Monday, August 9, 2010

ಜನನಾಯಕನಾಗಿ ರೂಪುಗೊಳ್ಳುತ್ತಿರುವ ಶ್ರೀರಾಮುಲು




'ಸ್ಟಾರ್ ವಾಲ್ಯೂ' ಹೀಗೆಂದರೇನು? ಇದು ಯಾರಿಗಿರುತ್ತದೆ. ಇಂಡಿಯಾದ ಸಂದರ್ಭದಲ್ಲಿ ಈ starvalue ಇರುವುದು ಸಿನೆಮಾ ನಟರಿಗೆ, ಕ್ರಿಕೆಟ್ ಆಟಗಾರರಿಗೆ, ಸಾಂಸ್ಕೃತಿಕ ಲೋಕದ ದಿಗ್ಗಜರಿಗೆ ಹಾಗೂ ರಾಜಕೀಯ ನಾಯಕರಿಗೆ.
ಆದರೆ ಇಂದು ಬಹುಪಾಲು ರಾಜಕೀಯ ನಾಯಕರು ಸ್ಟಾರ್ ಗಿರಿ ಕಳೆದುಕೊಂಡಿದ್ದಾರೆ. ನಾವು ವಿದ್ಯಾರ್ಥಿಗಳಾಗಿದ್ದಾಗ ರಾಜಕೀಯ ನಾಯಕರ ಮಾತುಗಳನ್ನು ಕೇಳಲು ಮುಗಿಬೀಳುತ್ತಿದ್ದೆವು. ಇಂದು ಆ ವಾತಾವರಣ ಉಳಿದಿಲ್ಲ. ಮಾಧ್ಯಮಗಳು ಹೆಚ್ಚಾದಂತೆಲ್ಲ, ಅದರಲ್ಲೂ ವಿಶೇಷವಾಗಿ ದೃಶ್ಯ ಮಾಧ್ಯಮಗಳು ಜನರ ಕೂತುಹಲವನ್ನು ಬತ್ತಿಸಿವೆ.
ಈಗ ಎಲ್ಲವೂ ಖುಲ್ಲಂ, ಖುಲ್ಲಾ, ಬಟಾ ಬಯಲು. ಈ ಹಂತದ ನಿರುತ್ಸಾಹದ ದಿನಗಳಲ್ಲಿಯೂ ಅಲ್ಲಲ್ಲಿ ಕೆಲವೊಬ್ಬರು ಈ value ಉಳಿಸಿಕೊಂಡಿರುವುದು ಅಚ್ಚರಿ.
ಬಳ್ಳಾರಿಯ ಶ್ರೀರಾಮುಲು ಕುರಿತು ಬರೆಯಬೇಕಾದಾಗ ಮೇಲಿನ ಸಾಲುಗಳು ಪ್ರಸ್ತುತ ಎನಿಸಿದವು.
ಬಿ. ಶ್ರೀರಾಮುಲು ' ಈಗ ಸುದ್ದಿಯಲ್ಲಿದ್ದಾರೆ. ಇಪ್ಪತ್ತು ವರ್ಷಗಳಿಂದ ಬಳ್ಳಾರಿಯಲ್ಲಿ ಓಡಾಡಿಕೊಂಡು, ಬಡವರ, ಜನಸಾಮಾನ್ಯರ ಪರವಾಗಿ ಕೆಲಸ ಮಾಡಿಕೊಂಡು ನಗರ ಸಭಾ ಸದಸ್ಯರಾಗಿ ಬಳ್ಳಾರಿಗೆ ಸೀಮಿತವಾಗಿದ್ದ 'ಶ್ರೀ' ಇಂದು ಕೆಲವೇ ವರ್ಷಗಳಲ್ಲಿ ರಾಷ್ಟ್ರೀಯ ವ್ಯಕ್ತಿಯಾಗಿ ರೂಪುಗೊಂಡಿದ್ದು ಹೇಗೆ?
ಈ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. 2004 ರಲ್ಲಿ ವಿಧಾನಸಭೆಯನ್ನು ಪ್ರವೇಶಿಸಿದ ಶ್ರೀರಾಮುಲು ಸ್ವತ: ತಾವೇ ಅಂದುಕೊಂಡಿರಲಿಲ್ಲ ತಾವು ಈ ಪರಿ ಬೆಳೆಯಬಹುದು ಎಂದು.
ಆರು ವರ್ಷಗಳಲ್ಲಿ ಆಳೆತ್ತರಕ್ಕೆ ಬೆಳೆಯ ನಿಂತಿದ್ದಾರೆ ಅವರ ಆರಡಿ ವ್ಯಕ್ತಿತ್ವದ ಹಾಗೆ!
2006 ಅಗಸ್ಟ 14 ರ ರಾತ್ರಿ ಗದಗ ಜಿಲ್ಲಾಧಿಕಾರಿಗಳ ಸಂದೇಶ ಬಂತು. "ನಾಳೆ ಜಿಲ್ಲಾ ಉಸ್ತುವಾರಿ ಸಚಿವರು ಭಾಷಣ ಮಾಡಲಿದ್ದಾರೆ. ಅದರ ಪ್ರತಿಯನ್ನು ಪರಿಶೀಲಿಸಿ ತುರ್ತಾಗಿ ಮತ್ತೊಂದು ಭಾಷಣ ತಯಾರಾಗಬೇಕು" ಎಂದು.
ಗದಗ ಐ.ಬಿ. ಯಲ್ಲಿ ಅವರ ಆಪ್ತ ಸಹಾಯಕ ಸೋಮನಾಥ ಕುಡತಿನಿ ನೆರವಿನೊಂದಿಗೆ ಸರಳ ಭಾಷೆಯಲ್ಲಿ ಭಾಷಣ ತಯಾರಿಸಿದೆ. ಗದುಗಿನಲ್ಲಿ ಆಗಬಹುದಾದ ಅಭಿವೃದ್ಧಿ ಕೆಲಸಗಳ ಕುರಿತು ಸಣ್ಣ ಟಿಪ್ಪಣಿ ತಯಾರಿಸಿದೆ.
ರಾತ್ರಿ ಹನ್ನೆರಡು ಗಂಟೆಗೆ ವ್ಯಕ್ತಿಯೊಬ್ಬರು ಅಲ್ಲಿಗೆ ಪ್ರವೇಶಿಸಿದರು ನನ್ನ ಪಾಡಿಗೆ ನಾನು ಬರೆಯುತ್ತಲೇ ಇದ್ದೆ. ಕುರುಚಲು ಗಡ್ಡದ ಎತ್ತರ ವ್ಯಕ್ತಿ ಸದ್ದಿಲ್ಲದೇ ಎದುರಿಗೆ ಕುಳಿತಿದ್ದನ್ನು ನಾನು ಲೆಕ್ಕಿಸಲಿಲ್ಲ. ಅವರ ಸಹಾಯಕರ ನೆರವಿನಿಂದ ಪರಿಚಯಿಸಿಕೊಂಡು ಮುಂದಾದೆ, ಇಲ್ಲ ಕುತ್ಕೊಳ್ಳಿ ಸರ್ ಎಂದು ತಮ್ಮ ಕನ್ನಡ ಭಾಷಾ ಸಮಸ್ಯೆಯನ್ನು ವಿವರಿಸಿದರು. ಆದಷ್ಟು language simple ಆಗಿರಲಿ ಸರ್ ಎಂದರು.
ರಾಜ್ಯದ ಕ್ಯಾಬಿನೆಟ್ ಸಚಿವರೊಬ್ಬರ ಸರಳತೆ, ಪ್ರಾಮಾಣಿಕತೆಗೆ ಅಚ್ಚರಿ ಎನಿಸಿತು.
ಹೇಳಿಕೇಳಿ ನಾನು ಕಾಲೇಜಿನಲ್ಲಿ ಪಾಠಮಾಡುವ ಮೇಷ್ಟ್ರು, ಇಲ್ಲಿಯೂ ಪಾಠ ಪ್ರಾರಂಭಿಸಿದೆ. ಶಿಸ್ತಿನ ವಿದ್ಯಾರ್ಥಿಯಂತೆ ಸಚಿವ ಶ್ರೀರಾಮುಲು ತುಂಬಾ ಅಚ್ಚುಕಟ್ಟಾಗಿ ಹೊಂವರ್ಕ ಮಾಡಿದರು. ಅವರ ಮುಖದಲ್ಲಿ ಸಂತೃಪ್ತಿಯ ಭಾವ. ಅಲ್ಲಿಂದ ಬೀಳ್ಕೊಟ್ಟಾಗ ರಾತ್ರಿ ಎರಡು ಗಂಟೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಡುರಾತ್ರಿಯ ಸಮಯದಲ್ಲಿ ಮನೆ ಸೇರಿದೆ.
ಮರುದಿನ ಎಂದಿನಂತೆ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ ಅಂದು ಊರ ತುಂಬಾ ನೂತನ ಸಚಿವ ಶ್ರೀರಾಮುಲು ಅವರದೇ ಸುದ್ದಿ. ಆಶ್ಚರ್ಯ! ಇಡೀ ನಗರವೇ ಉಲ್ಲಸಿತವಾಗಿತ್ತು. ಬಳ್ಳಾರಿಯಿಂದ ಬಂದ ರಾಮುಲು ಬೆಳಕು ಹರಿಯುವುದರೊಳಗೆ super star ನಂತೆ ಮಿಂಚತೊಡಗಿದರು.
ಮಾಧ್ಯಮದ ಮಿತ್ರರು, ಅಧಿಕಾರಿಗಳು, ವಿಶೇಷವಾಗಿ ಯುವಕರು ಹೊಸ ನಾಯಕನ ಭಿನ್ನ ಆಲೋಚನಾ ರೀತಿಯನ್ನು ಸಂತೃಪ್ತಿಯಿಂದ ಕೊಂಡಾಡಿದರು. ಗದುಗಿನ ರಾಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಉಂಟಾಯಿತು. ಎಲ್ಲರ ನಾಲಿಗೆ ಮೇಲೆ ಶ್ರೀರಾಮುಲು ತೇಲಾಡುತ್ತಿದ್ದರು.
ಹಂತಹಂತವಾಗಿ ಜಿಲ್ಲೆಯ ಬೆಳವಣಿಗೆಗೆ ಕಾರಣರಾದರು. ಕಾರಿನಲ್ಲಿ ಹೋಗುವಾಗ ಸರ್ಕಲ್ ಸಿಕ್ಕಿತು. ಇದೇನು ಎಂದು ಅಧಿಕಾರಿಗಳಿಗೆ ಕೇಳಿದರು 'ಸರ್ ಇದು ಗಾಂಧಿ ಸರ್ಕಲ್' ಎಂದರು ಮತ್ತೆ ಇಲ್ಲಿ ಗಾಂಧೀಜಿಯೇ ಇಲ್ಲಾ ಎಂದು ಉತ್ತರಿಸಿದ ಸಚಿವರು ಕೆಲವೇ ತಿಂಗಳಿನಲ್ಲಿ ಅಲ್ಲಿ ಸುಂದರವಾದ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಿ ಗಾಂಧಿ ಸರ್ಕಲ್ ನ ಘನತೆ ಹೆಚ್ಚಿಸಿದರು.
