Wednesday, July 21, 2010

ಖ್ಯಾತ ಚಿಕಿತ್ಸಕ - ಡಾ. ಬಿ ಮಂಜುನಾಥ



ನನ್ನ ಆಸ್ಪತ್ರೆಯ ದಿನಗಳಲ್ಲಿ ಚಿಕಿತ್ಸೆಯನ್ನು ಆಧ್ಯಾತ್ಮದ ಹಿನ್ನಲೆಯಲ್ಲಿ ನೀಡಿ ಗಮನ ಸೆಳೆದ ಡಾ. ಬಿ. ಮಂಜುನಾಥ ಅವರನ್ನು ಪರಿಚಯಿಸಲು ಹೆಮ್ಮೆ ಎನಿಸುತ್ತದೆ.
ಉತ್ತಮ ಸಂಸ್ಕಾರದ ಹಿನ್ನಲೆಯುಳ್ಳ ಡಾ. ಮಂಜುನಾಥ ಅವರ ತಂದೆ ಮೂಲತ: ಚನ್ನಗಿರಿಯವರು. ಕರ್ನಾಟಕ ಸರಕಾರದ ಕಾನೂನು ಇಲಾಖೆಯ under secretary ಯಾಗಿದ್ದ ಬಸವಲಿಂಗಪ್ಪ ಅವರು ದಕ್ಷತೆಗೆ ಹೆಸರಾದವರು.
ಕಾನೂನು ವ್ಯಾಸಂಗ ಮಾಡುವಾಗ ಜೆ.ಎಚ್. ಪಟೇಲರ ಸಹಪಾಠಿಗಳು. ಡಾ. ಮಂಜುನಾಥ ಅವರ ಸೋದರ ಮಾವ ಶಿವಮೊಗ್ಗ ಹಾಗೂ ಡಾವಣಗೆರೆಯನ್ನು ಪ್ರತಿನಿಧಿಸಿದ್ದ ಲೋಕಸಭೆ ಸದಸ್ಯರಾದ ಟಿ.ವ್ಹಿ. ಚಂದ್ರಶೇಖರಪ್ಪನವರು.
ಸರಕಾರಿ ಹಾಗೂ ರಾಜಕೀಯ ಹಿನ್ನಲೆಯಲ್ಲಿ ಬೆಳೆದರೂ ಡಾ. ಮಂಜುನಾಥ ವೈಯಕ್ತಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡವರು.
M.S. Ortho ಪದವಿ ಪಡೆದು ತಂದೆಯಂತೆಯೇ ಸರಕಾರಿ ವೃತ್ತಿಯನ್ನು ಆಯ್ದುಕೊಂಡು, ಈಗ ಜಯನಗರ ಜನರಲ್ ಆಸ್ಪತ್ರೆಯ ಎಲವು, ಕೀಲುಗಳ ಶಸ್ತ್ರ ಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಾರೆ.
ಆಸ್ಪತ್ರೆಯಲ್ಲಿ ನಾನು ಕಳೆದ ಇಪ್ಪತ್ತು ದಿನಗಳು ಅಪಸ್ಮರಣೀಯವಾಗಲು ಡಾ. ಮಂಜುನಾಥ ಕಾರಣರಾದರು.
ಆಧ್ಯತ್ಮ ಜೀವಿಯಾಗಿರುವ ಅವರು ಎನಗಿಂತ ಕಿರಿಯರಿಲ್ಲ ಎಂಬ ಮನೋಭಾವ ಇಟ್ಟುಕೊಂಡೇ treatment ಕೊಡುತ್ತಾರೆ.
ನನ್ನ ಓದುವ ಹವ್ಯಾಸವನ್ನು ಗಮನಿಸುತ್ತಿದ್ದ ಅವರು ನಿತ್ಯ ನನ್ನೊಂದಿಗೆ ಅನೇಕ ಸಂಗತಿಗಳನ್ನು ಚರ್ಚಿಸುತ್ತಿದ್ದರು. ಸರಕಾರಿ ಆಸ್ಪತ್ರೆಗಳ ಸ್ಥಿತಿಗತಿ, ಅಲ್ಲಿನ ಅನಿವಾರ್ಯ ಬ್ರಷ್ಟಾಚಾರ ವ್ಯವಸ್ಥೆ. ಅದರಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ಮಾಡುವ ತುಡಿತವಿರುವ ವೈದ್ಯರುಗಳು ಹೀಗೆ ಹತ್ತಾರು ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದರು.
