Friday, August 18, 2017

ಒಂಟಿಯಾದ ಕೂಡಲೇ ಕಾಡುವ ಪರಿ

ಲವ್ ಕಾಲ

ಒಂಟಿಯಾದ ಕೂಡಲೇ ಕಾಡುವ ಪರಿ

ಈ ಬಂಧನಗಳೇ ಹೀಗೆ. ನಿರಂತರ ಕಾಡುವ ಕನಲಿಕೆ. ಒಮ್ಮೆ ಪ್ರೇಮ ನಿವೇದನೆಯಾದ ಮೇಲೆ ಈ ಆತಂಕ ಕಡಿಮೆಯಾಗಬಹುದು ಅಂದುಕೊಂಡಿದ್ದೆ.
ಅದೇ ಕರಾರಿನ ಮೇಲೆ ನನ್ನ ಭಾವನೆಗಳನ್ನು ಹಂಚಿಕೊಂಡೆ. ಬೆರಗು ಮೂಡಿಸುವ ಪರಿಯಲಿ ನೀನೂ ಒಪ್ಪಿಕೊಂಡದ್ದು ಈಗ ಇತಿಹಾಸ.

ಮುಂದೆ ತುಂಬ ಅನಿರೀಕ್ಷಿತವಾಗಿ ನಾವು ಅಂದುಕೊಂಡಂತೆ ಥೇಮ್ಸ್ ನದಿ ತೀರದ ಹೊಟೆಲ್ ನಲ್ಲಿ ತಂಗಿದ್ದೆವು ಆದರೆ ಮಲಗಲೇ ಇಲ್ಲ. ಹೊಸ ಗೆಳೆತನದ ಹಂಗಾಮಾ ಎಂದರೆ ಏನೂ ಅಂತ ಅನುಭವಕ್ಕೆ ಬಂತು.

ಗಂಡು-ಹೆಣ್ಣು ಎಂದರೆ ಬರೀ ಕಾಮದಾಟವಲ್ಲ ಎಂಬುದನ್ನು ನಮ್ಮ ಗೆಳೆತನ ನಿರೂಪಿಸಲು ಯಶಸ್ವಿಯಾಯಿತು. ಅದಕ್ಕೆ ಅಂದು ರಾತ್ರಿ ಬರೀ‌ ಮಾತು-ಮಂಥನ ಬಿಟ್ರೆ ಇನ್ನೇನಿರಲು ಸಾಧ್ಯ.

ಎಷ್ಟೋ ಸಲ ನಾನು ವಾದಿಸುತ್ತಿದ್ದೆ ' ಒಂದು ಹೆಣ್ಣು ಗಂಡಿಗೆ ಸೋದರಿ ಅಥವಾ ಪ್ರೇಯಸಿ ಆಗಬೇಕಾಗಿಲ್ಲ , ಒಳ್ಳೆಯ ಸ್ನೇಹಿತರು ಆಗಬೇಕು. ಕಾಮಭಾವನೆಗಳನ್ನು ಮೀರಿ ನಿಲ್ಲುವ ಸ್ನೇಹ ಅದಾಗಿರಬೇಕು.

ರಕ್ಷಾ ಬಂಧನದ ನೆಪದಲ್ಲಿ ಸಂಬಂಧವನ್ನು confuse ಮಾಡಿಕೊಳ್ಳಬಾರದು . ಹುಡುಗ ಹುಡುಗರ ಗೆಳೆತನದಂತೆ , ಹುಡುಗ ಹುಡುಗಿಯರ ಗೆಳೆತನವೂ ಇರಬೇಕು. ಬೇರೆಯವರು ಏನೆಂದುಕೊಳ್ಳುತ್ತಾರೆ ಎನ್ನುವುದಕ್ಕಿಂತ ನಾವು ಹೇಗಿದ್ದೇವೆ ಎಂಬುದು ಮುಖ್ಯ .'

