Wednesday, February 23, 2011

ಬ್ಯಾರೆ ಆಗೋದು ಧರ್ಮ ಯುದ್ಧವಲ್ಲ

ನನಗೆ ಅವಿಭಕ್ತ ಕುಟುಂಬ ವ್ಯವಸ್ಥೆಯ ಸೌಹಾರ್ದದಲ್ಲಿ ಖುಷಿ ಇತ್ತು ಹೀಗಿರುವಾಗ ನಾವು ಬ್ಯಾರೆ ಆಗ್ತೇವೆ. ನಾನು ಅಪ್ಪಾ, ಅಮ್ಮ ಅವರೊಂದಿಗೆ ಇನ್ನೊಂದು ಮನೆಗೆ ಹೋಗ್ತೆವೆ ಎಂದಾಗ ದುಃಖವಾಯಿತು. ಕೂಡಿದ್ದ ಮನೆಯ ಸಂಭ್ರಮ ಕಳೆದುಕೊಳ್ಳುತ್ತೇನೆ ಎನಿಸಿತು. ಅತ್ತೆ, ಕಕ್ಕ, ದೊಡ್ಡಪ್ಪ, ದೊಡ್ಡಮ್ಮ, ತಾತ, ಹಿರಿಯ ಅಮ್ಮ ಹೀಗೆ ಎಲ್ಲರೂ ಒಟ್ಟಿಗೆ ಇರುವುದಿಲ್ಲ ಎಂಬುದು ಅವರಿವರು ಆಡುವ ಮಾತುಗಳಿಂದ ಗ್ರಹಿಸಿಕೊಂಡೆ.
ಒಂದು ಮಾತುಕತೆಯ ದಿನ ಫಿಕ್ಸ್ ಆದ ಮೇಲೆ ನಮ್ಮ ಪರವಾಗಿ ವಾದಿಸಲು ಕುಷ್ಟಗಿ ಅಜ್ಜ ,ಕೊಪ್ಪಳದ ಪ್ರಸಿದ್ಧ ವ್ಯಾಪಾರಿ ಅಜ್ಜ ಗಡಾದ ಸಂಗಣ್ಣ ಶೆಟ್ಟರ ಇದ್ದ ನೆನಪು. ಅಮರಣ್ಣ ತಾತನ ಪರವಾಗಿ ಜವಳಿ ಪಂಪಣ್ಣ ತಾತ ಇತರರು ಇದ್ದ ಚಿತ್ರ ಈಗಲೂ ಕಣ್ಣ ಮುಂದೆ ಕಟ್ಟಿ ನಿಲ್ಲುತ್ತದೆ.
ಮುಂಜಾನೆಯಿಂದ ಚರ್ಚೆ ಪ್ರಾರಂಭವಾಯಿತು. ಮನೆ ತುಂಬ ಗದ್ದಲೋ ಗದ್ದಲು. ನಮ್ಮ ಅಂಗಡಿಯಲಿ ಕೆಲಸ ಮಾಡುತ್ತಿದ್ದ ಆಳು ಲೆಕ್ಕ ಬರೆಯುವ ಯಜಮಾನರು ತುಂಬಿ ಹೋಗಿದ್ದರು.
ಈ ರೀತಿ ಬ್ಯಾರೆ ಆಗುವ ಸಮಯದಲ್ಲಿ ಇಡೀ ಆಸ್ತಿಯನ್ನು ಸಮನಾಗಿ ವಿಭಜಿಸುವುದು ವಾಡಿಕೆ.
ಆದರೆ ಅಂದು ವಿಭಿನ್ನ ರೀತಿಯ ಪ್ರಸ್ತಾಪವಾದದ್ದನ್ನು ಊರಲ್ಲಿ ಎಲ್ಲರೂ ಆಡಿಕೊಳ್ಳುತ್ತಿದ್ದರು.
ಅದೇನೆಂದರೆ ಆಸ್ತಿಯನ್ನು ಮೂರು ಭಾಗವಾಗಿ ವಿಂಗಡಿಸುವುದು, ಎರಡು ಪಾಲನ್ನು ಅಮರಣ್ಣ ತಾತನ ಪರವಾಗಿ ತೆಗೆದುಕೊಂಡರೆ ಉಳಿದ ಒಂದು ಪಾಲನ್ನು ಮಾತ್ರ ಅಪ್ಪ ತೆಗೆದುಕೊಳ್ಳಬೇಕು ಎಂಬ ಅಮ್ಮನ ವಾದವನ್ನು ಹಿರಿಯರು ಒಪ್ಪಲಿಲ್ಲ.

