Monday, August 21, 2017

ಬಾಳ ದಡ ಸೇರೋಣ

ಬಾಳ ದಡ ಸೇರೋಣ

ಹೇಳುವದೆಲ್ಲ ಹೇಳಿ ಕೇಳುವುದೆಲ್ಲ
ಕೇಳಿದರೂ ಮಾತು
ಮುಗಿಯುವುದಿಲ್ಲ

ಭಾವಯಾನ ಪಯಣದಲಿ
ವಿಷಾದದ ಅಪಸ್ವರವಿಲ್ಲ

ಬದುಕಿನ ಪಯಣದಲಿ ಸಿಗಬಹುದಾದ
ತಿರುವಿಗೆ ಹಂಬಲಿಸಿದ ಮನಕೊಮ್ಮೆ
ದೊರೆಯುವದು ಮೋಕ್ಷ

ಬಳಸಿ ಬಿಸಾಡಿ , ಅಂಜಿ-ಅಳುಕಿ
ಅವಮಾನಿಸಿ ಅನುಮಾನಿಸದರೆ
ನೂರು ಮಾರು ದೂರ
ಒಲವ ಬೆಳಗು

ಸಾವಿರದ ಬಂಧನಗಳ ಮುಷ್ಟಿಯಲಿ
ಬಿಗಿಹಿಡಿದು ಅನುಸಂಧಾನದ 
ಅನನ್ಯತೆ ಅನುಭವಿಸುವ
ನಿರಹಂಕಾರದ ನಿಜಸ್ವರೂಪದ
ವೈಭವ

ಅನುರಾಗದ ಅರಮನೆಯ ರಾಜ-ರಾಣಿ
ಬೇಕಿಲ್ಲ ಅರಸೊತ್ತಿಗೆ ಸಿರಿ ಸಂಪದದ ಹಂಗು

ಅವರಿಗೆ ಅವರದೇ ಆದ
ಹಂಗಿಲ್ಲದ ಒಲವ ಒಡೆತನ
ಸಾಕು ಈ
ವ್ಯವಹಾರಿಕ ಲೋಕದಿ

ಗೇಣು ಹೊಟ್ಟೆಯ ಚೀಲದ ಚಿಂತೆಗೆ
ನಶಿಸಿ ಮಣ್ಣ ಸೇರುವ ಹೇಸಿ ದೇಹದ
ವ್ಯಾಮೋಹದಲಿ ಒಲವ ಮಾರುವ
ಹಂಗಿಲ್ಲದ ಅರಸರು ನಾವು

ಸಮರಸದ ಸರಸದಲಿ ನಿಷ್ಕಾಮ
ವಿರಸದಲಿ ಬೇಕು-ಬೇಡಗಳ
ಹುಡುಕಾಟ ಹುಡುಗಾಟ

ನಿಲ್ಲದೀ ನಿಲ್ಲದ  ಪಯಣ
ನಿರ್ಲಿಪ್ತದಿ  ಸಾಗುತ
ಬಾಳ ಸರೋವರದ
ದಡ ಸೇರೋಣ.

---ಸಿದ್ದು ಯಾಪಲಪರವಿ

No comments:

Post a Comment