ನಾನು ನನ್ನ ಹೇಳಿಕೆಗೆ ಬದ್ಧನಾದ ರೀತಿಯಲ್ಲಿ ಆ ರಾತ್ರಿ ನಡೆದುಕೊಂಡೆ , ಸಂಯಮ ಕಳೆದುಕೊಳ್ಳದೇ ಎಂಬ ಹೆಗ್ಗಳಿಕೆಯ ಮಾತೆಲ್ಲಿ !

ಇದೊಂದು ರೀತಿ ನನಗೆ ನಾನೇ ಹಾಕಿಕೊಂಡ ಲಕ್ಷ್ಮಣರೇಖೆ . ನಿನಗೂ ನಂಬಿಕೆ ಇರಲಿಲ್ಲ ಎನ್ನುವುದು ಅಷ್ಟೇ ನಿಜ .

ಗೆಳೆಯರ ಹಾಗೆ ಎಲ್ಲ ಹಂಚಿಕೊಂಡ ಮೇಲೆ ಮೇಲೆ ಎಲ್ಲ ಮುಗಿಯಿನತಲ್ಲ ಎಂಬ ಸಮಾಧಾನ.

ಒಂದು ವಾರದ ಈ ಅಂತರದಲಿ ನನ್ನನ್ನು ನಾನು ಗಮನಿಸಿದಾಗ ತುಂಬಾ ಬದಲಾಗಿದ್ದೇನೆ ಎನಿಸುತ್ತದೆ.

ಸುಪ್ತ ಮನಸು ನಿತ್ಯ ನಿನಗಾಗಿ ಹಾತೊರೆಯುತಿದೆ. ಬಿಟ್ಟಿರುವುದು ಅಸಾಧ್ಯ ಎನಿಸಲಾರಂಭಿಸಿದೆ. ಕೇವಲ ಗೆಳೆಯರಾಗಿದ್ದು ನಾವು ಜೊತೆಯಾಗಿರುವುದೂ  ಅಸಾಧ್ಯ.

ಜೊತೆಗಿರಬೇಕಾದರೆ ಅದರ ವಾಖ್ಯಾನ ಬದಲಾಗುತ್ತದೆ.

ಸಮಾಜ ನಿರ್ಧರಿಸುವಂತೆ ಮದುವೆ ಬಂಧನದಲಿ ಸಿಕ್ಕು ಬಿದ್ದರೆ ನಮ್ಮ ಸ್ನೇಹ ಕೇವಲ ಭ್ರಮೆಯಾಗಿ ಉಳಿಯುತ್ತದೆ.

ನಮ್ಮ ಪ್ರೀತಿ-ಸ್ನೇಹ ಈಗ ಖಾಲಿಯಾಗದ ಅಕ್ಷಯಪಾತ್ರೆ.

ಪ್ರತಿ ಕ್ಷಣ ನಿನ್ನ ನೆನಪು ನನ್ನನ್ನು ಜಜ್ಜಿ ಹಾಕಿ ತಲ್ಲಣಿಸುತಿದೆ. ದಿಕ್ಕೇ ತೋಚದಾಗಿದೆ.

ಹೀಗೆ ಹೇಳಲು ನನಗೆ ತುಂಬಾ ಸಂಕೋಚವಾಗಿ ಇಡೀ ದಿನ ಅತ್ತುಬಿಟ್ಟೆ. ನಿನಗೆ ಹೇಳಲು ಬೇಸರ . ಕಳಕೊಂಡ ಕಳವಳ .
ಇಂದು ತುಂಬಾ ಅನಿವಾರ್ಯವಾಗಿ ಈ ನಿವೇದನೆ.
ನೀನು ತೆಗೆದುಕೊಳ್ಳಬಹುದಾದ ಎಲ್ಲ ನಿರ್ಣಯಗಳಿಗೂ ನಾನು ಬದ್ಧ.
 
ಈ ಗೆಳೆತನದ ಹಂಗಾಮಾ ಹೇಗಿರಲಿ ಎಂಬುದನ್ನು ನೀನೇ ನಿರ್ಧರಿಸು.

---ಸಿದ್ದು ಯಾಪಲಪರವಿ

No comments:

Post a Comment