Tuesday, March 15, 2011
ತಿರುಗಿ ನೋಡುವ ಸಂಭ್ರಮದಲಿ . . . .
ಕುಷ್ಟಗಿ ಅಜ್ಜನ ಪ್ರೀತಿ ರಾಯಲ್ ಜೀವನ
ಕಂಠೀರವ ಸ್ಟುಡೀಯೋ ಚಿತ್ರಿಕರಣದ ಅನುಭವ
ಮೌಢ್ಯತೆಗೆ ಉತ್ತರವಿಲ್ಲ - ಪ್ರೀತಿ ತೋರಿದ ಹಡಪದ ಸ್ನೇಹಿತರು
Wednesday, March 2, 2011
Wednesday, February 23, 2011
ನಶಿಸಿ ಹೋದ ಸಿರಿವಂತಿಕೆ ಸರಸ್ವತಿಗಾಗಿ ಹುಡುಕಾಟ
ಆದರೆ ಬೇರೆ ಆದ ಮೇಲೆ ಅಪ್ಪನೂ ಕಿರಾಣಿ ಅಂಗಡಿ ಮಾಡುವುದು ಅನಿವಾರ್ಯವಾಯಿತು. ನಮ್ಮ ಗಿರಾಕಿಗಳಿಗೆ ನಿರಾಶೆಯಾಯಿತು. ಪರಿಚಯವಿದ್ದ ಅಪ್ಪನ ಅಂಗಡಿಗೂ ಮನೆತನದ ಹಿರಿಯ ಅಮರಣ್ಣ ತಾತನ ಕಡೆಗೋ ಎಂಬ ಸಂಕೋಚದಲ್ಲಿ ನಮ್ಮ ಗ್ರಾಹಕರು ದೂರಾದರು.
ಆಸ್ತಿ ಹಂಚಿಕೊಂಡ ಹಾಗೆ ನಾವು ನಮ್ಮ ಆಳುಗಳನ್ನು ಲೆಕ್ಕ ಬರೆಯುವವರನ್ನು ಹಂಚಿಕೊಂಡೆವು ಅನಿಸುತ್ತದೆ. ಕೆಲವರು ಅಪ್ಪನ ಕಡೆ, ಕೆಲವರು ತಾತನ ಕಡೆ ಉಳಿದರು. ಒಂದು ರೀತಿಯ ಇಳಿಮುಖ ಆರಂಭವಾಯಿತು. ದಿನಕ್ಕೆ ಸಾವಿರಾರು ರೂಪಾಯಿ ಲಾಭ ತಿರುತ್ತಿದ್ದ ಅಂಗಡಿ ನಿರ್ಜನವಾಯಿತು. ನಮ್ಮಲ್ಲಿ ಕೆಲಸಮಾಡಿ ಗಿರಾಕಿಗಳೊಂದಿಗೆ ಸಂಪರ್ಕ ಹೊಂದಿದ ಗುಮಾಸ್ತರು ಅಂಗಡಿ ಪ್ರಾರಂಭಸಿದರು. ಇದು ಅವರ ಬೆಳವಣಿಗೆಗೆ ಅನಿವಾರ್ಯ ಕೂಡಾ ಆಗಿತ್ತು.
