Friday, July 13, 2018

ಸ್ಪೀಕರ್ ರಮೇಶಕುಮಾರ

*ಜಾತ್ಯಾತೀತ ಜನನಾಯಕ, ಅದ್ಭುತ ಮಾತುಗಾರ: ಸ್ಪೀಕರ್ ರಮೇಶಕುಮಾರ*

ಸದನದ ಹಿರಿಯ ಸದಸ್ಯರು, ರಾಜ್ಯದ ಅಪರೂಪದ ರಾಜಕಾರಣಿ ಕೆ.ಆರ್. ರಮೇಶಕುಮಾರ ಉರ್ಫ್ ಸ್ವಾಮಿ ಅವರನ್ನು ರಾಜಕಾರಣದ ಅರಿವು ಬಂದಾಗಿನಿಂದ ಕುತೂಹಲದಿಂದ ಗಮನಿಸುತ್ತಲೇ ಇದ್ದೇನೆ. ಶಿಕ್ಷಕ, ಬರಹಗಾರನೂ ಆಗಿರುವ ನನಗೆ ರಾಜಕಾರಣಿಗಳ ಸಂಪರ್ಕ ಬರಬಾರದಿತ್ತು ಆದರೆ ಬಂದು ಬಿಟ್ಟಿತು.

ಸಿನಿಮಾ ನಟರು, ಕ್ರೀಡಾಪಟುಗಳು ಹಾಗೂ ಬರಹಗಾರರ ಹಾಗೆ ರಾಜಕಾರಣಿಗಳೂ ಸೆಲಿಬ್ರಿಟಿಗಳೇ.

ಸದಾ ಸುತ್ತಲೂ ಜನರನ್ನು ಸೇರಿಸಿಕೊಂಡಿರು ಖಯಾಲಿಯೂ ಕಾರಣವಿರಬಹುದು.
ಒಬ್ಬ ರಾಜಕಾರಿಣಿಗೆ ಆ ರೀತಿಯ ತರಬೇತಿ ನೀಡಿ *ಹೀರೋ ಮಾಡಿದ ಪಾಪವೂ* ನನ್ನ ಹೆಗಲ ಮೇಲಿದೆ.

*ಎಷ್ಟೇ ಆಗಲಿ ನಾನು ಮೇಷ್ಟ್ರು ಅಲ್ಲವೇ?* ಬುದ್ದಿ ಕಡಿಮೆ!

ಆದರೂ ಸಾರ್ವಜನಿಕ ಬದುಕಿನ ಹುಚ್ಚು ಅಲೆದಾಟಗಳಲ್ಲಿ ನೂರಾರು ರಾಜಕಾರಿಣಿಗಳ ಸಂಪರ್ಕ.
ಅವರಿಂದ ಏನಾದರೂ ಒಳ್ಳೆಯದಾಗಬಹುದೆಂಬ ಹುಚ್ಚು-ಭ್ರಮೆ.

ಆದರೆ ಅದು ಹಾಗಲ್ಲ ಅವರ ಸಾರ್ವಜನಿಕ ಮುಖ ಎಂದರೆ ಹಣ ಹಾಗೂ ಚುನಾವಣೆ.

ಈ ಗೊಂದಲದಲೂ ಸತ್ಯ ಹೇಳುವ ರಾಜಕಾರಣಿಗಳು ಸಿಕ್ಕಾಗ ಖುಷಿ ಆಗುವುದು ಸಹಜ.

ಅಂತಹ ಅಪರೂಪದ ವ್ಯಕ್ತತ್ವ ರಮೇಶಕುಮಾರ ಅವರದು.  ರಾಜಕಾರಣಿಗಳು ಮುಜುಗರ ಪಡುವ ಸಂಗತಿಗಳನ್ನು ಬಹಿರಂಗವಾಗಿ ಹೇಳುವ ಎದೆಗಾರಿಕೆ ಇದೆ. ಅದೇ ಕಾರಣಕ್ಕೆ ಅವರನ್ನು ಇಷ್ಟಪಡುತ್ತೇನೆ.

ಅನೇಕ ಸಭೆ, ಸಮಾರಂಭಗಳಲಿ ವೇದಿಕೆಯ ಮೇಲೆ ಹಾಗೂ ಖಾಸಗಿಯಾಗಿಯೂ ಮಾತಾಡುವ ಪ್ರಸಂಗದಲ್ಲಿ ಹರ್ಶಿಸಿದ್ದೇನೆ.

