Thursday, September 5, 2013

ಒಬ್ಬ ಮನುಷ್ಯ

ಕಥೆಗಳನ್ನು ಓದುವಾಗ ನಮಗರಿವಿಲ್ಲದಂತೆ ನಾವೇ ಪಾತ್ರಗಳಾಗಿ ಬಿಡುತ್ತೇವೆ. ಆದರೆ ಕಥೆಗಾರ ಕಥೆ ಹೇಳುವಾಗ ಯಾರು ಕಥೆ ಹೇಳಬೇಕು ಎನ್ನುವುದನ್ನು ನಿರ್ಧರಿಸುತ್ತಾನೆ.
  ಅಂತೆಯೇ ಈ ಕಥೆಯಲ್ಲಿ ಕಥೆಗಾರನೇ ಘಟನಾನುಭವಗಳನ್ನು ವಿವರಿಸುವುದರಿಂದ ಅವನೇ ನಿರೂಪಕನಾಗಿದ್ದಾನೆ. 
ಇಲ್ಲಿನ ನಿರೂಪಕನ ಅನುಭವ, ಓದುಗನ ಅನುಭವವೂ ಆಗುತ್ತದೆ. 
ಅಲೆಮಾರಿ ನಿರೂಪಕನಿಗೆ ಗೊತ್ತು ಗುರಿಯಂಬುದು ಇರುವುದಿಲ್ಲ. ಅದಕ್ಕೆ ಅಲ್ಲವೇ ಅಲೆಮಾರಿ ಅನ್ನುವುದು?
ಯಾವುದಕ್ಕೂ ಹೇಸದ ಜನರು ವಾಸಿಸುವ ಪ್ರದೇಶಕ್ಕೆ ನಿರೂಪಕ ಹೋಗಿರುತ್ತಾನೆ. ವಿಪರೀತ ಹಣಕಾಸು ತೊಂದರೆ ಎದುರಿಸುತ್ತಿರುವ ನಿರೂಪಕ ಹೊಟ್ಟೆ ತುಂಬ ತಿನ್ನಲಾಗದ ಸ್ಥಿತಿಯಲ್ಲಿರುತ್ತಾನೆ. 
ಬೆಳಗಿನ ಉಪಹಾರ, ಮಧ್ಯಾಹ್ನದ ಊಟಕ್ಕೆ ಗತಿ ಇರದ ನಿರೂಪಕ ಹಣ ಉಳಿಸಲೆಂದೇ ಮಧ್ಯಾನ್ಹ ನಾಲ್ಕು ಗಂಟೆಗೆ ಎಳುತ್ತಾ ಇರುತ್ತಾನೆ. ರೂಮಿನ ಬಾಡಿಗೆ ಉಳಿಸಲೆಂದೇ ಗಲೀಜು ಪ್ರದೇಶದಲ್ಲಿರುವ ಕತ್ತಲೆ ಕೋಣೆಯಲ್ಲಿ ನೆಲೆಸಿರುತ್ತಾನೆ. ಜನ ಹೊಟ್ಟೆಪಾಡಿಗಾಗಿ ಏನೆಲ್ಲಾ ಮಾಡುವ ಪ್ರದೇಶವಿದು. ಕೊಲೆ, ಸುಲಿಗೆ, ಕಳ್ಳತನ ಮಾಡುತ್ತಾ, ಅನೇಕ ರೋಗ ರುಜಿನಗಳನ್ನು ಲೆಕ್ಕಿಸದೇ ಬದುಕುವ ಅನಿವಾರ್ಯತೆ. 
ಬೇರೆಯವರಿಗೆ ಆಗುವ ನೋವು-ದುಃಖವನ್ನು ಲೆಕ್ಕಿಸದೇ ಕ್ರೂರವಾಗಿ ವರ್ತಿಸುವ ಜನರ ಮಧ್ಯದ ಅನುಭವವನ್ನು ಕಥೆಗಾರ ನಮ್ಮೊಂದಿಗೆ ಹಂಚಿಕೊಳ್ಳುತ್ತಾನೆ. 