ಗಾಂಧಿ ಪ್ರತಿಮೆಯ ಅನಾವರಣದ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಶ್ರೀರಾಮುಲುರ ಇಚ್ಛಾ ಶಕ್ತಿಯನ್ನು ಪಕ್ಷಭೇದ ಮರೆತು ಕೊಂಡಾಡಿದರು. ಅಂದೇ ಉಳಿದ ಸರ್ಕಲ್ ಗಳನ್ನು ವೀಕ್ಷಿಸಿ ಒಂದು ಕ್ರೀಯಾಯೋಜನೆ ತಯಾರಿಸಿ ಪ್ರತಿಮೆಗಳ ಅನಾವರಣಕ್ಕೆ ಕಾರಣರಾಗಿ ನಗರದ ಸೌಂದರ್ಯವನ್ನು ಹೆಚ್ಚಿಸಿದರು.
ಗದುಗಿಗೆ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ ಅಧಿಕಾರಿಗಳು ಏನೇನೋ ಕಾರಣ ಹೇಳುತ್ತಿದ್ದರು. ನಿರಂತರ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಂಡು ನೀರಿಗಾಗಿ ಶಪಿಸುತ್ತಿದ್ದ ಮಹಿಳೆಯರ ಖುಷಿಗೆ ಕಾರಣರಾದರು.
ಹೀಗೆ ಒಂದೊಂದು ಸಮಸ್ಯಗಳನ್ನು ಪರಿಹರಿಸುತ್ತ ಗದುಗಿನ ಚಿತ್ರಣ ಬದಲಿಸಿದರು. ಗದುಗಿನಲ್ಲಿ ಅವರ ಪಕ್ಷ ಅಧಿಕಾರದಲ್ಲಿರಲಿಲ್ಲ. ತಮ್ಮ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು. ಪಕ್ಷಕ್ಕೆ ಹೊಸ ಚಾಲನೆ ನೀಡಿದರು.
ಈಗ ಅದೆಲ್ಲ ಇತಿಹಾಸ. 2008 ಕ್ಕೆ ಗದಗ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಯಿತು. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಪಕ್ಷ ತನ್ನ ಖಾತೆ ತೆರೆದದ್ದು ಶ್ರೀರಾಮುಲು ಪ್ರಭಾವದಿಂದಲೇ ಎಂದು ಎಲ್ಲರೂ ಒಪ್ಪಿಕೊಂಡರು.
ಅಂದಿನಿಂದ ಜಿಲ್ಲಾ ಮಂತ್ರಿಯಾಗಿ ರಾಮುಲು ಅಭಿವೃದ್ಧಿ ಹರಿದು ಬರುತ್ತಲೇ ಇದೆ.
ಇದು ನಾನು ಕಂಡ ಶ್ರೀರಾಮುಲು ಅವರ ರಾಜಕೀಯ ಸಾಧನೆ. ಆದರೆ ಒಬ್ಬ ವ್ಯಕ್ತಿಯನ್ನು ವೈಯಕ್ತಿಕವಾಗಿ ನೋಡುವುದು ಅಷ್ಟೇ ಕೂತುಹಲಕರ.
ಆರಂಭದಲಿ ಹೇಳಿದ ಕತೆಯನ್ನು ಅರ್ಧಕ್ಕೆ ಬಿಟ್ಟಿದ್ದೆ ಅಲ್ಲವೆ? ಅಗಷ್ಟ 15 ರ ಭಾಷಣ ಯಶಸ್ವಿಯಾದ ಮೇಲೆ ಅವರ ಪ್ರತಿ ಭಾಷಣಗಳನ್ನು ತಯಾರಿಸುವ ಹೊಣೆ ನನ್ನ ಮೇಲೆ ಬಿತ್ತು. ಒಬ್ಬ ಅರೆಸರಕಾರಿ ನೌಕರನಾಗಿ ಇದು ಜಿಲ್ಲಾಡಳಿತ ಒಪ್ಪಿಸಿದ ಜವಾಬ್ದಾರಿಯ ಮಿತಿಯಲ್ಲಿತ್ತು. ನಾನೆಂದು ಮಂತ್ರಿಗಳನ್ನು ವೈಯಕ್ತಿಕವಾಗಿ ಗೋಜಿಗೆ ಹೋಗಲಿಲ್ಲ. ಅವರ ಆಪ್ತ ಸಹಾಯಕರು ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದರು.
ಭಾಷಣಗಳ ಮೂಲಕ ಆರಂಭವಾದ ನಂಟು ವೈಯಕ್ತಿಕ ಸಂದರ್ಭಕ್ಕೆ ತಿರುಗಿದ್ದು ನಿರೀಕ್ಷಿತವೇನಲ್ಲ. ಅವರ ಎಲ್ಲ ಖಾಸಗಿ ಮೊಭೈಲುಗಳಲಿ ನಾನುಸೇರಿಕೊಂಡಿದ್ದೆ. ಆಪ್ತ ಸಹಾಯಕರು ಇಲ್ಲದಾಗ ನಸುಕಿನಲ್ಲಿ ಅವರು ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದರು.
ಸದಾ ಜನಜಂಗುಳಿಗಳ ಮಧ್ಯ ಇರುತ್ತಿದ್ದ ಅವರ ಹತ್ತಿರ ಹೋಗಲು ನನಗೆ ಸಂಕೋಚ ಹೀಗಾಗಿ ವೈಯಕ್ತಿಕ ಭೇಟಿಯಲ್ಲಿ ನಿರಾಕರಿಸಿ ಕೇವಲ ಫೋನಿನಲ್ಲಿಯೇ ವ್ಯವಹರಿಸುತ್ತಿದ್ದೆ.
ಒಂದೆರೆಡು ಬಾರಿ ಭೇಟಿಯಾಗಲು ಒತ್ತಾಯಿಸಿದರು. 2008 ರ ಚುನಾವಣೆ ಹಾಗೂ ಅಖಿಲಭಾರತ ಸಾಹಿತ್ಯ ಸಮ್ಮೇಳನ ಸಂದರ್ಭಗಳಲಿ ಸುಧೀರ್ಘಭೇಟಿ ಅನಿವಾರ್ಯವಾಯಿತು.
ನಂತರದ ಅನೇಕ ಭೇಟಿಗಳಲಿ ಅವರ ಸರಳತೆ ಅರಿಯಲು ಕಾರಣವಾಯಿತು.
Mass Leader ಆಗುವ ಎಲ್ಲ ಸಾಧ್ಯತೆಗಳನ್ನು ರೂಪಿಸಿಕೊಂಡಿದ್ದಾರೆ.
ಒಮ್ಮೆ ಅವರೊಂದಿಗೆ ಬಳ್ಳಾರಿಯಿಂದ ಕ್ಯಾಪ್ಟರನಲ್ಲಿ ಪ್ರಯಾಣಿಸುವಾಗ ತಮ್ಮ ಬಾಲ್ಯದ ಬಡತನದ ದಿನಗಳನ್ನು ನೆನಪಿಸಿಕೊಂಡರು. ಹೀಗೆ ಐಷಾರಾಮಿ ವರ್ತಮಾನದಲ್ಲಿರುವಾಗ ಕಳೆದು ಹೋದ ಕಹಿ ದಿನಗಳನ್ನು ಮೆಲಕು ಹಾಕಲು ಮನಸ್ಸು ನಿರಾಕರಿಸುತ್ತದೆ. ಆದರೆ ಬದುಕಿನ ಮೌಲ್ಯ ತಿಳಿದರು ಇತಿಹಾಸವನ್ನು ಮರೆಯುವುದಿಲ್ಲ.
ಮರೆಯುವ ವರ್ತಮಾನಕ್ಕೆ ಇತಿಹಾಸವನ್ನು ಮರೆಸುವ ಕ್ರೌರ್ಯವಿರುತ್ತದೆ. ಆದರೆ ಶ್ರೀರಾಮುಲು ಅವರಿಗೆ ಇತಿಹಾಸದ ದುರ್ದಿನಗಳನ್ನು ವರ್ತಮಾನದ ಸುಖವನ್ನು ಅರ್ಥವಾಗಿ ಅನುಭವಿಸಲು ಕಾರಣವಾಗಿದೆ.
ಕೇವಲ ಹಣದಿಂದ ರಾಜಕೀಯ ಅಸಾಧ್ಯ ಎಂದವರಿಗೆ ಗೊತ್ತಿದೆ. ಆದ್ದರಿಂದಲೇ ಸದಾ ಜನರೊಂದಿಗೆ ಇರಲು ಬಯಸುತ್ತಾರೆ. ಜನರು ಅಷ್ಟೇ ಅವರ ಸಾಮಿಪ್ಯ ಬಯಸುತ್ತಾರೆ.
ಗದುಗಿನಲ್ಲಿ ಶಾಲಾ ಮಕ್ಕಳಿಗೆ ರಾಮುಲು ಎಂದರೆ ಸಂಭ್ರಮ. ಅವರನ್ನು ನೋಡಲು, ಮಾತನಾಡಿಸಲು, ಮುಟ್ಟಲು ಬಯಸುತ್ತಾರೆ. ಅವರೊಬ್ಬ superman ಎಂಬಂತೆ ಮಕ್ಕಳು ಮಾತನಾಡುವುದನ್ನು ಸಾರ್ವಜನಿಕವಾಗಿ ಕೇಳಿದ್ದೇನೆ.
ಅವರ ಹತ್ತಿರ ದೊಡ್ಡ ಕಾರುಗಳಿವೆಯಂತೆ, ಅವರು ಹಾಕುವ ಚಸ್ಮಾ(sunglass) ಇಂಗ್ಲೆಂಡಿನಿಂದ ತಂದಿದ್ದಾರಂತೆ. ಅವರು ತಾವೇ ಹೆಲಿಕ್ಯಾಪ್ಟರ್ ನಡೆಸುತ್ತಿದ್ದರಂತೆ ಹೀಗೆ ಮಕ್ಕಳು ತಮ್ಮ ನೆಚ್ಚಿನ ನಾಯಕನ ಗುಣಗಾನ ಮಾಡಿ ಆರಾಧಿಸುತ್ತಾರೆ.
