Monday, April 5, 2010



ಸ್ನೇಹದ ಕಡಲಲಿ ಡಾ. ಜಿ.ಬಿ.ಪಾಟೀಲ
ಋಣ ಭಾರ ಹೊತ್ತು............
ಇವರು ಡಾ. ಜಿ.ಬಿ. ಪಾಟೀಲ ಗದುಗಿನ ಡಿ.ಜಿ.ಎಂ. ಆಯುರ್ವೇದ ಕಾಲೇಜಿನ ಪಾಚಾರ್ಯರು. 1996 ರಿಂದ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಾ ಕಾಲೇಜಿಗೆ ಅಂತರಾಷ್ಟ್ರೀಯ ಮಾನ್ಯತೆ ಒದಗಿಸಿ ಕೊಟ್ಟಿದ್ದಾರೆ. ಕಳೆದೆರೆಡು ದಶಕಗಳಿಂದ ಡಿ.ಜಿ.ಎಂ. ಕಾಲೇಜಿನೊಂದಿಗೆ ಬೆಳೆಯುತ್ತ, ಸಂಸ್ಥೆಯನ್ನು ಬೆಳೆಸುತ್ತ ಸಾವಿರಾರು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿರುವ ಸ್ನೇಹಪರ ಆಡಳಿತಗಾರರು. ದಕ್ಷತೆ ಎಂಬ ಕಿರಿಕಿರಿ ಆಡಳಿತ ನಡೆಸದೇ, ಮುಕ್ತ ಸ್ವಾತಂತ್ರ್ಯ ನೀಡಿ ಸಹೋದ್ಯೋಗಿಗಳ ಪ್ರೀತಿಯನ್ನು, ಕೆಲವು ಸಾರಿ ನಿಷ್ಠುರವನ್ನು ಸಂಪಾದಿಸಿದ್ದಾರೆ. ಇದಿಷ್ಟು ಇವರ ವೃತ್ತಿ ಚಿತ್ತಣ.
ಈಗ ನಾ ಹೇಳಬಯಸುವುದು ಇವರೊಂದಿಗಿನ ವೈಯಕ್ತಿಕ ಸ್ನೇಹದ ಕುರಿತು. ನನಗಿಂತಲೂ ವಯಸ್ಸಿನಲ್ಲಿ ಒಂಬತ್ತು ವರ್ಷ ಹಿರಿಯರು. ಹಿರಿಯರೊಂದಿಗೆ ಸದಾ ಸ್ನೇಹ ಇಟ್ಟುಕೊಂಡಿರುವುದು ನನ್ನ ಜಾಯಮಾನ. ಇವರೊಂದಿಗೆ ಸ್ನೇಹ ಬೆಸೆದದ್ದು ಸಾಹಿತ್ಯ ಪರಿಷತ್ತು ಹಾಗೂ ಇತರ ಸಾಂಸ್ಕೃತಿಕ ಸಂಘಟನೆಗಳ ಕಾರ್ಯಕ್ರಮಗಳಿಂದ. ಸಾಂಸ್ಕೃತಿಕ ನಂಟು ಖಾಸಗಿ ಸ್ನೇಹವಾಗಿ ಮಾರ್ಪಟ್ಟಿದ್ದು ಆಶ್ಚರ್ಯ!