ಹಾಗಂತ ಬರೀ ಕೆಟ್ಟವರು ಎಂದು ವ್ಯಾಖ್ಯಾನಿಸುವುದು. ಕ್ಲಿಷ್ಟಕರವಾದರೂ ಒಳ್ಳೆಯವರು ಎಂದು ಒಪ್ಪಿಕೊಳ್ಳುವುದು ಅಸಾಧ್ಯ. ಅಲ್ಲಿನ ಕೆಲವು ಜನ ಕಾವಲುಗಾರರಾಗಿಯೂ ಕೆಲಸ ಮಾಡುತ್ತಾರೆ ಯಾಕೆಂದರೆ ಇವರಿಗೆ ಹೇಗಾದರೂ ಹಣಗಳಿಸಿ ಬದುಕುವುದೇ ಮುಖ್ಯ ಅಷ್ಟೇ!.
ನಿರೂಪಕನದು ವಲಸಿಗ ಕಾರ್ಮಿಕರಿಗೆ ಇಂಗ್ಲಿಷಿನಲ್ಲಿ ವಿಳಾಸ ಬರೆಯೋದನ್ನು ಕಲಿಸೋ ಕಾಯಕ ಅದರಿಂದ ಉಳಿದಿರೋ ೧೪ ರೂಪಾಯಿಯಲ್ಲಿ ಜೀವನ ಸಾಗಿಸುವ ಇರಾದೆ. 
ಜೇಬಿನಲ್ಲಿ ಉಳಿದಿರೋ ೧೪ ರೂಪಾಯಿ ಪರ್ಸಿನಲ್ಲಿ ಸೇರಿಸಿಕೊಂಡು ಟೀಕು ಟಾಕಾಗಿ ಕೋಟು-ಪ್ಯಾಂಟು ಧರಿಸಿಕೊಂಡು ಊಟಕ್ಕೆ ತೆರಳುತ್ತಾನೆ.
ಹದಿನಾಲ್ಕು ರೂಪಾಯಿ ಇರುವ ಲೆಕ್ಕಾಚಾರ ಇಟ್ಟುಕೊಂಡೇ ಚಪಾತಿ, ಮಾಂಸದ ಸಾರು ಹಾಗೂ ಚಹಾ ಸೇವಿಸುತ್ತಾನೆ. ಹನ್ನೊಂದು ಅಣೆ ತೆಗೆಯಲು ಜೀಬಿಗೆ ಕೈಹಾಕಿದಾಗ ಆಘಾತವಾಗುತ್ತದೆ. 
ಜೇಬಿನಲ್ಲಿರುವ ಪರ್ಸನ್ನು ಯಾರೋ ಲಪಟಾಯಿಸಿದ್ದು ಗೊತ್ತಾದಾಗ ಗಾಭರಿಯಾಗುತ್ತಾನೆ. ಯಾರೋ ಪಿಕ್ ಪಾಕೀಟ್ ಮಾಡಿದ್ದಾರೆ ಎಂದು ಹೋಟೆಲ್‌ನವನಿಗೆ ತಿಳಿಸಿ, ಕೋಟು ಇಲ್ಲೇ ಇಟ್ಟು ಹೋಗಿ ಹಣ ತಂದು ಕೊಡುತ್ತೇನೆ ಎಂದಾಗ ಕ್ರೂರಿ ಹೋಟೆಲ್‌ನವ ಗಹಗಹಿಸಿ ನಗುತ್ತಾನೆ. 
ಹಣ ಇಡು ಇಲ್ಲಾಂದ್ರೆ, ಇಲ್ಲಾಂದ್ರೆ ನಿನ್ನ ಕಣ್ಣು ಕಿತ್ತು ಹಾಕ್ತೀನಿ ಎಂದು ಅಬ್ಬರಿಸಿದ. ಬಟ್ಟೆ ಬಿಚ್ಚಿ ಹಾಕು ಎಂದು ಕ್ರೂರವಾಗಿ ಆಜ್ಞಾಪಿಸಿದ.
