Wednesday, February 23, 2011

ಅಚ್ಚರಿ ಮೂಡಿಸಿದ ಮಾನವ ಸಂಬಂಧಗಳು

ಊರಲ್ಲಿ ಒಬ್ಬ ಹಿರಿಯರಿದ್ದರು. ಅವರು ಲಿಂಗಾಯತರ ಮೇಲ್ವರ್ಗಕ್ಕೆ ಸೇರಿದವರು. ನಮ್ಮೂರಿನಲ್ಲಿ ವಿವಾಹೇತರ ಸಂಬಂಧಗಳನ್ನು ಗಂಭೀರವಾಗಿ ಪರಿಗಣಿಸುವ ವಾತಾವರಣವಿರಲಿಲ್ಲ.
ಆದರೆ ಆ ಹಿರಿಯರು ಮಾತ್ರ ತುಂಬಾ ತಮಾಷೆಯಾಗಿ ಕಾಣಿಸುತ್ತಿದ್ದರು. ಗಂಡಸರ ಲೈಂಗಿಕ ಸಂಬಂಧಗಳನ್ನು ಹೆಂಡತಿಯರು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಮಾತು ಚರ್ಚೆಗಳಲ್ಲಿ ಸಂಬಂಧಗಳನ್ನು ಸ್ಪೋಟಿವ್ ಆಗಿ ವಿವರಿಸುತ್ತಿದ್ದರು.
ಆಗ ಆ ಹಿರಿಯರ ಅನೇಕ ಮಹಿಳೆಯರೊಂದಿಗಿನ ಸಂಬಂಧಗಳನ್ನು ಅವರ ಪರಿವಾರದವರು ಅಷ್ಟೇ ರಸವತ್ತಾಗಿ ಹೇಳಿಕೊಳ್ಳುತ್ತಿದ್ದರು.
ಈಗಲೂ ಅಚ್ಚರಿ ಈ ರೀತಿಯ ಸಂಬಂಧಗಳು ಲೈಂಗಿಕ ವಾಂಛೆಯನ್ನು ಮಿರಿ ನಿಲ್ಲುತ್ತದೆ ಅನಿಸುತ್ತದೆ. ನಮ್ಮೂರಲ್ಲಿ ಆಗಿದ್ದು ಹಾಗೇಯೇ. ಆ ಅಯ್ಯನವರು ಪಾಪ! ಇಡೀ ರಾತ್ರಿ ನಿದ್ದೆಗಿಟ್ಟು ಎಲ್ಲ ಮನೆಗಳಿಗೂ ಹಾಜರಿ ಹಾಕುತ್ತಿದ್ದುದನ್ನು ಜನ ತಮಾಷೆಯಾಗಿ ಆಡಿಕೊಳ್ಳುತ್ತಿದ್ದರು. ಅವರೆದುರು ತಮಾಷೆ ಮಾಡಿದರೂ ಗಂಭೀರವಾಗಿ ತೆಗೆದುಕೊಳ್ಳದೇ ಇದೆಲ್ಲ ಇರದ ಬಿಡ್ರಲೇ ತಮ್ಮಾ ಅನ್ನುತ್ತಿದ್ದರು.
ಅವರ ಸಾನಿಯರ ಮಕ್ಕಳು ಕೂಡಾ ಅಷ್ಟೇ ಅಭಿಮಾನದಿಂದ ಅವರ ಹೆಸರನ್ನು ಹೇಳಿಕೊಂಡೇ ಓಡಾಡುತ್ತಿದ್ದರು.
ಅಪ್ಪಣ್ಣ ಅರಳಿ, ಸಿದ್ಧಲಿಂಗಣ್ಣ ನಾವೆಲ್ಲ ಈ ವಿಷಯವನ್ನು ಚರ್ಚಿಸುವಾಗಲೆಲ್ಲ ಅವರ ಸಾಮರ್ಥ್ಯವನ್ನು ತಮಾಷೆಯಿಂದ ಹೊಗಳುತ್ತಿದ್ದೆವು.
ಊರಲ್ಲಿ ಇವರದೊಂದು ಬೃಹತ್ ವಿಗ್ರಹ ನಿಲ್ಲಿಸಬೇಕು. ಮದುವೆಯಾಗದ ಹುಡುಗರು ಅವರ ವಿಗ್ರಹಕ್ಕೆ ಐದು ಅನುವಾಸ್ಯೆ ನಡೆದುಕೊಂಡರೆ ಮದುವೆಯಾಗುತ್ತೆ, ಮಕ್ಕಳಾಗದ ಮಹಿಳೆಯರು ವಿಗ್ರಹ ಪೂಜಿಸಿದರೆ ಮಕ್ಕಳಾಗುವ ಸಾಧ್ಯತೆ ಇದೆ ಎಂದು ಮಾತಾಡಿಕೊಂಡು ಎಂಜಾಯ್ ಮಾಡುತ್ತಿದ್ದೆವು.
ನಮ್ಮ ಕೋಮಿನ ಅನೇಕ ವ್ಯಾಪಾರಸ್ಥ ಹಿರಿಯರನೇಕರ ಸಂಬಂಧಗಳನ್ನು ಹೀಗೆ ಆಡಿಕೊಳ್ಳುತ್ತಿದ್ದರೂ ಬೇರೆ ಹಳ್ಳಿಗಳಲ್ಲಿ ಆಗುವಂತೆ ಲೈಂಗಿಕ ಸಂಬಂಧ ಎಂದು ಭಯಾನಕವಾಗಿ ಬಣ್ಣಿಸಿ ಹೊಡೆದಾಟ-ಬಡಿದಾಟಗಳಾಗುತ್ತಿರಲಿಲ್ಲ ಎನ್ನುವದು ಅಭಿಮಾನದ ಸಂಗತಿ.