೧೯೭೬ರಲ್ಲಿ ಅಮರಣ್ಣ ತಾತ ಇದೇ ಬೇಸರದಿಂದ ನಿಧನ ಹೊಂದಿದ ಮೇಲೆ ಇಡೀ ಪರಿವಾರದ ಮೇಲೆ ತೀವ್ರ ಪರಿಣಾಮವಾಯಿತು. ಎರಡೂ ಅಂಗಡಿಗಳು ಸರಿಯಾಗಿ ನಡೆಯಲಿಲ್ಲ. ಓಡಾಟಕ್ಕೆ ಇದ್ದ ಜೀಪು ದೂರವಾಯಿತು.ಹಳೆ ಸ್ಕೂಟರ್, ಒಂದೆರಡು ಸೈಕಲ್ಲುಗಳು ನಮ್ಮ ಪಾಲಿಗೆ ಉಳಿದವು. ರಾಯಚೂರಿನಿಂದ ಮಾಲು ತರಲು ಬಳಸುತ್ತಿದ್ದ ಲಾರಿ ಮಾರಾಟವಾಯಿತು. ದಿನದಿಂದ ದಿನಕ್ಕೆ ಧಣಿತನ ಕ್ಷೀಣವಾಗಿ, ಧಣಿ ಎಂಬ ಪಟ್ಟ ಮಾತ್ರ ಉಳಿಯಿತು. ಸೂಗಪ್ಪ ಮಾಮಾ, ನಾಗಪ್ಪ ಮಾಮಾ ಅಪ್ಪನೊಂದಿಗೆ ಉಳಿದು ಬೇರೆ, ಬೇರೆ ವ್ಯಾಪಾರಗಳ ವಿಫಲ ಪ್ರಯೋಗ ಮಾಡಿದರು. ಕನಕರಡ್ಡಿ ಶಿವಲಿಂಗಪ್ಪ, ಮಲ್ಲಪ್ಪ, ಕುಳಗಿ ಶರಣಪ್ಪ ಬೇರೆ ವ್ಯಾಪಾರ ಪ್ರಾರಂಭಿಸಿದರು ನಮ್ಮದು ಅರಸೊತ್ತಿಗೆಯಿಲ್ಲದ ಸಾಮ್ರಾಜ್ಯವಾಯಿತು. ಶಾಲೆಗೆ ಕರೆದುಕೊಂಡು ಹೋಗಲು ನೇಮಿಸಿದ್ದ ಆಳುಗಳು ಬಿಟ್ಟು ಹೋದರು. ನಾವೇ ಪಾಟಿ ಚೀಲ ಹೊತ್ತುಕೊಂಡು ಶಾಲೆಗೆ ಹೋಗಲು ಬೇಸರವಾಗುತ್ತಿತ್ತು.
ಆದರೆ ಕಾಲಚಕ್ರ ನಮ್ಮನ್ನು ಕೆಳಗೆ ಇಳಿಸಿತ್ತು. ನಾವು ಮೇಲಿದ್ದೇವೆ ಎಂಬ ಭ್ರಮೆಯಲ್ಲಿ ಬಹಳ ದಿನ ಉಳಿಯಲಾಗಲಿಲ್ಲ.
ಸೂಗಪ್ಪ ಮಾಮ ಅಪ್ಪನನ್ನು ಬಿಟ್ಟು ಹೋಗಿ ಬೇರೆ ಉದ್ಯೋಗ ಪ್ರಾರಂಭಿಸಿ ಅಷ್ಟೇ ಬೇಗ ಯಶಸ್ಸುನ್ನು ಗಳಿಸಿದ ನಮ್ಮ ಅಂಗಡಿಯಲ್ಲಿ ಗುಮಾಸ್ತರಾಗಿದ್ದವರೆಲ್ಲ ಸ್ವಯಂ ಪರಿಶ್ರಮದಿಂದ, ಪ್ರಾಮಾಣಿಕ ಹೋರಾಟದಿಂದ ನಿಜವಾದ ಧಣಿಗಳಾದರು.
ದುರಾದೃಷ್ಟ ಅಂದುಕೊಂಡು ಅಪ್ಪಾ, ದೊಡ್ಡಪ್ಪ ವ್ಯಾಪಾರ ನಿಲ್ಲಿಸುವುದು ಅನಿವಾರ್ಯವಾಯಿತು.
ನಾವು ಬೇರೆ ಆಗಿದ್ದು ತಪ್ಪು ಎಂಬ ಭಾವನೆ ಉಂಟಾದರೂ ಏನೂ ಮಾಡಲು ಸಾಧ್ಯವಾಗಲಿಲ್ಲ.
