Wednesday, September 18, 2013

ಬದುಕ ಪಯಣದ ಹಾದಿಯಲಿ-ಭಾಗ-೨

ಸೋಲು, ನಿರಾಸೆ,  ಹತಾಶೆ ಹಾಗೂ ತಳಮಳ ನಮ್ಮನ್ನು ಕಾಡುವ ಬೇಡವಾದ ಶತ್ರುಗಳು. ಈ ಶತ್ರುಗಳನ್ನ ನಾವೇನು ಬಯಸುವುದಿಲ್ಲವಾದರು, ನಮಗರಿವಿಲ್ಲದಂತೆ ಅಂಟಿಕೊಂಡು ಬೆಂಬತ್ತಿಬಿಡುತ್ತವೆ.
ಅಂತಹ ಅನಿವಾರ್ಯ  ಬ್ಲಾಕ್ ಸಂಧರ್ಭ, ಖಾಲಿತನ ಎಲ್ಲರಿಗೊ ಒಂದೊಂದು ಸಲ ಎಲ್ಲರ ಬದುಕಿನಲ್ಲಿ ಬರುತ್ತದೆ ಎಂದು ಮನೋವಿಜ್ಜಾನಿಗಳು ವಿವರಿಸಿದರೆ, ಸಂಧಿ ಕಾಲವೆಂದು ಜ್ಯೋತಿಷಿಗಳು ವಿಶ್ಲೇಷಿಸುತ್ತಾರೆ'
ಸಂಧಿಗಾಗಿ ಜ್ಯೋತಿಷ್ಯ ಶಾಸ್ತ್ರ ಸಂಧಿ ಶಾಂತಿ ಹೋಮ ಹವನಗಳನ್ನ ಹೇಳಿದರೆ, ಮನೋವಿಜ್ಞಾನಿಗಳು ಸೂಕ್ತ ಆಪ್ತ ಸಮಾಲೋಚನೆ ಇರಲಿ ಎನ್ನುತ್ತಾರೆ.
ಆದರೆ ಅಂತಹ ತಲ್ಲಣಗಳಲ್ಲಿ ಎಲ್ಲಂದರಲ್ಲಿ ನಿರರ್ಥಕ ಅಲೆದಾಟವಿರುತ್ತದೆ.ಎರಡು ದಶಕಗಳ ನನ್ನ ಸಾರ್ವಜನಿಕ ಬದುಕಿನಲ್ಲಿ ಹಾಡಿ ಹೊಗಳಿದವರು, ಮಾರ್ಗದರ್ಶನ ಪಡೆದು ಧನ್ಯರಾದಂತವರು ಕೂಡ ಆನಗತ್ಯವಾದ ಸಲಹೆ ನೀಡಲು ಆರಂಭಿಸಿದ್ದನ್ನು ಎದುರಿಸಿದ್ದೇನೆ. ಅದು ಅವರ ತಪ್ಪಲ್ಲ, ಕೆಳಗೆ ಬಿದ್ದಂತೆ ಒದ್ದಾಡುವ ನನ್ನ ಮಿತಿಗಾಗಿ ಹಾಗೆ ನಡದುಕೊಂಡಿರಬಹುದಲ್ಲವೆ? 
ಹಾಗಂತ ನಮ್ಮ ಖಾಲಿತನ, ನಿರಾಸೆಯ ಪ್ರಸಂಗಗಳಲ್ಲಿ  ವ್ಯದ್ಯಕೀಯ ಚಿಕಿತ್ಸೆಯ ಮೊರೆ ಹೋಗದೆ, ಆಪ್ತರೆನಿಸಿ, ಆಪ್ತರಂದು ಖಾತ್ರಿಯಾದವರೊಂದಿಗೆ ಹಂಚಿಕೊಳ್ಳಬೇಕು.
ಪ್ರತಿಯೊಬ್ಬರ ಬದುಕನ್ನು ಒಮ್ಮೆ 'ಆತ್ಮಹತ್ಯೆ'ಯ ಭೂತ ಬಡಿದುಕೊಂಡು, ಅವರನ್ನು ಬಲಿ ತೆಗೆದುಕೊಳ್ಳಲು ಕಾರಣ   ಅವರ ಒಂಟಿತನ ಹಾಗೊ ಆಪ್ತ ಸಮಾಲೋಚನೆಯ ಕೊರತೆ. ಒಂಟಿತನವನ್ನು ಏಕಾಂತವನ್ನಾಗಿ ಪರಿವರ್ತಿಸಿಕೊಳ್ಳದವರು ಸಾವಿನ ಬಾಗಿಲು ತಟ್ಟಿ ಇಲ್ಲವಾಗುತ್ತಾರೆ.
ವೃತ್ತಿ ಪಲ್ಲಟ ಹಾಗೂ ತಳಮಳಗಳ ತವಕದಲ್ಲಿದ್ದಾಗ ನಾನು ಕೂಡ ಖಾಸಗಿ ಗೆಳೆಯರೊಂದಿಗೆ ಭಾವನೆಗಳನ್ನ ಮುಕ್ತವಾಗಿ ಹಂಚಿಕೊಂಡು ಅವರ ಸಹನೆಯನ್ನು ಅಗ್ನಿ ಪರೀಕ್ಷೆಗೆ ಒಡ್ಡಿದ್ದೇನೆ. ಆಗ ಉಳಿದವರು ಕಡೇ ತನಕ ಉಳಿಯುತ್ತಾರೆ ಎಂಬ ವಿಶ್ವಾಸವು ನನಗಿತ್ತು.
ಕಳೆದೆ ದಶಕದಿಂದ ವ್ಯಕ್ತಿತ್ವ ವಿಕಸನದ ಟ್ರೇನಿಂಗ್ ಗುರು ಎನಿಸಿಕೊಂಡು  ಶಹಬ್ಬಾಸಗಿರಿ ಗಿಟ್ಟಿಸಿದ ನಾನೇ ಅಗ್ನಿ ಪರೀಕ್ಷೆಯಲ್ಲಿ ಬೆಂದಾಗ  ಅದಕ್ಕೆ ಪರಿಪೊರ್ಣತೆ ಸಿಕ್ಕಿತು.