ಹಾಗಂತ ಶ್ರೀರಾಮುಲು ಕೇವಲ ಆರಾಧ್ಯ ದೈವದಂತೆ ಇದ್ದಾರೆ ಎಂದರ್ಥವಲ್ಲ. ಜನಪರ ಶಾಸಕನಾಗಿ, ಪ್ರಾಮಾಣಿಕವಾಗಿ ಮಂತ್ರಿಯಾಗಿ ಕೆಲಸ ಮಾಡುತ್ತಾರೆ. ಆದರೆ ಆರೋಪದಿಂದಾಗಿ ಅವರ ಸಾಧನೆಗಳನ್ನು ಗಣಿಧೂಳಿನಲ್ಲಿ ಮುಚ್ಚಿಹಾಕುವ ಹುನ್ನಾರ ನಡೆದಿದೆ.
ಗಣಿಗಾರಿಕೆ ಅವರ ಉದ್ಯೋಗವಿರಬಹುದು. ಗಣಿಗಾರಿಕೆಯನ್ನು ಬಳ್ಳಾರಿಯಲ್ಲಿ, ನಾಡಿನಲ್ಲಿ ಬೇಕಾದಷ್ಟು ಜನ ಮಾಡುತ್ತಾರೆ.
ಇಂತಹ ವ್ಯಾಪಾರೋಧ್ಯಮಗಳಲ್ಲಿ ಪ್ರಾಮಾಣಿಕತೆಯನ್ನು ಅಪೇಕ್ಷಿಸುವುದು ಸಲ್ಲದು. ಆದರೆ ಗಣಿಗಾರಿಕೆಯ ಲಾಭವನ್ನು ಸಾಮಾಜಿಕ ಸೇವೆಗೆ, ರಾಜಕೀಯ ಬೆಳವಣಿಗೆಗೆ ಬಳಸಿಕೊಂಡಿರುವುದು ತಪ್ಪಲ್ಲ. ಅವರ ಸಾಮಾಜಿಕ ಬದ್ಧತೆ ಅಷ್ಟೇ ನಮಗೆ ಮುಖ್ಯ.
ಬಳ್ಳಾರಿಯೆಂದರೆ ಧೂಳು, ಕೊಳಕು ವಾಸನೆ ಎಂಬ ಭಾವನೆಯಿತ್ತು. ಇಂದು ಬಳ್ಳಾರಿಯ ವಿಶಾಲ ರಸ್ತೆಗಳು ಅಭಿವೃದ್ಧಿಯನ್ನು ಸಾರುತ್ತವೆ ನಗರ ಸೌಂದರ್ಯಕ್ಕೆ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಕಳಕಳಿಯಿಂದ ದುಡಿಯುತ್ತಾರೆ. ಕೇವಲ ಗಣಿಗಾರಿಕೆ ನೆಪ ಇಟ್ಟುಕೊಂಡು ಅಭಿವೃದ್ಧಿಯನ್ನು ಮರೆಮಾಚಲು ಯತ್ನಿಸುವುದು ಖಂಡನೀಯ. ಅದೇ ಕಾರಣಕ್ಕೆ ಇವರನನ್ಉ ದ್ರೋಹಿಗಳಂತೆ ಚಿತ್ರಿಸುವುದು ಸಮಂಜಸವಲ್ಲ. ಇವರಿಗೆ ವಯಸ್ಸಿದೆ, ಹುಮ್ಮಸ್ಸಿದೆ ಆಮೇಳದಲ್ಲಿ ಸಣ್ಣಪುಟ್ಟ ರಾಜಕೀಯ ತಪ್ಪುಗಳನ್ನು ಮಾಡುತ್ತಾರೆ. ಆದರೆ ಅದನ್ನು ದೊಡ್ಡದು ಮಾಡಿ ಇವರ ಅಭಿವೃದ್ಧಿ ಕಾರ್ಯಗಳನ್ನು ಉಪೇಕ್ಷಿಸುವುದು ಖಂಡನೀಯ. ಅಭಿವೃದ್ಧಿಗಾಗಿ ಚಿಂತಕರು ಮಾರ್ಗದರ್ಶನ ಮಾಡಲಿ. ಇಡೀ ದೇಶದಲ್ಲಿಯೇ ಸಮರ್ಪಕ ಗಣಿ ನೀತಿ ರೂಪಗೊಳ್ಳಲಿ. ಅದನ್ನು ಬಿಟ್ಟು ಕೇವಲ ಬಳ್ಳಾರಿಯನ್ನು ಟಾರ್ಗೇಟ್ ಮಾಡಿಕೊಂಡು ಅವಮಾನಿಸುವುದು ಸರಿಯಲ್ಲ.
ಪರಿಸರ ವಿನಾಶ ತಡೆಯಲು ರಾಜಕೀಯ ಇಚ್ಛಾಶಕ್ತಿ ಬೇಕು ಪರಿಸರ ವಿನಾಶ ಎಲ್ಲರಿಂದ ಆಗಿದೆ. ಕೇವಲ ರೆಡ್ಡಿಗಳಿಂದಲ್ಲ ಎಂಬ ಸತ್ಯ ಅರಿಯಬೇಕು.
ಈಗ ಶ್ರೀರಾಮುಲು ತಮ್ಮ ಸಾತ್ವಿಕ ಪ್ರತಿಭಟನೆ ಎಲ್ಲಿಗೆ shock ನೀಡಿದ್ದಾರೆ. ಕೇವಲ ಜಿಲ್ಲೆಯಲ್ಲಿ ತಿರುಗಾಡಿದ್ದಾರೆ ಮಹತ್ವ ಬಿರುತ್ತಿದ್ದಿಲ್ಲ. ತಮ್ಮ ಪ್ರತಿಭಟನೆ ಸಾತ್ವಿಕ ರೂಪ ನೀಡಿದ್ದಾರೆ.
ತಮಗೆರ ತುಂಬಾ ಇಷ್ಟವಾದ, ಅವರ ಸೌಂದರ್ಯಕ್ಕೆ ಸ್ಟಾರಗಿರಿಗೆ ಕಾರಣವಾದ ಗುಂಗುರು ಕೂದಲು ಬಲಿಕೊಟ್ಟಿದ್ದಾರೆ. ತುಂಬಾ ಇಷ್ಟವಾದ ವಸ್ತುಗಳನ್ನು ತ್ಯಜಿಸಲಿಕ್ಕೆ ಮಾನಸಿಕ ಸ್ಥೈರ್ಯ ಬೇಕು. ಶ್ರೀರಾಮುಲು ಅಂತಹ ಧೈರ್ಯಕ್ಕೆ ಮುಂದಾಗಿದ್ದಾರೆ. ತಲೆ ಬೊಳಿಸಿಕೊಂಡು ತಮ್ಮಷ್ಟಕ್ಕೆ ತಾವೇ ಶಿಕ್ಷೆ ಅನುಭವಿಸಿ ಜನರನ್ನು ರೋಮಾಂಚನಗೊಳಿಸಿದ್ದಾರೆ.
ಬರಿಗಾಲಿನಲ್ಲಿ ಊಟ ತ್ಯಜಿಸಿ ಹೊಸ ಸಾತ್ವಿಕ ಕಳೆ ತಂದುಕೊಟ್ಟಿದ್ದಾರೆ. ಅವರ ಬೋಳಾದ ತಲೆ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಒಮ್ಮೊಮ್ಮೆ ಜನನಾಯಕರಿಗೆ ಇಂತಹ ಸಾತ್ವಿಕ ಎದೆಗಾರಿಕೆ ಬೇಕು ಕೇವಲ ಶೋ ಮಾಡಿದರೆ ಸಾಲುವುದಿಲ್ಲ ಎಂಬುವುದನ್ನು ಶ್ರೀರಾಮುಲು ಅರಿತುಕೊಂಡು ಪ್ರಬುದ್ಧರಾಗಿದ್ದಾರೆ.
ಅವರ ಪ್ರಬುದ್ಧತೆ ವಿರೋಧಿಗಳನ್ನು ಬೆಚ್ಚಿಬೀಳಿಸಿದೆ. ಈಗ ಬಿ.ಜೆ.ಪಿ ಯನ್ನು ಅಷ್ಟೇ ಅಲ್ಲ ರಾಜ್ಯ ರಾಜಕಾರಣದಲ್ಲಿ ಇದ್ದ ನಾಯಕತ್ವದ ಕೊರತೆಯನ್ನು ಸರಿದೂಗಿಸುವ ನಿರ್ಣಯ ಮಾಡಿದ್ದಾರೆ.
ಅವರ ನಡೆ-ನುಡಿಯಲ್ಲಿ ಸಹನೆಯಿದೆ, ಏನನ್ನೊ ಕಟ್ಟುವ ಛಲವಿದೆ. ಅದಕ್ಕೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಅಧ್ಯಯನಶೀಲರಾಗಲಿ, ರಾಜಕೀಯ ಇತಿಹಾಸವನ್ನು ಅರಿತುಕೊಂಡು ಧೀಮಂತ ಹೆಜ್ಜೆ ಇಡಲಿ.
ಕರ್ನಾಟಕ ರಾಜಕೀಯ ಇತಿಹಾಸಕ್ಕೆ ತನ್ನದೆ ಆದ ಮೌಲ್ಯವಿದೆ. ಜನ ಬೇಡವಾದದ್ದನ್ನು ಸಾರಾಸಗಟವಾಗಿ ತಿರಸ್ಕರಿಸುತ್ತಾರೆ. ಬೇಕಾದರೆ ಹೃದಯವಂತಿಕೆಯಿಂದ ಪುರಸ್ಕರಿಸುತ್ತಾರೆ.
ಹಣ, ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅರಿತವರು ಇಲ್ಲಿ ನೆಲೆ ನಿಲ್ಲುತ್ತಾರೆ.
ಅಂತಹ ನಿರ್ಮಲ ವ್ಯಕ್ತಿತ್ವ ರೂಪಿಸಿಕೊಂಡು ಶ್ರೀರಾಮುಲು ಬೆಳೆದರೆ ಖಂಡಿತಾ ಪ್ರೋತ್ಸಾಹಿಸುತ್ತಾರೆ.
ಶ್ರೀರಾಮುಲು ಕೇವಲ ಹಿಂದುಳಿದ ನಾಯಕರಲ್ಲ, ಎಲ್ಲ ವರ್ಗದ ಜನರಿಗೆ ಬೇಕಾದ ನಾಯಕರಿದ್ದಾರೆ. ಅವರ ಜಾತ್ಯಾತೀತ ನಿಲುವು ಅವರನ್ನು ಇನ್ನೂ ಎತ್ತರಕ್ಕೆ ಏರಿಸಬಲ್ಲದು.
ಅಂತಹ ಅವಕಾಶವನ್ನು ಕಾಲ ಈಗ ಒದಗಿಸಿಕೊಟ್ಟಿದೆ. ಶ್ರೀರಾಮುಲು ರಂತಹ ಹೃದಯವಂತರ 'ಜನನಾಯಕ' ರಾಗಿ ಬೆಳೆಯಲಿ ಎಂದು ಆಶಿಸುತ್ತೇನೆ.

