Tuesday, March 15, 2011

ತಿರುಗಿ ನೋಡುವ ಸಂಭ್ರಮದಲಿ . . . .


ಕೋಟಿ, ಕೊಟಿ ಕೊಟ್ಟರು ನೀನು ಕಳೆದುಹೋದ ಇತಿಹಾಸವನ್ನು ಕೊಳ್ಳಲಾರೆ ಎಂಬ ಮಾತು ಕಳೆದು ಹೋದ ಇತಿಹಾಸ ವನ್ನ್ಗುನೆನಪಿಸುತ್ತದೆ.
ನಾಡಿಗೆ ಸುಧೀರ್ಘ ಇತಿಹಾಸವಿರುತ್ತದೆ. ಆ ಇತಿಹಾಸದಲ್ಲಿ ಮನುಷ್ಯ ಒಂದು ಸಣ್ಣ ಭಾಗ ವ್ಯಕ್ತಿಯ ಪುಟ್ಟ ಇತಿಹಾಸದಲ್ಲಿಯೂ ಹುಡುಕಿದರೆ ಏನೆಲ್ಲ ಸಿಗುತ್ತದೆ.
ಆದರೆ ಆ ಹುಡುಕಾಟ ಗಂಭೀರವಾಗಿರಬೇಕು ಎನ್ನುವುದಕ್ಕಿಂತ ಪ್ರಾಮಾಣಿಕವಾಗಿರಬೇಕು. ಮುಗ್ಧವಾಗಿರಬೇಕು.
ಎಲ್ಲಿಯವರೆಗೆ ನಮ್ಮಲ್ಲಿ ಮುಗ್ಧತೆಯಿರುತ್ತದೆಯೋ ಅಲ್ಲಿಯವರೆಗೆ ಬಾಲ್ಯವಿರುತ್ತದೆ.
ಮುಗ್ಧತೆಯಲ್ಲಿ ಬಾಲ್ಯವಿದೆಯೋ ಬಾಲ್ಯದಲ್ಲಿ ಮುಗ್ಧತೆಯಿದೆಯೋ ಎಂದು ಹುಡುಕಾಡುವಾಗಲೇ, ಬೆಳೆದ ವಯಸ್ಸು, ಜ್ಞಾನವೃದ್ಧಿ ಮುಗ್ಧತೆಯನ್ನು ಕಳಿಸಿದುಕೊಳ್ಳುತ್ತದೆ.
ಜ್ಞಾನಕ್ಕಾಗಿ ಹಂಬಲಿಸುವ ಮನಸು, ಜ್ಞಾನ ಕಸಿದುಕೊಳ್ಳುವ ಮುಗ್ಧತೆಗಾಗಿ ಪರಿತಪಿಸುತ್ತದೆ. ಕಳೆದು ಹೋದ ಬಾಲ್ಯದೊಂದಿಗೆ, ಅಳಿದು ಹೋದ ಮುಗ್ಧತೆಯ ಹುಡುಕಾಟ ಆರಂಭವಾದ ಹೊತ್ತಿನಲ್ಲಿ ಹೆಕ್ಕಿ ಹೆಕ್ಕಿ ತೆಗೆದು ಬಾಲ್ಯವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ.

ಬಾಲ್ಯದಲ್ಲಿ ಶಾಲೆಗೆ ಸೇರಿದಾಗಿನಿಂದ ಕಾಲೇಜು ಮೆಟ್ಟಿಲೇರುವರೆಗಿನ ಘಟನೆಗಳನ್ನು ಮಾತ್ರ ಇಲ್ಲಿ ದಾಖಲಿಸಿದ್ದೇನೆ. ಹದಿನೈದು ವರ್ಷಗಳವರೆಗಿನ ಸಿಹಿ-ಕಹಿ ನೆನಪುಗಳನ್ನು ಸಕಾರಾತ್ಮಕವಾಗಿ, ಪ್ರಾಮಾಣಿಕವಾಗಿ ಹಂಚಿಕೊಂಡಿದ್ದೇನೆ.
ಈ ಹಂತದಲ್ಲಿ ಒಮ್ಮೆ ನಿಂತು ಇಪ್ಪತ್ತು ವರ್ಷಗಳ ಹಿಂದೆ ತಿರುಗಿ ನೋಡಿದಾಗ ಸಂಭ್ರಮವಾಯಿತು.

ಬಾಲ್ಯದಲ್ಲಿನ ಸಂಗತಿಗಳನ್ನು ವ್ಯಕ್ತಿಗಳನ್ನು ನಕಾರಾತ್ಮಕವಾಗಿ ಚಿತ್ರಿಸಲು ಮನಸಾಗಲಿಲ್ಲ. ಹತ್ತು ಹಲವು ಸಂದರ್ಭ ಕಾರಣವಾಗಿರಬಹುದು. ಅದಕ್ಕೆ ಯಾರೂ ಕಾರಣರಲ್ಲ. ಒಳ್ಳೆಯದು, ಕೆಟ್ಟದು ಎಂದು ವಿಂಗಡಿಸುವುದರಲ್ಲಿ ಏನರ್ಥ ?

ನಡೆದದ್ದು ನಡೆದು ಹೋಗಿದೆ. ಕಳೆದು ಹೋದದ್ದು ಹುಡುಕಿದರೂ ಸಿಗುವುದಿಲ್ಲ.
ಅಂದಿನ ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಜೀವನ ಕುಟುಂಬದ ಮೌಲ್ಯಗಳು ಇಂದು ನಮ್ಮೂರಲ್ಲಿ ಅಲ್ಲ ಎಲ್ಲಿಯೂ ಸಿಗುತ್ತಿಲ್ಲ. ಮರದ ಮೇಲೆ ಕುಳಿತ ಮನಸ್ಸು ಬೇರುಗಳ ಸೆಳೆತಕ್ಕೆ ಸಿಕ್ಕ ಅನುಭವ

ಪ್ರೀತಿ, ವಿಶ್ವಾಸ, ಅವಿಭಕ್ತ ಕುಟುಂಬ ವ್ಯವಸ್ಥೆ, ಅಲ್ಲಿನ ನಿಸ್ವಾರ್ಥ ಜೀವಿಗಳು ಪ್ರೀತಿಯಿಂದ ಬೆಳೆಸಿದ ವ್ಯಕ್ತಿಗಳು ಯಾವುದೇ ಕಾರಣಕ್ಕೆ ದ್ವೇಷಿಸಿದರೂ, ಆ ದ್ವೇಷದಲ್ಲಿಯೂ ಬದುಕಿಗೊಂದು ಅರ್ಥ ಒದಗಿಸಿದ ಅನೇಕರು ನನ್ನನ್ನು ನಿತ್ಯ ಕಾಡುತ್ತಾರೆ.

