Friday, October 29, 2010

ಬಿಸಿ ಉಪ್ಪಿಟ್ಟು, ಅಮೇರಿಕಾ ಹಾಲು

ರಾಮಣ್ಣ ಮೇಷ್ಟ್ರು ಪ್ರಕರಣವೊಂದೇ ನನ್ನ ನಿರಾಸಕ್ತಿಗೆ ಕಾರಣವಲ್ಲ. ಅಕ್ಷರ ಪ್ರೇಮ ಅರಳಲೇ ಇಲ್ಲ. ಅಂಗಡಿ ಮೇಲಿನ ಆಸಕ್ತಿ, ಪುಟಾಣಿ, ಬೆಲ್ಲ, ಗೋಡಂಬಿಗಳ ಮೇಲಿನ ಪ್ರೀತಿಯಿಂದಾಗಿ ಶಾಲೆ ಆದ್ಯತೆ ಅನಿಸಲೇ ಇಲ್ಲ.
ಮನೆಯಲ್ಲೂ ಅಷ್ಟೆ, ದೊಡ್ಡ ಪರಿವಾರ ಯಾರು ಹೋಗ್ತಾರೆ, ಬಿಡ್ತಾರೆ ಎಂಬ ಕಟ್ಟುನಿಟ್ಟು ಇರಲಿಲ್ಲ. ಪಾಲಕರು, ಅಜ್ಜಂದಿರು, ನಮ್ಮನ್ನು ಹೊಡೆಯುವುದು ಶಿಕ್ಷಿಸುವುದಂತೂ ದೂರದ ಮಾತು. ಎಲ್ಲರೂ ಅವರವರ ಪಾಡಿಗೆ busy.
ಇಂದಿನ ಪ್ರಾಥಮಿಕ ಶಿಕ್ಷಣದ ಶಿಸ್ತನ್ನು, ಅಭ್ಯಾಸದ ಬಗೆಗಿನ ಕಾಳಜಿಯನ್ನು ನೋಡಿದರೆ ಆಶ್ಚರ್ಯ. ಈ ರೀತಿಯ ಬಾಲ್ಯದ ಶಿಕ್ಷಣ ಪಡೆದ ನೆನಪೆ ಇಲ್ಲ.
ಇದ್ದ ಸರಕಾರಿ ಶಾಲೆಯಲ್ಲಿ ಮಕ್ಕಳು ಬಂದರೆ ಸಾಕು ಎನ್ನುವ ಸ್ತಿತಿ ಶಾಲೆಯಲ್ಲಿ ಕೊಡುತ್ತಿದ್ದ ದಪ್ಪ ಕಾಳಿನ ಉಪ್ಪಿಟ್ಟು ಒಮ್ಮೊಮ್ಮೆ ಶಾಲೆಗೆ ಹೋಗಲು ಪ್ರೇರೆಪಿಸುತ್ತಿತ್ತು.
ಅದನ್ನು ಎಲ್ಲರೂ ತಿನ್ನಬಾರದು ಎಂಬ ಕರಾರಿದ್ದರೂ ನಾನು ಕಡ್ಡಾಯವಾಗಿ ಖುಷಿಯಿಂದ ತಿನ್ನುತ್ತಿದ್ದೆ.
ಇಂದಿನ ಅಕ್ಷರ ದಾಸೋಹದ ಬಿಸಿ ಊಟ ಅಂದು ಉಪ್ಪಿಟ್ಟಿನ ಸ್ವರೂಪದಲ್ಲಿತ್ತು. ಬಿಸಿಯುಟ ಹೊಸ concept ಅಲ್ಲ. ಅಂದು ಅಮೇರಿಕಾ ಒದಗಿಸುತ್ತಿದ್ದ ಹಾಲಿನ ಪುಡಿ, ಮತ್ತು ರವೆಯನ್ನು ಮಕ್ಕಳ ಆಹಾರವಾಗಿ ಬಳಸುತ್ತಿದ್ದರು. ನಮ್ಮಂತಹ ದಡ್ಡ ಹುಡುಗರನ್ನು ಆಕರ್ಷಿಸಲು ಉಪ್ಪಿಟ್ಟು ನೆರವಾಯಿತು.
ಉಪ್ಪಿಟ್ಟು ಮಾಡುವ ವಾಸನೆ ಸಿಕ್ಕರೆ ಸಾಕು ಶಾಲೆಗೆ ಓಡಿಹೋಗುತ್ತಿದ್ದೆ. ಯಾರಿಗೂ ಕಾಣದಂತೆ ಉಪ್ಪಿಟ್ಟು ತಿನ್ನುತ್ತಿದ್ದೆ.
ನಿಧಾನವಾಗಿ ಸಾಧ್ಯವಾದಷ್ಟು ಕಲಿಯಲು ಪ್ರಾರಂಬಿಸಿದೆ. ರೆಗ್ಯೂಲರ್ ಇರದಿದ್ದರೂ ವರ್ಷ ಏಪ್ರಿಲ್ 10 ರಂದು ಪಾಸ್ ಆಗಿರುತ್ತಿದ್ದೆ.
ತಲೆಗೆ ಎಷ್ಟು ಅಕ್ಷರಗಳು ಹೋದವು ಎಂಬ ಪರೀಕ್ಷೆ ಇಲ್ಲದೆ ಪಾಸ್ ಆದದ್ದು ನನ್ನ ಶೈಕ್ಷಣಿಕ ಪವಾಡ
ಇಂತಹ ಪವಾಡಗಳು ನಮ್ಮ ಕಾಲಕ್ಕೆ ಸಾಮಾನ್ಯ. ಶ್ರೀಮಂತರ ಮಕ್ಕಳು ಶಾಲೆಗೆ ಬಂದರೆ ಸಾಕು ಎಂಬ ಸಂಭ್ರಮ ಬೇರೆ.
ಕನ್ನಡವನ್ನು ಮಾತ್ರ ಕಲಿಯುತ್ತಿದ್ದೆ. ಇಪ್ಪತ್ತರವರೆಗೆ ಮಗ್ಗಿ ಕಲೆತಿದ್ದು ಗಣಿತದ ಸಾಧನೆ.