Wednesday, July 21, 2010

ಖ್ಯಾತ ಚಿಕಿತ್ಸಕ - ಡಾ. ಬಿ ಮಂಜುನಾಥ



ನನ್ನ ಆಸ್ಪತ್ರೆಯ ದಿನಗಳಲ್ಲಿ ಚಿಕಿತ್ಸೆಯನ್ನು ಆಧ್ಯಾತ್ಮದ ಹಿನ್ನಲೆಯಲ್ಲಿ ನೀಡಿ ಗಮನ ಸೆಳೆದ ಡಾ. ಬಿ. ಮಂಜುನಾಥ ಅವರನ್ನು ಪರಿಚಯಿಸಲು ಹೆಮ್ಮೆ ಎನಿಸುತ್ತದೆ.
ಉತ್ತಮ ಸಂಸ್ಕಾರದ ಹಿನ್ನಲೆಯುಳ್ಳ ಡಾ. ಮಂಜುನಾಥ ಅವರ ತಂದೆ ಮೂಲತ: ಚನ್ನಗಿರಿಯವರು. ಕರ್ನಾಟಕ ಸರಕಾರದ ಕಾನೂನು ಇಲಾಖೆಯ under secretary ಯಾಗಿದ್ದ ಬಸವಲಿಂಗಪ್ಪ ಅವರು ದಕ್ಷತೆಗೆ ಹೆಸರಾದವರು.
ಕಾನೂನು ವ್ಯಾಸಂಗ ಮಾಡುವಾಗ ಜೆ.ಎಚ್. ಪಟೇಲರ ಸಹಪಾಠಿಗಳು. ಡಾ. ಮಂಜುನಾಥ ಅವರ ಸೋದರ ಮಾವ ಶಿವಮೊಗ್ಗ ಹಾಗೂ ಡಾವಣಗೆರೆಯನ್ನು ಪ್ರತಿನಿಧಿಸಿದ್ದ ಲೋಕಸಭೆ ಸದಸ್ಯರಾದ ಟಿ.ವ್ಹಿ. ಚಂದ್ರಶೇಖರಪ್ಪನವರು.
ಸರಕಾರಿ ಹಾಗೂ ರಾಜಕೀಯ ಹಿನ್ನಲೆಯಲ್ಲಿ ಬೆಳೆದರೂ ಡಾ. ಮಂಜುನಾಥ ವೈಯಕ್ತಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡವರು.
M.S. Ortho ಪದವಿ ಪಡೆದು ತಂದೆಯಂತೆಯೇ ಸರಕಾರಿ ವೃತ್ತಿಯನ್ನು ಆಯ್ದುಕೊಂಡು, ಈಗ ಜಯನಗರ ಜನರಲ್ ಆಸ್ಪತ್ರೆಯ ಎಲವು, ಕೀಲುಗಳ ಶಸ್ತ್ರ ಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಾರೆ.
ಆಸ್ಪತ್ರೆಯಲ್ಲಿ ನಾನು ಕಳೆದ ಇಪ್ಪತ್ತು ದಿನಗಳು ಅಪಸ್ಮರಣೀಯವಾಗಲು ಡಾ. ಮಂಜುನಾಥ ಕಾರಣರಾದರು.
ಆಧ್ಯತ್ಮ ಜೀವಿಯಾಗಿರುವ ಅವರು ಎನಗಿಂತ ಕಿರಿಯರಿಲ್ಲ ಎಂಬ ಮನೋಭಾವ ಇಟ್ಟುಕೊಂಡೇ treatment ಕೊಡುತ್ತಾರೆ.
ನನ್ನ ಓದುವ ಹವ್ಯಾಸವನ್ನು ಗಮನಿಸುತ್ತಿದ್ದ ಅವರು ನಿತ್ಯ ನನ್ನೊಂದಿಗೆ ಅನೇಕ ಸಂಗತಿಗಳನ್ನು ಚರ್ಚಿಸುತ್ತಿದ್ದರು. ಸರಕಾರಿ ಆಸ್ಪತ್ರೆಗಳ ಸ್ಥಿತಿಗತಿ, ಅಲ್ಲಿನ ಅನಿವಾರ್ಯ ಬ್ರಷ್ಟಾಚಾರ ವ್ಯವಸ್ಥೆ. ಅದರಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ಮಾಡುವ ತುಡಿತವಿರುವ ವೈದ್ಯರುಗಳು ಹೀಗೆ ಹತ್ತಾರು ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದರು.
ತಾವೊಬ್ಬ ಶ್ರೇಷ್ಠ ಚಿಕಿತ್ಸಕರು ಎಂಬ 'ಅಹಂ' ಇಲ್ಲದ ಅವರ ಸರಳ ನಡವಳಿಕೆ ಅಚ್ಚರಿ ಎನಿಸಿತು.
ನಿಮಗೆ ತುಂಬಾ ಪೆಟ್ಟಾಗಿದೆ ದೇವರ ಮೇಲೆ ಭಾರ ಹಾಕಿ ನನ್ನ ಮೇಲೆ ನಂಬಿಕೆ ಇಟ್ಟರೆ ಖಂಡಿತಾ ಆಪರೇಶನ್ success ಆಗುತ್ತದೆ' ಎಂದು ಮೊದಲ ಭೇಟಿಯಲ್ಲಿ ನುಡಿದಾಗ ನನಗೆ ಅವರನ್ನು ನಂಬಬೇಕು ಎನಿಸಿತು. ಅದೇ ನಂಬಿಕೆಯಿಂದಲೇ ಆಪರೇಷನ್ ಗೆ ತಯಾರಾದೆ ಒಳ್ಳೆಯ ಖಾಸಗಿ ಆಸ್ಪತ್ರೆಗೆ ಹೋಗಬೇಕು ಎಂಬ ನನ್ನ ನಿರ್ಣಯ ಬದಲಾಯಿಸಿದೆ.
ತಮ್ಮ ವೃತ್ತಿ ಬದುಕಿನಲ್ಲಿ ಪೂರೈಸಿದ ಇಂತಹ ಅನೇಕ complecated ಸರ್ಜರಿಗಳ ಕುರಿತು ವಿವರಿಸಿ ನನ್ನ ಆತ್ಮವಿಶ್ವಾಸ ಹೆಚ್ಚಿಸಿದರು.
ಒಳ್ಳೆಯ Implant ಬಳಸಿ, ಸ್ನೇಹಿತರ ನೆರವಿನಿಂದ 13-6-2010 ರಂದು ರವಿವಾರವಾದರೂ ಆಪರೇಷನ್ ಮಾಡಿದ್ದು ಅಚ್ಚರಿ ಎನಿಸಿತು. ಯಾವುದೇ ರೀತಿಯ infection ಆಗಬಾರದು ಎಂಬ ಕಾರಣಕ್ಕೆ ಅನೇಕ ಕ್ರಮಗಳನ್ನು ತಗೆದುಕೊಂಡಿದ್ದು, ನಂತರ ಸೂಕ್ತ ಚಿಕಿತ್ಸಗಾಗಿ ನೆರವಾದದ್ದು ನನ್ನ ನೋವನ್ನು ದೂರಮಾಡಿತು.
ಆರೋಗ್ಯ ಸಚಿವರ ಸ್ನೇಹಿತ ಎಂಬ 'ಅಹಂ' ನ್ನು ಎಲ್ಲಿಯೂ ತೋರಿಸಲಿಲ್ಲ ಎಂಬ ಕಾರಣಕ್ಕೆ ನನ್ನ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನಾಡಿದರು.
ಖಾಸಗಿಯ super special ಆಸ್ಪತ್ರೆಗಳ ಹಾವಳಿಯ ಮಧ್ಯೆಯೂ ಸರಕಾರಿ ಸಂಸ್ಥೆಗಳು ಗಟ್ಟಿಯಾಗಿ ಉಳಿಯಲು ಡಾ. ಮಂಜುನಾಥರಂತಹ ವೈಧ್ಯರು ಕಾರಣ ಎನಿಸಿತು.
ಅಮೇರಿಕಾದಲ್ಲಿರುವ ಇಂಜನಿಯರ್ ಮಗ, ವೈಧ್ಯಕೀಯ ಅಧ್ಯಯನ ಮಾಡುತ್ತಿರುವ ಮಗಳು ಹಾಗೂ ವಿಜ್ಞಾನಿಯಾಗಿರುವ ಪತ್ನಿಯರೊಂದಿಗಿನ ಸುಖಿ ಸಂಸಾರಕ್ಕೆ ತಮ್ಮ ಪ್ರಮಾಣಿಕತೆಯೂ ಕಾರಣ ಎಂಬುದನ್ನು ಅವರ ಆದರ್ಶ ಎದ್ದು ತೋರಿಸುತ್ತದೆ. ನಡೆ-ನುಡಿ ಒಂದೇ ಪರಿಯಿದ್ದಾಗ ಬದುಕು ಎಷ್ಟೊಂದು ಅರ್ಥಪೂರ್ಣ ಎಂಬುದಕ್ಕೆ ಡಾ. ಮಂಜುನಾಥ ಮಾದರಿಯಾಗುತ್ತಾರೆ.
ಜುಲೈ ಒಂದು ವೈಧ್ಯಕೀಯ ದಿನಾಚರಣೆಯ ದಿನದೊಂದು ಅವರನ್ನೆಲ್ಲಾ ಅಭಿನಂದಿಸುವ ಅವಕಾಶ ಸಿಕ್ಕದ್ದು ನನ್ನ ಭಾಗ್ಯವೇ ಸರಿ!
ವೈಧ್ಯಕೀಯ ವೃತ್ತಿಗಿರುವ ಘನತೆಯ ಕುರಿತು, ಸರಕಾರಿ ವೈಧ್ಯರ ಬಗೆಗೆ ನನ್ನ ಗೌರವ ಹೆಚ್ಚಿಸಲು ಕಾರಣರಾದ ಡಾ. ಮಂಜುನಾಥ ತರದವರ ಕುರಿತು ಒಂದು ಗಂಟೆ ನಿರರ್ಗಳವಾಗಿ ಮಾತನಾಡಿ ಆಸ್ಪತ್ರೆಯ ಎಲ್ಲರನ್ನು ಅಭಿನಂದಿಸಿದೆ.
ಡಾ. ಮಂಜುನಾಥ ಅವರ ಸೇವೆ ಸದಾ ಸಮಾಜಕ್ಕೆ ದೊರಕಲಿ ಎಂದು ಹಾರೈಸುತ್ತೇನೆ.