ತೊಂಬತ್ತರ ದಶಕದಲ್ಲಿ ಇವರು ಹೆಗಡೆ ಆಪ್ತರು ಅನ್ನೋ ಕಾರಣಕ್ಕೆ ಮಂತ್ರಿಗಿರಿ ಕಳೆದುಕೊಂಡು, ಉಪಯೋಗವೆನಿಸದ ಸ್ಪೀಕರ್ ಸ್ಥಾನ ಅಲಂಕರಿಸಿದರು.

*ನಂತರ ಸೋತು ಬಿಡುವಾದಾಗ ಟಿ.ಎನ್. ಸೀತಾರಾಮ್ ಅವರ ಧಾರಾವಾಹಿಯಲ್ಲಿ ಸಹಜವಾಗಿ ನಟಿಸಿ ಸೈ ಅನಿಸಿಕೊಂಡರು*

ಓದು, ಅಧ್ಯಯನ, ಭಾಷೆಯ ಮೇಲೆ ಹಿಡಿತ, ಸೂಕ್ಷ್ಮತೆ, ಅವಮಾನವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಬದುಕುವ ಚಾಣಾಕ್ಷತನವನ್ನು ಇತರ ರಾಜಕಾರಣಿಗಳು ರೂಪಿಸಿಕೊಳ್ಳಬೇಕು.

ಅವರ ರಾಜಕೀಯ ಬದುಕು  ಮುಗಿಸುವ ಹುನ್ನಾರ ನಡೆದರೂ ಅವರ ಚಾಣಾಕ್ಷ ಮಾತುಗಳಿಂದ, ಔದಾರ್ಯ ನಿಲುವಿನಿಂದ ಮುಖ್ಯ ಮಂತ್ರಿಗಳಷ್ಟೇ ಜನಪ್ರಿಯರಾದರು.

ಹಿಂದೆ ಸ್ಪೀಕರ್ ಆಗಿದ್ದಾಗ ಹೊಸ ಶಾಸಕರಿಗೆ ಹುರಿದುಂಬಿಸುವ ಕೆಲಸ ಮಾಡಿದರು. ಅಧ್ಯಯನಶೀಲ ಮಾತುಗಳಿಂದ ಇಡೀ ರಾಜ್ಯದ ಗಮನ ಸೆಳೆದರು. ಇವರನ್ನು ಮುಗಿಸಬೇಕೆಂದವರು ಅಲ್ಲಿಯೇ ಉಳಿದರು.

ಜಾತಿ ಬಲವಿಲ್ಲದ ಕ್ಷೇತ್ರದಲ್ಲಿ ತಮ್ಮ ಸರಳತೆ ಹಾಗೂ ಜನಸಂಪರ್ಕದಿಂದ ಗೆದ್ದು ರಾಜಕಾರಣ ಮಾಡಬಹುದೆಂದು ನಿರೂಪಿಸುತ್ತಲೇ ಇದ್ದಾರೆ.

ಅಂದಾನೆಪ್ಪ ದೊಡ್ಡಮೇಟಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಮಿತ್ರ ಬಿದರೂರ ಹಾಗೂ ನಾನು ಸೇರಿಕೊಂಡು ಇವರನ್ನು ಹಾಗೂ ಎಂ.ಪಿ.ಪ್ರಕಾಶ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ನೆನಪಲ್ಲುಳಿಯುವ ಮಾತುಗಳನ್ನಾಡಿದ್ದರು.

ಕಳೆದ ಸರಕಾರದಲ್ಲಿ ಕೊನೆಗಳಿಗೆಯಲಿ ಸಿಕ್ಕ ಮಂತ್ರಿ ಸ್ಥಾನವನ್ನು ಜನೋಪಯೋಗಿ ನಿಲುವಿಗೆ ಬಳಸಿಕೊಂಡರು.

ಈಗ ಮತ್ತೆ ಶಾಸಕ, ಮಂತ್ರಿಯಾಗಬಾರದು ಎಂಬ ಕಾರಣಕ್ಕೆ ಸ್ಪೀಕರ್!!

*ಇದುವೇ ರಾಜಕಾರಣದ ಬ್ಯೂಟಿ*.

ಹಾಸ್ಯ, ಅಧ್ಯಯನಶೀಲ ವಿವರಣೆ, ಇರಿತಗಳ ಮೂಲಕ ಸದನದ ಸದಸ್ಯರನ್ನು ಎಚ್ಚರಿಸುವ ಮುತ್ಸದ್ದಿ.