ಅಂದಿನ ಗ್ರಾಮೀಣ ಬದುಕು, ಅಲ್ಲಿನ ರಂಗು ರಂಗಿನ ಕ್ಷಣಗಳು ಇಂದು ಜಾಗತೀಕರಣ ನಗರೀಕರಣದಿಂದಾಗಿ ಮಾಯವಾಗಿವೆ.
ಊರಿಗೆ ಹೋದಾಗ ಹಳೆಯ ಗೆಳೆಯರನ್ನು, ಹಳೆಯ ಸ್ಥಳಗಳನ್ನು ಹುಡುಕಬೇಕೆನಿಸುತ್ತದೆ. ವಾಸ್ತವವಾಗಿ ಅದು ಸಾಧ್ಯವಾಗದೇ ಹೋದಾಗ, ನೆನಪಿನಾಳಕ್ಕೆ ಇಳಿದು ನನ್ನಲ್ಲಿಯೇ ಹೆಕ್ಕಿ ತೆಗೆದಿದ್ದೇನೆ.

ನನ್ನ ಸ್ಮರಣ ಶಕ್ತಿ ಈಗ ಬರೆಯುವ ಕಾಲಕ್ಕೆ ತುಂಬಾ ಶಾರ್ಪ ಆದದ್ದು ಖುಷಿ ತಂದಿದೆ. ಒಮ್ಮೊಮ್ಮೆ ಮಧ್ಯ ರಾತ್ರಿ ಎದ್ದು ಕುಳಿತು ಹಳೆಯ ಸಂಗತಿಗಳನ್ನು ಮನದ ಪರದೆಯ ಮೇಲೆ ಮೂಡಿಸಿಕೊಂಡು ಅಕ್ಷರಕ್ಕಿಳಿಸಿದ್ದೇನೆ.

ಅದನ್ನು ಬ್ಲಾಗನಲ್ಲಿ ಒದಿದ ಗೆಳೆಯರು, ಬಂಧುಗಳು ಅಬ್ಬಾ ! ಭಾರಿ ನೆನಪಲೇ ನಿಂದು, ಎಂದು ಬೆನ್ನುತಟ್ಟಿದ್ದಾರೆ. ಕೈಕೂಡದ ನೆನಪಿನಾಳಕ್ಕೆ ಕೃತಜ್ಞತೆ ಹೇಳಿದರೆ ಕೃತಕವಾಗುತ್ತದೆ.

ಇಲ್ಲಿ ಭಾಷೆಗಿಂತ ಭಾವನೆಗಳಿಗೆ ಒತ್ತು ನೀಡಿದ್ದರಿಂದ ಭಾಷಾ ಅಲಂಕಾರ ಮುಖ್ಯ ಅನಿಸಲಿಲ್ಲ. ನೆನಪುಗಳು ಎಲ್ಲಿ ಕಳೆದು ಹೋಗುತ್ತವೆ ಎಂಬಂತೆ ಹೇಳಬಹುದಾದ ಎಲ್ಲ ಸಂಗತಿಗಳನ್ನು ಹೇಳಿದ್ದೇನೆ. ಸರಿ ಸುಮಾರು ಹನ್ನೆರಡು ವರ್ಷದ ಸಂಗತಿಗಳನ್ನು ಅಸ್ಪಷ್ಠವಾಗಿ ಹರಡಿಟ್ಟಿದ್ದೇನೆ. ಯಾಪಲಪರವಿ ಮನೆತನದ ಮೂರನೇ ತಲೆಮಾರಿನ ಎಲ್ಲ ಬಂಧುಗಳು ಬೆರಗಿನಿಂದ ಅಭಿನಂದಿಸಿದ್ದಾರೆ.
ಹಿಂದಿನ ಕಹಿಗಳೆಲ್ಲ ಕಳೆದು ಸಿಕ್ಕಿರುವ ಸಿಹಿಯನ್ನು ಹಂಚಿಕೊಳ್ಳುವಾಗ ಇದು ಪ್ರಸ್ತುತ ಬ್ಲಾಗ ಮೂಲಕ ಮೂಡಿ ಬಂದ ಲೇಖನಗಳನ್ನು ವಿಶ್ವದ ವಿವಿದೆಡೆ ನೆಲೆಸಿರುವ ಕನ್ನಡ ಸ್ನೇಹಿತರು ಓದಿ ಖುಷಿ ಪಟ್ಟು ಪ್ರೇರಕ ಮಾತುಗಳನ್ನಾಡಿದ್ದಾರೆ.
ಲಿಬಿಯಾದಲ್ಲಿದ್ಸ ಪರಶುರಾಮ ಕಳ್ಳಿ ಹಾಗೂ ಅನಿವಾಸಿ ಬಂಧುಗಳು ಸ್ನೇಹಿತರು ತೋರಿದ ಪ್ರೀತಿ ಅನನ್ಯ.
ಇಲ್ಲಿ ಚಿತ್ರಿತವಾಗಿರುವ ವ್ಯಕ್ತಿಗಳು ಕೇವಲ ನನ್ನ ಬಂದುಗಳಲ್ಲ, ಓದುವ ಎಲ್ಲರ ಬಂಧುಗಳು. ಇಲ್ಲಿನ ಅನುಭವಗಳು ಕೇವಲ ನನ್ನ ಅನುಭವಗಳಲ್ಲ. ನನ್ನಂತಹ ಲಕ್ಷಾಂತರ ಹಳ್ಳಿ ಹೈದರ ಅನುಭವಗಳು. ಖಾಸಗಿ ಅನುಭವಗಳ ಸಾರ್ವತ್ರಿಕರಣ ಇದು ಎಂದು ನಮ್ರವಾಗಿ ಹೇಳಬಯಸುತ್ತೇನೆ.
ಅಮ್ಮ, ಅಜ್ಜ, ಅತ್ತೆ, ಅವ್ವ, ದೊಡ್ಡಪ್ಪ, ಚಿಕ್ಕಪ್ಪಂದಿರು ಬಂಧು ಮಿತ್ರರು ನಮ್ಮ ಬದುಕನ್ನು ಕಟ್ಟಿಕೊಡುವಲ್ಲಿ ಹೇಗೆಲ್ಲ ಕಾರಣರಾಗಿದ್ದಾರಲ್ಲ ಎನಿಸುತ್ತದೆ.
ವ್ಯಕ್ತಿ ಕೇಂದ್ರಿತ ಬದುಕಿನಲ್ಲಿರುವ ಯುವಕರಿಗೆ ನನ್ನ ಅನುಭವಗಳು ಅಚ್ಚರಿ ಎನಿಸಿವೆ. ನನ್ನ ಬರಹಗಳಿಗೆ ಗಟ್ಟಿತನ ಒದಗಿಸಿದ ಹೊಸ ಮಾಧ್ಯಮ ಬ್ಲಾಗಗೆ ರುಣಿಯಾಗಿದ್ದೇನೆ ದೇಶಗಳಲ್ಲಿ ನೆಲೆಸಿರುವ ಅಂಗೈಯಲ್ಲಿನ ಕಂಪ್ಯೂಟರ ಮೂಲಕ ಲೇಖನಗಳನ್ನು ಓದಿ ತುಟಿಯಂಚಿನ ಮೇಲೆ ನಗೆಮೂಡಿಸಿ, ಕಣ್ಣಂಚಿನಲ್ಲಿ ನೀರು ಜಿನುಗಿಸಿದ್ದಕ್ಕಾಗಿ ಕೃತಜ್ಞತೆ ಹೇಳಿದ್ದಾರೆ.
ಅತಿರಂಚಿತವಲ್ಲದ, ವೈಭವೀಕರಣವಿಲ್ಲದ, ಪ್ರಾಮಾಣಿಕ ಅನುಭವಗಳನ್ನು ಪ್ರೀತಿಯಿಂದ ಓದುವ ನಿಮಗೆ ಸಾವಿರದ ಶರಣುಗಳು.