ಸರಕಾರಿ ವ್ಯವಸ್ಥೆ ಹೀಗೆಂದರೇನು?


ಸರಕಾರ ಸಾರ್ವಜನಿಕರಿಗಾಗಿ ಹಾನಿಯಾದರೂ ಚಿಂತೆಯಿಲ್ಲ ಕೆಲವು ಇಲಾಖೆಗಳನ್ನು ಇಟ್ಟುಕೊಂಡಿದೆ.
ಸಾರ್ವಜನಿಕ ಸೇವೆಗಾಗಿಯೇ ಮೀಸಲಾಗಿರುವ ಸಾರಿಗೆ, ಆರೋಗ್ಯ, ಶಿಕ್ಷಣ ಹಾಗೂ ಟೆಲಿಫೋನ್ ಇಲಾಖೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ರಕ್ಷಿಸುತ್ತಲಿವೆ.
ಹಾನಿ ಎಂಬ ಕಾರಣಕ್ಕೆ ಇವು ನಿಲ್ಲುವುದಿಲ್ಲ. ನಿಲ್ಲಬಾರದು ಕೂಡಾ!
ಆದರೆ ಐಷಾರಾಮಿ ಬದುಕನ್ನು ಬಯಸುವವರು ಈ ಮೇಲಿನ ಇಲಾಖೆಗಳ ಸರಕಾರಿ ಸೇವೆಗಳನ್ನು ನಿರಾಕರಿಸುತ್ತಾರೆ.
ಅಯ್ಯೋ ಸರಕಾರಿ ಆಸ್ಪತ್ರೆಗಳಿಗೆ ಸಾಯಲು ಹೋಗಬೇಕು, ಸರಕಾರಿ ಶಾಲೆಗೆ ಹಚ್ಚಿದರೆ ಮಕ್ಕಳು ಉದ್ಧಾರವಾದಂತೆಯೆ? ಅರ್ಜೆಂಟ್ ಗೆ ಅಂತ ಮದುವೆ ಆಮಂತ್ರಣ ಕಳಿಸಿದರೆ, ಮಕ್ಕಳಾದ ಮೇಲೆ ತಲುಪುತ್ತೆ ಅಂತ ಮೂದಲಿಸುವ ಪರಿಪಾಠವಿದೆ. ಆದರೆ ಇದು ಸಂಪೂರ್ಣ ಸತ್ಯವಾ?
ಹೀಗೆ ಉಳ್ಳವರು ಮೂದಲಿಸುತ್ತಿದ್ದರೂ ಸರಕಾರಿ ಬಸ್ಸುಗಳ ಒಳಗೆ ಹಾಗೂ ಮೇಲೆ ಕುಳಿತು ಜನ ಪ್ರಯಾಣಿಸುತ್ತಾರೆ.
ಸರಕಾರಿ ಆಸ್ಪತ್ರೆಗಳಾಗಲಿ ಕಾಲು ಇಡೋಕೆ ಸ್ಥಳ ಇರದ ಹಾಗೆ ಜನ ತುಂಬಿರುತ್ತಾರೆ. ಸರಕಾರಿ ಶಾಲೆಗಳಲ್ಲಿ ಓದಿಯೇ ಉನ್ನತ ಸ್ಥಾನಕ್ಕೇರುತ್ತಾರೆ. ಅಧಿಕೃತ ಎನಿಸಿಕೊಳ್ಳಲು ಅಂಚೆ ಇಲಾಖೆಯನ್ನೇ ಅನೇಕರು ನಂಬಿದ್ದಾರೆ.
ಈ ತರಹದ ಟೀಕೆಗಳು ಸತ್ಯವಲ್ಲ ಅಲ್ಲವೆ?
ಆರ್ಥಿಕವಾಗಿ ಹಿಂದುಳಿದವರು, ಬಡವರು ಇಂದಿಗೂ ಸರಕಾರಿ ವ್ಯವಸ್ಥೆಯನ್ನೇ ನಂಬಿದ್ದಾರೆ.
ಸಮಾಜದಲ್ಲಿರುವ ಶ್ರೀಮಂತ, ಮಧ್ಯಮವರ್ಗದವರು ಏನೇ ಅಸಾರ್ವತ್ರಿಕ ಅಭಿಪ್ರಾಯ ಕೊಡಲಿ ಆಳುವ ಸರಕಾರ ಮಾತ್ರ ಸರಕಾರಿ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಹೆಚ್ಚಿಸಬೇಕು.
ಆಳುವ ಮಂತ್ರಿಗಳು, ಶಾಸಕರು, ಹಿರಿಯ ಅಧಿಕಾರಿಗಳು ಸರಕಾರಿ ವ್ಯವಸ್ಥೆಯಲ್ಲಿ ವಿಶ್ವಸ ಬೆಳೆಸಿಕೊಳ್ಳಬೇಕು.
ತಾವು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು. (ಕೇವಲ ಬಿಲ್ ಕ್ಲೇಮ್ ಮಾಡಲು ಅಲ್ಲ), ಸರಕಾರಿ ಬಸ್ಸುಗಳಲ್ಲಿ ಓಡಾಬೇಕು ಮಕ್ಕಳನ್ನು ಸರಕಾರಿ ಶಲೆಗಳಲ್ಲಿ ಓದಿಸಬೇಕು.
ಅಮೇರಿಕಾ, ಜಪಾನ್, ಚೈನಾ ದೇಶಗಳ ರಾಜಕಾರಣಿಗಳ ಉದಾಹರಣೆ ನೀಡುತ್ತಾ ಕಾಲಹರಣ ಮಾಡದೆ ಒಮ್ಮೆ ನಾವು ಪಾಲಿಸಿ ನೋಡನ ಅಲ್ಲವೆ?

Wednesday, July 14, 2010

ಅನಾರೋಗ್ಯ ಶಾಪ ಅಲ್ಲ

ಆಸ್ಪತ್ರೆಗೆ, ಜೈಲಿಗೆ ಹಾಗೂ ಸ್ಮಶಾನಕ್ಕೆ ಯಾರೂ ಬಯಸಿ ಹೋಗುವುದಿಲ್ಲ. ಹೋಗಬೇಕೆಂದು ಬಯಸುವುದಿಲ್ಲ ಕೂಡಾ!
ನಲವತ್ತೈದರ ಪ್ರಾಯಕ್ಕೆ ಬಂದ ನಾನು ಆಸ್ಪತ್ರೆಗೆ ದಾಖಲಾದ ನೆನಪುಗಳಿಲ್ಲ. ನನ್ನ ಮಿತಿಯಲ್ಲಿ ಆರೋಗ್ಯವನ್ನು ಚನ್ನಾಗಿ ಕಾಪಾಡಿಕೊಂಡಿದ್ದೇನೆ.
9-6-2010 ರ ರಸ್ತೆ ಅಪಘಾತ ನನ್ನನ್ನು ಬಯಸದ ಸ್ಥಳಕ್ಕೆ ಕಳಿಸಿತು.
ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಂತೆ ಸರಕಾರಿ ಆಸ್ಪತ್ರೆಯ ಅನುಭವಗಳು. ಇಷ್ಟೊಂದು ಆಪ್ತವಾಗಿರಬಹುದು ಅಂದುಕೊಂಡಿರಲಿಲ್ಲ.
ಸರಕಾರಿ ಆಸ್ಪತ್ರೆಗಳ ಬಗೆಗಿದ್ದ ಅಭಿಪ್ರಾಯ ಬದಲಾಯಿತು. ಅನಾರೋಗ್ಯ ಆಪ್ತರನ್ನು ಅರಿಯಲು ನೆರವಾಯಿತು.
ವೈದ್ಯರುಗಳು, ನರ್ಸಿಂಗ್ ವರ್ಗ ತೋರಿದ ಪ್ರೀತಿ, ನೋವನ್ನು ಸಹಿಸಿಕೊಳ್ಳುವ ಸವಾಲು ಎಲ್ಲದರಲ್ಲಿಯೂ ಹೊಸತನ ಅನುಭವಿಸಿದೆ.
ಆಪರೇಶನ್ ಮುಗಿದ ಮೇಲೆ ಎಲ್ಲರೂ ಹೇಳಿದರು.ಇದೊಂದು ರಿಸ್ಕ, ನೀವು Lucky ಪಾರಾದಿರಿ ಅಂದಾಗ ಮತ್ತೊಮ್ಮೆ ಅಂದುಕೊಂಡೆ ಬಾರದು ಬಪ್ಪದು, ಬಪ್ಪದು ತಪ್ಪದು ಎಂದು.
ಸರಿ ಸುಮಾರು 20 ದಿನಗಳನ್ನು ಆಸ್ಪತ್ರೆಯಲ್ಲಿ ಶಿಸ್ತಿನಿಂದ, ಸಹನೆಯಿಂದ ಕಳೆದೆ. ಓದಿದ ಒಂದೆರೆಡು ಪುಸ್ತಕಗಳು, ಭೇಟಿ ಆದ ಹಲವಾರು ಆಪ್ತರು ಹೊಸ ಜಗತ್ತನ್ನು ತೆರೆದಿಟ್ಟರು. ವ್ಯಥೆ ಪಡಬೇಕೋ, ಬೇಡವೋ ಎಂಬ ಗೊಂದಲ ಆಗಾಗ ಉಂಟಾಗುತ್ತಿತ್ತು. ಆಸ್ಪತ್ರೆ ತುಂಬಾ ಬಿಡುವಾದಾಗಲೆಲ್ಲ ಓಡಾಡುತ್ತಿದ್ದೆ. ರೋಗಿಗಳನ್ನು, ರೋಗಿಗಳ ಬಂಧುಗಳನ್ನು ಆಗಾಗ ವಿಚಾರಿಸುತ್ತಿದ್ದೆ.
ಸರಕಾರಿ ಶಾಲೆ, ಸರಕಾರಿ ಬಸ್ಸು ಹಾಗೂ ಸರಕಾರಿ ಆಸ್ಪತ್ರೆ ಎಂದರೆ ಜನ ಮೂಗು ಮುರಿಯುತ್ತಾರೆ.
ಬಡತನದ ಅನಿವಾರ್ಯತೆಯಲ್ಲಿ ಮಾತ್ರ ಜನ ಇವುಗಳನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಸುಳ್ಳಾಯಿತು.
ಸರಕಾರಿ ಆಸ್ಪತ್ರೆಗಳಿಗೆ ಕೇವಲ ಬಡವರು ಬರುವುದಿಲ್ಲ ಉಳ್ಳವರು ಬರುತ್ತಾರೆ. ವ್ಯವಸ್ಥೆಯ ಸದುಪಯೋಗವನ್ನು ಪ್ರಜ್ಞಾವಂತರು ಪಡೆದುಕೊಳ್ಳುತ್ತಾರೆ ಎಂಬ ಸತ್ಯ ತಿಳಿಯಿತು.
ಊರಿಂದ ಫೋನಾಯಿಸಿದ ಗೆಳೆಯರು ಅಚ್ಚರಿಯಿಂದ ಕೇಳುತ್ತಿದ್ದರು. 'ಅರೆ ನೀವು ಬೆಂಗಳೂರಿಗೆ ಹೋಗಿ ಬೇಕಾದಷ್ಟು standard ಆಸ್ಪತ್ರೆಗಳಿದ್ದರೂ ಸರಕಾರಿ ಆಸ್ಪತ್ರೆಯಲ್ಲಿ ಯಾಕೆ ಇದ್ದೀರಿ? ಎಂದು.
ಇಂತಹ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗಿ ಹೋಯಿತು. ಆರಂಭದಲ್ಲಿ ಉಂಟಾದ ಆತಂಕ ಹಿತೈಶಿಗಳಿಗೂ ಆಗಿತ್ತು. ಮನಸು ಮಾಡಿದರೆ ಸರಕಾರಿ ವ್ಯವಸ್ಥೆಯಲ್ಲೂ ಉತ್ತಮ ಕಾರ್ಯ ನಿರ್ವಹಣೆ ಸಾಧ್ಯ ಭಾವ ಉಂಟಾಯಿತು.
VIP ಗಳಾಗಿ ದಾಖಲಾದಾಗ ಉಂಟಾಗುವ ಅನುಭವವೇ ಬೇರೆ, ಸಾಮಾನ್ಯರಾಗಿ ಸೇರಿದಾಗ ಸಿಗುವ ಅನುಭವ ಬೇರೆ ಆದರೂ ಎರಡನ್ನು ತುಲನೆ ಮಾಡಲು ಸಾಧ್ಯವಾಯಿತು. ಮನದಲ್ಲುಂಟಾದ ಅನೇಕ ಭಾವ ತಲ್ಲಣಗಳನ್ನು ನವಿರಾಗಿ ದಾಖಲಿಸುವ ಇರಾದೆ ನನ್ನದು.
ಈ ಕುರಿತು ಸಣ್ಣ ಪುಸ್ತಿಕೆಯನ್ನು ಪ್ರಕಟಿಸುವುದು ಸೂಕ್ತ ಎಂದು ಅಲ್ಲಿನ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮುಂದೆ ಪ್ರಾಮಾಣಿಕ ಹಂಚಿಕೊಳ್ಳುವ ಭಾವನೆಗಳಿಗೆ ನಿಮ್ಮ ಪ್ರತಿಕ್ರಿಯೆ ಬಯಸುತ್ತೇನೆ.