ಗದುಗಿಗೆ ಬಂದು ಎರಡು ದಶಕಗಳಾದವು. ನಾಲ್ಕಾರು ಕಾಲೇಜುಗಳ ಪ್ರಾಧ್ಯಾಪಕನಾಗಿ, ಹತ್ತಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಸಾವಿರಾರು ಜನರ ಸಂಪರ್ಕ ಹೊಂದಿದ್ದೇನೆ. ಹತ್ತು ಹಲವು ವಿವಾದಗಳಿಂದ, ನೇರ-ನಿಷ್ಠುರ ಮಾತುಗಳಿಂದ ಸ್ನೇಹಿತರೆಲ್ಲ, ಸ್ನೇಹಿತರಾಗಿ ಉಳಿಯಲಿಲ್ಲ ಎಂಬ ಬೇಸರವೂ ಇದೆ. ಹಾಗಂತ ನಿಷ್ಠುರತೆ ಬಿಡಲು ಸಾಧ್ಯವೆ! ಎಲ್ಲರಿಗೂ ಪೂಸಿ ಹೊಡೆಯುತ್ತ, diplomat ಆಗಿ gentleman ಎನಿಸಿಕೊಳ್ಳುವುದು ನನ್ನಿಂದ ಸಾಧ್ಯವಾಗಲೇ ಇಲ್ಲ. ಹಾಗಂತ ಎಲ್ಲರೊಂದಿಗೆ confront ಮಾಡುತ್ತಾ, ಜಗಳ ಮಾಡುವುದು, ಸಿಟ್ಟಿಗೇಳುವುದನ್ನು ಮಾಡುವುದಿಲ್ಲ. ಇಪ್ಪತ್ತು ವರ್ಷದ ವೃತ್ತಿ ಜೀವನದಲ್ಲಿ ಎಂದೂ ಪ್ರಾಚಾರ್ಯರೊಂದಿಗೆ, ಸಹೋದ್ಯೋಗಿಗಳೊಂದಿಗೆ ಜಗಳ ತೆಗೆದಿಲ್ಲ. ಸದಾ ನಗುತ್ತ, ನಗಿಸುತ್ತ ಇದ್ದರು ಎಲ್ಲರೂ ಮೆಚ್ಚುವ ವ್ಯಕ್ತಿತ್ವ ನನ್ನದಂತೂ ಅಲ್ಲ. ಅದಕೆ ಕಾರಣವೂ ಗೊತ್ತಿಲ್ಲ. ಗೊತ್ತಾಗುವುದು ಬೇಡ ಬಿಡಿ.

ಸದಾ extrovert ಮಾತುಗಾರನೆನಿಸಿದರೂ ಸ್ನೇಹದ ವಿಷಯಕ್ಕೆ ತುಂಬಾ introvert, ಸ್ನೇಹಿತರ ಆಯ್ಕೆಯ ವಿಷಯದಲ್ಲಿ ತುಂಬಾ choosy. ಡಾ. ಜಿ.ಬಿ. ಅವರೊಂದಿಗೆ ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತ, ಸಂಸ್ಥೆಯ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಸಂಪರ್ಕಿಸುತ್ತಾ ನಂತರ ಜಗದ್ಗುರು ಶಿವಾನಂದ ವಿಜ್ಞಾನ ಕಾಲೇಜು ಪ್ರಾರಂಭಿಸುವುದಂರೊಂದಿಗೆ ನಂಟು ಬಿಡಿಸಲಾಗದ ಗಂಟಾಯಿತು. ಸ್ನೇಹ ಗಳಿಸುವುದು ಸುಲಭ, ಬೇರೆಯವರನ್ನು impress ಮಾಡುವುದು ಅದಕ್ಕಿಂತಲೂ ಸುಲಭ ಆದರೆ ಸ್ನೇಹವನ್ನು ಉಳಿಸಿಕೊಂಡು ಹೋಗುವುದು ಸರಳವಂತೂ ಅಲ್ಲವೇ ಅಲ್ಲ.
ನಮ್ಮ ದೌರ್ಬಲ್ಯಗಳನ್ನು ಸಹಿಸಿಕೊಂಡವರು ಮಾತ್ರ ಸ್ನೇಹಿತರಾಗಿ ಉಳಿಯುತ್ತಾರೆ. ಸ್ನೇಹ ನಿರೀಕ್ಷೆಗಳಿಲ್ಲದೆ ಬೆಳೆದಾಗ ಉಳಿಯುತ್ತದೆ ಎಂಬುದು ಗೊತ್ತಿದ್ದು ಸ್ನೇಹವನ್ನು ಸೂಕ್ಷ್ಮವಾಗಿ ಅನುಭವಿಸುವ ಇರಾದೆ ನನ್ನದು.