ಕುಷ್ಟಗಿ ಅಜ್ಜನ ಪ್ರೀತಿ ರಾಯಲ್ ಜೀವನ


ಕಾರಟಗಿ ಯಲ್ಲಾದರೆ ಅಮರಣ್ಣ ತಾತ, ಕುಷ್ಟಗಿಯಲ್ಲಿ ಅವ್ವಳ ಅಪ್ಪ ಅಜ್ಜನಾಗಿದ್ದ. ಈ ಭಾಷಾ ಭಿನ್ನತೆಯೊಂದಿಗೆ ಸಾಂಸ್ಕೃತಿಕ ಭಿನ್ನತೆಯನ್ನು ಕುಷ್ಟಗಿಯಲ್ಲಿ ಅನುಭವಿಸುತ್ತಿದ್ದೆ.
ವೃತ್ತಿಯಿಂದ ವಕೀಲರಾಗಿದ್ದ ಗುರುಸಿದ್ದಪ್ಪ ಅಜ್ಜನಿಗೆ ನಾನು ಅತ್ಯಂತ ಪ್ರೀತಿಯ ಮೊಮ್ಮಗ ಅದಕ್ಕೆ ಕಾರಣ ನನ್ನ ವಾಚಾಳಿತನ. ನಿರಂತರ ಕೇಳುವ ಪ್ರಶ್ನೇಗಳಿಂದಾಗಿ ನಾನು ಆತನಿಗೆ ಪ್ರತಿವಾದಿ ವಕೀಲನಂತೆ ಕಾಣುತ್ತಿದ್ದೆ.
ಕುಷ್ಟಗಿ ಸಣ್ಣ ಹಳ್ಳಿಯಾದರೂ ತಾಲೂಕ ಕೇಂದ್ರ. ಹೈದ್ರಾಬಾದಿನಲ್ಲಿ ಲಾ ಪದವಿ ಪಡೆದಿದ್ದ ಅಜ್ಜ ಕುಷ್ಟಗಿಯಲ್ಲಿ ವೃತ್ತಿ ಮುಂದುವರೆಸಿದ್ದರು.
ವಕೀಲಿ ವೃತ್ತಿಯನ್ನು ನ್ಯಾಯಸಮ್ಮತವಾಗಿ ಮಾಡುವುದರೊಂದಿಗೆ ಹಳ್ಳಿ ಜನರೊಂದಿಗೆ ಪ್ರೀತಿಯಿಂದ, ಶೋಷಣೆ ಮಾಡದೇ ನ್ಯಾಯ ಒದಗಿಸುತ್ತಿದ್ದ ಅಜ್ಜ ಹಲವಾರು ಕಾರಣಗಳಿಂದ ಪ್ರಭಾವ ಬೀರಿದರು.
ನಾಲ್ಕು ಜನ ಹೆಣ್ಣು ಮಕ್ಕಳು, ಒಬ್ಬ ಮಗ ಹತ್ತಾರು ಜನ ಮೊಮ್ಮಕ್ಕಳ ತುಂಬು ಸಂಸಾರ. ಗದುಗಿನ ಮೇಲಗಿರಿ ಮನೆತನದ ಅಮ್ಮ ಕಾಶಮ್ಮ ಅಜ್ಜನಿಗಿಂತಲೂ ಬೋಲ್ದ. ಹಟಮಾರಿ ಕೂಡಾ. ಅಮ್ಮನ ಹಟಮಾರಿತನವನ್ನು ತುಂಬಾ ಪೋಸಿಟಿವ್ ಸ್ವೀಕರಿಸುತ್ತಿದ್ದ ಅಜ್ಜ ಸದಾ ಹಸನ್ಮುಖಿ. ಮುಂಜಾನೆ ಯೋಗಾಸನ, ಮಿತ ಆಹಾರ, ಓದು, ಅಧ್ಯಯನದೊಮದಿಗೆ ದಿನಚರಿ ಇಟ್ಟುಕೊಂಡಿದ್ದ ಅಜ್ಜನ ಸೆಳೆತದಿಂದಲೂ ಬಹುಪಾಲು ನನ್ನ ಬಾಲ್ಯವನ್ನು ಕುಷ್ಟಗಿಯಲ್ಲಿ ಕಳೆದೆ.
ಶಾಲೆ ತಪ್ಪಿಸಿ ಕುಷ್ಟಗಿಯಲ್ಲಿ ಕಾಲ ಕಳೆಯುತ್ತಿದ್ದಕ್ಕೆ ನನ್ನ ಬಗ್ಗೆ ಅಜ್ಜ ಅಂತಹ ದೊಡ್ಡ ತಕರಾರು ತೆಗೆಯುತ್ತಿದ್ದಿಲ್ಲ. ಸಿದ್ದನ ಸಾಲಿ ಪಡಸಾಲಿ ಎಂದು ತಮಾಷೆ ಮಾಡುತ್ತಿದ್ದ.
ಅಜ್ಜನ ಕೈ ಹಿಡಿದು ಅನಾಹುತ ಪ್ರಶ್ನೆಗಳನ್ನು ಕೇಳುತ್ತಾ ನಡೆದುಕೊಂಡು ಕೋರ್ಟಿಗೆ ಹೋಗುತ್ತಿದ್ದೆ.
ಅಲ್ಲಿ ಪೋಲಿಸರು, ಕಕ್ಷಿದಾರರು ನೀಡುತ್ತಿದ್ದ ಗೌರವ ಖುಷಿ ತರುತ್ತಿತ್ತು. ಕರಿ ಕೋಟಿನ ವಕೀಲರಿಗೆ ಗೌರವ ಅಪಾರ ಅನಿಸಿತು.
ಇಡೀ ಕೋರ್ಟಿನ ಗೌರವಪೂರ್ವಕ ನಡಾವಳಿಗಳು ವಕೀಲನಾಗಬೇಕು ಎಂದು ಪ್ರೇರೆಪಿಸುತ್ತಿದ್ದವು. ಆದರೆ ಅದು ಸಾಧ್ಯವಾಗಬೇಕಾದರೆ ಶಾಲೆಗೆ ಹೋಗಬೇಕು, ಹೆಚ್ಚು ಓದಬೇಕು ಎಂದು ಹೇಳಿದ ಕೂಡಲೇ ಬ್ಯಾಡಪ್ಪ ಶಾಲೆ ಸಹವಾಸ ಅನಿಸುತ್ತಿತ್ತು. ಅಜ್ಜ ಖಾಸಗಿ ಬದುಕಿನಲ್ಲಿ ಭಾವುಕರಾಗಿದ್ದರು.
ನಾಲ್ಕು ಜನ ಅಳಿಯಂದರ ಬಗ್ಗೆ ಅಭಿಮಾನ ಪ್ರೀತಿ ಗೌರವಗಳಿದ್ದವು. ಹೆಣ್ಣು ಮಕ್ಕಳ ಮೇಲಿನ ಪ್ರೇಮ, ಮೊಮ್ಮಕ್ಕಳ ಮೇಲಿನ ಮಮಕಾರದಲ್ಲಿ ಸಹಜತೆಯಿತ್ತು.