Tuesday, June 29, 2010

ಸಣ್ಣ ಅಪಘಾತ ದೊಡ್ಡ ವೇದನೆ



ಆದದ್ದೆಲ್ಲಾ ಒಳ್ಳೆಯದಕ್ಕೇ ಆಗಿದೆ

ಆಗುತ್ತಿರುವುದೆಲ್ಲಾ ಒಳ್ಳೆಯದೇ ಆಗುತ್ತಿದೆ

ಆಗಲಿರುವುದು ಅದೂ ಒಳ್ಳೆಯದೇ ಆಗಲಿದೆ



ರೋಧಿಸಲು ನೀನೇನು ಕಳೆದುಕೊಂಡಿರುವೆ ?

ಕಳೆದುಕೊಳ್ಳಲು, ನೀನು ತಂದಿರುವುದಾದರೂ ಏನು ?

ನೀನೇನು ಪಡೆದಿದ್ದರೂ, ಅದನ್ನು ಇಲ್ಲಿಂದಲೇ ಪಡೆದಿರುವೆ

ಏನನ್ನು ನೀಡಿದ್ದರೂ ಅದನ್ನು ಇಲ್ಲಿಗೇ ನೀಡಿರುವೆ ?

ನಿನ್ನೆ ಬೇರಾರದ್ದೋ ಆಗಿದ್ದಿದ್ದು ಇಂದು ನಿನ್ನದಾಗಿದೆ.

ಮತ್ತೆ ನಾಳೆ ಮತ್ಯಾರದ್ದೋ ಆಗಲಿದೆ

ಪರಿವರ್ತನೆ ಜಗದ ನಿಯಮ

ನನ್ನ ನಂಬಿ ಕೆಟ್ಟವರಿಲ್ಲ.



ಹೀಗೆ ಹೇಳುವ ಕೃಷ್ಣನ ಮಾತುಗಳನ್ನು ನೂರೆಂಟು ಬಾರಿ ಓದಿದರೂ, ಓದಲೇ ಬೇಕೆನಿಸುತ್ತದೆ. ಪ್ರತಿ

ಓದಿನಲ್ಲೂ ಸಮಾಧಾನ ಸಿಕ್ಕುತ್ತದೆ. ಆದರೂ ನಾವು ನೆಮ್ಮದಿಯಿಂದ ಇಲ್ಲವಲ್ಲ ಏಕೆ ? ಎಂದನ್ನುಕೊಳ್ಳುತ್ತಲೇ

ಚಿಂತಿಸುತ್ತೇವೆ.



ಮಾತನಾಡುವಾಗ, ಬೇರೆಯವರು ತೊಂದರೆಯಲ್ಲಿದ್ದಾಗ, ಉಪದೇಶ ನೀಡುವಾಗ, ಹೀಗೆ ಹೇಳುತ್ತಲೇ

ಇರುತ್ತೇವೆ.



ಆದರೆ ಅಂತಹ ಸಂದರ್ಭ ನಮಗೆ ಬಂದಾಗ ನೆನಪು ಮಾಡಿಕೊಳ್ಳಬೇಕಾಗಿಲ್ಲ. ಅದು ತಾನೇ ತಾನಾಗಿ ನೆನಪಾಗಬೇಕಲ್ಲ .



೯ನೇ ಜೂನ್ ೨೦೧೦ ರಂದು ವೈಯಕ್ತಿಕ ಕೆಲಸಕ್ಕಾಗಿ ಬೆಂಗಳೂರಿಗೆ ಬರಬೇಕಾಗಿತ್ತು. ಅದಕ್ಕಾಗಿ

ಹಂಪಿ ಎಕ್ಸ್ ಪ್ರೆಸ್ ಗೆ ರಿಸರ್ವೇಷನ್ ಕೂಡ ಆಗಿತ್ತು. ಅನಿರೀಕ್ಷಿತವಾಗಿ ಸಚಿವ ಮಿತ್ರರಾದ ಶ್ರೀರಾಮುಲು

ಹುಬ್ಬಳ್ಳಿ ಇಂದ ವಿಮಾನಕ್ಕೆ ಒಟ್ಟಿಗೆ ಹೋಗೋಣವೆಂಬ ಒತ್ತಾಸೆಯನ್ನು ತಿರಸ್ಕರಿಸುವ ಮನಸ್ಸಾಗಲಿಲ್ಲ.

ಒಪ್ಪಿಕೊಂಡು ಹೊರಟೆ. ಗದಗ್ ನಿಂದ . ತುಂತುರು ಮಳೆ. ಮನದಲಿ ಏನೋ ದಾವಂತ.

ಅದಕ್ಕೆ ನೂರೆಂಟು ಕಾರಣಗಳು. ಮುಂದಿನ ಕಾರುಗಳಲ್ಲಿ ಸಚಿವರು ಹಾಗೂ ಅವರ ಹಿಂಬಾಲಕರು

ಹಿಂದೆ ಸ್ಕಾರ್‍ಫಿಯೋದಲ್ಲಿ. ಒಂಟಿ ಪಯಣ. ಮುಳಗುಂದ ನಾಕಾದಿಂದ ಫೋಟೋಗ್ರಾಫರ್ ಮಹೇಂದ್ರಕರ್

ಜೊತೆಗೂಡಿದ.







ಕಾರು ಹುಲಕೋಟಿ ದಾಟಿರಲಿಲ್ಲ. ವೇಗವಾಗಿ ಹೋಗುವುದು ಬೇಡವೆಂದೆ. ಇಲ್ಲ ಸಾರ್,

ಹುಬ್ಬಳ್ಳಿ ತಲುಪಿದ ಮೇಲೆ ಸಾಹೇಬರ ಹಿಂದೆ ಹೋಗದಿದ್ದರೆ ಸ್ಲೋ ಹೋಗ ಬೇಕಾಗುತ್ತದೆ ಅಂದ ಡ್ರೈವರ್ ಭದ್ರಿ.

ಸರಿ ಎಂದು ಸುಮ್ಮನಾದೆ. ಎಷ್ಟೇ ಆಗಲಿ, ಸ್ಟೇರಿಂಗ್ ಇರುವುದು ಅವನ ಕೈಲಿ ಅಲ್ಲವೇ ? ದುಂದೂರ್ ಕ್ರಾಸ್

ಬಳಿ ಯಾರದೋ ಸಣ್ಣ ತಪ್ಪಿನಿಂದ ತಕ್ಷಣ ನಿಂತ ಮಂತ್ರಿಗಳ ಕಾರಿಗೆ, ಭದ್ರಿ ಹೊಡೆಯುವುದನ್ನು ನೋಡುತ್ತಲೇ

ಅಯ್ಯೋ ಹೊಡೆದೆ ಮಾರಾಯ ಎಂದೆ. ಕ್ಷಣಾರ್ಧದಲ್ಲಿ ಎಲ್ಲವೂ ಮುಗಿತು. ನೋಡಿಕೊಂಡೆ, ಎಲ್ಲವೂ

ಸರಿಯಾಗಿತ್ತು. ಆದರೆ ಎಡ ಕೈ ಮಾತ್ರ ಫಾರ್ಸಿ ಹೊಡೆದಂತೆ ನಿಯಂತ್ರಣವಿಲ್ಲದೆ, ಗರಗರ ತಿರುಗತ್ತಲಿತ್ತು.

ಕೈ ಮುರಿತು ಮಾರಾಯ ಎಂದೆ. ನೋವು ಸಹಿಸಲಾಗಲಿಲ್ಲ. ಜೋರಾಗಿ ಚೀರಬೇಕೆನಿಸಿತು. ಸಹಿಸಿಕೊಂಡೆ.