ಅನಾಥರಾಗಿದ್ದ ಅಪ್ಪನನ್ನು ಸಾಕಿ ಬೆಳೆಸಿದ್ದರಿಂದ ಸಮಪಾಲು ಕೊಡುವುದು ತಾರ್ಕಿಕವಾಗಿ ಸರಿಯಲ್ಲ ಎಂಬುದು ಅಮರಣ್ಣ ತಾತನ ಪರವಾಗಿ ಇರುವ ಹಿರಿಯರ ವಾದವಾಗಿತ್ತು.
ಇದೇ ವಿಷಯವನ್ನು ಮುಂಜಾನೆಯಿಂದ, ಮಧ್ಯಾಹ್ನದ ವರೆಗೆ ಚರ್ಚಿಸಿ ಅನಿವಾರ್ಯವಾಗಿ ನಮ್ಮ ಪರವಾಗಿರುವ ಹಿರಿಯರು ಒಪ್ಪಬೇಕಾಯಿತು. ಆದರೆ ನ್ಯಾಯಸಮ್ಮತವಲ್ಲ ಎಂದು ಎಲ್ಲರೂ ವಾದಿಸಿದರು. ಅಮ್ಮ ಕೇಳಲೇ ಇಲ್ಲ. ಸರಿ ಹಾಗಾದರೆ ನಿಜವಾಗಿ ಇದ್ದ ಆಸ್ತಿಯನ್ನು ಸಭೆಗೆ ತಿಳಿಸುವ ವಿಷಯದಲ್ಲಿಯೂ ಗೊಂದಲ ಶುರು ಆಯಿತು.