ಯಾರನ್ನಾದರೂ ಹೊಗಳಲು ಕೂಡಾ ನನ್ನ ವಿಮರ್ಶಕ ಮೆದುಳು ಅಡ್ಡಬರುತ್ತದೆ. ಅತೀಯಾದ psychological ಅಧ್ಯಯನ ವ್ಯಕ್ತಿಗಳನ್ನು frank ಆಗಿ ಸ್ವೀಕರಿಸಲು ಅವಕಾಶ ನೀಡುವುದಿಲ್ಲ, ನಂಬದಿದ್ದರೂ, ನಂಬಿದಂತೆ ನಟಿಸುವ ಈ ಜಗದ ವ್ಯಾಪಾರದಲಿ ನಿರ್ವಾಜ್ಯ ಸ್ನೇಹಿತರು ಸಿಗುವುದು ಕಡು ಕಷ್ಟ! ನೂರೆಂಟು ನಂಜಿನಾನುಭವದಲಿ ಬೆಳೆದ ನನಗೆ ಯಾರೊಂದಿಗಾದರೂ frank ಆಗಿ ಸ್ನೇಹ establish ಮಾಡುವುದು ಕಠಿಣ ಎನಿಸುತ್ತದೆ.
ಇರಲಿ ಬಿಡಿ, ಇಷ್ಟೆಲ್ಲ ನೇತಾತ್ಮಕ ಕಾರಣಗಳ ಮಧ್ಯಯೂ ಡಾ. ಜಿ.ಬಿ. ನನಗೆ ಆತ್ಮೀಯರಾಗಿ ಮಾರ್ಗದರ್ಶಕರಾದರು. ಪ್ರಖರ ಆಲೋಚನೆಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಂಡ ಹೆಗ್ಗಳಿಕೆ ಅವರದು. ಸಮಾಧಾನ, ಒಳ್ಳೆಯತನ, ವ್ಯವಹಾರ ಕುಶಲತೆ, ಸೂಕ್ಷ್ಮ ಆಡಳಿತ ನಿರ್ಣಯಗಳು, ಉದಾರ ಮನೋಸ್ಥಿತಿ, ಕೆಲಸ ತೆಗೆಯುವ ಚಾಕಚಕ್ಯತೆ ಹೀಗೆ ಹತ್ತು ಹಲವು positive ಅಂಶಗಳಿಂದ ನಾನವರ ಸ್ನೇಹಕ್ಕೆ surrender ಆದೆ.
ಎಷ್ಟೇ ಎಚ್ಚರವಹಿಸಿದರೂ ಸಮಯ-ಸಂದರ್ಭದ ಒತ್ತಡಕ್ಕೆ ಬಿದ್ದು ತೊಂದರೆಗಳನ್ನು ಎದುರಿಸಿ ಯಾರಿಗೂ ಹೇಳದೇ ತೊಳಲಾಡಿದಾಗ ನನಗೆ ಮಾನಸಿಕ ಧೈರ್ಯ ನೀಡಿ, ಆರ್ಥಿಕ ನಿರ್ವಹಣೆಗೆ ದಾರಿ ತೋರಿ ಔದಾರ್ಯದ ಋಣ ಹೇರಿದ್ದಾರೆ.