ಗದುಗಿನ ದೊಡ್ಡ ಮನೆತನದ ಅಳಿಯನಾಗಿದ್ದ ಅಜ್ಜ ಹೆಚ್ಚು ಗದುಗಿಗೆ ಹೋಗುತ್ತಿದ್ದಿಲ್ಲ ನಿಜಾಮ ಪ್ರಾಂತದ ಹೈದ್ರಾಬಾದ ಕರ್ನಾಟಕದ ಜನ, ಹಳೆ ಧಾರವಾಡ ಜಿಲ್ಲೆಯ ಜನತೆಗೆ ಹೋಲಿಸಿದರೆ ತುಂಬಾ ಭಾವುಕರು. ಮಹಾರಾಷ್ಟ್ರ ಹಾಗೂ ಇಂಗ್ಲೀಷರ ಪ್ರಭಾವದಲ್ಲಿ ಬೆಳೆದು ತಮ್ಮ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಧಾರವಾಡಿಗರು ತುಂಬಾ ವಾಸ್ತವವಾದಿಗಳು. ಹಳೆ ಧಾರವಾಡ ಜಿಲ್ಲೆಯ ಜನ ಸೌಮ್ಯತೆಯೊಂದಿಗೆ ಕುಟುಂಬದ ಸದಸ್ಯರೊಂದಿಗೆ ಕೂಡಾ ಅಷ್ಟೇ ರಿಸರ್ವ ಆಗಿರುತ್ತಿದ್ದರು.ಅಳಿಯರೇ ಇರಲಿ, ಮಕ್ಕಳೆ ಇರಲಿ ಎಲ್ಲರೊಂದಿಗೂ ಅಷ್ಟಕ್ಕಷ್ಟೇ.

ಅದೇ ಹೈದ್ರಾಬಾದ ಕರ್ನಾಟಕದ ಊರುಗಳಲ್ಲಿ ಅಳಿಯಂದಿರ ಬಗ್ಗೆ ವಿಶೇಷ ಕಾಳಜಿ ಪ್ರೀತಿ, ಅಪಾರ ಗೌರವ ಬೇರೆ. ಕುಷ್ಟಗಿಯ ಅಜ್ಜನಿಗೆ ಗದುಗಿನಲ್ಲಿ ತನಗೆ ಸಿಗದ ಹೆಚ್ಚು ಪ್ರೀತಿಯನ್ನು ಅಳಿಯರಿಗೆ ತೋರಿಸಿದ ಅಂತ ಅನಿಸುತ್ತದೆ.
ಈಗಲೂ ನಾನದನ್ನು ಅನುಭವಿಸುತ್ತೇನೆ. ನಮ್ಮೂರ ಮೂಲ ಗುಣಗಳು ಇಂದಿಗೂ ನನ್ನಲ್ಲಿ ಉಳಿದುಕೊಂಡಿವೆ.

ಅನಗತ್ಯ ಔದಾರ್ಯ, ಭಾವುಕತೆ, ಅತಿಥಿ-ಬಂಧುಗಳಿಗೆ ನೀಡಬೇಕೆನಿಸುವ ರಾಯಲ್ ಟ್ರೀಟಮೆಂಟ್ ಎಷ್ಟೊಂದು ಬೇಡ ಎನಿಸಿ ಹತ್ತಿಕ್ಕಿದ್ದರೂ ಉಕ್ಕಿ ಬರುತ್ತವೆ.
ಅದನ್ನೆ ಧಾರವಾಡ ಸ್ನೇಹಿತರು, ಬಂಧುಗಳು ಹೇಳುವಂತೆ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಅಲ್ಲವೇ ? ಶಿಸ್ತು ಸಂಯಮ, ಮಿತ ಆಹಾರ ಹಾಗೂ ಸಮಚಿತ್ತದಿಂದ ಬದುಕಿದ ಗುರುಸಿದ್ದಪ್ಪ ಅಜ್ಜ ತನ್ನ ಕೊನೆ ದಿನಗಳಲ್ಲಿ ಪಾರ್ಶ್ವವಾಯುವಿನಿಂದಾಗಿ ಅನಾರೋಗ್ಯದಿಂದ ನರಗಳಿದ್ದು ಯಾಕೆ ಎಂದು ಗೊಂದಲ ಉಂಟಾಗಿ ಬೇಸರವಾಯಿತು.
ಅಜ್ಜನ ಕೊನೆಯ ದಿನಗಳಲ್ಲಿ ಆರೈಕೆ ಮಾಡಿದ ಬೇಬಿಕಕ್ಕಿಯ ಬಗ್ಗೆಯೂ ನನ್ನ ಪ್ರೀತಿ ಹೆಚ್ಚಾಯಿತು. ಹಟಮಾರಿ ಸೋದರ ಮಾವ ಕುಷ್ಟಗಿ ಬಿಟ್ಟ ಮೇಲೆ ಅನಾಥ ಪ್ರಜ್ಞೆ ಉಂಟಾಯಿತು.
ಈಗ ಅಲ್ಲಿನ ಎಲ್ಲ ಬಂಧುಗಳು ಚದುರಿಹೋಗಿದ್ದರಿಂದ ವರ್ತಮಾನದಲ್ಲಿ ಕುಷ್ಟಗಿ ಇತಿಹಾಸವಾಗಿ ಉಳಿದಿದೆ. ಅಜ್ಜನ ಬದುಕಿನ ಹಾಗೆ !

