Wednesday, February 2, 2011

ವೃತ್ತಿರಂಗಭೂಮಿ ಕಲಾವಿದರು ಹಾಗೂ ಊರ ಕಲಾವಿದರೊಂದಿಗೆ


ರಕ್ತ ರಾತ್ರಿ ನಾಟಕದ ದ್ರೌಪದಿ ಪಾತ್ರದಾರಿ ಮನ್ಸೂರ ಸುಭದ್ರಮ್ಮ ಶ್ರೇಷ್ಠ ಕಲಾವಿದೆ. ನಮ್ಮೂರಿನ ರಂಗಾಸಕ್ತಿ ವ್ಯಾಪಾರಿಗಳಾದ ಸಿ.ಶಿವಪ್ಪ ಅವರ ಸಹಾಯದೊಂದಿಗೆ ಸುಭದ್ರಮ್ಮ ಸಾಕಷ್ಟು ಸಲ ಕಾರಟಗಿಗೆ ಬರುತ್ತಿದ್ದರು.
ರಕ್ತ ರಾತ್ರಿ ನಾಟಕದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವದಲ್ಲದೆ, ಕೊನೆಗೆ ಬೆಟ್ಟದ ಮೇಲೊಂದು ಮನೆಯ ಮಾಡಿ ವಚನವನ್ನು ಹಾಡಿ ಪ್ರೇಕ್ಷಕರನ್ನು ಖುಷಿ ಪಡಿಸುತ್ತಿದ್ದರು.
ಒಮ್ಮೆ ನಮ್ಮೂರಲ್ಲಿನ ರಕ್ತ ರಾತ್ರಿಯ ಅಭಿನಯಕ್ಕಾಗಿ ನಾಡಿನ ಹಿರಿಯ ಕಲಾವಿದರನ್ನು ಕರೆಸಿದ ನೆನಪು. ರಕ್ತ ರಾತ್ರಿ ನಾಟಕದಲ್ಲಿ ಪಾತ್ರ ಮಾಡಲು ಪ್ರವಚನಕಾರ, ರಂಗಕಲಾವಿದ ರೇವಣಸಿದ್ಧಯ್ಯಶಾಸ್ತ್ರೀ (ಭಾರತೀಶ) ಹಾಗೂ ಎಲಿವಾಳ ಸಿದ್ಧಯ್ಯ ಅವರನ್ನು ಕರೆಸಿದ್ದರು.
ಆವರಿಬ್ಬರೂ ಸಿನೆಮಾ ನಟರು ಎಂಬ ಖ್ಯಾತಿ ಬೇರೆ ರಂಗ ಕಲಾವಿದ ಎಲಿವಾಳ ಸಿದ್ಧಯ್ಯ ಶ್ರೀಕೃಷ್ಣ ಗಾರುಡಿ ಸಿನೆಮಾದಲ್ಲಿ ಡಾ ರಾಜ್ ಅವರೊಂದಿಗೆ ಅಭಿನಯಿಸಿದ್ದರು ಎಂಬ ಖ್ಯಾತಿ ಬೇರೆ ಇತ್ತು.
ರಕ್ತ ರಾತ್ರಿ ನಾಟಕದಲ್ಲಿನ ಎಲಿವಾಳ ಸಿದ್ಧಯ್ಯ ಹಾಗೂ ಭಾರತೀಶರ ಅಭಿನಯ, ಸಂಭಾಷಣೆ ಹೇಳುವ ವಿಧಾನ ಅಬ್ಬಾ ! ತುಂಬಾ ರೋಮಾಂಚನಕಾರಿ !!
ಬಾಲಕನಾಗಿದ್ದಾಗಿನ ರಂಗಾಸಕ್ತಿಗೆ ಕಾರಣ ಹುಡುಕಿದೆ ಉತ್ತರ ಸಿಗಲಿಲ್ಲ. ನಂತರ ವಿರಾಮದ ವೇಳೆಯಲ್ಲಿ ನಮ್ಮೂರ ಹಿರಿಯರನ್ನು ವಿನಂತಿಸಿಕೊಂಡು ಗ್ರೀನ್ ರೂಮಿನಲ್ಲಿ ಸಿದ್ಧಯ್ಯ ಹಾಗೂ ಭಾರತೀಶರನ್ನು ಭೇಟಿ ಆಗಿ ಬಂದೆ. ಒಬ್ಬ ಕಲಾವಿದನ ಖಾಸಗಿ ಬದುಕಿನ ವರ್ತನೆಯನ್ನು ಗ್ರೀನ್ ರೂಮಿನಲ್ಲಿ ಕಂಡು ಅಚ್ಚರಿ ಪಟ್ಟೆ.
ರಾಜ ಮಹಾರಾಜರ ವೇಷಧಾರಿಗಳು ಗ್ರೀನ್ ರೂಮಿನಲ್ಲಿ ಬೀಡಿ, ಸಿಗರೇಟು ಸೇದುತ್ತಾ ಕುಳಿತದ್ದನ್ನು ಕಂಡು ದಂಗಾದೆ. ಅಯ್ಯೋ ರಾಜ-ಮಹಾರಾಜರು ಬೀಡಿ ಸೇದಬಹುದೇ ಎಂದು ಆಲೋಚಿಸಿದೆ.
ಮುಂದೆ ನಮ್ಮೂರಿಗೆ ಗೌಡ್ರಗದ್ಲ ನಾಟಕದ ಕ್ಯಾಂಪ್ ಬಂದಿತು. ನಾಟಕದ ಲೇಖಕ ಬಿ.ವ್ಹಿ.ಈಶ ಹಾಸ್ಯಪಾತ್ರದಲ್ಲಿ ನಟಿಸುತ್ತಿದ್ದರೆ, ಸಂಘದ ಒಡೆಯರಾದ ಹಾಲಾಪೂರ ರಾಮರಾವ್ ದೇಸಾಯಿ ಗೌಡರ ಪಾತ್ರ ಮಾಡುತ್ತಿದ್ದರು.