ಅವನ ಕ್ರೂರ ಆಜ್ಞೆಗೆ ಅನುಗುಣವಾಗಿ ಕೋಟ್ ಬಿಚ್ಚಿದೆ. 
ಅವನು ಶರ್ಟ್ ಬಿಚ್ಚಲು ಹೇಳಿದ
ಶರ್ಟ್ ಬಿಚ್ಚಿದೆ.
ನನ್ನ ಬೂಟು ಬಿಚ್ಚಲು ಹೇಳಿದ
ಬೂಟು ಬಿಚ್ಚಿದೆ. ಇವನು ನನ್ನ ಮಾನ ಹರಾಜು ಹಾಕ್ತಾನೆ ಎಂಬ ಭಯ, ಆತಂಕ ಶುರು ಆಯ್ತು. ಎಲ್ಲಿ ಪ್ಯಾಂಟು ಬಿಚ್ಚಿ ಹಾಕು ಅಂತಾನೋ ಎಂಬ ಭ್ರಮೆಯಲ್ಲಿದ್ದಾಗಲೇ ಪ್ಯಾಂಟು ಬಿಚ್ಚಲು ಆದೇಶಿಸಿದ. ಅಲ್ಲಿದ್ದವರೆಲ್ಲಾ ನನ್ನ ಬಗ್ಗೆ ಅನುಕಂಪ ತೋರಿಸಬಹುದು ಅಂದುಕೊಂಡಿದ್ದೆ. ಆದರೆ ಅವರು ಅವನಿಗಿಂತ ವಿಕೃತರು. ಗಹಗಹಿಸಿ ನಗುತ್ತಾ ನನಗೆ ಆಗುವ ಅಪಮಾನವನ್ನು ಅನುಭವಿಸುವ ತರಾತುರಿಯಲ್ಲಿದ್ದರು. 
ಪ್ಯಾಂಟ್ ಬಿಚ್ಚು ಅಂದಾಗ ಒಳಗೆ ಏನೂ ಹಾಕಿಕೊಂಡಿಲ್ಲ ಎಂದೆ. ಇಲ್ಲಾ ಬಿಚ್ಚಿಹಾಕು ಎಂದಾಗ ಬೆಚ್ಚಿ ಬಿದ್ದೆ ನಾನು ಸಂಪೂರ್ಣ ಬೆತ್ತಲಾಗಿ ಕಣ್ಣು ಕೀಳಿಸಿಕೊಂಡು ರಸ್ತೇಲಿ ತಿರುಗೋ ಭಯಂಕರ ದೃಶ್ಯ ಕಲ್ಪಿಸಿಕೊಂಡು ದುಃಖಿತನಾದೆ. 
ಇದೆಂತಹ ಕ್ರೂರತನ ಎನಿಸಿತು. ಇನ್ನೇನು ಪ್ಯಾಂಟ್ ಬಟನ್ ಬಿಚ್ಚಿಹಾಕಬೇಕು ಅನ್ನುವಾಗಲೇ ಆಗ ಒಬ್ಬ ಮನುಷ್ಯ ಕೂಗುತ್ತಾನೆ. ಅವನ ಬಿಲ್ ನಾನು ಕೊಡುತ್ತೇನೆ ಎಂದು ಅಪರಿಚಿತನೊಬ್ಬ ರಕ್ಷಣೆಗೆ ಧಾವಿಸುತ್ತಾನೆ.
ಅಪರಿಚಿತ ನಾನು ಕೊಡಬೇಕಾಗಿದ್ದ ಬಿಲ್ ಕೊಟ್ಟು ಬಟ್ಟೆಹಾಕಿಕೊಂಡು ತನ್ನ ಜೊತೆಗೆ ಬರುವಂತೆ ಆದೇಶಿಸುತ್ತಾನೆ.
ದೂರದ ನಿಗೂಢ ಸ್ಥಳಕ್ಕೆ ಕರೆದೊಯ್ದಾಗ ಅವನ ಮಾನವೀಯತೆಗಾಗಿ ಮೂಕ ವಿಸ್ಮಿತನಾಗುತ್ತೇನೆ. ಪರಸ್ಪರ ಹೇಳಲು ಇಬ್ಬರಿಗೂ ಹೆಸರಿಲ್ಲವಲ್ಲ!
