Tuesday, December 11, 2018

ಪ್ರಜಾಪ್ರಭುತ್ವ...

*ಸಂವಿಧಾನ ಹಾಗೂ ಭಾರತೀಯ ಪ್ರಜಾಪ್ರಭುತ್ವ ಅಮರ*

ನಮ್ಮ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಅಮರ ಅಜರಾಮರ ಎಂಬುದನ್ನು ಮತದಾರ ಎತ್ತಿ ಹಿಡಿದಿದ್ದಾರೆ.
ಪಂಚರಾಜ್ಯಗಳ ಫಲಿತಾಂಶ ಈ ದೇಶದ ಪ್ರಜೆಗಳು ಏಕಚಕ್ರಾಧಿಪತ್ಯ ಸಹಿಸುವುದಿಲ್ಲ ಎಂಬುದ ನಿರೂಪಿಸಿದ್ದಾರೆ.

ಕಳೆದ ಲೋಕಸಭೆಯ ಫಲಿತಾಂಶದಿಂದಾಗಿ *ಕಾಂಗ್ರೆಸ್ ಮುಕ್ತ ಭಾರತ* ದಂತಹ ಅಹಂಕಾರದ ಮಾತುಗಳು ಮತದಾರರನ್ನು ಕೆಣಕಿದ್ದು ಸಹಜ.

ಆದರೆ ಜಾಣ ಮತದಾರ ಸದಾ ಜಾಗೃತನಾಗಿ ಬರುವ ಚುನಾವಣೆಗಾಗಿ ಮೌನವಾಗಿ ಕಾಯುತ್ತಾನೆ.

ನಮ್ಮ ಸಂವಿಧಾನದಲ್ಲಿ ವಿರೋಧ ಪಕ್ಷಕ್ಕೆ ಅದರದೇ ಆದ ಘನತೆ, ಗೌರವ ಇದೆ. ಅದನ್ನು ಅಣಕಿಸಿದ ಇಂದಿರಾಗಾಂಧಿ ಅವರಿಗೆ ಜನ ಪಾಠ ಕಲಿಸಿದ ಇತಿಹಾಸವನ್ನು ರಾಜಕೀಯ ಪಕ್ಷಗಳು ಮರೆಯಬಾರದು.

ರಾಜಕೀಯ ಪಕ್ಷ ಹಾಗೂ ಅದರ ನಾಯಕರು ಮತದಾರ ಮನಸು ಮಾಡಿದರೆ ಗೌಣವಾಗಿ ಬಿಡುತ್ತಾರೆ.

ದೇಶದಲ್ಲಿ ಅದ್ಭುತ ಬದಲಾವಣೆ ಬಯಸಿ ಮೋದಿಯವರಿಗೆ ವಿಪರೀತ ಬಹುಮತ ಕೊಟ್ಟು ಗೆಲ್ಲಿಸಿದರು. ಆದರೆ ಅವರ
ಅನೇಕ ನಿರ್ಣಯಗಳು ಜನಸಾಮಾನ್ಯರಿಗೆ ಪ್ರಯೋಜನವಾಗಲಿಲ್ಲ.
ನೋಟು ಅಮಾನ್ಯೀಕರಣ, ಜಿ.ಎಸ್.ಟಿ., ಇಳಿಯದ ಪೆಟ್ರೋಲಿಯಂ ಬೆಲೆಗಳು, ಜಮಾ ಆಗದ ಹದಿನೈದು ಲಕ್ಷ, ಅಪ್ರಸ್ತುತ ಮಂದಿರ ನಿರ್ಮಾಣ...ಇತ್ಯಾದಿ… ಇತ್ಯಾದಿ.

ಕಾಂಗ್ರೆಸ್ ಪಕ್ಷದಲ್ಲಿ ಮೋದಿಗೆ ಸಮಾನರಾದ ನಾಯಕರಿರದಿದ್ದರೂ, ಬಿಜೆಪಿ ಬೇಡವಾದ ಕಾರಣದಿಂದಾಗಿ ಕಾಂಗ್ರೆಸ್ ಅನಿವಾರ್ಯವಾಯಿತು.

ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಪರಿಣಾಮ ಕೊಡುವ ತಾಕತ್ತು ಭಾರತೀಯ ಮತದಾರನಿಗಿದೆ.

*ಹಾಗಂತ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದೇ ಟ್ರೆಂಡ್ ಇರುತ್ತದೆ ಎಂದು ತಪ್ಪಾಗಿ ಭಾವಿಸಲಾಗದು*.
ಅಂದಿನ ಮನಸ್ಥಿತಿ ಮತ್ತೆ ಬದಲಾಗಿರುತ್ತದೆ, ಈ ಪರಿಣಾಮದಿಂದ ಪಾಠ ಕಲಿತರೆ ಮತ್ತೆ ಮತದಾರ ಬದಲಾಗುತ್ತಾನೆ.

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲೆಂದು ಮತದಾರ ಸದಾ ಬಯಸುವುದರಿಂದ ಈ ರೀತಿಯ ಆಟ ಆಡಿ ಪಾಠ ಕಲಿಸುತ್ತಾನೆ.

ನಮ್ಮ ರಾಜಕೀಯ ನಾಯಕರು ಬಹು ಬೇಗ ಇತಿಹಾಸ ಮರೆತುಬಿಡುವುದು ಬಹು ದೊಡ್ಡ ದುರಂತ. ‌

ಇತಿಹಾಸ ಮರೆಯದೇ ವರ್ತಮಾನದ ಜನಸಾಮಾನ್ಯರ ಭಾವನೆ ಗ್ರಹಿಸಿಕೊಂಡು ಆಡಳಿತ ನಡೆಸಲೆಂದು ಮತದಾರ ಬಯಸುತ್ತಾನೆ. ಪಕ್ಷಗಳ ಅಜೆಂಡಾ ಅವನಿಗೆ ಮುಖ್ಯವಾಗುವುದಿಲ್ಲ.

ಜನತಂತ್ರ ವ್ಯವಸ್ಥೆಯಲ್ಲಿ ಯಾರೂ ಮುಕ್ತಲಾಗಲಾರರು, ಆಗಲೂಬಾರದು, ಹಾಗಾದರೆ ಮನುಷ್ಯ ದುರಹಂಕಾರಿಯಾಗಿ ಡಿಕ್ಟೇಟರ್ ಆಗಿಬಿಡುತ್ತಾನೆ.‌

ಸರ್ವಾಧಿಕಾರಿ ಮನು ಮನೋಧರ್ಮ ಮಾನವನಿಗೆ ಬೇಡಾದ ಸಂಗತಿ ಎಂಬುದನ್ನು ತಿಳಿಹೇಳಲು ಈ ಚುನಾವಣಾ ಪರಿಣಾಮಗಳು ನೆರವಾಗಿಬಿಡುತ್ತವೆ.
ರಾಜಕೀಯ ಪಕ್ಷಗಳು ಪಾಠ ಕಲಿಯುತ್ತವೆ ಎಂಬ ಭರವಸೆ ಇಟ್ಟುಕೊಂಡು ರಾಜಕಾರಣದ ತಲ್ಲಣಗಳ ಸಕಾರಾತ್ಮಕವಾಗಿ ಎದುರಿಸೋಣ.

  *ಸಿದ್ದು ಯಾಪಲಪರವಿ*

No comments:

Post a Comment