ಅವರ ಸಂಸ್ಥೆಯ ರಜತಮಹೋತ್ಸವ ಸಂದರ್ಭದಲ್ಲಿ ಸ್ನೇಹದ ಸಣ್ಣ ಋಣ ತೀರಿಸುವ ಅವಕಾಶ ಒದಗಿಸಿಕೊಟ್ಟರು. ಮೂರು ತಿಂಗಳ ಕಾಲ ಅವರೊಂದಿಗೆ ನಿತ್ಯ ಚರ್ಚಿಸಿ, ಹೊಸ ಆಲೋಚನೆಗಳನ್ನು ನೀಡುವ, ಅವು ಯಶಸ್ವಿಯಾಗುವಂತೆ ಕಾರ್ಯಕ್ರಮ ರೂಪಿಸುವ ಮೆದುಳಾಗಿ ಕಾರ್ಯ ಮಾಡಿ ಅವರ ಭಾರ ಕಡಿಮೆ ಮಾಡಿದೆ. 3 ದಿನಗಳ ಐತಿಹಾಸಿಕ ಕಾರ್ಯಕ್ರಮಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡು, ಕೆಲವರ ನಿಷ್ಠುರ ಕಟ್ಟಿಕೊಂಡು ಆತ್ಮವಿಶ್ವಾಸದಿಂದ ಕೆಲಸ ಮಾಡಿದೆ. ಗದುಗಿನ ಪರಿಸರದಲ್ಲಿಯೇ ಅಪರೂಪ ಎಂದೆನಿಸಿದ ಡಿ.ಜಿ.ಎಂ. ರಜತ ಸಂಭ್ರಮದಲ್ಲಿ ಮಹಾದಾನಿ ದಾನಪ್ಪನವರ ಪ್ರತಿಮೆಯ ಅಡಿಯಲ್ಲಿ ಸುಂದರ ಕಾವ್ಯಚಿತ್ರ ಬರೆಯುವ ಅವಕಾಶವೂ ಸಿಕ್ಕಿದ್ದು ನನ್ನ ಪುಣ್ಯ. ಯಾವುದೋ ಜನ್ಮದ ಋಣಾನುಬಂಧ ನಮ್ಮನ್ನು ಎಲ್ಲಿಗೋ ಎಳೆದು ತಂದು ನಿಲ್ಲಿಸುತ್ತದೆ.
Life is totally predetermined. ಎಲ್ಲ ಕಾಲ ನಿರ್ಣಯದಂತೆ ನಡೆದು, ಬಾರದು ಬಪ್ಪದು, ಬಪ್ಪದು ತಪ್ಪದು ಎಂಬ ಅಣ್ಣನ ವಾಣಿ ಎಲ್ಲೊ ಒಂದು ಕಡೆ ನಮ್ಮನ್ನು ನಿಲ್ಲಿಸುತ್ತದೆ.
ಸ್ನೇಹ ಶಾಶ್ವತವಾಗಿರಲಿ ಎಂದು ಬಯಸುತ್ತೇವೆ. ಏಳು-ಬೀಳುಗಳ ಸಹಿಸುವ ಶಕ್ತಿಯನ್ನು ಸ್ನೇಹ ಕೊಡುತ್ತದೆ.
ಇತ್ತೀಚಿಗೆ ನಡೆದ 76 ನೆಯ ಸಾಹಿತ್ಯ ಸಮ್ಮೇಳನ, ಲಿಂಗಾಯತ ಪ್ರಗತಿಶೀಲ ಸಂಘದ ಒಂದು ವರ್ಷದ ಶಿವಾನುಭವ ಕಾರ್ಯಕ್ರಮಗಳನ್ನು ಇಬ್ಬರು ಒಟ್ಟಾಗಿ ಯಶಗೊಳಿಸಿದ್ದೇವೆ. ಸಾಂಸ್ಕೃತಿಕ, ಶೈಕ್ಷಣಿಕ, ಹಾಗೂ ಖಾಸಗಿ ನೆಲೆಗಟ್ಟಿನಲ್ಲಿ ಸ್ನೇಹ ಗಟ್ಟಿಗೊಂಡಿದೆ. ಇವರ ಸ್ನೇಹದ ಕುರಿತು ಎಲ್ಲಾದರೂ ಬರೆಯುವ ಮನಸ್ಸಿತ್ತು. ಅಂತಹ ಪ್ರಸಂಗ ಬಂದಿರಲಿಲ್ಲ.