ತಾವೊಬ್ಬ ಶ್ರೇಷ್ಠ ಚಿಕಿತ್ಸಕರು ಎಂಬ 'ಅಹಂ' ಇಲ್ಲದ ಅವರ ಸರಳ ನಡವಳಿಕೆ ಅಚ್ಚರಿ ಎನಿಸಿತು.
ನಿಮಗೆ ತುಂಬಾ ಪೆಟ್ಟಾಗಿದೆ ದೇವರ ಮೇಲೆ ಭಾರ ಹಾಕಿ ನನ್ನ ಮೇಲೆ ನಂಬಿಕೆ ಇಟ್ಟರೆ ಖಂಡಿತಾ ಆಪರೇಶನ್ success ಆಗುತ್ತದೆ' ಎಂದು ಮೊದಲ ಭೇಟಿಯಲ್ಲಿ ನುಡಿದಾಗ ನನಗೆ ಅವರನ್ನು ನಂಬಬೇಕು ಎನಿಸಿತು. ಅದೇ ನಂಬಿಕೆಯಿಂದಲೇ ಆಪರೇಷನ್ ಗೆ ತಯಾರಾದೆ ಒಳ್ಳೆಯ ಖಾಸಗಿ ಆಸ್ಪತ್ರೆಗೆ ಹೋಗಬೇಕು ಎಂಬ ನನ್ನ ನಿರ್ಣಯ ಬದಲಾಯಿಸಿದೆ.
ತಮ್ಮ ವೃತ್ತಿ ಬದುಕಿನಲ್ಲಿ ಪೂರೈಸಿದ ಇಂತಹ ಅನೇಕ complecated ಸರ್ಜರಿಗಳ ಕುರಿತು ವಿವರಿಸಿ ನನ್ನ ಆತ್ಮವಿಶ್ವಾಸ ಹೆಚ್ಚಿಸಿದರು.
ಒಳ್ಳೆಯ Implant ಬಳಸಿ, ಸ್ನೇಹಿತರ ನೆರವಿನಿಂದ 13-6-2010 ರಂದು ರವಿವಾರವಾದರೂ ಆಪರೇಷನ್ ಮಾಡಿದ್ದು ಅಚ್ಚರಿ ಎನಿಸಿತು. ಯಾವುದೇ ರೀತಿಯ infection ಆಗಬಾರದು ಎಂಬ ಕಾರಣಕ್ಕೆ ಅನೇಕ ಕ್ರಮಗಳನ್ನು ತಗೆದುಕೊಂಡಿದ್ದು, ನಂತರ ಸೂಕ್ತ ಚಿಕಿತ್ಸಗಾಗಿ ನೆರವಾದದ್ದು ನನ್ನ ನೋವನ್ನು ದೂರಮಾಡಿತು.
ಆರೋಗ್ಯ ಸಚಿವರ ಸ್ನೇಹಿತ ಎಂಬ 'ಅಹಂ' ನ್ನು ಎಲ್ಲಿಯೂ ತೋರಿಸಲಿಲ್ಲ ಎಂಬ ಕಾರಣಕ್ಕೆ ನನ್ನ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನಾಡಿದರು.
ಖಾಸಗಿಯ super special ಆಸ್ಪತ್ರೆಗಳ ಹಾವಳಿಯ ಮಧ್ಯೆಯೂ ಸರಕಾರಿ ಸಂಸ್ಥೆಗಳು ಗಟ್ಟಿಯಾಗಿ ಉಳಿಯಲು ಡಾ. ಮಂಜುನಾಥರಂತಹ ವೈಧ್ಯರು ಕಾರಣ ಎನಿಸಿತು.
