Friday, October 22, 2010

ಧಣಿ ಎಂಬ ಪದ - ಒಮ್ಮೆ ಕಿರಿ-ಕಿರಿ ಒಮ್ಮೆ ಸಂಭ್ರಮ


ಈಗ ರಾಜಕೀಯದಲ್ಲಿ ಚಾಲ್ತಿ ಇರುವ ಪದ 'ಗಣಿಧಣಿ'ಗಳು. ವಿಪರೀತ ಹಣ ಇದ್ದು ಎಲ್ಲವನು ನಿಯಂತ್ರಿಸುವವರು ಎಂಬ ಅರ್ಥ ಗಣಿ ಪದ ಒಮ್ಮೊಮ್ಮೆ ನೀಡುತ್ತದೆ.
ಬಾಲ್ಯದಲ್ಲಿ ಈ ಪದ ನನ್ನನ್ನು ಹೆಚ್ಚು ಕಾಡುತ್ತಿತ್ತು. ಆಗ ಕಾರಟಗಿಯಲ್ಲಿ ಇದ್ದ ಕೆಲವೇ ಧಣಿಗಳಲ್ಲಿ ನಾವು ಒಬ್ಬರು. ನನ್ನನ್ನು ಹೆಗಲ ಮೇಲೆ ಹೊತ್ತು ತಿರುಗುವ ನಂಬಿಗಸ್ತ ಹಿರಿಯ ಆಳು ನನ್ನನ್ನು ಪ್ರೀತಿಯಿಂದ ಧಣಿ ಎಂದೇ ಕರೆಯುತ್ತಿದ್ದರು. ಇದಕ್ಕೊಂದು ಉದಾಹರಣೆ ಕೋಡುತ್ತೇನೆ.
ನಾನು ಶಾಲೆಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ನನ್ನ ಮೇಲೆ ನಿಷ್ಠೆ ಇರುವ ವ್ಯೆಕ್ತಿ ಎಡ್ಮಿಶನ್ ಗಾಗಿ ಹೋಗಿದ್ದಾನೆ. ಶಾಲಾ ಮುಖ್ಯಸ್ಥರು ನನ್ನ ಹೆಸರನ್ನು ಕೇಳಿದಾಗ ಸಿದ್ದಪ್ಪ ಧಣಿ ಎಂದಿದ್ದಾನೆ.
ಕೋಪಿತಗೊಂಡ ಶಿಕ್ಷಕರು ಹಾಗೆಲ್ಲ ಬರೆಯಲಾಗುವುದಿಲ್ಲ ಎಂದಿದ್ದಾರೆ. ಆಗ ಇಲ್ಲ ಸರ್ ಹಾಗಾದರೆ ಸಿದ್ದಬಸಪ್ಪ ಧಣಿ ಇರಲಿ ಎಂದು ಹೇಳಿದ್ದಾನೆ. ತಮಾಷೆಯಾಗಿ ಮೇಷ್ಟ್ರು ಸಿದ್ದಬಸಪ್ಪ ಎಂದು ನಮೂದಿಸಿದ್ದಾರೆ.
ಆದರೆ ನನ್ನ ತಂದೆಯ ಹೆಸರನ್ನು 'ಬಸವರಾಜ' ಎಂದು ನಮೂದಿಸಲು ಅವರು ನನ್ನ ತಂದೆಯ ಸ್ನೇಹಿತರಾಗಿದ್ದ ಕಾರಣ. ಈಗಲೂ ನನ್ನ ದಾಖಲಾತಿಯ ಈ ಹೆಸರನ್ನು ಎಲ್ಲರೂ ಚುಡಾಯಿಸುತ್ತಾರೆ. ನಾನಾದರೆ ಅಪ್ಪ, ನಮ್ಮ ತಂದೆ ಹೆಸರು ಮಾತ್ರ 'ರಾಜ'.
ಬಾಲ್ಯದಲ್ಲಿನ ನಮ್ಮ ಮನೆಯ ನೂರಾರು ಆಳುಗಳು ಒಂದು ವರ್ಷದವರಿಂದ ಹಿಡಿದು ವಯೋವೃದ್ಧರಿಗೆ ಧಣಿ ಎಂದೇ ಕರೆಯುತ್ತಿದ್ದುದು ಅಚ್ಚರಿ ಎನಿಸುತ್ತಿತ್ತು.
ಹೊಲದಲ್ಲಿನ ಬಾವಿಗೆ ಈಸು ಕಲಿಸಲು ಕರೆದುಕೊಂಡು ಹೋಗುತ್ತಿದ್ದ ಮುದುಕಪ್ಪನಿಗೆ ತಾತ ಎಂದು ಕರೆದರೆ ಸಾಕು ಬೇಸರವಾಗುತ್ತಿತ್ತು. ಬ್ಯಾಡ ಧಣಿ ನೀನು ನನಗೆ ತಾತ ಅನಬೇಡ ಮುದಕಪ್ಪ ಅನ್ನಪಾ ಸಾಕು ಅನ್ನುತ್ತಿದ್ದ.
