Tuesday, January 1, 2019

2018 ರ ಹಿನ್ನೋಟ

*2018 ರ ಅವಕಾಶ, ಅನುಕೂಲ- ಅವಲೋಕನ*

ಆತ್ಮಾನುಸಂಧಾನ ಪ್ರತಿವರ್ಷ ಅನಿವಾರ್ಯ.
ಏನೇನೋ ಕನಸಿನ ಯೋಜನೆಗಳು, ಗಂಭೀರವಾದ ಪ್ರಯತ್ನ ಸಾಗಿದ್ದಂತೂ ನಿಜ. ಯಶಸ್ಸಿಗಾಗಿ ಕೊಂಚ ಸಮಾಧಾನ ಬೇಕು. ಕಾಯಬೇಕು ಭರವಸೆ ಕಳೆದುಕೊಳ್ಳದೇ.

*ಪಿಸುಮಾತುಗಳ ಜುಗಲ್*( ಜುಗಲ್ ಕವಿತೆಗಳು) ಹಾಗೂ *ಅಸಂಗತ ಬರಹಗಳು* (ಬಿಡಿ ಲೇಖನಗಳು) ಗಮನ‌ ಸೆಳೆದ ಕೃತಿಗಳು ಚಾಲ್ತಿಗೆ ಬಂದು ಚರ್ಚೆಗೆ ಒಳಪಟ್ಟವು.‌

*ಪಿಸುಮಾತುಗಳ ಜುಗಲ್* ಬಿಡುಗಡೆ ಸ್ಮರಣೀಯ.

ವಿ.ಎಂ.ಮಂಜುನಾಥ ಹಾಗೂ ಅನೇಕ ಸಾಂಸ್ಕೃತಿಕ ಮನಸುಳ್ಳ ಗೆಳೆಯರು ಚಿತ್ರಕಲಾ ಪರಿಷತ್ ಆವರಣದಲ್ಲಿ ಬಿಡುಗಡೆ ಮಾಡಿದರು.‌
ನಟ ರಾಮಕೃಷ್ಣ, ಜೋಗಿ, ನಿರ್ಮಲಾ ಎಲಿಗಾರ, ವನಮಾಲಾ ಸಂಪನ್ನಕುಮಾರ, ಕೃತಿ ಪರಿಚಯಿಸಿದ ಬೇಲೂರು ರಘುನಂದನ, ನಿರೂಪಕ ನಿನಿ ಲೋಕದ ಎಂ.ಜಿ.ವಿನಯಕುಮಾರ,ಕವಿತೆ ಓದಿದ ಹೊಸ ಕಲಾವಿದರು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಬಹುಪಾಲು ಆತ್ಮೀಯರು ಖುದ್ದಾಗಿ ಬಂದು ಮನಸಾರೆ ಹಾರೈಸಿ ನನ್ನ ಹೊಸ ಪ್ರಯೋಗಕ್ಕೆ ಬೆನ್ನು ತಟ್ಟಿದರು.
ಈ ತರಹದ ಪ್ರಯೋಗಗಳನ್ನು ಓದುಗರು ಸ್ವೀಕರಿಸುವ ಕುರಿತ ನಮ್ಮ ಆಲೋಚನೆಯ ಗೊಂದಲಕ್ಕೆ ಅರ್ಥವಿಲ್ಲ ಅನಿಸಿತು. ಸರಿ ಕಂಡದ್ದನ್ನು ಮಾಡುತ್ತ ಸಾಗಬೇಕು. ಬೇರೆಯವರ ಕುರಿತು ಆಲೋಚಿಸುವಷ್ಟು ಸಮಯ ಯಾರಿಗೂ ಉಳಿದಿಲ್ಲ.‌

*ಜುಗಲ್ ಚರ್ಚೆ*

ಬೀದರ, ಕಲಬುರ್ಗಿಯ ಸಂಗಾತಿಗಳು ಈ ಕೃತಿ ಕುರಿತ ಚರ್ಚೆ ಇಟ್ಟುಕೊಂಡಿದ್ದರು.