ಎಷ್ಟೋ ಬಾರಿ ನಾನೇ ಹೇಳುತ್ತಿದ್ದ ಮೇಲಿನ ಕೃಷ್ಣನ ಮಾತುಗಳು ನೆನಪಾದವು. ಆಗುವುದೆಲ್ಲಾ ಒಳ್ಳೆಯದಕ್ಕೆ

ಸಧ್ಯ ಎಡದಕೈ ಮುರಿತು, ಬಲದಕೈ ಮುರಿಯಲಿಲ್ಲ ಎಂದು ಸಮಾಧಾನಿಸಿಕೊಂಡೆ. ಇಳಿದು ಎಲ್ಲವನ್ನೂ

ವಿವರಿಸಿ ಪ್ರಯಾಣ ರದ್ದು ಪಡಿಸಿ, ಸಚಿವರಿಗೆ ವಿಶಯ ತಿಳಿಸಿ ದು:ಖವನ್ನು ಸಹಿಸಿಕೊಂಡೆ. ಅತ್ತರೆ, ಚೀರಿದರೆ ಕೇಳುವರಾರು ?

ಡಾ:ಸಂಕನೂರು ಹತ್ತಿರ ಕರೆದುಕೊಂಡು ಹೋಗಲು ಹೇಳಿದೆ. ಮುರಿದಿದ್ದು ಖಾತ್ರಿಯಾತು. ಬೆಂಗಳೂರಿಗೆ

ಚಿಕಿತ್ಸೆಗಾಗಿ ತೆರಳುವ ನಿರ್ಧಾರ. ಯಮಯಾತನೆಯನ್ನು ಸಹಿಸಿಕೊಂಡೆ. ಅಳುತ್ತಾ ರೇಖಾ ಬಂದಳು. ಸಧ್ಯ

ಬದುಕಿದೆ. ತಲೆಗೆ ಪೆಟ್ಟಾಗಲಿಲ್ಲ. ಕಾಲು ಮುರಿಯಲಿಲ್ಲ. ರೈಲಿಗೆ ಹೋಗಿದ್ದರೆ ಚೆನ್ನಾಗಿತ್ತು. ಹೀಗೆ ಹತ್ತು

ಹಲವು ಭಾವಗಳು. ಆಗುವುದೆಲ್ಲಾ ಒಳ್ಳೆಯದಕ್ಕೆ ಅಂದುಕೊಂಡು ಮಾಧ್ಯಮ ಮಿತ್ರರ ಪ್ರಚಾರ ತಪ್ಪಿಸಿಕೊಂಡು

ಏನೂ ಆಗಿಲ್ಲ ಎಂದು ಸುದ್ದಿ ಮಾಡಿ ಡಾ: ಜಿ.ಬಿ. ಪಾಟೀಲ, ಗುಳಗೌಡರ್, ಡಾ: ವಿರೇಶ್, ಹಾಗೂ ಡಾ: ಸಂಕನೂರ್

ರವರೊಂದಿಗೆ ಚರ್ಚೆ ಮಾಡಿ, ಮನೆಗೆ ಬಂದೆ.



ಮಧ್ಯರಾತ್ರಿ ಅವ್ವ, ಅಪ್ಪ, ರತ್ನ ಬಂದಿದ್ದು ,ಆ ನೋವು ಈಗೆಲ್ಲಾ ಒಂದು ಕನಸು. ಮರುದಿನ

ಬೆಂಗಳೂರು ಪಯಣ. ರಾಮಪ್ರಿಯರವರ ಸೂಚನೆಯಂತೆ, ಜಯನಗರ ಸರ್ಕಾರಿ ಆಸ್ಪತ್ರೆಗೆ. ಯಾಕೋ ನಿರಾಶೆ.

ಇಷ್ಟೊಂದು ಅವಕಾಶಗಳು ಇರಬೇಕಾದಾಗ ಸರ್ಕಾರಿ ಆಸ್ಪತ್ರೆ ಏಕೆ ಎಂಬ ಆತಂಕ. ಸಣ್ಣ ಅಳುಕು. ಆದರೆ

ಶ್ರೀರಾಮುಲು ಹಾಗೂ ರಾಮಪ್ರಿಯರವರ ಕಾಳಜಿ ಗೊತ್ತಿದ್ದು, ಒಪ್ಪಿಕೊಂಡೆ. ಅದು ಈಗಲೂ ಸರಿ ಎನ್ನಿಸಿದೆ.

ಅವರ ಕಾಳಜಿ ಪೂರ್ವಕ ನಿರ್ಣಯ ಗೆದ್ದಿದೆ.



ಆಗಿದ್ದು ಸಣ್ಣ ಅಪಘಾತ, ಬಿದ್ದದ್ದು ದೊಡ್ಡ ಪೆಟ್ಟು. ಎಡಗೈಗೆ ಹ್ಯೂಮರಸ್ ಮಲ್ಟಿಪಲ್

ಫ್ರಾಕ್ಚರ್. ಮೂಳೆ ತುಂಡು ತುಂಡಾಗಿತ್ತು. ಸಹಿಸಿಕೊಂಡೆ.



ದಿನಾಂಕ ೧೩-೦೬-೨೦೧೦ ರಂದು ರವಿವಾರ ವಿಶೇಷ ಕಾಳಜಿಯೊಂದಿಗೆ, ಆಪರೇಷನ್

ಎಲ್ಲ ಯಾತನೆ ಸಹಿಸಿಕೊಂಡು ಕೇವಲ ವಿಶ್ವಾಸದಿಂದ, ಓ.ಟಿ.ಯಲ್ಲಿ ಕಣ್ಣುಮುಚ್ಚಿದೆ. ತುಂಬಾ ಮೇಜರ್

ಆದರೂ ನಾಲ್ಕು ತಾಸಿನ ಹೋರಾಟದಲ್ಲಿ ಗೆದ್ದೆ. ಬರುವ ಕರೆಗಳಿಗೆಲ್ಲಾ ಒಂದೇ ಉತ್ತರ, ಚೆನ್ನಾಗಿದ್ದೇನೆ.



ಈಗ ಆಸ್ಪತ್ರೆಯ ಅನುಭವಗಳು ಹೊಸಲೋಕವನ್ನು ತೋರಿಸಿವೆ. ಶ್ರೀರಾಮುಲು ಭೇಟಿ

ಹಿತೈಷಿ- ಸ್ನೇಹಿತರುಗಳ ಕಾಳಜಿ, ರೇಖಾಳ ಜವಾಬ್ದಾರಿ, ಕಕ್ಕಿಯ ಸಾಂತ್ವನ. ಪಾಲಕರ ಪ್ರೀತಿ, ಅಭಿ ,ಚಿನ್ನಿಯ

ನೆನಪು. ಕಾಲೇಜಿನಲ್ಲಿ ಅಂದುಕೊಂಡಿರಬಹುದಾದ ಸಂಗತಿಗಳನ್ನು ಮೆಲಕು ಹಾಕುತ್ತಾ ಇಪ್ಪತ್ತು ದಿನ ಕಳೆದೆ.

ಈಗ ಎಲ್ಲವೂ ಯಥಾಸ್ಥಿತಿ ಮುಂದೇನು ?


ಇನ್ನೆರಡು ತಿಂಗಳು ಕಡ್ಡಾಯ ರಜೆ. ಆಚೀಚೆ ಓಡಾಡುವ ಹಾಗಿಲ್ಲ. ಡಾ: ಕೆ. ನಾಗರಾಜ್,

ಡಾ: ಮಂಜುನಾಥ್, ಪಿ.ಎಸ್. ರಾಮಪ್ರಿಯ, ಆಸ್ಪತ್ರೆಯ ಸಿಬ್ಬಂದಿ ತೋರಿದ ಕಾಳಜಿಗೆ---- ಹೇಳುವುದು

ಕಷ್ಟ. ಇಲ್ಲಿನ ಪ್ರತಿಕ್ಷಣಗಳ ಅನುಭವಗಳನ್ನು ಖಂಡಿತ ದಾಖಲಿಸಬೇಕು.



ಒಂದೆರಡು ತಿಂಗಳು ರಜೆ ಹಾಕಿ, ಬಾಕಿ ಇದ್ದ, ಕೆಲಸಗಳನ್ನು ಮುಗಿಸಲೇ ಬೇಕೆಂಬ

ಇರಾದೆ ಇತ್ತು. ಅದನ್ನು ಸೂಚ್ಯವಾಗಿ ಗೆಳೆಯರ ಮುಂದೆ ಹೇಳಿ ಕೊಂಡಿದ್ದೆ. ನನ್ನ ಇಚ್ಛೆಯಂತೆ, ರಜೆ

ಏನೋ ಸಿಕ್ಕಿತು. ಸಿಕ್ಕ ರೀತಿ ಮಾತ್ರ ತುಂಬಾ ಭಿನ್ನ. ಈ ರೀತಿ ಅಂದುಕೊಂಡಿರಲಿಲ್ಲ. ಗಟ್ಟಿಯಾಗಿ ಉಳಿದ

ಕಾಲು, ತಲೆ ಅಂಗಾಂಗಗಳಿಗಾಗಿ ಖುಷಿಯಾಗಿದೆ. ಕೆಲವು ತಿಂಗಳುಗಳಲ್ಲಿ ಕೈ ಮೊದಲಿನಂತಾಗುತ್ತದೆ.

ರಜೆ ಸಿಕ್ಕಿದೆ. ಸ್ವಲ್ಪ ಸಜೆಯೊಂದಿಗೆ. ಅದೇ ಕೃಷ್ಣನ ಮಾತುಗಳು ಆದದ್ದೆಲ್ಲಾ ಒಳ್ಳೆಯದಕ್ಕ ಆಗಿದೆ.