ಅಮೇರಿಕಾದಲ್ಲಿರುವ ಇಂಜನಿಯರ್ ಮಗ, ವೈಧ್ಯಕೀಯ ಅಧ್ಯಯನ ಮಾಡುತ್ತಿರುವ ಮಗಳು ಹಾಗೂ ವಿಜ್ಞಾನಿಯಾಗಿರುವ ಪತ್ನಿಯರೊಂದಿಗಿನ ಸುಖಿ ಸಂಸಾರಕ್ಕೆ ತಮ್ಮ ಪ್ರಮಾಣಿಕತೆಯೂ ಕಾರಣ ಎಂಬುದನ್ನು ಅವರ ಆದರ್ಶ ಎದ್ದು ತೋರಿಸುತ್ತದೆ. ನಡೆ-ನುಡಿ ಒಂದೇ ಪರಿಯಿದ್ದಾಗ ಬದುಕು ಎಷ್ಟೊಂದು ಅರ್ಥಪೂರ್ಣ ಎಂಬುದಕ್ಕೆ ಡಾ. ಮಂಜುನಾಥ ಮಾದರಿಯಾಗುತ್ತಾರೆ.
ಜುಲೈ ಒಂದು ವೈಧ್ಯಕೀಯ ದಿನಾಚರಣೆಯ ದಿನದೊಂದು ಅವರನ್ನೆಲ್ಲಾ ಅಭಿನಂದಿಸುವ ಅವಕಾಶ ಸಿಕ್ಕದ್ದು ನನ್ನ ಭಾಗ್ಯವೇ ಸರಿ!
ವೈಧ್ಯಕೀಯ ವೃತ್ತಿಗಿರುವ ಘನತೆಯ ಕುರಿತು, ಸರಕಾರಿ ವೈಧ್ಯರ ಬಗೆಗೆ ನನ್ನ ಗೌರವ ಹೆಚ್ಚಿಸಲು ಕಾರಣರಾದ ಡಾ. ಮಂಜುನಾಥ ತರದವರ ಕುರಿತು ಒಂದು ಗಂಟೆ ನಿರರ್ಗಳವಾಗಿ ಮಾತನಾಡಿ ಆಸ್ಪತ್ರೆಯ ಎಲ್ಲರನ್ನು ಅಭಿನಂದಿಸಿದೆ.
ಡಾ. ಮಂಜುನಾಥ ಅವರ ಸೇವೆ ಸದಾ ಸಮಾಜಕ್ಕೆ ದೊರಕಲಿ ಎಂದು ಹಾರೈಸುತ್ತೇನೆ.

ಸರಕಾರಿ ವ್ಯವಸ್ಥೆ ಹೀಗೆಂದರೇನು?


ಸರಕಾರ ಸಾರ್ವಜನಿಕರಿಗಾಗಿ ಹಾನಿಯಾದರೂ ಚಿಂತೆಯಿಲ್ಲ ಕೆಲವು ಇಲಾಖೆಗಳನ್ನು ಇಟ್ಟುಕೊಂಡಿದೆ.
ಸಾರ್ವಜನಿಕ ಸೇವೆಗಾಗಿಯೇ ಮೀಸಲಾಗಿರುವ ಸಾರಿಗೆ, ಆರೋಗ್ಯ, ಶಿಕ್ಷಣ ಹಾಗೂ ಟೆಲಿಫೋನ್ ಇಲಾಖೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ರಕ್ಷಿಸುತ್ತಲಿವೆ.
ಹಾನಿ ಎಂಬ ಕಾರಣಕ್ಕೆ ಇವು ನಿಲ್ಲುವುದಿಲ್ಲ. ನಿಲ್ಲಬಾರದು ಕೂಡಾ!
ಆದರೆ ಐಷಾರಾಮಿ ಬದುಕನ್ನು ಬಯಸುವವರು ಈ ಮೇಲಿನ ಇಲಾಖೆಗಳ ಸರಕಾರಿ ಸೇವೆಗಳನ್ನು ನಿರಾಕರಿಸುತ್ತಾರೆ.