ಬಟ್ಟೆ ಅಂಗಡಿ, ದಲಾಲಿ ಅಂಗಡಿಗಳ ಪ್ರಯೋಗವು ಆಯಿತು. ಹಳೆ ಬಜಾರನ ಕಿರಾಣಿ ಅಂಗಡಿಗೆ ನನ್ನನ್ನು ಕೂಡ್ರಿಸಿದರು. ನನಗೆ ವಿಪರೀತ ಪೇಪರ್ ಹೋದೋ ಹುಚ್ಚು ವ್ಯಾಪಾರದ ಕಡೆ ನಿಗಾ ಬರಲಿಲ್ಲ.
ವ್ಯಾಪಾರ ಕುಸಿಯಿತು. ರದ್ದಿ ಪತ್ರಿಕೆಗಳಾಗಿ ಬರುತ್ತಿದ್ದ ಕನ್ನಡಪ್ರಭ, ರೂಪತಾರಾ, ಪ್ರಪಂಚ ಓದಲು ಶುರು ಮಾಡಿ ಸಾಹಿತ್ಯದ ಗೀಳು ಬೆಳಸಿಕೊಂಡೆ.
ರಾಜನ ಪಾತ್ರಧಾರಿ ತನ್ನ ಪಾತ್ರ ಮುಗಿದು ಮನೆಗೆ ಹೋಗುವಾಗ ಆಭರಣ ಕಳಚಿಡುವಂತೆ, ನಾವು ಒಂದೊಂದನ್ನೆ ಕಳಚುತ್ತಾ ಹೋದೆವು.
ಹೈಸ್ಕೂಲು ಸೇರೋ ಹೊತ್ತಿಗೆ ರಿಪೇರಿಯಾಗದ ಸೈಕಲ್ಲು ಚೈನು ಹರಿದುಕೊಂಡು ಮೂಲೆ ಸೇರಿತು.
ನಾನು, ದಿದಗಿ ಸುರೇಶ, ಕಾಗಲಕರ್ ನಾಗರಾಜ್ ನಡೆದುಕೊಂಡೆ ಶಾಲೆಗೆ ಹೋಗುತ್ತಿದ್ದೆವು. ಎಂಟನೇ ಕ್ಲಾಸಿನಲ್ಲಿದ್ದಾಗ ಸ್ಕೂಟರ್ ಸವಾರಿ ಕಲಿಕೆ, ಆದರೆ ಪೆಟ್ರೋಲ್ ದುಬಾರಿ ಆಗಿದ್ದರಿಂದ ಶಾಲೆಗೆ ಒಯ್ಯಲು ಸಾಧ್ಯವಾಗಲಿಲ್ಲ. ಲಕ್ಷ್ಮೀ ನಮ್ಮಿಂದ ದೂರಾದಳು ಎಂಬ ಭಾವ ಉಂಟಾಗುವಾಗಲೇ ಸರಸ್ವತಿಯನ್ನು ಒಲಿಸಿಕೊಳ್ಳುವ ಪ್ರಯತ್ನ ಶುರು ಆಯಿತು. ಆದರೆ ದುರಾದೃಷ್ಟ ಅಲ್ಲಿಯೂ ಕೈಕೊಡಬೇಕೆ ?
ಮಾಟ-ಮಂತ್ರ ಇಂದಿನ ಕತೆಯಲ್ಲ
೨೧ನೇ ಶತಮಾನದಲ್ಲಿಯೂ ಮಾಟ ಮಾಡಿಸುತ್ತಾರೆ. ವಿಧಾನ ಸೌಧಕ್ಕೆ ಮುಖ್ಯಮಂತ್ರಿಗಳಿಗೆ ಮಾಟ ಮದ್ದು ಮಾಡಿಸುವಾಗ ಹಿಂದಿನ ಕತೆ ಹೇಳಿದರೆ ಪರಮಾ ಶ್ವರ್ಯವಲ್ಲ ಬಿಡಿ.