ರಾಜ್ಯದ ಕೆಲವು ಹಳ್ಳಿಗಳಲ್ಲಿ ಈ ರೀತಿಯ ಸಂಬಂಧಗಳು ಹಿಂಸೆಯಲ್ಲಿ ಕೊನೆಗೊಳ್ಳುವುದನ್ನು ಕಾಣುತ್ತೇವೆ. ನಮ್ಮೂರಿನ ಸೌಹಾರ್ದ ವಾತಾವರಣ ಈಗಲೂ ಹೆಮ್ಮೆಯನ್ನುಂಟು ಮಾಡುತ್ತದೆ.
ಜಾತಿ, ಧರ್ಮ, ಲಿಂಗ ತರತಮಗಳು, ಅಜ್ಞಾನದಿಂದ ಉಂಟಾಗುತ್ತವೆ ಎಂದು ಊಹಿಸುತ್ತೇವೆ. ಆದರೆ ಅಕ್ಷರ ಜ್ಞಾನವಿಲ್ಲದಿದ್ದರೂ ಕೇವಲ ಜೀವನಾನುಭವಗಳನ್ನು ಆಧರಿಸಿ ಜನ ಸಂತೋಷದಿಂದ ಸೌಹಾರ್ದದಿಂದ ಬದುಕಬಹುದು ಎಂಬುದನ್ನು ನಮ್ಮ ಹಿರಿಯರು ಸಾಬೀತು ಮಾಡಿದ್ದಾರೆ.
ಹಿರಿಯರ ಎಲ್ಲ ಪತ್ನಿಯರು, ಉಪಪತ್ನಿಯರು ಸಾರ್ವಜನಿಕ ಸಮಾರಂಭಗಳಲ್ಲಿ ಒಟ್ಟಾಗಿ ಭಾಗವಹಿಸಿ ಕಷ್ಟ ಸುಖ ಹಂಚಿಕೊಂಡು ತಮ್ಮ ಯಜಮಾನರ ವ್ಯಕ್ತಿತ್ವದ ವಿವಿಧ ಮಗ್ಗುಲುಗಳನ್ನು ಚರ್ಚಿಸಿ ಹಾರ್ದಿಕವಾಗಿ ಮಾತನಾಡುತ್ತಿದ್ದರು. ಈ ರೀತಿ ಮೈ-ಮನಗಳ ಹಂಚಿಕೊಳ್ಳುವಿಕೆಯಲ್ಲಿಯೂ ಇದ್ದ ವಿಶಾಲತೆ, ತಿಳುವಳಿಕೆ ಅನನ್ಯವಲ್ಲದೆ ಇನ್ನೇನು ? ಈಗಿನ ಧಾರವಾಹಿಗಳಲ್ಲಿ ಚಿತ್ರಿಸುವ ಸಂಬಂಧಗಳು, ಅವುಗಳ ನೆಪದಲ್ಲಿ ಪರಸ್ಪರ ಕಚ್ಚಾಡುವ ಪಾತ್ರಗಳನ್ನು ನೋಡಿದರೆ ವ್ಯಥೆ ಎನಿಸುತ್ತದೆ.
ವಿವಾಹೇತರ ಸಂಬಂಧಗಳನ್ನು, ಬೇರೆಯವರ ಲೈಂಗಿಕ ಸಂಬಂಧಗಳನ್ನು ಕೀಳಾಗಿ ವೈಭವಿಕರಿಸುವ ಗುಣಧರ್ಮ ನಮ್ಮ ಹಳ್ಳಿಗಳಲ್ಲಿ ಇರಲಿಲ್ಲ.
ಪರಸ್ಪರ ಗೌರವ ಇದ್ದಾಗ ಈ ರೀತಿಯ ಗೊಂದಲ ಉಂಟಾಗುವುದಿಲ್ಲ. ಪ್ರತಿಯೊಬ್ಬರಲ್ಲಿರುವ ದೌರ್ಬಲ್ಯ ಮತ್ತು ಬಲವನ್ನು ಅರಿತುಕೊಂಡಾಗ ಸಮಸ್ಯೆಗಳು ಉದ್ಭವವಾಗುವುದಿಲ್ಲ.
ಮತ್ತೊಬ್ಬರ ಬದುಕಿನಲ್ಲಿನ ಘಟನೆಗಳನ್ನು ತಪ್ಪು ಎಂದು ನಿರ್ಣಯಿಸುವುದು ಅಸಮಂಜಸ ಎಂದರಿತುಕೊಂಡಾಗ ಈ ರೀತಿಯ ಗೊಂದಲ ಉಂಟಾಗುವುದಿಲ್ಲ.
ಈಗ ಬೇರೆಯವರ ಸಂಬಂಧಗಳನ್ನು ಬಹು ದೊಡ್ಡ ವಿಷಯ ಎಂಬಂತೆ ಚರ್ಚಿಸುವ ಪರಿಪಾಠ ಪ್ರಜ್ಞಾವಂತರಲ್ಲಿಯೇ ಹೆಚ್ಚಾಗಿರುವುದು ವಿಷಾದನೀಯ ಬೆಳವಣಿಗೆ.
ಪ್ರಜ್ಞಾವಂತರೆನಿಸಿಕೊಳ್ಳುವ ನಾವು ಅಶಿಕ್ಷಿತರಿಂದ ಕಲಿಯುವುದು ಬಹಳಷ್ಟಿದೆ ಎಂಬುದನ್ನು ನನ್ನ ಬಾಲ್ಯದ ಅನುಭವಗಳು ನಿರೂಪಿಸುತ್ತವೆ.

No comments:

Post a Comment