ನನ್ನ  ಆತಂಕ ಭಯ ಕಂಡವರು ನಾನ್ಯಾವ ಸೀಮೆ ಟ್ರೇನರ್ ಎಂದು  ಮೂದಲಿಸಿದರೂ ಸಹಿಸಿಕೊಂಡೆ. ಇಷ್ಟು ದಿನ ತರಬೇತಿಯ ಪಠ್ಯವಾಗಿ 'ನಿರ್ಭಯ ' ಸೇರಿಕೊಳ್ಳಲು ನನ್ನ ಆತಂಕದ ದಿನಗಳು ಕಾರಣವಾದವು. 
ಈಗ ಅಂತಿಮ ನಿರ್ಣಯಕ್ಕೆ ಬಂದಿದ್ದೇನೆ, ನಿರ್ಭಯ ನಿರ್ಲಿಪ್ತತೆ ಹಾಗೊ ನಿರಾಕರಣೆಯ ತ್ರಿಸೂತ್ರಗಳು, ಈಗ ನನ್ನ ಬದುಕಿನ  ಸಮರ್ಥ ಸೂತ್ರಗಳೆನಿಸಿವೆ. 
ಅದೇ ಜಾಡು ಹಿಡಿದುಕೊಂಡು ಈಗ ಯುಧ್ಧಕ್ಕೆ  ಸನ್ನದ್ಧನಾಗಿದ್ದೇನೆ. ಕೆಲದಿನ ತುಕ್ಕು ಹಿಡಿದಿದ್ದ  ಲೇಖನಿ , ನಾಲಿಗೆಗೆ ಕೆಲಸ ಕೊಟ್ಟಿದ್ದೇನೆ. ಆರು ತಿಂಗಳ  'ಏಕಾಂತ'ದ  ಹಿತದಿಂದ ಪಕ್ವವಾಗಿದ್ದೇನೆ ಎಂಬ ಆತ್ಮವಿಶ್ವಾಸ. 
ನಾವು ಅನಿವಾರ್ಯವಾಗಿ ಆತಂಕಕ್ಕೆ ಒಳಗಾದಾಗ ಆ ತಪ್ಪನ್ನು ಬೇರೆಯವರ ಮೇಲೆ ಹೊರಿಸಲು ನೋಡುತ್ತೇವೆ. ಆ ಸ್ಥಿತಿಗೆ ನಮ್ಮ ನಿರ್ಣಯಗಳು ಹಾಗೊ ಆಯ್ಕೆಗಳೇ ಕಾರಣ ಎಂಬುದನ್ನು ಒಪ್ಪಲೇಬೇಕು.
ಅವರಿಂದ ಹೀಗಾಯ್ತು, ಇವರಿಂದ ಹೀಗಾಯ್ತು , ಅವರನ್ನು ನಂಬಿದ್ದೇ ತಪ್ಪಾಯಿತೆಂದು ಬೇರೆಯವರನ್ನು ದೂಷಿಸುವುದು.
ನನ್ನ ಏಳು-ಬೀಳುಗಳಿಗೆ, ಸರಿ-ತಪ್ಪುಗಳಿಗೆ ನಾನೇ ಕಾರಣ , ನನ್ನ ನಿರ್ಣಯಗಳೇ ಕಾರಣವೆಂದು ಒಪ್ಪಿಕೊಂಡಿದ್ದೇನೆ.