ನಾನು ಕೇವಲ ಹನ್ನೆರಡರ ಪ್ರಾಯದಲ್ಲಿದ್ದಾಗಲೇ ಈ ಶಬ್ದಗಳನ್ನು ಕೇಳಿದ್ದೇನೆ.
ಅವಿಭಕ್ತ ಕುಟುಂಬ, ವಿಭಕ್ತಗೊಳ್ಳವದನ್ನು ಗ್ರಾಮ್ಯಭಾಷೆಯಲ್ಲಿ ಬ್ಯಾರೆ ಆಗುವುದು ಅನ್ನುತ್ತಿದ್ದರು. ಬ್ಯಾರೆ ಆಗುವುದು ಆ ಕಾಲದಲ್ಲಿ ದೇಶ ವಿಭಜನೆ ಆದಂತೆಯೇ.
ಕಾರಟಗಿಯ ಪ್ರತಿಷ್ಠಿತ ಯಾಪಲಪರವಿ ಮನೆತನದವರು ಬ್ಯಾರೆ ಆಗ್ತಾರೆ ಅಂದದ್ದು ಇಡೀ ಊರನ್ನೇ ಬೆರಗುಗೊಳಿಸಿತ್ತು. ಸಾವಿರ ವರ್ಷ ಬದುಕಿದ್ರು ಸಾಯೋದು ತಪ್ಪಲಿಲ್ಲ, ನೂರು ವರ್ಷ ಕೂಡಿದ್ರು ಬ್ಯಾರೆ ಆಗೋದು ತಪ್ಪಲಿಲ್ಲ ಎಂಬುದೊಂದು ನಮ್ಮೂರಲ್ಲಿ ಪ್ರಚಲಿತ ಗಾದೆ.
೧೯೭೨ ರಲ್ಲಿ ನಮ್ಮ ಮನೆತನದ ಬ್ಯಾರೆ ಆಗೋ ಪ್ರಕಿಯೆ ಶುರು ಆಯಿತು. ಕೂಡಿದ್ದಾಗ ಹಾಲು-ಜೇನಿನಂತೆ ಇರುವ ಕುಟುಂಬಗಳು ಬ್ಯಾರೆ ಆಗುವ ಸಂದರ್ಭದಲ್ಲಿ ದಾಯಾದಿ ಕಲಹದ ಸ್ವರೂಪ ತಾಳುವುದು ಕುಟುಂಬ ವ್ಯವಸ್ಥೆಯ ವಿಪರ್ಯಾಸ.
ಒಂದರ್ಥದಲ್ಲಿ ಇದು ಕೂಡಾ ಅತ್ತೆ-ಸೊಸೆ ಸಂಬಂಧ ಇದ್ದ ಹಾಗೆ ನೆವರ್ ಎಂಡಿಂಗ್ ಪ್ರಾಬ್ಲಂ ಅಂತಾರೆಲ್ಲ ಹಾಗೆ.
ಅಂತೂ ಇಂತೂ ಹತ್ತು ಹಲವು ಹೊಡೆದಾಟ ತಾಕಲಾಟಗಳ ನಡುವೆ ಬ್ಯಾರೆ ಆದದ್ದೇನೋ ಆಯಿತು.