ಬೀದರಿನಲ್ಲಿ ರಜಿಯಾ ಬಳಬಟ್ಟಿ, ಕಲಬುರ್ಗಿಯಲ್ಲಿ ವಿಕ್ರಮ್ ವಿಸಾಜಿ ಛಂದ ಮಾತನಾಡಿದರು. ಹಲವು ಅನುಮಾನಗಳ ದೂರ ಮಾಡಿದರು.

ಕಾಂತಾವರದ ಕನ್ನಡ ಸಂಘದವರು ಬಿಡುಗಡೆ ಮಾಡಿ ಕರಾವಳಿಯ ಗಂಭೀರ ಓದುಗರಿಗೆ ಕೃತಿ ತಲುಪಿಸಿದ್ದು ವಿಶೇಷ.
ಡಾ.ನಾ.ಮೊಗಸಾಲೆ ಅವರು ಜುಗಲ್ ಕುರಿತ ವಿಮರ್ಶಾ ಸಂಕಲನ ತರುವ ಸದುದ್ದೇಶ ಹೊಂದಿದ್ದಾರೆ.‌
ಒಂದಿಷ್ಟು ಗೆಳೆಯರು ಪ್ರತಿಕ್ರಿಯೆ ಬರೆದು ಕಳಿಸಿದ್ದಾರೆ ಕೂಡ. ಓದುಗರು ಬಹುವಾಗಿ ಮೆಚ್ಚಿದ್ದಾರೆ, ಅದೇ ಪ್ರಶಸ್ತಿ, ಪುರಸ್ಕಾರ ಏನೆಲ್ಲ.‌
ಕೆಲವು ಮಾಧ್ಯಮದ ಗೆಳೆಯರು ಮೌಖಿಕವಾಗಿ ಖುಷಿ ಹಂಚಿಕೊಂಡಿದ್ದಾರೆ.
ಇಂತಹ ಪ್ರಯೋಗಕ್ಕೆ ಮನಸು ಮಾಡಿದ *ಸಿಕಾ* ಕಾವ್ಯನಾಮದ ಕಾವ್ಯಶ್ರೀ ಮಹಾಗಾಂವಕರ ಅವರಿಗೆ ಥ್ಯಾಂಕ್ಸ್ ಹೇಳಬೇಕು.

                                 ***

*ಅಸಂಗತ ಬರಹಗಳು*

ಅಸಂಗತವನ್ನು ಮೈಸೂರಿನ ರೂಪ ಪ್ರಕಾಶನ ಮಿತ್ರರಾದ ಯು.ಎಸ್.‌ಮಹೇಶ್ *ಅಸಂಗತ ಬರಹಗಳು* ಲೇಖನ ಸಂಗ್ರಹ  ಹೊರತಂದರು.
ಹೊಸ ಬಗೆಯ ಬರಹ ಎಂಬ ಶಬ್ಬಾಸಗಿರಿ ಪಡೆದುಕೊಂಡೆ.
ಹುಬ್ಬಳ್ಳಿಯ ಗೆಳೆಯ ಪ್ರಾಚಾರ್ಯರಾದ ಸಂದೀಪ್ ಬೂದಿಹಾಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಪುಸ್ತಕಾರ್ಪಣೆಗಾಗಿ ಪ್ರತಿ ಕೊಂಡಿದ್ದಾರೆ.

*ನಮ್ಮ ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕರಾದ ಡಾ.ಬಿ.ಎಫ್. ದಂಡಿನ ಅವರು ಹಾಗೂ ನನ್ನ ಮೆಂಟರ್ ಡಾ.ಆರ್.ಎಂ.ರಂಗನಾಥ ಅವರಿಗೆ ಕೃತಿ ಅರ್ಪಿತವಾಗಿದೆ*
ಎರಡು ಕೃತಿಗಳು ತಾಂತ್ರಿಕವಾಗಿ 2017 ರ ಲೆಕ್ಕಕ್ಕೆ ಸೇರಿಕೊಂಡವು. ಈ ವರ್ಷ ಲೋಕಾರ್ಪಣೆ ಆಗಬೇಕಾಗಿದೆ.