ವಿಜ್ಞಾನ, ಇಂಗ್ಲಿಷ್, ಹಿಂದಿ ವಿಷಯಗಳ ಪದಗಳು ಆಗಾಗ ಪ್ರತ್ಯಕ್ಷವಾಗಿ ಮಾಯವಾಗುತ್ತಿದ್ದವು. ಆದರೆ ಆಳಕ್ಕೆ ಇಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಬಿಂದುರಾವ್ ಮೇಷ್ಟ್ರು, ಪ್ರಕಾಶಪ್ಪ ಮೇಷ್ಟ್ರು ಶಿಸ್ತಿನಿಂದ ಪಾಠ ಮಾಡುತ್ತಿದ್ದರು. ಬರುಬರುತ್ತಾ ಕುಷ್ಟಗಿಗೆ ಹೋಗುವುದನ್ನು ಕಡಿಮೆ ಮಾಡಿದೆ. ಶಾಲಾ ಸುಧಾರಣಾ ಸಮಿತಿಯ ಸಭೆಗಳಲ್ಲಿ ನಮ್ಮಂತಹ ಹುಡುಗರ ಬಗ್ಗೆ ಚರ್ಚೆಯಾಗುತ್ತಿದ್ದ ಸುದ್ದಿಗಳು ಕಿವಿಗೆ ಬಡಿಯುತ್ತಿದ್ದವು.
ಆದರೆ ಶಾಲೆಯ ಬಗ್ಗೆ ಭಯ, ಆಸಕ್ತಿ, ಶ್ರದ್ಧೆ ಬರಲೇ ಇಲ್ಲ. ಬಾಲ್ಯದಲ್ಲಿ ಕಡ್ಡಾಯವಾಗಿ ಶಿಕ್ಷೆ ನೀಡಿ ಶಿಕ್ಷಣ ನೀಡಬೇಕು. ಇಲ್ಲದಿದ್ದರೆ ಶಿಕ್ಷಣ ತಲೆಗೆ ಹೋಗುವುದಿಲ್ಲ ಎಂದು ಈಗ ಅನಿಸುತ್ತದೆ. ಆದರೆ ದೇಹ ದಂಡನೆಯ ಅಗತ್ಯವಿಲ್ಲ.
ಕನ್ನಡ ಅಕ್ಷರ ದುಂಡಾಗಿ ಬರೆಯುವುದನ್ನು ರೂಢಿ ಮಾಡಿಕೊಳ್ಳಲಿಲ್ಲ. ಅದೇ ಕಾರಣಕ್ಕೆ ಈಗಲೂ ಅಕ್ಷರ ದುಂಡಾಗುವುದಿಲ್ಲ.
ಮರವಾಗಿ ಬಗ್ಗದ್ದು, ಗಿಡವಾಗಿ ಬಗ್ಗೀತೆ ಎಂಬ ಮಾತು ನನ್ನ ಅಕ್ಷರಗಳಿಗೆ ಅನ್ವಯಿಸುತ್ತದೆ. ಬಾಲ್ಯದಲ್ಲಿ ಶುದ್ದಬರಹ ಸಾಧ್ಯವಾಗಲಿಲ್ಲ.
ಪ್ರತಿ ವರ್ಷ pass ಆಗುವ ಸಂಬ್ರಮ ಇದ್ದೇ ಇರುತ್ತಿತ್ತು. ನನಗಿಂತ ಒಂದೇ ವರ್ಷ ಮುಂದಿನ ಚನ್ನಪ್ಪ ಕಕ್ಕ ಶಾಲೆಯಲ್ಲಿ ಬುದ್ಧಿವಂತನಿದ್ದ. ಅದನ್ನು ನಾನೆಂದು compitition ಎಂದು ಭಾವಿಸಲೇ ಇಲ್ಲ. ಅವನದು ಅವನಿಗೆ, ನನ್ನದು ನನಗೆ ಎಂಬ easy going attitude ಇತ್ತು.
ಅಂಗಡಿಯಲ್ಲಿ ಕುಳಿತಾಗ ಅಮರಣ್ಣ ತಾತ ಕೇಳುವ ಇಲ್ಲ ಪ್ರಶ್ನೆಗಳಿಗೆ ಸರಳವಾಗಿ ಉತ್ತರ ಕೊಡುತ್ತಿದ್ದರಿಂದ ತಾತ ಶಹಬ್ಬಾಸ್ ಗಿರಿ ಕೊಡುತ್ತಿದ್ದ. ಹೀಗಾಗಿ ನನ್ನನ್ನು ದಡ್ಡ ಎಂದು ಯಾರೂ ಪರಿಗಣಿಸಲಿಲ್ಲ. ಅಮರಣ್ಣ ತಾತ ವ್ಯಾಪಾರದಲ್ಲಿ ತುಂಬಾ ಬುದ್ಧಿವಂತ. ಮನೆಯ ಹಿರಿಯ ಬೇರೆ, ಅಂತಹ ತಾತನೇ ಸರ್ಟಿಫಿಕೇಟ್ ಕೊಟ್ಟ ಮೇಲೆ ಉಳಿದವರೇನು ಲೆಕ್ಕ ಎಂಬ ಅಸಡ್ಡೆ ಬೆಳೆಯಿತು.
ಅಕ್ಯಾಡೆಮಿಕ್ ಆಗಿ ಬೆಳೆಯದಿದ್ದರೂ ಸಾಮಾನ್ಯ ಜ್ಞಾನ ಬೆಳಸಿಕೊಂಡೆ. ದಿನ ಪತ್ರಿಕೆ ಓದುತ್ತಿದ್ದೆ. ರೇಡಿಯೋ ಕೇಳುತ್ತಿದ್ದೆ ಅಲ್ಲಿನ ಎಲ್ಲ ಸುದ್ದಿಗಳನ್ನು ತುಂಬಾ ಅಚ್ಚುಕಟ್ಟಾಗಿ ಅಮರಣ್ಣ ತಾತನಿಗೆ ವರದಿ ಮಾಡುತ್ತಿದ್ದೆ.