ಸೋಲುವಂತೆ ಭಾಸವಾಗಿರುವ ಸಂಗತಿಗಳನ್ನು ಏರುವ ಮೆಟ್ಟಿಲುಗಳು ಎಂದು ಸ್ವೀಕರಿಸಿದ್ದೇನೆ.  "ಆಗುವುದೆಲ್ಲಾ ಒಳ್ಳೆಯದು", 'ಬಾರದು ಬಪ್ಪದು, ಬಪ್ಪದು ತಪ್ಪದು', ಎಂಬ ವಾಣಿಯನ್ನು  ಮೆಲುಕು ಹಾಕುತ್ತೇನೆ.
ಸತ್ತೆನೆಂದೆನಬೇಡ, ಸೋತೆನೆಂದನಬೇಡ  ಎಂಬ ಕಗ್ಗದ ಸಾಲುಗಳನ್ನ ಮಂತ್ರಿಸುತ್ತಾ ಬಾಳನೆದುರಿ ಸಬೇಕು.
ನಿರ್ಭಯ ಸೂತ್ರವ ವಿವಿಧ ಮಗ್ಗುಲಗಳನ್ನು. ಭಯದ ಮೊಲದ ವಿವಿಧ ಹಂತಗಳನ್ನು ಎದುರಿಸುವುದನ್ನು ರೂಢಿಸಿಕೊಳ್ಳಬೇಕು.
ನಿರ್ಭಯ, ನಿರಾಕರಣೆ ಹಾಗೊ ನಿರ್ಲಿಪ್ತತೆಯ ಸೂತ್ರಗಳನ್ನು ಗೆಳೆಯರು ಮೆಚ್ಚಿಕೊಂಡಿದ್ದಾರೆ. ವ್ಯಾಖ್ಯಾನಿಸುವ ಬಗೆಯನ್ನು ಪ್ರಶಂಶಿಸಿದ್ದಾರೆ. ಅವುಗಳನ್ನು ಸಮರ್ಥವಾಗಿ ಅಳವಡಿಸಿಕೊಂಡು rank-     ಗಳಿಸದೇ ಹೋದರು, ಕನಿಷ್ಟ ಪಾಸಾಗಿದ್ದರೆ, ತರಬೇತಿ ಅರ್ಥಪೊರ್ಣವೆನಿಸಬಹುದನಿಸಿದೆ. 
-ಸಿದ್ದು ಯಾಪಲಪರವಿ

1 comment:

  1. ಇನ್ನೂ ಮೇಲೆ ನಾನು ತುಸು ಈ 'ನಿರ್ಭಯ' ಸೂತ್ರ ಅಳವಡಿಸಿಕೊಂಡು ನೋಡುತ್ತೇನೆ. ಒಳ್ಳೆಯ ಬರಹ ಸಾರ್.
    http://badari-poems.blogspot.in/

    ReplyDelete