಾದವು. ಜನರಿಗೆ ಹಲಗಿ ಮುರಿಯುವ ಹಾಗೆ ಕುಣಿಯುವ ತಾಕತ್ತು ಕಡಿಮೆಯಾಯಿತೇನೋ ಅನಿಸುತ್ತದೆ. ಜನ ಸೂಕ್ಷ್ಮರಾದಂತೆಲ್ಲ ಜನಪದ ಕಲೆಗಳು ನಶಿಸಿ ಹೋದವು. ನಮ್ಮೂರ ಎರಡನೇ ತಲೆಮಾರಿನ ಯುವಕರು ರಕ್ತ ರಾತ್ರಿ ನಾಟಕದಲ್ಲಿ ಆಸಕ್ತಿ ಬೆಳೆಸಿದಿಕೊಂಡರು.
ಹವ್ಯಾಸಿ ಕಲಾವಿದರು, ಸೇರಿಕೊಂಡು ರಕ್ತರಾತ್ರಿ ನಾಟಕ ಆಡಲು ಆರಂಭಿಸಿದರು. ನಮ್ಮೂರ ವ್ಯಾಪಾರಸ್ಥರು ಬಣ್ಣ ಹಚ್ಚಿದ್ದು ರಕ್ತ ರಾತ್ರಿಯ ವೈಶಿಷ್ಟ್ಯ.
ಹಗಲು ಹೊತ್ತಿನಲ್ಲಿ ಪೈಜಾಮ, ದೋತ್ರ, ಲುಂಗಿ ಸುತ್ತಿಕೊಂಡು ತಿರುಗಾಡುತ್ತಿದ್ದ ಬಂಧು ಮಿತ್ರರನ್ನು ರಕ್ತ ರಾತ್ರಿ ನಾಟಕಗಳಲ್ಲಿ ನೋಡಿದಾಗ ನಿಜವಾದ ಅಪ್ರತಿಮ ಕಲಾವಿದರೆನಿಸುತ್ತಿದ್ದರು. ಕಂದಗಲ್ ಹನುಮಂತರಾಯರ ರಕ್ತರಾತ್ರಿ ಸಂಭಾಷಣೆಗಾಗಿ ಹೆಸರುವಾಸಿಯಾದ ನಾಟಕ.
ಎಲೆ ಉತ್ತರೆ ದಿನ ಮೂರು ಕಳೆಯುವದೊರಳಗೆ ನಿನ್ನ ಗರ್ಭಸ್ಠ ಪಿಂಡವು ಪ್ರಳಯ ಎಂಬ ಆರ್ಭಟ ಸಂಭಾಷಣೆ ಇಡೀ ವೇದಿಕೆ ಕಂಪಿಸುವಂತೆ ಮಾಡುತ್ತಿತ್ತು.
ಅಶ್ವತ್ಥಾಮನ ಪಾತ್ರದಾರಿ ಕೈಯಲ್ಲಿ ಚಂಡಾಡಿದ ರುಂಡಗಳನ್ನು ಹಿಡಿದು ವೇದಿಕೆ ಮೇಲೆ ಗುಡುಗುವಾಗ ಹೆಣ್ಣು ಮಕ್ಕಳು ಹೆದರಿ ಬಿಡುತ್ತಿದ್ದರು. ಬಾಲ್ಯದಲ್ಲಿ ಅತೀ ಹೆಚ್ಚು ಬಾರಿ ನೋಡಿ ನಲಿದ ನಾಟಕ ರಕ್ತ ರಾತ್ರಿ ಇಂದಿಗೂ ನೋಡಬೇಕೆನಿಸುತ್ತದೆ. ಆದರೆ ಮುಂದೆ ನಾಟಕ ಸಂಸ್ಕೃತಿ ಬದಲಾಯಿತು. ರಕ್ತರಾತ್ರಿಯಿಂದ ಕಲಾವಿದರು ಗೌಡ್ರ ಗದ್ಲ, ದೇಸಾಯರ ದರ್ಬಾರಕ್ಕೆ ತಿರುಗಿದಾಗ ನಿರಾಶೆಯಾಗ ತೊಡಗಿತು

No comments:

Post a Comment