ಗೌಡ್ರ ಗದ್ಲ ಕಾರಟಗಿಯಲ್ಲಿ ತುಂಬಾ ದಿನ ಇತ್ತು. ರಂಗಭೂಮಿ ಕಲಾವಿದರ ಅಸಹಾಯಕತೆ, ಹಗಲು ನಿದ್ರೆ, ಕುಡಿತದ ಹವ್ಯಾಸಗಳನ್ನು ಹಿರಿಯ ಗೆಳೆಯರು ರಸವತ್ತಾಗಿ ವಿವರಿಸುತ್ತಿದ್ದರು.
ಮುಂದೆ ಮತ್ಯಾವುದೋ ಕಂಪನಿಯಲ್ಲಿ ಅಭಿನಯಿಸಲು ಹಿರಿಯ ನಟ ಉದಯಕುಮಾರ ಬಂದಿದ್ದರು. ನಮ್ಮ ಕಟ್ಟಡದಲ್ಲಿ ಬಾಡಿಗೆಯಿದ್ದ ಕರ್ನಾಟಕ ಪೋಟೋ ಸ್ಟುಡೀಯೋ ಪ್ರಭು ನನ್ನು ಕರೆದುಕೊಂಡು ಹೋಗಿ ಉದಯಕುಮಾರ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದೆ.
ಉದಯಕುಮಾರರಂತಹ ಮೇರು ನಟ, ನಾಟಕ ಆಡಲು ಹಳ್ಳಿಗಳಿಗೆ ತಿರುಗುವ ಅನಿವಾರ್ಯತೆಗಾಗಿ ಒಳಗೊಳಗೆ ಮರುಕ ಪಟ್ಟಿದ್ದೆ, ಸಿನೆಮಾದವರು ಎಂದರೆ ನಡೆದಾಡುವ ದೇವರೆಂದು ನಂಬಿದ ಕಾಲವದು.
ಅವರನ್ನು ಕಣ್ಣು ಪಿಳುಕಿಸದಂತೆ ನೋಡಿ ನಂತರ ಅವರು ಅಭಿನಯಿಸಿದ ಸಿನೆಮಾಗಳನ್ನು ನೋಡಿ, ಹೋ ನಾನವರನ್ನು ಹತ್ತಿರದಿಂದ ನೋಡಿದ್ದೇನೆಲ್ಲ ಎಂದು ಆನಂದ ಪಡುತ್ತಿದ್ದೆ.
ಆಗ ಸಿನೆಮಾಗಳಲ್ಲಿ ಜನಪ್ರಿಯತೆ ಗಳಿಸಿದ್ದ ಕಾಲದಲ್ಲಿ ಸುಂದರ ಕೃಷ್ಣ ಅರಸ್ ಕಾರಟಗಿಗೆ ಬಂದಿದ್ದರು. ಅಷ್ಟೊಂದು ಬೇಡಿಕೆಯಿದ್ದರೂ, ನಾಟಕಗಳಲ್ಲಿ ಅಭಿನಯಿಸಿದ್ದು ಯಾಕೆ ಎಂದು ಅರ್ಥವಾಗಲಿಲ್ಲ.
ಮುಂದೆ ಸುದರ್ಶನ ಶೈಲಶ್ರೀ ದಂಪತಿಗಳು ಕಾರಟಗಿಗೆ ಬಂದಿದ್ದರು. ಹೀಗೆ ಬಾಲ್ಯದಲ್ಲಿ ನಾಟಕದ ಹುಚ್ಚಿನಿಂದಾಗಿ ಮತ್ತೆ ಸಿನೆಮಾ ನೋಡುವ ಚಟಕ್ಕೆ ಬಲಿಯಾದೆ .
ನಟರು, ಅವರ ಅಭಿನಯ, ರಂಗು ರಂಗಿನ ಬದುಕು ಎಲ್ಲರಿಗಿಂತ ಅವರೇ ಗ್ರೇಟ್ ಎನಿಸುತ್ತಿತ್ತು. ಕಲಾವಿದರು ಸತ್ತರೂ ಅವರ ಸಿನೆಮಾಗಳಲ್ಲಿ ಶಾಶ್ವತವಾಗಿ ಉಳಿಯುತ್ತಾರಲ್ಲ ಅನಿಸುತ್ತಿತ್ತು.
ಹಾಸ್ಯ ನಟ ನರಸಿಂಹರಾಜು ಅವರನ್ನು ಕುಷ್ಟಗಿಯಲ್ಲಿ ನೋಡಿದ್ದೆ, ಬಾಲ್ಯದುದ್ದಕ್ಕೂ ನಾಟಕಗಳ ಮೂಲಕ ನಾನು ಕಂಡ ಕಲಾವಿದರು ನನ್ನ ಮೇಲೆ ಪ್ರಭಾವ ಬೀರಿದರು. ನನ್ನ ನೆಚ್ಚಿನ ನಟರಾದ ಅನಂತನಾಗ, ಶಂಕರನಾಗ ಹಾಗೂ ರಾಜಕುಮಾರ ಅವರನ್ನು ನೋಡಬೇಕೆಂದು ಹಂಬಲಿಸುತ್ತಿದ್ದೆ ಮುಂದೊಂದು ದಿನ ಆ ಕನಸು ಈಡೇರಿತು.

No comments:

Post a Comment