Monday, December 4, 2017

ಕೈ ಹಿಡಿದು ನಡೆಸು ತಂದೆ

*ಕೈ ಹಿಡಿದು ನಡೆಸು ತಂದೆ*

ಹುಟ್ಟಿದಾಗ ಬಾಯಲ್ಲಿ ಇಟ್ಟ
ಬಂಗಾರದ ಚಮಚೆ ಹಾಲು ತುಂಬಿದ 
ಬೆಳ್ಳಿಯ ಬಟ್ಟಲು ಕಲಸಿದ ಗೋಡಂಬಿ
ಸಕ್ಕರೆಯ ತುಂಬ ಬರೀ ಅಕ್ಕರೆ

ನಸುನಗುತ ಬೆಳೆದ ಬಾಲ್ಯದ ಸಿರಿಸಂಪದ
ಈಗೊಂದು ಹೀಗೊಂದು ಬರೀ ನೆನಪು

ಮುಂದೆ ಸಿರಿಯೊಳಡಗಿದ ಬಡತನ
ಹೇಳಲು ತೋರಲು ಎಲ್ಲವೂ ಉಂಟು
ಆದರೆ ಬರಿಗೈ ದಾಸನಾಗಿ ಅಲೆಯುವ
ಖಾಲಿ ಕೈ ಫಕೀರ

ಹೋರಾಟ ನೋವ ನುಂಗುತ ಸಾಗಿದ
ಪಯಣದಲಿ ದಣಿವರಿಯದ ಧಣಿತನದ
ಮೆರುಗಿನ ಮುಸುಕು

ಆರ್ಧ ಹಾದಿ ಸಾಗಿದರೂ ನಿಲ್ಲದ ಹೋ
ರಾಟ ಒಂಟಿ ದುಃಖಕೆ ಇಲ್ಲ ಯಾರ ಸಾಧ್

ಹಾಡಬೇಕು ನಲಿಯಬೇಕು ಅಪ್ಪ
ಹೊರಿಸಿದ ನೊಗ ಹೊರಬೇಕು
ಹೊಲ ಹರಗಬೇಕು ಕಳೆ ತೆಗೀಬೇಕು
ಬೆಳಿ ಬೆಳೀಬೇಕು

ಸಾಕೀ ಧಣಿತನದ ಮುಖವಾಡ ಅಂಗಲಾಚಿ
ಬೇಡಬೇಕು ಮಹಾ ದೇವನ
ಕೊಡು ತಂದೆ ಹಿಡಿ ತುಂಬ ಹಿಡಿ
ಹಿಡಿ ರೊಕ್ಕ ಕರಗಿ ನೀರಾಗಲು

ದುಃಖ-ದುಮ್ಮಾನ  ದುಗುಡ

ಇನ್ನೆಷ್ಟು ದಿನ ಈ ಅಗ್ನಿಪರೀಕ್ಷೆ ಸೋತು
ಕರಕಲಾಗದೇ ಎದ್ದು ಹೋದರು ನಮ್ಮ
ಹಿರಿಯರು ಸೋಲನೊಪ್ಪದೇ ಅಪ್ಪದೇ
ಕೊಟ್ಟ ಮಾತು ತಪ್ಪದೇ

ಕೈಕಾಲು ದಣಿದಿರಲು ದಾರಿ ಸಾಗೀತು
ಹೇಗೆ ? ನಗು ಅರಳುವದಾದರೂ ಹೇಗೆ ?

ಮಾತು ಮೌನವಾಗುವ ಮುನ್ನ
ಉಸಿರು ನಿಟ್ಟುಸಿರಾಗಿ ನಿಲುವ
ಮೊದಲೇ ಕೃಪೆ ಮಾಡು
ತಂದೆ ನಾ ಕಾಲನ ಹೊಡೆತಕೆ ಸಿಕ್ಕು
ನಲುಗಿ ನರಳುವ ಮುನ್ನ.

---ಸಿದ್ದು ಯಾಪಲಪರವಿ

No comments:

Post a Comment