ನಾಲ್ಕಾರು ಜನ ಇದ್ದಾಗ ತಾತ ಹೇಳುತ್ತಿದ್ದ, "ನಮ್ಮ ಸಿದ್ದಿ ತುಂಬಾ ಜಾಣ ಎಲ್ಲ ಸರಿಯಾಗಿ ನೆನಪಿಟ್ಟಿರುತ್ತಾನೆ." ಎಂಬ ಪ್ರಶಂಸೆಗಳು ಅಕ್ಯಾಡೆಮಿಕ್ ಆಗಿ ಬೆಳೆಯಲು ತಡೆಯೊಡ್ಡಿದವು.
ಗಲ್ಲೆಮೇಲೆ ಕುಳಿತುಕೊಂಡು ಸರಿಯಾಗಿ ಲೆಕ್ಕ ಮಾಡುತ್ತಿದ್ದೆ. ವ್ಯಾಪಾರದಲ್ಲಿನ ಚುರುಕುತನ ನನ್ನ ಜಾಣ ಎಂದು ಪರಿಗಣಿಸಿತು. ಏಳನೇ ತರಗತಿ ಬೋರ್ಡ ಪರೀಕ್ಷೆ. ಆಗ ಶಿಕ್ಷಕರು ಕಟ್ಟು ನಿಟ್ಟಾಗಿ ಕ್ಲಾಸಿಗೆ ಹಾಜರಾಗಲು ಸೂಚಿಸಿದರು.
ಒಂದರಿಂದ ಆರು ಅಪರೂಪದ ಅತಿಥಿಯಾಗಿದ್ದ ನಾನು ಶಾಲೆಗೆ regular ಆದದ್ದು ಏಳನೇ ಕ್ಲಾಸಿನಲ್ಲಿ ಮಾತ್ರ.

1 comment:

  1. "'ವಿಜ್ಞಾನ, ಇಂಗ್ಲಿಷ್, ಹಿಂದಿ ವಿಷಯಗಳ ಪದಗಳು ಆಗಾಗ ಪ್ರತ್ಯಕ್ಷವಾಗಿ ಮಾಯವಾಗುತ್ತಿದ್ದವು."" bhaal super presentation!! I love to read and feel these type of expressions. fantastic!!

    ReplyDelete