ಅಯ್ಯೋ ಸರಕಾರಿ ಆಸ್ಪತ್ರೆಗಳಿಗೆ ಸಾಯಲು ಹೋಗಬೇಕು, ಸರಕಾರಿ ಶಾಲೆಗೆ ಹಚ್ಚಿದರೆ ಮಕ್ಕಳು ಉದ್ಧಾರವಾದಂತೆಯೆ? ಅರ್ಜೆಂಟ್ ಗೆ ಅಂತ ಮದುವೆ ಆಮಂತ್ರಣ ಕಳಿಸಿದರೆ, ಮಕ್ಕಳಾದ ಮೇಲೆ ತಲುಪುತ್ತೆ ಅಂತ ಮೂದಲಿಸುವ ಪರಿಪಾಠವಿದೆ. ಆದರೆ ಇದು ಸಂಪೂರ್ಣ ಸತ್ಯವಾ?
ಹೀಗೆ ಉಳ್ಳವರು ಮೂದಲಿಸುತ್ತಿದ್ದರೂ ಸರಕಾರಿ ಬಸ್ಸುಗಳ ಒಳಗೆ ಹಾಗೂ ಮೇಲೆ ಕುಳಿತು ಜನ ಪ್ರಯಾಣಿಸುತ್ತಾರೆ.
ಸರಕಾರಿ ಆಸ್ಪತ್ರೆಗಳಾಗಲಿ ಕಾಲು ಇಡೋಕೆ ಸ್ಥಳ ಇರದ ಹಾಗೆ ಜನ ತುಂಬಿರುತ್ತಾರೆ. ಸರಕಾರಿ ಶಾಲೆಗಳಲ್ಲಿ ಓದಿಯೇ ಉನ್ನತ ಸ್ಥಾನಕ್ಕೇರುತ್ತಾರೆ. ಅಧಿಕೃತ ಎನಿಸಿಕೊಳ್ಳಲು ಅಂಚೆ ಇಲಾಖೆಯನ್ನೇ ಅನೇಕರು ನಂಬಿದ್ದಾರೆ.
ಈ ತರಹದ ಟೀಕೆಗಳು ಸತ್ಯವಲ್ಲ ಅಲ್ಲವೆ?
ಆರ್ಥಿಕವಾಗಿ ಹಿಂದುಳಿದವರು, ಬಡವರು ಇಂದಿಗೂ ಸರಕಾರಿ ವ್ಯವಸ್ಥೆಯನ್ನೇ ನಂಬಿದ್ದಾರೆ.
ಸಮಾಜದಲ್ಲಿರುವ ಶ್ರೀಮಂತ, ಮಧ್ಯಮವರ್ಗದವರು ಏನೇ ಅಸಾರ್ವತ್ರಿಕ ಅಭಿಪ್ರಾಯ ಕೊಡಲಿ ಆಳುವ ಸರಕಾರ ಮಾತ್ರ ಸರಕಾರಿ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಹೆಚ್ಚಿಸಬೇಕು.
ಆಳುವ ಮಂತ್ರಿಗಳು, ಶಾಸಕರು, ಹಿರಿಯ ಅಧಿಕಾರಿಗಳು ಸರಕಾರಿ ವ್ಯವಸ್ಥೆಯಲ್ಲಿ ವಿಶ್ವಸ ಬೆಳೆಸಿಕೊಳ್ಳಬೇಕು.
ತಾವು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು. (ಕೇವಲ ಬಿಲ್ ಕ್ಲೇಮ್ ಮಾಡಲು ಅಲ್ಲ), ಸರಕಾರಿ ಬಸ್ಸುಗಳಲ್ಲಿ ಓಡಾಬೇಕು ಮಕ್ಕಳನ್ನು ಸರಕಾರಿ ಶಲೆಗಳಲ್ಲಿ ಓದಿಸಬೇಕು.