                              ***

*ಏಪ್ರಿಲ್‌ 11 ವಿಶೇಷ ದಿನ*

ಚಂದನ ವಾಹಿನಿಯಲ್ಲಿ ಪ್ರಸಾರವಾಗುವ *ಶುಭೋದಯ ಕರ್ನಾಟಕ* ಅತ್ಯಂತ ಜನಪ್ರಿಯ ನೇರ ಪ್ರಸಾರದ ಕಾರ್ಯಕ್ರಮ. ಅಧಿಕಾರಿ ನಿರ್ಮಲಾ ಎಲಿಗಾರ ಅವರ ಕಲ್ಪನೆಯ ಕೂಸು ಆರೋಗ್ಯಪೂರ್ಣವಾಗಿ ಬೆಳೆಯುತ್ತಿದೆ.
ತುಂಬಾ ಸಣ್ಣವನಾದ ನನಗೆ103 ನೇ ಸಂಚಿಕೆಯಲ್ಲಿ ಭಾಗವಹಿಸಿ ಮುಕ್ತವಾಗಿ ಮಾತನಾಡುವ ಅವಕಾಶ. ಎರಡು ಗಂಟೆಯ ನೇರ ಪ್ರಸಾರದಲ್ಲಿ ಅರ್ಥಪೂರ್ಣವಾಗಿ ಮಾತನಾಡಲು ಕಾರಣರಾದವರು ನಿರೂಪಕರಾದ *ಕಲಾದೇಗುಲ ಶ್ರೀನಿವಾಸ್ ಹಾಗೂ ಮಂಗಲಾ ನಾಗರಾಜ ಜಮಖಂಡಿ*.
ಅವರ ಶೈಲಿ ನನ್ನ ಉತ್ತೇಜಿಸಿತು.
ಕಾರ್ಯಕ್ರಮದ ಪರಿಕಲ್ಪನೆ, ಸೆಟ್ಟಿಂಗ್, ತಂತ್ರಜ್ಞಾನದ ಗುಣಮಟ್ಟ ತುಂಬ ಎತ್ತರ.‌ ಹೀಗಾಗಿ ಈ ಪ್ರಸಾರ ನನ್ನ ನಾ ಅರಿಯಲು, ಜನ ಗಮನಿಸಲು ಕಾರಣವಾಯಿತು.
ನಮ್ಮ ಸಾಧನೆ ಮುಖ್ಯ ಅಲ್ಲ, ಅದನ್ನು ಗುರುತಿಸುವ ಅವಕಾಶ ಕೂಡ ಅಷ್ಟೇ ಮುಖ್ಯ. ನನಗೆ ಆ ಅವಕಾಶ ಬೇಗ ಸಿಕ್ಕಿತೆಂಬ ಸಂತಸ.‌
YouTube ಚಾನಲ್ ತುಂಬ ಶುಭೋದಯ ಕರ್ನಾಟಕ ಹರಿದಾಡುತ್ತ ಇದೆ. ಕಾರಣರಾದ ಎಲ್ಲರಿಗೂ ಮತ್ತೊಮ್ಮೆ ಥ್ಯಾಂಕ್ಸ್.

                                ***

*ಮೇ ತಿಂಗಳಲ್ಲಿ ದಾಂಪತ್ಯಕ್ಕೆ ಬೆಳ್ಳಿ ಸಡಗರ*

*ಮದುವೆ ಎಂಬುದು ನೆಪ ನೆಂಟರು ಬರುವುದೇ ಮುಖ್ಯ* ಕವಿ ಕುಮಾರವ್ಯಾಸನ ಸಾಲುಗಳ‌ ಮರುವ್ಯಾಖ್ಯಾನ. ನಾವು ಮಾಡುವ ಕೆಲಸಗಳಿಗೆ ಅನ್ವರ್ಥಕ.
ಗೆಳೆಯರು, ಬಂಧುಗಳು ಕಾರ್ಯಕ್ರಮ ಸರಳವಾಗಿ ಆಚರಿಸಿ ಹಾರೈಸಿದರು. *ಸಹನೆಯ ದಾಂಪತ್ಯಕ್ಕೆ ರೇಖಾ* ಕಾರಣಳಾಗಿದ್ದಾಳೆ. ಏಳು-ಬೀಳು ನಿಂತೇ‌ ಇಲ್ಲ. ಏರಿಳಿತದ ಬದುಕ ಬಂಡಿ ಸಾಗಿಯೇ‌ ಇರುತ್ತದೆ. ಏನೇ ಬಂದರೂ ಸಮಚಿತ್ತದಿ, ಸಮರಸದಿ ಸಾಗಿರಬೇಕು.
ಮಕ್ಕಳಾದ ಮುನ್ನುಡಿ, ಅಭಿವ್ಯಕ್ತಿ ಖುಷಿಯಿಂದ ಓಡಾಡಿ ಮದುವೆ ನೆನಪಿಸಿದರು.‌

*ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ ಹಾಗೂ ಆಥರ್ ಕ್ರಾಫ್ಟ್*

ಕರಾವಳಿ ಉಡುಪಿ ಜಿಲ್ಲೆಯ ನಿಟ್ಟೆ ಶಿಕ್ಷಣ ರಂಗದ ಬಹುದೊಡ್ಡ ಕೊಡುಗೆ.
ಅಲ್ಲಿನ ಇಂಜಿನಿಯರಿಂಗ್ ಕೊನೇ ವರ್ಷದ ವಿದ್ಯಾರ್ಥಿಗಳು ಬರೆಯವ- ಓದುವ ಕಲೆಗಾರಿಕೆ ಬೆಳೆಸಿಕೊಳ್ಳಲು *Authorcraft* ಸಂಘಟನೆ ಮೂಲಕ ಸಾಹಿತ್ಯದ ಚಟುವಟಿಕೆ ಮಾಡುತ್ತಾರೆ.
ಅಭಿಷೇಕ್ ಪಾವಸ್ಕರ್, ಜ್ಯೋತಿ ಪಾಟೀಲ್ ಹಾಗೂ ಗೆಳೆಯರು ವಿಡಿಯೋ ಸಂದರ್ಶನ ಆಯೋಜಿಸಿದ್ದರು. ಆ ಮಾಲಿಕೆಯೂ YouTube ಸೇರಿಕೊಂಡಿದೆ.‌

*Yourquote*  App ಮೂಲಕ ಮನದ ಮಾತು ಬರೆಯಲು ಈ ಯುವಕರು ಕಾರಣರಾದರು.‌

ಕರಾವಳಿಯ ಅಲ್ಲಮಪ್ರಭು ಪೀಠದ ಹೊಣೆಗಾರಿಕೆ ಹೆಗಲಿಗೇರಿದೆ, ಇನ್ನೂ ಕಾರ್ಯಪ್ರವೃತ್ತವಾಗಬೇಕಾಗಿದೆ.

*ಸಾಮಾಜಿಕ ಜಾಲತಾಣದ ಬರಹಗಳು*

ಕವನ, ಲೇಖನಗಳು, ಮನದ ಮಾತು, ಕತೆಗಳು, ಲವ್ ಕಾಲ, ಓಲೆಗಳು ಹೀಗೆ ಎಲ್ಲ ಬಗೆಯ ಬರಹಗಳ ತಾಣವೇ ಸೋಸಿಯಲ್ ಮಿಡಿಯಾ. ಒಳ್ಳೆಯದು ಕೆಟ್ಟದು ಎಲ್ಲ ಕಡೆ ಇರುವಂತೆ ಇಲ್ಲಿಯೂ ಇದೆ. ಸರಿಯಾಗಿ ಬಳಕೆಯಾಗಬೇಕು ಅಷ್ಟೇ. ಗಂಭೀರ ಓದುಗರನ್ನು ಇಲ್ಲಿ ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ಇದೊಂದು ಸಂಗ್ರಹ ಯೋಗ್ಯ ನೆಲೆಯೂ ಹೌದು. ಯಾಕೋ ಇದರ ದಾಸರಾಗಿದ್ದೇವೆ ಅನಿಸಿದರೂ ಬರೆಯುವ ಕಸುವಂತೂ ಹೆಚ್ಚಾಗಿದೆ. ಬೆಂಕಿಯ ಸಹವಾಸ ಮೈ ಸುಡದಂತೆ ಎಚ್ಚರವಹಿಸಬೇಕು.