ಕಂಠೀರವ ಸ್ಟುಡೀಯೋ ಚಿತ್ರಿಕರಣದ ಅನುಭವ


ಒಮ್ಮೆ ಬೆಂಗಳೂರು ನೋಡಿದ ಸಣ್ಣ ಅನುಭವ ಬೆನ್ನಿಗಿತ್ತು. ಮತ್ತೊಮ್ಮೆ ಸಿನೆಮಾ ಹುಚ್ಚಿನಿಂದ ಬೆಂಗಳೂರಿನತ್ತ ಪಯಣ. ಬಂಧು ಬಪ್ಪುರ ಮಲ್ಕಾ ಜಪ್ಪ ಮಾವು ಭತ್ತದ ವ್ಯಾಪಾರಕ್ಕೆಂದು ಬೆಂಗಳೂರಿಗೆ ಹೋಗುತ್ತಿದ್ದ.
ಅವರ ಲಾರಿ ಹಿಡಿದು ಹೋದರೆ ಪುಕ್ಕಟೆ ಬೆಂಗಳೂರು ತಲುಪುವ ವಿಚಾರ ಆರಂಭವಾಯಿತು.
ಬೆಂಗಳೂರಿಗೆ ಹೋಗಿ, ಒಂದೆರಡು ದಿನ ಇದ್ದು ಶೂಟಿಂಗ್ ನೋಡಿ ಬರಲು ಒಟ್ಟು ಮುನ್ನೂರು ರೂಪಾಯಿ ಬೇಕಾಗಬಹುದೆಂದು ಗೆಳೆಯ ಹೇಳಿದ. ಅಷ್ಟೊಂದು ಹಣ ಮನೆಯಲ್ಲಿ ಕೊಡುತ್ತಿರಲಿಲ್ಲ ನನ್ನ ಓರಿಗೆಯ ಗೆಳೆಯ ಕಿರಾಣಿ ವ್ಯಾಪಾರ ಮಾಡುತ್ತಿದ್ದ, ಅವನು ಸಾಲದ ರೂಪದಲ್ಲಿ ಹಣ ಕೊಡುವುದಾಗಿ ಒಪ್ಪಿದ. ಭತ್ತ ತುಂಬಿದ ಲಾರಿಯಲಿ ಮಲ್ಕಾಜಪ್ಪ ಮಾವನೊಂದಿಗೆ ಬೆಂಗಳೂರು ಟೋಲ್ ನಾಕಾಗಳ ಬಳಿ ಹಣ ನೀಡುತ್ತ ಬೆಂಗಳೂರು ತಲುಪಿದ ನೆನಪು.
ಮಾರ್ಕೆಟ್ನಲ್ಲಿದ್ದ ತಮಿಳು ಏಜೆಂಟರ ಅಂಗಡಿಯಲ್ಲಿ ವಾಸ ಅದರ ಹಿಂದಿದ್ದ ಲಾಜನಲ್ಲಿಯೂ ವಾಸಕ್ಕೆ ವ್ಯವಸ್ಥೆ ಗದ್ದಲದಿಂದ ಕೂಡಿದ ಮಾರುಕಟ್ಟೆ, ಧೂಳು ಎಲ್ಲದು ಹೊಸದೆನಿಸಿದರೂ ಸಹಿಸಿಕೊಂಡೆ.

ಮರುದಿನ ಅಲ್ಲಿದ್ದವನು ವಿಚಾರಿಸಿ ಕಂಠಿರವ ಸ್ಟುಡಿಯೋ ಎಲ್ಲಿದೆ ಎಂದು ಪತ್ತೆ ಹಚ್ಚಿದೆ. ಆಟೋಕ್ಕೆ ಹೋದರೆ ಹತ್ತು ರೂಪಾಯಿ ಆಗುತ್ತ ಅಂದಾಗ ಅಲ್ಲಿಗೆ ಹೋಗುವ ಯೋಜನೆ ರೂಪಿಸಿದೆ.
ಆಟೋದಿಂದ ಇಳಿದು ಹೋದದ್ದಕ್ಕೆ ಏನೋ, ವಾಚಮ್ಯಾನ್ ತಕರಾರು ತೆಗೆಯಲಿಲ್ಲ. ಸೆಲ್ಯೂಟ ಹೊಡೆದು ನಕ್ಕಿದ್ದಕ್ಕೆ ಐದು ರೂಪಾಯಿ ಕೊಟ್ಟೆ.
ಒಳಗೆ ಹೋದಾಗ ನನಗೆ ಇಷ್ಟವಾದ ವಿಸ್ಮಯ ಲೋಕವೊಂದು ತೆರೆದುಕೊಂಡಿತು.
ಪ್ರಭಾಕರ, ಶ್ರೀಪ್ರಿಯಾ, ರಾಜೇಶ್, ಆರತಿ, ಹೀಗೆ ರಜತ ಪರದೆಯ ಮೇಲೆ ಮಹಿಮಾ ಪುರುಷರಂತೆ ಕಂಗೊಳಿಸುತ್ತಿದ್ದ ನಟರೆಲ್ಲ ಎದುರಿಗೆ ಓಡಾಡಿದಾಗ ಗಾಭರಿಯಾದೆ. ನನ್ನನ್ನು ಯಾರು ವಿಚಾರಿಸಲಿಲ್ಲ. ನನ್ನ ಪಾಡಿಗೆ ನಾನು ಶೂಟಿಂಗ್ ನೋಡುತ್ತಾ ಸಾಗಿದೆ.
ಕೋರ್ಟ ಸನ್ನಿವೇಶದ ಚಿತ್ರಿಕರಣ ನಡೆದಿತ್ತು. ಪ್ರಭಾಕರ, ಲೋಕೇಶ ಇದ್ದರು. ಪದೇ, ಪದೇ ರೀ-ಟೇಕ್ ನೋಡಿ ಸಿನೆಮಾ ಬಗ್ಗೆ ಇದ್ದ ಕುತೂಹಲ ಮಾಯವಾಯಿತು. ನಟಿಸಲು ಅವಕಾಶ ನೀಡಿ ಎಂದು ಕೇಳಲು ಹೋದ ನನ್ನ ಆಸೆ ಕಮರಿಹೋಯಿತು.