ಅಮೇರಿಕಾ, ಜಪಾನ್, ಚೈನಾ ದೇಶಗಳ ರಾಜಕಾರಣಿಗಳ ಉದಾಹರಣೆ ನೀಡುತ್ತಾ ಕಾಲಹರಣ ಮಾಡದೆ ಒಮ್ಮೆ ನಾವು ಪಾಲಿಸಿ ನೋಡನ ಅಲ್ಲವೆ?

Wednesday, July 14, 2010

ಅನಾರೋಗ್ಯ ಶಾಪ ಅಲ್ಲ

ಆಸ್ಪತ್ರೆಗೆ, ಜೈಲಿಗೆ ಹಾಗೂ ಸ್ಮಶಾನಕ್ಕೆ ಯಾರೂ ಬಯಸಿ ಹೋಗುವುದಿಲ್ಲ. ಹೋಗಬೇಕೆಂದು ಬಯಸುವುದಿಲ್ಲ ಕೂಡಾ!
ನಲವತ್ತೈದರ ಪ್ರಾಯಕ್ಕೆ ಬಂದ ನಾನು ಆಸ್ಪತ್ರೆಗೆ ದಾಖಲಾದ ನೆನಪುಗಳಿಲ್ಲ. ನನ್ನ ಮಿತಿಯಲ್ಲಿ ಆರೋಗ್ಯವನ್ನು ಚನ್ನಾಗಿ ಕಾಪಾಡಿಕೊಂಡಿದ್ದೇನೆ.
9-6-2010 ರ ರಸ್ತೆ ಅಪಘಾತ ನನ್ನನ್ನು ಬಯಸದ ಸ್ಥಳಕ್ಕೆ ಕಳಿಸಿತು.
ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಂತೆ ಸರಕಾರಿ ಆಸ್ಪತ್ರೆಯ ಅನುಭವಗಳು. ಇಷ್ಟೊಂದು ಆಪ್ತವಾಗಿರಬಹುದು ಅಂದುಕೊಂಡಿರಲಿಲ್ಲ.
ಸರಕಾರಿ ಆಸ್ಪತ್ರೆಗಳ ಬಗೆಗಿದ್ದ ಅಭಿಪ್ರಾಯ ಬದಲಾಯಿತು. ಅನಾರೋಗ್ಯ ಆಪ್ತರನ್ನು ಅರಿಯಲು ನೆರವಾಯಿತು.
ವೈದ್ಯರುಗಳು, ನರ್ಸಿಂಗ್ ವರ್ಗ ತೋರಿದ ಪ್ರೀತಿ, ನೋವನ್ನು ಸಹಿಸಿಕೊಳ್ಳುವ ಸವಾಲು ಎಲ್ಲದರಲ್ಲಿಯೂ ಹೊಸತನ ಅನುಭವಿಸಿದೆ.
ಆಪರೇಶನ್ ಮುಗಿದ ಮೇಲೆ ಎಲ್ಲರೂ ಹೇಳಿದರು.ಇದೊಂದು ರಿಸ್ಕ, ನೀವು Lucky ಪಾರಾದಿರಿ ಅಂದಾಗ ಮತ್ತೊಮ್ಮೆ ಅಂದುಕೊಂಡೆ ಬಾರದು ಬಪ್ಪದು, ಬಪ್ಪದು ತಪ್ಪದು ಎಂದು.
ಸರಿ ಸುಮಾರು 20 ದಿನಗಳನ್ನು ಆಸ್ಪತ್ರೆಯಲ್ಲಿ ಶಿಸ್ತಿನಿಂದ, ಸಹನೆಯಿಂದ ಕಳೆದೆ. ಓದಿದ ಒಂದೆರೆಡು ಪುಸ್ತಕಗಳು, ಭೇಟಿ ಆದ ಹಲವಾರು ಆಪ್ತರು ಹೊಸ ಜಗತ್ತನ್ನು ತೆರೆದಿಟ್ಟರು. ವ್ಯಥೆ ಪಡಬೇಕೋ, ಬೇಡವೋ ಎಂಬ ಗೊಂದಲ ಆಗಾಗ ಉಂಟಾಗುತ್ತಿತ್ತು. ಆಸ್ಪತ್ರೆ ತುಂಬಾ ಬಿಡುವಾದಾಗಲೆಲ್ಲ ಓಡಾಡುತ್ತಿದ್ದೆ. ರೋಗಿಗಳನ್ನು, ರೋಗಿಗಳ ಬಂಧುಗಳನ್ನು ಆಗಾಗ ವಿಚಾರಿಸುತ್ತಿದ್ದೆ.