ನಮ್ಮೂರಲ್ಲಿ ಬಹುವಚನಪದಗಳನ್ನು ಯಾರಿಗೂ ಬಳಸುತ್ತಿದ್ದಿಲ್ಲ.ಆಳುಗಳು ಕೂಡಾ ಮಾಲೀಕರಿಗೆ ಏಕವಚನದಲ್ಲಿಯೇ ಮಾತಾಡಿದರೂ 'ಧಣಿ' ಎಂಬ ಪದ ಬಿಡುತ್ತಿರಲಿಲ್ಲ.
1980 ರ ಹೊತ್ತಿಗೆ ನಮ್ಮ ಮನೆತನ ಆರ್ಥಿಕವಾಗಿ ಹಿನ್ನಡೆಪಡೆಯಿತು. ಇದ್ದ ನುರಾರು ಆಳುಗಳ ಸಂಖ್ಯೆ ಕ್ಷೀಣಗೊಂಡು ನಾಲ್ಕಾರು ಜನ ಉಳಿದರು.
ಬಾಲ್ಯದಲ್ಲಿ ಸಂಭ್ರಮ, ಶ್ರೀಮಂತಿಕೆಯಲ್ಲಿ ಬೆಳೆದ ನಮಗೆ ನಿರಾಶೆಯಾಯಿತು.
ಸ್ಕೂಲಿಗೆ ಕಳಿಸಲು ಇದ್ದ ಜೀಪನ್ನು ಮಾರಾಟ ಮಾಡಲಾಯಿತು. ದಿನಕ್ಕೆ ಹತ್ತಾರು ಸಾವಿರ ಲಾಭ ತರುತ್ತಿದ್ದ ಕಿರಾಣಿ ಅಂಗಡಿ ಬಂದ್ ಆಯಿತು. ನಮ್ಮ ಮನೆಯಲ್ಲಿ ಕೆಲಸಕ್ಕೆ ಇದ್ದವರೆಲ್ಲ ಸಣ್ಣಪುಟ್ಟ ವ್ಯಾಪಾರ ಪ್ರಾರಂಭಿಸಿ ಮಾಲಕರಾದರು. ಆದರೆ ನಾವು ಮಾತ್ರ ಧಣಿತನವೂ ಇಲ್ಲದೆ ದುಡಿಮೆಯೂ ಇಲ್ಲದೆ ಅಸ್ಥಿಪಂಜರಗಳಾದೆವು. ಊರಲ್ಲಿ ಸಣ್ಣ ಪುಟ್ಟ ವಾಹನಗಳು ಬೈಕುಗಳು ಕಾಣಲಾರಂಭಿಸುವ ಹೊತ್ತಿಗೆ ನಮ್ಮಲ್ಲಿದ್ದ ಎಲ್ಲ ವಾಹನಗಳು ಕಾಣೆಯಾದದ್ದು ವಿಪರ್ಯಾಸ.
ಆಗ ಇಡೀ ಊರಲ್ಲಿ ಕೇವಲ ಮೂರೇ ಜೀಪುಗಳಿದ್ದವು. ಆರು ಲಾರಿಗಳಿದ್ದವು ಅವು ಕೇವಲ ಮೂರೆ ಮನೆತನಕ್ಕೆ ಸಂಬಂಧಿಸಿದ್ದವು. ನಾವು ಎಲ್ಲವನ್ನು ಕಳೆದುಕೊಳ್ಳುವ ಹೊತ್ತಿಗೆ ಊರಿನ ಚಿತ್ರಣ ಬದಲಿ ಆಗಿತ್ತು. ನೀರಾವರಿ ಪ್ರಭಾವದಿಂದ ವ್ಯಾಪಾರೋದ್ಯಮ ಜೋರಾಗಿತ್ತು.
ನಮ್ಮ ಮನೆಯ ಆಳುಗಳೆಲ್ಲ ವೈಯಕ್ತಿಕವಾಗಿ ಧಣಿಗಳಾಗಿದ್ದರೆ ನಾವು ಧಣಿತನದ ಪಳೆಯುಳಿಕೆ ಆಗಿದ್ದೆವು. ನಮ್ಮೆದುರಿಗೆ ಬೈಕಿನಲ್ಲಿ ಹೋಗುತ್ತಿದ್ದ ನಮ್ಮ ಆಳುಗಳು ಅದೇ ಪ್ರೀತಿಯನ್ನು ಇಟ್ಟುಕೊಂಡು ಯಾಕಪ ಸಿದ್ದಪ್ಪ ಧಣಿ ಎಲ್ಲಿಗೆ ಒಂಟಿದಿ ಎಂದಾಗ ನೋವಾಗುತ್ತಿತ್ತು. ಯಾರು 'ಧಣಿ' ಗಾಡಿ ಮೇಲೆ ಹೋಗುವ ಅವನೋ, ನಡೆದುಕೊಂಡು ಹೋಗುವ ನಾನೋ ಎಂಬ ಅನುಮಾನ ಬಂದು ಏನೂ ಇಲ್ಲದ ಧಣಿ ತನಕ್ಕಾಗಿ ನೋವಾಗುತ್ತಿತ್ತು.