ರಾಜೇಶ, ಆರತಿ, ಅಭಿನಯಿಸಿದ ಕಲಿಯುಗ ಚಿತ್ರಿಕರಣ ಸಾಗಿತ್ತು. ಒಂದು ಸನ್ನಿವೇಶವನ್ನು ಒಂದು ತಾಸಿನ ತನಕ ಚಿತ್ರಿಕರಿಸಿ ಓ.ಕೆ. ಮಾಡಲಾಯಿತು. ಸಿನೆಮಾ ಬಂದ ಮೇಲೆ ನೋಡಿದರೆ ಅರ್ಧ ನಿಮಿಷದಲ್ಲಿ ಆ ಸನ್ನಿವೇಶ ಮುಗಿದು ಹೋಯಿತು.

ಅಂದು ಶೂಟಿಂಗ್ ನೋಡಿದ ಮೂರು ಸಿನೆಮಾಗಳನ್ನು ಮತ್ತೆ, ಮತ್ತೆ ಕುತೂಹಲದಿಂದ ನೋಡಿದೆ. ನಾನು ಆರಾಧಿಸುತ್ತಿದ್ದ ಹತ್ತಾರು ಕಲಾವಿದರು ಅಲ್ಲಿ ಸಿಕ್ಕರು. ಅವರನ್ನೆಲ್ಲ ಮಾತನಾಡಿಸಿದೆ. ಚೀಲದಲ್ಲಿ ಇಟ್ಟುಕೊಂಡಿದ್ದ ನೋಟಬುಕ್ ತೆಗೆದು ಸಹಿ ಹಾಕಿಸಿಕೊಂಡೆ. ಏನಪ್ಪ ನೋಟ ಬುಕ್ ತಂದಿದ್ದಿಯಾ ಆಟೋಗ್ರಾಫ್ ಇಲ್ಲವಾ ಅಂದರು.
ಸಂಜೆಯವರೆಗೆ ಇದ್ದೆ. ಸಿನೆಮಾ ಯುನಿಟಗಳಲ್ಲಿಯೇ ಊಟ ಮಾಡಿದೆ. ಯಾರೂ ತಕರಾರು ತೆಗೆಯಲಿಲ್ಲ.
ಸಿನೆಮಾದವರ ಸಹನೆ, ಚಿತ್ರೀಕರಣದ ಬೇಸರ, ಕಲಾವಿದರ ಖಾಸಗಿ ಬದುಕಿನ ಭಿನ್ನ ವರ್ತನೆ ಅಚ್ಚರಿ ಮೂಡಿಸಿತು. ಹೇಗಾದರೂ ಮಾಡಿ ನಟಿಸಲು ಅವಕಾಶ ಕೇಳಬೇಕೆಂದು ಹೋಗಿದ್ದೆ. ಸಹ ಕಲಾವಿದರ ಗೋಳಿನ ಕತೆ, ಚಿತ್ರಿರಂಗದ ಕಷ್ಟಗಳನ್ನು ಕೇಳಿ ಸಿನೆಮಾ ಸಹವಾಸವೇ ಬೇಡ ಎನಿಸಿತು.
ಸಿನೆಮಾ ವ್ಯಾಮೋಹ ಮಾತ್ರ ಕಡಿಮೆ ಆಗಲಿಲ್ಲ ಅವಕಾಶ ಸಿಕ್ಕರೆ ನಟಿಸಬೇಕು ಎನಿಸುತ್ತಿತ್ತು. ಹೈಸ್ಕೂಲಿನಲ್ಲಿ ನಾಟಕದಲ್ಲಿ ಅಭಿನಯಿಸಿದೆ. ಬಣ್ಣದ ಗೀಳು ಕಡಿಮೆ ಆಗಲಿಲ್ಲ. ಮುಂದೆ ಕಾಲೇಜಿನಲ್ಲಿಯೂ ಅಭಿನಯಿಸಿದೆ.
ಗದ್ದಲದ ಬೆಂಗಳೂರನ್ನು ಈಗ ನೋಡಿದಾಗಲೆಲ್ಲ. ನನ್ನ ಬಾಲ್ಯದ ಭಂಡ ಧೈರ್ಯ ನೆನಪಾಗಿ ಬೆರಗು ಉಂಟಾಗುತ್ತದೆ. ಆಕಸ್ಮಾತ ಅವಕಾಶ ಸಿಕ್ಕಿದ್ದರೆ ಏನಾಗುತ್ತಿತ್ತೋ ಏನೋ?
ಅಥವಾ ಗದ್ದಲದ ಬೆಂಗಳೂರಿನಲ್ಲಿ ಕಳೆದು ಹೋಗಿದ್ದರೆ ಹೇಗೆ ಎಂಬ ಆತಂಕ ಈಗ. ಸಿನೆಮಾ ಶೂಟಿಂಗ್ ನೋಡಿದ ವಿಷಯ ಯಾರಿಗೂ ಸ್ವಲ್ಪ ದಿನ ಹೇಳಲಿಲ್ಲ. ಹೇಳಿದರೆ ನಂಬುವುದಿಲ್ಲ ಅನಿಸುತ್ತಿತ್ತು. ಮೊನ್ನೆ ಧಾರವಾಹಿಯಲ್ಲಿ ನಟಿಸಲು ಬಣ್ಣ ಹಚ್ಚಿದಾಗ ಬಾಲ್ಯದ ಈ ಘಟನೆ ನೆನಪಾಯಿತು.