ಸರಕಾರಿ ಶಾಲೆ, ಸರಕಾರಿ ಬಸ್ಸು ಹಾಗೂ ಸರಕಾರಿ ಆಸ್ಪತ್ರೆ ಎಂದರೆ ಜನ ಮೂಗು ಮುರಿಯುತ್ತಾರೆ.
ಬಡತನದ ಅನಿವಾರ್ಯತೆಯಲ್ಲಿ ಮಾತ್ರ ಜನ ಇವುಗಳನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಸುಳ್ಳಾಯಿತು.
ಸರಕಾರಿ ಆಸ್ಪತ್ರೆಗಳಿಗೆ ಕೇವಲ ಬಡವರು ಬರುವುದಿಲ್ಲ ಉಳ್ಳವರು ಬರುತ್ತಾರೆ. ವ್ಯವಸ್ಥೆಯ ಸದುಪಯೋಗವನ್ನು ಪ್ರಜ್ಞಾವಂತರು ಪಡೆದುಕೊಳ್ಳುತ್ತಾರೆ ಎಂಬ ಸತ್ಯ ತಿಳಿಯಿತು.
ಊರಿಂದ ಫೋನಾಯಿಸಿದ ಗೆಳೆಯರು ಅಚ್ಚರಿಯಿಂದ ಕೇಳುತ್ತಿದ್ದರು. 'ಅರೆ ನೀವು ಬೆಂಗಳೂರಿಗೆ ಹೋಗಿ ಬೇಕಾದಷ್ಟು standard ಆಸ್ಪತ್ರೆಗಳಿದ್ದರೂ ಸರಕಾರಿ ಆಸ್ಪತ್ರೆಯಲ್ಲಿ ಯಾಕೆ ಇದ್ದೀರಿ? ಎಂದು.
ಇಂತಹ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗಿ ಹೋಯಿತು. ಆರಂಭದಲ್ಲಿ ಉಂಟಾದ ಆತಂಕ ಹಿತೈಶಿಗಳಿಗೂ ಆಗಿತ್ತು. ಮನಸು ಮಾಡಿದರೆ ಸರಕಾರಿ ವ್ಯವಸ್ಥೆಯಲ್ಲೂ ಉತ್ತಮ ಕಾರ್ಯ ನಿರ್ವಹಣೆ ಸಾಧ್ಯ ಭಾವ ಉಂಟಾಯಿತು.
VIP ಗಳಾಗಿ ದಾಖಲಾದಾಗ ಉಂಟಾಗುವ ಅನುಭವವೇ ಬೇರೆ, ಸಾಮಾನ್ಯರಾಗಿ ಸೇರಿದಾಗ ಸಿಗುವ ಅನುಭವ ಬೇರೆ ಆದರೂ ಎರಡನ್ನು ತುಲನೆ ಮಾಡಲು ಸಾಧ್ಯವಾಯಿತು. ಮನದಲ್ಲುಂಟಾದ ಅನೇಕ ಭಾವ ತಲ್ಲಣಗಳನ್ನು ನವಿರಾಗಿ ದಾಖಲಿಸುವ ಇರಾದೆ ನನ್ನದು.
ಈ ಕುರಿತು ಸಣ್ಣ ಪುಸ್ತಿಕೆಯನ್ನು ಪ್ರಕಟಿಸುವುದು ಸೂಕ್ತ ಎಂದು ಅಲ್ಲಿನ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮುಂದೆ ಪ್ರಾಮಾಣಿಕ ಹಂಚಿಕೊಳ್ಳುವ ಭಾವನೆಗಳಿಗೆ ನಿಮ್ಮ ಪ್ರತಿಕ್ರಿಯೆ ಬಯಸುತ್ತೇನೆ.