ಯಾಪಲಪರವಿ ಅವರ ಮನೆಯಲಿ ತೊಲೆಗಟ್ಟಲೆಯಲ್ಲ ಮಣಗಟ್ಟಲೆ ಬಂಗಾರವಿದೆ ಎಂದು ಜನ ಮಾತನಾಡುತ್ತಿದ್ದರು. ಆದರೆ ಅಂದು ಸಭೆಯಲ್ಲಿ ಹಾಜರಾದದ್ದು, ಕೆಲವೇ ತೊಲೆಗಳಲ್ಲಿ ಎಂಬುದು ಎಲ್ಲರಿಗೂ ಬೆರಗು ಮೂಡಿಸಿತು. ಈ ಅಂಕಿ ಅಂಶಗಳನ್ನು ನಮ್ಮ ಕಡೆಯ ಹಿರಿಯರು ಒಪ್ಪಲಿಲ್ಲ.
ಹಿಂದಿನ ಒಂದೆರಡು ದಿನ ಮೊದಲು ಮನೆಯಲ್ಲಿದ್ದ ಬಂಗಾರವನ್ನು ಗೋಣಿ ಚೀಲದಲ್ಲಿ ಆಪ್ತರ ಮನೆಗೆ ಸಾಗಿಸಲಾಗಿತ್ತು. ಎಂಬ ವದಂತಿಯೂ ಇತ್ತು. ಗೋಣಿ ಚೀಲಗಳಲ್ಲಿ ಬಂಗಾರದ ಆಭರಣಗಳನ್ನು ತುಂಬಿ ಇಟ್ಟದ್ದಂತು ನಿಜ. ಆದರೆ ಬ್ಯಾರೆ ಆಗುವ ಸಂದರ್ಭಗಳಲ್ಲಿ ಆ ಚೀಲಗಳು ಅಲ್ಲಿಂದ ಮಾಯವಾದದ್ದು ಅಷ್ಟೇ ನಿಜ!
ಆದರೆ ಈಗಲೂ ಆರ್ಥಿಕ ವಿಷಯ ಬಂದಾಗ ನಾವು ಪುರಾಣಗಳ ನೀತಿ ಕತೆಗಳಲಿ ಹೇಳುವಂತೆ, ಕದ್ದು ಮೋಸ ಮಾಡಬಾರದು. ಅಣ್ಣ ತಮ್ಮಂದಿರುಗಳಿಗೆ ಆಸ್ತಿಯಲಿ ಪಾಲು ಕೊಡದಿದ್ದರೆ ಉಳಿಯುವುದಿಲ್ಲ ಹಾಗೆ ಹೀಗೆ ಅಂತ ಆದರೆ ಬೇರೆ ಆಗುವ ಸಂದರ್ಭಗಳಲಿ, ಆಸ್ತಿ ಹಂಚಿಕೊಳ್ಳುವಾಗ ಸ್ನೇಹಿತರಿಗೆ, ಸೋದರರಿಗೆ ಮೋಸ ಮಾಡುವುದು ಮಾನವನ ಹುಟ್ಟುಗುಣ.
ಕಾಲಚಕ್ರದಲಿ ಈ ಸಂಗತಿ ಪುನರಾರ್ವನೆಯಾಗುತ್ತಲೇ ಇರುತ್ತದೆ. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬ ಹಾಡು ನೆನಪಿಸಿಕೊಂಡು ಅಂದಿನ ಸಭೆಯನ್ನು ಮುಗಿಸಲಾಯಿತು. ಅವ್ವ ತನಗಾದ ಅನ್ಯಾಯದ ವಿರುದ್ಧ ಕೂಗಾಡಿದರೂ ಯಾರೂ ಕೇಳಲಿಲ್ಲ.
ಆಸ್ತಿಗೆ ಮುಖ್ಯ ಪಾಲುದಾರರಾದ ಅಮರಮ್ಮ ಅಮ್ಮ, ಅಪ್ಪ ಇದೊಂದು ನೈತಿಕ ವಿಷಯ ಎಂದು ಪರಿಗಣಿಸಿದ್ದರಿಂದ ವಿಷಯ ಹೆಚ್ಚು ಚರ್ಚೆಯಾಗಲಿಲ್ಲ.
ನಾನು ಕುಷ್ಟಗಿ ಗುರುಸಿದ್ಧಪ್ಪ ಅಜ್ಜನ ತೊಡೆಯ ಮೇಲೆ ಕುಳಿತುಕೊಂಡೆ ಬೇರೆ ಆಗುವ ಪ್ರಹಸನವನ್ನು ಗಂಭೀರವಾಗಿ ಆಲಿಸಿದ್ದು, ಇಂದಿಗೂ ನೆನಪಿದೆ ಎಂದರೆ ನೀವು ನಂಬುವುದಿಲ್ಲ ಅಲ್ಲವೇ ? ನನಗಂತೂ ಖಂಡಿತಾ ನೆನಪಿದೆ.
ಅಂದು ಆದ ಒಪ್ಪಂದದಂತೆ ನಾವು ದನದ ಮನೆಯಲ್ಲಿ ವಾಸಿಸತೊಡಗಿದೆವು ಭವ್ಯವಾದ ದೊಡ್ಡ ಮನೆ ಬಿಟ್ಟು ದನದ ಮನೆಯಲ್ಲಿ ವಾಸಿಸುವ ಸ್ಥಿತಿಗೆ ಅವ್ವ ವಿಚಲಿತಳಾದಳು. ದನದ ಮನೆಯಲ್ಲಿದ್ದ ದನ-ಕರುಗಳು ಭಾವಿಮನೆಗೆ ಶಿಫ್ಟ್ ಆದವು. ದನದ ಗ್ವಾದಲಿಯಲ್ಲಿಯೇ ಮಲಗುವುದು ನನಗೆ ಮಜ ಅನಿಸುತ್ತಿತ್ತು. ಬಾಲ್ಯದ ಮುಗ್ಧತೆಗೆ ಎಲ್ಲವೂ ಮಜವೇ ಆದ್ದರಿಂದ ನನಗೆ ಅಷ್ಟೇನು ನಿರಾಶೆ ಆಗಲಿಲ್ಲ.

No comments:

Post a Comment