ಅವರ ಷಷ್ಠಬ್ದಿಪೂರ್ಣ ಸಮಾರಂಭದ ಅಭಿನಂದನಾ ಗ್ರಂಥದಲ್ಲಿ ಇಷ್ಟೆಲ್ಲ ಬರೆಯುವ ಸ್ವಾತಂತ್ರ್ಯ ಸಿಗದಿರಬಹುದೆಂಬ ಗುಮಾನಿಯಿಂದ ನಿಮ್ಮೆದುರು ದಾಖಲಿಸಿದ್ದೇನೆ.ಋಣಭಾರ ತೀರಿಸುವುದು ಅಸಾಧ್ಯ ಎನಿಸಿದಾಗ ಬ್ಲಾಗ್ ನಂತಹ ಖಾಸಗಿ ತಾಣಗಳಲ್ಲಿ ಸ್ನೇಹಿತರನ್ನು ಹಿಡಿದಿಡುವ ತವಕವಲ್ಲದೆ, ಆಕಸ್ಮಾತ್ ದಾಖಲಿಸುವ ಪ್ರಸಂಗ ಕೈತಪ್ಪಿದರೂ ಇಲ್ಲಿನ 'ಇ' ಜಗದಲ್ಲಿ ಸ್ನೇಹ ನೆಲೆನಿಲ್ಲಲಿ ಎಂಬ ತುಡಿತ.
ಡಾ. ಜಿ.ಬಿ. ನನ್ನ ಕವನ ಸಂಕಲನಕ್ಕೆ ಬೆನ್ನುಡಿ ಬರೆದು ವಿಮರ್ಶಿಸಿದ್ದಾರೆ. ಪ್ರತಿಯೊಂದು ಪುಟಗಳನ್ನು ತೀಕ್ಷ್ಣವಾಗಿ ಗಮನಿಸಿ ಪ್ರತಿಕ್ರೀಯಿಸುತ್ತಾರೆ. 'ನೆಲದ ಮರೆಯ ನಿಧಾನ' ಕವನ ಸಂಕಲನದಲ್ಲಿ ದಾಖಲಾದ ಅವರ ಕುರಿತಾದ ಪದ್ಯವೂ ಇಲ್ಲಿದೆ.
ಸ್ನೇಹ
ಜಗದ ಮಾರುಕಟ್ಟೆಯಲೆಲ್ಲೂ ಲಭ್ಯವಿರದ
ಮಂದಹಾಸ
ಪ್ರೀತಿ-ವಿಶ್ವಾಸ ನಿತ್ಯ ಶ್ವಾಸಕೋಶ
ಕನಸ ಕಾಣುವದು ಕಂಡ ಕನಸುಗಳಿಗೆ
ಬಣ್ಣ ತುಂಬಲು ಹೆಣಗುವರು
ಚಿತ್ತಾರ ಸುಂದರವಾದಾಗ ಮಕ್ಕಳ ಹಾಗೆ
ನಗು ಕೇಕೆ ಯಾರಿಗೆ ಬೇಕಿತ್ತು ಸದಾ ಗಡಿಬಿಡಿ
ಕ್ರಿಯಾಶೀಲತೆಗೆ ಒಂಚೂರು ವಿರಾಮ ಕೊಡಿ
ಟೋಪಿ ಹಾಕಲು ಯಾವ ಗೂಟವಾದರೇನು?