ಅಷ್ಟೊತ್ತಿಗಾಗಲೇ ಹೈಸ್ಕೂಲು ವ್ಯಾಸಂಗ ಮುಗಿಯಲು ಬಂದಿತ್ತು. ವ್ಯಾಪಾರ ಮಾಡಬೇಕೆಂದರೆ ಎಲ್ಲ ಅಂಗಡಿಗಳು ಮುಚ್ಚಿದ್ದವು. ಬೇರೆಯವರ ಅಂಗಡಿಗೆ ಹೋಗಬೇಕೆಂದರೆ ಅವರೆಲ್ಲರೂ ನಮ್ಮ ಹತ್ತಿರ ದುಡಿದವರೇ ಆದರೂ ಈಗವರು ಧಣಿಗಳು. ಈ ಒಣ ಪ್ರತಿಷ್ಟೆ ನಮ್ಮನ್ನು ದುಡಿಯದಂತೆ ಕಟ್ಟಿಹಾಕಿತು.
ಕಾಲ ಚಕ್ರದ ಸುಳಿಗೆ ನಮ್ಮ ಮನೆತನ ಸಿಕ್ಕಿತು. ನಾವೆಲ್ಲ ಹಣವಿಲ್ಲದ ಧಣಿಗಳಾಗಿ ಉಳಿದೆವು. ಹೇಗೋ ಕಷ್ಟಪಟ್ಟು ಕಾಲೇಜು ವ್ಯಾಸಂಗ ಮಾಡುವುದು ಅನಿವಾರ್ಯವಾಯಿತು. ಊರಲ್ಲಿದ್ದರೆ ಬೇರೆಯವರ ಅಂಗಡಿಗೆ ದುಡಿಯಲು ಹೋಗಬೇಕು ಅವರ್ಯಾರು ನಮ್ಮನ್ನು ಕೆಲಸಕ್ಕೆ ಇಟ್ಟುಕೊಳ್ಳುವುದಿಲ್ಲ. ಯಾಕೆಂದರೆ ನಾವಿನ್ನು ಅವರ ಪಾಲಿನ ಧಣಿಗಳು.
ಆದರೆ ಹಿರಿಯರು ಗಳಿಸಿದ್ದ ಆಸ್ತಿ ಹಾಗೆ ಇತ್ತು, ದೊಡ್ಡ ದೊಡ್ಡ ಮನೆಗಳು ಗೋದಾಮುಗಳು, ಊರಮುಂದಿನ ಹೊಲ, ಮನೆಯ ತಿಜೂರಿಯಲ್ಲಿ ಅಡಗಿ ಕುಳಿತ ಬಂಗಾರ ನಮ್ಮನ್ನು ಪೂರಾ ನಿರ್ಗತಿಕರನ್ನಾಗಿ ಮಾಡಲಿಲ್ಲ.
ಹಣವಿಲ್ಲದೆ, ಕಾರು-ಜೀಪುಗಳಿಲ್ಲದೆ ಬದುಕುವ ಶೈಲಿಯನ್ನು ರೂಢಿ ಮಾಡಿಕೊಂಡೆವು.
ಬಾಲ್ಯದ ಧಣಿತನ ದೂರಾಗಿ ವಾಸ್ತವಕ್ಕೆ ಬಂದೆವು. ನಮ್ಮ ಮೇಲಿನ ಅಭಿಮಾನದಿಂದಲೋ, ಪ್ರೀತಿಯಿಂದಲೋ, ರಸ್ತೆಯಲ್ಲಿ ಯಾರಾದರೂ ಧಣಿ ಅಂದಾಗ ಒಳಗೊಳಗೆ ಹಿಂಸೆಯಾಗುತ್ತಿತ್ತು. ಮುಂದೆ ಕಾಲಚಕ್ರ ನೀಡಿದ ಅನುಭವಗಳನ್ನು ಮತ್ತೆ ಯಾವಾಗಲಾದರು ವಿವರಿಸುತ್ತೇನೆ.

1 comment:

  1. I wish the same DHANI days will come back at the earliest, In fact the process has already begun.....,
    Really one needs to have a great conviction to putforth the Facts as straight as you put in this article
    Samudri

    ReplyDelete