ನೋವು ಸಹಿಸಿಕೊಂಡು ಸಣ್ಣ ಗೆಲುವು ಸಾಧಿಸಿದ್ದೇನೆ. ಮತ್ತೆ, ಉಳಿದ ಅನುಭವಗಳು ನಿಮ್ಮೊಂದಿಗೆ-----

Tuesday, June 8, 2010

ಒಂದಿಷ್ಟು ವಿಳಂಬ - ಅಷ್ಟಿಷ್ಟು ಅಲೆದಾಟ

ರಜೆಯಲಿ ನಿರಂತರ ಬರೆಯುತ್ತಿದ್ದು, ಈಗ irregular ಆಗಿದ್ದಕ್ಕೆ ಬೇಸರವಿದೆ. ಬರೆಯುವ ತುಡಿತ ಕಾಡುತ್ತಿದ್ದರೂ ಸಮಯ ಹೊಂದಾಣಿಕೆ ಆಗುತ್ತಿಲ್ಲ.
ಮಾನಸೋಲ್ಲಾಸದ ಹತ್ತಾರು ಪ್ರಶ್ನೆಗಳು ನನ್ನೆದುರಿಗಿದೆ. ಅವುಗಳಿಗೆ ಉತ್ತರಿಸಬೇಕಾಗಿದೆ.
ಲವ್ ಕಾಲದ ಬಗ್ಗೆ ಅನೇಕರಿಗೆ ಕುತೂಹಲವಿದೆ. ನಟ ರವಿಚಂದ್ರನ್ ರೊಂದಿಗಿನ ಸಂದರ್ಶನ ಓದುವ ಕಾತುರವೂ ಇದೆ. ಜುಲೈ ಕೊನೆವಾರ ph.d ಮುಗಿಯಲೇಬೇಕೆಂಬ ಆದೇಶ ಮಾರ್ಗದರ್ಶಕರಾದ ಡಾ, ಎಂ. ಎಂ. ಕಲಬುರ್ಗಿಯವರದು ನನಗೂ ಅಷ್ಟೇ. ಡಾ. ಎಂ. ಎಂ. ಕಲಬುರ್ಗಿ ಅವರಂತಹ ಸಂಶೋಧಕರ ಕೈಯಲ್ಲಿ ಪದವಿ ಪಡೆಯುವ ಸಂಭ್ರಮವಿದೆ.
ಇತ್ತಿಚೀಗೆ ಹೆಚ್ಚು ಆಪ್ತರಾಗಿರುವ ಸಚಿವರಾದ ಶ್ರೀರಾಮುಲು ಕೆಲ assignment ಒಪ್ಪಿಸಿದ್ದಾರೆ.
ಎಲ್ಲವನು, ಎಲ್ಲದನು ಪೂರೈಸುವ ಧಾವಂತ. ಏನೇ ಇದ್ದರೂ ಮೊದಲ ಆಯ್ಕೆ ಓದು - ಬರಹ - ಪಾಠ. ಅಷ್ಟೇ ಇದರ ಸ್ವರೂಪ ಬದಲಾಗಬಹುದು. ಪ್ರವಾಸಕಥನ ಮತ್ತೊಮ್ಮೆ ಅಚ್ಚಿಗೆ ಹೋಗಬೇಕಿದೆ.
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಸಾಹಿತ್ಯ ಪುರಸ್ಕಾರದ ಫಲಿತಾಂಶ ಬಂದಿದೆ. ಸರ್ ಅವರೊಂದಿಗೆ ಚರ್ಚಿಸಿ, ಪ್ರಕಟಿಸಿ ಒಂದು ಸುಂದರ ಕಾರ್ಯಕ್ರಮ ರೂಪಿಸಬೇಕಿದೆ.
ಅಂದುಕೊಂಡಂತೆ ಮೇ 26 ಕ್ಕೆ ಕಾರ್ಯಕ್ರಮ ಆಗಬೇಕಿತ್ತು. ಆದರೆ ರಜೆಗಾಗಿ ಸಾಹಿತ್ಯದ ಸ್ನೇಹಿತರೆಲ್ಲ ಊರಲ್ಲಿರಲಿಲ್ಲ. ಹೀಗಾಗಿ ಜೂನ್ ಕೊನೆ ವಾರದಲ್ಲಿ ಕಾರ್ಯಕ್ರಮ ಆಯೋಜಿಸುವ ಾಲೋಚನೆ ಇದೆ.
ಈ ಮಧ್ಯ 2ನೇ ಕವನ ಸಂಕಲನ ಪ್ರಕಟಿಸಬೇಕಾಗಿದೆ. ಹೀಗೆ ಕೆಲಸಗಳು ಬಾಕಿ ಇದ್ದಾಗ ಬೇಸರವಾಗುವುದು ಸಹಜ. ಆದರೆ ಎಲ್ಲವನ್ನು ನಿಭಾಯಿಸುವ ತುಡಿತ ಇಟ್ಟುಕೊಂಡು ಅಲೆದಾಡುವುದರಲ್ಲಿ ಖುಷಿ ಇರುತ್ತದೆ.
ರಾತ್ರಿ ಬಿಡುವಾಗಿಸಿಕೊಂಡು ಧ್ಯಾನಸ್ಥ ಸ್ಥಿತಿಯಲ್ಲಿ writing table ಹುಡುಕಬೇಕೆನಿಸುವ ಮನಸಿಗೆ ಋಣಿಯಾಗಿದ್ದೇನೆ.

ಅಧಿಕಾರ - ಹಣ - ಪಟಾಲಂ ಇತ್ಯಾದಿ

ಇಂದಿನ ರಾಜಕೀಯ ವ್ಯವಸ್ಥೆಯನ್ನು ನೋಡಿದಾಗ ಅಚ್ಚರಿ ಎನಿಸದಿರದು ಹಣದಿಂದ ಅಧಿಕಾರ ಸಿಗುತ್ತದೆಯೋ ಇಲ್ಲವೋ ಆದರೆ ಅಧಿಕಾರದಿಂದ ಸಿಕ್ಕೇ ಸಿಗುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ.
ನನಗೆ ಒಬ್ಬ ರಾಜಕೀಯ ಮನುಷ್ಯ ಆಪ್ತರು. ಅವರಿಗೆ ಏನಕೇನ ಕಾರಣದಿಂದ ಅಧಿಕಾರವಿರಲಿಲ್ಲ. ಒಂಟಿತನವೇ ಅವರ ಸಂಗಾತಿ. ಜೇಬಿನಲ್ಲಿ ಹಣವಿರುತ್ತಿರಲಿಲ್ಲ. ಬರೀ ಚರ್ಚೆಗಳೇ ಸಂಗಾತಿ. ನಾಲ್ಕಾರು ಜನ ಬಿಟ್ಟರೆ ಯಾರೂ ಸುಳಿಯುತ್ತಿರಲಿಲ್ಲ. ವಾರದಲ್ಲಿ ಹತ್ತಾರು ತಾಸುಗಳನ್ನು ನನ್ನೊಂದಿಗೆ ಕಳೆದು ರಾಜಕೀಯ ಭವಿಷ್ಯದ ಕುರಿತು ಚರ್ಚಿಸಿ ಮುಂದೇನು ಎಂದು ಲೆಕ್ಕ ಹಾಕುತ್ತಿದ್ದಾಗ ನನಗೆ ಅಯ್ಯೋ ಎನಿಸುತ್ತಿತ್ತು. ಅಧಿಕಾರರಹಿತರನ್ನು ಕಂಡರೆ ನನಗೆ ಒಂದು ರೀತಿಯ ಆಪ್ತತೆ ಅನುಭೂತಿ.
ಏನೋ ಪವಾಡ ನಡೆದು ಅವರಿಗೆ ಈಗ ಅಧಿಕಾರ ಸಿಕ್ಕಿದೆ. ಅಧಿಕಾರ ಸಿಗಲು ನೂರಾರು ಜನ ನನ್ನಂತೆ ಕಾರಣವಾಗಿರಬಹುದು. ನನ್ನದೊಂದು ಮಹತ್ವದ ಪಾತ್ರವಂತು ಇದೆ. ಆರಂಭದಲ್ಲಿ ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿತ್ತು. ಅಧಿಕಾರದ ನಶೆ ಏರಿದಂತೆಲ್ಲ ಯಾಕೋ ಆಪ್ತರು ತೊಡರಾಗಿ, ಚೇಲಾಗಳು, ಭಟ್ಟಂಗಿಗಳು ಇಷ್ಟವೆನಿಸಿದರು. ಅದರ ವಾಸನೆ ಬಡೆದಾಗ ಮೂಗು ಮುಚ್ಚಿಕೊಂಡು ನಾನೇ ದೂರಾದೆ. ಒಂದೆರೆಡು ತಿಂಗಳು ಮನಸಿಗೆ ಕಿರಿಕಿರಿ ಎನಿಸಿತು. ಕಾಲಚಕ್ರ ತಿರುಗುತ್ತಲೇ ಇದೆ.
ಅಧಿಕಾರಕ್ಕಾಗಿ ಜೊಲ್ಲು ಸುರಿಸಿ ಹಣ ಬಾಚಿಕೊಳ್ಳುವವರ ತಂಡ ಕ್ರಿಯಾಶೀಲವಾಗಿರುವಾಗ ಸ್ನೇಹಿತರದು ಯಾವ ಲೆಕ್ಕ!
ಖಾಲಿಯಾಗಿದ್ದ ಪರ್ಸು ತುಂಬಲು, ಬಣಗುಡುತ್ತಿದ್ದ ಮನೆ ಬೆಳಗಲು ಅಧಿಕಾರ - ಹಣದ ರಾಶಿ. ಪ್ರಭುದ್ಧತೆ ಇರದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಸುಮ್ಮನೆ ಸಹಿಸಿಕೊಂಡಿದ್ದೇನೆ. ಕಾಲ ಎಲ್ಲವನ್ನು ನಿರ್ಣಯಿಸುತ್ತದೆ. ಅಲ್ಲಿಯವರೆಗೆ ತಡೆಯಬೇಕು. ತಡೆದುಕೊಳ್ಳುತ್ತೇನೆ. ಮನಸಿಗೆ ಆದ ಗಾಯಕ್ಕೆ ಔಷಧಿ ಇಲ್ಲ. ಅದು ತನ್ನಷ್ಟಕ್ಕೆ ತಾನೇ ಮಾಯಬೇಕು. ಈಗ ಆ ಗಾಯ ಮಾಯಿಸುವ ಮುಲಾಮು ಸಿಕ್ಕಿದೆ. ಇನ್ನು ಮುಂದೆ ಹೊಸ ಗಾಯ ಆಗದಂತೆ ಎಚ್ಚರವಹಿಸುತ್ತೇನೆ. ಅಧಿಕಾರ ಇಲ್ಲದಾಗ ಆಪ್ತರಾದವರನ್ನು, ಅಧಿಕಾರ ಸಿಕ್ಕಾಗ ಕೈ ಬಿಟ್ಟರೆ ಏನಾಗುತ್ತದೆ ಎಂಬುದನ್ನು ಇತಿಹಾಸ ಹೇಳಿದರು. ಮನುಷ್ಯ ಮಾತ್ರ ಮಾಡಿದ ತಪ್ಪನ್ನೇ ಮಾಡುತ್ತಾನೆ. ನಂಜಾದ ಹಲ್ಲಿಗೆ ನಾಲಿಗೆ ಹೊರಳುವಂತೆ. ಈಗ ನಿದ್ರೆಯಲೂ ಎಚ್ಚರಾಗಿರುತ್ತೇನೆ.