ಗರಿಗರಿ ಇಸ್ತ್ರಿ ಕೆಡದಿದ್ದರೆ ಸಾಕು - ತಲೆ
ಮಾಸದಿರಲು ಟೋಪಿಯೂ ಬೇಕು, ಗೂಟವೂ ಬೇಕು
ಸುಂದರ ಕನಸುಗಳಿಗೆ ಬಣ್ಣ ತುಂಬುವದಿದ್ದರೆ ಹಗಲು ಬರುವದೇ ಬೇಡ ಬಾಳಿನ ಪಯಣ ಮುಗಿಯದೇ
ಸಾಗಿರಲಿ ಸ್ನೇಹ ಬಂಡಿ.
ಬಾಳ ಕವಲುದಾರಿಯಲಿ ನಾವು ಭಿನ್ನಹಾದಿ ಹಿಡಿಯುವ ಸಮಯ ಸಂದರ್ಭ ಬರಬಹುದು. ಬಾಳಹಾದಿ ಸುದೀರ್ಘವಾದಾಗ ಉಪಕರಿಸಿದವರ ಮರೆಯುವ ಅಪಾಯವಿದೆ.
ಋಣ ಪ್ರಜ್ಞೆ, ಕೃತಜ್ಞತಾಭಾವನೆಗಳನ್ನು ಕಾಲ ಅಳಿಸಿ ಹಾಕುವುದು ದುರಂತವೇ ಸರಿ! ಯಾರನ್ನೊ ಆಶ್ರಯಿಸಿ, ಹಲವರ ಉಪಕಾರದಿಂದ ಮೇಲೆ ಬಂದಿರುತ್ತೇವೆ. ಆದರೆ ಹತ್ತಿದ ಏಣಿ ಒದ್ದಂತೆ ,ನಾನೇ ಮೇಲೆ ಬಂದೆ ಎಂದು ಬೀಗುವ ದುಷ್ಟ ಪ್ರಾಣಿ ಎಂದರೆ 'ಮನುಷ್ಯ'.

ಈ ಅರಿವಿನಿಂದಾಗಿ ಉಪಕರಿಸಿದವರ ಋಣ ಇಂದಿನದಿಂದೇ ತೀರಿಸುವುದು ಕ್ಷೇಮ. ಮುಂದೆ ಸ್ವೀಕರಿಸುವ ಸ್ಥಿತಿಯನ್ನು ಅವರು, ಹೇಳುವ ಸ್ಥಿತಿಯನ್ನು ನಾವು ಕಳೆದುಕೊಂದರೆ ಅಪಚಾರವಲ್ಲವೆ? ಜಗದ ಎಲ್ಲ ಬಂಧನಗಳು ಗಟ್ಟಿಗೊಳ್ಳುವ ಆಶಯದೊಂದಿಗೆ ಇಂತಹ ಅನೇಕ ಮಹನೀಯರನ್ನು ಸ್ಮರಿಸುತ್ತೇನೆ.

2 comments:

  1. ನಿಮ್ಮ ನಿಷ್ಠುರ ನೇರ ಮಾತಿನಿಂದ ಗೆಳೆಯರನ್ನು ಪಟೆದದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು ಎಂದು ನನಗನಿಸುತ್ತದೆ. ಆದರೂ ನನ್ನ ವಿನಂತಿಯೆಂದರೆ (ನಿಮ್ಮೊಡನೆ 2 ವರ್ಷ ಇದ್ದು ಅನಿಸಿದ್ದು) ನೀವು ಹೇಗಿದ್ದೀರೋ ಅದೇ ರೀತಿಯಿರಿ. ಯಾರು ಬಿಟ್ಟುಹೋಗಲಿ ಬಿಡಲಿ. ಇನ್ನೂ ನಿಮ್ಮೊಂದಿಗಿರುವವರು ನಿಮ್ಮ ನಿಜವಾದ ಗೆಳೆಯರು ಡಾ.ಜಿ.ಬಿ.ಪಾಟೀಲರಂತೆ...

    ReplyDelete
  2. tamma haagoo G.b yavara snehada shastabdi samaarambhavoo namma kantumbuvantaagali

    ReplyDelete