ನಿರ್ಜನವಾದ ಒಂದು ಸೇತುವೆ ಹತ್ತಿರ ಕರೆದುಕೊಂಡು ಹೋದ ಅಪರಿಚಿತ ಹೇಳುತ್ತಾನೆ. ನೋಡು ನೀನು ಇಲ್ಲಿಂದ ಹೋಗುವಾಗ ತಿರುಗಿ ನೋಡದೇ ಹೋಗಬೇಕು, ಯಾರಾದರೂ ನನ್ನನ್ನು ನೊಡಿದ್ದೀಯ ಎಂದು ಕೇಳಿದರೆ ಇಲ್ಲಾ ಅಂತ ಹೇಳಬೇಕು ಎಂಬ ಕರಾರಿನೊಂದಿಗೆ ತನ್ನ ಜೇಬಿನಲ್ಲಿದ್ದ ಬಗೆ ಬಗೆಯ ಐದು  ಪರ್ಸಗಳನ್ನು ಹೊರತೆಗೆದು ಇದರಲ್ಲಿ ನಿನ್ನದು ಯಾವುದು ಎಂದು ಕೇಳುತ್ತಾನೆ. 
ನಿರೂಪಕ ತನ್ನ ಪರ್ಸ ತೆಗೆದುಕೊಂಡು ನೊಡುತ್ತಾನೆ. ತನ್ನ ಹಣ ಸರಿಯಾಗಿರುತ್ತೆ. ದೇವರು ನಿನಗೆ ಒಳ್ಳೆಯದು ಮಾಡಲಿ ಅಂತ ಅಪರಿಚಿತ ಹೇಳುತ್ತಾನೆ. ಏನು ಹೇಳಬೇಕೆಂದು ತಿಳಿಯದ ನಿರೂಪಕನೂ ಪುನಃ ನಿನಗೆ ದೇವರು ಒಳ್ಳೆಯದು ಮಾಡಲಿ ಎಂದು ಉಚ್ಛರಿಸುತ್ತಾನೆ. ಅಲ್ಲಿಗೆ ಕಥೆಮುಗಿಯುತ್ತದೆಯಾದರೂ, ನಮ್ಮ ಮನಸ್ಸಿನಲ್ಲಿ ಏಳುವ ಪ್ರಶ್ನೆಗಳು ಮುಗಿಯುವುದಿಲ್ಲ. ಇಷ್ಟೊಂದು ಕರುಣಾಮಯಿಯಾದ ಅವನು ಪಿಕ್ ಪಾಕೆಟ್ ಯಾಕೆ ಮಾಡಿದ? ನಂತರ ತನ್ನ ನೆರವಿಗೆ ಯಾಕೆ ಧಾವಿಸಿದ ಎಂದು ಪ್ರಶ್ನಿಸಿಕೊಳ್ಳುತ್ತಾನೆ.
ಮನುಷ್ಯನ ಒಳ್ಳೆಯತನವನ್ನು ಗ್ರಹಿಸುವುದು, ಒಳ್ಳೆಯವರು, ಕೆಟ್ಟವರು ಎಂದು ಯಾರನ್ನಾದರೂ ನಿರ್ಧರಿಸುವುದು ಸಮಂಜಸವೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ, ಎಲ್ಲರನ್ನೂ ಕಾಡುತ್ತದೆ. ಮನುಷ್ಯನನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ ಎನಿಸುತ್ತಲೇ ನಾವು ನಿರುತ್ತರರಾಗುತ್ತೇವೆ.      

ಮೂಲ : ಬಶೀರ್
(ಅನುವಾದ)
  ಸಿದ್ದು ಯಾಪಲಪರವಿ
 ಇಂಗ್ಲಿಷ್ ಉಪನ್ಯಾಸಕ
ಕೆ.ವ್ಹಿ.ಎಸ್.ಆರ್. ಕಾಲೇಜು
ಗದಗ

No comments:

Post a Comment