ಮೌಢ್ಯತೆಗೆ ಉತ್ತರವಿಲ್ಲ - ಪ್ರೀತಿ ತೋರಿದ ಹಡಪದ ಸ್ನೇಹಿತರು

ಹಳ್ಳಿಗಳಲ್ಲಿ ನೂರೆಂಟು ನಂಬಿಕೆಗಳು, ಅಂದರೆ ಮೂಢನಂಬಿಕೆಗಳು. ಈ ರೀತಿಯ ಅನುಮಾನಗಳಿಗೆ ಪ್ರಶ್ನಿಸುವಂತೆಯೇ ಇಲ್ಲ.
ಅಮ್ಮ, ಅವ್ವ, ಅತ್ತೆಯರು ಶಾವಗಿ ಹೊಸೆಯುವಾಗ ಒಂದು ರೀತಿಯ ಕುತೂಹಲ ಶಾವಗಿ ಹಿಟ್ಟಿನಲ್ಲಿ ಉಳ್ಳಾಗಡ್ಡಿ ಇಟ್ಟಿರುತ್ತಿದ್ದರು. ಯಾಕೆ ಎಂದು ಕೇಳಿದೆ ? ಹಾಗೆಲ್ಲ ಕೇಳಬಾರದು ಎಂಬ ತಾಕೀತು. ಈ ಪ್ರಶ್ನೆಗೆ ಇಂದಿಗೂ ಉತ್ತರವಿಲ್ಲ ಬಿಡಿ.
ಬೆಳಿಗ್ಗೆ ಎದ್ದ ಕೂಡಲೆ ಹಡಪದ ಜನಾಂಗದವರ ಮುಖ ನೋಡಬಾರದು ಎಂದು ಹೇಳಿದಾಗ ನನಗೆ ಬೇಸರವಾಗುತ್ತಿತ್ತು.
ಇದೆಂತಹ ವಿಪರ್ಯಾಸ ನಾದರ ಶಿವಪ್ಪ ತಲೆ ಕೂದಲು ತೆಗೆಯಲು ಬರುತ್ತಿದ್ದುದೇ ನಸುಕಿನಲ್ಲಿ ಅಷ್ಟರೊಳಗೆ ಎದ್ದು ದೇವರ ಫೋಟೋಗೆ ವಂದಸಿ ಕಟಿಂಗ್ ಮಾಡಿಸಲು ಕೂಡಬೇಕಾಗುತ್ತಿತ್ತು.
ಅತ್ಯಂತ ಸರಳವಾಗಿ ನಾನು ಒಮ್ಮೆ ಶಿವಪ್ಪನಿಗೆ ಕೇಳಿದೆ. ಯಾಕೆ ಶಿವಪ್ಪ ಮುಂಜಾನೆದ್ದ ಕೂಡಲೇ ಯಾಕ ನಿನ್ನ ಮಕ ನೋಡಬಾರದು ಅಂದೆ. ಏನ ಅಂತಾರಪ ದಣಿ, ನೋಡಿದ್ರೇನ ದರಿದ್ರ ಹತ್ತತೈತಂತೆ ಅಂದ. ಹಿಂಗ ಅನ್ನೋದರಿಂದ ಬ್ಯಾಸರ ಆಗಂಗಿಲ್ಲೇನು ಅಂದೆ. ಇಲ್ಲ ಬಿಡು ಧಣಿ ಅಂಗೇನಿಲ್ಲ ಎಂದ.
ನಾನು ಒಮ್ಮೆ ಹಟಕ್ಕೆ ಬಿದ್ದಂತೆ ಬೆಳಿಗ್ಗೆ ಎದ್ದು ದೇವರಿಗೆ ನಮಸ್ಕರಿಸಿದೇ ನಾದರ ಶಿವಪ್ಪನ ಮುಖ ನೋಡಿ ಇಡೀ ದಿನ ಏನು ಕಾಡುತ್ತೋ ನೋಡಿಯೇ ಬಿಡೋಣ ಅಂತ ತೀರ್ಮಾನಿಸಿದೆ.
ಆದರೆ ಸಂಜೆಯವರೆಗೆ ಅಲ್ಲ ನನಗೆ ಎಂದೂ ಏನೂ ತೊಂದರೆಯಾಗಲಿಲ್ಲ. ಅಯ್ಯೋ ಇದೊಂದು ಸುಳ್ಳು ಕಂತೆ ಎಂದುಕೊಂಡೆ.
ಇದನ್ನ ನಾನೊಮ್ಮೆ ಅಮರಣ್ಣ ತಾತನಿಗೆ ಹೇಳಿಯೇ ಬಿಟ್ಟೆ. ತಾತ ನಿನ್ನೆ ನಾನು ನಾದರ ಶಿವಪ್ಪನ ಮುಖ ನೋಡಿದೆ. ನನಗೇನು ಕೆಟ್ಟದಾಗಲಿಲ್ಲ. ಹೌದು ಬಿಡಪ ಖೋಡಿ ಸುಮ್ಮನೆ ಅಂತಾರೆ ಅಂದಾಗ ಸಮಾಧಾನವಾಯಿತು. ಹೀಗೆ ಒಂದೊಂದೇ ಮೌಢ್ಯ ಅಭಿಪ್ರಾಯಗಳಿಗೆ ಉತ್ತರ ನನ್ನಲ್ಲಿ ಕಾಣುತ್ತಾ ಹೋದೆ.
ಕಟಿಂಗ್ ಮಾಡಿಸಿಕೊಳ್ಳುವಾಗಲೆಲ್ಲ ಆಪ್ತವಾಗಿ ಮಾತನಾಡುತ್ತಾ ಶಿವಪ್ಪನಿಗೆ ಆತ್ಮೀಯನಾದೆ .
ಪಾಪ, ನಮ್ಮ ಸಲುವಾಗಿ ನಸಗಿನಾಗ ಕಷ್ಟ ಮಾಡಾಕ ಬರ್ತಿಯಪ, ಆದ್ರ ಇವರು ನಿನ್ನ ಮಕ ನೋಡಬಾರದು ಅಂತಾರಲ್ಲಪ ಅಂದಾಗ ಇರ‍ಲಿ ಬಿಡಪ ಧಣಿ ಮದ್ಲಿಂದ ನಂಬ್ಯಾರ, ಅಂತಾರ ಬುಡು ಅಂತಿದ್ದ.
ಪ್ರತಿನಿತ್ಯ ಶೇವ್ ಮಾಡಿಕೊಳ್ಳುವಾಗ ಅನುಭವಿಸುವ ಕಿರಿಕಿರಿಯಲ್ಲಿ ನಮ್ಮೂರ ಹಡಪದ ಮಹದೇವನನ್ನು ಜ್ಞಾಪಿಸಿಕೊಳ್ಳುತ್ತೇನೆ. ಹೈದ್ರಾಬಾದ್ ಕರ್ನಾಟಕದ ಹಳ್ಳಿಗಳಲ್ಲಿ ಹುಡುಗರಿಗೆ ತಮಗೂ ವಯಸ್ಸಾಯಿತು. ಹರೆಯದ ಪ್ರಾಯ ಬಂದಿದೆ ಎಂದು ತೋರಿಸುವ ಉತ್ಸಾಹ - ಚಪಲವೂ ಇರುತ್ತಿತ್ತು.
ಸಣ್ಣವರಂತೆ ಇರುವುದಕ್ಕಿಂತ ದೊಡ್ಡವರಾಗಬೇಕು. ಮದುವೆ ಎಂಬ ತೊಡರಿಗೆ ಸಿಕ್ಕು ಹಿರೆತನ ಮಾಡಬೇಕು ಎಂಬ ಸುಪರಫಿಸಿಯಲ್ ಭಾವನೆಗಳಿರುತ್ತಿದ್ದವು.