                                  ***

*ತೋಂಟದಾರ್ಯ ಪೂಜ್ಯರ ಅನಿರೀಕ್ಷಿತ ಅಗಲಿಕೆ*

ನನ್ನ ವೈಯಕ್ತಿಕ ಬದುಕಿನ ರೂವಾರಿಗಳು, ನಾಡಿನ ಪ್ರಖರ ಚಿಂತಕರು, ಅಪ್ಪಟ ಸನ್ಯಾಸಿಗಳಾದ ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ಅತ್ಯಂತ ಅನಿರೀಕ್ಷಿತವಾಗಿ ಹೋಗಿಬಿಟ್ಟರು. ತುಂಬಲಾಗದ ನಷ್ಟ ಎಂದರೇನೆಂಬ ಅನುಭವವಾಯಿತು. ಬಹುದೊಡ್ಡ ಶೂನ್ಯ ಭಾವ.
ಪೂಜ್ಯರ ಅಗಲಿಕೆ ಯಾರೂ ಊಹಿಸಿರಲಿಲ್ಲ.‌ ಸ್ವತಃ ಅವರಿಗೂ ಅನಿರೀಕ್ಷಿತ. ಅಗಲಿಕೆಯ ಸಂಕಷ್ಟ ನಿವೇದಿಸಲಾಗದ್ದು.‌ ಕೊನೆ
ಎರಡು ಸಲದ ಭೇಟಿಯಲ್ಲಿ ಬರಹದ ಕುರಿತು ಮಾತಾಡಿ ಬೆನ್ನು ತಟ್ಟಿದ್ದರು. ಅಸಂಗತ ಬಿಡುಗಡೆಗೆ ಕೂಡ ಒಪ್ಪಿಕೊಂಡಿದ್ದರು.

*ಶ್ರೀ ಬಸವ ಟಿ.ವಿ*

ಈ. ಕೃಷ್ಣಪ್ಪನವರು ವೈಯಕ್ತಿಕ ಸಂಪತ್ತನ್ನು ವಿನಿಯೋಗಿಸಿ ಆರಂಭಿಸಿದ‌ ಬಸವ ಟಿ.ವಿ. ಬಗ್ಗೆ ಪೂಜ್ಯರಿಗೆ ಅಪಾರ ಅಭಿಮಾನವಿತ್ತು. ಅದೇ ಕಾರಣಕ್ಕೆ ಪೂಜ್ಯರ ಸಾಧನೆ ಕುರಿತು ಆರು ಕಂತುಗಳಲ್ಲಿ ನನ್ನ ಅನುಭವ ಹಂಚಿಕೊಂಡೆ.
ವಚನ ವಿಶ್ಲೇಷಣೆಗೂ ಪೂಜ್ಯರ ಪ್ರೇರಣೆಯೇ ಕಾರಣ.
ಸಾವಿರಾರು ಪುಟ ಬರೆಯಬೇಕು, ನೂರಾರು ತಾಸು ವಿಡಿಯೋ ಮೂಲಕ ಮಾತನಾಡಿ ದಾಖಲಿಸುವ ಮನೋಭೂಮಿಕೆಗೆ ಪೂಜ್ಯರ ಪ್ರೇರಣೆಯೇ ಕಾರಣ.

                                  ***

*ವರ್ಷದ ಕೊನೆಗಿನ ಮತ್ತೊಂದು ಬೇಸರ*

ಸಾಹಿತ್ಯ, ಸಂಸ್ಕೃತಿ ಹಾಗೂ ವೈಯಕ್ತಿಕ ಬದುಕಿನ ಸಂಗಾತಿಗಳು, ಹಿರಿಯರಾದ ಡಾ.ಜಿ.ಬಿ.ಪಾಟೀಲ್ ಸಿಂಗಪುರ್ ಪ್ರವಾಸಕ್ಕೆ ಹೋದಾಗ ಅನಾರೋಗ್ಯಕ್ಕೆ ಈಡಾದರು. ಅದು ಸಾವು ಬದುಕಿನ ಸೆಣಸಾಟ. ಆದರೆ ಸುದೈವ ಅವರು ಮರುಜನ್ಮ ಪಡೆದು ವಾಪಾಸಾಗಿದ್ದಾರೆ. ಏರಿತದ ಬದುಕಿನ ಹೊಡೆತದಲ್ಲಿ ಕೆಲವು ಆಘಾತಗಳನ್ನು ತಡೆದುಕೊಳ್ಳಲಾಗುವುದಿಲ್ಲ.‌

