Wednesday, August 3, 2016

ಮುಖವಾಡ ಬೇಡ

ನಮ್ಮ ಬದುಕಿನಲ್ಲಿ ವೈಯಕ್ತಿಕ ಹಾಗೂ ಸಾರ್ವಜನಿಕ ಮುಖಗಳಿರುತ್ತವೆಯಾದರೂ ಎರಡನ್ನು ಸಮತೋಲನಗೊಳಿಸುವ ಜವಾಬ್ದಾರಿಯೂ ಇದೆ.
ಅದರಲ್ಲೂ ವಿಶೇಷವಾಗಿ ಜವಾಬ್ದಾರಿಯುತ , ಉನ್ನತ ಸ್ಥಾನದಲ್ಲಿರುವವರು ಇನ್ನೂ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳುವ ಅಗತ್ಯವಿದೆ.
ಮಾನ್ಯ ಮುಖ್ಯ ಮಂತ್ರಿಗಳ ಖಾಸಗಿ ದುಃಖದ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮಾದರಿಯೆಂಬಂತೆ ವರ್ತಿಸಿದ್ದು ಅಭಿನಂದನೀಯ.
ಅದೇ ಮಾದರಿಯಲ್ಲಿ ರಾಜ್ಯದ ಹಿತದೃಷ್ಟಿಯಿಂದ ಕೂಡಾ ಸಂಯಮದಿಂದ ಪಕ್ಷಾತೀತವಾಗಿ ನಡೆದುಕೊಳ್ಳಲಿ ಎಂದು ಆಶಿಸೋಣ.
ರೈತರು , ಅಧಿಕಾರಿಗಳ ಆತ್ಮಹತ್ಯೆ , ಮಹಾದಾಯಿ ಯೋಜನೆ ಹಾಗೂ ಇತರ ಜ್ವಲಂತ ಸಮಸ್ಯಗಳನ್ನು ಪಕ್ಷಗಳ ಹಿತದೃಷ್ಟಿಯಿಂದ ನೋಡದೇ ಜನಪರವಾಗಿ ಆಲೋಚಿಸುವುದು ಹಿತಕರ.
ಎಲ್ಲಾ ವಿಷಯಗಳಿಗೂ ಮುಂದುವರೆದ ರಾಷ್ಟ್ರಗಳ ಉದಾಹರಣೆಗೆ ತೆಗೆದುಕೊಳ್ಳುವ ನಾವು ರಾಜಕೀಯ ವಿಷಯ ಬಂದಾಗ ವಿಮುಖರಾಗಿಬಿಡುತ್ತೇವೆ.
ಅಧಿಕಾರದಿಂದ ನಿರ್ಗಮಿಸಿದ ಇಂಗ್ಲೆಂಡ್ ಪ್ರಧಾನಿ ನಮಗೆ ಆದರ್ಶ ಆಗಲಾರ.
ಭಾರತದ ರಾಜಕಾರಣ ಕೋಟೆ ಕೊತ್ತಲಲಿ ದೇಶವನ್ನಾಳಿದ ಮಹಾರಾಜ ಮಾಡೆಲ್ ನಂತೆ ಇರುವುದು ದುರಂತವಲ್ಲದೆ ಇನ್ನೇನು ?
ಬದ್ಧತೆ ಹಾಗೂ ಪ್ರಾಮಾಣಿಕತೆ ಇಲ್ಲದ ರಾಜಕೀಯ ಪ್ರೇರಿತ ಹೇಳಿಕೆಗಳು ಅಸಂಬದ್ಧ ಎಂದು ಗೊತ್ತಿದ್ದರೂ ಈ ತರಹದ ಹಿಪೊಕ್ರಸಿಯ ಮೇಲಾಟ ನಿಲ್ಲಲಿ ಎಂಬ ಸದಾಶಯ ನನ್ನಂತಹವರದು.
ಬೃಷ್ಟಾಚಾರ , ಸ್ವಜನ ಪಕ್ಷಪಾತ ಹಾಗೂ ರಾಜಕೀಯ ಮಹತ್ವಾಕಾಂಕ್ಷೆ ಸಂಪೂರ್ಣವಾಗಿ ನಿಲ್ಲಲಿ ಎಂದು ಬಯಸುವಷ್ಟು ಜಾಣ (?) ನಾನಲ್ಲವಾದರೂ ಜನಸಾಮಾನ್ಯರಿಗೆ ಅರ್ಥವಾಗುವ  ಕೃತಕ ಹೇಳಿಕೆಗಳು ನಿಲ್ಲಲಿ ಎಂದು ಬಯಸುವೆ.

----ಸಿದ್ದು ಯಾಪಲಪರವಿ

No comments:

Post a Comment