ದೊಡ್ಡವರಾಗಿದ್ದಕ್ಕೆ ಸಾಕ್ಷಿಯಾದ ಗಡ್ಡ-ಮೀಸೆಗಳು ಚಿಗಿಯಲಿ ಎಂಬ ತುಡಿತ ಬೇರೆ. ಹದಿನಾಲ್ಕರ ಪ್ರಾಯದಲ್ಲಿ ಗೆಳೆಯ ಹಡಪದ ಮಹದೇವನ ಹತ್ತಿರ ಕಟಿಂಗ್‌ಗೆ ಹೋಗಿದ್ದಾಗ ಮಹದೇವ ಗಡ್ಡ-ಮಿಸೆ ಮೇಲೆ ಕತ್ತಿ ಆಡಿಸಿಲಾ ಧಣಿ ಎಂದ. ಅಲ್ಲ ಬಂದೇ ಇಲ್ಲಲ್ಲ ಅಂದೆ. ಇಲ್ಲಪ ಒಂದೆರಡು ಬಾರಿ ಕತ್ತಿ ಆಡಿಸಿದ್ರ ಜಲ್ದಿ ಬರ‍್ತಾವಪಾ ಅನ್ನಬೇಕೆ.
ಎಲ್ಲರಿಗೂ ಇರುವ ಹಾಗೆ ನನಗೂ ತುಡಿತವಿತ್ತು ಒಪ್ಪಿಗೆ ನೀಡಿದೆ. ಎಳೆಯ ಚರ್ಮದ ಮೇಲೆ ಹರಿತ ಕತ್ತಿ ಹರಿದಾಡಿ ಮುಖ ರಕ್ತಸಿಕ್ತವಾದರೂ ಮೀಸೆ ಬರುತ್ತಿವೆ ಎಂಬ ಸಂಭ್ರಮದಲ್ಲಿ ನಗುತ ಸುಮ್ಮನಾದೆ. ಇದರ ಅಪಾಯವನ್ನು ಈಗ ಅನುಭವಿಸುತ್ತಿದ್ದೇನೆ. ಮುಖದ ತುಂಬೆಲ್ಲ ಆವರಿಸಿರುವ ಬಿಳಿ ಗಡ್ಡಗಳ ಕಾರಣಕ್ಕೆ ನಿತ್ಯ ಶೇವ್ ಮಾಡುವುದು ಅನಿವಾರ್ಯ. ಇಷ್ಟೊಂದು ತೀವ್ರವಾಗಿ ಆವರಿಸಲು ಬಾಲ್ಯದಲ್ಲಿನ ಬೇಗ ಕತ್ತಿ ಹಚ್ಚಿದ್ದೇ ಕಾರಣ. ಉಪನ್ಯಾಸಕ ವೃತ್ತಿಗೆ ಸೇರಿದ ಮೇಲೆ ಶೇವಿಂಗ್ ಕಡ್ಡಾಯವಾಯಿತು.
ಕನ್ನಡಿಯಲ್ಲಿ ಮುಖ ನೋಡಿಕೊಂಡಾಗಲೆಲ್ಲ ಹೆಮ್ಮೆಯಿಂದ ಮಹದೇವನ ಅಂಗಡಿಗೆ ಹೋಗಿ ಕತ್ತಿ ಹಚ್ಚಲು ಒತ್ತಾಯಿಸುತ್ತಿದ್ದೆ. ಗಡ್ಡ ಮೀಸೆ ಬೆಳೆಯಲಿ, ಧ್ವನಿ ಗಡಸಾಗಲಿ, ಮುಖದ ಮೇಲೆ ಮೊಡವೆಗಳು ಕಾಣಿಸಲಿ ಎಂದು ಬಯಸುವ ಅಂದಿನ ಮನೋಸ್ಥಿತಿ ನೆನಸಿಕೊಂಡರೆ ವಿಚಿತ್ರವೆನಿಸುತ್ತದೆ.
ಬಾಲ್ಯದ ಮುಗ್ಧತೆಯನ್ನು ಕಳೆದುಕೊಳ್ಳುವ ಧಾವಂತ ಅಜ್ಞಾನದ ಸಂಕೇತವೆನಿಸುತ್ತದೆ. ನಾಲ್ಕು ವರ್ಷಕ್ಕೆ ಒಂದನೇ ವರ್ಗಕ್ಕೆ ಪ್ರವೇಶ ಪಡೆದ ಕಾರಣಕ್ಕೆ ಹೈಸ್ಕೂಲಿನಲ್ಲಿ ನಾನೇ ಅತೀ ಚಿಕ್ಕ ಹುಡುಗ. ಹತ್ತನೇ ಕ್ಲಾಸಿನ ನನ್ನ ಗೆಳೆಯರೆಲ್ಲ ವಯಸ್ಸಿನಲ್ಲಿ ನನಗಿಂತ ಎರಡು ವರ್ಷ ಹಿರಿಯರಿದ್ದರು. ಅವರ ಹಾಗೆ ಗಡ್ಡ-ಮೀಸೆ ಇರಲಿ ಎಂಬ ಅತಿಯಾಸೆ ನಿತ್ಯ ಕಾಡುತ್ತಿತ್ತು. ಮೀಸೆ ದಾಡಿ ಗೋಳು ಅನಿಸಿದಾಗಲೆಲ್ಲ ಹಡಪದ ಶಿವಪ್ಪ ಮಹದೇವ ಬೆಳಿಗ್ಗೆಯೇ ನೆನಪಾಗಿ ನನ್ನ ಪಾಲಿನ ಸುದೈವಿಗಳೆನಿಸುತ್ತಾರೆ ಅಪಶಕುನ ಅಲ್ಲ.