ನನ್ನ so called ಸಮಾಜವಾದಿ ಎಡಪಂಥೀಯ ಮಿತ್ರರೊಬ್ಬರು ಇವರ ಕುರಿತು ನನ್ನೆದುರು ಭಿನ್ನವಾಗಿ ಮಾತನಾಡಿದ್ದರು.

*ಸಾರ್ವಜನಿಕವಾಗಿ ಜಾತ್ಯಾತೀತ ಹಾಗೂ ಸರಳತೆಯ ಸೋಗು ಹಾಕಿ ಜನರನ್ನು ಮರುಳು ಮಾಡುತ್ತಾರೆ. ಕೊಂಕಳ ಹರಿದ ಅಂಗಿ ತೊಟ್ಟು ಭಾಷಣ ಮಾಡುವಾಗ ತೋಳು ಮೇಲೆತ್ತಿ‌ ಹರಿದ ಅಂಗಿ ಹೈಲೈಟ್ ಮಾಡುವ ಚಾಣಾಕ್ಷ* ಇನ್ನೂ ಏನೇನೋ ಹೇಳಿದಾಗ, "ನೀವು ಅದೇ ರಾಜಕಾರಣ ಮಾಡಿ ಜನರಿಗೆ ಒಳ್ಳೆಯದು ಮಾಡಿ ಮುಖವಾಡ ಹಾಕ್ಕೊಂಡು ಜನರನ್ನು ದಾರಿ ತಪ್ಪಿಸಬೇಡಿ" ಎಂದು ಹೇಳಿ‌ ಅವರಿಂದ ಅನೇಕ ತೊಂದರೆಗಳನ್ನು ಅನುಭವಿಸಿದೆ.

ನಂತರ ಬೆಂಗಳೂರಿನಲ್ಲಿ ಪ್ರೊ.ರೇಶ್ಮೆ ಹಾಗೂ ಪ್ರೊ.ರಂಗನಾಥ ಅವರ ಸಂಪರ್ಕ ಹೆಚ್ಚಾದ ಮೇಲೆ ವಿಕ್ರಾಂತ ಕರ್ನಾಟಕದಲ್ಲಿ ಬರೆಯುವಾಗ ರಾಜಕಾರಣದ ಮಗ್ಗುಲನ್ನ ಇನ್ನೂ ಸರಿಯಾಗಿ ಗ್ರಹಿಸಿದೆ.

ಈಗ ಮುಖ, ಮುಖವಾಡಗಳ‌ ಅರಿಯುವಾಗ ಹೆಗಡೆ, ಪಟೇಲ್, ಎಂ.ಪಿ.ಪ್ರಕಾಶ ಹಾಗೂ ಜನತಾ ಪರಿವಾರದ ರಾಜಕಾರಣ ನೆನಪಾಗುತ್ತದೆ.

ಈಗ ಆ ಸವಿ ನೆನಪಿಗೆ ಕೆಲವೇ ಕೆಲವರು. ಅವರಲ್ಲಿ ರಮೇಶಕುಮಾರ ನಿಜವಾಗಲೂ *ದೊಡ್ಡವರು* ಬರೀ ಸಿನೀಯರ್ ಅಲ್ಲ.

ನಿನ್ನೆಯ ಅವರ ಮಾತುಗಳನ್ನು ಇಡೀ ಸದನ, ಮಾಧ್ಯಮ ಹಾಗೂ ಸಾರ್ವಜನಿಕರೂ ಗಮನಿಸಿದ್ದಾರೆ.

ಇಂದು ಅಚಾನಾಕಾಗಿ ಕೋಶಿಸ್ ನಲ್ಲಿ ಊಟಕ್ಕೆ ಬಂದು ಸಾರ್ವಜನಿಕವಾಗಿ ಊಟ ಮಾಡುತ್ತಿದ್ದರು.
ಅವರ ಕಾಲೇಜು ಸಹಪಾಟಿ, ನನ್ನ ಮಾರ್ಗದರ್ಶಕರೂ ಆದ ಪ್ರೊ.ರಂಗನಾಥ ಅವರನ್ನು ವಿಚಾರಿಸಿ ಹೊರಡುವಾಗ ಆತ್ಮೀಯವಾಗಿ ನಸು ನಕ್ಕರು.

   *ಸಿದ್ದು ಯಾಪಲಪರವಿ*

No comments:

Post a Comment