ಆದರೆ ನಂತರದ ಸಮಸ್ಯೆಗಳು ಅದಕ್ಕಿಂತಲೂ ಭಯಾನಕ ಸರಿಯಾಗಿ ಪಾಲು ಕೊಡಲಿಲ್ಲ ಎಂಬ ಅಸಹನೆ ಅವ್ವನದಾದರೆ, ಸುರಕ್ಷಿತ ಬ್ಯಾರೆ ಆಗಲಿಲ್ಲ ಎಂಬ ಸಿಟ್ಟು ಅಮ್ಮನದು ಇದು ಮಾಟ ಮೂಡಿಸಿದ್ದಾರೆ ಎಂಬ ದಂತಕ್ಕೆ ತಲುಪಿತು. ಮನೆತನದ ಹಿರಿಯ ಅಮ್ಮ, ಅವ್ವನ ಮೇಲಿನ ಸಿಟ್ಟಿಗೆ ಮಾಟ ಮಾಡಿಸುತ್ತಾಳೆ ಎಂಬ ಭಾವನೆ ಅವ್ವಗೆ ಬಂದಿದ್ದೆ ಮುಂದಿನ ಅವಾಂತರಗಳಿಗೆ ಕಾರಣವಾಯಿತು.
ಅವಿಭಕ್ತ ಕುಟುಂಬದಲ್ಲಿದ್ದಾಗ ಇದ್ದ ದನದ ಮನೆ ನಮ್ಮ ಪಾಲಿಗೆ ಬಂತು. ಹಾಗೆ ಅದರ ಪಕ್ಕದಲ್ಲಿದ್ದ ಭಾವಿಯನ್ನು ಭಾಗ ಮಾಡಿದ್ದು ನಮ್ಮೂರ ಮಟ್ಟಿಗೆ ಇತಿಹಾಸವೇ.
ದುಂಡಗಿನ ನೀರಿನಿಂದ ಆವೃತವಾದ ಜಾಗೆಯನ್ನು ಬಿಟ್ಟು ಉಳಿದ ಭಾವಿಮನೆಯನ್ನು ವಿಭಜಿಸಲು ಗೋಡೆ ಕಟ್ಟಲಾಯಿತು. ಹೀಗೆ ನೀರು ಕೊಡುವ ಭಾವಿಯನ್ನು ಹಂಚಿಕೊಂಡಿದ್ದು, ಅದಕ್ಕಾಗಿ ನಡುರಸ್ತೆಯಲ್ಲಿ ನಿಂತು ಅಮ್ಮ ಅವ್ವ ಚೀರಾಡಿದ್ದು ಇನ್ನೂ ಹಚ್ಚ ಹಸಿರಾಗಿದೆ. ಮಾತಿಗೆ ಮಾತು ಬೆಳೆದು ಅಮ್ಮ ಸಿಟ್ಟಿನಲ್ಲಿ ನೀರು ಹಂಚಿಕೊಂಡ ನಿನ್ನ ಹೊಟ್ಟೇಲಿ ನೀರು ತುಂಬಲಿ ಅಂದಳಂತೆ.
ಮುಂದಿನ ದಿನಗಳಲ್ಲಿ ಆ ಮಾತು ಸತ್ಯ ಅನುವಂತೆ ಬಸುರಿಯಾಗಿದ್ದ ಅವ್ವನ ಹೊಟ್ಟೆಯಲ್ಲಿ ನೀರು ತುಂಬಿತ್ತಂತೆ ನೀರು ತುಂಬಿದ ಕಾರಣಕ್ಕೆ ಮಗು ಬದುಕಲಿಲ್ಲವಂತೆ.
ಈ ಎಲ್ಲ ಅಂತೆ-ಕಂತೆಗಳಿಗೆ ಕಾರಣ ಅಂತಿಮವಾದದ್ದು ಮಾಟ ಎಂಬ ಮಹಾಭೂತದಿಂದ.
ಅಮ್ಮ ಸಿಟ್ಟಿನಿಂದ ಅವ್ವಗೆ ಮಾಟ ಮಾಡಿಸಿದ್ದರಿಂದ ಹೊಟ್ಟೆಯಲಿ ನೀರು ತುಂಬಿ ಮಗು ಬದುಕಲಿಲ್ಲ ಅನಿಸಿ ಕುಟುಂಬದ ಮಧ್ಯೆದ ದ್ವೇಷ ಹೆಚ್ಚಾಯಿತು.