ನಾವೇ ಕಟ್ಟಿಕೊಂಡ ಪುಟ್ಟ ಕೋಟೆಯಲಿ ಸಾವಿರಾರು ಜನ ಇರುವುದಿಲ್ಲ. ಈ ಪುಟ್ಟ ಇನ್ನರ್ ಸರ್ಕಲ್ಲಿನಲ್ಲಿ ಇರುವ ಕೆಲವೇ ಕೆಲವರು ಕೆಲ ಕಾಲ ದೂರಾದರೂ ತಡೆದುಕೊಳ್ಳಲಾಗುವುದಿಲ್ಲ.
ಈಗವರು ಮೊದಲಿನಂತಾಗಿ ಜೊತೆಗೆ ನಿಲ್ಲುತ್ತಾರೆಂಬ ಸಡಗರ ಮರುಕಳಿಸಿದೆ.
*ಇನ್ನರ್ ಸರ್ಕಲ್* ಇನ್ನೂ ಗಟ್ಟಿಯಾಗಿ ಉಳಿದು ಸದಾ ಕಾಲ ಉಲಿಯುತಿರಲಿ ಎಂಬ ಸಣ್ಣ ಆಸೆ.

                                ***

*ವಿಶ್ವಾಸ್ ಮುದಗಲ್ ಹಾಗೂ ದಿ ಲಾಸ್ಟ್ ಅವತಾರ್*

ಖ್ಯಾತ ಇಂಗ್ಲಿಷ್ ಕಾದಂಬರಿಕಾರ, ಉದ್ಯಮಿ ವಿಶ್ವಾಸ್ ಮುದಗಲ್ ಅವರ ಹೊಸ ಕಾದಂಬರಿ *ದಿ ಲಾಸ್ಟ್ ಅವತಾರ್* ಬಿಡುಗಡೆಯ ಹೊಣೆಗಾರಿಕೆ ನನ್ನ ಮೇಲೆ ಹಾಕಿದಾಗ ಖುಷಿಯಾಯಿತು.
ಹುಬ್ಬಳ್ಳಿಯ ಸಪ್ನಾ ಬುಕ್ ಹೌಸ್ ಹಾಗೂ ಹಾರ್ಪರ್ ಕಾಲಿನ್ಸ್ ಸಹಯೋಗದ ಸಮಾರಂಭ ತೃಪ್ತಿ ಎನಿಸಿತು.
ಈ ಕುರಿತ ಪತ್ರಿಕಾ ಗೋಷ್ಟಿ ವರ್ಷದ ಕೊನೆ ಕಾರ್ಯಕ್ರಮ.

                                ***

ತೃಪ್ತಿಕರವಾಗಿ ಬರೆಯುವ ಕಲೆಗಾರಿಕೆ ಸಿದ್ಧಿಸಿದೆ ಎಂಬ ಸಮಾಧಾನ. ಇನ್ನೂ ಅರ್ಥಪೂರ್ಣವಾಗಿ ಬರೆಯುವ ಹಾದಿಯಲಿ ಕ್ರಮಿಸಬೇಕು.

ಭೂತ ಮಾಯವಾಗಿದೆ,  ಭವಿಷ್ಯ ಗೊತ್ತಿಲ್ಲ, ವರ್ತಮಾನ ಮಾತ್ರ ನಮ್ಮೊಂದಿಗಿದೆ. ವರ್ತಮಾನದ ಸಮರ್ಥ ಬಳಕೆಯ ಧ್ಯಾನದೊಂದಿಗೆ ಕೊಂಚ ವಿರಮಿಸುವೆ.

*Good bye to 2018*

*ಸಿದ್ದು ಯಾಪಲಪರವಿ*

No comments:

Post a Comment