ಹಳೆ ದೊಡ್ಡ ಮನೆಗೆ ಹೋಗಬಾರದು ಎಂದು ಅವ್ವ ತಾಕೀತು ಮಾಡಿದಳು, ಹಳೆಯ ಮನೆಯ ಸೆಳೆತದಿಂದ ನಾನು ತಪ್ಪಿಸಿಕೊಳ್ಳಲಿಲ್ಲ. ಕದ್ದು ಮುಚ್ಚಿ ಹೋಗಿ ಅಮ್ಮ ಕೊಟ್ಟ ಹಾಲು ಕುಡಿದು ಬರುತ್ತಿದ್ದೆ .ವಿಷಯ ತಿಳಿದು ಅವ್ವ ಕೆಂಡ ಮಂಡಲವಾದಳು. ಹೆಂಗಾದರೂ ಹಾಳಾಗಿ ಹೋಗಲಿ ಎಂದು ಬೈದು ಯಾಲಕ್ಕಿ ತಿನಿಸಿ ಕಳಿಸುತ್ತಿದ್ದಳು. ಯಾಲಕ್ಕಿ ತಿಂದು ಹೋದರೆ ಮಾಟ ಮಾಡಿದ್ದು ಹೊಟ್ಟೆಗೆ ಹತ್ತುವುದಿಲ್ಲ ಎಂಬ ವಿಚಿತ್ರ ನಂಬಿಕೆ ಬೇರೆ !
ನಾನು ಮನೆ ಬಿಟ್ಟು ಹೊರಗೆ ಹೋಗುವ ಮುಂಚೆ ಯಾಲಕ್ಕಿ ತಿನ್ನುವುದು ಕಡ್ಡಾಯವಾಯಿತು. ಮಾಟ ಎಂದರೆ ಏನು ? ಅದು ಯಾವ ಸ್ವರೂಪದಲ್ಲಿರುತ್ತದೆ ಎಂಬುದನ್ನು ಅರಿಯದ ಮುಗ್ದ ವಯಸ್ಸಿನಲ್ಲಿ ಇಂತಹ ಪದಗಳು ಅನಿವಾರ್ಯವಾಗಿ ಕಿವಿಗೆ ಅಪ್ಪಳಿಸುತ್ತಿದ್ದವು.
ಆಗ ಬಹಳಷ್ಟು ಯಾಲಕ್ಕಿ ತಿಂದದ್ದಕ್ಕೋ ಏನೋ ನನಗೆ ಇಲ್ಲಿಯವರೆಗೆ ಯಾವ ಮಾಟಗಳು ನನ್ನ ತಂಟೆಗೆ ಬಂದಿಲ್ಲ ಎನಿಸುತ್ತದೆ. ಅಮ್ಮ ಮಾಡಿಸಿರಬಹುದಾದ ಮಾಟ ತೆಗೆಸಲು ತಜ್ಞರು ಬೇರೆ ಊರಿಂದ ಬಂದದ್ದು ಭಾವಿ ಮನೆಯ ನೆಲದಲ್ಲಿ ಹೂತಿಟ್ಟ ಗೊಂಬೆ ತೆಗೆದದ್ದು ಅಸ್ಪಷ್ಟವಾಗಿ ನೆನಪಿದೆ. ಹೀಗೆ ಅಮ್ಮ ಅವ್ವ ಹತ್ತಾರು ವರ್ಷ ಬಡಿದಾಡಿ ಸುಸ್ತಾದರು. ಬರು ಬರುತ್ತಾ ಸಂಬಂಧಗಳು ಸುಧಾರಿಸಿದವು. ಭಾವಿ ಮಧ್ಯೆ ಕಟ್ಟಿದ ಗೋಡೆ ಶಿಥಿಲವಾಗಿ ಸಂಬಂಧಗಳು ಗಟ್ಟಿಯಾಗುತ್ತ ಹೋದದ್ದು ವಿಪರ್ಯಾಸವಲ್ಲವೇ ?